Thursday, October 30, 2008

ನೀರು ಲಭ್ಯತೆಯ ಸಮತೋಲನ ಕಾಪಾಡಿದ ಜಲಾಶಯ

ನೀರಾವರಿ ಯೋಜನೆಗಳ ವೈಫಲ್ಯ ನಮಗೆ ಹೊಸ ವಿಚಾರವಾಗುಳಿದಿಲ್ಲ. ನೂರಾರು ಕೋಟಿ ರೂಪಾಯಿಗಳು ಈವರೆಗೆ ವ್ಯರ್ಥವಾಗಿ ಹರಿದು ಹೋಗಿವೆ. ಎಷ್ಟೋ ಸಂದರ್ಭಗಳಲ್ಲಿ ಯೋಜನೆಗಳ ಕನಿಷ್ಠ ಪ್ರಯೋಜನವೂ ದೊರೆತಿಲ್ಲ. ಹಾಗೆಂದು ಸುಮ್ಮನುಳಿದಿಲ್ಲ, ಹೊಸ ಹೊಸ ಹೆಸರಿನಲ್ಲಿ ಬೃಹತ್ ಯೋಜನೆಗಳ ಘೋಷಣೆ ಮುಂದುವರಿದೇ ಇದೆ.
ವೈಫಲ್ಯಕ್ಕೆ ಕಾರಣಗಳು ಹಲವು. ಅದೆಲ್ಲಕ್ಕಿಂತ ಮಿಗಿಲಾದದ್ದು ನಮ್ಮ ಸನ್ನಿವೇಶದಲ್ಲಿ ನಾವು ರೂಪಿಸುವ ಯೋಜನೆಗಳು ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ಯೋಚಿಸುತ್ತಿಲ್ಲ. ನೀರಿನ ನಿರ್ವಹಣೆಯೆಂಬುದು ಯಾವತ್ತೂ ಪುಟ್ಟ ಪ್ರಯತ್ನಗಳನ್ನಷ್ಟೇ ಅಪೇಕ್ಷಿಸುತ್ತದೆ. ಅದಕ್ಕಿಂಥ ಹೊರತಾದದ್ದೆಲ್ಲವೂ ಹೊರೆಯಾಗುವುದರಲ್ಲಿ ಅನುಮಾನವಿಲ್ಲ.
ನಾಲ್ಕು ದಿನಗಳಿಂದ ನಾಡಿನ ಶಿಖರ ಭಾಗದ ಜಿಲ್ಲೆಗಳ ನೀರಿನ ಬವಣೆಯ ಪ್ರತ್ಯಕ್ಷ ದರ್ಶನವಾಗುತ್ತಿದೆ. ಬೀದರ್, ಗುಲ್ಬರ್ಗ, ರಾಯಚೂರಿನಂಥ ಜಿಲ್ಲೆಗಳನ್ನು ಹಿಂದುಳಿದ ಭಾಗಗಳೆಂದು ನಾವು ಮೇಲಿಂದ ಮೇಲೆ ಹೇಳಿಕೊಳ್ಳುತ್ತಲೇ ಬರುತ್ತಿದ್ದೇವೆ. ಆದರೆ, ನೀರು ನಿರ್ವಹಣೆಯಂಥ ಜ್ಞಾನದಲ್ಲಿ ಈ ಭಾಗದ ಜನ ಸಾಸಿದ ಪ್ರಗತಿ ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತದೆ. ಅದೆಷ್ಟು ವಿಭಿನ್ನ ಪ್ರಯತ್ನಗಳು ? ಇಂಥವು ಇಲ್ಲಿನ ಅನಿವಾರ್ಯತೆ ಎಂಬುದು ಬೇರೆ ಪ್ರಶ್ನೆ. ಆದರೂ ಮಾದರಿಯಾಗಬಲ್ಲ, ಅನುಸರಣೀಯವೆನಿಸುವ ಮಾದರಿಗಳು ಅಜ್ಞಾತವಾಗಿಯೇ ಉಳಿದು ಬಿಡುತ್ತವೆ.
ರಾಯಚೂರು ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟಿನಲ್ಲಿ ನಿರ್ಮಿಸಿರುವ ಸಮತೋಲನ ಜಲಾಶಯ ನೀರಿನ ಇಂಥ ಸಮರ್ಥ ಬಳಕೆಗೆ ಅತ್ಯುತ್ತಮ ನಿದರ್ಶನ. ಸಾಧ್ಯತೆಗಳ ದೃಷ್ಟಿಯಿಂದ ಹಲವು ಮಜಲುಗಳಲ್ಲಿ ತೆರೆದುಕೊಳ್ಳುವ ಈ ಕಿರು ಜಲಾಶಯ ಭಾರೀ ಮೊತ್ತವನ್ನೇನೂ ಬೇಡಿಲ್ಲ, ನೂರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಿಲ್ಲ, ಸಾವಿರಾರು ಎಕರೆ ಪ್ರದೇಶವನ್ನು ಮಳುಗಡೆ ಮಾಡಿಲ್ಲ. ಹಾಗೆ ನೋಡಿದರೆ, ಪಯಣ ಹೊರಟ ನೀರನ್ನು ಒಂದಷ್ಟು ತಡೆದು ನಿಲ್ಲಿಸಿ ವಿಶ್ರಾಂತಿಗೆ ಅನುವು ಮಾಡಿಕೊಟ್ಟದ್ದಷ್ಟೇ. ಸುತ್ತಲಿನ ಅಂತರ್ಜಲ ಮಟ್ಟ ತಂತಾನೇ ಮೇಲಕ್ಕೇರಿದೆ. ರಾಯಚೂರಿನಂಥ ನಗರದ ಜನ ಕುಡಿಯುವ ನೀರಿನ ಸಮಸ್ಯೆ ಎಂಬುದನ್ನೇ ಮರೆಯುವಂತಾಗಿದೆ. ಮಾತ್ರವಲ್ಲ ರೈತರ ಜಮೀನುಗಳು ನಗುತ್ತಿವೆ.
ಅದು ೧೯೯೧-೯೨ರ ಅವ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲ. ಸ್ಥಳೀಯ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿ ಎನ್.ಎಸ್. ಬೋಸರಾಜು ಕಾರ್ಯ ನಿರ್ವಹಿಸುತ್ತಿದ್ದರು. ಹೇಗೆ ಮಾಡಿದರೂ ಕಾಲುವೆಯ ಕೊನೆಯ ಭಾಗದ ರೈತರಿಗೆ ಸೂಕ್ತ ನೀರೊದಗಿಸುವ ಸವಾಲನ್ನು ನಿಭಾಯಿಸುವುದು ಸಾಧ್ಯವಾಗುತ್ತಿರಲಿಲ್ಲ. ಪ್ರತಿ ಸಭೆಯಲ್ಲೂ ಇದೇ ಪ್ರಮುಖ ಚರ್ಚೆ. ಒಟ್ಟಾರೆ ಎಲ್ಲರಿಂದಲೂ ಸೈ ಅನಿಸಿಕೊಳ್ಳುವುದು ತ್ರಾಸಿನ ಸಂಗತಿಯಾಗಿತ್ತು.
ಇಂಥ ಸಂದರ್ಭದಲ್ಲಿ ಬೋಸರಾಜರ ಗಮನ ಸೆಳೆದದ್ದು ಆಂಧ್ರದ ವಿಶಿಷ್ಟಪೂರ್ಣ ‘ಸಮತೋಲನ ಜಲಾಶಯ’. ಗಡಿ ಭಾಗದ ರೈತರು ಅನಾಯಾಸವಾಗಿ ನೀರು ಪಡೆಯುತ್ತಿದ್ದ ಪರಿ ಅಚ್ಚರಿ ಹುಟ್ಟಿಸಿತ್ತು. ಮಾತ್ರವಲ್ಲ ಇಂಥ ಪ್ರಯೋಗವನ್ನು ನಮ್ಮ ರಾಜ್ಯದಲ್ಲೂ ಏಕೆ ಮಾಡಬಾರದೆನ್ನಿಸಿತು. ತಡ ಮಾಡದೇ ೧೦ ಕೋಟಿ ರೂ. ಗಳ ಯೋಜನೆಯೊಂದನ್ನು ತಯಾರಿಸಿ ಸರಕಾರದ ಮುಂದಿಟ್ಟರು. ಸರಕಾರ ಇದನ್ನು ಮುಕ್ತವಾಗಿ ಸ್ವೀಕರಿಸಿಯೂ ಬಿಟ್ಟಿತು. ಎರಡೇ ವರ್ಷದಲ್ಲಿ ಪುಟ್ಟದೊಂದು ಜಲಾಶಯ ಗಣೇಕಲ್ ಎಂಬಲ್ಲಿ ತಲೆ ಎತ್ತಿ ನಿಂತಿತ್ತು. ಅದೇ ಕೊನೆ, ಕಾಲುವೆಯ ಅಂತಿಮ ಭಾಗದ ರೈತರಿಗೆ ಮುಂದೆ ಯಾವತ್ತೂ ನೀರು ಸಮಸ್ಯೆಯಾಗಲೇ ಇಲ್ಲ. ಇಂದು ಭತ್ತ, ಕಬ್ಬು ಸೇರಿದಂತೆ ಪ್ರಮುಖ ನೀರಾವರಿ ಬೆಳೆಗಳನ್ನು ಎಗ್ಗಿಲ್ಲದೇ ಅಲ್ಲಿನ ರೈತರು ಬೆಳೆಯುತ್ತಿದ್ದಾರೆ.
ಅತ್ಯಂತ ಸರಳ ತಂತ್ರವೊಂದು ಇಷ್ಟೆಲ್ಲವನ್ನೂ ಸಾಧ್ಯವಾಗಿಸಿದ್ದು ಅಚ್ಚರಿ ಹುಟ್ಟಿಸುತ್ತಿದೆ. ಇಂದು ಗಣೆಕಲ್‌ನ ಸುತ್ತಮುತ್ತ ಹಸಿರು ಛಾಯೆ ಆವರಿಸಿದೆ. ಅಲ್ಲಿ ಮಾಡಿದ್ದಿಷ್ಟೇ. ತುಂಗಭದ್ರಾ ಎಡದಂಡೆ ಕಾಲುವೆಯ ಮೂಲಕ ರೈತರ ಜಮೀನಿಗೆ ನೀರು ಹರಿಸಲಾಗುತ್ತಿತ್ತು. ಎಲ್ಲೆಡೆಯಂತೆಯೇ ಕಾಲುವೆಯ ಆರಂಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ೨೨೦ಕಿ.ಮೀ. ಉದ್ದದ ಕಾಲುವೆಯ ಕೊನೆಯ ಭಾಗಕ್ಕೆ ನೀರು ತಲುಪುವಷ್ಟರಲ್ಲಿ ಅದು ಸೋತು ಸೊರಗಿ ಹೋಗಿಬಿಡುತ್ತಿತ್ತು. ಸುದೀರ್ಘ ಪಯಣದಿಂದ ತ್ರಾಣವೇ ಇಲ್ಲದಂತಾಗುತ್ತಿತ್ತು ನೀರಿಗೆ. ಅದಕ್ಕೊಂದಿಷ್ಟು ಶಕ್ತಿ ತುಂಬಲು ವಿರಾಮ ಅಗತ್ಯವೆಂಬುದನ್ನು ಮನಗಂಡ ಕಾಡಾ, ವಿಶ್ರಾಂತಿ ತಾಣವೊಂದರ ನಿರ್ಮಾಣಕ್ಕೆ ಯೋಜಿಸಿತು. ಕಾಲುವೆಯ ೩ನೇ ಡ್ರಾಪ್‌ನಲ್ಲಿ ನೀರು ಒಳಹೊಕ್ಕು ಒಂದಷ್ಟು ನಿಂತು ಮುಂದೆ ಹರಿಯುವಂತೆ ಮಾಡಲು ಉದ್ದೇಶಿಸಲಾಯಿತು. ಅದಕ್ಕಾಗಿ ಪುಟ್ಟದೊಂದು ಜಲಾಶಯ ನಿರ್ಮಿಸಿ, ಕಾಲುವೆಯ ಮಧ್ಯೆ ೧.೪ ನೇ ಮೈಲಿಯ ಬಳಿ ನೀರು ಒಳ ಬರುವಂತೆ ಮಾಡಲಾಯಿತು. ಸುಮಾರು ೩೮೦೦ ಕ್ಯೂಸೆಕ್ ನೀರನ್ನು ಜಲಾಶಯಕ್ಕೆ ಹರಿಸಿದ ಬಳಿಕ ಮತ್ತೆ ಪುನಃ ಕಾಲುವೆಯ ೧.೮ನೇ ಮೈಲಿನ ಬಳಿ ಹೊರ ಹೋಗುವಂತೆ ವ್ಯವಸ್ಥೆಗೊಳಿಸಲಾಯಿತು.
ಇದರಿಂದ ನೀರು ಹರಿವಿನ ವೇಗವನ್ನು ಕಾಯ್ದುಕೊಳ್ಳುವುದು ಸಾಧ್ಯವಾಯಿತು. ಒಂದಷ್ಟು ಹೊತ್ತು ನಿಂತು ಮತ್ತೆ ಮುಂದಕ್ಕೆ ಕಾಲುವೆಯಲ್ಲಿ ಹರಿಯುವ ನೀರು ತನ್ನ ಎಂದಿನ ವೇಗವನ್ನು ತಂತಾನೇ ವೃದ್ಧಿಸಿಕೊಳ್ಳುತ್ತಿತ್ತು.
೩೩ ಅಡಿ ಆಳದ ಈ ಜಲಾಶಯ ನಿರ್ಮಾಣದಿಂದ ೧೬ ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಿದ್ದು ನಿಜ. ಆದರೆ, ಸುಮಾರು ೫೦ ಸಾವಿರ ಎಕರೆಯಷ್ಟು ಕೃಷಿ ಭೂಮಿ ನೀರಾವರಿಗೆ ಒಳಪಟ್ಟಿದೆ ಎಂಬುದು ಗಮನಾರ್ಹ. ಮಾತ್ರವಲ್ಲ ಇಡೀ ರಾಯಚೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಸುಲಲಿತವಾಯಿತು. ಎಕರೆಗೆ ೧೦ ಸಾವಿರ ರೂ.ಗಳಂತೆ ಆಗಿನ ಕಾಲದಲ್ಲಿ ನೀಡಿದ ಪರಿಹಾರವೂ ಸೇರಿದಂತೆ ೨೨ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಬೋಸರಾಜು.
ಒಂದು ಪುಟ್ಟ ಜಲಾಶಯ ಈ ಭಾಗದಲ್ಲಿ ಕಾಯ್ದುಕೊಂಡಿರುವ ನೀರಿನ ಸಮತೋಲನವನ್ನು ಗಮನಿಸಿದರೆ ಅದಕ್ಕೆ ಬೆಲೆ ಕಟ್ಟಲಾಗುವುದೇ ಇಲ್ಲ. ಸಂಪೂರ್ಣ ಗುರುತ್ವಾಕರ್ಷಣ ಶಕ್ತಿಯಿಂದಲೇ ಜಲಾಶಯಕ್ಕೆ ನೀರು ತುಂಬಲಾಗುತ್ತದೆ. ಅದೇ ತತ್ತ್ವದಡಿಯಲ್ಲಿ ನೀರನ್ನು ಕಾಲುವೆಯ ಕೊನೆಯ ಭಾಗದವರೆಗೂ ಹರಿಸಲಾಗುತ್ತದೆ. ಯಾವುದೇ ಇಂಧನ ಬಳಕೆಯ ಪ್ರಶ್ನೆಯೇ ಇಲ್ಲ. ನಮ್ಮ ಬಹುತೇಕ ಏತನೀರಾವರಿ ಯೋಜನೆಗಳು ಇಂಧನದ ಕೊರತೆಯಿಂದಲೇ ವಿಫಲವಾಗಿವೆ, ವಿಫಲವಾಗುತ್ತಿವೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಅವೈಜ್ಞಾನಿಕ, ದೂರದೃಷ್ಟಿ ಇಲ್ಲದ ಯೋಜನೆUಳು ಹೀಗಾಗುವುದು ಸಾಮಾನ್ಯ.
ನೀರಾವರಿ ಯೋಜನೆಗಳ ವಿಚಾರದಲ್ಲಂತೂ ದೂರದೃಷ್ಟಿ ಅತ್ಯಂತ ಅಗತ್ಯದ ಸಂಗತಿ. ಬದಲಾಗುವ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲ ಕಾಲಕ್ಕೂ ಉಪಯುಕ್ತವಾಗಬಲ್ಲ, ಆರ್ಥಿವಾಗಿಯೂ ಸಮರ್ಥನೀಯವೆನಿಸಬಲ್ಲ ಯೋಜನೆಗಳು ಮಾತ್ರ ಯಶಸ್ಸುಗಳಿಸಲು ಸಾಧ್ಯ.
ಇಂಥ ಕಾರಣಗಳಿಂದಾಗಿ ಗಣೇಕಲ್ ಜಲಾಶಯ ಸಾರ್ವಕಾಲಿಕ ಎನಿಸುತ್ತದೆ. ಅದರಲ್ಲೂ ಉತ್ತರ ಕರ್ನಾಟಕದಂಥ ಪ್ರದೇಶದಲ್ಲಿ ಈ ಪರಿಯ ನೀರಿನ ಪ್ರಯೋಗಶೀಲತೆಗೆ ಸರಕಾರಗಳು ಹೆಚ್ಚಿನ ಒತ್ತು ನೀಡುವುದು ಅಗತ್ಯವಿದೆ. ಇದೇ ಮಾದರಿಯನ್ನು ನಾಡಿನ ಇತರ ನದಿ, ಕಾಲುವೆಗಳ ಅಚ್ಚು ಕಟ್ಟು ಪ್ರದೇಶದಲ್ಲೂ ಅನುಸರಿಸುವುದು ಉತ್ತಮ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂಥ ಸಮತೋಲನ ಜಲಾಶಯಗಳ ನಿರ್ಮಾಣಕ್ಕೆ ಉತ್ತಮ ಅವಕಾಶಗಳಿವೆ. ಮಾತ್ರವಲ್ಲ. ಗಣೇಕಲ್‌ನಿಂದಲೇ ಇನ್ನೂ ೫೦ ಎಕರೆಗೆ ಹೆಚ್ಚುವರಿಯಾಗಿ ನೀರಾವರಿ ಒದಗಿಸುವ ಸಾಧ್ಯತೆಗಳಿವೆ. ನಾರಾಯಣಪುರ ಬಲದಂಡೆ ಕಾಲುವೆಯನ್ನು ಇಲ್ಲಿಗೆ ತಂದು ಸಂಪರ್ಕಿಸಿದರೆ ಎರಡು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆಂಬುದೇ ಇರುವುದಿಲ್ಲ. ಇದಕ್ಕೆ ಭಾರೀ ಪ್ರಯಾಸಪಡಬೇಕಾದ ಅಗತ್ಯವೂ ಇಲ್ಲ. ಈಗಾಗಲೇ ೯೫ ಮೈಲಿಯವರೆಗೆ ಬಂದಿರುವ ನಾರಾಯಣಪುರ ಬಲದಂಡೆ ಕಾಲುವೆಯನ್ನು ಇನ್ನು ಕೇವಲ ೧೩ ಮೈಲುಗಳವರೆಗೆ ತಂದು ಜೋಡಿಸಿದರಾಯಿತು.
ಕೃಷ್ಣಾ ನದಿ ನೀರು ಹಂಚಿಕೆಯನ್ವಯ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲಾಗದೇ ಕುಳಿತಿರುವಾಗ ಇಂಥ ಪುಟ್ಟ ಪುಟ್ಟ ಪ್ರಯತ್ನಗಳತ್ತ ಸರಕಾರಗಳು ಗಮನ ಹರಿಸಿದರೊಳಿತು. ನದಿ ನೀರು ಹಂಚಿಕೆಯಲ್ಲಿ ಅನಗತ್ಯ ವಿವಾದಗಳನ್ನು ಎದುರಿಸುವ ಬದಲು, ಶ್ರೀಮಂತ ಅಂತರ್ಜಲ ಸೃಷ್ಟಿಸುವ ಇಂಥ ಸುಲಭ ಮಾರ್ಗಗಳನ್ನು ನಾವು ಕಂಡುಕೊಳ್ಳಬಾರದೇಕೆ ?
‘ಲಾಸ್ಟ್’ಡ್ರಾಪ್: ಹೀಗೊಂದು ಲೆಕ್ಕಾಚಾರ. ವರ್ಷಕ್ಕೆ ೮,೭೬೦ ಗಂಟೆಗಳು. ಇದರಲ್ಲಿ ೪ ತಿಂಗಳು ಮಳೆಗಾಲ. ಅದರಲ್ಲೂ ನಮ್ಮ ಸನ್ನಿವೇಶದಲ್ಲಿ ಒಟ್ಟೂ ಮಳೆ ಸುರಿಯುವುದು ಸರಾಸರಿ ೧೦೦ ಗಂಟೆ ಮಾತ್ರ. ಇದನ್ನು ಹಿಡಿದಿಟ್ಟುಕೊಂಡರೆ ಮಾತ್ರ ಉಳಿದ ೮,೬೬೦ ಗಂಟೆಯ ಬಳಕೆಗೆ ನೀರು ಸಿಕ್ಕೀತು.

Friday, October 17, 2008

ನಾಡ ಕೃಷಿ: ನಳನಳಿಸುವ ದ್ರಾಕ್ಷಿ




ನೀರು ನಿರ್ವಹಣೆಯೆಂಬುದು ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸುವ ಜಾಣ್ಮೆಯಲ್ಲ. ಕೆಲವೇ ಕೆಲ ಮಂದಿ ಮಾತ್ರ ಅದನ್ನು ಕರಗತ ಮಾಡಿಕೊಳ್ಳಬಲ್ಲರು. ವಿಜಾಪುರ ಸಮೀಪದ ಜಾಲಗೇರಿಯ ದ್ರಾಕ್ಷಿ ತೋಟದ ಮಾಲೀಕ ಎಸ್.ಎಚ್. ನಾಡಗೌಡರು ಅಂಥ ಬನಿಜಾ (ಬರ ನಿರೋಧಕ ಜಾಣ್ಮೆ)ವನ್ನು ಸಿದ್ಧಿಸಿಕೊಂಡ ಅಪರೂಪದ ರೈತ.
ಮಳೆಯೆಂಬುದೇ ಅಪರೂಪದ ಅತಿಥಿ ಎಂಬಂಥ ಸನ್ನಿವೇಶದಲ್ಲಿ ಪೂರ್ತಿ ನಲವತ್ತು ಎಕರೆಯ ಅವರ ಒಣಭೂಮಿಯಲ್ಲಿ ಇಂದು ದ್ರಾಕ್ಷಿ ಬಳ್ಳಿ ನಲಿದಾಡುತ್ತಿದ್ದರೆ ಅದು ನಾಡಗೌಡರ ಇಚ್ಛಾಶಕ್ತಿ ಮತ್ತು ಕ್ರಿಯಾಶೀಲತೆಯ ಫಲ. ಆ ತೋಟದಿಂದ ದೇಶ ವಿದೇಶಗಳಿಗೆ ಇಂದು ದ್ರಾಕ್ಷಿ ರಫ್ತಾಗುತ್ತಿದೆ. ಪಕ್ಕದ ಇತರ ಹಲವು ತೋಟಗಳಿಗೆ ಹೋಲಿಸಿದರೆ ನಾಡಗೌಡರ ಕೃಷಿ ಹಲವು ರೀತಿಯಲ್ಲಿ ಭಿನ್ನವಾಗಿ ನಿಲ್ಲುತ್ತದೆ. ಅದು ನೀರು, ಗೊಬ್ಬರ, ಕೇಷಿ ಪದ್ಧತಿ ಯಾವುದೇ ಇರಬಹುದು. ಎಲ್ಲವೂ ವೈಶಿಷ್ಟ್ಯಪೂರ್ಣ. ನೀವು ನಂಬಲಿಕ್ಕಿಲ್ಲ. ನಾಡಗೌಡರ ತೋಟದಲ್ಲಿನ ದ್ರಾಕ್ಷಿ ಬಳ್ಳಿ ಈವರೆಗೆ ರಾಸಾಯನಿಕ ಗೊಬ್ಬರವನ್ನೇ ಕಂಡಿಲ್ಲ. ಆದರೂ ಇಳುವರಿಯ ವಿಚಾರದಲ್ಲಾಗಲೀ, ಹಣ್ಣಿನ ಗುಣಮಟ್ಟದ ವಿಚಾರದಲ್ಲಾಗಲಿ ಬೇರಾವುದಕ್ಕೂ ಸಾಟಿಯಿಲ್ಲ.
ಇದೆಲ್ಲ ಹೇಗೆ ಸಾಧ್ಯವಾಯಿತೆಂದು ಗೌಡರನ್ನು ಪ್ರಶ್ನಿಸಿದರೆ, ಎಲ್ಲವೂ ‘ಜೀವಾಮೃತದ ಮಹಿಮೆ’ ಎನ್ನುತ್ತಾರೆ. ಕುತೂಹಲದಿಂದ ಮತ್ತೆ ಮುಂದುವರಿದರೆ ನೀವು ತೋಟದಲ್ಲಿ ಅಲ್ಲಲ್ಲಿ ನಿರ್ಮಿಸಿರುವ ಪುಟ್ಟಪುಟ್ಟ ಕುಟೀರದ ಎದುರು ನುಮ್ಮನ್ನು ಕರೆದೊಯ್ದು ನಿಲ್ಲಿಸುತ್ತಾರೆ.
ಹೌದು, ನಾಡಗೌಡರ ಇಡೀ ತೋಟವನ್ನು ಪೊರೆಯುತ್ತಿರುವುದು ಅವರೇ ಕಂಡುಕೊಂಡಿರುವ ಅಪರೂಪದ ಮೈಕ್ರೋನ್ಯೂಟ್ರನ್ಸ್ ಟಾನಿಕ್ ‘ಜೀವಾಮೃತ’. ಹಾಗೆಂದು ಇದು ಯಾವುದೋ ಬಹುರಾಷ್ಟ್ರೀಯ ಕಂಪನಿಯಲ್ಲಿ ತಯಾರಾದದ್ದಲ್ಲ. ಗೌಡರು ತಮ್ಮದೇ ತೋಟದಲ್ಲಿ ಲಭ್ಯ ವಸ್ತುಗಳಿಂದ ರೂಪಿಸಿಕೊಂಡದ್ದು. ಇಡೀ ತೋಟಕ್ಕೆ ಇದೇ ಗೊಬ್ಬರ, ಇದೇ ಕೀಟನಾಶಕ ಮಾತ್ರವಲ್ಲ, ಇದೇ ಜೀವದ್ರವ್ಯ ಸಹ.
‘ಹಿತ್ತಲ ಗಿಡ ಮದ್ದಲ್ಲ’ ಎಂಬುದು ಗೌಡರ ಪಾಲಿಗೆ ಸುಳ್ಳಾದ ಗಾದೆ. ಇವರ ತೋಟದ ಹಿತ್ತಲ್ಲಿರುವ ಎಲ್ಲವೂ ಮದ್ದೇ. ಇಲ್ಲ ತ್ಯಾಜ್ಯವೆಂಬುದೇ ಇಲ್ಲ. ಕೊನೆಗೆ ತೋಟದ ಮೇಲ್ಭಾಗದಲ್ಲಿರುವ ಕೊಟ್ಟಿಗೆಯ ಸಗಣಿ, ಗೋಮೂತ್ರವೂ ಅತ್ಯಂತ ಉಪಯುಕ್ತ. ಇದೇ ಜೀವಾಮೃತದ ಮೂಲಧಾತು ಸಹ. ಗೌಡರ ಪ್ರಕಾರ ‘ರಸಗೊಬ್ಬರ ಮುಕ್ತ ಕೃಷಿ ನೀರಿನ ಬಳಕೆಯನ್ನು ಕನಿಷ್ಠ ಶೇ. ೪೦ರಷ್ಟು ಕಡಿಮೆ ಮಾಡಿದೆ. ತೋಟದಲ್ಲಿ ತಯಾರಾಗುವ ಜೀವಾಮೃತದ ಹೆಗ್ಗಳಿಕೆಯೇ ಇದು’ ಎನ್ನುತ್ತಾರೆ.
ಹಾಗಾದರೆ ಏನಿದು ಜೀವಾಮೃತ ? ಇದೊಂದು ರೀತಿಯ ವಿಶಿಷ್ಟ ಸಾವಯವ ದ್ರಾವಣ. ೧೦ ಲೀಟರ್ ನೀರು, ೧೦ ಕೆ.ಜಿ. ಗೋಮಯ, ೨ ಕೆ.ಜಿ.ಯಷ್ಟು ಹುರುಳಿ ಇತ್ಯಾದಿ ಯಾವುದೇ ದ್ವಿದಳ ಧಾನ್ಯದ ಹಿಟ್ಟು, ೧ ಕೆ.ಜಿ. ಮಣ್ಣು (ಹೆಪ್ಪು), ೨ ಕೆ.ಜಿ. ಕರಿಬೆಲ್ಲ....ಇವಿಷ್ಟಿದ್ದರೆ ಎಲ್ಲಿ ಬೇಕಾದರೂ ಜೀವಾಮೃತವನ್ನು ಸಿದ್ಧಗೊಳಿಸಿಕೊಳ್ಳಬಹದು. ತಯಾರಿಕೆಯ ವಿಧಾನವೂ ಅತ್ಯಂತ ಸುಲಭ. ಸುಮಾರು ೧೮೦ ಲೀಟರ್ ನೀರಿಗೆ ಇವಿಷ್ಟನ್ನೂ ಹಾಕಿ ಚೆನ್ನಾಗಿ ಗೋಟಾಯಿಸಿ ಇಟ್ಟರಾಯಿತು. ಒಂದು ವಾರ ಮತ್ತೆ ಅತ್ತ ತಲೆ ಹಾಕುವ ಅಗತ್ಯವಿರುವುದಿಲ್ಲ. ಏಳು ದಿನಗಳ ನಂತರ ಅತ್ಯುತ್ತಮ ಪೌಷ್ಟಿಕಾಂಶಯುಕ್ತ ಸಾವಯವ ಗೊಬ್ಬರ ದ್ರಾವಣ ಬಳಕೆಗೆ ಲಭ್ಯವಿರುತ್ತದೆ. ನಾಡಗೌಡರ ತೋಟದಲ್ಲಿ ಪ್ರತಿ ಹದಿನೈದು ಅಡಿಗೊಂದರಂತೆ, ದ್ರಾಕ್ಷಿ ಬಳ್ಳಿಯ ಸಾಲಿನ ಕೊನೆಯಲ್ಲಿ ಜೀವಾಮೃತ ಕುಟೀರ ಸ್ಥಾಪಿಸಲಾಗಿದೆ. ಸರದಿಯಂತೆ ಒಂದಾದರೊಂದು ಕುಟೀರದಲ್ಲಿ ನಿರಂತರ ಜೀವಾಮೃತ ತಯಾರಾಗುತ್ತಲೇ ಇರುತ್ತದೆ. ೧೫ ದಿನಕ್ಕೊಮ್ಮೆ ಒಂದು ಗಿಡಕ್ಕೆ ಒಂದು ಲೀಟರ್‌ನಂತೆ ಜೀವಾಮೃತದ ಪೂರೈಕೆಯಾಗುತ್ತದೆ.
ರಾಸಾಯನಿಕ ಗೊಬ್ಬರ ಬಳಸುವ ಬೆಳೆಗಳು ಸಹಜವಾಗಿ ನೀರನ್ನು ಹೆಚ್ಚು ಬೇಡುತ್ತವೆ. ಅದರಲ್ಲೂ ಬಯಲು ಸೀಮೆಯ ನೆಲದಲ್ಲಿ, ಇಲ್ಲಿನ ರಣ ಬಿಸಿಲಿನ ದಿನಗಳಲ್ಲಿ ಎಷ್ಟು ನೀರು ಪೂರೈಸಿದರೂ ಅದು ಕಡಿಮೆಯೇ. ಆದರೆ, ಸಾವಯವ ಗೊಬ್ಬರ ಹಾಗಲ್ಲ. ಅದರಲ್ಲಿ ಅಡ್ಡ ಪರಿಣಾಮಗಳೇ ಇರುವುದಿಲ್ಲ. ಜತೆಗೆ ಜೀವಾಮೃತದಲ್ಲಿ ಹೆಚ್ಚಿನಪಾಲು ನೀರೇ ಇರುವುದರಿಂದ ಗಿಡಗಳಿಗೆ ತಂಪು ಸಹಜವಾಗಿಯೇ ಸಿಕ್ಕಂತಾಗುತ್ತದೆ ಎಂಬದು ಗೌಡರ ವ್ಯಾಖ್ಯಾನ.
ಯಾವುದೇ ಕಾರಣಕ್ಕೂ ರಾಸಾಯನಿಕ ಅಂಶಗಳುಳ್ಳ, ಗೊಬ್ಬರವನ್ನಾಗಲೀ, ಕೀಟ ನಾಶಕವನ್ನಾಗಲೀ ತಮ್ಮ ತೋಟದೊಳಕ್ಕೆ ಪ್ರವೇಶಿಸಲೇ ಬಿಡಬಾರದೆಂಬ ಪ್ರತಿಜ್ಞೆ ಗೌಡರದ್ದು. ಇದು ಗೊಬ್ಬರದ ಕತೆಯಾದರೆ, ಇನ್ನು ಕೀಟ ನಾಶಕವಾಗಿ ಸಹ ಇಂಥದೇ ಮತ್ತೊಂದು ದ್ರಾವಣವನ್ನವರು ಕಂಡುಕೊಂಡಿದ್ದಾರೆ. ಸುತ್ತಮುತ್ತಲು ಸಿಗುವ ಕಹಿಬೇವಿನ ಎಲೆಯನ್ನು ಕಡಿದು ತಂದು ಗೋ ಮೂತ್ರದಲ್ಲಿ ೩೦ ದಿನಗಳ ಕಾಲ ನೆನೆಸಿಡುತ್ತಾರೆ. ನಂತರ ಅದನ್ನು ಚೆನ್ನಾಗಿ ಹಿಸುಕಿ, ಅದರಲ್ಲಿನ ಕಸ, ಕಡ್ಡಿ ಇತ್ಯಾದಿಗಳನ್ನೆಲ್ಲ ಪ್ರತ್ಯೇಕಿಸಿ ದ್ರಾಕ್ಷಿ ಬಳ್ಳಿಗಳಿಗೆ ಸಿಂಪಡಿಸುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಇಡೀ ತೋಟಕ್ಕೆ ಇದನ್ನೇ ಪ್ರಯೋಗಿಸುತ್ತಿದ್ದು, ಯಾವುದೇ ಹೇಳಿಕೊಳ್ಳುವಂಥ ರೋಗ ತಮ್ಮ ಬೆಳೆಯನ್ನು ಬಾಸಿಲ್ಲ ಎಂಬುದು ಅವರ ಅನುಭವದ ಮಾತು.
ಇಷ್ಟಕ್ಕೇ ಗೌಡರ ಪ್ರಯೋಗಳು ಮುಗಿಯುವುದಿಲ್ಲ. ಒಣ ಭೂಮಿಯಲ್ಲಿ ತಂಪು ನಿಲ್ಲುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗೆಂದು ಗೌಡರು ಸುಮ್ಮನೆ ಕುಳಿತುಕೊಂಡಿಲ್ಲ. ಯಾವಾಗಲೊಮ್ಮೆ ಭೂರೀ ಭೋಜನ ನೀಡುವ ಬದಲು, ನಿಯಮಿತವಾಗಿ ಸ್ವಲ್ಪ ಸ್ವಲ್ಪವೇ ತಿನ್ನುವುದು ಆರೋಗ್ಯ ಶಾಸ್ತ್ರದಲ್ಲಿ ಹೇಳಿದ ಪದ್ಧತಿ. ಅದನ್ನೇ ದ್ರಾಕ್ಷಿ ಬಳ್ಳಿಗಳಿಗೆ ಪೂರೈಸುವ ನೀರಿನ ವಿಚಾರಕ್ಕೂ ಅವರು ಅನ್ವಯಿಸಿದ್ದಾರೆ. ತಮ್ಮ ತೋಟದ ಮೇಲ್ಭಾಗದಲ್ಲಿ, ಸುಮಾರು ನಾಲ್ಕು ಲಕ್ಷ ಲೀಟರ್ ನೀರು ಹಿಡಿಯುವ ಬೃಹತ್ ಟ್ಯಾಂಕ್ ಒಂದನ್ನು ನಿರ್ಮಿಸಿದ್ದಾರೆ. ೩೮ ಅಡಿ ಅಗಲ, ೫೮ ಅಡಿ ಉದ್ದ, ೮ ಅಡಿ ಆಳದ ಈ ಬೃಹತ್ ಟ್ಯಾಂಕ್ ಎತ್ತರದಲ್ಲಿ ನಿರ್ಮಾಣಗೊಂಡಿರುವುದರಿಂದ ಸೈಫನ್ ಪದ್ಧತಿಯಲ್ಲಿ ತನ್ನಿಂದ ತಾನೇ ಯಾವುದೇ ಇಂಧನ ಖರ್ಚಿಲ್ಲದೇ ಇಡೀ ತೋಟಕ್ಕೆ ನೀರು ಪೂರೈಸುತ್ತದೆ. ಏನಿಲ್ಲವೆಂದರೂ ೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಟ್ಯಾಂಕಿಗೆ ಅಳವಡಿಸಿರುವ ಪೈಪ್‌ಗಳ ಮೂಲಕ ನಿರಂತರ ನೀರು ತೋಟದತ್ತ ಹರಿಯುತ್ತಲೇ ಇರುತ್ತದೆ. ಸಾಲುಗಳಿಗೆ ನಿಯಮಿತವಾಗಿ ನೀರು ತುಂತುರು ನೀರಾವರಿಯ ರೂಪದಲ್ಲಿ ಹಾಯುವುದರಿಂದ ಮೇಲ್ಮೈ ಸದಾ ತಂಪಿನಿಂದ ಕೂಡಿರುತ್ತದೆ. ಕೆಳಗೆ ತಾವೇ ನಿರ್ಮಿಸಿರುವ ಬೃಹತ್ ಕೃಷಿ ಹೊಂಡವೇ ( ಕಳೆದ ವಾರ ಈಬಗ್ಗೆ ಮಾಹಿತಿ ನೀಡಲಾಗಿತ್ತು) ಇದಕ್ಕೆ ನೀರಿನ ಆಧಾರ. ವಿದ್ಯುತ್ ಇದ್ದಾಗಲೆಲ್ಲ ಕೃಷಿ ಹೊಂಡದಿಂದ ನೀರು ಪಂಪ್ ಆಗುತ್ತಲೇ ಇರುತ್ತದೆ. ಹೀಗಾಗಿ ಒಂದೊಮ್ಮೆ ದಿನಗಟ್ಟಲೇ ವಿದ್ಯುತ್ ( ಕರ್ನಾಟಕದಲ್ಲಿ ಹೀಗಾಗುವುದು ಸಾಮಾನ್ಯ ಸಂಗತಿಯಾದ್ದರಿಂದ) ಇಲ್ಲದಿದ್ದರೂ ಗಿಡಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ.
ಇವಿಷ್ಟೇ ಅಲ್ಲ. ನಾಡಗೌಡರ ತೋಟಕ್ಕೆ ನೀರು ಗೊಬ್ಬರ ಮಾತ್ರವಲ್ಲ. ಯಾವುದೂ ಹೊರಗಿನಿಂದ ಪೂರೈಕೆಯಾಗುವುದಿಲ್ಲ. ಮಾತ್ರವಲ್ಲ, ತೋಟದ ಯಾವೊಂದು ವಸ್ತುವೂ ತ್ಯಾಜ್ಯವಾಗಿ ಹೊರಹೋಗುವುದಿಲ್ಲ. ಆವರಣದಲ್ಲಿ ಬಿದ್ದ ಮಳೆಯೆಲ್ಲವೂ ಕೃಷಿ ಹೊಂಡಕ್ಕೆ ಬಂದು ವಿರಮಿಸುತ್ತದೆ. ಕೃಷಿ ಹೊಂಡದಲ್ಲಿ ಸಂಗ್ರಹವಾಗುವ ಹೂಳು ಜೀವಾಮೃತಕ್ಕೆ ಹೆಪ್ಪು ಆಗಿ ಬಳಕೆಯಾಗುತ್ತದೆ. ಇನ್ನು ಗೌಡರು ನಿರ್ಮಿಸಿರುವ ಅತ್ಯಾಧುನಿಕ ಮಾದರಿ ಹಟ್ಟಿಯಲ್ಲಿ ಏನಿಲ್ಲವೆಂದರೂ ನಲವತ್ತಕ್ಕೂ ಹೆಚ್ಚಿನ ಹಸುಗಳು ಹಾಲಿನ ಹೊಳೆ ಹರಿಸುತ್ತಿವೆ. ತೋಟದಲ್ಲಿ ಬೆಳೆಯುವ ಕಳೆಯೇ ಅವಕ್ಕೆ ಸಮೃದ್ಧ ಮೇವು. ಅದರ ಸಗಣಿ, ಮೂತ್ರಗಳು ಜೀವಾಮೃತವಾಗಿ ತೋಟಕ್ಕೆ ಪೂರೈಕೆಯಾಗುತ್ತದೆ. ಹೆಚ್ಚಿನದ್ದು ಗೋಬರ್ ಪ್ಲಾಂಟ್ ಸೇರಿ ಅನಿಲ ಉತ್ಪಾದನೆಗೆ ಒದಗುತ್ತಿದೆ. ಉಳಿದಂತೆ ಇಲ್ಲಿನ ಕಸ ಕಡ್ಡಿಗಳೆಲ್ಲವೂ ಗೌಡರು ನಿರ್ಮಿಸಿರುವ ಎರೆಹುಳು ಗೊಬ್ಬರ ಘಟಕಕ್ಕೆ ಕಚ್ಚಾ ವಸ್ತು. ಇನ್ನೇನು ಬೇಕು ಸ್ವಾವಲಂಬಿ ಕೃಷಿ ಎನ್ನಿಸಿಕೊಳ್ಳಲು. ಹೌದು ಗೌಡರದ್ದು ನೂರಕ್ಕೆ ನೂರು ಸ್ವಾವಲಂಬಿ ಕೃಷಿ.

‘ಲಾಸ್ಟ್’ಡ್ರಾಪ್: ಇಚ್ಛಾಶಕ್ತಿ, ಪ್ರಯೋಗಶೀಲತೆಗಳಿದ್ದರೆ ಖಂಡಿತಾ ಎಂಥ ಸ್ಥಳದಲ್ಲೂ ಕೃಷಿಯಿಂದ ನಷ್ಟ ಎಂಬುದಿಲ್ಲ. ವ್ಯವಸಾಯವೆಂಬುದನ್ನು ಆರಾಧನೆ ಎಂದುಕೊಳ್ಳಬೇಕು. ಆಗ ಭೂದೇವಿ ಒಲಿದು ವರ ಕೊಟ್ಟೇ ಕೊಡುತ್ತಾಳೆ ಎಂಬುದಕ್ಕೆ ನಾಡಗೌಡರು ಪ್ರತ್ಯಕ್ಷ ಸಾಕ್ಷಿ.

Monday, October 13, 2008

composting toilets



(One of the thought provoking articles)
1.An Eco-san separating pan
2.Tin drum for faeces and barrel for urine collection
A
sk any water supply board engineer and he will tell you that the bigger headache is sewage management and not water supply. Statistics will also show that almost all of India has access to water supply –of varying quantity and quality no doubt- but far too few have access to good sanitation.The Millennium Development Goal adopted by the UN in September 2000 and of which India is a signatory seeks to halve the number of people without access to sanitation by 2015. That means India will have to build at least half of 115 million toilets to cover half of 78% of our rural population and 24% of its urban population un-served sanitation units by the year. A huge task indeed.Typical sanitation solutions have included the septic tank or simply a pit latrine. Both tend to pollute ground water and are environmentally unsatisfactory. Even in water resource rich area like Goa or Kerala inadequate sanitation has ended up contaminating ground water to such an extent that many wells are unusable. Sanitation and water supply are inextricably linked. If it is not ‘fouling the nest’ it is the unavailability of water which has made many toilets unusable in rural area. If you do not have water to drink will you use it for a toilet?On the other hand area wide underground sewerage systems with treatment facilities are difficult to provide and are costly ventures. They tend to be energy consuming and generally do not work satisfactorily. For scattered houses in outlying areas of cities, in villages, in places with a high water table and in hard rock area technically appropriate solutions are either not available or are costly to implement.In such a scenario one emerging solution is a dry composting toilet. A composting toilet collects human waste and converts it to a fertilizer resource for plant growth without polluting water bodies or groundwater.The urine separating WC’s are available not only in the Indian type but also in the European type. These toilets are being used in individual houses as well as flats.Eco-san alternatives are coming up in many places in the world including Sweden, Germany, Denmark, the USA, China and Sri Lanka to name a few. India too has its Eco-san heroes in Dr Bindeshwar Pathak of the Sulabh movement and Paul Calvert in Trivandrum, Kerala.
For more information:
S.Vishwanath and Chitra Vishwanath




Phone: 080-23641690.

Friday, October 10, 2008

ಅಂಗಳಕ್ಕೆ ಅಂಗಿ ತೊಡಿಸಿ ಕೆರೆ ಕಟ್ಟಿ ನಿಲ್ಲಿಸಿದರು

ಒಂದಿಡೀ ಗುಡ್ಡದ ನೀರು ಈಗ ನಾಡಗೌಡರು ಹೇಳಿದಂತೆ ಕೇಳುತ್ತಿದೆ. ನಡೆಯೆಂಬಲ್ಲಿ ನಡೆಯುತ್ತದೆ. ನಿಲ್ಲೆಂಬಲ್ಲಿ ನಿಲ್ಲುತ್ತದೆ. ಹೆಚ್ಚೆಂದರೆ ಅಲ್ಲೇ ಇಂಗಿ ಕೆಳಗಿಳಿದು ಕುಳಿತುಕೊಳ್ಳುತ್ತದೆ. ಅಂಥದ್ದೊಂದು ಸನ್ನಿವೇಶ ನಿರ್ಮಾಣವಾದದ್ದು ಒಂದೆರಡು ದಿನಗಳಲ್ಲಿ ಅಲ್ಲ. ಆ ತಾಣಕ್ಕೊಮ್ಮೆ ನೀವು ಹೋಗಿ ನೋಡಿದರೆ ಅಬ್ಬಾ...ಎಂಬ ಉದ್ಘಾರ ಬರದಿದ್ದರೆ ಹೇಳಿ.
ಬರನಾಡ ನೀರಿನ ಬವಣೆ ಹೇಳತೀರದ್ದು, ಹಾಗೆಂದು ಸುಮ್ಮನೆ ಕುಳಿತರಾದೀತೇ ? ಕುಳಿತುಕೊಳ್ಳುವ ಜಾಯಮಾನದವರೂ ಅಲ್ಲ ಅಲ್ಲಿನ ಮಂದಿ. ವಿಜಾಪುರದ ಹುಬನೂರು-ಟಕ್ಕಳಕಿ ರಸ್ತೆಯಲ್ಲಿರುವ ದ್ರಾಕ್ಷೀ ತೋಟದ ಮಾಲೀಕ ಎಸ್.ಎಚ್. ನಾಡಗೌಡರದ್ದೂ ಇದೇ ಸ್ವಭಾವ. ಇದು ತೋಟವೆಂದರೆ ತೋಟವಲ್ಲ. ಖುಲ್ಲಂಖುಲ್ಲ ನಲವತ್ತು ಎಕರೆ ಗುಡ್ಡವನ್ನು ಹಾಗೊಂದು ಸ್ವರೂಪಕ್ಕೆ ಅವರು ತರಲು ಪಟ್ಟ ಶ್ರಮ ಅವರೊಬ್ಬರಿಗೇ ಗೊತ್ತು. ಇಂದು ಸುತ್ತಮುತ್ತಲೆಲ್ಲೂ ಕಾಣಲು ಸಾಧ್ಯವೇ ಇಲ್ಲದ, ಪುಟ್ಟದೊಂದು ಜಲಾಶಯವೇ ಅಲ್ಲಿ ತುಂಬಿ ತುಳುಕುತ್ತಿದೆ. ಈ ಮಳೆಗಾಲದಲ್ಲಿ ಗುಡ್ಡದಿಂದ ಜಾರಿ ಬಂದು ನಿಂತುಕೊಂಡ ನೀರು ನಿಗಿನಿಗಿ ನಲಿದಾಡುತ್ತಿದೆ.
ಆ ಜಮೀನಿಗೆ ನಾಡಗೌಡರು ಮೊಟ್ಟ ಮೊದಲಿಗೆ ಕಾಲಿಟ್ಟಾಗ ಬಂಜಾತಿಬಂಜರು ನೆಲವದು. ದೇವರಾಣೆ ಅಲ್ಲಿ ಒಂದು ಹುಲ್ಲುಕಡ್ಡಿಯನ್ನೂ ಪ್ರಯತ್ನ ಪೂರ್ವಕ ಬೆಳೆದುಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ. ಏನಾದರಾಗಲಿ ಅಲ್ಲೊಂದಿಷ್ಟು ದ್ರಾಕ್ಷಿ ಹಚ್ಚಲೇಬೇಕೆಂಬ ಹಠಕ್ಕೆ ಬಿದ್ದ ಅವರ ನೆರವಿಗೆ ಬಂದದ್ದು ರಾಷ್ಟ್ರೀಯ ತೋಟಗಾರಿಕೆ ಮಿಷನ್. ಈ ಯೋಜನೆಯಡಿ ಹತ್ತು ಲಕ್ಷ ರೂ.ಗಳು ಮಂಜೂರಾಗುತ್ತಿದ್ದಂತೆ ಬೃಹತ್ ಸಮುದಾಯ ಕೃಷಿ ಹೊಂಡದ ಕನಸು ಚಿಗುರೊಡೆಯಿತು. ವಿಜಾಪುರದ ಕೃಷಿ ಸಹಾಯಕ ಎನ್. ಕುಂಬಾರ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ೭೦ ಮೀಟರ್ ಅಗಲ, ೧೩೦ ಮೀಟರ್ ಉದ್ದ ಹಾಗೂ ಸರಿ ಸುಮಾರು ೬ ಮೀಟರ್ ಆಳದ ಸಮುದಾಯ ಕೆರೆ ಅದೇ ಉತ್ಸಾಹದಲ್ಲಿ ಮೈದಳೆಯಿತು. ಮಳೆಯೂ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿತ್ತು. ಈ ಬಾರಿ ಒಂದಷ್ಟು ನೀರು ತುಂಬಿಕೊಳ್ಳುವುದು ನಿಶ್ಚಿತವಾಗಿತ್ತು. ಆದರೆ ಅಂಥ ನೀರು ಎಷ್ಟು ದಿನ ಅಲ್ಲಿ ನಿಂತುಕೊಂಡೀತು, ಎಲ್ಲಿಯವರೆಗೆ ಬಳಕೆಗೆ ಸಿಕ್ಕೀತು ಎಂಬುದು ಪ್ರಶ್ನೆಯಾಗಿತ್ತು.
ಕೆರೆಯೆಂಬೋ ಕೆರೆ ಏಕಾಏಕೀ ಉದ್ಭವವಾಗುವಂಥದ್ದಲ್ಲ. ಗುಂಡಿ ತೋಡಿ ಬಿಟ್ಟಾಕ್ಷಣ ಅಲ್ಲಿ ಸದಾಕಾಲ ನೀರು ನಿಂತು ನಲಿದಾಡುತ್ತದೆ ಎನ್ನಲಿಕ್ಕಾಗುವುದಿಲ್ಲ. ಹೇಳೀಕೇಳಿ ಅದು ವಿಜಾಪುರದಂಥ ಬೆಂಗಾಡು. ಸಾಮಾನ್ಯವಾಗಿ ಒಂದು ಕೆರೆಯಲ್ಲಿ ಪೂರ್ತಿ ನೀರು ನಿಂತುಕೊಳ್ಳಲು ಕನಿಷ್ಠವೆಂದರೂ ಐದರಿಂದ ಹತ್ತು ವರ್ಷಗಳೇ ಬೇಕಾಗುತ್ತದೆ. ಮಾತ್ರವಲ್ಲ ಅದು ಮಣ್ಣಿನ ಗುಣವನ್ನು ಅವಲಂಬಿಸಿರುತ್ತದೆ. ಆ ಜಾಗದಲ್ಲಿ ಯಾವ ಪ್ರಮಾಣದಲ್ಲಿ ಮಳೆಯಾಗುತ್ತದೆ. ಎಷ್ಟು ನೀರನ್ನು ಮಣ್ಣು ಹೀರಿಕೊಳ್ಳುತ್ತದೆ. ಎಷ್ಟು ವೇಗವಾಗಿ ನೀರು ಇಂಗುತ್ತದೆ. ತೇವಾಂಶವನ್ನು ಎಷ್ಟು ಕಾಲ ಹಿಡಿದಿಟ್ಟುಕೊಳ್ಳುತ್ತದೆ ಇತ್ಯಾದಿ ಅಂಶಗಳನ್ನು ಒಂದು ಹೊಸ ಕೆರೆ ನಿರ್ಮಾಣದ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಒಂದು ಜಾಗದಲ್ಲಿ ಕೆರೆ ಸಹಜವಾಗಿ ನಿರ್ಮಾಣಗೊಂಡಿದೆ ಎಂದರೆ ಸುತ್ತಮುತ್ತಲ ಅಂತರ್ಜಲ ಮಟ್ಟ ಸಾಕಷ್ಟು ಎತ್ತರದಲ್ಲಿದೆ ಎಂಬುದು ಗಮನಾರ್ಹ ಸಂಗತಿ. ಹಾಗಾಗಲು ಅಲ್ಲಿನ ಮಣ್ಣು ಗರಿಷ್ಠ ನೀರನ್ನು ಕುಡಿದು
saturation ಮಟ್ಟವನ್ನು ತಲುಪಿರಬೇಕು. ಹಾಗೆ ನೀರು ಇಂಗುತ್ತ, ಇಂಗುತ್ತ... ಹೋದಂತೆಲ್ಲ, ಮತ್ತೆ ಇಂಗಲು ಉಳಿದಿಲ್ಲ ಎಂಬ ಹಂತದಲ್ಲಿ ಕೆರೆಯ ಅಂಗಳದಲ್ಲಿನ ಮಣ್ಣು ಅಂಟು ಗುಣವನ್ನು ಪಡೆದುಕೊಳ್ಳುತ್ತದೆ. ಮೇಲೊಂದಿಷ್ಟು ಪಾಚಿಯಂಥ ಜಲ ಸಸ್ಯಗಳ ಅಭಿವೃದ್ಧಿಯಾಗುತ್ತದೆ. ಅವು ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಸುತ್ತಲೂ ಆ ಕೆರೆಯದ್ದೇ ಆದ ಒಂದು ಜೀವಪ್ರಪಂಚ ನಿರ್ಮಾಣವಾಗುತ್ತದೆ. ಅಲ್ಲೊಂದಿಷ್ಟು ಗಿಡ ಮರಗಳು ಬೆಳೆಯುತ್ತವೆ. ಅದರತ್ತ ಒಂದಷ್ಟು ಪ್ರಾಣಿ ಪಕ್ಷಿಗಳು ಆಕರ್ಷಿತವಾಗುತ್ತವೆ. ಸುತ್ತ ಬೀಳುವ ಮಳೆ ನೀರು ಈ ಕೆರೆಯನ್ನೇ ತನ್ನ ಪಯಣದ ಗುರಿಯಾಗಿಸಿಕೊಂಡು ಹರಿದು ಬಂದು ಸೇರಲಾರಂಭಿಸುತ್ತದೆ. ಕೊನೆಗೂ ಅಲ್ಲೊಂದು ದಿನ ಜೀವಂತಿಕೆಯ ಎಲ್ಲ ಲಕ್ಷಣಗಳೂ ಪರಿಪೂರ್ಣ ಗೋಚರಗೊಂಡು ‘ಸಾಮ್ರಾಜ್ಯ’ ಸ್ಥಾಪನೆಯಾಗುತ್ತದೆ.
ಇಷ್ಟೊಂದು ಸುದೀರ್ಘ ಪ್ರಕ್ರಿಯೆಗೆ ನಾಂದಿ ಹಾಡುವುದು ಸುಲಭದ ಮಾತಲ್ಲ; ಅದೂ ವಿಜಾಪುರದ ಸೊಕ್ಕಿನ ನೆಲಗುಣದಲ್ಲಿ. ಕೆಕ್ಕರಿಸುವ ಬೇಸಿಗೆಯನ್ನು ಕಂಡಾಗ ಆ ನೆಲ ಚುಂಗು ಬಂದಂತೆ ಆಡಲಾರಂಭಿಸುತ್ತದೆ. ಅದೆಷ್ಟೇ ದಟ್ಟ ತೇವಾಂಶವಿದ್ದರೂ ಪೈಪೋಟಿಗೆ ಬಿದ್ದು ಆಪೋಶನ ತೆಗೆದುಕೊಂಡು ಬಿಡುತ್ತದೆ ಅಲ್ಲಿನ ಮಣ್ಣು, ಹಾಗೂ ಉಳಿದದ್ದು ಅಂಥ ಬಿಸಿಲಿಗೆ ಆವಿಯಾಗದೇ ಇರಲು ಸಾಧ್ಯವೇ ಇಲ್ಲ. ಈ ಎಲ್ಲದರ ನಡುವೆ ನಾಡಗೌಡರು ತಾವು ನಿರ್ಮಿಸಿದ ಕೃಷಿ ಹೊಂಡದಲ್ಲಿ ನೀರು ನಿಲ್ಲಿಸಿಕೊಳ್ಳಬೇಕು. ಅದರಿಂದಲೇ ಮೇಲಿನ ಗುಡ್ಡದಲ್ಲಿ ನಾಟಿ ಮಾಡಿದ ದ್ರಾಕ್ಷಿ ದಂಟುಗಳನ್ನು ಚಿಗುರಿಸಿಕೊಳ್ಳಬೇಕು. ಅಷ್ಟಕ್ಕೇ ಮುಗಿಯುವುದಿಲ್ಲ, ಅದರಿಂದಲೇ ದ್ರಾಕ್ಷಿ ಗೊಂಚಲುಗಳು ಹುಳಿ ಕಳೆದುಕೊಂಡು ಕಳಿಯಬೇಕು.
ಹೇಗೆ ಮಾಡಿದರೂ ಒಂದೆರಡು ವರ್ಷಗಳಲ್ಲಿ ನೀರು ನಿಲ್ಲಿಸಿಕೊಳ್ಳಲು ಸಾಧ್ಯವಿಲ್ಲ. ನೀರಿಲ್ಲದೇ ದ್ರಾಕ್ಷಿ ಬೆಳೆ ಉಳಿಸಿಕೊಳ್ಳಲಾಗುವುದಿಲ್ಲ. ಏನು ಮಾಡುವುದೆಂಬ ಚಿಂತನೆಯಲ್ಲಿದ್ದಾಗಲೇ ಕೆರೆಯ ಮೇಲ್ಪದರಕ್ಕೆ ಪ್ಲಾಸ್ಟಿಕ್ ಹೊದೆಸಿಬಿಟ್ಟರೆ ಹೇಗೆ ? ಎಂಬ ಯೋಚನೆ ಬಂತು. ಉದ್ದ ಅಗಲಗಳನ್ನು ಅಳೆದು ಅರ್ಧ ಹೊಂಡಕ್ಕೆ ಮುಚ್ಚಲು ಅಗತ್ಯ ಪ್ಲಾಸ್ಟಿಕ್‌ನ ಅಳತೆ ತೆಗೆದೇ ಬಿಟ್ಟರು ನಾಡಗೌಡರು. ಬರೋಬ್ಬರಿ ೩೦೦ ಮೈಕ್ರಾನ್‌ನಷ್ಟು ವಿಸ್ತಾರದ ಪ್ಲಾಸ್ಟಿಕ್ ಹಾಳೆಗೆ ಆರ್ಡರ್ ಮಾಡಿಯೂ ಬಿಟ್ಟರೂ. ಪಕ್ಕದ ಮಹಾರಾಷ್ಟ್ರದಿಂದ ಅದು ಲಾರಿಯಲ್ಲಿ ಬಂದು ಇಳಿದೂ ಬಿಟ್ಟಿತು.
ಅದನ್ನು ಇಡಿಯಾಗಿ ಏಕಕಾಲಕ್ಕೆ ಕೆರೆಗೆ ಹೊದೆಸುವುದು ಹೇಗೆ ಎಂಬುದು ಮುಂದಿನ ಸಮಸ್ಯೆ. ಬಟಾ ಬಯಲಲ್ಲಿ ಬೀಸುವ ಗಾಳಿ ಒಂದು ಕಡೆ, ಯಮ ಭಾರ ಇನ್ನೊಂದೆಡೆ. ಎಲ್ಲವನ್ನೂ ಅಳೆದೂಸುರಿದು ಸರಿ ಸುಮಾರು ನೂರಾಹತ್ತು ಮಂದಿಯನ್ನು ಒಟ್ಟಿಗೆ ಸೇರಿಸಿ ಎಲ್ಲರೂ ಸೇರಿ ಅದನ್ನು ಹೊದೆಸುವ ನಿರ್ಧಾರವಾಯಿತು. ಕೆರೆಯಂಗಳದ ಮಧ್ಯದಲ್ಲಿ ಬೃಹತ್ ಪ್ಲಾಸ್ಟಿಕ್ ಸುರುಳಿಯನ್ನು ತಂದು ಚೆಲ್ಲಲಾಯಿತು. ಎರಡು ಸಾಲಿನಲ್ಲಿ ಜನರನ್ನು ನಿಲ್ಲಿಸಿ ಎರಡೂ ಕಡೆಯಿಂದ ಒಟ್ಟಿಗೇ ವಿಭಿನ್ನ ದಿಕ್ಕಿನಲ್ಲಿ ಪ್ಲಾಸ್ಟಿಕ್ ಹಾಳೆಯನ್ನು ಎಳೆದುಕೊಂಡು ಹೊರಡಲಾಯಿತು. ಕೊನೆಗೂ ಮೂರು ಗಂಟೆಯ ಪರಿಶ್ರಮದ ಬಳಿಕ ಕೆರೆಯಂಗಳಕ್ಕೆ ಅಂಗಿ ತೊಡಿಸಲಾಗಿತ್ತು.
ಮೊದಲ ಮಳೆಯನ್ನೇ ನಾಡಗೌಡರು ಹಿಡಿದಿಟ್ಟುಕೊಂಡು ಬಳಸಲಾರಂಭಿದ್ದಾರೆ. ಅದೇ ಸಂದರ್ಭದಲ್ಲಿ ಪ್ಲಾಸ್ಟಿಕ್‌ನ ಕೆಳಭಾಗಕ್ಕೆ ನುಸುಳುವ ನೀರು ಇಂಗುತ್ತಿದೆ. ಹೀಗೆ ನಾಲ್ಕಾರು ವರ್ಷಗಳವರೆಗೆ ಈ ಪ್ಲಾಸ್ಟಿಕ್ ಬಾಳಿಕೆ ಬರುವ ನಿರೀಕ್ಷೆಯಿದೆ. ಅಷ್ಟರಲ್ಲಿ ಅಲ್ಲೊಂದು ಜೀವಸಾಮ್ರಾಜ್ಯ ಸ್ಥಾಪನೆಯಾಗಿ ಶಾಶ್ವತ ಕೆರೆ ತಲೆ ಎತ್ತುವಂತಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ನಾಡಗೌಡರು. ಅವರ ವಿಶ್ವಾಸ ದಿಟವಾಗುವ ಎಲ್ಲ ಲಕ್ಷಣಗಳೂ ಎರಡು ವರ್ಷಗಳಲ್ಲೇ ಕಾಣುತ್ತಿದೆ. ಹಾಗಾಗಲಿ ಎನ್ನೋಣವೇ.

Thursday, October 2, 2008

‘ಬರನಾಡ’ಗೌಡರು ಸೃಷ್ಟಿಸಿದ ಮಲೆನಾಡು

‘ಆಗದು ಎಂದು, ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ....ಸಾಗದು ಕೆಲಸವು ಎಂದೆಂದು...’
ಅದೊಂದು ಬೋಳು ಗುಡ್ಡ. ಬಂಡೆ, ಕುರುಚಲು ಪೊದೆಗಳನ್ನು ಬಿಟ್ಟರೆ ಅಲ್ಲಿ ಬೇರೇನೂ ಕಾಣಲು ಸಿಗುವುದಿಲ್ಲ. ನಾಯಕನ ಎಂಟ್ರಿ ಆಗುವುದೇ ಅಲ್ಲಿಂದ. ಸುಶ್ರಾವ್ಯ ಹಾಡು ಮುಗಿಯುವುದರೊಳಗೆ ಅದೇ ಗುಡ್ಡ ಹಸಿರಿನಿಂದ ನಳ ನಳಿಸುತ್ತಿರುತ್ತದೆ. ಅಂಥ ಬರಡು ಭೂಮಿಯಲ್ಲೂ ನೀರಿನ ಬುಗ್ಗೆ ಉಕ್ಕುತ್ತದೆ. ಸೊಂಪಾಗಿ ಬೆಳೆದ ಭತ್ತ, ಕಬ್ಬು, ಜೋಳ ತೊನೆದಾಡುತ್ತದೆ....ಎಲ್ಲವೂ ಹೆಚ್ಚೆಂದರೆ ಐದಾರು ನಿಮಿಷದಲ್ಲಿ ಪರಿವರ್ತನೆಯ ಪರಾಕಾಷ್ಠೆ ತಲುಪಿರುತ್ತದೆ.
ಡಾ.ರಾಜ್‌ಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರ ನೆನಪಿಗೆ ಬಂದಿರಬೇಕು. ಥೇಟಾನು ಥೇಟು ಅದೇ ರೀತಿ ವಾಸ್ತವದಲ್ಲೂ ಬೋಳುಗುಡ್ಡ ಹಸಿರಾಗಿಬಿಟ್ಟರೆ, ಬೆಂಗಾಡು ಹಸಿರ ಬಸಿರು ಹೊತ್ತು ನಿಂತರೆ, ಬದುಕು ಬಂಗಾರವಾಗಲು ಇನ್ನೇನು ಬೇಕು ? ‘ಅದೆಲ್ಲ ಎಲ್ಲಿ ಸಾಧ್ಯ ? ಹೇಳೀ, ಕೇಳಿ ಅದು ಅಣ್ಣಾವ್ರ ಚಿತ್ರ ಬಿಡಿ.’ ಹಾಗೆನ್ನುವ ಪ್ರಶ್ನೆ ಇಲ್ಲವೇ ಇಲ್ಲ. ಇವೆಲ್ಲವೂ ಸಾಧ್ಯವಾಗಿದೆ. ದೇವರಾಣೆಗೂ ಸತ್ಯ. ನೂರಕ್ಕೆ ನೂರು ಬಂಗಾರದ ಮನುಷ್ಯದಲ್ಲಿಯಂತೆಯೇ ಒಂದಿಡೀ ಬೋಳುಗುಡ್ಡ ಇಂದು ದ್ರಾಕ್ಷಿ ತೋಟವಾಗಿದೆ. ಆದರೆ ಕೇವಲ ಆರು ನಿಮಿಷದ ಹಾಡಿನೊಳಗಲ್ಲ. ಆರು ವರುಷದ ಸತತ ಪರಿಶ್ರಮದ ಬಳಿಕ. ಅಂದು ಬಹುಶಃ ನಾಡಗೌಡರು ಕೈ ಕಟ್ಟಿ ಕುಳಿತಿದ್ದರೆ ಇವಾವುವೂ ಆಗುತ್ತಿರಲಿಲ್ಲ ಎಂಬುದಂತೂ ಸತ್ಯ.
ವಿಜಾಪುರದಿಂದ ಏಳೆಂಟು ಕಿಮೀ. ದೂರದಲ್ಲಿರುವ ಧನ್ನರಗಿ ದಾಟಿ ಜಾಲಗೇರಿಗೆ ಹೋಗಿ ನಿಂತರೆ, ಅದೊಂದು ಸವಿ ಸ್ವರ್ಗ. ದ್ರಾಕ್ಷಿ ಗೊಂಚಲುಗಳ ಮೇಲಿಂದ ಬೀಸಿ ಬರುವ ತಂಗಾಳಿಗೆ ಮೈಯೊಡ್ಡಿ ಆ ಗುಡ್ಡದಲ್ಲಿ ನಿಂತರಂತೂ ಸೈ, ನಿಲುವನ್ನೇ ಮರೆಸಿಬಿಡುವ ಆಹ್ಲಾದ. ಒಂದು ಕಾಲದಲ್ಲಿ, ಅಷ್ಟೆಲ್ಲ ಏಕೆ ? ನಾಲ್ಕು ವರ್ಷಗಳ ಹಿಂದೆ ಇದೇ ನೆಲ ಗಾರಿಡುತ್ತಿತ್ತು, ಮಳೆ ನಿಂತ ಮರು ವಾರವೇ ಭೂಮಿಗೆ ಭೂಮಿಯೇ ಅಂಗಾರೆದ್ದು ಹೋಗಿದೆಯೇನೋ ಎಂಬಷ್ಟರ ಮಟ್ಟಿಗೆ ಒಣಗಿ ಬಾಯ್ಕಳೆದು ನಿಂತಿರುತ್ತಿತ್ತು... ಎಂದೆಲ್ಲ ಹೇಳಿದರೆ ಸುತಾರಾಂ ನೀವು ಒಪ್ಪಲಿಕ್ಕಿಲ್ಲ. ಅಂಥ ಸಂದಿಗ್ಧ ನಮ್ಮನ್ನೂ ಕಾಡಿದ್ದು ಸುಳ್ಳಲ್ಲ. ಆದರೆ ಪಕ್ಕದಲ್ಲೇ ಅಂಥ ಸ್ಥಿತಿಗೆ ಇಂದಿಗೂ ಸಾಕ್ಷಿಯಾಗಿ ನಿಂತಿರುವ ಬೇರೆ ಜಮೀನು ನೋಡಿದರೆ ಯಾವುದೂ ಉತ್ಪ್ರೇಕ್ಷೆಯಲ್ಲ ಎಂಬ ವಾಸ್ತವ ದರ್ಶನ ಆಗುತ್ತ ಹೋಗುತ್ತದೆ.
ಜಾಲಗೇರಿಯ ಎಸ್. ಎಚ್. ನಾಡಗೌಡರು ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ಸ್ಥಿತಿವಂತ ರೈತ. ಆರೆಂಟು ವರ್ಷದ ಕೆಳಗೆ ಯಾವುದಕ್ಕೂ ಇರಲಿ, ಕೊನೆಗೆ ಜಾನುವಾರುಗಳ ಮೇವಿಗಾದರೂ ಆದೀತು ಎಂದುಕೊಂಡು ೪೦ ಎಕರೆಯ ಈ ಗುಡ್ಡವನ್ನು ಖರೀದಿಸಿದ್ದರು. ಅದನ್ನು ಬಿಟ್ಟು ಬೇರಾವ ಮಹತ್ವಾಕಾಂಕ್ಷೆಯೂ ಆಗ ಇರಲಿಲ್ಲ. ವಿಜಾಪುರಕ್ಕೆ ಅಡರುವ ಬಿಸಿಲು, ಮೇಲಿಂದ ಮೇಲೆ ಅಮರಿಕೊಳ್ಳುವ ಬರಗಾಲ, ಇನ್ನಿಲ್ಲದಂತೆ ಕೈಕೊಡುವ ಮಳೆ, ಇವೆಲ್ಲದರ ಜತೆಗೇ ರೈತನೊಂದಿಗೆ ಜೂಜಿಗಿಳಿಯುವ ಮಾರುಕಟ್ಟೆ ಪರಿಸ್ಥಿತಿ ಗೊತ್ತಿದ್ದವರಾರೂ ಇದಕ್ಕಿಂತ ಹೆಚ್ಚಿನ ನಿರೀಕ್ಷೆಗಳನ್ನು ಒಣ ಭೂಮಿಯ ಮೇಲೆ ಇಟ್ಟುಕೊಳ್ಳಲಾಗುವುದಿಲ್ಲ, ನಾಡಗೌಡರೂ ಹಾಗೆಯೇ ಇದ್ದರು.
ಅದೊಂದು ದಿನ ವಿಜಾಪುರದ ಗ್ರಾಮಸೇವಕ ಎನ್. ಎಚ್. ಕುಂಬಾರ್ ಕ್ಷೇತ್ರ ಪ್ರವಾಸಕ್ಕೆ ಬಂದಿದ್ದರು. ‘ಈ ಭೂಮಿಯನ್ನೇಕೆ ನೀವು ಅಭಿವೃದ್ಧಿಪಡಿಸಬಾರದು ? ಇಲ್ಲಿ ಏಕೆ ಒಂದಷ್ಟು ಬೆಳೆ ಬೆಳೆಯಬಾರದು ?’ ಎಂದು ನಾಡಗೌಡರನ್ನು ಪ್ರಶ್ನಿಸಿದರಂತೆ. ಅವರು ಗಂಭೀರವಾಗಿಯೇ ನೀಡಿದ ಸಲಹೆ ಗೌಡರಿಗೆ ಹಾಸ್ಯವಾಗಿ ತೋರಿರಬೇಕು. ನಕ್ಕರು. ಆದರೆ ಕುಂಬಾರ್ ನಗಲಿಲ್ಲ. ಆತ ಅಕ್ಷರಶಃ ಗ್ರಾಮ ಸೇವೆಗೆ ನಿಂತ ಪ್ರಾಮಾಣಿಕ ವ್ಯಕ್ತಿ. ಒಣ ಭೂಮಿ ಅಭಿವೃದ್ಧಿಯೆಂಬುದು ಸಣ್ಣ ಪುಟ್ಟ ರೈತರಿಂದ ಆಗುವ ಕೆಲಸವಲ್ಲ ಎಂಬುದನ್ನು ಅನುಭವದಿಂದ ಮನಗಂಡಿದ್ದರವರು. ಅಷ್ಟಕ್ಕೇ ಬಿಡುವವರಲ್ಲ. ರಚ್ಚೆ ಹಿಡಿದು ಗೌಡರಿಗೆ ಕೃಷಿಯ ಹುಚ್ಚು ಹಿಡಿಸಿದರು.
ಕೊನೆಗೂ ಯೋಜನೆ ನಾಡಗೌಡರ ತಲೆ ಹೊಕ್ಕಿತು. ಅಷ್ಟೆ, ಮುಂದಲ್ಲಿ ಮಾತಿಗೆ ಜಾಗವಿರಲಿಲ್ಲ. ಗೌಡರ ನಾಡು ಅಸ್ತಿತ್ವ ಪಡೆಯಲಾರಂಭಿಸಿತು. ವಿದ್ಯಾರಣ್ಯರಾಗಿ ಕುಂಬಾರರಿದ್ದರು. ಹಸಿರ ಸಾಮ್ರಾಜ್ಯಕಟ್ಟಲು ಮೊದಲು ಬೇಕಿದ್ದುದೇ ನೀರು. ಅದನ್ನೆಲ್ಲಿಂದ ತರುವುದು ? ಪ್ರಶ್ನೆಗೆ ಉತ್ತರ ಕೊಡುತ್ತಿತ್ತು ಇಳಿಜಾರು ಮೇಲ್ಮೈ. ಏನಿಲ್ಲವೆಂದರೂ ೧೩೦ ಅಡಿ ಎತ್ತರದಲ್ಲಿರುವ ಜಮೀನಿನ ತಲೆಕಟ್ಟಿನಲ್ಲಿ ಒಂದು ಹನಿ ನೀರು ಬಿದ್ದರೂ ಅದು ಗೌಡರ ಮಾಲೀಕತ್ವದ ಕೊನೆಯ ಪ್ರದೇಶಕ್ಕೇ ಬಂದು ನಿಲ್ಲಬೇಕು. ಹಾಗಿದೆ ಭೂ ರಚನೆ. ಅಂದ ಮೇಲೆ ಮಳೆಗಾಲದಲ್ಲಿ ಬೀಳುವ ಸರಾಸರಿ ೫೦೦ ಮಿ.ಮೀ. ಮಳೆಯನ್ನೇಕೆ ಹೀಗೆಯೇ ಜಾರಿಸಿಕೊಂಡು ಬಂದು ಕೆಳಭಾಗದಲ್ಲಿ ಹಿಡಿದಿಟ್ಟುಕೊಳ್ಳಬಾರದು ? ಯೋಚನೆ, ಯೋಜನೆಯಾಯಿತು. ಯೋಜನೆ ಕಾರ್ಯರೂಪಕ್ಕಿಳಿಯಲು ಕನಿಷ್ಠ ಕೆಲವು ಲಕ್ಷಗಳನ್ನಾದರೂ ಸುರಿಯಬೇಕಿತ್ತು.
ಗೌಡರ ನೆರವಿಗೆ ಬಂದದ್ದು ಬ್ಯಾಂಕ್. ಸಾಲ ಸಿಕ್ಕದ್ದೇ ತಡ ಗುಡ್ಡ ಮೃದುವಾಗತೊಡಗಿತು. ಲ್ಯಾಂಡ್ ಶೇಪಿಂಗ್ ಕರಾರುವಕ್ಕಾಗಿ ಜಾರಿಯಾಗುತ್ತಿತ್ತು. ಇಡೀ ಜಮೀನನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ಮೇಲ್ಭಾಗ, ಮಧ್ಯಭಾಗದಲ್ಲಿ ಎರಡು ಒಡ್ಡುಗಳು, ಎರಡನೇ ಒಡ್ಡಿಗೆ ಹೊಂದಿಕೊಂಡಂತೆಯೇ ಕೆಳ ಭಾಗದಲ್ಲಿ ಸುಮಾರು ೬೦ ಅಡಿಯ ಬೃಹತ್ ಬಾವಿ. ಮೇಲಿಂದ ಕೆಳಗಿರುವಂತೆಯೇ, ಒಡ್ಡುಗಳ ಎರಡೂ ಪಕ್ಕದಲ್ಲೂ ಇಳಿಜಾರು ನಿರ್ಮಿಸಿ ಕಣಿವೆಯ ಮಾದರಿಗೆ ತರಬೇಕು. ಅಕ್ಕ ಪಕ್ಕ ಬೆಳೆ ಬೆಳೆಯಬೇಕು. ಯೋಜನೆ ಹೀಗಿತ್ತು. ೧೫ ಕಾರ್ಮಿಕರು, ಎರಡು ಜೆಸಿಬಿ ಸತತ ೯ ತಿಂಗಳು ಕೆಲಸ ಮಾಡಿದ ಮೇಲೆ ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಿತು.
೨೦೦೫ರ ಮಳೆ ಆರಂಭ. ನಾಡಗೌಡರ ನಿರೀಕ್ಷೆ ಹುಸಿಯಾಗಲಿಲ್ಲ. ೭೦ ಮೀಟರ್ ಅಗಲ, ೨೦೦ ಮೀಟರ್ ಉದ್ದ, ೪ ಮೀಟರ್ ಎತ್ತರದ ಮೊದಲನೇ ಒಡ್ಡು ಸದ್ದಿಲ್ಲದೇ ತುಂಬಿಕೊಳ್ಳಲಾರಂಭಿಸಿತ್ತು. ಜಮೀನಿನ ಯಾವ ಭಾಗದಲ್ಲೇ ಮಳೆ ಬೀಳಲಿ. ಅದು ಮೊದಲಿನ ಈ ಒಡ್ಡಿಗೇ ಇಳಿದು ಬರುವಂತೆ ಭೂಮಿಯನ್ನು ಎರಡೂ ಬದಿ ಇಳಿಜಾರು ಗೊಳಿಸಲಾಗಿದೆ. ಹೀಗಾಗಿ ಒಂದು ಹನಿಯೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಜುಲೈ ವೇಳೆಗೆಲ್ಲ ಮೊದಲನೇ ಒಡ್ಡು ತುಂಬಿ ಅಲ್ಲೊಂದು ಬೃಹತ್ ಸರೋವರದಂತೆ ಕಂಗೊಳಿಸುತ್ತಿತ್ತು. ಮುಂದಿನ ಹದಿನೈದೇ ದಿನದಲ್ಲಿ ಅದಕ್ಕೂ ಮಿಕ್ಕಿದ ನೀರು ಕೆಳಜಾರಿ ಎರಡನೇ ಒಡ್ಡೂ ತುಂಬಿಕೊಂಡಿತು. ಅಷ್ಟೇ ಕೆಳಗಿನ ಬಾವಿಯಲ್ಲಿ ನೀರಿಣುಕಲು ಹೆಚ್ಚು ದಿನ ಹಿಡಿಯಲಿಲ್ಲ. ಎಂಥ ನೀರಾವರಿ ಜಮೀನಿನಲ್ಲೂ ಬಾವಿಗಳು ಹಾಗೆ ತುಂಬಿರುವುದಿಲ್ಲ. ಅಷ್ಟೊಂದು ಸಮೃದ್ಧ, ಶುದ್ಧ ಸಟಿಕದಂಥ ನೀರು. ನಾಡಗೌಡರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಇಂದು ಬದುಗಳ ಎರಡೂ ಇಳಿಜಾರಿನ ೧೫ ಎಕರೆಯಲ್ಲಿ ಬೆಳೆಯುತ್ತಿರುವ ದ್ರಾಕ್ಷಿ ದೂರದೂರದ ದೇಶಗಳಿಗೆ ರಫ್ತಾಗುತ್ತಿದೆ. ಥಾಮ್ಸನ್ ಜತೆಗೆ ವೈನ್‌ಗೆ ಬೇಕಾದ ಗರಿಷ್ಠ ಗುಣಮಟ್ಟದ ದ್ರಾಕ್ಷಿಯ ಬೆಳೆ ಪ್ರಯೋಗವೂ ಸಫಲವಾಗಿದೆ. ಬಾವಿಯಲ್ಲಿ ಈಗಲೂ ೩೫ ಅಡಿ ನೀರಿದೆ. ಒಡ್ಡುಗಳಲ್ಲಿ ಶೇ. ೫೦ ರಷ್ಟು ನೀರು ನಿಂತಿದ್ದು, ನಿಧಾನವಾಗಿ ಇಂಗಿ ಬಾವಿಗಿಳಿಯುತ್ತಿದೆ. ‘ಈ ವರ್ಷ ಹೇಗೆ ಮಾಡಿದರೂ ಜಮೀನಿಗೆ ನೀರಿನ ಕೊರತೆಯಾಗುವುದಿಲ್ಲ. ಜತೆಗೆ ಕೃಷಿಯಲ್ಲೂ ನೀರಿನ ಮಿತ ಬಳಕೆಯ ಹಲವು ವಿಧಾನಗಳನ್ನು ಅಳವಡಿಸಿದ್ದೇವೆ. ಮೊದಲ ಬಂಡ್ ತುಂಬ ನೀರು ನಿಂತರೆ ೫ ಕೋಟಿ ಲೀಟರ್ ಸಂಗ್ರಹವಾದಂತಾಗುತ್ತದೆ. ಎರಡೂ ಬಂಡ್ ತುಂಬಿದರೆ ಇಡೀ ೪೦ ಎಕರೆಯಲ್ಲಿ ಬೆಳೆ ತೆಗೆಯುವುದಷ್ಟೇ ಅಲ್ಲ, ಭತ್ತವನ್ನೂ ಬೆಳೆಯಬಹುದಾದಷ್ಟು ನೀರಾಗುತ್ತದೆ’ ಎನ್ನುತ್ತಾರೆ ನಾಡಗೌಡರು.
‘ಈಗಾಗಲೇ ಒಂದು ಕೋಟಿ ಕೈಬಿಟ್ಟಿದೆ. ಅದರಲ್ಲಿ ೭೦ ಲಕ್ಷ ರೂ. ಸಾಲವಿದೆ. ಏನಿಲ್ಲವೆಂದರೂ ಇನ್ನೂ ಹತ್ತು ಲಕ್ಷ ಬೇಕಾಗಬಹುದು. ಆದರೆ, ನೀರೊಂದಿದ್ದರೆ ಬಂಗಾರವನ್ನೇ ಬೆಳೆಯ ರೂಪದಲ್ಲಿ ಕೊಡುವ ಈ ಭೂತಾಯಿಯ ಕೃಪೆಯಿದ್ದರೆ ಮಾಡಿದ ಸಾಲ ತೀರಿಸುವುದು ಒಂದೆರಡು ವರ್ಷಗಳ ಮಾತು. ಖಂಡಿತಾ ಪ್ರೀತಿಸಿ ದುಡಿಯುವ ಮಂದಿಗೆ ಆಕೆ ಮೋಸ ಮಾಡುವುದಿಲ್ಲ’ ಎಂಬ ವಿಶ್ವಾಸದ ನುಡಿ ನಾಡಗೌಡರ ಬಾಯಿಂದ ಹೊರಡುತ್ತದೆ.
ಬಹುಶಃ ಅಂದುಕೊಂಡದ್ದೆಲ್ಲವೂ ಯೋಜಿತ ರೀತಿಯಲ್ಲೇ ಮುಗಿದರೆ ಇನ್ನೆರಡು ಮಳೆಗಾಲದ ಹೊತ್ತಿಗೆ ಜಾಲಗೇರಿಯಲ್ಲೊಂದು ಪುಟ್ಟ ಮಲೆನಾಡೇ ಸೃಷ್ಟಿಯಾಗಿರುತ್ತದೆ. ಮಾತ್ರವಲ್ಲ ನಾಡಗೌಡರ ಸಾಮ್ರಾಜ್ಯದಲ್ಲಿನ ಸಮೃದ್ಧಿಯ ಫಲ ಮುಂದಿನ ಮೂರ್‍ನಾಲ್ಕು ಕಿ.ಮೀ.ವರೆಗಿನ ಜಮೀನಿಗೂ ಸಿಗುವುದರಲ್ಲಿ ಅನುಮಾನವೇ ಇಲ್ಲ. ಅಂಥ ದಿನಗಳಿಗಾಗಿ ಗೌಡರು ಕಾಯುತ್ತಿದ್ದಾರೆ, ಇಂಥ ಇನ್ನೊಂದು ಯೋಜನೆ ಅನುಷ್ಠಾನಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದ್ದಿರಬೇಕು ಗ್ರಾಮಸೇವಕ ಕುಂಬಾರರು.


‘ಲಾಸ್ಟ್’ಡ್ರಾಪ್: ನಾಡಗೌಡರು ಕಟ್ಟಿದ ಹಸಿರು ಹೊನ್ನಿನ ಸಾಮ್ರಾಜ್ಯದ ಕಥೆಯನ್ನು ಅವರ ಬಾಯಲ್ಲೇ ಕೇಳಬೇಕೆಂದಿದ್ದರೆ ೯೪೪೮೧೨೮೩೯೯, ನಿಮ್ಮ ಮೊಬೈಲ್‌ನಲ್ಲಿ ಈ ಹತ್ತು ಅಂಕಿಗಳನ್ನು ಒತ್ತಿ ಹಲೋ ಎಂದರಾಯಿತು.