Saturday, March 28, 2009

ಚುಂಚದೇನಹಳ್ಳಿಯಲ್ಲಿ ಕೊಂಚವೂ ನೀರು ಪೋಲಿಲ್ಲ

ಭೂಮಿಯ ಮೇಲೆ ಬಲಿಷ್ಠರು ಬದುಕುತ್ತಾರೆ.... ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್‌ನ ವಿಕಾಸ ವಾದವನ್ನೊಮ್ಮೆ ನೆನಪು ಮಾಡಿಕೊಳ್ಳಿ. ನೀರಿನ ವಿಚಾರದಲ್ಲಿ ಇದನ್ನೇ ತುಲನೆ ಮಾಡಿಕೊಳ್ಳುವುದಾದರೆ ಅಲ್ಲೂ ಅಷ್ಟೆ; ಬಲಿಷ್ಠರು, ದೊಡ್ಡ ರೈತರು ನೀರು ಪಡೆಯುತ್ತಾರೆ. ಉಳಿದವರು ಕಣ್ಣಿರಿಡುತ್ತಾರೆ.
ಅದೊಂದು ಕಾಲವಿತ್ತು. ಈ ಭೂಮಿಯ ಮೇಲೆ ನೀವು ಕರೆದಲ್ಲಿಗೆ ನೀರು ತಂಟೆ-ತಕರಾರಿಲ್ಲದೇ ಬರುತ್ತಿತ್ತು. ಬೇಕಷ್ಟು ಹೊತ್ತು ನೀವದನ್ನು ಬಳಸಬಹುದಿತ್ತು. ಎಷ್ಟೋ ವೇಳೆ ಬೇಡಬೇಡವೆಂದರೂ ನಿಮ್ಮ ಆಜ್ಞಾಪಾಲಕನಂತೆ ನೀರು ವರ್ತಿಸುತ್ತಿದ್ದರೆ ಅದು ಸಮೃದ್ಧಿಯ ಫಲ. ಅದು ನಿಮಗಂತಲೇ ಅಲ್ಲ, ಎಲ್ಲರಿಗೂ ಹಾಗೆಯೇ ಲಭಿಸುತ್ತಿದ್ದುದರಿಂದ ಅಲ್ಲಿ ಪೈಪೋಟಿ ಎಂಬುದೇ ಇರಲಿಲ್ಲ. ಒಂದು ಹಂತದವರೆಗೆ ಯಾರಲ್ಲೂ ನೀರಿನ ವಿಚಾರದಲ್ಲಿ ಹಕ್ಕು-ಅಕಾರದ ಪ್ರಶ್ನೆ ಮೂಡಿರಲಿಲ್ಲ. ಹೀಗಾಗಿ ಸಹಜವಾಗಿ ಎಲ್ಲರೂ ಎಲ್ಲವನ್ನೂ ಹಂಚಿಕೊಂಡು ಹೋಗುತ್ತಿದ್ದರು. ಯಾರಿಗೂ ಎಗ್ಗು ಸಿಗ್ಗಿಲ್ಲ. ಆಳ-ಅರಿವಿಲ್ಲದ ಇಂಥ ಬಳಕೆ ಎಲ್ಲೋ ಒಂದು ಕಡೆ ದಿಕ್ಕುತಪ್ಪ ತೊಡಗಿದ್ದೇ ಸಾಮೂಹಿಕ ಮನೋಭಾವ ಮರೆಯಾದಾಗ.
ಕಾಸಿಲ್ಲ, ಕೊಸರಿಲ್ಲ, ಪುಕ್ಕಟೆ ಸಿಕ್ಕದ್ದಕ್ಕೆ ಮೌಲ್ಯವಿದ್ದೀತೆ? ಬಳಸಿದರೂ ಸರಿ,ಬಸಿದು ಹೋದರೂ ಸರಿ. ಮನದ ಎಲ್ಲೋ ಒಂದು ಮೂಲೆಯಲ್ಲಿ ನೀರಿನ ಕುರಿತಾದ ನಿರ್ಲಕ್ಷ್ಯ ಆರಂಭವಾದಾಗ ಸಂಪನ್ಮೂಲವೂ ಸಹಜವಾಗಿ ಸೊರಗತೊಡಗಿತು. ಎಲ್ಲಿಯವರೆಗೆ ವಿನಯ ಇದ್ದೀತು ? ಯಾರಿಗೆ ಅಂತ ನಿಷ್ಠೆ ತೋರೀತು ? ನೀರಿನ ಮುನಿಸು ಆರಂಭವಾದದ್ದೇ ಆಗ. ಜಲಸಂಪನ್ಮೂಲದ ಸಮಾನ ಹಂಚಿಕೆಯ ಪರಿಕಲ್ಪನೆಗೆ ಯಾವಾಗ ಧಕ್ಕೆ ಬರಲಾರಂಭಿಸಿತೋ ಅದರ ಬೆನ್ನಲ್ಲೇ ಮೊಳೆಯಿತು ಮತ್ಸರ; ಬೆಳೆಯಿತು ಪೈಪೋಟಿ. ‘ಹೇಗಾದರೂ ಮಾಡಿ ಎಲ್ಲವನ್ನೂ ನಾನೇ ಹಿಡಿದಿಟ್ಟುಕೊಂಡುಬಿಡಬೇಕು. ಮಿಕ್ಕವರಿಗೆ ಸಿಕ್ಕರೆಷ್ಟು ? ಬಿಟ್ಟರೆಷ್ಟು ?’ ಒಮ್ಮ ಇಂಥ ಮನೋಭಾವಕ್ಕೆ ಮನುಷ್ಯ ಬಂದು ನಿಲ್ಲುತ್ತಿದ್ದಂತೆಯೇ ಡಾರ್ವಿನ್ನನ ವಾದಕ್ಕೆ ಹುರುಳು ಬಂದದ್ದಿರಬೇಕು.
ಏನೋ, ಎಂತೂ ? ಒಟ್ಟಿನಲ್ಲಿ ನೀರೆಂಬುದು ಸಿಕ್ಕವರಿಗೆ ಸೀರುಂಡೆ ಎಂಬಂತಾಗಿ ಕೃಷಿಕರ ಸಮೂಹದಲ್ಲಿ ಒಡಕಿನ ಬೀಜ ಮೊಳೆದು, ವೈಮನಸ್ಯದ ಫಸಲು ಸಮೃದ್ಧವಾಗತೊಡಗಿತು. ಇದು ಊರೂರಿನ ಕತೆಯಾಯಿತು. ಸಾಂಪ್ರದಾಯಿಕ ನೀರಾವರಿ ಪದ್ಧತಿಗಳು ಕಣ್ಮರೆಯಾದ ಮೇಲಂತೂ ಜಲ ಮೂಲದಿಂದ ದೂರ ಇರುವವರು, ಸಣ್ಣ ರೈತರು ನೀರನ್ನು ಕೇಳುವಂತೆಯೇ ಇಲ್ಲ ಎಂಬಂಥ ಪರಿಸ್ಥಿತಿ ತಲೆದೋರಿತು. ಇದರ ಒಟ್ಟಾರೆ ಪರಿಣಾಮ ಆದದ್ದು ಕೃಷಿ ಇಳುವರಿಯ ಮೇಲೆ. ಬೃಹತ್ ನೀರಾವರಿ ಯೋಜನೆಗಳಿಂದಲೂ ಇದಕ್ಕೆ ಪರಿಹಾರ ದೊರಕುವುದಿಲ್ಲ ಎಂಬುದನ್ನು ಕಾಲುವೆ ವ್ಯವಸ್ಥೆಯ ವೈಫಲ್ಯ ಸಾಬೀತುಪಡಿಸಿತು.
ಈ ಹಂತದಲ್ಲೇ ಚುಂಚದೇನಹಳ್ಳಿ ಗ್ರಾಮಸ್ಥರಿಗೆ ಜ್ಞಾನೋದಯವಾದ್ದದು. ಸಮುದಾಯ ಆಧಾರಿತ ನೀರಾವರಿ ವ್ಯವಸ್ಥೆಯ ಅನುಷ್ಠಾನಕ್ಕೆ ಇಂಬು ನೀಡಿದ್ದು ಜೈನ್ ಇರಿಗೇಷನ್. ಕಾಲವೆಗೆ ಪರ್ಯಾ ಯವಾಗಿ ಪಿವಿಸಿ ಹಾಗೂ ಎಚ್‌ಡಿಪಿಐ ಪೈಪ್‌ಗಳು ಬಂದಿಳಿದವು. ಕೊಲಾರ ಜಿಲ್ಲೆಯಲ್ಲಿ ಮೊದಲಿಗೆ ರೈತರ ಸಮೂಹವೊಂದು ವ್ಯವಸ್ಥಿತ ಸಂಘಟಿತ ಸ್ವರೂಪವನ್ನು ಪಡೆಯಿತೆನ್ನುವಾಗ ಸಮಸ್ಯೆಗಳಿಗೆ ಪರಿಹಾರ ಮಾರ್ಗ ತಂತಾನೆ ರೂಪುಗೊಳ್ಳತೊಡಗಿತು.
ಕೋಲಾರ ಜಿಲ್ಲೆಯ ಈ ಪುಟ್ಟ ಹಳ್ಳಿಗೆ ಇದ್ದ ಜಲ ಮೂಲವೆಂದರೆ ವೇಣುಗೋಪಾಲಸ್ವಾಮಿ ಕೆರೆ. ನೋಡಲು ಕೆರೆ ಚಿಕ್ಕದೇನಲ್ಲ. ನೀರೂ ಇತ್ತು. ನಿರ್ವಹಣೆಯಲ್ಲಿಯೇ ಎಡವಿದ್ದಿರಬೇಕು. ಒಟ್ಟಾರೆ ಆಸುಪಾಸಿನವರಿಗೆ ಸಿಕ್ಕ ನೀರಿನ ಕನಿಷ್ಠ ಪಾಲೂ ಕೊನೆಯ ಭಾಗದವರಿಗೆ ಸಿಗುತ್ತಿರಲಿಲ್ಲ ಎಂಬುದು ವಾಸ್ತವ. ಊರಿನಲ್ಲಿರುವ ೫೬ ಕುಟುಂಬದವರೂ ಒಗ್ಗೂಡತೊಡಗಿದರು. ಎಲ್ಲರಿಗೂ ಅಗತ್ಯಕ್ಕೆ ತಕ್ಕ ನೀರು ಸಿಗಬೇಕು. ಚಿಂತನೆಗೆ ಬೆಂಬಲವಾಗಿ ನಿಂತಿತು ರಾಜ್ಯ ಸರಕಾರ. ಯೋಜನೆಯಲ್ಲಿ ಕೈ ಜೋಡಿಸಿದ್ದು ಕೃಷಿ ವಿಶ್ವವಿದ್ಯಾಲಯ. ಎಲ್ಲಕ್ಕೂ ಒಮ್ಮತವೇ ಬುನಾದಿ.
ಸರಿಸುಮಾರು ಆರು ಹೆಕ್ಟೇರ್‌ನಷ್ಟು ವಿಸ್ತೀರ್ಣದ ಕೆರೆಯಿಂದ ಎಲ್ಲ ಜಮೀನಿಗೂ ನೀರು ಸಮಾನವಾಗಿ ಹಂಚಿಕೆಯಾಗಬೇಕೆನ್ನುವಾಗ ಏನಿಲ್ಲವೆಂದರೂ ೪೦ ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತದ ಹೂಡಿಕೆ ಅನಿವಾರ್ಯವಾಯಿತು. ಯೋಜನೆಯಂತೆ ಪೈಪ್ ಜಾಲದ ಜತೆಗೆ ಆಧುನಿಕ ನೀರಾವರಿ ತಂತ್ರಜ್ಞಾನದ ಅಳವಡಿಕೆ, ಪಂಪ್‌ಸೆಟ್‌ಗಳ ಖರೀದಿ, ಇಂಧನ ಹೀಗೆ ಪ್ರತಿಯೊಂದರ ಮರುಸೃಷ್ಟಿಯಾ ಗಬೇಕಿತ್ತು. ಅಚ್ಚುಕಟ್ಟಿನಲ್ಲಿ ೮ ಬೋರ್‌ವೆಲ್‌ಗಳೂ ಇದ್ದವು. ಅವುಗಳಿಗೆ ತಲಾ ೩ ಎಚ್‌ಪಿ ಸಾಮರ್ಥ್ಯದ ಮೂರು ಪಂಪ್‌ಸೆಟ್‌ಗಳನ್ನು ಅಳವಡಿಸಲಾಯಿತು. ಇದಕ್ಕೆ ೧೫ ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಪ್ಯಾನಲ್‌ಗಳಿಂದ ಇಂಧನ ಪೂರೈಕೆಗೆ ಯೋಜಿಸಲಾಯಿತು. ಪಂಪ್‌ನಿಂದ ನೀರೆತ್ತಿ ಪೈಪ್‌ಗಳಲ್ಲಿ ಜಮೀನುಗಳ ಬುಡಕ್ಕೆ ಕೊಂಡೊಯ್ದು ಬಿಡುವಷ್ಟಕ್ಕೆ ಯೋಜನೆ ಸೀಮಿತವಾಗಲಿಲ್ಲ. ಯಾವ ಜಮೀನಿಗೆ ಎಂಥ ನೀರಾವರಿ ಪದ್ಧತಿ ಸರಿ ಹೊಂದೀತು ? ಯಾವ ಜಮೀನಿಗೆ ಯಾವ ಬೆಳೆ ಸರಿ ಹೊಂದೀತು ? ಯಾರ ಆದ್ಯತೆ ಯಾವುದು ? ನೀರಿನ ಅಗತ್ಯವೆಷ್ಟು ? ಈ ಎಲ್ಲ ಅಂಶಗಳನ್ನೂ ಪರಿಗಣಿಸಿಯೇ ನೀರಿನ ಹಂಚಿಕೆಗೆ ಮುಂದಾಗಲಾಯಿತು. ಅದರನ್ವಯ ಸುಮಾರು ೨೨ ಎಕರೆಯಷ್ಟು ಜಮೀನಿಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಯಿತು. ಎರಡು ಹೆಕ್ಟೇರ್‌ನಲ್ಲಿ ತುಂತುರು ನೀರಾವರಿಗೆ ಆದ್ಯತೆ ನೀಡಲಾಯಿತು. ಉಳಿದ ಕೃಷಿ ಭೂಮಿಗೆ ಬೆಳೆಯನ್ನವಲಂಬಿಸಿ ಹರಿ ನೀರಾವರಿ ಒದಗಿಸಲಾಯಿತು.
‘ವೇಣುಗೋಪಾಲಸ್ವಾಮಿ ಕೆರೆ ಯೋಜನೆ ಸಂಘ ಮೂರು ವರ್ಷದ ಹಿಂದೆ ಸಮುದಾಯ ಆಧಾರಿತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಇಳಿಯುವ ಮುನ್ನ ಚುಂಚದೇನಹಳ್ಳಿಯಲ್ಲಿ ನೀರಿನ ಲಭ್ಯತೆಯೆಂದರೆ ಅದು ಅಕ್ಷರಶಃ ಜೂಜು. ಎಂಥದೇ ಬೆಳೆ ಹಾಕಿದರೂ ತೊಡಗಿಸಿದ ಬಂಡವಾಳ ಬಂದೇ ಬಿಡುತ್ತದೆ ಎನ್ನುವ ವಿಶ್ವಾಸವಿರಲಿಲ್ಲ. ಕಾಲುವೆಯಲ್ಲಿ ಹರಿದು ಬರುವ ನೀರು ಇದ್ದಕ್ಕಿದ್ದಂತೆಯೇ ಕಣ್ಮರೆಯಾಗುತ್ತಿತ್ತು. ಇದೀಗ ಕೆರೆಯಿಂದ ಹೊರಬಿಟ್ಟ ನೀರು ಏನಾದರೂ ಪೋಲಂತೂ ಆಗುವುದಿಲ್ಲ ಎಂಬ ಭರವಸೆ ಬಂದಿದೆ ’ ಎನ್ನುತ್ತಾರೆ ಕೆರೆ ಸಂಘದ ಅಧ್ಯಕ್ಷ ನಾರಾಯಣಪ್ಪ.
ಅವರ ಮಾತಿನಲ್ಲಿ ಸತ್ಯವಿದೆ. ನಿರ್ವಹಣೆಯಿಲ್ಲದ ಕಾಲುವೆಯಲ್ಲಿ ಸೋರಿಕೆಯೂ ಹೆಚ್ಚಿತ್ತು. ಜತೆಗೆ ಬೇಸಿಗೆಯಲ್ಲಿ ಬಹುತೇಕ ನೀರು ಆವಿಯಾಗಿ, ಅಲ್ಲಲ್ಲಿ ಇಂಗಿಯೇ ಹೋಗಿಬಿಡುತ್ತಿತ್ತು. ಅದೂ ಸಾಲದೆಂಬಂತೆ ಆರಂಭದ ರೈತರು ತಮಗೆ ಬೇಕೆಂದಾಗಲೆಲ್ಲ ನೀರು ತಿರುಗಿಸಿಕೊಂಡು ಮನಸ್ಸಿಗೆ ಬಂದಂತೆ ಬಳಸುತ್ತಿದ್ದರು. ನೀರಿನ ಬಳಕೆ, ಬೆಳೆಪದ್ಧತಿಯಲ್ಲೂ ವೈಜ್ಞಾನಿಕತೆಯಿರಲಿಲ್ಲ. ಇಂಥದಕ್ಕೆ ಕೊನೆ ಹಾಡಿದ್ದೇ ಯೋಜನೆಯ ಮೊದಲ ಯಶಸ್ಸು. ವಿವೇಚನಾಯುತ ನೀರಿನ ಬಳಕೆಯ ಬಗ್ಗೆ ರೈತರಿಗೆ ಸೂಕ್ತ ತರಬೇತಿ ನೀಡುವುದರೊಂದಿಗೆ ಉಳಿತಾಯ ಸಾಧನೆ ಮಾಡಿದ್ದು ಇನ್ನೊಂದು ಘಟ್ಟ. ಸೋರಿಕೆ, ದುಂದು ತಡೆದು, ಸಮಾನ ಹಂಚಿಕೆಗೆ ಅನುವು ಮಾಡಿಕೊಟ್ಟದ್ದು ಇನ್ನೊಂದು ಸಾಧನೆ. ಅಂತಿಮವಾಗಿ ಚುಂಚದೇನಹಳ್ಳಿಯಲ್ಲಿ ಇದೀಗ ನೀರ ನೆಮ್ಮದಿ ಕಾಣಿಸಿದೆ. ಒಂದು ಬೆಳೆ ತೆಗೆಯುತ್ತಿದ್ದ ಜಮೀನಿನಲ್ಲಿ ಎರಡು ಬೆಳೆ ಸಾಧ್ಯವಾಗುತ್ತಿದೆ. ಸ್ವಲ್ಪ ಬುದ್ಧಿವಂತಿಕೆ ಬಳಸಿದರೆ ಮೂರು ಬೆಳೆಯನ್ನೂ ತೆಗೆಯುವುದು ಕಷ್ಟವಾಗಲಿಕ್ಕಿಲ್ಲ. ಇನ್ನೇನು ಬೇಕು ?
‘ಲಾಸ್ಟ್’ಡ್ರಾಪ್: ನೀರುಳಿದರೆ ನಾವು, ನೀರಳಿದರೆ ಅದು ನಮ್ಮ ಸಾವು.

Wednesday, March 25, 2009

Campaign for Environmental Justice - India

PRIME MINISTER ASKED TO STOP UNCONSTITUTIONAL AMENDMENT TO EIA NOTIFICATION EXTENDING SOPS TO INDUSTRY DURING ELECTIONS
24 March 2009
More than 500 environmentalists, people's movements, social activists, social action networks, NGOs and concerned individuals from across India and the world have called for suspension of all work on the proposed amendments to the Environment Impact Assessment Notification - 2006. In a letter addressed to Prime Minister Dr. Manmohan Singh, who holds additional charge as Minister of Environment & Forests, signatories have alleged that the timing and content of the proposed amendments represent a gross misuse of executive power as the proposed amendments amount to handing out concessions to several industrial and infrastructure sectors, many of which are substantial donors to election campaign funds of the ruling party UPA alliance. Coming together as Campaign for Environmental Justice-India, the signatories have decided to complain to the Election Commission of India that the proposed amendment offers highly questionable and illegal concessions to big businesses that is in violation of the model Code of Conduct.
The signatories have demanded that the proposed amendments be shelved, and a comprehensive review be conducted of the EIA process with a view to increasing environmental protection and public participation in environmental decision-making. The clear demand is that nothing should be done that would limit the possibility of a comprehensive Environment Impact Assessment Act being introduced by the new Government thus obviating executive misuse of subordinate legislations, such as the EIA Notification, due to the lack of Parliamentary oversight.
The Draft amendments to the EIA Notification - 2006 was released on 19 January, 2009 for comments for a 60 day period only on the website of the Ministry. Many environmental groups, social activists, academics and other signatories refused to comment, instead demanding the total revocation of these unconstitutional Amendments as it constitutes abuse of executive power. Further, it advantages profit motives of corporate India by saving thousands of crores of rupees by escaping the need to implement environmental and social safeguards.
The EIA Notification - 2006 presently requires that projects (both greenfield ventures and expansion projects) that cause pollution, destruction of natural resources, displacement and other significant impacts on the environment must go through a series of clearance steps as per standards and with the prior consent of statutory agencies, both at State & Central levels, as applicable. This notification lays down procedures requiring the project developers to comply with a variety of national legislations such as the Environment Protection Act, Forest Conservation Act, Water and Air (Control of Pollution) and a range of international treaties such as the Rio Declaration. It may be recalled that this Notification too was issued overriding massive public opposition to offering of various sops to polluting industries. Tatas, Mahindras, Toyota and other automobile giants, for instance, secretively and successfully lobbied the Prime Minister's Office through 2006 to get the highly polluting automobile manufacturing sector out of the purview of the environmental clearance regime.
The proposed amendment dilutes an already weak EIA Notification. The most unconstitutional feature of the proposed amendment is that it does away with critical regulatory and oversight mechanisms for three years. This is sought to be done by extending to applicants a relief in the form of 'self certification' that merely requires them to declare their projects cause no additional pollution and thus open the gateway for self regulation. Such a concession is shockingly offerred because the Ministry admits that along with many States and Union Territories, it has failed to establish regulatory institutions such as State Environment Impact Assessment Authority and State Environment Appraisal Committee – key instrumentalities to implement the regulatory features of the EIA Notification – 2006.
This failure in discharge of executive and regulatory power is now paraded as a reason to provide blanket exemption for highly polluting industrial and infrastructure sectors. Beneficiaries include shipping, port developers, building and construction sectors, area development projects, mining sector, petrochemical industry, modernisation of airports, and expansion of all sorts of manufacturing sectors. This is bound to increase displacement of urban, rural and forest dwelling communities while seriously compromising India's human and ecological security.
Another significant concern is that the Ministry seeks to dilute environmental regulation a mere six months after unveiling a National Action Plan for Climate Change with stated long term objectives including "protecting the poor and vulnerable sections of society through an inclusive and sustainable development stategy, sensitive to climate change". Worldwide, strong and effective environmental regulation of industrial and infrastructure development is considered the most apt way to tackle climate change. India has instead decided to advantage its polluting sectors risking a precipitous fall in its compliance with climate change obligations.
In a country besotted with an extremely weak environmental regulatory system that has failed to control pollution and protect our forests and natural resources, the current move only makes matters far worse for the protection of ecological and human security. The proposed amendments are clearly violative of the spirit of the Constitution of India. CEJ-I calls upon all political parties and the media to be vigilant & expose such instances of abuse of executive powers by the Government in power.
Environment Support Group, Bangalore
for Campaign for Environmental Justice – India

Sunday, March 22, 2009

ನೀರಿನ ‘ಸಮ್’ರಕ್ಷಣೆಯ ಕೆಲವು ಉಪಾಯಗಳು

ಹಾಗೆ ನೋಡಿದರೆ ಬೇಸಿಗೆ, ಬಿಸಿಲನ್ನು ಅದೇಕೆ ಬಯ್ದುಕೊಳ್ಳುತ್ತೇವೋ ಅರ್ಥವಾಗುವುದಿಲ್ಲ. ಎಲ್ಲವನ್ನೂ ನಕಾರಾತ್ಮಕವಾಗಿ ನೋಡುವುದು ನಮಗೆ ಅಭ್ಯಾಸವಾಗಿಬಿಟ್ಟಿದೆಯಿರಬೇಕು. ಯಾವುದನ್ನೂ ಗೊಣಗದೇ ಸ್ವೀಕರಿಸಲು ನಮಗೆ ಬರುವುದೇ ಇಲ್ಲ ಎಂಬಷ್ಟರ ಮಟ್ಟಿಗೆ ನಮ್ಮ ಮೈಂಡ್ ಸೆಟ್ ಅದಕ್ಕೆ ಕೂತುಹೋಗಿದೆ. ಬೇಕಿದ್ದರೆ ನೋಡಿ, ಚಳಿ, ಮಳೆ, ಬಿಸಿಲು ಹೀಗೆ ಯಾವುದೇ ಕಾಲದಲ್ಲಿ ನಾವು ಕೊರಗುವುದುನ್ನು ನಿಲ್ಲಿಸುವುದಿಲ್ಲ. ಅಯ್ಯೋ ಏನು ಮಳೆಯೋ ಏನೋ ? ಮನೆಯೆಲ್ಲ ಕೆಸರು. ಹೊರಗೆ ಹೋಗುವಂತಿಲ್ಲ. ಒಂದು ಕೆಲಸವೂ ಆಗುವುದಿಲ್ಲ....ಎನ್ನುತ್ತೇವೆ. ಚಳಿ ಬಂದರೆ ‘ಥತ್, ಎಂಥ ಚಳಿ. ಮೈ-ಕೈ ಎಲ್ಲ ಮುರುಟಿಹೋಗುತ್ತದೆ. ಈ ಚಳಿ ಯಾವಾಗ ಮುಗಿಯುತ್ತದೋ ಎನಿಸಿಬಿಟ್ಟಿದೆ. ಶೀತ ತಲೆನೋವು...ಬಿಸಿಲು-ಮಳೆಯಾದರೆ ಹೇಗೂ ತಡೆದುಕೊಳ್ಳಬಹುದು’ ಎಂದುಕೊಳ್ಳುತ್ತೇವೆ. ಇನ್ನು ಬೇಸಿಗೆ ಬಂದರಂತೂ ಮುಗಿದೇ ಹೋಯಿತು. ಬೆಂಕಿ ತುಳಿದಂತೆಯೇ ಆಡುತ್ತಿರುತ್ತೇವೆ. ಅಸಲಿಗೆ ಬದಲಾಗಬೇಕಾದದ್ದು ಋತುಮಾನವಲ್ಲ, ನಮ್ಮ ಮನದ ಮೂಲೆಯಲ್ಲಿ ಗೂಡುಕಟ್ಟಿ ಕುಳಿತಿರುವ ನಕಾರಾತ್ಮಕ ಧೋರಣೆ.
ಯಾವುದೇ ಬದಲಾವಣೆಗಳಿರಲಿ ತನ್ನ ಪಾಡಿಗೆ ತಾನು ಆಗುತ್ತಲೇ ಇರುತ್ತದೆ. ಅದು ನಿಯಮ. ಆದರೆ ಅದಕ್ಕೆ ತಕ್ಕ ಬದಲಾವಣೆಗೆ ನಾವು ಸಿದ್ಧರಿರುವುದಿಲ್ಲ. ಬೇಸಿಗೆಯ ವಿಚಾರದಲ್ಲೂ ಅದೇ. ಬಿಸಿಲು ಬಿದ್ದೇ ಬೀಳುತ್ತದೆ, ಕಪಾಳಕ್ಕೆ ಬಾರಿಸುತ್ತದೆ ಎಂಬುದು ಹೊಸತೇನಲ್ಲ. ಹಾಗೆ ಬಾರಿಸಿದಾಗ ಮೈ ಬೆವರುತ್ತದೆ, ನೆಲದ ನೀರಿನ ಪಸೆಯೂ ಆರಿ ಹೋಗುತ್ತದೆ ಎಂಬುದೂ ಗೊತ್ತಿಲ್ಲದ ಸಂಗತಿಯೇನಲ್ಲ. ಆದರೂ ಅದಕ್ಕೆ ತಕ್ಕ ಸಿದ್ಧತೆಯನ್ನು ನಾವು ಮಾಡಿಕೊಂಡಿರುವುದೇ ಇಲ್ಲ. ಆರಿ ಹೋಗುವ ಮುನ್ನ ಒಂದಷ್ಟು ನೀರನ್ನು ಬಾಯಾರಿ ಬಂದಾಗ ಬೇಕಾಗುತ್ತದೆಂದು ಸಂರಕ್ಷಿಸಿಟ್ಟುಕೊಳ್ಳುವುದಿಲ್ಲ. ಏನಾದೀತು ? ಆದರೂ ಎಲ್ಲರಿಗಾದದ್ದು ನಮಗಾಗುತ್ತದೆ ಅಷ್ಟೇ ಅಲ್ಲವೇ ಎಂಬ ಅಸಡ್ಡೆ ಬೇರೆ. ಹೀಗಾಗಿ ನೀರಿದ್ದಾಗ ಬೇಕಿರಲಿ, ಬೇಡದಿರಲಿ, ಬಳಸುತ್ತೇವೆ ಎಂಬುದಕ್ಕಿಂತ ಕಬಳಿಸುತ್ತೇವೆ; ಜೇಬಿನಲ್ಲಿರುವ ದುಡ್ಡಿನಂತೆಯೇ. ಅದಕ್ಕೂ ಆರವಿಲ್ಲ ಭಾರವಿಲ್ಲ. ನೀರನ್ನೂ ಅಷ್ಟೆ, ಆರುವವರೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ನೀರು ಉಳಿಸಿಕೊಂಡರೆ ಅದು, ನೀರಿನ ಉಳಿವು ಮಾತ್ರವಲ್ಲ. ಕಿಸೆಯ ಕಾಸೂ ಉಳಿಯುತ್ತದೆ. ನೆಲದ ಸಮೃದ್ಧಿ ಉಳಿಯುತ್ತದೆ. ಸುತ್ತಲಿನ ಬಾವಿ ಕೆರೆ, ಕಟ್ಟೆ, ನದಿ, ನಲೆ ಕೊನೆಗೆ ಒಂದಿಡೀ ಸಮಾಜದ ಉಳಿವು ನಾವು ಉಳಿಸುವ ನೀರನ್ನು ಅವಲಂಬಿಸಿರುತ್ತದೆ ಎಂದು ಹೇಳಿದರೆ ಬಹುತೇಕ ನಮಗೆ ಅರ್ಥವೇ ಆಗುವುದಿಲ್ಲ. ಕಾರಣ ಮತ್ತದೇ ನಕಾರಾತ್ಮಕ ಧೋರಣೆ. ಒಂದು ಸಮಾಜದ ಉಳಿವು. ಮುಂದಿನ ತಲೆಮಾರಿಗೆ ಆಸ್ತಿ ಸಂಪಾದಿಸದ್ದಿರೂ, ನಿಮ್ಮ ಮಕ್ಕಳು, ಮೊಮ್ಮಕ್ಕಳು ಬದುಕುತ್ತಾರೆ. ಆದರೆ ನೀರಿನ ಆಕರವನ್ನು ಉಳಿಸಿ, ಸಂರಕ್ಷಿಸದಿದ್ದರೆ...?
ನೀರಿನ ಸಂರಕ್ಷಣೆಯೆಂದರೆ ಎರಡು ರೀತಿ. ಒಂದು ನೀರನ್ನು ಕಡಿಮೆ ಬಳಸಿ ಉಳಿಸುವುದು, ಅದಕ್ಕಿಂತ ಮುಖ್ಯವಾದದ್ದು ಉಳಿದ ನೀರು ಮಲಿನವಾಗದಂತೆ ಕಾಪಾಡುವುದು. ಗಮನಿಸಲೇಬೇಕಾದ ಅಂಶವೆಂದರೆ ನಮಗೆ ನೀರಿಲ್ಲ ಎಂದ ಮಾತ್ರಕ್ಕೆ ಕೊರತೆಯಿದೆ ಎಂದಲ್ಲ. ಇರುವ ನೀರು ಬಳಕೆಗೆ ಯೋಗ್ಯವಾಗಿಲ್ಲ. ನೀರನ್ನು ಸಂರಕ್ಷಿಸುವುದರಿಂದ ಅದು ಮಣ್ಣಿನ ಸಂತೃಪ್ತ ಸ್ಥಿತಿಯನ್ನು ತಡೆದು ನೈರ್ಮಲ್ಯ ವ್ಯವಸ್ಥೆಯ ಆಯುಸ್ಸನ್ನು ಹೆಚ್ಚಿಸುತ್ತದೆ.
ಈ ಎಲ್ಲ ದೃಷ್ಟಿಯಿಂದ ಜಲ ಸಂರಕ್ಷಣೆ ಹಾಗೂ ಸುವ್ಯವಸ್ಥಾಪನೆಯ ದೃಷ್ಟಿಯಿಂದ ಒದಷ್ಟು ಟಿಪ್ಸ್‌ಗಳು ನಿಮಗಾಗಿ...
ಮನೆಗಳಲ್ಲಿ ಮಾಡಬೇಕಾದ್ದು, ಮಾಡಬಹುದಾದದ್ದು
*ಸೋರಿಕೆ ತಡೆಗಟ್ಟಿ:
ನೀರು ಬಳಕೆಯಾಗುವ ಒಂದು ಗಂಟೆ ಮೊದಲು, ನೀರು ಬಳಸಿದ ಒಂದು ಗಂಟೆ ನಂತರ ತೊಟ್ಟಿಗೆ ಅಳವಡಿಸಿರುವ ಮೀಟರ್ ಅನ್ನು ಪರೀಕ್ಷಿಸಿ. ಮೀಟರ್‌ನಲ್ಲಿ ವ್ಯತ್ಯಾಸ ಕಂಡು ಬಂದರೆ ತೊಟ್ಟಿಯಲ್ಲಿ ಸೋರಿಕೆಯಿದೆ ಎಂದೇ ಅರ್ಥ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಿ.
*ನಲ್ಲಿಗೆ ಶೀತವಾಗದಿರಲಿ
ಮನೆಯ ಟ್ಯಾಪ್(ನಲ್ಲಿ) ತೊಟ್ಟಿಕ್ಕುತ್ತಿದ್ದರೆ, ಅದರಲ್ಲಿ ಎಷ್ಟು ನೀರು ಹೋದೀತು, ನಾಳೆ ಸರಿಪಡಿಸಿದರಾದೀತು ಎಂದುಕೊಂಡು ಸುಮ್ಮನಿರಬೇಡಿ. ಆ ನಾಳೆ ಬರುವುದೇ ಇಲ್ಲ. ಹಾಗೆ ಹನಿಯುವ ನಲ್ಲಿ ದಿನಕ್ಕೆ ೮೦ ಲೀಟರ್ ನೀರನ್ನು ಪೋಲು ಮಾಡೀತು. ತಕ್ಷಣ ನಲ್ಲಿಯ ವಾಯ್ಸರ್ ಬದಲಿಸಿ. ಅದಕ್ಕೆ ತಗಲುವ ವೆಚ್ಚ ಹೆಚ್ಚೆಂದರೆ ಎರಡು ರೂ.
*ಟಾಯ್ಲೆಟ್‌ನಲ್ಲಿನ ಸೋರಿಕೆ ತಪ್ಪಿಸಿ
ಟಾಯ್ಲೆಟ್‌ನಲ್ಲಿ ಅನವಶ್ಯಕ ನೀರಿನ ಸೋರಿಕೆಯಾಗದಂತೆ ನಿಗಾ ವಹಿಸಿ. ನಿಮಗೆ ಗೊತ್ತಿಲ್ಲದಂತೆಯೂ ಅಲ್ಲಿ ನೀರು ಸೋರಿಕೆಯಾಗುತ್ತಿರಬಹುದು. ಬಳಕೆ ಕಡಿಮೆ ಇರುವ ಸ್ಥಳ ಅದಾಗಿದ್ದರಿಂದ ಅದು ನಿಮ್ಮ ಗಮನಕ್ಕೆ ಬಾರದಿರಬಹುದು. ಅದಕ್ಕಾಗಿ ಶೌಚಾಲಯಕ್ಕೆ ನೀರು ಪೂರೈಕೆಯಾಗುವ ತೊಟ್ಟಿಯಲ್ಲಿ ಒಂದಷ್ಟು ಅಡುಗೆ ಬಣ್ಣ ಹಾಕಿಡಿ. ಫ್ಲಷ್ ಮಾಡದೆಯೂ ಬೇಸಿನ್‌ನಲ್ಲಿ ಬಣ್ಣ ಕಂಡರೆ ಸೋರಿಕೆ ಆಗುತ್ತಿದೆ ಎಂದೇ ಅರ್ಥ.
*ಟಾಯ್ಲೆಟ್ ‘ಕಬು’ ಅಲ್ಲ
ನೆನಪಿಡಿ, ನಿಮ್ಮ ಜೈವಿಕ ತ್ಯಾಜ್ಯ ವಿಸರ್ಜನೆಗೆ ಮಾತ್ರ ಶೌಚಾಲಯವಿರುವುದು. ಸಿಗರೇಟು ತುಂಡು, ಟಿಶ್ಯೂ ಪೇಪರ್, ಸ್ಯಾನಿಟರಿ ನ್ಯಾಪಿಕಿನ್ ಮತ್ತಿತರ ತ್ಯಾಜ್ಯಗಳನ್ನು ಟಾಯ್ಲೆಟ್ ಗೆ ಹಾಕಬೇಡಿ. ಇವುಗಳ ವಿಲೇವಾರಿಗೆ ಏನಿಲ್ಲವೆಂದರೂ ೫ರಿಂದ ೭ ಗ್ಯಾಲನ್ ನೀರು ಪೋಲಾಗುತ್ತದೆ.
* ಬಿಸಿ ನೀರು ಬೇಗ ಬರಲಿ
ಬಚ್ಚಲಿನಲ್ಲಿ ಮೊದಲು ಸ್ನಾನ ಮಾಡುವವರು ಒಂದಷ್ಟು ನೀರು ಪೋಲು ಮಾಡುವುದು ಅನಿವಾರ್ಯವೆಂಬಂತಾಗಿದೆ. ಬಿಸಿ ನೀರಿಗೆ ಮುನ್ನ ಪೈಪ್‌ನಲ್ಲಿದ್ದ ತಣ್ಣೀರು ಹರಿದುಬಿಡುವುದು ಸಹಜ. ಅದನ್ನು ತಪ್ಪಿಸಲು ಪೈಪ್‌ಗಳನ್ನು ಇನ್ಸುಲೇಟ್ ಮಾಡಿಸಿ.
*ಸ್ವಯಂ ಚಾಲಿತ ಷವರ್
ಷವರ್‌ನಡಿಯಲ್ಲಿ ನಿಂತ ಮೇಲೆ ಸ್ನಾನ ಮುಗಿಯುವ ವರೆಗೆ ನೀರನ್ನು ಬಿಟ್ಟುಕೊಳ್ಳುತ್ತಲೇ ಇರುವುದು ಅಭ್ಯಾಸ. ಸೋಪು ಉಜ್ಜಿಕೊಳ್ಳುವಾಗಲೂ ಷವರ್‌ನಲ್ಲಿ ನೀರು ಹೋಗುತ್ತಲೇ ಇರುತ್ತದೆ. ಅದನ್ನು ತಪ್ಪಿಸಲು ಸ್ವಯಂಚಾಲಿತ ಷವರ್ ಅಳವಡಿಸಿಕೊಳ್ಳಿ. ಇದರಿಂದ ನೀವು ಷವರ್‌ನಡಿ ಹೋಗಿ ನಿಂತಾಗ ಮಾತ್ರ ನೀರು ಸುರಿಯುತ್ತದೆ. ಪಕ್ಕಕ್ಕೆ ಬಂದರೆ ತಂತಾನೇ ನೀರು ನಿಂತುಕೊಳ್ಳುತ್ತದೆ.
*ತುಂತುರು ಬಳಕೆ ಇರಲಿ
ಪದೇ ಪದೇ ನೀರು ಬಳಕೆಯಾಗುವ ವಾಷ್ ಬೇಸಿನ್ ಮತ್ತಿತರ ಸ್ಥಳಗಳಲ್ಲಿ ನಲ್ಲಿಗಳಿಗೆ ಕಡ್ಡಾಯವಾಗಿ ತುಂತುರು ಕವಚ ತೊಡಿಸುವುದು ಮರೆಯಬೇಡಿ. ಈಗಂತೂ ನೊರೆಯೆರೆಯುವ ನಲ್ಲಿಗಳೇ ಬಂದಿವೆ. ಕಡ್ಡಾಯವಾಗಿ ಅಂಥವನ್ನೇ ಅಳವಡಿಸಿಕೊಳ್ಳಿ.
*ಹಲ್ಲುಜ್ಜುವಾಗ ನೀರು ನೋಡಿ
ಬೆಳಿಗ್ಗೆ ಎದ್ದು ಹಲ್ಲುಜ್ಜುವಾಗ ಅನೇಕರು ನಿದ್ದೆಗಣ್ಣಿನಲ್ಲಿ ನಲ್ಲಿಯನ್ನು ಬಿಟ್ಟುಕೊಂಡೇ ಇರುತ್ತಾರೆ. ಟೂತ್ ಬ್ರಷ್ ತೊಳೆಯುವಾಗ ಮತ್ತು ಬಾಯಿ ಮುಕ್ಕಳಿಸುವಾಗ ಮಾತ್ರ ನಳ ಆನ್ ಆಗಿದ್ದರೆ ಸಾಕು. ಹಲ್ಲುಜ್ಜಿ ಮುಗಿಯುವವರೆಗೂ ನಳದಲ್ಲಿ ನೀರು ಪ್ರವಹಿಸುವುದು ಬೇಡ.
*ನಳದಿಂದ ರೇಜರ್ ದೂರವಿಡಿ
ಶೇವಿಂಗ್ ಮಾಡಿದ ನಂತರ ರೇಜರ್ ಅನ್ನು ಬಿಸಿ ನೀರಿನಲ್ಲಿ ಮುಳುಗಿಸಿ ತೆಗೆಯಿರಿ. ನಳಕ್ಕೆ ನೇರವಾಗಿ ರೇಜರ್ ಹಿಡಿಯಬೇಡಿ. ಇದರಿಂದ ವಿಪರೀತ ನೀರು ಅನವಶ್ಯಕವಾಗಿ ಪೋಲಾಗುತ್ತದೆ.
* ಪೈಪ್ ಸೋರದಿರಲಿ
ನಿಮ್ಮ ಮನೆಯ ಪೈಪ್, ನಲ್ಲಿಯ ಬುಡ ಸೋರದಂತೆ ಎಚ್ಚರ ವಹಿಸಿ. ಹೀಗೆ ಆಗುವ ಸಣ್ಣ ಸೋರಿಕೆಯಿಂದ ದಿನಕ್ಕೆ ೨೦ ಗ್ಯಾಲನ್ ನೀರು ಪೋಲಾಗುತ್ತದೆ. ದೊಡ್ಡ ಸೋರಿಕೆಯಿಂದ ೧೦೦ ಗ್ಯಾಲನ್‌ವರೆಗೂ ಪೋಲಾಗುತ್ತದೆ ಎಂಬುದು ನೆನಪಿರಲಿ.
*ಬಟ್ಟೆ ತೊಳೆಯಲು ಯಂತ್ರ ಬೇಡ
ಬಟ್ಟೆ ತೊಳೆಯುವ ಯಂತ್ರವನ್ನು ಅಗತ್ಯವಿದ್ದರೆ ಮಾತ್ರ ಬಳಸಿ. ಹಳೆಯ ಯಂತ್ರವನ್ನು ಬದಿಗಿಡಿ. ಮಾರುಕಟ್ಟೆಯಲ್ಲಿ ಸಿಗುತ್ತಿರುವ ನೀರು ಸಂರಕ್ಷಕ, ಆಧುನಿಕ ಯಂತ್ರಗಳನ್ನು ಬಳಸಿ. ವಾಷಿಂಗ್ ಮಷಿನ್ ಭರ್ತಿಯಾಗುವಷ್ಟು ಬಟ್ಟೆಯಿದ್ದಾಗ ಮಾತ್ರ ಚಾಲೂ ಮಾಡಿ. ಒಂದೆರಡಕ್ಕೂ ಮಷಿನ್ ಬಳಕೆ ನೀರಿನ ಬಳಕೆ ಹೆಚ್ಚಿಸುತ್ತದೆ. ಒಮ್ಮ ವಾಷಿಂಗ್ ಮಷಿನ್ ಬಳಸಿದರೆ ಕನಿಷ್ಠ ೨೦ ಲೀ. ನೀರು ವ್ಯಯವಾಗುತ್ತದೆ.
*ಪಾತ್ರೆ ತೊಳೆಯುವಾಗ ನೀರು ಬಿಡಬೇಡಿ
ನಳದ ನೀರು ಬಿಟ್ಟುಕೊಂಡೇ ಪಾತ್ರೆ ತೊಳೆಯುವ ಕೆಟ್ಟ ಅಭ್ಯಾಸ ನಮ್ಮಲ್ಲಿ ಬಹುತೇಕರಿಗಿದೆ. ಸೋಪು ಹಚ್ಚಿ ಪಾತ್ರೆ ತಿಕ್ಕುತ್ತಿರುವಾಗ ನಳದ ನೀರನ್ನು ಪೋಲುಮಾಡಬೇಡಿ. ನಂತರವೂ ಬೇಸಿನ್ ಒಂದರಲ್ಲಿ ನೀರು ತುಂಬಿಸಿಕೊಂಡು ಅದರಲ್ಲಿ ಪಾತ್ರಗಳನ್ನು ಅದ್ದಿ ತೆಗೆದರೆ ಒಳಿತು.
* ತರಕಾರಿ ತೊಳೆಯುವಾಗ...
ಇನ್ನು, ಅಕ್ಕಿ , ತರಕಾರಿ ತೊಳೆಯುವಾಗ, ಅಡುಗೆ ಮನೆಯೊಳಗಣ ಬೇಸಿನ್ ತೊಳೆಯುವಾಗ ನಳದ ನೀರು ಬಿಡುವ ಚಾಳಿಯಿದೆ. ಅದನ್ನು ಕಡಿಮೆ ಮಾಡಿ.
ಹೊಲ ಮತ್ತು ಉದ್ಯಾನವನದಲ್ಲಿ
*ಹುಲ್ಲು ಹೊದಿಕೆಗೆ ಬೇಕಾದರೆ ಮಾತ್ರ ನೀರುಣಿಸಿ
ಹುಲ್ಲಿನ ಹಾಸುಗಳಿಗೆ, ಗಿಡಗಳಿಗೆ ಬೇಕಾದಾಗ ಮಾತ್ರ ನೀರು ಹಾಕಿ. ನಿತ್ಯವೂ ನೀರು ಹಾಕುವುದು ಬೇಡ. ಪಾತ್ರೆ, ಬಟ್ಟೆ ತೊಳೆದ ನೀರನ್ನು ಗಿಡಗಳು ಬೇಡವೆನ್ನುವುದಿಲ್ಲ. ಇದರಿಂದ ನೀರಿನ ಮರು ಬಳಕೆಯಾಗುತ್ತದೆ.
*ಬೇರಿಗೆ ನೀರು
ಗಿಡಗಳ ಬೇರು ಭಾಗಕ್ಕೆ ಮಾತ್ರ ನೀರು ಹಾಕಿ. ಮೇಲ್ಬಾಗಕ್ಕೆ ನೀರುಣಿಸಿದರೆ ಬಿಸಿಲಿನ ಬೇಗೆಗೆ ಬೇಗ ಆವಿಯಾಗುತ್ತದೆ. ಮಾತ್ರವಲ್ಲ, ಒಮ್ಮೆ ನೀರು ಹಾಕುವಾಗ ಸಾಕಷ್ಟು ಉಣಿಸಿ. ಪದೇ, ಪದೇ ನೀರುಣಿಸುವದರಿಂದ ಆವಿಯಾಗಿ ಹೋಗುವ ಪ್ರಮಾಣ ಹೆಚ್ಚಿರುತ್ತದೆ.
* ಬೆಳಗ್ಗೆಯೇ ನೀರುಣಿಸಿ
ಗಿಡಗಳಿಗೆ ಬೆಳಗ್ಗಿನ ಹೊತ್ತು ನೀರು ಹಾಕುವ ರೂಢಿ ಬೆಳೆಸಿಕೊಳ್ಳಿ. ಬಿಸಿಲು ಏರಿದಂತೆ ನೀರು ಹಾಕಿದರೆ, ಹೆಚ್ಚು ನೀರು ಖರ್ಚಾಗುತ್ತದೆ.
*ಹನಿ ಹನಿ, ಇಬ್ಬನಿ
ಹನಿ, ತುಂತುರು ನೀರಾವರಿಯಂಥ ಪದ್ಧತಿಯಲ್ಲಿ ಹೂವಿನ ಗಿಡ, ಹುಲ್ಲು ಹಾಸಿ ಸಮರ್ಥವಾದ ನೀರಾವರಿ ವ್ಯವಸ್ಥೆ ಮಾಡಿ
*ನೀರು ಬೇಡದ ಗಿಡಗಳಿರಲಿ
ನಿಮ್ಮ ಮನೆಯಂಗಳದಲ್ಲಿನ ಉದ್ಯಾನವನದ ಬಣ್ಣ-ಬಣ್ಣದ ಗಿಡಗಳ ನಡುವೆ, ನೀರು ಹೀರದ, ಹೆಚ್ಚಿನ ನೀರು ಬೇಡದ ಗಿಡಗಳಿಗೂ ಸ್ವಲ್ಪ ಜಾಗಕೊಡಿ. ಇದರಿಂದ ನೀರು ಇಂಗುವಿಕೆ ಪ್ರಮಾಣ ಕಡಿಮೆಯಾಗುತ್ತದೆ.
*ವಾಹನ ತೊಳೆಯುವಾಗ ಜಾಗೃತಿಯಿರಲಿ
ಕಾರು ಅಥವಾ ವಾಹನ ತೊಳೆಯುವಾಗ ನೀರಿನ ಕುರಿತು ಗಮನವಿರಲಿ. ಟ್ಯಾಂಕಿನಲ್ಲಿ ನೀರಿದೆ ಎಂದು ಕಾರಿಗೆ ಸುರಿಯಬೇಡಿ. ಪದೇ ಪದೇ ತೊಳೆಯುವ ಬದಲು. ಒದ್ದೆ ಬಟ್ಟೆ ಮಾಡಿ ಒರೆಸಿ.
*ಪೊರಕೆ ಬಳಸಿ
ಮನೆ ಶುಚಿ ಮಾಡುವಾಗ ಕೇವಲ ನೀರು ಸುರಿದರೆ ಕೊಳೆ ಹೋಗುವುದಿಲ್ಲ. ಪೊರಕೆಯಿಂದ ಗುಡಿಸಿಕೊಂಡು ನಂತರ ನೀರು ಸುರಿಯಿರಿ

ಲಾಸ್ಟ್ ‘ಡ್ರಾಪ್’: ಮೈ ಕೊಳೆ ತೊಳೆದುಕೊಳ್ಳುವದಕ್ಕಷ್ಟೇ ಸ್ನಾನ ಸೀಮಿತವಾಗಿರಲಿ. ಬಚ್ಚಲು ನಿಮ್ಮ ಜಲಕ್ರೀಡೆಯ ತಾಣವಾಗದಿರಲಿ. ಮೈಮೇಲೆ ನೀರು ಸುರಿದುಕೊಳ್ಳುತ್ತಿದ್ದರೆ ಆಹ್ಲಾದವೇನೋ ಆಗುತ್ತದೆ. ಹಾಗೆಂದು ಅಗತ್ಯಕ್ಕಿಂತ ಹೆಚ್ಚು ಆಹ್ಲಾದ ಇನ್ನೊಬ್ಬರ ಅಗತ್ಯವನ್ನೇ ಕಿತ್ತುಕೊಂಡೀತು.

Sunday, March 8, 2009

ಕಾಲುವೆ ಕಾಲ ಮುಗೀತು, ಈಗ ಪೈಪ್‌ನದ್ದೇ ಕಾರುಬಾರು

ನೆಯ ಹಿರಿಯ ಮಗ, ಕಾಲುವೆ ಕೊನೆಯ ರೈತ- ಇಬ್ಬರೂ ಒಂದು ರೀತಿಯಲ್ಲಿ ಸಮಾನ ದುಃಖಿಗಳು. ಹೌದು, ಹಿರಿಯ ಮಗ, ಕೊನೆಯ ರೈತ ಇಬ್ಬರಿಗೂ ಉಳಿದದ್ದನ್ನು ಹಂಚಿಕೊಳ್ಳುವ ಅನಿವಾರ್ಯತೆ. ಒಂದೊಮ್ಮೆ ಉಳಿಯಲಿಲ್ಲವೆಂದರೂ ಸಹಿಸಿಕೊಳ್ಳಬೇಕು. ಕಾಲುವೆಯಲ್ಲಿ ಉದ್ದಕ್ಕೂ ಹರಿದು ಬರುವ ನೀರನ್ನು ಆರಂಭದ ಪ್ರದೇಶದಲ್ಲಿ ಇರುವ ರೈತರು ಹಂಚಿಕೊಂಡು ಬಿಡುತ್ತಾರೆ. ಜತೆಗೆ ಸೋರಿಕೆ, ಕಳ್ಳತನ. ಒಟ್ಟಾರೆ ಅದು ಕೊನೆ ಮುಟ್ಟುವ ವೇಳೆಗೆ ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುವ ಸ್ಥಿತಿ. ಎಷ್ಟೋ ವೇಳೆ ನೀರು ಕೊನೆ ತಲುಪುವುದೇ ಇಲ್ಲ.
ನೀರಿಗೇನು ಭೇದ; ಅದು ಅನುವಾದೆಡೆಗೆ ಆತುರ ತೋರಿ ನುಗ್ಗುತ್ತದೆ. ಒಂದು ರೀತಿಯಲ್ಲಿ ಬೆಂಗಳೂರಿನ ಸಿಗ್ನಲ್‌ಗಳಲ್ಲಿ ವಾಹನಗಳು ನುಗ್ಗಿದಂತೆ. ಹಸಿರು ದೀಪ ಬೀಳುವುದೇ ತಡ ಹಿಂದೆ ಮುಂದೆ ನೋಡದೇ ಮುನ್ನುಗ್ಗಿ ಹೋಗಿ ಬಿಡುತ್ತಾರೆ ವಾಹನ ಸವಾರರು. ಒಂದೊಮ್ಮೆ ಮುಂದೆಲ್ಲೋ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರೆ...? ಒಂದೆರಡು ಸೆಕೆಂಡ್ ನಿಂತು ನೋಡುತ್ತಾರೆ. ಇನ್ನು ಮುಂದೆ ಹೋಗುವುದು ಸಾಧ್ಯವಿಲ್ಲ ಎಂದರೆ ಕಾಯುವ ತಾಳ್ಮೆ ಯಾರಲ್ಲೂ ಇರುವುದಿಲ್ಲ. ಅಕ್ಕ-ಪಕ್ಕ, ಚಿಕ್ಕಪುಟ್ಟ ರಸ್ತೆಗಳಲ್ಲಿ ಡೀವಿಯೇಶನ್ ತೆಗೆದುಕೊಳ್ಳುತ್ತಾರೆ. ಅದೂ ಇಲ್ಲ ಎಂದರೆ ಓಣಿ, ಫುಟ್‌ಪಾತ್ ಎಲ್ಲೆಂದರಲ್ಲಿ ವಾಹನ ನುಗ್ಗಿಸಿಕೊಂಡು ಹೊರಟುಬಿಡುವುದೇ. ಒಟ್ಟಾರೆ ಹೋಗುತ್ತಿರಬೇಕು. ಒಂಚೂರೂ ವ್ಯತ್ಯಾಸವಿಲ್ಲ, ಕಾಲುವೆ ನೀರೂ ಹಾಗೆಯೇ ಹರಿಯುತ್ತ ಹೋಗುವಾಗ ಎದುರಿಂದ ಸ್ಪಲ್ಪ ತಡೆ ಹಾಕಿದರೂ ಸಾಕು, ಪಕ್ಕಕ್ಕೆ ನುಗ್ಗುತ್ತದೆ. ಗಮ್ಯ ಹೀಗೆಯೇ, ಇಲ್ಲಿಯೇ ಇರಬೇಕೆಂದೇನೂ ಇಲ್ಲ.
ನೀರಿನ ಇಂಥ ಗುಣವನ್ನು ರೈತರೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಕಾಲುವೆಗೆ ನೀರು ಬಿಟ್ಟರೆಂದರೆ ಸಾಕು. ಎಲ್ಲಿಗೆ ಬೇಕೆಂದರಲ್ಲಿಗೆ ತಿರುಗಿಸಿಕೊಂಡು ಹೋಗುತ್ತಾರೆ. ಅದು ಅಗತ್ಯವಿದೆಯೋ, ಇಲ್ಲವೋ ಎಂಬುದು ನಂತರದ ಪ್ರಶ್ನೆ. ಮುಂದಿನವರಿಗೂ ಉಳಿಯಲಿ, ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಲಿ ಎಂಬ ಸಮಾಜವಾದ ಇಲ್ಲೆಲ್ಲ ಕೆಲಸಕ್ಕೆ ಬರುವುದಿಲ್ಲ. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ದಮ್ಮೂರು ರೈತರಿಗೂ ಆದದ್ದು ಇದೇ. ಊರಿನಲ್ಲಿ ಇರುವುದು ಒಂದೇ ಕೆರೆ. ಅದರ ಅಚ್ಚುಕಟ್ಟು ಪ್ರದೇಶ ಒಟ್ಟು ೮೧ ಎಕರೆಗಳು. ಕೆರೆಯಿಂದ ಕಾಲುವೆಗೆ ಬಿಟ್ಟ ನೀರು ಅರ್ಧ ದಾರಿಗೆ ಬರುವಷ್ಟರಲ್ಲೇ ಅರ್ಧ ಹರಿವನ್ನು ಕಳೆದುಕೊಂಡು ಬಿಡುತ್ತಿತ್ತು. ಪುಕ್ಕಟೆ ಸಿಕ್ಕರೆ ನನಗೊಂದು, ನಮ್ಮಪ್ಪನಿಗೊಂದು ಎನ್ನುವ ಹಾಗೆ ಕಾಲುವೆ ಮೇಲ್ಭಾಗದ ರೈತರು ಮನಸ್ಸಿಗೆ ತೋಚಿದಂತೆ ನೀರನ್ನು ಬಳಸುವುದು ಸಾಮಾನ್ಯವಾಗಿತ್ತು. ಅಲ್ಲಿಂದ ಮುಂದೆ ಒಂದಷ್ಟು ಸೋರಿ, ಇನ್ನಷ್ಟು ಆರಿ....ಒಟ್ಟಾರೆ ಕೊನೆಯ ಭಾಗ ತಲುಪುವಷ್ಟರಲ್ಲಿ ರೈತನ ಗಂಟಲು ನೆನೆಸಿಕೊಳ್ಳಲು ನೀರುಳಿದರೆ ಅದು ಪುಣ್ಯ. ಆಡುವಂತಿಲ್ಲ ಅನುಭವಿಸುವಂತಿಲ್ಲ.
ದಿನಕ್ಕೊಂದು ಜಗಳ, ವಾರಕ್ಕೊಂದು ಪಂಚಾಯಿತಿ. ಬೀದಿಗೊಂದು ಪಂಗಡ, ಬಜಾರಿಗೊಂದು ಬಡಿದಾಟ. ಊರಿಗೆ ತಂಪೆರೆಯಬೇಕಿದ್ದ ನೀರು ಕೊನೆ ಕೊನೆಗೆ ದ್ವೇಷದ ದಳ್ಳುರಿಯನ್ನು ಹಬ್ಬಿಸಿಬಿಡುತ್ತದೆ. ನಂಬಬೇಕು ನೀವು; ಎಲ್ಲಕ್ಕೂ ಕಾರಣ ನೀರು. ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾದದ್ದಾಯಿತು, ಕಾಲುವೆ ಕಟ್ಟಿದ್ದಾಯಿತು. ಕೆರೆಯ ಕೊಳೆ ತೆಗೆದದ್ದಾಯಿತು....ಯಾವುದರಿಂದಲೂ ಪ್ರಯೋಜನವಿಲ್ಲ. ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ, ಕಾಲುವೆ ಕೊನೆಗೆ ನೀರು ಬರುವುದಿಲ್ಲ.
ಎಷ್ಟು ದಿನ ಅಂತ ಹೀಗೆ ಕಳೆದಾರು ? ಮೇಲಿನ ರೈತರು ಕಣ್ಣೆದುರೇ ಎರಡು ಮೂರು ಬೆಳೆ ತೆಗೆದುಕೊಳ್ಳುತ್ತಿರುವಾಗ ತಮಗೆ ಒಂದನ್ನೂ ದಕ್ಕಿಸಿಕೊಳ್ಳಲಾಗುವುದಿಲ್ಲ ಎಂಬುದು ಜುಗುಪ್ಸೆ ಹುಟ್ಟಿಸದಿದ್ದೀತೆ ? ಹಾಗೆ ಇರುವಾಗಲೇ ಮೂಡಿ ಬಂದದ್ದು ಸಮುದಾಯ ಆಧಾರಿತ ನೀರಾವರಿ ಅಲಿಯಾಸ್ ಬೇಡಿಕೆ ಆಧಾರಿತ ನೀರಾವರಿ ಪದ್ಧತಿ. ಹೆಸರು ಕೇಳಿ ಇದೇನೋ ಭಾರೀ ಯೋಜನೆ ಇರಬೇಕೆಂದು ಭಾವಿಸಬೇಕಿಲ್ಲ. ತುಂಬ ಎಂದರೆ ತುಂಬ ಸರಳ, ಎಲ್ಲರಿಗೂ ಎಲ್ಲ ಕಾಲಕ್ಕೂ ಅಗತ್ಯಕ್ಕನುಗುಣ, ನೀರು ಒದಗಿಸಲು ಎಲ್ಲರೂ ಯೋಚಿಸುವುದೇ ಯೋಜನೆಯ ಹೂರಣ. ಇಲ್ಲಿ ನೀರಿನ ಮೂಲವನ್ನು ಸ್ವಚ್ಛಗೊಳಿಸುವ ಜತೆಗೆ ಕಟ್ಟ ಕಡೆಯ ರೈತನಿಗೂ ಸಮರ್ಥ ಹರಿವನ್ನು ಕಟ್ಟಿಕೊಡುವುದು ಮುಖ್ಯ ಉದ್ದೇಶ. ಜಲಗಾಂವ್‌ನ ಜೈನ್ ಇರಿಗೇಶನ್‌ನ ಮೂಲ ಕಲ್ಪನೆಯ ಯೋಜನೆಯಲ್ಲಿ ಪ್ರಮುಖವಾಗಿ ನಾಲ್ಕು ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು. ಮೊದಲನೆಯದು ನೀರಿನ ಲಭ್ಯತೆಯನ್ನು ಹೆಚ್ಚಿಸುವುದು. ನಂತರ ಅಚ್ಚುಕಟ್ಟಿನ ಎಲ್ಲ ರೈತರಿಗೆ ಸಮ ಪ್ರಮಾಣದ ಅಥವಾ ಅಗತ್ಯಕ್ಕನುಗುಣ ನೀರಿನ ಹಂಚಿಕೆ ಮಾಡುವುದು. ಸಮರ್ಥ ಬಳಕೆಯನ್ನು ಕಾಪಾಡುವುದು. ಕೊನೆಯದಾಗಿ, ಅತ್ಯಂತ ಮುಖ್ಯವಾಗಿ ಸುಸ್ಥಿರತೆಯ ಜತೆಗೆ ವೆಚ್ಚ ಕಡಿಮೆ ಮಾಡುವುದು.
ಇದಕ್ಕಾಗಿ ಮೊದಲು ಇಡೀ ಜಲಾನಯನ ಪ್ರದೇಶದ ಸಮೀಕ್ಷೆ ಮಾಡಲಾಯಿತು. ನಂತರ ಆ ಪ್ರದೇಶಕ್ಕೆ ಸರಿ ಹೊಂದುವ ಯೋಜನೆ ರೂಪುಗೊಂಡಿತು. ಸನ್ನಿವೇಶಕ್ಕನುಗುಣವಾಗಿ ತಕ್ಕ ಪಂಪಿಂಗ್ ಮತ್ತು ಗುರುತ್ವಾಕರ್ಷಣೆ ಆಧಾರಿತ ನೀರು ಪೂರೈಕೆ ವ್ಯವಸ್ಥೆಯ ಅನುಷ್ಠಾನಕ್ಕೆ ಮುಂದಾಗಲಾಯಿತು. ದಮ್ಮೂರಿನ ಜಮೀನಿಗೆ ಒಂದಷ್ಟು ದಮ್ಮು ಬಂದದ್ದೇ ಆಗ. ಹರಿ ನೀರಾವರಿ, ಹನಿ ನೀರಾವರಿ ತುಂತುರು ನೀರಾವರಿ ಎಂಬು ಮೂರು ವಿಂಗಡಣೆಯನ್ನು ಮಾಡಿ ಅದಕ್ಕೆ ತಕ್ಕ ಪೈಪ್ ಜೋಡಣೆ ಕಾರ್ಯ ಆರಂಭವಾದಾಗಲೇ ರೈತರಲ್ಲಿ ವಿಶ್ವಾಸ ಮೂಡ ತೊಡಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕಾಲುವೆಯಲ್ಲಿ ಆಗುತ್ತಿದ್ದ ನೀರಿನ ಸೋರಿಕೆ ಮತ್ತು ಆವಿಯಾಗುವ ಪ್ರಮಾಣ ಪೈಪ್ ಜಾಲದಲ್ಲಿ ತಕ್ಷಣಕ್ಕೆ ನಿಯಂತ್ರಣಕ್ಕೆ ಬಂತು. ಇದರಿಂದ ಹರಿನೀರಾವರಿಯಲ್ಲಿ ಶೇ ೪೦ರಷ್ಟು ನಷ್ಟ ತಂತಾನೇ ಕಡಿಮೆಯಾಯಿತು. ಅದೇ ರೀತಿ ತುಂತುರು ನೀರಾವರಿಯಲ್ಲಿ ಶೇ. ೩೫ ಹಾಗೂ ಹನಿ ನೀರಾವರಿಯಲ್ಲಿ ಶೇ. ೭೫ರಷ್ಟು ನೀರಿನ ನಷ್ಟವನ್ನು ಕಡಿತಗೊಳಿಸಲು ಸಾಧ್ಯವಾದದ್ದು ಕಡಿಮೆ ಸಾಧನೆಯಲ್ಲ. ಇಷ್ಟಾದದ್ದೇ ಸಹಜವಾಗಿ ನೀರು ಕೊನೆ ಮುಟ್ಟ ತೊಡಗಿತ್ತು.
ಈ ಹಂತದಲ್ಲಿ ಊರಿನ ಎಲ್ಲ ರೈತರನ್ನು ಒಗ್ಗೂಡಿಸಿ ನೀರು ಲಭ್ಯತೆ ಹಾಗೂ ಅಗತ್ಯದ ಲೆಕ್ಕ ತೆಗೆಯಲಾಯಿತು. ಜಲದ ಲೆಕ್ಕಪರಿಶೋಧನೆ ಮುಗಿಯುತ್ತಿದ್ದಂತೆಯೇ ಮುಂದಿನ ಬಜೆಟ್ ಸಿದ್ಧವಾಯಿತು. ಒಟ್ಟು ೮೧ ಎಕರೆಯಲ್ಲಿ ೫೫ ಎಕರೆಗೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಲಾಯಿತು. ಉಳಿದ ಜಮೀನಿನಲ್ಲಿ ಬಹುತೇಕ ತುಂತುರು ನೀರಾವರಿಯನ್ನು ಆಯ್ದುಕೊಳ್ಳಲಾಗಿತ್ತು. ಬೆರಳೆಣಿಕೆಯಷ್ಟು ಜಮೀನಿನಲ್ಲಿ ಹರಿ ನೀರಾವರಿಯೂ ಇತ್ತು. ಸಮುದಾಯ ನೀರಾವರಿಯ ಚೊಚ್ಚಲ ಯೋಜನೆ ದಮ್ಮೂರಿನಲ್ಲಿ ಅನುಷ್ಠಾನ ಆಗಿ ಇದೀಗ ನಾಲ್ಕು ವರ್ಷ ಕಳೆದಿದೆ. ಒಂದು ಕ್ಯೂಸೆಕ್ ಸಾಮರ್ಥ್ಯದ ಊರಿನ ಕೆರೆ ಇತ್ತೀಚಿನ ಮೂವತ್ತು ವರ್ಷಗಳಲ್ಲಿ ಎರಡು ಬಾರಿ ಬಿಟ್ಟು ಉಳಿದೆಲ್ಲ ವರ್ಷ ಕೋಡಿ ಬಿದ್ದಿದೆ. ಇಷ್ಟಾಗಿಯೂ ಸಮುದಾಯ ಆಧಾರಿತ ನೀರಾವರಿ ಪರಿಚಯ ಆಗುವ ಮೊದಲು ೪೫ ಎಕರೆಯಷ್ಟು ಮಾತ್ರ ನೀರಾವರಿಗೆ ಒಳಪಟ್ಟಿತ್ತು. ಹೇಗೆ ಮಾಡಿದರೂ ಒಂದಕ್ಕಿಂತ ಹೆಚ್ಚು ಬೆಳೆಯನ್ನು ಪಡೆಯಲು ಆಗುತ್ತಿರಲಿಲ್ಲ. ಕೆಲವು ರೈತರು ಇದಕ್ಕೂ ಪರದಾಡಿದ ಉದಾಹರಣೆಗಳಿತ್ತು. ಇದೀಗ ಅದೇ ಕೆರೆಯಿಂದ ೩ ನೀರಾವರಿ ಆಗುತ್ತಿದೆ. ರೈತರು ಯಾವುದೇ ಗೊಂದಲವಿಲ್ಲದೇ ಮೂರು ಬೆಳೆಯನ್ನು ಪಡೆಯುತ್ತಿದ್ದಾರೆ ಎನ್ನುತ್ತಾರೆ ಜೈನ್ ಇರಿಗೇಶನ್‌ನ ನಿರ್ದೇಶಕರಲ್ಲೊಬ್ಬರಾದ ಅಜಿತ್ ಜೈನ್.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅನುಷ್ಠಾನಗೊಂಡ ಯೋಜನೆಗೆ ಒಟ್ಟು ೩೬ ಲಕ್ಷ ರೂ.ಗಳನ್ನು ಆರಂಭಿಕ ವೆಚ್ಚವಾಗಿ ವ್ಯಯಿಸಲಾಗಿದೆ. ಪ್ರಾಯೋಗಿಕ ಮಾದರಿ ಎಂಬ ಕಾರಣಕ್ಕೆ ಎಲ್ಲವನ್ನೂ ಸರಕಾರವೇ ಭರಿಸಿದೆ. ಕೆರೆಯಿಂದ ನೀರು ಪೂರೈಕೆಗೆ ತಲಾ ೨೫ ಎಚ್‌ಪಿಗಳ ಎರಡು ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಎಲ್ಲಕ್ಕಿಂತ ವಿಶೇಷವೆಂದರೆ ದಮ್ಮೂರಿನಲ್ಲಿ ಅಳವಡಿಸಿರುವ ಕೇಂದ್ರೀಕೃತ ನೀರು ನಿರ್ವಹಣೆ ಪದ್ಧತಿಯದ್ದು. ವೇರಿಯೇಬಲ್ ಫ್ಲೋ ಡಿಸ್‌ಚಾರ್ಜ್ ಸಿಸ್ಟ್‌ಮ್( ವಿಎಫ್‌ಡಿ) ಎಂದು ಗುರುತಿಸಲಾಗುವ ಈ ಹೊಸ ಅನ್ವೇಷಣೆಯಲ್ಲಿ ಪೈಪ್ ಲೈನ್‌ನಲ್ಲಿ ನಿರಂತರ ಹರಿವಿದ್ದಾಗ್ಯೂ ಪ್ರತೀ ರೈತನ ಅಗತ್ಯಕ್ಕೆ ಅನುಗುಣವಾಗಿ ಅಷ್ಟಷ್ಟೇ ನೀರೊದಗಿಸಲು ಸಾಧ್ಯವಾಗುವಂತೆ ವಿಶೇಷ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕೆರೆಯಿಂದ ಹೊರಬಿಡುವ ನೀರಿನ ಸಮತೋಲನವನ್ನು ಎಲ್ಲ ಕಾಲದಲ್ಲೂ ಕಾಪಾಡುವುದು ಈ ತಂತ್ರಜ್ಞಾನದ ಹೆಗ್ಗಳಿಕೆ. ಪೈಪ್ ಜಾಲಕ್ಕೂ ಕೆರೆಯ ತೂಬಿಗೂ ನಡುವೆ ಒಂದು ವಾಲ್ವ್ ಅಳವಡಿಸಲಾಗಿದ್ದು, ಪ್ರತಿ ಸೆಕೆಂಡಿಗೆ ೩೦ ಲೀಟರ್ ನೀರಿನ ಹೊರ ಹರಿವು ಇರುವಂತೆ ಇದು ನೋಡಿಕೊಳ್ಳುತ್ತದೆ. ನೀರನ್ನು ಹೊರಬಿಟ್ಟಾಗ ಇಷ್ಟು ಹರಿವು ಪೈಪ್ ಜಾಲದಲ್ಲಿ ನಿರಂತರವಾಗಿದ್ದರೂ ಆಯಾ ರೈತನಿಗೆ ಅಗತ್ಯವಿದ್ದಷ್ಟು ನೀರು ಮಾತ್ರ ಹಂಚಿಕೆಯಾಗುವುದು ಗಮನಾರ್ಹ ಸಂಗತಿ.
ಸಮುದಾಯ ಆಧಾರಿತ ನೀರು ಪೂರೈಕೆ ಯೋಜನೆಯಲ್ಲಿ ನೀರಿನ ನಷ್ಟ ಕಡಿತ, ಹೆಚ್ಚುವರಿ ಲಭ್ಯತೆ ಹಾಗೂ ಹೆಚ್ಚು ಉತ್ಪನ್ನದಿಂದಾಗಿ ಮೊದಲು ಐದು ವರ್ಷಗಳಲ್ಲೇ ಹೂಡಿಕೆಯ ಎಲ್ಲ ಮೊತ್ತವನ್ನು ಮರಳಿ ಗಳಿಸಲು ಸಾಧ್ಯ ಎಂಬ ವಿಶ್ವಾಸ ವ್ಯಕ್ತಪಡಿಸುವ ಅಜಿತ್ ಜೈನ್, ಈ ನಿಟ್ಟಿನಲ್ಲಿ ಶೇ.೯೦ರಷ್ಟು ಸಾಧನೆ ಈಗಾಗಲೇ ಸಾಧ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಿಜ ಸಮುದಾಯದ ಕಲ್ಪನೆ ಭಾರತೀಯ ಸನ್ನಿವೇಶಕ್ಕೆ ಹೊಸತೇನಲ್ಲ. ಮರೆತು ಹೋಗಿದ್ದ ಸಾಂಪ್ರದಾಯಿಕ ಪದ್ಧತಿಯೊಂದನ್ನು ಜೈನ್ ಸಮೂಹ ಮತ್ತೆ ಹೊಸ ಸ್ವರೂಪದಲ್ಲಿ ನೆನಪು ಮಾಡಿಕೊಟ್ಟಿದೆ. ಕವಿದ ವಿಸ್ಮೃತಿಯನ್ನು ಕಳೆದಿದೆ. ಅದು ಮುಂದುವರಿಯಬೇಕಷ್ಟೆ.
‘ಲಾಸ್ಟ್’ಡ್ರಾಪ್: ಮೋರ್ ಕ್ರಾಪ್ ಪರ್ ಡ್ರಾಪ್-ಹನಿ ನೀರಿಗೆ ಹೊರೆ ತೆನೆ...ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗೊಂದು ಸುಂದರ ಅನ್ವಯಿಕ ವಾಕ್ಯ.

Sunday, March 1, 2009

ಹನಿ ಹನಿ ನೀರಾವರಿ ಕಹಾನಿ

ಮೇಲಿಂದ ತುಂತುರು ಹನಿ ಚೆಲ್ಲುತ್ತಿದ್ದರೆ, ಅದಕ್ಕೆ ಮುಖ ಆನಿಸಿಕೊಂಡು ಇಂಚಿಂಚಾಗಿ ಆಕೆ ನೆನೆಯುತ್ತಿದ್ದಾಳೆ. ಜತೆಗೆ ತಂಗಾಳಿಗೆ ತೊನೆಯುತ್ತಿದ್ದಾಳೆ. ತಲೆ, ಮುಖ, ಎದೆಯ ಹರವನ್ನು ನೆನೆಸಿದ ಹನಿಗಳು ಮೆಲ್ಲಮೆಲ್ಲಗೆ ಜಾರುತ್ತಿವೆ. ಹೊಳೆಯುವ ಆ ಸುಂದರ ಮುಖಕ್ಕೆ ರಾಚಿದ ನೀರು, ಕಡೆದಿಟ್ಟ ಕೊರಳ ಕೆಳಗೆ ಜಾರಿ ಬರುತ್ತಿದ್ದರೆ ನೋಡುತ್ತಿದ್ದವರ ಎದೆಯಲ್ಲಿ ಹತ್ತಾರು ಢಕ್ಕೆ, ಡಮರುಗಗಳ ಡಿಂಡಿಮ. ಏರು ತಗ್ಗುಗಳ ದಾಟಿ ಸೊಂಟದ ಇಳಿಜಾರಲ್ಲಿ ನಿಲ್ಲಲಾಗದೇ ಆ ಹನಿಗಳು ಹಾಗೆಯೇ ಕೆಳಗಿಳಿಯುತ್ತಿವೆ. ತೂರಿ ಬರುವ ತುಂತುರು ಇಡೀ ದೇಹವನ್ನು ತೊಪ್ಪೆಯಾಗಿಸುತ್ತಿದ್ದರೆ ಆಕೆಗೆ ಅದೇನೋ ಆಹ್ಲಾದ. ಸಣ್ಣನೆಯ ಚಳಿಗೆ, ಹನಿಗಳ ಹಿತವಾದ ಸ್ಪರ್ಶಕ್ಕೆ ನಡು ಕಂಡೂ ಕಾಣದಂತೆ ನಡುಗುತ್ತಿದೆ. ನೋಡ ನೋಡುತ್ತಿದ್ದಂತೆ ಹನಿಗಳು ಪಾದಕ್ಕಿಳಿದು ಬಿಟ್ಟಿವೆ. ಈಗ ಆಕೆ ಸಂಪೂರ್ಣ ಒದ್ದೆ, ಒದ್ದೆ... ಆ ಬೆಟ್ಟದಲ್ಲಿ...ಬೆಳದಿಂಗಳಲ್ಲಿ....ಆಕೆ ಹಾಗೆ ನೆನೆಯುತ್ತ...ತೊನೆಯುತ್ತ ನಿಂತಿದ್ದರೆ...ಓಹ್...ಅದೆಂಥ ಅನುಭೂತಿ. ಸಾಕ್ಷಾತ್ ಅಪ್ಸರೆ ಮಜ್ಜನಕ್ಕಿಳಿದಂತೆ...!
ಇದೇನಿದು ? ನೀರಿನ ಬಗ್ಗೆ ಬರೆಯುವುದನ್ನು ಬಿಟ್ಟು ‘ವೆಂಕಟ ಇನ್ ಸಂಕಟ’ ಚಿತ್ರದ ಡ್ಯುಯೆಟ್‌ನಲ್ಲಿ ಶರ್ಮಿಳಾ ಮಾಂಡ್ರೆ ಎಂಬ ದಂತದ ಗೊಂಬೆಯನ್ನು ರಮೇಶ್ ಅರವಿಂದ್ ಕೃತಕ ಮಳೆ ಬರಿಸಿ ನೆನಸಿದ ದೃಶ್ಯ ಬಣ್ಣಿಸುತ್ತಿದ್ದಾರೆ ಎಂದುಕೊಳ್ಳಬೇಡಿ. ಜಲಗಾಂವ್‌ನ ಜೈನ್‌ಹಿಲ್‌ನಲ್ಲಿ ಯಾವುದೇ ಹಸಿರು ಹಸಿರು ಸಸಿಯ ಮುದೆ ಹೋಗಿನಿಂತು ನೋಡಿ. ಹನಿ ನೀರಾವರಿಯಡಿ ಅದು ಪಕ್ಕಾ ಶರ್ಮಿಳಾ ಮಾಂಡ್ರೆಯಂತೆಯೇ ನೆನೆಯುತ್ತ ನಿಂತಿರುತ್ತದೆ. ಆಕೆಗಿಂತ ಸುಂದರ ಲತಾ ಕನ್ನಿಕೆಯಾಗಿ ಅಲ್ಲಿನ ಹಸಿರಾಚ್ಛಾದಿತ ಗಿಡ ಮರಗಳು ಕಾಣುತ್ತವೆ. ಅವೆಲ್ಲವೂ ಭವರ್‌ಲಾಲ್ ಜೈನ್ ಎಂಬ ದೇಶಿ ಮೈಕ್ರೋ ನೀರಾವರಿ ಪದ್ಧತಿಯ ಹರಿಕಾರನ ಯಶೋಗಾಥೆಯ ನಾಯಕಿಯರು.
ಹೌದು, ದೇಶಿ ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿಯನ್ನಾಧರಿಸಿ ಚಿತ್ರವೊಂದನ್ನು ತೆಗೆಯಲು ಹೊರಟರೆ ಅದಕ್ಕೆ ನಮ್ಮ ಭಾವೂ ಅವರೇ ನಾಯಕರು. ಅವರೇ ನಿರ್ಮಾಪಕ, ನಿರ್ದೇಶಕ, ಸಂಭಾಷಣೆಕಾರ ಎಲ್ಲವೂ ಆಗಿ ನಿಲ್ಲುತ್ತಾರೆ. ಇಂದು ನೂರು ಎಕರೆಯ ಗುಡ್ಡವನ್ನು ಆಕ್ರಮಿಸಿಕೊಂಡು ನಿಂತಿರುವ ಹತ್ತಾರು ಬಗೆಯ ಫಲ, ಪುಷ್ಪ ಸಸ್ಯ ಪ್ರಭೇದಗಳೇ ನಾಯಕಿಯರಾಗುತ್ತಾರೆ. ‘ಜೈನ್ ಇರಿಗೇಶನ್’ ಎಂಬ ಸಾಮ್ರಾಜ್ಯದ ಕಥಾ ಹಂದರ ಬಿಚ್ಚಿಕೊಳ್ಳುವುದು ಸ್ಯಾಂಡಲ್‌ವುಡ್ ಶೈಲಿಯಲ್ಲಿಯೇ. ಸರಕಾರಿ ನೌಕರರಾಗಿ ಆರಾಮದಾಯಕ ಜೀವನ ನಡೆಸುವ ಬದಲು, ಒಬ್ಬ ಉದ್ಯಮಿಯಾಗಿ, ಯಶಸ್ವಿ ಕೃಷಿಕರಾಗಿ, ಭೂ ಪರಿವರ್ತಕರಾಗಿ ಭಾವು ಬೆಳೆದು ನಿಜ ಜೀವನದಲ್ಲೂ ನಾಯಕತ್ವಕ್ಕೇರಿದ ಕಥೆಯನ್ನು ಹಿಂದಿನ ವಾರಗಳಲ್ಲಿ ಈ ಅಂಕಣದಲ್ಲೇ ವಿಷದಪಡಿಸಲಾಗಿದೆ.
ಇಂದು ಹನಿ ನೀರಾವರಿಯನ್ನು ನೂರಕ್ಕೆ ನೂರು ದೇಶೀಯವಾಗಿಯೇ ಅಭಿವೃದ್ಧಿ ಪಡಿಸಿ ಒಣ ಭೂಮಿಯಲ್ಲೂ ಅಸೀಮ ಜೀವಂತಿಕೆಯನ್ನು ತುಂಬಿದ್ದರೆ ಅದು ಜೈನ್ ಇರಿಗೇಶನ್‌ನ ಸಾಧನೆ ಎನ್ನಬಹುದು. ಹಾಗೆಂದು ಜೈನ್ ಸಮೂಹಕ್ಕಿಂತ ಮೊದಲು ಹನಿ ಅಥವಾ ತುಂತುರು ನೀರಾವರಿಯ ಪರಿಚಯವೇ ಭಾರತದಲ್ಲಿರಲಿಲ್ಲ ಎಂದಲ್ಲ. ಇದ್ದರೂ ಇಷ್ಟೊಂದು ಜನಪ್ರಿಯತೆಯನ್ನು ಗಳಿಸಿರಲಿಲ್ಲ. ಮಾತ್ರವಲ್ಲ, ಬಹುತೇಕ ತಂತ್ರಜ್ಞಾನ, ಉಪಕರಣಗಳೆಲ್ಲವೂ ಜರ್ಮನಿಯಂಥ ದೇಶಗಳಿಂದ ಆಮದಾಗುತ್ತಿತ್ತು. ಮೊದಲ ಬಾರಿಗೆ ಭವರ್‌ಲಾಲ್ ಜೈನ್ ಈ ನೆಲಕ್ಕೆ ನಮ್ಮದೇ ನೀರಾವರಿ ಪದ್ಧತಿಯ ಜ್ಞಾನ ಶಿಸ್ತೊಂದನ್ನು ದಕ್ಕಿಸಿಕೊಡಲು ಮುಂದಾದರು.
ಅದಕ್ಕೆ ಕಾರಣವಾದ ಅಂಶ ಮತ್ತದೇ ಅಭಾವ. ಯಾವಾಗ, ಯಾವುದರ ಅಭಾವ ಕಂಡು ಬರುತ್ತದೆಯೋ ಆಗ ಅದರ ಮೌಲ್ಯ ತಂತಾನೇ ಹೆಚ್ಚುತ್ತ ಹೋಗುತ್ತದೆ. ಅದರ ಬಳಕೆಯಲ್ಲಿ ಜಿಪುಣತನ ಇಣುಕುತ್ತದೆ. ಸಾಧ್ಯವಾದಷ್ಟು ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬ ಹಪಹಪಿತನ ಮನೆಮಾಡುತ್ತದೆ. ಇನ್ನು ವ್ಯಾಪಾರೀ ಮನೋಭಾವದವರಾದರಂತೂ ಮುಗಿದೇ ಹೋಯಿತು; ಅಪ್ಪಿ ತಪ್ಪಿಯೂ ಅದರ ದುರ್ಬಳಕೆ ಆಗದಂತೆ ಎಚ್ಚರವಹಿಸುತ್ತಾರೆ. ನೀರಿನ ವಿಚಾರದಲ್ಲಿ ಭವರಲಾಲ್ ಕೈಗೊಂಡ ಎಲ್ಲ ಉಪಕ್ರಮದ ಹಿಂದೆ ಇದೇ ವ್ಯಾಪಾರಿ ಮನೋಭಾವ ಇತ್ತೆಂಬುದು ಸತ್ಯವಾದರೂ ಇಂದು ಕೃಷಿಯಲ್ಲಿ ಇರಬಹುದಾದ ಸಾಧ್ಯತೆಗಳೇನಕವನ್ನು ತೋರಿಸಿದ್ದು ಅವರೇ. ಹತ್ತಿರ ಹತ್ತಿರ ಸಾವಿರ ಎಕರೆಯ ಬೋಳು ಬೆಟ್ಟಕ್ಕೆ ಸಂಸ್ಕಾರ ನೀಡಿ, ತಾರಸೀಕರಣ, ಮಳೆ ಕೊಯ್ಲಿನ ಸಾಹಸಗಳನ್ನು ಕೈಗೊಂಡು ಒಂದಷ್ಟು ನೀರನ್ನು ದುಡಿದುಕೊಳ್ಳಲಾರಂಭಿಸಿದ ಮೇಲೆ ಅದನ್ನು ಎಗ್ಗು ಸಿಗ್ಗಿಲ್ಲದೇ ಬಳಸಲು ಮನಸ್ಸು ಬರಲಿಲ್ಲ, ಎಂಬುದಕ್ಕಿಂತ ಅಷ್ಟೊಂದು ವಿಸ್ತಾರದ ನೆಲದ ದಾಹವನ್ನು ತೀರಿಸುವ ಸವಾಲು ಎದುರಾಯಿತು. ಅಂಥ ಅನಿವಾರ್ಯ ಸನ್ನಿವೇಶದಲ್ಲೇ ಭಾವು ಹನಿ ನೀರಾವರಿಯೆಡೆಗೆ ಹಣುಕಿದ್ದು.
ಇಂದು ಪೈಪ್, ಪಿನ್, ವಾಯ್ಷರ್‌ಗಳಿಂದ ಹಿಡಿದು ತಂತ್ರಜ್ಞಾನ, ಅನುಷ್ಠಾನದ ವರೆಗೆ ಎಲ್ಲವೂ ಸರ್ವತಂತ್ರ ಸ್ವತಂತ್ರ. ನಿಮ್ಮ ಜಮೀನಿನಂಗಳಕ್ಕೆ ಬಂದು ಜೈನ್ ಸಿಬ್ಬಂದಿ ಸೌಲಭ್ಯವನ್ನು ಅಳವಡಿಸಿಕೊಟ್ಟು ಹೋಗುತ್ತಾರೆ. ಮಾತ್ರವಲ್ಲ ನೀರ ನೆಮ್ಮದಿಯ ಹತ್ತು ಹಲವು ಮಾರ್ಗೋಪಾಯದ ಬಗ್ಗೆ ವಿಪುಲ ಮಾಹಿತಿಯ ಧಾರೆಯನ್ನೂ ನಿಮ್ಮ ಮನದಂಗಳಕ್ಕೂ ಹರಿಸುತ್ತಾರೆ. ಭಾವು ಮಾತುಗಳಲ್ಲೇ ಹೇಳುವುದಾದರೆ ಹರಿ ನೀರಾವರಿಯೆಂದರೆ ಭಕ್ಷ್ಯ ಭೋಜ್ಯಗಳನ್ನು ಹೊಟ್ಟೆ ಬಿರಿಯೆ ತಿಂದು ವಾಕರಿಕೆ ಹುಟ್ಟಿಸಿಕೊಂಡು, ಆದರೂ ಬಿಡದೇ ಹೇಗಾದರೂ ಮಾಡಿ ಒಂದಷ್ಟು ಮೈದುಂಬಿಕೊಂಡು ಬಿಡಬೇಕು ಎಂಬ ಹೆಬ್ಬಯಕೆ ಇದ್ದಂತೆ. ಆದರೆ ಹನಿ ನೀರಾವರಿಯೆಂದರೆ ಅದು ಬಿನ್ನಾಣಗಿತ್ತಿಯ ಮೈ ಮಾಟ ರೂಪಿಸುವ ಜಾಣತನದ ಡಯೆಟಿಂಗ್. ಮಾಡೆಲ್‌ಗಳು ಕ್ಯಾಲೋರಿ ಲೆಕ್ಕದಲ್ಲಿ ಪೌಷ್ಟಿಕಾಂಶಯುಕ್ತ ಗುಣಮಟ್ಟದ ಆಹಾರ ಸೇವಿಸಿದಂತೆಯೆ, ಇಲ್ಲಿ ನೀರು-ಗೊಬ್ಬರ ಎಲ್ಲವೂ ಲೆಕ್ಕಾಚಾರದ ಪ್ರಕಾರವೇ ಪೂರೈಕೆಯಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಔಷಧವನ್ನು ನೇರವಾಗಿ ನರಕ್ಕೇ ಸಲೈನ್ ಮಾಡಿದಂತೆ, ಸಸಿಗಳಿಗೆ ಅಗತ್ಯ ನೀರನ್ನು ನೇರವಾಗಿ ಬೇರುಗಳಿಗೇ ಪೂರೈಸುವುದು ಹನಿ ನೀರಾವರಿ ಪದ್ಧತಿಯ ಲಾಭವೂ ಹೌದು, ವೈಶಿಷ್ಟ್ಯವೂ ಹೌದು.
ಮೈಕ್ರೊ ನೀರಾವರಿ ಪದ್ಧತಿಯ ಅತಿಮುಖ್ಯ, ಆರೋಗ್ಯಕಾರಿ ಲಕ್ಷಣವೆಂದರೆ ನೀರು-ಮಣ್ಣು ಎರಡರ ಆರೋಗ್ಯವೂ ಸಂರಕ್ಷಣೆಯಾಗುವುದು. ಹರಿ ನೀರಾವರಿಯಿಂದ ನೇರ ಧಕ್ಕೆಗೊಳಗಾಗುವುದು ಮೇಲ್ಮಣ್ಣು. ಒಂದೇ ಅದು ಕೊಚ್ಚಿಹೋಗಿ ಸಾರರಹಿತವಾಗಿಬಿಡುತ್ತದೆ. ಇಲ್ಲವೇ ಅಕ ನೀರು ನಿಂತು ಕ್ಷಾರದ ಪ್ರಮಾಣ ಹೆಚ್ಚಿ ಭೂಮಿ ಜವಳಾಗಿ ಪರಿವರ್ತನೆಯಾಗುತ್ತದೆ. ಜೈನ್ ಪದ್ಧತಿಯಲ್ಲಿ ನೀರಿನೊಂದಿಗೇ ದ್ರಾವಣದ ರೂಪದಲ್ಲಿ ಗೊಬ್ಬರವನ್ನೂ ಪೂರೈಸಲಾಗುತ್ತದೆ. ಇದರಿಂದ ಮಾನವ ಶ್ರಮ ಹಾಗೂ ಸಮಯ ಎರಡರ ಉಳಿತಾಯವೂ ಆಗುತ್ತದೆ. ಗೊಬ್ಬರ ನೀರಿನೊಂದಿಗೆ ನೇರವಾಗಿ ಬೇರುಗಳನ್ನೇ ತಲುಪುವುದರಿಂದ ಉಳಿತಾಯ ಸಾಧ್ಯವಾಗುತ್ತದಲ್ಲದೇ ಉತ್ತಮ ಇಳುವರಿ ಪಡೆಯಲೂ ಸಾಧ್ಯವಾಗುತ್ತದೆ. ಬೆಳೆಯ ಗುಣಮಟ್ಟ ವೃದ್ಧಿಸುತ್ತದೆ. ಬೇಗ ಕೊಯ್ಲಿಗೂ ಬರುತ್ತದೆ ಎನ್ನುತ್ತಾರೆ ಸಂಸ್ಥೆಯ ನಿರ್ದೆಶಕರೊಬ್ಬರಲ್ಲಾದ ಅಮಿತ್ ಜೈನ್.
ಕೃಷಿಯ ಬಹುದೊಡ್ಡ ಸಮಸ್ಯೆ ಕಳೆ ನಿಯಂತ್ರಣದ್ದು. ಏನೇ ಮಾಡಿದರೂ ಬೆಳೆಯ ನಡುವೆ ಅದಕ್ಕಿಂತ ಹುಲುಸಾಗಿ ಬೆಳೆದು ನಿಲ್ಲುವ ಕಳೆಯನ್ನು ಹದ್ದುಬಸ್ತಿನಲ್ಲಿಡಲು ರೈತ ಹೆಣಗಾಡಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನೀರು ಹಾಗೂ ಗೊಬ್ಬರ ಗಿಡದ ಬುಡಕ್ಕಷ್ಟೇ ಬೀಳದೇ ಸುತ್ತೆಲ್ಲಕ್ಕೂ ಹರಡಿ ಹೋಗುತ್ತದೆ. ಆದರೆ ಹನಿ ನೀರಾವರಿಯಲ್ಲಿ ಖಾಲಿ ಜಾಗಕ್ಕೆ ಪ್ರಾಮುಖ್ಯ ಇಲ್ಲ. ಹೀಗಾಗಿ ಕಳೆ ಹುಟ್ಟುವುದೇ ಕಡಿಮೆ. ಹರಿ ನೀರಾವರಿಗಿಂತ ಹನಿ ಪದ್ಧತಿಯಲ್ಲಿ ಶೇ. ೩೦ರಿಂದ ಶೇ ೬೮ರಷ್ಟು ನೀರಿನ ಉಳಿತಾಯ ಸಾಧ್ಯವಾಗುತ್ತದೆ. ಇದರಿಂದ ಬೆಳೆಯಲ್ಲಿನ ರೋಗ ನಿಯಂತ್ರಣವೂ ಸಾಧ್ಯವಾಗುತ್ತದೆ ಎಂಬುದು ಇನ್ನೊಂದು ವೈಶಿಷ್ಟ್ಯ. ಏಕೆಂದರೆ ತೇವಾಂಶ ಹೆಚ್ಚಿದ್ದ ನೆಲದಲ್ಲಿ ರೋಗಗಳ ಸಾಧ್ಯತೆ ಹೆಚ್ಚು. ಇನ್ನು ಕೀಟಗಳು ಮೊಟ್ಟೆಯಿಟ್ಟು, ಬೆಳವಣಿಗೆ ಕಾಣುವುದು ಎಲೆಗಳಲ್ಲಿ ಎಂಬುದು ಗೊತ್ತೇ ಇದೆ. ಅದೂ ನೀರು ಬೀಳುತ್ತಿರುವ ಎಲೆಗಳಲ್ಲಿ ಇದರ ಸಾಧ್ಯತೆ ಅಕ. ಹನಿ ನೀರಾವರಿ ಪದ್ಧತಿಯಲ್ಲಿ ಎಲೆಯ ಮೇಲೆ ನೀರು ಬೀಳುವ ಪ್ರಶ್ನೆಯೇ ಇಲ್ಲ. ಹೀಗಾಗಿ ಕೀಟಗಳ ಸಂತಾನ ವೃದ್ಧಿ ಕಷ್ಟದಾಯಕವಾಗುತ್ತದೆ.
ಇನ್ನು ಇಂಧನ ಉಳಿತಾಯ, ಎಲ್ಲರಿಗೂ ನೀರಿನ ಸಮಾನ ಹಂಚಿಕೆ, ಇಳಿಜಾರು ಭೂಮಿಯಲ್ಲೂ ಕೃಷಿಯ ಸಾಧ್ಯತೆ....ಹೀಗೆ ಅನುಕೂಲಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂಥ ಎಲ್ಲ ಸಾಧ್ಯತೆಯ ಬಗ್ಗೆ ಅರಿವು ಮೂಡಿಸಿ ಭಾರತದಲ್ಲಿ ಅದರಲ್ಲೂ ದಕ್ಷಿಣದ ರಾಜ್ಯಗಳಲ್ಲಿ ಪುಟ್ಟದೊಂದು ಆಂದೋಲನವನ್ನೇ ಹುಟ್ಟುಹಾಕಿ ಬೃಹತ್ ಉದ್ದಿಮೆಯಾಗಿ ಬೆಳೆದು ನಿಂತಿರುವ ಜೈನ್ ಸಮೂಹ ತನ್ನೊಂದಿಗೆ ಕೃಷಿಕನನ್ನೂ ಸೊಂಪಾಗಿಸಿದೆ. ಸ್ವಯಂಚಾಲಿತ ನೀರು ಪೂರೈಕೆಯಂಥ ಹೊಸ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಿದೆ. ಭಲೇ ಭಾವೂಜಿ !
‘ಲಾಸ್ಟ್’ಡ್ರಾಪ್: ಸೌಂದರ್ಯಕ್ಕೆ ಎರಡು ಹೆಸರುಗಳು ನೀರು-ನೀರೆ. ನೀರೊಳಗೇ ನೀರೆಯಿದ್ದರೆ ಆಕೆಯೇ ಅಪ್ಸರೆ !