Tuesday, November 17, 2009

ನೀರು ಗುಟುಕರಿಸುವ ಮುನ್ನ ತಿಳಿಯಿರಿ ಒಂದು ತೊಟಕು

ಮಣ್ಣು ಯಾರಿಗೆ ಗೊತ್ತಿಲ್ಲ ? ಹಾಗೆಯೇ ನೀರು, ಮಳೆ, ಮೋಡ, ಕಲ್ಲು ಇವೆಲ್ಲವೂ ಗೊತ್ತು. ಹಾಗಾದರೆ ಈಗ ಹೇಳಿ ಮಣ್ಣು ಅಂದರೇನು ? ಅಯ್ಯೋ...ಇದೊಳ್ಳೆ ಕತೆಯಾಯ್ತಲ್ಲಾ ? ಮಣ್ಣು ಅಂದರೆ ಮಣ್ಣು ಅನ್ನಬಹುದು. ಹಾಗಂದರೇನು ಅಂತ ಹೇಳುವುದು ಕಷ್ಟ. ಬೇಕಿದ್ದರೆ ಇದು ಅಂತ ತೋರಿಸಬಹುದಪ್ಪಾ....ಹಾಗೆಯೇ ಇತರ ವಿಷಯಗಳ ಬಗೆಗೂ ಸಹ. ಅಂಥ ನೀರು, ಮಣ್ಣು ಇತ್ಯಾದಿಗಳಲ್ಲಿ ಹಲವು ಬಗೆಗಳೂ ಉಂಟು. ಬಹುತೇಕ ಸಂದರ್ಭದಲ್ಲಿ ನಮಗೆ ಈ ವ್ಯತ್ಯಾಸಗಳು ಗೊತ್ತೇ ಆಗಿರುವುದಿಲ್ಲ. ಆದರೆ ನೀರಿನ ಬಗೆಗೆ ತಿಳಿದುಕೊಳ್ಳುವ ಮುನ್ನ ಇಂಥ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ಬೇಕಿದ್ದರೆ ನೋಡಿ, ಜೀವನ ಎಂಬುದರ ಬಗ್ಗೆ ತಿಳಿಯುವಾಗ ಬದುಕಿಗೆ ಸಂಬಂಸಿ ಹಲವು ಸಂಗತಿಗಳನ್ನು ಅರಿಯಲೇಬೇಕಾಗುತ್ತದೆ. ಹಾಗೆಯೇ ನೀರು. ಅದು ಜೀವನದ ಮೂಲದ್ರವ್ಯ. ಜೀವನದ ಚೈತನ್ಯಾಧಾರ. ಹೀಗಾಗಿ ಜೀವನದ ಅರಿವಿಗೆ ನೀರಿನ, ಅದಕ್ಕೆ ಸಂಬಂಸಿದ ಹಲವು ಸಂಗತಿಗಳನ್ನು ನಾವು ಅರಿತುಕೊಳ್ಳುವುದು ಪ್ರಾಥಮಿಕ ಅಗತ್ಯವಾಗುವುದಿಲ್ಲವೇ ?


ನೀರಿನ ಬಗ್ಗೆ ಮಾತನಾಡುವಾಗ, ಅದರ ಕುರಿತ ಬರಹಗಳನ್ನು ಓದುವಾಗ, ತಜ್ಞರ ಮಾತುಗಳನ್ನು ಆಲಿಸುವಾಗ-ಹಲವು ಸಂದರ್ಭಗಳಲ್ಲಿ ಅನೇಕ ಪದಗಳು ಬಳಕೆಯಾಗುತ್ತಲೇ ಇರುತ್ತವೆ. ಅನೇಕ ಬಾರಿ ಅವುಗಳ ಸರಿಯಾದ ಅರ್ಥವೇ ನಮಗೆ ತಿಳಿದಿರುವುದಿಲ್ಲ. ಆದರೆ ಇವುಗಳಿಲ್ಲದೆ ನೀರಿನ ವಿಚಾರ ಮಾತನಾಡಲೂ ಆಗುವುದಿಲ್ಲ. ನೀರಿನ ಬಗೆಗೆ ತಿಳಿದುಕೊಳ್ಳುವ ಮೊದಲು ಅಂಥ ಹಲವು ನಿತ್ಯಬಳಕೆಯ ಹಾಗೂ ಪಾರಿಭಾಷಿಕ ಪದಗಳ ಕುರಿತು ಒಂದಷ್ಟು ಹೇಳುವ ಪ್ರಯತ್ನ ಈ ವಾರದ ಅಂಕಣದಲ್ಲಿದೆ.


ಮೇಲ್ಮಣ್ಣು: ಹೆಸರೇ ಸೂಚಿಸುತ್ತದೆ. ಮೇಲೆ ಇರುವ ಮಣ್ಣು. ಆದರೆ ಎಷ್ಟು ಮೇಲೆ ಎಂಬುದು ಪ್ರಶ್ನೆ. ಮಣ್ಣಿನ ಮೇಲು ಬದಿಯ ೧.೫ ಮೀಟರ್‌ನ ಪದರ. ಇದು ಹಳ್ಳಿ, ಕೃಷಿ ಜಮೀನುಗಳಲ್ಲಿ ಸರಿ. ಆದರೆ ನಗರಗಳ ವಿಚಾರಕ್ಕೆ ಬಂದಾಗ ಸರಿಹೊಂದದು. ನಗರಗಳಲ್ಲಿ ಕಟ್ಟಡ ನಿರ್ಮಾಣದ ಸಂದರ್ಭ ಸುತ್ತಮುತ್ತಲಿನ ಜಮೀನಿನ ಮೇಲ್ಮೈ ಮಣ್ಣು ಅವುಗಳ ಅವಶೇಷಗಳಿಂದ ತುಂಬಿರುತ್ತದೆ. ಹೀಗಾಗಿ ಇಲ್ಲಿ ಮೇಲ್ಮಣ್ಣನ್ನು ಗುರುತಿಸುವುದು ಕಷ್ಟ.


ಕೆಳ ಮಣ್ಣು: ನೆಲಮಟ್ಟಕ್ಕಿಂತ ೧.೫ ಮೀಟರ್ ನಂತರದ ಮಣ್ಣು. ಅದೇನೋ ಸರಿ ಇದನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮರಳು, ಜೇಡಿ, ಆವೆ, ಸಣ್ಣಕಲ್ಲುಗಳು ಅಥವಾ ಬಂಡೆ ಇತ್ಯಾದಿಗಳ ಶೇಕಡಾವಾರು ಪ್ರಮಾಣಕ್ಕನುಸರಿಸಿ ಕೆಳಮಣ್ಣಿನ ರಚನೆ, ವೈವಿಧ್ಯ, ಗುಣವಿಂಗಡಣೆ ಸಾಧ್ಯ. ಸಾಮಾನ್ಯವಾಗಿ ಸ್ಥಳದಲ್ಲಿ ಕಟ್ಟಡ ನಿರ್ಮಿಸುವ ಮುನ್ನ, ಯಾವ ಬಗೆಯ ತಳಪಾಯ ಹಾಕಬೇಕು ಎಂಬುದನ್ನು ನಿರ್ಧರಿಸಲು ಈ ಪರೀಕ್ಷೆಯನ್ನು ೭ರಿಂದ ೧೦ ಮೀಟರ್ ಕೆಳಗಿನ ಮಣ್ಣಿನವರೆಗೂ ಮಾಡಲಾಗುತ್ತದೆ.


ಮೇಲ್ಮೈ ಜಲ: ಕೆಳಮಣ್ಣಿನಲ್ಲಿ ಉಂಟಾಗುವ ರಂಧ್ರಗಳಲ್ಲಿ ಶೇಖರವಾಗುವ, ಇನ್ನಷ್ಟು ತಳದವರೆಗೆ ಇಳಿಯಬಲ್ಲ, ಮೇಲ್ಮೈ ಹಂತದವರೆಗೆ ಒಸರುವ ನೀರು. ಇದನ್ನು ಬಾವಿ ಅಥವಾ ಬೋರ್‌ವೆಲ್‌ಗಳ ಮೂಲಕ ಸಂಗ್ರಹಿಸಬಹುದು.


ಜಲಜಶಿಲೆ: ಮೇಲ್ಮೈ ಮಣ್ಣಿಗಿಂತ ಕೆಳಗಿರುವ, ನೀರನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಹಾಗೂ ನೀರಿನ ಸಂಚಾರಕ್ಕೆ ಹಾದಿ ಮಾಡಿಕೊಡುವ, ಹಾಗಾಗಿಯೇ ನೀರಿನ ಮೂಲ ಎನಿಸಿಕೊಂಡಿರುವ ಮಣ್ಣು ಅಥವಾ ಬಂಡೆಯ ಪದರ.


ಮೇಲ್ಮೈ ಜಲ ಮಟ್ಟ: ಕೆಳ ಮಣ್ಣಿನ ಮೇಲುಭಾಗದಲ್ಲಿರುವ ನೀರಿನ ಮಟ್ಟ. ಇದು ಒಂದು ಪ್ರದೇಶದಲ್ಲಿ ಎಲ್ಲ ಕಡೆಗೂ ಸಮಾನವಾಗಿರಬೇಕೆಂದೇನಿಲ್ಲ. ಕೆಳಮಣ್ಣಿನ ಗುಣಧರ್ಮ ಹಾಗೂ ನೀರಿನ ಬಳಕೆಯ ಪ್ರಮಾಣಕ್ಕನುಸರಿಸಿ ಇದು ಏರುಪೇರಾಗಬಹುದು.


ಬಾವಿ: ಮೇಲ್ಮೈ ಜಲ ಮಟ್ಟ ದೊರೆಯುವವರೆಗೆ ತೋಡಲಾದ ಗುಂಡಿ. ಮರಳು ಅಥವಾ ಜೇಡಿ ಮಣ್ಣಿನಲ್ಲಾದರೆ, ತೋಡಿದ ಬಾವಿಯ ಬದಿ ಕುಸಿಯದಂತೆ ಇಟ್ಟಿಗೆ ಅಥವಾ ಕಾಂಕ್ರೀಟ್‌ನ ರಿಂಗ್ ನಿರ್ಮಿಸುವುದು ಅಗತ್ಯ. ಕಲ್ಲು ಬಂಡೆ ಇದ್ದರೆ ಅಂಥ ರಿಂಗ್ ಅನಗತ್ಯ. ಸಾಮಾನ್ಯವಾಗಿ ಈ ಗುಂಡಿ ವೃತ್ತಾಕಾರದಲ್ಲಿದ್ದು, ೩ರಿಂದ ೧೨ ಅಡಿ ತ್ರಿಜ್ಯ ಹೊಂದಿರುತ್ತದೆ ಹಾಗೂ ೪೫ ಅಡಿಗಿಂತ ಆಳವಾಗಿರುವುದಿಲ್ಲ.


ಸಾಮಾನ್ಯವಾಗಿ, ಬಾವಿಯ ನೀರಿನ ಗುಣಮಟ್ಟ ಬೋರ್‌ವೆಲ್ ನೀರಿಗಿಂತ ಉತ್ತಮವಾಗಿರುತ್ತದೆ. ಆದರೆ ಕೆಲವೆಡೆ, ಬಂಡೆಗಳಿರುವ ಪ್ರದೇಶದಲ್ಲಿ ಬೋರ್‌ವೆಲ್ ನೀರು ಬಾವಿಯದಕ್ಕಿಂತ ಚೆನ್ನಾಗಿರುತ್ತದೆ. ಇದಕ್ಕೆ ‘ತೆರೆದ ಬಾವಿ’ ಅಂತ ಯಾಕೆನ್ನುತ್ತಾರೆ ಅಂದರೆ, ಪಂಪ್ ತಂತ್ರಜ್ಞಾನ ಆವಿಷ್ಕಾರವಾಗುವ ಮೊದಲು ರಾಟೆ-ಹಗ್ಗ ಬಳಸಿ ಬಾವಿಯಿಂದ ನೀರೆತ್ತುತ್ತಿದ್ದರು. ಕೆಲವೆಡೆ ಬಾವಿಯ ಬದಿಯಲ್ಲಿ ಸಣ್ಣ ಮೆಟ್ಟಲು ಅಳವಡಿಸಿ ಕೆಳಗಿಳಿದು ನೀರು ಹೊರುವುದೂ ಇತ್ತು. ಇಂದು ಎಲ್ಲ ಕಡೆ ಪಂಪ್ ಇರುವುದರಿಂದ, ಬಾವಿಗಳನ್ನು ತೆರೆದೇ ಇರಬೇಕಾದ ಅಗತ್ಯವೇನೂ ಇಲ್ಲ. ಇಂದು ಮನುಷ್ಯರ ಹಾಗೂ ವಾಹನಗಳ ಓಡಾಟಕ್ಕೆ ಭಂಗ ಬಾರದಂತೆ ಅವುಗಳ ಮೇಲೆ ಗಟ್ಟಿಯಾದ ಕವರ್ ಹೊದಿಸಬಹುದು.


ಕೊಳವೆ ಬಾವಿ: ಸಾಮಾನ್ಯವಾಗಿ ಬಾವಿಗಳಿಗಿಂತ ಹೆಚ್ಚು ಆಳಕ್ಕೆ ಮಣ್ಣಿನಲ್ಲಿ ಕೊರೆದಿರುವ, ೫ರಿಂದ ೧೦ ಇಂಚು ತ್ರಿಜ್ಯವಿರುವ ವೃತ್ತಾ ಕಾರದ ರಂಧ್ರ. ಇದು ಮಣ್ಣಿನ ನಾನಾ ಪದರಗಳಿಂದ ನೀರನ್ನು ಸಂಗ್ರಹಿಸಬಲ್ಲದು. ಸಾಮಾನ್ಯ ಮಣ್ಣಿನಲ್ಲಿ ಇವನ್ನು ರಿಗ್ ಬಳಸಿ, ಬಂಡೆಮಣ್ಣಿನಲ್ಲಿ ನ್ಯೂಮಾಟಿಕ್ ರಿಗ್ ಬಳಸಿ ಕೊರೆಯಲಾಗುತ್ತದೆ. ರಂಧ್ರದೊಳಗೆ ಮಣ್ಣು ಕುಸಿಯದಂತೆ ಪಿವಿಸಿ ಕೇಸಿಂಗ್ ಪೈಪ್ ಇಳಿಸಲಾಗುತ್ತದೆ. ಬಂಡೆಮಣ್ಣಿನಲ್ಲಿ ಕೇಸಿಂಗ್ ಅಗತ್ಯವಿಲ್ಲ. ನಾನಾ ಪದರಗಳಿಗೆ ತಕ್ಕಂತೆ ಈ ಕೇಸಿಂಗ್ ಪೈಪಿನಲ್ಲಿ ತೂತುಗಳಿರುತ್ತವೆ. ಹಿಂದೆ ಕಬ್ಬಿಣದ ಕೇಸಿಂಗ್ ಪೈಪ್‌ಗಳನ್ನು ಬಳಸಲಾಗುತ್ತಿತ್ತು.


ಟ್ಯೂಬ್‌ವೆಲ್: ಇದು ಕೂಡ ಬೋರ್‌ವೆಲ್. ಆದರೆ ಹೆಚ್ಚು ಆಳವಾಗಿರುವುದಿಲ್ಲ.


ಬಳಕೆ ಬಾವಿ/ಬಳಕೆ ಬೋರ್‌ವೆಲ್: ನೀರನ್ನು ಬಳಕೆಗೆ ಪಡೆಯಲಾಗುತ್ತಿರುವ ಬಾವಿ ಅಥವಾ ಕೊಳವೆಬಾವಿ.


ಮರುಪೂರಣ ಬಾವಿ: ಜಲ ಮಟ್ಟ ಬಾವಿಯ ತಳಕ್ಕಿಂತಲೂ ಇಳಿದುಹೋಗಿರುವುದರಿಂದ ನೀರು ಖಾಲಿಯಾಗಿ, ಬಳಕೆಗೆ ಉಪಯೋಗವಾಗದ ಬಾವಿ. ಹೀಗಾಗಿ ಇದರಲ್ಲಿ ಮಳೆ ನೀರು ಮಾತ್ರ ನಿಲ್ಲುತ್ತದೆ. ಕೆಲ ಕಾಲಾನಂತರ, ಜಲಮಟ್ಟ ಏರಿದಾಗ ಈ ಬಾವಿ ಬಳಕೆಯೋಗ್ಯವಾಗಬಹುದು.


ಇಂಗು ಗುಂಡಿ: ಮಳೆ ನೀರನ್ನು ಇಂಗಿಸಲು ಅನುಕೂಲ ಹಾಗೂ ಅಗತ್ಯಕ್ಕೆ ತಕ್ಕಷ್ಟು ಆಳಕ್ಕೆ ಹಾಗೂ ಅಗಲಕ್ಕೆ ಮಣ್ಣಿನಲ್ಲಿ ಕೊರೆದಿರುವ ಗುಂಡಿ. ಮಳೆ ನೀರು ಇಲ್ಲಿ ಸಂಗ್ರಹಗೊಂಡು, ನಿಂತು, ಇಂಗಿ ಜಲ ಮಟ್ಟವನ್ನು ತಲುಪುತ್ತದೆ. ಬಾವಿಗಿದ್ದಂತೆ ಇದಕ್ಕೂ ಇಟ್ಟಿಗೆ ಅಥವಾ ಕಾಂಕ್ರೀಟಿನ ಲೈನಿಂಗ್ ಇರಬಹುದು. ಅಗತ್ಯಬಿದ್ದಾಗ ಇದನ್ನೇ ಆಳಕ್ಕೆ ತೋಡಿ, ಬಾವಿಯಂತೆಯೂ ಬಳಸಲು ಸಾಧ್ಯ.


ಮರುಪೂರಣ ಕೊಳವೆ ಬಾವಿ: ಸಮರ್ಪಕವಾಗಿ ನಿರ್ಮಿಸಲಾದ ಕೊಳವೆ ಬಾವಿ- ಇದರ ಮುಖ್ಯ ಉದ್ದೇಶ ಕೆಳಮಣ್ಣಿಗೆ ಮಳೆ ನೀರನ್ನು ತಲುಪಿಸುವುದು. ಮರುಪೂರಣ ಬಾವಿಯಂತೆ ಇದು ಕೂಡ ಜಲ ಮಟ್ಟವನ್ನು ಮುಟ್ಟಿರಬಹುದು ಅಥವಾ, ಅದಕ್ಕೆ ನೀರೂಡಿಸಲು ಅಗತ್ಯವಾದ ಪದರದ ತನಕ ಇರಬಹುದು. ಕೆಲ ಕಾಲದ ಬಳಿಕ, ಜಲಮಟ್ಟವು ಇದರ ತಳಭಾಗವನ್ನು ದಾಟಿ ಮೇಲೆ ಬಂದರೆ ಆಗ ಇದನ್ನು ಬಳಕೆಯೋಗ್ಯವಾಗಿ ಮಾಡಬಹುದು.


ಇಂಗು ರಂಧ್ರ: ನೀರನ್ನು ಹೀರಿಕೊಳ್ಳಲು ಅಗತ್ಯವಾದಷ್ಟು ಆಳಕ್ಕೆ ಮಣ್ಣಿನಲ್ಲಿ ಕೊರೆಯಲಾದ ೫ರಿಂದ ೧೦ ಇಂಚು ತ್ರಿಜ್ಯವುಳ್ಳ ರಂಧ್ರ. ಚಿಕ್ಕ ಕಲ್ಲುಗಳು ಹಾಗೂ ಇದ್ದಲನ್ನು ಇದರಲ್ಲಿ ತುಂಬಿಸಲಾಗುತ್ತದೆ. ಇದರೊಳಗೆ ನೀರು ಕಲ್ಲು ಹಾಗೂ ಇದ್ದಿಲಿನ ನಡುವೆ ಹರಿದು ಇಂಗುತ್ತದೆ. ಕಲ್ಲುಗಳ ಬದಲು ರಂಧ್ರಗಳುಳ್ಳ ಪಿವಿಸಿ ಪೈಪನ್ನೂ ಬಳಸಬಹುದು. ರಂಧ್ರದ ಬಾಯಿ ೨-೩ ಅಡಿಯಷ್ಟು ಅಗಲವಿದ್ದಾಗ, ಶುದ್ಧ ಮರಳು ಹಾಕಿ ಮುಚ್ಚಬಹುದು.


ರೋಗ ಜೀವಾಣು: ಕೆಲ ನಮೂನೆಯ ಬ್ಯಾಕ್ಟೀರಿಯಾಗಳು ಹಾಗೂ ವೈರಸ್‌ಗಳು ಕುಡಿಯುವ ನೀರು ಶುದ್ಧವಾಗಿಲ್ಲದಿದ್ದಾಗ ಅವುಗಳ ಮೂಲಕ ಮಾನವನ ಜೀರ್ಣಾಂಗ ವ್ಯವಸ್ಥೆಯೊಳಗೆ ಪ್ರವೇಶಿಸಿ ರೋಗವನ್ನುಂಟುಮಾಡಬಲ್ಲವು. ಉದಾಹರಣೆಗೆ: ಕಾಲರಾ, ವಾಂತಿ ಭೇದಿ, ಟೈಫಾಯಿಡ್, ಜಾಂಡೀಸ್ ಇತ್ಯಾದಿ.


ಸೀವೇಜ್ (ಕಪ್ಪು ನೀರು): ನಮ್ಮ ಶೌಚಾಲಯಗಳಿಂದ ಕಲ್ಮಶಸಹಿತ ಹರಿಯುವ ನೀರು.


ಸಲ್ಲೇಜ್ (ಬೂದು ನೀರು): ನಾವು ಸ್ನಾನಕ್ಕೆ, ಬಟ್ಟೆ-ಪಾತ್ರೆ-ವಾಹನ- ನೆಲ ತೊಳೆಯಲು ಬಳಸಿದ ನೀರು. ಈ ನೀರು, ಸೀವೇಜ್‌ನಷ್ಟು ಹಾನಿಕಾರಕ ರೋಗ ಜೀವಾಣುಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ಇದನ್ನು ಸಂಸ್ಕರಿಸುವುದು ಸುಲಭ.


ಸೀವರೇಜ್: ಇದು ಬಳಸಿದ ನೀರನ್ನು (ಸಾಮಾನ್ಯವಾಗಿ ಸೀವೇಜ್) ಸಂಸ್ಕರಣಾ ಘಟಕಕ್ಕೆ ಕೊಂಡೊಯ್ಯುವ, ಮನೆ-ರಸ್ತೆ-ಬೀದಿಯಲ್ಲಿ ಹಬ್ಬಿರುವ ಭೂಗತ ಪೈಪ್‌ಗಳ ಜಾಲ. ಇದು ಪಂಪಿಂಗ್ ಸ್ಟೇಶನ್‌ಗೆ, ಅಲ್ಲಿಂದ ಸೀವೇಜ್ ಸಂಸ್ಕರಣಾ ಘಟಕಕ್ಕೆ ಹರಿದು ನಂತರ ಸುರಕ್ಷಿತವಾಗಿ ಹರಿಯಬಿಡಲಾಗುತ್ತದೆ. ಇಂದು ಸಲ್ಲೇಜ್ ಕೂಡ ಸೀವೇಜ್ ಜತೆಗೆ ಸೇರಿಕೊಳ್ಳುತ್ತದೆ.


ಸವಳು ನೀರು: ಕುಡಿಯಲು ಬೇಕಾದ ಗುಣಮಟ್ಟಕ್ಕಿಂತ ಹೆಚ್ಚು ಪ್ರಮಾಣದ ಲವಣಾಂಶ ಕರಗಿರುವ ನೀರು. ತುಸು ಶುದ್ಧೀಕರಿಸಿದರೆ ಇದನ್ನು ಕುಡಿಯಲು, ಅಡುಗೆ ಮಾಡಲು ಬಳಸಬಹುದು.


ಸಲೈನ್ ವಾಟರ್: ಇದು ಸವಳು ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಲವಣಾಂಶ ಬೆರೆತಿರುವ ನೀರು. ಇದನ್ನು ಕುಡಿಯುವುದು, ಬಟ್ಟೆ ತೊಳೆಯುವುದು, ಅಡುಗೆ ಮಾಡುವುದು ಸಾಧ್ಯವಿಲ್ಲ.

‘ಲಾಸ್ಟ್’ಡ್ರಾಪ್: ನೀರು ಅಷ್ಟು ಸುಲಭದಲ್ಲಿ ಅರ್ಥವಾಗುವ ಸಂಗತಿಯಲ್ಲ. ಹೇಳಿ ಕೇಳಿ ಅದು ನೀರು. ಈವರೆಗೆ ಅದರ ಆಳ-ವಿಸ್ತಾರ ಗಳನ್ನು ಪೂರ್ತಿ ಅರಿತವರಿಲ್ಲ. ಒಂದಷ್ಟು ಹನಿಗಳನ್ನು ಗುಟುಕರಿಸಬಹುದಷ್ಟೇ.

ಕುಡಿಯೋ ನೀರಿಗಿನ್ನು ಕಾಸು ಕೊಡೋದು ಅನಿವಾರ್ಯ

ಆಂದ್ರ ಪ್ರದೇಶದ ಹಳ್ಳಿ ಜನತೆ ಇನ್ನು ಮುಂದೆ ಬಾಯಾರಿದಾಗ ಎಲ್ಲಿ ಬೇಕಾದರೂ ಪುಗಸಟ್ಟೆ ನೀರು ಕುಡಿಯುವಂತಿಲ್ಲ. ಲೀಟರ್‌ಗೆ ೧೦ ಪೈಸೆಯಂತೆ ಪಾವತಿಸಬೇಕು. ಅದೇನು ಮಹಾ, ನಾವು ಲೀಟರ್‌ಗೆ ೧೦ ರೂಪಾಯಿ ಕೊಟ್ಟು ಬಿಸ್ಲೇರಿ ನೀರು ಕುಡಿಯುತ್ತಿಲ್ಲವೆ ? ಎಂದು ಕೆಲವರು ಕೇಳಬಹುದು. ಅದರೆ ಹಾಗಲ್ಲ ಇದು. ಖಾಸಗಿ ಕಂಪನಿಗಳು ಗ್ರಾಮೀಣ ಜಲಮೂಲಗಳಿಂದಲೇ ಎತ್ತಿದ ಕಚ್ಚಾ ನೀರನ್ನು ಶುದ್ಧೀಕರಿಸಿ(?) ಕ್ಯಾನುಗಳಲ್ಲಿ ತುಂಬಿ ಜನರಿಗೆ ಮಾರುತ್ತವೆ. ಈಗಾಗಲೇ ಇಂಥ ಐದು ಕಂಪೆನಿಗಳ ಹೆಸರನ್ನು ಆಂಧ್ರ ಸರಕಾರ ಪಟ್ಟಿ ಮಾಡಿದೆ. ತಮ್ಮೂರಿನ ಜಲವನ್ನೇ ೨೦ ಲೀಟರ್‌ನ ಕ್ಯಾನ್‌ಗೆ ೧೦ ರೂಪಾಯಿಯಂತೆ ತೆತ್ತು ಕೊಂಡುಕೊಳ್ಳುವ ಹಣೆಬರಹ ಜನರದು.

ದೇಶದ ನಗರಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ಸಹಜವಾಗಿ ಅಲ್ಲಿನ ನೀರಿನ ಬೇಡಿಕೆ ಸಹ. ಇದನ್ನು ಪೂರೈಸಲು ನಾವು ಅದೆಷ್ಟೇ ಖರ್ಚಾಗಲಿ, ಅದೆಷ್ಟು ದೂರದಿಂದಲೇ ಆಗಲಿ ನೀರು ತಂದೇ ತರುತ್ತೇವೆಂಬ ಪಣ ತೊಟ್ಟು ಬಿಟ್ಟಿದ್ದೇವೆ. ಹೀಗಾಗಿಯೇ ಬೆಂಗಳೂರಿಗೆ ನಾವು ಸುಮಾರು ೧೦೦ ಕಿ.ಮೀ.ಗಿಂತಲೂ ದೂರದಿಂದ ಕಾವೇರಿಯನ್ನು ಎಳೆದು ತರುತ್ತಿದ್ದೇವೆ. ದಿಲ್ಲಿಗೆ ನೀರು ಪೂರೈಕೆಯಾಗುತ್ತಿರುವುದು ೩೦೦ ಕಿ.ಮೀ. ದೂರದ, ಹಿಮಾಲಯದ ತಪ್ಪಲಿನ ತೆಹ್ರಿ ಅಣೆಕಟ್ಟೆಯಿಂದ. ಹೈದರಾಬಾದ್‌ಗೆ ೧೦೫ ಕಿ.ಮೀ. ದೂರವಿರುವ, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ನಾಗಾರ್ಜುನ ಸಾಗರ ದಿಂದ. ಉದಯಪುರಕ್ಕೆ ಜೈಸಮಂದ್ ಸರೋವರದಿಂದ ಪೂರೈಸಲಾಗುತ್ತಿತ್ತಾದರೂ ಅದೀಗ ಬತ್ತಿಹೋಗಿದೆ.


ವಿಚಿತ್ರವೆಂದರೆ ನಗರ ಪ್ರದೇಶದ ಬಡವರ್ಗದವರು ಕಡಿಮೆ ನೀರನ್ನು ಪಡೆಯುತ್ತಿದ್ದರೂ ಅದಕ್ಕಾಗಿ ಹೆಚ್ಚಿನ ಹಣ ತೆರುತ್ತಿದ್ದಾರೆ. ಅತಿ ಹೆಚ್ಚು ಬಳಕೆ ಮಾಡುತ್ತಿರುವ ಶ್ರೀಮಂತ ವರ್ಗದ ಮಂದಿ ಅತಿ ಕಡಿಮೆ ಬೆಲೆಯಲ್ಲಿ ನೀರು ಪಡೆಯುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳ ಪೈಕಿ ಶೇ. ೨೦ರಷ್ಟಿರುವ ಶ್ರೀಮಂತರು ನೀರಿನ ಶುಲ್ಕದಲ್ಲಿ ಹೆಚ್ಚಿನ ಸಬ್ಸಿಡಿ (ಶೇ. ೩೦ರಷ್ಟು )ಯ ಫಲಾನುಭವಿಗಳು. ಆದರೆ ಶೇ. ೫೦ರಷ್ಟಿರುವ ಬಡವರ್ಗದ ಮಂದಿಗೆ ನೀರಿನ ಶುಲ್ಕದಲ್ಲಿ ಶೇ. ೧೦ರಷ್ಟು ಮಾತ್ರ ಸಹಾಯಧನ ದೊರೆಯುತ್ತಿದೆ.
ಹಣವಂತರನ್ನೇ ಮಾನದಂಡವಾಗಿಟ್ಟುಕೊಂಡು ಸಂಪನ್ಮೂಲ ಹಂಚಿಕೆ ಮಾಡುವ ನಮ್ಮ ಪ್ರವೃತ್ತಿ ಖಂಡಿತಾ ಅಪಾಯಕಾರಿ. ನೀವು ಬೇಕಿದ್ದರೆ ನೋಡಿ, ಹಣಕೊಟ್ಟರೆ ಎಷ್ಟು ಬೇಕಾದರೂ ನೀರು ಬಳಸಬಹುದು, ಅದಿಲ್ಲದಿದ್ದರೆ ನೀರು ಸಿಗದು ಎಂಬ ಸ್ಥಿತಿ ನಗರಗಳಲ್ಲಿದೆ. ನಮ್ಮ ಇಂಥ ಸಂಪನ್ಮೂಲ ಹಂಚಿಕೆ ನೀತಿ ಕೂಡ ರಾಜತಾಂತ್ರಿಕ ಹುನ್ನಾರದ ಭಾಗವೇ. ಅಮೆರಿಕ ಅದರ ಸೂತ್ರಧಾರ. ಹೀಗಾಗಿ, ವಿಶ್ವಬ್ಯಾಂಕ್, ವಿಶ್ವವ್ಯಾಪಾರ ಸಂಸ್ಥೆಗಳಂಥ ಏಜೆಂಟರ ಮೂಲಕ ಸಾಲ ಹಂಚುವ ಅದು ಸಾಲ ಪಡೆದ ದೇಶಗಳನ್ನು ಜಾಗತೀಕರಣದ ‘ತದ್ರೂಪಿ ತಯಾರಿಕಾ ಉಪಕರಣ’ವಾಗಿ ಮಾರ್ಪಡಿಸುತ್ತದೆ. ಇಂಥ ತದ್ರೂಪಿ ವೇದಿಕೆಯೇ ನೀರಿನ ಖಾಸಗೀಕರಣ. ಮತ್ತೆ ಇವೆಲ್ಲವೂ ನಗರ ಕೇಂದ್ರಿತ.


ಒಂದು ನಿಮಿಷ ಯೋಚಿಸಿ. ನಮ್ಮ ಗ್ರಾಮೀಣ ಪ್ರದೇಶದ, ರೈತ ಸಮುದಾಯದ ನೀರಿನ ಬಳಕೆ ಪ್ರಮಾಣದಲ್ಲಿ ಇನ್ನೂ ಹೇಳಿಕೊಳ್ಳುವ ಯಾವುದೇ ಬದಲಾವಣೆಗಳೂ ಆಗಿಲ್ಲ. ಬದಲಾದದ್ದೆಂದರೆ ಅವರ ನೀರಿನ ಬವಣೆಯಲ್ಲಿ ಮಾತ್ರ. ಹಾಗೆಂದು ಅದು ತಪ್ಪಿದೆ ಎಂದಲ್ಲ. ಅದರ ಸ್ವರೂಪ ಬದಲಾಗಿದೆ. ಇದಕ್ಕೊಂದು ತಾಜಾ ಉದಾಹರಣೆಯೆಂದರೆ ಆಂಧ್ರಪ್ರದೇಶದ ಈ ಬೆಳವಣಿಗೆ. ಇದಕ್ಕೆ ಕಾರಣ ಅಲ್ಲಿನ ಗ್ರಾಮೀಣ ಜಲಮೂಲಗಳು ಸ್ವಚ್ಛವಾಗಿಲ್ಲದಿರುವುದು. ಹೆಚ್ಚಿನ ಕಡೆ ಜಲಮೂಲಗಳೇ ರೋಗರುಜಿನ, ಸಾಂಕ್ರಾಮಿಕಗಳ ತವರಾಗಿವೆ. ಶೇ.೬೦ ಭಾಗ ಗ್ರಾಮೀಣ ಜನತೆಗೆ ಪ್ರತಿದಿನ ಸ್ವಚ್ಛ ಕುಡಿಯುವ ನೀರು ದೊರೆಯುವುದೇ ಕಷ್ಟವಾಗಿದೆಯಂತೆ.


ಈಗ ಇಲ್ಲಿನ ಹಳ್ಳಿಗರ ಪರಿಸ್ಥಿತಿ ಹೇಗಿದೆ ನೋಡಿ: ಸಿಗುವ ಅತ್ಯಲ್ಪ ನೀರನ್ನು ನಿತ್ಯಕಾರ್‍ಯಗಳಿಗೆ ಉಪಯೋಗಿಸಬೇಕು. ಅದನ್ನೇ ಕುಡಿಯಬೇಕು. ಹಳ್ಳಿಯಲ್ಲಿ ಜಲಮೂಲ ಇಲ್ಲವಾದರೆ ಖಾಸಗಿಯವರು ಸರಬರಾಜು ಮಾಡುವ ನೀರನ್ನು ೨೦ ಲೀಟರ್‌ಗೆ ೧೦ ರೂ. ತೆತ್ತು ಕೊಂಡುಕೊಳ್ಳಬೇಕು. ಇದು ಕೂಡ ಶುದ್ಧವಾಗಿರುತ್ತದೆ ಎಂಬ ಭರವಸೆಯೇನಿಲ್ಲ. ಇದಕ್ಕಿಂತ ಹೊಸ ಯೋಜನೆ ಅನುಕೂಲಕರವಲ್ಲವೆ ? ಎಂದು ಸರಕಾರಿ ಅಕಾರಿಗಳು ಪ್ರಶ್ನಿಸುತ್ತಾರೆ. ಇದು ನಮ್ಮ ಉತ್ತರ ಕರ್ನಾಟಕದ ಹಳ್ಳಿಗರ ಪರಿಸ್ಥಿತಿಯಂತೆಯೇ ಕಾಣಿಸುತ್ತದೆ.


ಮೇಲ್ನೋಟಕ್ಕೆ ಈ ಯೋಜನೆ ಆಕರ್ಷಕವಾಗಿಯೇ ಇದೆ. ೨೦ ಲೀಟರ್ ಶುದ್ಧ ನೀರನ್ನು ೨ ರೂ.ಗೆ ಜನರಿಗೆ ನೀಡಲಾಗುತ್ತದೆ. ಪರಿಶಿಷ್ಟ ಜನಾಂಗದವರಿಗೆ ಇದರರ್ಧ ಬೆಲೆಗೆ. ಕೊಳಕು ನೀರಿನಿಂದ ಉಂಟಾಗುವ ತೊಂದರೆ ಇನ್ನಿಲ್ಲ.
ಆದರೆ ಯೋಜನೆಯ ಬಗ್ಗೆ ಅನುಮಾನದ ಅಲೆ ಎದ್ದಿದೆ. ಯೋಜನೆ ಜಾರಿಗೆ ಮುನ್ನ ಗ್ರಾಮ ಪಂಚಾಯತು, ನೀರಾವರಿ ತಜ್ಞರು, ನಾಗರಿಕ ಸಂಘಟನೆಗಳ ಜತೆ ಸಮಾಲೋಚಿಸಿಲ್ಲ. ಒಪ್ಪಂದ ಗ್ರಾಮ ಪಂಚಾಯತು ಹಾಗೂ ಖಾಸಗಿ ಕಂಪನಿಯ ನಡುವೆ ನಡೆಯಬೇಕು. ಇಲ್ಲಿ ಹಾಗಾಗಿಲ್ಲ. ಖಾಸಗಿ ಕಂಪೆನಿ ಇಲ್ಲಿ ಜನರಿಗೆ ನೇರವಾಗಿ ಉತ್ತರದಾಯಿಯಲ್ಲ.


ಇನ್ನು ಲೀಟರ್‌ಗೆ ೧೦ ಪೈಸೆ ಎಂಬ ದರ ಎಲ್ಲಿಯವರೆಗೆ ನಡೆಯುತ್ತದೆ ಎಂಬ ಬಗ್ಗೆ ಖಾತ್ರಿಯಿಲ್ಲ. ಒಪ್ಪಂದದಲ್ಲಿ, ದರ ಹಾಗೇ ಇರುತ್ತದೆಯೇ ಅಥವಾ ಹೆಚ್ಚಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕಂಪನಿಗಳು ದರವನ್ನು ಸಿಕ್ಕಾಪಟ್ಟೆ ಏರಿಸಿದರೆ ಬಡಜನತೆ ಎಲ್ಲಿಗೆ ಹೋಗಬೇಕು ? ಜಲಶುದ್ಧೀಕರಣಕ್ಕೆ ಪ್ರಸ್ತಾವಿಸಲಾದ ರಿವರ್ಸ್ ಆಸ್ಮಾಸಿಸ್ ತಂತ್ರಜ್ಞಾನದ ಬಗ್ಗೆ ಕೂಡ ತಜ್ಞರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಊರಿಗೊಂದು ಕೆರೆ- ಬಾವಿಯಿರಬೇಕು, ಅದನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ತಿಳಿವಳಿಕೆ ನಮಗಿಲ್ಲದೇ ಹೋದದ್ದೇ ಈಗ ನಮ್ಮ ಬುಡಕ್ಕೆ ಬಂದಿದೆ ನೋಡಿ. ನಮ್ಮ ರಾಜ್ಯದಲ್ಲೂ ಇಂಥ ಪರಿಸ್ಥಿತಿ ತಲೆದೋರಬಹುದೆ ?
ಇದಕ್ಕಿರುವ ಒಂದೇ ಪರಿಹಾರ-ನಮ್ಮ ಸಾಂಪ್ರದಾಯಿಕ ನೀರು ನಿರ್ವಹಣಾ ಶಾಸ್ತ್ರವನ್ನು ಆಧರಿಸಿ, ಆಧುನಿಕ ಅಗತ್ಯಕ್ಕನುಗುಣವಾಗಿ ನಮ್ಮದೇ ಮಾದರಿಯನ್ನು ರೂಪಿಸಿಕೊಳ್ಳುವುದು. ಮಾದರಿ ಎಂಬುದು ಬೇರೆ ಇಲ್ಲದಿದ್ದಾಗ ನಮಗೆ ಬೇಕಾದಂತೆ ನಾವು ಪದ್ಧತಿಗಳನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಹೊಂದಿರುತ್ತೇವೆ. ಅದನ್ನು ಬಿಟ್ಟು ಬೇರೆ ದೇಶಗಳಲ್ಲಿ ವಿಫಲವಾಗಿರುವ ಖಾಸಗೀಕರಣದಂಥ ಪ್ರಯೋಗಗಳಿಗೆ ನಮ್ಮಲ್ಲಿ ವೇದಿಕೆ ಒದಗಿಸುವುದು ಎಷ್ಟು ಔಚಿತ್ಯ ಪೂರ್ಣ?
ಕೃಷಿಯಂಥ ಕ್ಷೇತ್ರದಲ್ಲೂ ನಾವು ನೀರು ಪೂರೈಕೆಗೆ ಸುಸ್ಥಿರವಲ್ಲದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಹೋಗಿ ತಪ್ಪು ಮಾಡಿದ್ದೇವೆ. ೨೦ ಕೋಟಿಗೂ ಹೆಚ್ಚು ಬಾವಿಗಳು, ಕೊಳವೆ ಬಾವಿಗಳು ನಮ್ಮ ಕೃಷಿ ಸಾಮ್ರಾಜ್ಯವನ್ನು ಆಳುತ್ತಿವೆ. ಕೃಷಿ ನೀರಾವರಿಗೆ ಬಹುತೇಕ ನಾವು ಅಂತರ್ಜಲವನ್ನೇ ಅವಲಂಬಿಸುವ ಪರಿಪಾಠ ಬೆಳೆಸಿಕೊಂಡು ಬಿಟ್ಟಿದ್ದೇವೆ. ಭೂಮಿಯ ಮೇಲ್ಜಲದ ಬಳಕೆ, ಅಂತರ್ಜಲ ಮಟ್ಟದಲ್ಲಿನ ಏರಿಕೆಯ ನಿಟ್ಟಿನಲ್ಲಿ ‘ಹೂಡಿಕೆ’ ಮಾಡುವ ಬದಲು ಯೋಜನೆ’ಗಳ ಮೇಲಿನ ವೆಚ್ಚವನ್ನು ಹೆಚ್ಚಿಸುತ್ತಿದ್ದೇವೆ. ವಿತರಣೆಯಲ್ಲಿನ ಸೋರಿಕೆ, ನಿರ್ವಹಣಾ ದೋಷವನ್ನು ನಿಯಂತ್ರಿಸುವ ಬದಲು ನೀರಿಗೆ ‘ಶುಲ್ಕ’ ಹಾಕಲು ಚಿಂತಿಸುತ್ತಿದ್ದೇವೆ. ಪರ್ಯಾಯ ಬೆಳೆ ಪದ್ಧತಿಯ ಬದಲಿಗೆ ಕೃಷಿ ಉತ್ಪಾದನೆ ಹೆಚ್ಚಿಸಲು ರಸಗೊಬ್ಬರ, ವಿದೇಶಿ ತಳಿಗಳ ಮೊರೆಹೋಗಿದ್ದೇವೆ.
ನೀರಿನ ಮೌಲ್ಯವರಿಯದೇ ಬಳಕೆಗಿಳಿದಿರುವ, ಪೋಲು ಮಾಡುತ್ತಿರುವ ನಮ್ಮ ಇಂಥ ಧೋರಣೆ ಬದಲಾಗಬೇಕು. ಅತಿ ಹೆಚ್ಚು ನೀರಿನ ಬಳಕೆ ಪ್ರದೇಶ ಅತಿ ಹೆಚ್ಚು ನೀರು ಪೋಲಾಗುವ ತಾಣವೆಂಬ ಸ್ಥಿತಿ ಬದಲಾಗಬೇಕು. ಫ್ರಾನ್ಸ್, ಬ್ರಿಟನ್‌ಗಳ ಖಾಸಗೀಕರಣದ ಬದಲು ತಲಾ ೨೦೦ ಲೀಟರ್ ನೀರು ಬಳಕೆಯಿದ್ದ ಪ್ರದೇಶದಲ್ಲಿ ತಲಾ ನೂರರಿಂದ ನೂರಾ ಹತ್ತು ಲೀ. ನೀರಿನ ಬಳಕೆಗೆ ತಗ್ಗಿಸುವ ನಗರಗಳು ಮಾದರಿಯಾಗಬೇಕು. ಅಂಥದೊಂದು ಕ್ರಾಂತಿಯ ಭೀಮನೆಗೆತ ಸಾಧ್ಯವಾದರೆ ಅದು ನಿಜವಾದ ಬದಲಾವಣೆ.


‘ಲಾಸ್ಟ್’ಡ್ರಾಪ್ :
ಆಧುನಿಕ ಸವಾಲಿನ ಹಿನ್ನೆಲೆಯಲ್ಲಿ ನೀರಿಗೆ ಬೆಲೆ ಕಟ್ಟಬೇಕಾದ್ದು ಅನಿವಾರ್ಯ. ಆದರೆ ಭೌತಿಕವಾಗಿ ನೀರನ್ನೇ ಆ ಬೆಲೆಗೆ ಕೊಂಡುಬಿಡುತ್ತೇವೆಂಬುದು ಖಂಡಿತಾ ದಾರ್ಷ್ಟ್ಯ.

ಜಲ ಸಂರಕ್ಷಣೆ: ಗುಜರಾತಿನ ಎಲ್ಲರೂ ಸರದಾರರೇ

ಒಂದು ತಿಳಿದುಕೊಳ್ಳಿ, ಗುಜರಾತ್ ಮೂಲದ ಯಾವುದೇ ನಾಯಕರಿರಬಹುದು. ನೀರಿನ ವಿಷಯದಲ್ಲಿ ಅವರ ಕಳಕಳಿ ಉಳಿದೆಲ್ಲ ರಾಜ್ಯದವರಿಗಿಂತ ಯಾವತ್ತೂ ಒಂದು ಹಿಡಿ ಹೆಚ್ಚೇ ಇರುತ್ತದೆ. ಸ್ಥಳೀಯ ಭೌಗೋಳಿಕ ಸನ್ನಿವೇಶ, ತಲೆತಲಾಂತರದಿಂದ ಗುಜ್ಜುಗಳನ್ನು ಬಿಡದೇ ಕಾಡುತ್ತಿರುವ ಬರಗಾಲ, ನರ್ಮದೆಯಂಥ ನದಿಯನ್ನು ಸಂರಕ್ಷಿಸಿಕೊಳ್ಳುವ ಸವಾಲು ಇವೆಲ್ಲವೂ ಇದಕ್ಕೆ ಕಾರಣವಿರಬಹುದು.


ಗುಜರಾತ್- ರಾಷ್ಟ್ರಪಿತ ಗಾಂಜಿಯವರ ಜನ್ಮಭೂಮಿ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ನೀರಿನ ಬಗೆಗಿನ ಕಾಳಜಿಗೆ ಗಾಂಜಿಯವರೂ ಹೊರತಲ್ಲ ಎಂಬುದನ್ನು ಬೇರೆ ಹೇಳಬೇಕಿಲ್ಲ. ಗ್ರಾಮ ಸ್ವರಾಜ್ಯದ ಕಲ್ಪನೆಯ ಭಾಗವಾಗಿ ದೇಶದ ಲಕ್ಷಾಂತರ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಸಮರ್ಥ ಪೂರೈಕೆಯನ್ನು ಪ್ರತಿಪಾದಿಸಿದ್ದರು ಅವರು.


ಅದು ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಮಹಾವೇಶನದ ಸಂದರ್ಭ. ಗಾಂಜಿ ಸೇರಿದಂತೆ ದೇಶದ ಮುಂಚೂಣಿ ನಾಯಕರೆಲ್ಲರೂ ಸೇರಿದ್ದರು. ಬೆಳಗಿನ ಕಲಾಪದ ಬಳಿಕ ಎಲ್ಲರೂ ಊಟಕ್ಕೆ ತೆರಳಿದ್ದರು. ಊಟದ ಸಂದರ್ಭದಲ್ಲಿ ಆರಂಭವಾದ ಯಾವುದೋ ಚರ್ಚೆ ಉದ್ದಕ್ಕೂ ಸಾಗಿತ್ತು. ಊಟ ಮುಗಿಸಿ ಎದ್ದ ಗಾಂಜಿ ಮಾತನಾಡುತ್ತಲೇ ಕೈ ತೊಳೆಯಲು ಹೋದರು. ಪಕ್ಕದಲ್ಲೇ ಇದ್ದ ನೆಹರೂ ಚೊಂಬಿನಲ್ಲಿ ಅವರಿಗೆ ನೀರು ಹನಿಸುತ್ತಿದ್ದರು. ಮಾತಿನ ಭರದಲ್ಲಿ ಇಡೀ ತಂಬಿಗೆಯ ನೀರು ಮುಗಿದು ಹೋದದ್ದು ಬಾಪೂಜಿ ಗಮನಕ್ಕೆ ಬರಲೇ ಇಲ್ಲ. ಕೈ ತೊಳೆದು ಮುಗಿದಿರಲಿಲ್ಲ. ನೆಹರೂ ಮತ್ತೊಂದು ಬಾರಿ ಚೊಂಬಿನಲ್ಲಿ ನೀರು ತಂದು ಹನಿಸಲು ಆರಂಭಿಸಿದರು. ತಟ್ಟನೆ ಎಚ್ಚೆತ್ತ ಗಾಂಜಿ ‘ಅಯ್ಯಯ್ಯೋ ಒಂದು ಚೊಂಬು ನೀರು ಖಾಲಿ ಮಾಡಿಬಿಟ್ಟೆನಲ್ಲಾ’ ಎಂದು ಉದ್ಗರಿಸಿದರು.


ತಕ್ಷಣ ನೆಹರೂ ‘ಅದಕ್ಕೇನಂತೆ ಅಹಮದಾಬಾದ್‌ನಲ್ಲಿ ನೀರಿಗೇನೂ ಕೊರತೆ ಇಲ್ಲ. ಯಮುನೆ ತುಂಬಿ ಹರಿಯುತ್ತಿದ್ದಾಳೆ. ಇನ್ನೂ ಒಂದು ಚೊಂಬು ನೀರು ಬಳಸಿ’ಎಂದರು. ಇದಕ್ಕೆ ಗಾಂಜಿ ಪ್ರತಿಕ್ರಿಯೆ ನೋಡಿ-‘ಯಮುನೆ, ನರ್ಮದೆಯರು ಇದ್ದಾರೆಂಬುದೇನೋ ನಿಜ. ಆದರೆ ಅವರು ಇರುವುದು ನನ್ನೊಬ್ಬನ ಅಗತ್ಯ ಪೂರೈಸಲಲ್ಲವಲ್ಲ ?’


ಗಾಂಜಿಯವರ ಈ ಮಾತಿನ ಹಿಂದೆ ಹತ್ತಾರು ಸಂದೇಶಗಳಿವೆ. ಇದು ಅವರೊಬ್ಬರ ಪ್ರತಿಪಾದನೆಯಲ್ಲ. ಗುಜರಾತ್‌ನ ಬಹುತೇಕರು ಇಂಥ ಮನೋಭಾವದೊಂದಿಗೇ ನೀರಿನ ಬಳಕೆಗೆ ಮುಂದಾಗುತ್ತಿರುವುದರಿಂದ ಅಲ್ಲಿ ನೀರಾವರಿಯಲ್ಲಿ ಕಳೆದೊಂದು ದಶಕದಲ್ಲಿ ಊಹೆಗೂ ಮೀರಿದ ಪ್ರಗತಿ ಸಾಧ್ಯವಾಗಿದೆ. ಗುಜರಾತನಲ್ಲಿ ಯಶಸ್ವಿಯಾದ ಮಹತ್ವದ ನೀರಾವರಿ ಯೋಜನೆಯೊಂದರ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಈ ಮಾತು ಸತ್ಯವೆನಿಸುತ್ತದೆ.


ಹಲವಾರು ವಿವಾದಗಳಿಂದ ಭಾರೀ ಸುದ್ದಿ ಮಾಡಿದ ಸರದಾರ್ ಸರೋವರ ಯೋಜನೆ ಗೊತ್ತೇ ಇದೆ. ಇದೂ ಸಹ ಅದೇ ಅಣೆಕಟ್ಟೆಯಿಂದ ನೀರು ಪೂರೈಸುವ ಯೋಜನೆಯೇ. ಆದರೆ ಇಲ್ಲಿ ಯಾವುದೇ ವಿವಾದ ಇಲ್ಲ. ನರ್ಮದಾ- ಮಾಹಿ ನದಿಗಳಿಂದ ಕುಡಿಯುವ ನೀರು ತೆಗೆದುಕೊಂಡು ಹೋಗಲಾಗಿದೆ.


ಇದರಲ್ಲೇನು ವಿಶೇಷ ? ಖಂಡಿತಾ ವಿಶೇಷವಿದೆ. ಅಸ್ತಿತ್ವದಲ್ಲಿರುವ ಯೋಜನೆಯಿಂದಲೇ ಹೆಚ್ಚುವರಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಇದರ ಹೆಗ್ಗಳಿಕೆ. ಮೂಲ ಸರದಾರ ಸರೋವರ ಯೋಜನೆ ಇರುವುದು ಭರೂಚ್ ಜಿಲ್ಲೆಯ ನವಗಾಂವ್ ಎಂಬಲ್ಲಿ. ಈ ಅಣೆಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಸುಮಾರು ೩೫೭೧ ಎಂಎಲ್‌ಡಿಯಷ್ಟು ನೀರು ನಿಗದಿಯಾಗಿದೆ. ಇಲ್ಲಿಂದ ಸುಮಾರು ೩೫ ಕಿ. ಮೀ. ದೂರದ ನರ್ಮದಾ ಮುಖ್ಯ ಕಾಲುವೆಗೆ ನೀರನ್ನು ಪಂಪ್ ಮಾಡಲಾಗುತ್ತದೆ. ಆ ಕಾಲುವೆ ತಿಂಬ ಹಳ್ಳಿಯ ಬಳಿ ಮಾಹಿಯ ಕಾಲುವೆಗೆ ಸಂಪರ್ಕಿಸುತ್ತದೆ. ಅಲ್ಲಿಂದ ಮತ್ತೆ ಪ್ರಯಾಣ ಮುಂದುವರಿಸುವ ನೀರು ಕನೇವಲ್ ಹಾಗೂ ಪರೇಜ್ ಎಂಬ ಎರಡು ಬೃಹತ್ ಕೆರೆಗಳ ಒಡಲು ಸೇರುತ್ತದೆ. ಅಲ್ಲಿಗೇ ನೀರಿನ ಯಾನ ನಿಲ್ಲುವುದಿಲ್ಲ. ಮತ್ತೆ ಅಲ್ಲಿಂದ ನೀರನ್ನು ಭಾವನಗರ, ಅಮ್ರೇಲಿ ಹಾಗೂ ರಾಜಕೋಟ್ ಜಿಲ್ಲೆಗಳಿಗೆ, ೪೫೦ ಕಿ.ಮೀ ಉದ್ದದ ಸೌರಾಷ್ಟ್ರ ಪೈಪ್‌ಲೈನ್ ಯೋಜನೆಯ ಮೂಲಕ ಏತದಿಂದ ಕೊಂಡೊಯ್ಯಲಾಗುತ್ತದೆ. ಅಹಮದಾಬಾದ್‌ಗೂ ಇದೇ ನೀರನ್ನು ಕುಡಿಯಲು ಒದಗಿಸಲಾಗುತ್ತಿದೆ.


ಇವಿಷ್ಟು ಯೋಜನೆ. ನಿಜವಾಗಿ ಇಲ್ಲಿ ಸರ್ದಾರ್ ಸರೋವರದಿಂದ ನೀರು ಸರಿಸುಮಾರು ೨೮೦ ಕಿ. ಮೀ. ನಷ್ಟು ದೂರದ ಪ್ರಯಾಣ ಬೆಳೆಸುತ್ತದೆ. ಉದ್ದಕ್ಕೂ ಇರುವ ಸಣ್ಣಪುಟ್ಟ ಕೆರೆಗಳನ್ನು ತುಂಬಿಯೇ ನೀರು ಮುಂದಕ್ಕೆ ಹೋಗುವಂತೆ ಯೋಜಿಸಲಾಗಿದೆ. ಜತೆಗೆ ಕನೇವಲ್ ಹಾಗೂ ಪರೇಜ್ ಕೆರೆಗಳೂ ತುಂಬುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಅನಾಯಾಸವಾಗಿ ಏರಿಕೆ ಕಂಡು ಬಂದಿದೆ.


ವೈಜ್ಞಾನಿಕ, ದೂರದೃಷ್ಟಿಯಿಂದ ರೂಪಿಸಲಾಗಿರುವ ಯೋಜನೆಗಳು ಹೇಗೆ ಉಪಯುಕ್ತವಾಗುತ್ತವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಎನ್ನುತ್ತಾರೆ ಪ್ರೊ. ಹುಗ್ಗಿ. ಅಂದಾಜು ೧೨೦೦ ಕ್ಯೂಸೆಕ್ ನೀರಿನ ಪಂಪಿಂಗ್ ಸಂದರ್ಭದಲ್ಲೇ ಮಧ್ಯದಲ್ಲಿ ತುಸು ತಿರುವು ತೆಗೆದುಕೊಂಡು ಮೂರು ಪುಟ್ಟ ಪುಟ್ಟ ಒಡ್ಡುಗಳನ್ನು ನಿರ್ಮಿಸಲಾಗಿದೆ. ಇಂಥ ಇನ್ನೂ ಕೆಲವು ಪುಟ್ಟ ಪುಟ್ಟ ನಿರ್ಮಾಣ, ಪ್ರಯತ್ನಗಳಿಂದ ನದಿಯಲ್ಲಿನ ಪ್ರವಾಹದ ನೀರನ್ನೇ ಯಶಸ್ವಿಯಾಗಿ ಬಳಸಿಕೊಳ್ಳಲಾಗಿದೆ.


ದೇಶದಲ್ಲಿ ಇಂದಿಗೂ ಶೇ. ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ ‘ನೀರು ಸರಬರಾಜು ಯೋಜನೆ’ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ. ಗಮನಾರ್ಹ ಸಂಗತಿಯೆಂದರೆ, ಹೀಗೆ ‘ನೀರು ಸರಬರಾಜು’ ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ. ಅದನ್ನೇ ಮೋದಿಯವರು ಗುಜರಾತ್‌ನ ಎಲ್ಲ ಹಳ್ಳಿಗಳಿಗೆ ದಕ್ಕಿಸಿಕೊಟ್ಟಿದ್ದಾರೆ.


ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ. ಮೋದಿ ಅದನ್ನೇ ಗುಜರಾತ್‌ನಲ್ಲೂ ಮಾಡುತ್ತಿರುವುದು, ಬೇಕಿದ್ದರೆ ಹೋಗಿ ನೋಡಿ ಬನ್ನಿ.

‘ಲಾಸ್ಟ್’ಡ್ರಾಪ್: ಸಾಕಷ್ಟು ವಿವಾದ, ಅಡ್ಡಿ ಆತಂಕಗಳ ನಡುವೆಯೂ ನೀರಾವರಿಯ ವಿಚಾರದಲ್ಲಿ ನಮಗಿಂತ ಹತ್ತಾರು ಹೆಜ್ಜೆ ಮುಂದೆ ಹೋಗಿರುವ ಗುಜರಾತ್, ಇಂಥ ಇಚ್ಛಾ ಶಕ್ತಿಯಿಂದ ಮಾತ್ರ ಭೀಕರ ಬರಕ್ಕೂ ಎದೆಯೊಡ್ಡಿ ನಿಂತಿದೆ. ಬಂಡವಾಳ ಕ್ರಾಂತಿಯನ್ನೂ ಸಾಸಿದೆ.