Friday, June 19, 2009

ಜಡವಲ್ಲ ಚಿಟಪಟ ಮಳೆ; ತರುವುದು ಜೀವ ಕಳೆ

ಬಿಟ್ಟೆನೆಂದು ದೂರ ದೂರ
ಸರಿದಷ್ಟೂ ಸೆಳೆವುದಿವಳ
ಬಂಗಾರದ ರೇಸಿಮೆಯೆಳೆ ಸೂಜಿಗಲ್ಲ ಸೂತ್ರವು !


ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರು ಅದಾವ ದೃಷ್ಟಿಯಲ್ಲಿಟ್ಟು ಈ ಸಾಲುಗಳನ್ನು ಬರೆದರೋ ಗೊತ್ತಿಲ್ಲ. ಆದರೆ, ಇವುಗಳನ್ನು ಓದಿಕೊಂಡಾಗಲೆಲ್ಲ ಮಳೆ ಕನ್ನಿಕೆಯ ಲಾಸ್ಯ ಕಲ್ಪನೆಗೆ ನಿಲುಕಿದರೆ ಅದು ಕವನದ ಸಾತತ್ಯಕ್ಕೆ ಧಕ್ಕೆ ತರಲಾರದು. ನವಿರು ಭಾವನೆಗಳ ಉದ್ರೇಕಿಸಿ, ಸಾಕ್ಷಾತ್ ನಾಟ್ಯ ಸರಸ್ವತಿಯನ್ನೇ ಕಣ್ಣೆದುರಿಗೆ ಕಟ್ಟಿಕೊಡುವ ಮಳೆಯ ದಿನಗಳನ್ನು ಕೇವಲ ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವೇ ಎಂಬ ಅನುಮಾನ ಕಾಡದೇ ಉಳಿಯುವುದಿಲ್ಲ. ಅಂಥ ದಿವ್ಯ ಅನುಭೂತಿಗೆ ಬೇಕಿರುವುದು ಕೇವಲ ಮುಗ್ಧ ಮನಸೇ ಹೊರತು, ತರ್ಕ-ವಿಶ್ಲೇಷಣೆಗಳಲ್ಲ. ಬೇರಾವುದೇ ಉಪಮೆ ತೀರಾ ಸಪ್ಪೆಯೆನಿಸುತ್ತದಾದರೂ ಅಭಿವ್ಯಕ್ತಿ ಪಥದಲ್ಲಿ ಒಬ್ಬ ಬರಹಗಾರನಿಗೆ ಅನ್ಯ ಮಾರ್ಗವಿಲ್ಲ. ಮಳೆಯೆಂಬುದು ಕೇವಲ ಭೌತಿಕ, ನಿಸರ್ಗ ಸಹಜ ವ್ಯಾಪಾರಗಳಲ್ಲಿ ಒಂದೆಂದುಕೊಳ್ಳುವವರಿಗೆ ಇದಾವುದೂ ರುಚಿಸಲು ಸಾಧ್ಯವೇ ಇಲ್ಲ ಎಂಬ ಪ್ರಜ್ಞೆ ಇದ್ದೇ ಇದೆ. ಆದರೆ ಅದನ್ನೂ ಮೀರಿ ಪುಟ್ಟದೊಂದು ಭಾವಜಾಗರಣದ ಮಾತಿಗೆ ಕುಳಿತರೆ, ಮಳೆ ನಮ್ಮ ಅಂತಃಸತ್ವವನ್ನು ಕೆದಕಿ, ಜೀವನ ಪ್ರೀತಿಯ ಪ್ರತಿಮೆಯಾಗಿ ನಿಲ್ಲುತ್ತದೆ.

ಹೌದು, ಸಂಗೀತ ಇಷ್ಟವಾಗುವವರಿಗೆಲ್ಲ ಸುಶ್ರಾವ್ಯವಾಗಿ ಹಾಡಲು ಬರುವುದಿಲ್ಲ. ಹಾಗೆಯೇ ಮಳೆಯಿಂದ ತನಿಯೆರಿಸಿಕೊಂಡವರಿಗೆಲ್ಲ ಅದರೊಂದಿಗೆ ಸಂವಾದಿಸಲಾಗುವುದಿಲ್ಲ. ಆದರೆ, ಮೌನಕ್ಕೆ ಮಾತಿಗಿಂತಲೂ ಹೆಚ್ಚಿನ ಶಕ್ತಿ ಇದೆಯೆಂಬುದನ್ನು ಒಪ್ಪಬಹುದಾದರೆ- ದಿನವಿಡೀ ಮುಕ್ಕರಿಕೊಂಡು ನಿಲ್ಲುವ ಮಳೆ ಹನಿಗಳ ಮುಂದೆ ಒಂದಷ್ಟು ಹೊತ್ತು ಮೌನವಾಗಿ ನಿರಕಿಸುತ್ತ ಕುಳಿತರೂ ಸಾಕು, ಅದು ನಮ್ಮ ಮನದ ಮೂಲೆಯನ್ನು ತಡಕಿ ಅದರೊಳಗಿನ ಎಲ್ಲ ದುಗುಡ-ದಡಕಿಗಳನ್ನು ಸ್ತಬ್ಧಗೊಳಿಸದಿದ್ದರೆ ಕೇಳಿ. ಅದರ ಶಕ್ತಿಯೇ ಅಂಥದ್ದು; ಒಂದು ರೀತಿಯಲ್ಲಿ ಅಮ್ಮನ ಮಡಿಲಿನಂತೆ; ಆತ್ಮಸಖಿಯ ಬಿಸಿ ಅಪ್ಪುಗೆಯಂತೆ. ಕಲ್ಲವಿಲಗೊಂಡ ಮನಸನ್ನು ಸಂತೈಸಿ, ಕಲ್ಮಷಗಳ ತೊಳೆದು, ಕಾರ್ಪಣ್ಯಗಳೆಲ್ಲವನ್ನೂ ಕ್ಷಣದಲ್ಲಿ ಮರೆಸಿ ಚೇತರಿಕೆಯ ಚಿಲುಮೆಯನ್ನು ಚಿಮ್ಮಿಸುತ್ತದೆ. ಕುಣಿ ಕುಣಿಯುತ್ತ ತನ್ನ ತೋಳ್ತೆಕ್ಕೆಗೆ ಬಂದವರನ್ನಂತೂ ಹುಚ್ಚೆದ್ದು ಕುಣಿಸಿ, ತಣಿಸಿ ನಿರುಂಬಳ ಭಾವದಲ್ಲಿ ಮೀಯಿಸಿಬಿಡುತ್ತದೆ.


ಅಪರೂಪಕ್ಕೊಮ್ಮೊಮ್ಮೆ ಗೆಳೆಯನಂತಾದಾಗ
ಎದೆಯ ಕಳವಳವೆಲ್ಲ ಕರಗಿದಂತೆ
ಮೊದಲ ಮಳೆ ಬಂದ ಕ್ಷಣ ನೆಲವೆಲ್ಲ ತಂಪಾಗಿ
ಹುಡಿಮಣ್ಣ ಸೌಗಂಧ ಹರಡಿದಂತೆ.....


ಅಪರೂಪದ ಅನುಭವವನ್ನು ಬಣ್ಣಿಸುವಾಗಲೂ ಕವಿ ಮತ್ತೆ ಮಳೆ ಹನಿಗಳನ್ನೇ ಉಪಮೆಯಾಗಿ ಬಳಸುತ್ತಾನೆ. ಹಾಗೆ ನೋಡಿದರೆ, ಮಳೆಯೆಂಬುದು ನಿಸರ್ಗವನ್ನಷ್ಟೇ ಚಿಗುರಿಸುವುದಿಲ್ಲ; ಇಡೀ ಭೂಮಂಡಲದ ಜೀವ ಕೋಟಿಯ ಪುನರುತ್ಥಾನಕ್ಕೇ ಮೂಲ ಕಾರಣವಾಗುತ್ತದೆ. ಅಂಥ ಜೀವ ಸ್ರೋತಕ್ಕೆ ಬೇರಾವುದೂ ಪರ್ಯಾಯವಾಗಲು ಸಾಧ್ಯವೇ ಇಲ್ಲ. ಬೇಕಿದ್ದರೆ ನೀವೊಮ್ಮೆ ಇದನ್ನು ಪ್ರಯೋಗಕ್ಕಿಟ್ಟು ನೋಡಿ.ಒಂದು ಸಸಿಗೆ ಸಾಕು ಸಾಕೆನಿಸುವಷ್ಟು ನೀರುಣಿಸಿದರೂ ಅದು ಹೆಚ್ಚೆಂದರೆ ಚಿಗಿತು ನಿಲ್ಲಬಹುದು. ಆದರೆ ಜೀವ ಚೈತನ್ಯದೊಂದಿಗೆ ಅದು ನಳನಳಿಸಬೇಕಿದ್ದರೆ ಮಳೆ ಹನಿಗಳೊಂದಿಗೆ ಲಾಸ್ಯವಾಡಲೇ ಬೇಕು. ಮಳೆ ಬಂದು ನಿಂತ ಮರುಕ್ಷಣದ ಆಹ್ಲಾದವೇ ಬೇರೆ. ಮರ-ಗಿಡಗಳಷ್ಟೇ ಅಲ್ಲ, ನಮ್ಮೊಳಗೂ ಅದೆಂಥದೋ ಪುಳಕ ತುಂಬಿ ತುಳುಕಲಾರಂಭಿಸಿರುತ್ತದೆ.
ಒಂದೊಂದು ಮಳೆಯದ್ದು ಒಂದೊಂದು ಪರಿ. ಆರಂಭದಲ್ಲೇ ಕಣ್ಣಾ ಮುಚ್ಚಾಲೆಯಾಟವಾಡುವ ಅಶ್ವಿನಿಯದ್ದು ತುಂಟತನ. ಕಾದು ಕುಳಿತ ಧರಣಿಯನ್ನು ತಣಿಸುವ ಧಾವಂತ ಭರಣಿಯದ್ದು. ಕೃಷಿ ಕೃತ್ಯಗಳಿಗೆ ಅನುವು ಮಾಡಿಕೊಡುವವಳು ಕೃತ್ತಿಕೆ. ರೋಹಿಣಿ ಒಮ್ಮೊಮ್ಮೆ ರಚ್ಚೆ ಹಿಡಿದು ಕೂರುವ ಮಗುವಿನಂತೆ, ಹಿಡಿದಳೆಂದರೆ ರಾಚಿ ಹೋಗಿಬಿಡುತ್ತಾಳೆ. ಮೃಗಶಿರಾ ಹೆಸರಿಗೆ ತಕ್ಕಂತೆ ಎಲ್ಲ ಜೀವಸಂಕುಲದ ನೆತ್ತಿ ತಣಿಸದಿರಳು. ಧೋಗುಡುತ್ತ ಆಗಸದಿಂದ ಧುಮ್ಮಿಕ್ಕಿ ಬರುವ ಅಬ್ಬರದ ಆರಿದ್ರೆಯದ್ದೊಂದು ಪರಿ. ಅದು ಪಕ್ಕಾ ಹಠಮಾರಿ ಹೆಣ್ಣು. ಉದುಗುದುಗಿ ಸುರಿದು ಈ ಇಳೆಯೊಳಗಿನ ಎಲ್ಲ ಕಲ್ಮಷಗಳನ್ನೂ ಉಡುಗಿಸಿ ಹೋಗಿಬಿಡುತ್ತದೆ...ಪುನರ್ವಸು ಪುಷ್ಯೆಯರದ್ದು ಯಾವತ್ತೂ ಜತೆಯಾಟ. ಗ್ರಾಮೀಣ ಭಾಗದಲ್ಲಿ, ಅದರಲ್ಲೂ ಮಲೆನಾಡಿನಲ್ಲಿ ಅಣ್ಣತಮ್ಮನ ಮಳೆಯೆಂದೇ ಗುರುತಿಸುವ ಇವೆರಡೂ ಮುನಿಸಿಕೊಂಡು ಕುಳಿತವೆಂದರೆ ಆ ವರ್ಷ ಅರೆ ಹೊಟ್ಟೆಯೇ ಗತಿ. ಆಶ್ಲೇಷಾ ಆದರಿಸುವವಳಾದರೆ, ಮಘಾ ಮೊಗೆಮೊಗೆದು ಸುರಿಯುತ್ತಾಳೆ. ಪುಬ್ಬಾ ಉಬ್ಬುಬ್ಬಿ ಉಕ್ಕುವವಳು. ಉತ್ತರೆ ನಮ್ಮ ಬದುಕಿಗೆ ಉತ್ತರದಾಯಿ. ಹಸ್ತೆಯದ್ದು ಯಾವಾಗಲೂ ಅಭಯ ಹಸ್ತ. ಚಿತ್ತ ಚಿತ್ತೈಸಿದರೆ ಇನ್ನು ಚಿಂತೆಯಿಲ್ಲ. ಸ್ವಾತಿಯ ಆಗಮನದ ಹೊತ್ತಿಗೆ ನಿಸರ್ಗದಲ್ಲೊಂದು ಹೊಸ ಚೈತನ್ಯ ಮೊಳೆಯಲಾರಂಭಿಸುತ್ತದೆ. ಅಷ್ಟರಲ್ಲಿ ಇಳಾ ದೇವಿ ಹೊಸ ಹೆಣ್ಣು ಮೈಕೈ ತುಂಬಿ ನಿಂತುಕೊಂಡಂತೆ ಭಾಸವಾಗುತ್ತಿರುತ್ತಾಳೆ. ಹೀಗೆ ಮಳೆ ಮಹಾ ನಕ್ಷತ್ರಗಳು ಒಂದೊಂದೂ ಒಂದೊಂದು ವೈಶಿಷ್ಟ್ಯದೊಂದಿಗೆ ಗಮನ ಸೆಳೆಯುತ್ತವೆ.


ಅದು ಮನೆಯಂಗಳದಲ್ಲಿ ಹುಟ್ಟಿಸುವ ಬೆರಗುಗಳನ್ನು ಮನದಂಗಳದಲ್ಲಿ ತುಂಬಿಕೊಂಡರೆ ಮಾತ್ರ ಮಳೆಯ ನೈಜ ಮೌಲ್ಯವನ್ನು ಅರಿಯಲು ಸಾಧ್ಯ. ಅದಿಲ್ಲದಿದ್ದರೆ ಮಳೆಗಾಲ ಶುರುವಿಟ್ಟುಕೊಂಡಾಕ್ಷಣ ಗೊಣಗಲಾರಂಭಿಸುವುದು ಸಹಜ. ‘ಥೂ.... ಇದೆಂಥಾ ಪಿರಿಪಿರಿ ಮಳೆ...ಬೆಳಗ್ಗಿನಿಂದ ಹಿಡಿದದ್ದು ಬಿಡಲೇ ಇಲ್ಲ. ಯಾವ ಕೆಲಸ ಕಾರ್ಯಗಳೂ ಇಲ್ಲದಾಗಿದೆ...’ ಇಂಥ ಸಿಡಿಮಿಡಿಗಳಿಗೆ ನಾವುಗಳೂ ಎಷ್ಟೋ ಬಾರಿ ಸಾಕ್ಷಿಯಾಗಿದ್ದೇವೆ. ಯೋಚಿಸಿ ನೋಡಿ, ಒಂದೊಮ್ಮೆ ಅಂಥ ಸಣ್ಣನೆಯ ಸಾಂತ್ವನ ಈ ಧರೆಗೆ ದಕ್ಕದೇ ಹೋದರೆ ಅಂತರ್ಜಲ ಪುನಶ್ಚೇತನಗೊಳ್ಳಲು ಸಾಧ್ಯವೇ ? ಕೆಲವೊಮ್ಮೆ ಬಿಟ್ಟೂ ಬಿಡದೇ ವಾರಗಟ್ಟಲೇ ಸುರಿಯುವ ಮಳೆಯನ್ನು ಕಂಡಾಗ ‘ಇದೆಂಥ ದರಿದ್ರ ಮಳೆ. ಹೊರಗೆ ಕಾಲಿಡಲೂ ಅವಕಾಶ ಕೊಡ್ತಿಲ್ಲ....ಸಾಕಪ್ಪಾ ಸಾಕು. ಯಾವಾಗ ಮುಗಿಯುತ್ತೋ ಈ ಮಳೆಗಾಲ...’ ಎಂದು ನಮ್ಮೊಳಗೇ ಬಯ್ದುಕೊಂಡದ್ದಿದೆ. ಈ ರೀತಿ ಸಾಕಪ್ಪಾ ಸಾಕು ಎಂದೆನಿಸಿದಾಕ್ಷಣ ಮಳೆ ನಿಂತು ಹೋಗಿ ಬಿಟ್ಟರೆ ನಮ್ಮ ನಿಮ್ಮ ಗತಿಯೇನಾದೀತು ಕಲ್ಪಿಸಿಕೊಳ್ಳಿ. ಇಂಥ ಜಿಟಿಜಿಟಿ, ಪಿರಿಪಿರಿ, ತುಂತುರು, ತಾರಾಮಾರಿ ಮಳೆಗಳೆಲ್ಲವೂ ನಮಗೆ ಬೇಕೇಬೇಕು ಎಂದುಕೊಳ್ಳುವ ಆತ್ಮೀಯ ಭಾವ ನಮ್ಮಲ್ಲಿ ಒಂದು ಕ್ಷಣವಾದರೂ ಮೂಡದಿರುವುದು ಏಕೊ ? ಧೋಗುಡುವ ದುಮ್ಮು ಮಳೆ, ಮುಗಿಲು ಕಳಚಿ ಬೀಳುವಂತಿರುವ ಮುಸಲಧಾರೆ, ಕರ್ಕಷವೆನಿಸುವ ಕುಂಭದ್ರೋಣ, ಹುಚ್ಚು ಮಳೆ, ಹೆಚ್ಚು ಮಳೆ....ಒಟ್ಟಾರೆ ಮಳೆಯ ರಭಸ ರಂಪಾಟಗಳೆಲ್ಲವೂನಮ್ಮ ಬದುಕಿನ ಇತರೆಲ್ಲ ಅನಿವಾರ್ಯತೆಗಳಂತೆಯೇ ಎಂಬುದಕ್ಕಿಂತ ಅದಿಲ್ಲದೇ ನಾವಿಲ್ಲವೆಂಬ ಸತ್ಯವನ್ನು ಅರಗಿಸಿಕೊಂಡರೆ ಮಳೆ ಹಿತವಾಗುತ್ತ ಹೋಗುತ್ತದೆ.


ಇಂತಿಪ್ಪ ಮಳೆ ವೈಭವವನ್ನು ಸ್ವಾಗತಿಸಲು ಅಸಲಿಗೆ ನಾವು ಸಜ್ಜಾಗಿಯೇ ಇರುವುದಿಲ್ಲ. ಆ ಬಗೆಗೆ ಮೊದಲಿಂದಲೂ ನಮ್ಮೊಳಗೊಂದು ದಿವ್ಯ ನಿರ್ಲಕ್ಷ್ಯ ಮನೆಮಾಡಿಕೊಂಡು ಕುಳಿತಿರುವುದೇಕೋ ? ಅದರ ಪರಿಣಾಮವೇ ಬಹುಶಃ ಇಂಥ ಗೊಣಗಾಟಗಳು ಮಳೆಯೆಂದಾಕ್ಷಣ ನಮ್ಮಲ್ಲಿ ಮೂಡುತ್ತದೆ. ಅದನ್ನು ಹೊರಚೆಲ್ಲಿ ಅಮೃತಧಾರೆಯನ್ನು ಮೊಗೆಮೊಗೆದು ಸವಿಯುವ ಮನೋಭಾವದೊಂದಿಗೆ ಅದರ ಸನಿಹಕ್ಕೆ ತೋಳ್ಬಿಚ್ಚಿ ನಡೆದೊಮ್ಮೆ ನೋಡಿ...ಆಹ್, ಅದೆಂಥಾ ಅವರ್ಣನೀಯ ಆನಂದ ನಿಮ್ಮದಾದೀತು...!


ಮಳೆಯೆಂಬುದು ಒಮ್ಮೊಮ್ಮೆ ಅಮ್ಮನ ಜೋಗುಳ. ಅಣ್ಣನೊಂದಿಗಿನ ಜಗಳ. ಅಕ್ಕನ ಜತೆಯಾಟದ ಕೇಕೆ. ಅಪ್ಪನ ಆಪ್ತತೆ. ಪ್ರಿಯತಮೆಯ ತೆಕ್ಕೆಯಲ್ಲಿ ಉಸುರುವ ಪಿಸುಮಾತು. ಮಳೆಯಲ್ಲೊಮ್ಮೆ ಮನಬಿಚ್ಚಿ ಮಿಂದು ನೋಡಿ. ಅದರಲ್ಲಿ ಅವಳ ಪ್ರೀತಿಯಿದೆ, ಅವನ ಆಸೆಯಿದೆ. ಇವಳ ಹುಸಿ ಮುನಿಸಿದೆ. ಅವನ ಸಹನೆಯಿದೆ. ಇವಳೆದೆಯ ರಾಗಕ್ಕೆ ಅವನ ತಾಳದ ಸಾಥ್.... ಶ್! ಏಕಾಂತದಲ್ಲಿ ಕಿವಿಗೊಟ್ಟು ಮಳೆಹನಿಗಳ ಪಟಪಟವನ್ನಾಲಿಸಿ ನೋಡಿ. ನಿಮಗಿಷ್ಟವಾಗದಿದ್ದರೆ ನನ್ನಾಣೆ !


ಲಾಸ್ಟ್ ‘ಡ್ರಾಪ್’: ಬದುಕಿನೆಲ್ಲ ಸಂತಸದ ರಾಗ-ತಾಳಗಳಿಗೆ ಮಳೆಯೆಂಬುದೇ ಪಲ್ಲವಿ. ಅಲ್ಲಿಯೇ ಶ್ರುತಿ ತಪ್ಪಿದರೆ ಮುಂದಿನದಾವುದೂ ಸುಶ್ರಾವ್ಯವಾಗಲು ಸಾಧ್ಯವೇ ಇಲ್ಲ. ಇಂದೇ, ಈ ಕ್ಷಣವೇ ಮಳೆಯ ಚಿಟಪಟಕ್ಕೆ ನೀವೂ ಸ್ವರ ಸೇರಿಸಿ ಹಾಡಿಕೊಳ್ಳಲಾರಂಭಿಸಿ...ನಿಮ್ಮೊಳಗೊಬ್ಬ ಕವಿ ಮೂಡಿ ಬರಬಹುದು. ಗಾಯಕ ಜಾಗೃತನಾಗಬಹುದು. ಯಾರಿಲ್ಲದಿದ್ದರೂ ಮುಗ್ಧ ಮನದ ಮಾನವೀಯ ತಂತುವೊಂದು ಮೋಳೆಯುವುದಂತೂ ನಿಶ್ಚಿತ.

Friday, June 12, 2009

ಮೇಘ - ಮೇದಿನಿಯರ ಸಮಾಗಮ, ಮನೋರಮಾ...

ವು ಸುಂದರ ಕಲ್ಪನೆಯ ಸಾಲುಗಳಷ್ಟೇ ಅಲ್ಲ. ಜೀವನ ಪ್ರೀತಿಯ ಮಂತ್ರ. ಪಠಿಸಿ ನೋಡಿ....
ಕಾರ್ಗಟ್ಟಿ ಕುಳಿತ ಮೋಡಗಳೆಂದರೆ ಬರಿ ಮೋಡಗಳಲ್ಲ. ಅವು ಬಹುದಿನಗಳಿಂದ ಕಟ್ಟಾ ಬ್ರಹ್ಮಚರ್ಯದಲ್ಲಿ ಕುಳಿತ ಪೌರುಷನ ಪ್ರತೀಕ. ಅಲ್ಲಿ ಸ್ವಲ್ಪವೂ ಲಂಪಟತನವಿಲ್ಲ. ಆತುರಕ್ಕೆ ಬಿದ್ದ ಆಸಾಮಿ ಆತನಲ್ಲವೇ ಅಲ್ಲ. ಹೆಸರು ಮೇಘ. ಮನಸು ಮಾಡಿದರೆ ಎಂಥ ಗಟ್ಟಿಗಿತ್ತಿಯನ್ನೂ ಸಂಭಾಳಿಸಿ ತೃಪ್ತಿಯ ಸೆಲೆ ಹೊಮ್ಮಿಸದೇ ಬಿಡುವವನಲ್ಲ. ಮುನಿಸಿಕೊಂಡು ಕುಳಿತುಬಿಟ್ಟನೆಂದರೆ ಎಂಥ ಬೆತ್ತಲೆಗೂ ಬೆರಗಾಗುವವನಲ್ಲ; ಓಲೈಕೆಗೆ ಒಲಿಯುವವನಲ್ಲ, ಕೋರಿದರೂ ಕೊಸರುವುದಿಲ್ಲ, ಹಠಕ್ಕೆ ಹೆದರುವುದಿಲ್ಲ...ಒಟ್ಟಾರೆ ಅದ್ವಿತೀಯ ಸಂಯಮಿಯಾತ.
ಮೇಘನಿಗೊಬ್ಬಳು ಸಖಿ.... ಪೃಥೆ. ಆಕೆಯಾದರೋ ಸುಂದರಿಯೆಂದರೆ ಅದು ಸವಕಲು ಪದ. ಹಸಿರು ಪತ್ತಲವುಟ್ಟು ತಣ್ಣನೆಯ ತಂಗಾಳಿಗೆ ಬಿಗು ಮೈಯ ಇನ್ನಷ್ಟು ಸೆಟೆಸಿಕೊಂಡು ಕುಳಿತಳೆಂದರೆ ಮೇಘನೊಬ್ಬನನ್ನುಳಿದು ಮತ್ತಾರಿಗೂ ಮಣಿಯಲಾರಳು. ಆಕೆಯ ತುಂಬು ಜವ್ವನ ಕಂಡು ಕರುಬುವ ಇನ್ನೊಬ್ಬ ಸುಂದರಾಂಗ ಸೂರ್ಯ. ದಿನವಿಡೀ ಆಕೆಯತ್ತ ಆಸೆಯ ಕೆಂಗಣ್ಣ ಬೀರುವ ಆತನ ವಿರಹದ ತಾಪಕ್ಕೆ ಈಕೆ ಮುದುಡಿ ಹೋಗುತ್ತಾಳೆ. ಕೊನೆ ಕೊನೆಗಂತೂ ವಿರಹದ ಉತ್ಕಟತೆ ಕೋಪ ತಾಪಕ್ಕೆ ತಿರುಗಿ ವಿಪರೀತ ಪ್ರತಾಪಕ್ಕೆ ಬಿದ್ದರೂ ಭೂಮಿ ಬೆದರುವವಳಲ್ಲ. ಕೊನೆಗೆ ಆತನ ಅದೇ ಕೋಪದಲ್ಲಿ ಕಪ್ಪಿಟ್ಟು ಕಂತಿ ಹೋಗುತ್ತಾನೆ.
ಇತ್ತ ಮತ್ತೊಬ್ಬ ರಸಿಕ ಶಶಾಂಕ. ಈತನೋ ಬಲು ಚತುರ; ಆದರೆ ಮಹಾ ಚಂಚಲ. ಸುರಸುಂದರಾಂಗ, ಸುಪ್ರಸನ್ನ ವದನ, ಫಕ್ಕನೆ ನೋಡಿದರೆ ಆತನೇ ಮದನ.... ತಿಂಗಳ ಚೆಲ್ಲುತ್ತ ಬೆಂಬತ್ತಿ ಬರುವ ಶಶಾಂಕ, ಇನ್ನೇನು ಪೃಥೆಯ ಮಗ್ಗಲಿಗೆ ಮರಳಬೇಕೆನ್ನುವಷ್ಟರಲ್ಲಿ ನಾಚಿಬಿಡುತ್ತಾನೆ...ನಾಚುತ್ತ, ನಾಚುತ್ತ ಕರಗಿ ಹೋಗುತ್ತಾನೆ. ಹೀಗೆಯೇ ದಿನಗಳುರುಳುತ್ತವೆ. ಇವರೆಲ್ಲರ ಕಾಟ ಪೃಥೆಗೂ ಸಾಕು ಸಾಕಾಗಿ ಹೋಗುತ್ತದೆ. ಕಾದು ಕಂಗಾಲಾಗುತ್ತಾಳೆ. ತನ್ನಿನಿಯ ತಾನಾಗೇ ಬಂದು ಅಬ್ಬರಿಸುತ್ತಾನೆಂದು ನಿರಕಿಸುತ್ತಾಳೆ. ತನ್ನ ತಬ್ಬಿ ಹಿಡಿದು ತಣಿಸಿ ತೆರಳಬಾರದೇ? ಸದಾ ಗರ್ಜಿಸುತ್ತಾ ಬಂದು ಘಟ್ಟಿಸಿ ಹೋಗುವ ಗಗನ ಈಗೇಕೆ ಇತ್ತ ಸುಳಿಯನು ? ಹೀಗಿರುವಾಗಲೊಮ್ಮೆ ಅತ್ತಿಂದಿತ್ತ ಇತ್ತಿಂದತ್ತ ಸುಳಿದಾಡುತ್ತಲೇ ಇರುವ, ಮೇಘನ ಸಖ ಮಾರುತನಲ್ಲಿ ತನ್ನ ವಿರಹ ಸಂದೇಶ ಸಾರಿ ಬಾ ಎಂದು ಕೋರುತ್ತಾಳೆ. ಮೇಘನತ್ತ ದೌಡಾಯಿಸುವ ಆತ ಹಿತನುಡಿಗಳೊಂದಿಗೆ ಆತನ ಮನದಲ್ಲಿ ತಣ್ಣನೆ ಭಾವ ಬಿತ್ತಿ ಬರುತ್ತಾನೆ. ಪೃಥೆಯ ಸ್ಥಿತಿಗೆ ಮರುಗುವ ಮೇಘ ಕರಗಿ ಹೋಗುತ್ತಾನೆ. ಇನ್ನು ಸಂಯಮ ಸಾಧ್ಯವೇ ಇಲ್ಲ; ಎಂಬುದಕ್ಕಿಂತ ಅದರಲ್ಲಿ ಅರ್ಥವಿಲ್ಲ ಎಂದುಕೊಂಡವನೇ ದಡಬಡಿಸಿ ಹೊರಡುತ್ತಾನೆ. ಮಾರುತನ ಸಾರಥ್ಯದಲ್ಲಿ ಮಿಲನ ಮಹೋತ್ಸವಕ್ಕೆ ಮೋಡಗಳ ತೇರನೇರಿ ಹೊರಟ ಮೇಘನಿಗೆ ಮಿಂಚಿನ ಮಂಗಳಾರತಿ, ಸಿಡಿಲಬ್ಬರದ ಮಂತ್ರಘೋಷ, ಗುಡುಗಿನ ವಾದ್ಯ, ಆಲಿಕಲ್ಲಿನ ಸೇಸೆ...ಕಾಮನ ಬಿಲ್ಲಿನ ತೋರಣ...ಒಂದೇ ಎರಡೇ...
ಇತ್ತ ಪೃಥೆಯೊ ಒಳಗೊಳಗೇ ಪುಳಕಗೊಂಡು ಅರಳಿ ನಿಲ್ಲುತ್ತಾಳೆ. ಅಬ್ಬರಿಸಿ ಬರುವ ಇನಿಯನಿಗಾಗಿ ತನ್ನನ್ನು ತಾನು ತೆರೆದುಕೊಳ್ಳಲು ಸಜ್ಜಾಗುತ್ತಾಳೆ. ಮಾರುತನಿಗಂತೂ ಸಂಭ್ರಮವೋ ಸಂಭ್ರಮ. ಹೊಸ ಜೀವ ಮೊಳೆಯುವ ಅಂತರಂಗದ ಅತ್ಯಪೂರ್ವ ಕ್ಷಣಗಳಿಗೆ ತಾನೊಬ್ಬನೇ ಸಾಕ್ಷಿಯಾಗಬಲ್ಲೆನೆಂಬ ಹಮ್ಮು ಬಿಮ್ಮು. ಅದೇ ಉತ್ಸಾಹದಲ್ಲಿ ಹುಚ್ಚೆದ್ದು ಸುಳಿಯಲಾರಂಭಿಸುತ್ತಾನೆ. ಪ್ರಣಯಿಗಳಿಬ್ಬರನ್ನೂ ತೀಡಿ ತೀಡಿ ಉತ್ತೇಜಿಸುತ್ತಾನೆ. ಮನದ ಮೂಲೆಯಲ್ಲೆಲ್ಲೋ ಮೂರ್ತ ಸ್ವರೂಪ ತಾಳುವ ಮುಂದಿನ ಸುಖದ ಕಲ್ಪನೆಯಲ್ಲಿ ಆಕೆ ಸಣ್ಣಗೆ ಕಂಪಿಸುತ್ತಾಳೆ. ಅದೇ ಯೋಚನೆಯಲ್ಲಿ ಮೈ ಮರೆಯುತ್ತಾಳೆ. ಈ ಕ್ಷಣಕ್ಕಾಗಿಯೇ ಕಾಯುತ್ತಿದ್ದ ತುಂಟ ಮಾರುತ ಆಕೆಯ ಮೇಲಿದ್ದ ಮರಗಿಡಗಳ ಹಸಿರು ಹಚ್ಚಡವನ್ನು ಅಸ್ತವ್ಯಸ್ತಗೊಳಿಸುತ್ತಾನೆ. ಇದಾವುದರ ಪರಿವೆಯಿಲ್ಲದೇ ಮುಗಿಲೆಡೆಗೆ ಮೈಯ್ಯೆತ್ತಿ ನಿಲ್ಲುವ ಆಕೆಯನ್ನು ನೋಡುತ್ತಿದ್ದಂತೆಯೇ ಮೇಘನಲ್ಲೂ ಅದಾವುದೋ ಸಮರೋತ್ಸಾಹ. ಅಂಗಾತ ಮಲಗಿದ ಪೃಥೆಯನ್ನು ಅಬ್ಬರಿಸುತ್ತಲೇ ಆಕ್ರಮಿಸಿಕೊಳ್ಳುವ ಆತ ಮೊದಲಾಗಿ ಘರ್ಷಣೆಗಿಳಿಯುತ್ತಾನೆ. ಅಷ್ಟೆ, ಇನ್ನವರನ್ನು ಹರಿಹರ ಬ್ರಹ್ಮಾದಿಗಳೂ ತಡೆಯಲಸಾಧ್ಯ. ಭಾವೋತ್ಕಟತೆಯ ಮೇರುವನ್ನು ಹತ್ತಿ ನಿಂತು, ಹರ್ಷದ ಹೊನಲಿನಲ್ಲಿ ಜೀಕಲಾರಂಭಿಸಿದರೆ...ಓಹ್...ಅದು ಕೇವಲ ಭೌತಿಕದ ಮಾತಲ್ಲ. ಅಂತರಂಗದ ಸುರಣ, ಒಂದು ಹೃದಯದೊಳಿನ್ನೊಂದರ ಧಾರಣ, ಅವಿನಾ ಭಾವದ ಬಂಧನ, ವಿಶ್ವದ ಎರಡು ಮಹಾಶಕ್ತಿಗಳ ಮಿಲನ.... ಅತ್ಯಂತ ನವಿರುನವಿರಾಗಿ ಆಂತರ್ಯವನ್ನು ಮೀಟಲಾರಂಭಿಸಿದ ಅವರು ಬರಬರುತ್ತಾ ಆಳಕ್ಕಿಳಿಯುತ್ತಾರೆ. ಸುತ್ತೆಲ್ಲ ಗಾಢಾಂಧಕಾರ ಕವಿಯುತ್ತದೆ. ನಾಚುವ ನಲ್ಲೆಯ ಮನ ತನ್ನ ಬಿಟ್ಟು ಕದಲಬಾರದೆಂಬ ಉದ್ದೇಶದಿಂದ ಮೇಘನೇ ತನ್ನ ಬಾಹುಗಳ ಚಾಚಿ ಮರೆಮಾಡಿ, ಅಂಥದ್ದೊಂದು ಮಬ್ಬು ಕತ್ತಲೆಯನ್ನು ನಿರ್ಮಿಸುತ್ತಾನೆ.
ಹಾಗೆ ಆಕ್ರಮಿಸಿಕೊಳ್ಳುವ ಮೇಘನಿಗೆ ತನ್ನನ್ನೊಪ್ಪಿಸಿಕೊಳ್ಳಲು ಇನ್ನಾವುದೂ ಅಡ್ಡಿ ಉಳಿಯಲಿಲ್ಲ ಪೃಥೆಗೆ. ಬಹುದಿನಗಳಿಂದ ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿತು. ಅದೇ ಮೊದಲ ಸ್ಪರ್ಶ. ಮೊದಲ ಹನಿಯೊಂದು ಮೇಲಿನಿಂದ ಆಕೆಯ ಒಡಲ ತಾಕಿದ್ದೇ ತಡ....ಅರಳಿ ಒಮ್ಮೆಲೆ ಅಕ್ಕಳಿಸಿ ಬಿಡುತ್ತಾಳೆ. ಅಷ್ಟೇ, ಮನದೊಳಗಣ ಸಂತಸ ಹಿತವಾದ ಪರಿಮಳವಾಗಿ ಸ್ರವಿಸಲಾರಂಭಿಸುತ್ತದೆ. ಧೂಳು-ಹನಿಗಳ ಆ ಮಿಲನದಿಂದ ಹುಟ್ಟಿದ ಅದು...ಓಹ್...ಅದೆಂಥ ಉತ್ತೇಜಕ ಗಂಧ....ಇಬ್ಬರೂ ಇನ್ನಷ್ಟು ಮತ್ತಷ್ಟು ಮುನ್ನುಗ್ಗಿ ನುಗ್ಗಿ ಹೋಗಲು ಅಷ್ಟು ಸಾಲದೇ. ಇವರಿಗೆ ಸಮಯದ ಪರಿವೆಯೇ ಇಲ್ಲ. ಧೋಗುಟ್ಟಿ ಆತ ಸುರಿಯಲಾರಂಭಿಸುತ್ತಾನೆ. ಪೌರುಷದ ಪರಾಕಾಷ್ಠೆಯಲ್ಲಿ ಆತ ಕರಗಿ ನೀರಾಗುತ್ತಾನೆ. ತನ್ನೊಳಗೆ ಕಾಯ್ದುಕೊಂಡಿದ್ದ ಎಲ್ಲವೆಂದರೆ ಎಲ್ಲವನ್ನೂ ಪೃಥೆಯೊಡಲಿಗೆ ಸೊಕ್ಕಿ ಸುರಿದು ಬರಿದು ಬರಿದಾಗುತ್ತಾನೆ. ಇದಕ್ಕಾಗಿಯೇ ಕಾದಿದ್ದವಳಂತೆ ಆಕೆಯೂ ಇನಿತೂ ಬಿಡದಂತೆ ಹೀರುತ್ತಾಳೆ....ಬಹು ಹೊತ್ತಿನವರೆಗೆ ಇವೆರಡೂ ಸಾಗುತ್ತದೆ. ಕೊನೆಗೊಮ್ಮೆ ಆಕೆಯೊಡಲು ತುಂಬಿ ಕೋಡಿಯಾಗಿ ಚೆಲ್ಲುತ್ತದೆ. ಮೇಘನೂ ಎಲ್ಲವನ್ನೂ ಖಾಲಿಯಾಗಿಸಿಕೊಂಡು ನಿರಭ್ರನಾಗುತ್ತಾನೆ. ಆತನ ವಿಜಯದ ನಗೆ ಬೀರುತ್ತಾ ಹೊರಟಾಗಲೇ ಸಣ್ಣಗೆ ನಗುವ ಪೃಥೆ ಇಂಥ ಸೋಲಿನಲ್ಲೇ ತನ್ನ ಗೆಲುವು ಅಡಗಿದೆ ಎಂಬ ಸಂತೃಪ್ತ ಭಾವದಲ್ಲಿ ಮಗ್ಗುಲಾಗುತ್ತಾಳೆ. ಹೊಸ ಭೂಮಿಯ ಮೇಲೆ ಚಿಗುರಲಾರಂಭಿಸುತ್ತದೆ.
-ಭೂಮಿಯ ಮೇಲಿನ ನೀರೆಲ್ಲ ಹೊಳೆ, ನದಿ, ಸಮುದ್ರಗಳನ್ನು ಸೇರುತ್ತದೆ. ಸಮುದ್ರದ ನೀರು ಆವಿಯಾಗಿ ಮೇಲೆ ಹೋಗುತ್ತದೆ. ಅದರಿಂದ ಆಗಸದಲ್ಲಿ ಮೋಡಗಳು ನಿರ್ಮಾಣವಾಗುತ್ತವೆ. ಅದು ಗಾಳಿಯಲ್ಲಿ ಓಡಾಡುತ್ತಾ ಪರಸ್ಪರ ಘರ್ಷಣೆಗೆ ಒಳಗಾಗುತ್ತದೆ. ಆ ಸಂದರ್ಭದಲ್ಲಿ ಮೋಡಗಳಿಗೆ ತಂಪು ತಾಗಿ ತೇವಾಂಶ ಕರಗಿ ಮಳೆಯಾಗಿ ಸುರಿಯುತ್ತದೆ......ಹೀಗೆ ಮಳೆಯ ಬಗ್ಗೆ ಮಕ್ಕಿಕಾಮಕ್ಕಿ ಎಂಬಂಥ ಶುಷ್ಕ ಭಾವವ ತಳೆಯುವ ಬದಲು ಅದನ್ನು ಮೇಲಿನ ಕಲ್ಪನೆಯಂತೆ ಜೀವ ಪ್ರೀತಿಯ ಸೆಲೆಯಾಗಿ ಭಾವಿಸಬಾರದೇಕೆ ? ಅದರೊಂದಗಿ ಸಂವಾದಕ್ಕಿಳಿಯಬಾರದೇಕೆ. ಹಾಗಾದಲ್ಲಿ ಮಾತ್ರ ಮಳೆಗಾಲವೆಂಬ ಮಹಾ ಸಂಭ್ರಮದ ದಿನಗಳು ರೇಜಿಗೆ ಹುಟ್ಟಿಸುವುದಿಲ್ಲ. ಅಯ್ಯೋ, ಇದೆಂಥ ಕಿರಿಕಿರಿ...ಎಲ್ಲಿ ನೋಡಿದರೂ ಕಿಚಿಪಿಚಿ ಎಂದುಕೊಳ್ಳುವುದಿಲ್ಲ. ಬದಲಿಗೆ ಇಡೀ ಭೂಮಿಯ ಬದುಕೇ ಕಳೆಕಟ್ಟಿ ಹೊಸ ಜೀವನೋತ್ಸಾಹವನ್ನು ಕಟ್ಟಿಕೊಡುತ್ತದೆ. ಎಂಥ ಜುಗುಪ್ಸೆಗೆ ಬಿದ್ದ ಮನಸಿನಲ್ಲೂ ಹೊಸ ಹಸಿರು ಚಿಗುರುತ್ತದೆ.


‘ಲಾಸ್ಟ್‘ಡ್ರಾಪ್: ಇವೆಲ್ಲದರ ಅನುಭವ ಆಗಬೇಕಿದ್ದರೆ, ನಮ್ಮ-ನಿಮ್ಮೆಲ್ಲರ ಊರಿನಲ್ಲೂ ಮೊನ್ನೆಮೊನ್ನೆಯಷ್ಟೇ ಆರಂಭವಾಗಿರುವ ಮಳೆಯ ಮುಂದೆ ಒಬ್ಬರೇ ನಿಂತು ಅದರೊಂದಿಗೆ ಮಾತಿಗೆ ಶುರುವಿಟ್ಟುಕೊಳ್ಳಿ. ಇಂಥ ಅದೆಷ್ಟೋ ರೋಚಕ ಕಥೆಯನ್ನು ಅದೇ ನಿಮಗೆ ಪಿಸುಮಾತಿನಲ್ಲಿ ಹೇಳುತ್ತದೆ. ನನಗದು ಹೇಳಿದ ಇಂಥ ಸಾವಿರ ಕಥೆಗಳಲ್ಲೊಂದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇನ್ನು ನಿಮ್ಮಿಷ್ಟ....

Monday, June 8, 2009

ನೀರುಣಿಸುವ ಮನೋಭಾವಕ್ಕೂ ನೀರುಬಿಟ್ಟಿದ್ದೇಕೆ ?

ಮ್ಮೆ ಯೋಚಿಸಿ ನೋಡಿ, ಒಂದೇ ಒಂದು ಗುಟುಕು ನೀರನ್ನೂ ನೀವು ಹೊರಗೆಲ್ಲಿಯೂ ಧೈರ್ಯವಾಗಿ ಕುಡಿಯುವ ಸ್ಥಿತಿಯಲ್ಲಿಲ್ಲ. ಮನೆ ಬಿಟ್ಟು ಹೊರಬೀಳಬೇಕೆಂದರೆ ಕೈಯಲ್ಲೊಂದು ಬಾಟಲಿ ನೀರನ್ನು ಹಿಡಿದುಕೊಂಡೇ ಹೊರಡಬೇಕಾದ ಪರಿಸ್ಥಿತಿ. ಎಲ್ಲಿಗೇ ಹೋದರೂ ಬೆನ್ನಿನ ಬ್ಯಾಗಿನಲ್ಲಿ ಬಲುಭಾರದ ನೀರಿನ ಬಾಟಲಿಯನ್ನು ಹೊತ್ತುಕೊಂಡೇ ತಿರುಗಬೇಕು. ಇಲ್ಲವೇ ಒಂದೇ ಒಂದು ಲೀಟರ್ ನೀರಿಗೆ ಹತ್ತೋ-ಹನ್ನೆರಡೋ ರೂ. ತೆರಬೇಕು.
ಇದ್ಯಾವ ಕರ್ಮ ? ನಮ್ಮದೇ ನೆಲದಲ್ಲಿ ಒಂದು ಗುಟುಕು ನೀರನ್ನೂ ನೆಮ್ಮದಿಯಾಗಿ ಕುಡಿಯಲು ಆಗುವುದಿಲ್ಲ ಎಂದಾದ ಮೇಲೆ ಅದಕ್ಕೇನರ್ಥ ? ಹೀಗೆ ಹೇಳುವಾಗ ಹಳೆಯ ಗಾದೆಯೊಂದು ನೆನಪಾಗುತ್ತದೆ. ನಮ್ಮೂರಿನ ಆಲದ ಮರ, ಪರಸ್ಥಳದ ನೀರು ಎರಡರ ಬಗ್ಗೆಯೂ ಭಯ ಇದ್ದೇ ಇರುತ್ತದಂತೆ. ಕಾರಣ ತುಂಬ ಸ್ವಾರಸ್ಯಕರವಾಗಿದೆ. ನಮ್ಮೂರಿನ ಆಲದ ಮರದ ಬಗ್ಗೆ ಒಂದಿಲ್ಲೊಂದು ಕಥೆ ನಮ್ಮಲ್ಲೇ ಸೃಷ್ಟಿಯಾಗಿರುತ್ತದೆ. ಅದೇ ಆಲದ ಮರಕ್ಕೆ ಯಾವಾಗಲೋ ಊರಿನ ಯಾರೋ ಒಬ್ಬರು ನೇಣುಬಿಗಿದುಕೊಂಡು ಸತ್ತಿದ್ದರಂತೆ. ಅವರ ದೆವ್ವ ಅದೇ ಆಲದ ಮರದಲ್ಲಿ ಯಾವಾಗಲೂ ವಾಸವಿರುತ್ತದಂತೆ ಎಂತಲೂ....ಯಾವುದೋ ಯಮ-ಯಕ್ಷಿ, ಇಲ್ಲವೇ ಜಟಕ, ಬ್ರಹ್ಮರಾಕ್ಷಸ ಹೀಗೆ ಕಪೋಲ ಕಲ್ಪಿತ ಶಕ್ತಿಯೊಂದು ಅದರಲ್ಲಿ ಇದೆ ಎಂತಲೋ- ಏನೋ ಒಂದು ಸುದ್ದಿ ಎಲ್ಲ ಊರಿನ ಆಲದ ಮರಗಳ ಸುತ್ತಲೂ ಸ್ಥಳೀಯರಲ್ಲಿ ಸುತ್ತಿಕೊಂಡಿರುತ್ತದೆ. ಇಂಥ ಪೂರ್ವಗ್ರಹ ನಮ್ಮ ಮನದಲ್ಲಿ ಇದ್ದೇ ಇರುವುದರಿಂದ ಭಯ ಸಹಜ. ಬೇರೆ ಊರಿನ ಆಲದ ಮರದ ಬಗೆಗಿನ ಕಥೆಗಳು ನಮಗೆ ಗೊತ್ತಿಲ್ಲದ ಕಾರಣ ಧೈರ್ಯವಾಗಿರುತ್ತೇವೆ. ಹಾಗೆಯೇ ನಮ್ಮೂರಿನ, ನಮ್ಮ ಮನೆಯ ನೀರು ಎಂಥದ್ದು ? ಅದರ ಗುಣ ಧರ್ಮಗಳೇನು ? ನಮ್ಮೂರಿನ ಕೆರೆಯ ಆಳವೆಷ್ಟು ? ಅದರಲ್ಲಿ ತುಂಬಿರುವ ನೀರೆಷ್ಟು, ಹೂಳೆಷ್ಟು....? ಇತ್ಯಾದಿ ಎಲ್ಲ ವಿವರಗಳೂ ನಮಗೆ ತಿಳಿದಿರುತ್ತವೆ. ಆದ್ದರಿಂದ ಧೈರ್ಯವಾಗಿ ಅದರೊಂದಿಗೆ ವ್ಯವಹರಿಸುತ್ತೇವೆ. ಆದರೆ, ಪರಸ್ಥಳಕ್ಕೆ ಹೋದಾಗ ಈ ಯಾವ ಮಾಹಿತಿಯೂ ನಮಗೆ ಗೊತ್ತಿರುವುದಿಲ್ಲ. ಅಲ್ಲಿನ ನೀರು ಕುಡಿದರೆ ಎಲ್ಲಿ ಶೀತವಾದೀತೋ.... ಭೇದಿಗಿಟ್ಟುಕೊಂಡೀತೋ... ಹೊಳೆ ಎಷ್ಟು ಅಪಾಯಕಾರಿಯೋ.... ಎಲ್ಲಿ ಸುಳಿ ಇದ್ದೀತೋ... ಎಂಬ ಭಾವನೆಯಲ್ಲಿ ತುಂಬ ಎಚ್ಚರಿಕೆಯಿಂದ ಇರುತ್ತೇವೆ. ಅಪ್ಪಿ ತಪ್ಪಿಯೂ ಕಾಯಿಸದೇ ಇರುವ ನೀರನ್ನು ಕುಡಿಯುವುದಿಲ್ಲ.
ಅದೊಂದು ಕಾಲವಿತ್ತು, ಬಾಯಾರಿಕೆಯಾಯಿತೆಂದರೆ ಎಲ್ಲಿಗೆ ಬೇಕಾದರೂ ಹೋಗಿ ಯಾರದ್ದೋ ಮನೆಯಲ್ಲೋ, ಯಾವುದೋ ದೇವಸ್ಥಾನದಲ್ಲೋ, ಹೋಟೆಲ್‌ನಲ್ಲೋ ಸಂತೃಪ್ತಿಯಿಂದ ನೀರು ಕುಡಿದು ಬರುತ್ತಿದ್ದೆವು. ಯಾವ ಭಯವೂ ಇರುತ್ತಿರಲಿಲ್ಲ. ಹೆಚ್ಚೆಂದರೆ ನೀರು ಕೇಳಿದ ಮನೆಯವರು ನೀರಿನೊಂದಿಗೆ ಒಂದು ಚೂರು ಬೆಲ್ಲವನ್ನೋ, ಮಿಡಿ ಉಪ್ಪಿನ ಕಾಯಿಯನ್ನೋ, ಒಂದು ಚಮಚ ಸಕ್ಕರೆಯನ್ನೋ ನೀಡುತ್ತಿದ್ದರು. ಅದನ್ನು ಬಾಯಿಗಿಟ್ಟುಕೊಂಡು ನೀರು ಕುಡಿದು ದಣಿವಾರಿಸಿಕೊಂಡು ಮುಂದೆ ಹೋಗಬಹುದಿತ್ತು. ನಾವು ಕುಡಿಯುತ್ತಿದ್ದ ನೀರಿನ ಬಗೆಗೆ ಯಾವುದೇ ಅಪನಂಬಿಕೆ ನಮಗಿರಲಿಲ್ಲ. ಈ ಭೂಮಿಯ ಮೇಲಿನ ನೀರೆಲ್ಲ ಒಂದೇ... ಅದು ಸದಾ ಪರಿಶುದ್ಧ. ಅದರಿಂದ ಯಾವುದೇ ಅಪಾಯವಿಲ್ಲ ಎಂಬ ವಿಶ್ವಾಸ ಎಲ್ಲರಲ್ಲಿಯೂ ಇತ್ತು. ಹೀಗಾಗಿ, ಹೋದಲ್ಲೆಲ್ಲ ಬಾಟಲಿ ಬೇತಾಳನನ್ನು ಬೆನ್ನಿಗಂಟಿಸಿಕೊಂಡು ಹೋಗುವ ಅಗತ್ಯ ಇರಲಿಲ್ಲ. ಅದರ ಅನಿವಾರ್ಯತೆಯೂ ಇರಲಿಲ್ಲ. ಎಂಥದೇ ದೂರದ ಹಾದಿಯಾಗಿರಲಿ, ಕುಡಿಯಲು ನೀರು ಸಿಗುವುದಿಲ್ಲ ಎಂಬ ಮಾತೇ ಇರಲಿಲ್ಲ. ಕೊನೇ ಪಕ್ಷ ಅಲ್ಲಲ್ಲಿ ಅರವಂಟಿಗೆಗಳಾದರೂ ಇರುತ್ತಿದ್ದವು. ರಸ್ತೆ ಪಕ್ಕದಲ್ಲಿ ಸಿಲೀಂದ್ರಗಳಾದರೂ ತಣ್ಣನೆಯ ಸಿಹಿನೀರನ್ನು ತುಂಬಿಸಿಟ್ಟುಕೊಂಡು ದಾರಿಹೋಕರನ್ನು ಸತ್ಕರಿಸುತ್ತಿದ್ದವು.
ಹೌದು, ಪಾರಂಪರಿಕ ಭಾರತದ ಇಂಥ ವ್ಯವಸ್ಥೆಗಳು ನಿಜಕ್ಕೂ ಇಂದಿಗೂ ಮಾದರಿ. ಅರವಂಟಿಕೆಗಳನ್ನು, ಸಿಲೀಂದ್ರಗಳನ್ನು ನೆನಪಿಸಿಕೊಂಡರೇ ಸಾಕು, ತಣ್ಣನೆಯ ಅನುಭೂತಿ ಒಡಮೂಡುತ್ತದೆ. ಇನ್ನು ಅವು ನೀಡುವ ಸಾಂತ್ವನ ನಮ್ಮ ಮಾನವೀಯ ಗುಣಧರ್ಮದ ಬಗೆಗೆ ಹೆಮ್ಮೆ ಮೂಡಿಸದೇ ಇರದು. ದುರದೃಷ್ಟವೆಂದರೆ ಇವನ್ನು ನೋಡುವುದು ಹಾಗಿರಲಿ, ಈಗಿನ ತಲೆಮಾರಿಗೆ ಕನಿಷ್ಠ ಇವುಗಳ ಹೆಸರೂ ಗೊತ್ತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೊಮ್ಮೆ ಅವು ಇಂದಿಗೂ ಅಸ್ತಿತ್ವದಲ್ಲಿದ್ದರೂ ಯಾರೂ ಅದನ್ನು ಬಳಸುತ್ತಿರಲಿಲ್ಲ ಎಂಬುದು ಬೇರೆ ಪ್ರಶ್ನೆ. ಏಕೆಂದರೆ ಜಲ ಮಾಲಿನ್ಯ ಹಾಗೂ ಬಾಟಲಿ ನೀರಿನ ಗೀಳು ನಮ್ಮಲ್ಲಿ ಅಷ್ಟರ ಮಟ್ಟಿಗೆ ಅಪನಂಬಿಕೆಯನ್ನು ಸೃಷ್ಟಿ ಮಾಡಿದೆ.
ಅರವಂಟಿಗೆಗಳದ್ದಂತೂ ಅತ್ಯಂತ ಗಮನಾರ್ಹ, ಅಷ್ಟೇ ಮೌಲಿಕ ಸೇವೆ. ಮಾತ್ರವಲ್ಲ ಅದು ತನ್ನದೇ ವಿಶಿಷ್ಟ ಕಾರ್ಯ ಶೈಲಿಯನ್ನೂ ಹೊಂದಿರುತ್ತಿತ್ತು. ಊರಿನ ಮುಖ್ಯಸ್ಥರು, ಧನಿಕರು ತಮ್ಮೂರಿನ ಮುಖ್ಯ ರಸ್ತೆಯ ಕೊನೆಯಲ್ಲಿ ವಿಶಾಲ ಛತ್ರವೊಂದನ್ನು ನಿರ್ಮಿಸಿರುತ್ತಿದ್ದರು. ಎಷ್ಟೋ ವೇಳೆ ಒಬ್ಬರೇ ಅಥವಾ ಊರಿನ ಎಲ್ಲರೂ ಕೂಡಿ ಇದನ್ನು ನಿರ್ವಹಿಸುತ್ತಿದ್ದರು. ಛತ್ರದ ಹೊರ ಜಗಲಿಯಲ್ಲಿ ಎರಡು ಮೂರು ಹೂಜಿಗಳಲ್ಲಿ ಸದಾ ಶುದ್ಧ ಕುಡಿಯುವ ನೀರನ್ನು ತುಂಬಿಡಲಾಗುತ್ತಿತ್ತು. ದಾರಿ ಹೋಕರಿಗೆ ನೀರು ಕುಡಿದು ದಣಿವಾರಿಸಿಕೊಳ್ಳಲು ವಿಶಾಲ ಹಜಾರದಲ್ಲಿ ಚಾಪೆ ಹಾಸಿರಲಾಗಿರುತ್ತಿತ್ತು. ನೀರಿನ ಜತೆಗೆ ಪಾನಕ, ಮಜ್ಜಿಗೆಗಳನ್ನು ಹಂಚುತ್ತಿದ್ದುದೂ ಉಂಟು. ನಿಗದಿತ ಸಮಯದಲ್ಲಿ ಇಲ್ಲಿ ಊಟ, ತಿಂಡಿಯ ವ್ಯವಸ್ಥೆಯನ್ನೂ ಏರ್ಪಡಿಸಲಾಗಿರುತ್ತಿತ್ತು. ಏನಿಲ್ಲವೆಂದರೂ ನೀರು-ನೆರಳುಗಳಿಗಂತೂ ತ್ಯಾಮಾನವಿರುತ್ತಿರಲಿಲ್ಲ. ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದಲೇ ನೋಡುವ ಇಂದಿನ ದಿನಗಳಲ್ಲಿ ಅಂಥ ಧರ್ಮ ಬುದ್ಧಿಯನ್ನಾಗಲೀ, ಶುದ್ಧ ಆತಿಥ್ಯವನ್ನಾಗಲೀ ನಿರೀಕ್ಷಿಸುವುದೇ ಅಪರಾಧವಾದೀತು.
ಇನ್ನು ಸಿಲೀಂದ್ರಗಳು ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಪಳೆಯುಳಿಕೆಗಳಾಗಿ ಕಾಣಸಿಗುತ್ತವಾದರೂ ಅದರಲ್ಲಿ ಕಸ ಕಡ್ಡಿಗಳು ಮಾತ್ರವೇ ತುಂಬಿಕೊಂಡಿರಲು ಸಾಧ್ಯ. ಅವುಗಳ ವಿನ್ಯಾಸವೇ ಗಮನ ಸೆಳೆಯುವಂಥದ್ದು. ಸಿಲೀಂದ್ರ ಎಂದು ಕರೆಯಲಾಗುವ ನಾಲ್ಕು ಕಲ್ಲು ಕಂಬಗಳ ಮೇಲೆ ಕಲ್ಲಿನಿಂದಲೇ ನಿರ್ಮಿಸಿರುವ ಚೌಕಾಕಾರದ ತೊಟ್ಟಿ ಹಿಂದೆಲ್ಲ ಗ್ರಾಮಾಂತರ ಭಾಗದಲ್ಲಿ ಸಾಮಾನ್ಯವಾಗಿತ್ತು. ಇದರಲ್ಲಿ ನೀರನ್ನು ತುಂಬಿಸಿಡಲಾಗುತ್ತಿತ್ತು. ಈ ನೀರು ದಾರಿಹೋಕರ ನೀರಡಿಕೆ ನೀಗಿಸುತ್ತಿತ್ತು. ದೇವಸ್ಥಾನ, ಅಶ್ವತ್ಥಕಟ್ಟೆ , ಬಸ್ ನಿಲ್ದಾಣ, ಜಾತ್ರೆ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿರುತ್ತಿದ್ದ ಈ ನೀರಿನ ವ್ಯವಸ್ಥೆಯ ಸದುಪಯೋಗವನ್ನು ನೂರಾರು ಮಂದಿ ಪಡೆದುಕೊಳ್ಳುತ್ತಿದ್ದರು.
ಗ್ರಾಮದ ಪ್ರತಿಯೊಂದು ಮನೆಯವರೂ ಸರತಿಯ ಮೇರೆಗೆ ಸಿಲೀಂದ್ರಕ್ಕೆ ನೀರು ತುಂಬಿಸುತ್ತಿದ್ದರು. ಬಿಸಿಲಲ್ಲಿ ಬಾಯಾರಿ ಬಂದವರು ನೀರು ಕುಡಿದು ಸಂತೃಪ್ತರಾಗಿ ಹರಸಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆಯಿಂದಾಗಿ ನೀರು ತುಂಬಲು ಪೈಪೋಟಿ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಮಣ್ಣಿನಿಂದಲೂ ಇಂಥ ಸಿಲೀಂದ್ರಗಳನ್ನು ನಿರ್ಮಿಸಿರಲಾಗುತ್ತಿತ್ತು. ಬಿಸಿಲ ಝಳಕ್ಕೆ ನೀರು ಸಿಲೀಂದ್ರದ ಮಣ್ಣಿನ ಹೊರಮೈ ಮೂಲಕ ಸಣ್ಣಗೆ ಆವಿಯಾಗಿ ಹೋಗುತ್ತಿದ್ದುದರಿಂದ ಒಳಗಿನ ನೀರು ಪಕ್ಕಾ ಫ್ರಿಜ್‌ನ ನೀರಿನಂತೆ ತಣ್ಣಗಿರುತ್ತಿತ್ತು. ಜತೆಗೆ ಮಣ್ಣಿನ ಕಂಪೂ ಸೇರಿಕೊಂಡು ಹಿತವಾಗಿರುತ್ತಿತ್ತು. ಇನ್ನು ಕೆಲವು ಕಡೆ ಸಿಲೀಂದ್ರಗಳಿಗೆ ತುಳಸಿ ದಳ, ಲಾವಂಚದ ಬೇರು, ಅತ್ತಿ ಮರದ ಚಕ್ಕೆ ಇತ್ಯಾದಿಗಳನ್ನು ಹಾಕಿಡುತ್ತಿದ್ದುದೂ ಉಂಟು. ಇದರಿಂದ ನೀರು ರುಚಿಕರವಾಗಿರುತ್ತಿತ್ತಲ್ಲದೇ ಔಷಯ ಗುಣಗಳಿಂದ ಆರೋಗ್ಯಕ್ಕೂ ಹಿತ ನೀಡುತ್ತಿತ್ತು. ಇವು ಭಾರತೀಯತೆಯ ಔದಾರ್ಯ ಮಾತ್ರವಲ್ಲ, ಇಲ್ಲಿನ ಜೀವನ ಶಿಸ್ತಿನ ಪ್ರತೀಕವೂ ಆಗಿತ್ತು.
ಸಮಾಜ ವ್ಯವಸ್ಥೆಯ ಪ್ರಾತಿನಿಕ ಕುರುಹಾಗಿ ಬಿಂಬಿತವಾಗುತ್ತಿದ್ದ ಇಂಥ ಪಾರಂಪರಿಕ ವ್ಯವಸ್ಥೆಗಳು ಇಂದು ವಿಶ್ವಕೋಶದಲ್ಲಿ ಮಾತ್ರ ಉಳಿದುಕೊಂಡಿದ್ದರೆ ಅದು ನಮ್ಮದೇ ಅಪರಾಧ. ಅಂಥ ಮುಗ್ಧತೆ ನಮಗಿನ್ನು ಬರಲು ಸಾಧ್ಯವೇ ? ಒಂದೊಮ್ಮೆ ಬಲವಂತವಾಗಿ ರೂಢಿಸಿಕೊಂಡರೂ ಅಷ್ಟೇ ಮುಗ್ಧವಾಗಿ ಅದರಲ್ಲಿನ ನೀರು ಕುಡಿದುಹೋಗುವ ಧೈರ್ಯ ಹಾಗೂ ನೀರಿನ ಶುದ್ಧತೆ-ಎರಡೂ ಖಂಡಿತಾ ಮರಳಿಬರಲು ಸಾಧ್ಯವೇ ಇಲ್ಲವೆಂಬಷ್ಟರ ಮಟ್ಟಿಗೆ ನಾವು ಮುಂದುವರಿದಿದ್ದೇವೆ; ಅಭಿವೃದ್ಧಿಪರರಾಗಿದ್ದೇವೆ ?!

‘ಲಾಸ್ಟ್’ಡ್ರಾಪ್: ಸಿಲೀಂದ್ರಗಳಂಥ ಹತ್ತು ಹಲವು ದೇಶಿ ಸಂಸ್ಕೃತಿಯನ್ನು ನುಂಗಿ ನೀರು ಕುಡಿದಿರುವ ಬಾಟಲಿ ನೀರಿನ ಕಂಪನಿಗಳ ಹುನ್ನಾರಕ್ಕೊಂದು ಮನದೊಳಗೇ ಕ್ಕಾರ ಕೂಗಿಕೊಂಡು, ಇನ್ನೆಂದೂ ಅದನ್ನು ಕುಡಿಯುವುದಿಲ್ಲ ಎಂಬ ದೃಢ ನಿರ್ಧಾರ ಮಾಡುವುದು ನಮ್ಮಿಂದಾಗದೇ ? ಒಮ್ಮೆ ಪ್ರಶ್ನಿಸಿಕೊಳ್ಳಿ, ಪ್ಲೀಸ್...