Friday, August 28, 2009

ಅವರ ದಾಹ ತಣಿಸುವ ಪಾವೋ ದಾಸೋಹ

ವತ್ತು ಏನಿಲ್ಲವೆಂದರೂ ೪೮ ಡಿಗ್ರಿ ಸೆಂಟಿಗ್ರೇಡ್‌ನಷ್ಟು ಬಿಸಿಲು ಬಾರಿಸುತ್ತಿತ್ತು. ಪಕ್ಕದಲ್ಲೇ ಸಮುದ್ರದ ಮೊರೆತ. ರಣ ಬಿಸಲಿಗೆ ಉಪ್ಪು ನೀರು ಆವಿಯಾಗಿ ಆಗಸದತ್ತ ಮೆರವಣಿಗೆ ಹೊರಟಿರುವುದು ಕಣ್ಣಿಗೆ ಕಾಣಿಸುವಷ್ಟು ಸ್ಪಷ್ಟವಾಗಿತ್ತು. ಸಮುದ್ರದ ಮೇಲೊಮ್ಮೆ ಹೀಗೆಯೇ ಕಣ್ಣಾಡಿಸಿದರೂ ಆವಿಯ ಸುರುಳಿ ಝಳ ಝಳ ಝಳಪಾಡುತ್ತಿತ್ತು. ದಂಡೆಯ ಮೇಲಿರುವ ಮರಳಂತೂ ಪಕ್ಕಾ ಅಗ್ನಿಕೊಂಡ. ಅದರ ಮೇಲೆ ಬೀಸಿ ಬಂದ ಬಿಸಿಗಾಳಿ ಸದ್ದಿಲ್ಲದೇ ಮಂದಿಯ ಮೈಯನ್ನು ಬೇಯಿಸುತ್ತಿತ್ತು. ಮೇಲೆ ಕೆಕ್ಕರಿಸುತ್ತಿರುವ ಸೂರ್ಯ, ಕೆಳಗೆ ಕಾದು ಕಂಗಾಲಾದ ನೆಲ, ನಡು ನಡುವೆ ಬೀಸುವ ಬಿಸಿಗಾಳಿ. ಏನಾಗಬೇಕು ಹೇಳಿ ಅಲ್ಲಿನ ಜನರ ಸ್ಥಿತಿ ? ಅಬ್ಬಾ, ನೆನೆಸಿಕೊಂಡರೇ ಗೊತ್ತಿಲ್ಲದಂತೆ ಬೆವರತೊಡಗುತ್ತೇವೆ.

ಇಷ್ಟು ಸಾಲದ್ದಕ್ಕೆ ಒರಿಸ್ಸಾದ ಆ ಪುಟ್ಟ ಪಟ್ಟಣಕ್ಕೆ ಅಂದು ದೇಶಾದ್ಯಂತದ ೨೦ ಲಕ್ಷಕ್ಕೂ ಅಕ ಮಂದಿ ಬಂದು ಸೇರಿದ್ದರು. ನಮ್ಮ ಬೆಂಗಳೂರಿನ ಕಾಲು ಭಾಗಕ್ಕಿಂತಲೂ ಕಡಿಮೆ ವಿಸ್ತಾರದ ಪುರಿಯಲ್ಲಿ ಒಟ್ಟು ಇದ್ದುದೇ ೫ ಲಕ್ಷ ಜನಸಂಖ್ಯೆ. ಅದಷ್ಟೇ ಮಂದಿಗೆ ಒಮ್ಮೆಲೆ ಬಾಯಾರಿತೆಂದರೆ ಮನದಣಿಯೆ ಕುಡಿಯಲು ನೀರು ಸಿಗುವುದು ಕಷ್ಟ ಅಲ್ಲಿ. ಹೀಗಿದ್ದಾಗ ಹೊರಗಿನಿಂದ ಅದರ ನಾಲ್ಕುಪಟ್ಟು ಜನ ಬಂದಿಳಿದರೆ ನೀರಿರಲಿ, ಬಹುಶಃ ಗಟ್ಟಿಯಾಗಿ ಉಸಿರೆಳೆದುಕೊಳ್ಳಲು ತಣ್ಣನೆ ಗಾಳಿ ಕೂಡ ಸಿಗಲಿಕ್ಕಿಲ್ಲ. ಫ್ಯಾನ್, ಏರ್‌ಕೂಲರ್, ಏರ್ ಕಂಡೀಷನರ್...ಯಾವುದೂ ಸತತ ಒಂದು ಗಂಟೆಗಿಂತ ಹೆಚ್ಚು ಕಾಲ ಮಾತನಾಡುವುದಿಲ್ಲ. ಕುಳಿತ ಕೊಠಡಿಯಲ್ಲೇ ಉಸಿರು ಕಟ್ಟಿದ ಅನುಭವವಾಗಿ ಹೊರಗೋಡಿ ಬರಲೇಬೇಕು. ಹೇಳಿ ಕೇಳಿ ಅದು ಸೂರ್ಯನ ಸಾಮ್ರಾಜ್ಯವೆನಿಸಿದ ರಾಜ್ಯ. ಅದಕ್ಕಾಗಿಯೇ ವೈಶಾಖದ ನಡು ಬಿಸಿಲದಿನಗಳಲ್ಲಿ ಒಂದುವಾರ ಸ್ವತಃ ಪುರಾಶ ಜಗನ್ನಾಥನೂ ದೇಗುಲದಿಂದ ಹೊರಬಂದು ಕುಳಿತಿರುತ್ತಾನೋ ಏನೋ ?

ಅಂತೂ ಪುರಿಯಲ್ಲಿ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಯ ಆ ಏಳು ದಿನಗಳೆಂದರೆ ಅದು ಅಕ್ಷರಶಃ ಬಾಣಲೆಯ ಮೇಲಿನ ಬದುಕು. ಹಾಗೆಂದು ರಥಯಾತ್ರೆ ಆರಂಭದ ಮುನ್ನಾದಿನ ಪಟ್ಟಣದಲ್ಲಿ ಹೇಳಿಕೊಳ್ಳುವಂಥ ಯಾವುದೇ ಗೌಜು, ಗದ್ದಲಗಳಿರುವುದಿಲ್ಲ. ರಾತ್ರೆ ೧೨ಕ್ಕೆ ಹೋದರೂ ಇದೇ ಜಾಗದಲ್ಲಿ ನಾಳೆ ಲಕ್ಷಾಂತರ ಮಂದಿ ಸೇರುವುದೇ? ಎನಿಸದಿರದು. ಅಷ್ಟೊಂದು ಖಾಲಿಖಾಲಿ ಇರುತ್ತದೆ ನಗರ. ಒಂದಷ್ಟು ಉತ್ಸವದ ಸಿದ್ಧತೆ, ದೀಪಾಲಂಕಾರಗಳನ್ನು ಬಿಟ್ಟರೆ ಬೇರಾವುದೇ ಗಡಿಬಿಡಿಗಳಿರುವುದಿಲ್ಲ. ಕತ್ತಲೆ ಜಾರುತ್ತ ಹೋಗುತ್ತಿದ್ದಂತೆಯೇ ಪಟ್ಟಣದಲ್ಲಿ ಜನ ದಟ್ಟಣೆ ಏರುತ್ತ ಸಾಗುತ್ತದೆ. ಚುಮುಚುಮು ಬೆಳಗು ಮೂಡುವ ಹೊತ್ತಿಗೆ ಎಂಟೂ ದಿಕ್ಕುಗಳೂ ಪುರಿಯತ್ತ ಬಂದು ಸೇರುತ್ತಿರುವಂತೆ ಭಾಸವಾಗ ತೊಡಗುತ್ತದೆ. ಅದೆಲ್ಲಿಂದ ಜನ ಆ ಪಾಟಿ ಹರಿದುಬರುತ್ತಾರೋ, ಅದೇನು ಭಕ್ತಿಯೋ, ಭಾವಾವೇಶವೋ. ಅಂತೂ ರಸ್ತೆಯುದ್ದಕ್ಕೂ ಜೈ ಜಗನ್ನಾಥ್, ಹರೇ ಕೃಷ್ಣ ...ಮೊದಲಾದ ಘೋಷಣೆಗಳನ್ನು ಕೂಗುತ್ತ ಗುಂಪು-ಗುಂಪಾಗಿ ಮಂದಿ ಬಂದು ಸೇರಲಾರಂಭಿಸುತ್ತಾರೆ.

ಪುರಿಯಲ್ಲಿ ಅಸಲೀ ಕುದಿ ಮರಳುವುದು ಹೊತ್ತು ಹನ್ನೆರಡಕ್ಕೆ ಏರುವಾಗ. ಭಕ್ತಿಯ ಭಾವಾವೇಶದಲ್ಲಿ ಬಿಸಿಲಿನ ಪರಿವೆಯನ್ನೂ ಲೆಕ್ಕಿಸದೇ ಮೈಲುಗಳವರೆಗೆ ನಡೆದೇ ಹಾದಿ ಸವೆಸಿಕೊಂಡು ಬರುವ ಜನಕ್ಕೆ ಇಲ್ಲಿನ ಬಿಸಿಲ ತಾಪದ ಅರಿವು ಜಗನ್ನಾಥನ ದರ್ಶನವಾದ ನಂತರ ಆರಂಭವಾಗುತ್ತದೆ. ಇಡೀ ಸಮುದ್ರವನ್ನೇ ಅಗಸ್ತ್ಯರ ರೀತಿಯಲ್ಲಿ ಆಪೋಷನ ತೆಗೆದುಕೊಂಡುಬಿಡಬೇಕೆಂಬಷ್ಟು ದಾಹ ಕಾಡಲಾರಂಭಿಸುತ್ತದೆ. ನೀರಿನ ಬಿಂದು ಸಿಕ್ಕರೂ ಸಾಕು ಒಮ್ಮೆ ತುಟಿಗೆ ಸವರಿಕೊಂಡು ಜೀವ ಉಳಿಸಿಕೊಂಡು ಬಿಡಬೇಕೆಂಬ ಆತುರ. ಇದಕ್ಕಾಗಿಯೇ ಒಂದಷ್ಟು ಸ್ವಯಂ ಸೇವಾ ಸಂಘಟನೆಗಳು, ಉದ್ಯಮಿಗಳು ನೀರು ಪೂರೈಕೆಯ ವ್ಯವಸ್ಥೆಗೆ ಟೊಂಕ ಕಟ್ಟಿ ನಿಂತಿರುತ್ತವೆ. ದೊಡ್ಡ ದೊಡ್ಡ ಟ್ಯಾಂಕರ್‌ಗಳಲ್ಲಿ ನೀರು ತುಂಬಿಸಿಕೊಂಡು ಬಂದು ಭಕ್ತರ ಬಾಯಾರಿಕೆ ತಣಿಸುವ ಕಾರ್ಯಕ್ಕೆ ಮುಂದಾಗಿರುತ್ತವೆ. ಪೌರ ಸಂಸ್ಥೆಗಳು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬೃಹತ್ ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಟ್ಯಾಂಕರ್‌ಗಳನ್ನು ನಿಲ್ಲಿಸಿ ಜನರ ಮೇಲೆ ನೀರೆರಚಿ ಬಿಸಿಲಿನ ತಾಪ ತಣಿಸುವ ಪ್ರಯತ್ನ ಮಾಡುತ್ತವೆ.

ಇವೆಲ್ಲದರ ನಡುವೆ ಗಮನ ಸೆಳೆಯುವುದು ರಥಬೀದಿಯ ಇಕ್ಕೆಲದ ಮನೆಗಳ ಜಗುಲಿಯ ಮೇಲೆ, ಪುರಿಗೆ ಬಂದು ಸೇರುವ ಹೆದ್ದಾರಿ ಬದಿಯ ಮರದ ಕೆಳಗೆ ಕಾಣ ಸಿಗುವ ಪುಟ್ಟ ಪುಟ್ಟ ಗಡಿಗೆಗಳು. ಪಾವೋ ಎಂದೇ ಸ್ಥಳೀಯರು ಗುರುತಿಸುವ ಈ ಮಣ್ಣಿನ ಮಡಿಕೆಗಳು ಮಾಡುವ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಒಂದು ರೀತಿಯಲ್ಲಿ ಇವು ನಮ್ಮ ಅರವಟಿಗೆಗಳನ್ನು ನೆನಪಿಸುತ್ತವೆ. ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ ಸ್ಥಳೀಯ ಬಡ ಜನರ ಶ್ರೀಮಂತ ಸೇವೆಯಿದು. ಅಲ್ಲಿನ ಮಂದಿಯ ದೃಷ್ಟಿಯಲ್ಲಿ ಜಗನ್ನಾಥನ ರಥ ಎಳೆಯುವುದಕ್ಕಿಂತಲೂ ಹೆಚ್ಚಿನ ಪುಣ್ಯಕಾರ್ಯ; ಭಕ್ತರಿಗೆ ಕುಡಿಯಲು ನೀರು ಕೊಡುವುದು. ಅತ್ಯಂತ ಆಸ್ಥೆಯಿಂದ ಮನೆಮನೆಗಳಲ್ಲಿ ನೀರು ಹಂಚಲಾಗುತ್ತದೆ. ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೇ ಬಾಯಾರಿದವರ ಬೊಗಸೆಗೆ ನೀರು ಹನಿಸಲು ನಿಂತಿರುತ್ತಾರೆ.

ತುಂಬಿ ತುಳುಕುವ ಬೀದಿಯ ಬದಿಯಲ್ಲಿ ಹಳೆಯ ಮನೆಗಳ ಎದುರು ಕಲ್ಲು ಹಾಸಿದ ಜಗುಲಿ. ಅದರ ತುದಿಯಲ್ಲೊಂದು ಕಟ್ಟೆ. ಅದರ ಮೇಲೆ ಉದ್ದಕ್ಕೂ ಜೋಡಿಸಿಟ್ಟ ಮಡಕೆಗಳು. ಅದರಲ್ಲಿ ತಣ್ಣಗೆ ಕುಳಿತ ನೀರು. ಕೆಲವು ಮನೆಗಳಲ್ಲಿ ಬಕೆಟ್, ಪಾತ್ರೆ, ಸ್ಟೀಲ್ ಡ್ರಮ್ ಗಳನ್ನು ಬಳಸುವುದೂ ಉಂಟು. ಅದರೆದುರು ಮನೆಯ ಸದಸ್ಯರೊಬ್ಬರು ಉದ್ದದ್ದ ಗುಂಡಿ ಸೌಟು ಹಿಡಿದು ಕುಕ್ಕರಗಾಲಲ್ಲಿ ಕುಳಿತಿರುತ್ತಾರೆ. ಬಂದವರಿಗೆಲ್ಲ ಪಾವೋದೊಳಗಿನ ನೀರನ್ನು ಮೊಗೆಮೊಗೆದು ಬೊಗಸೆಗೆ ಹನಿಸುವುದೇ ಅವರ ಕೆಲಸ. ಇದು ಬೆಳಗ್ಗಿನಿಂದ ಸಂಜೆಯ ವರೆಗೂ ಸಾಗುತ್ತಲೇ ಇರುತ್ತದೆ. ಒಬ್ಬರಿಗೆ ಆಯಾಸವಾದರೆ ಇನ್ನೊಬ್ಬರು ಬಂದು ಕುಳಿತುಕೊಳ್ಳುತ್ತಾರೆ. ದಟ್ಟಣೆ ಹೆಚ್ಚಾದರೆ ಇಬ್ಬರು-ಮೂವರು ಒಟ್ಟೊಟ್ಟಿಗೇ ನೀರು ಕೊಡುವ ಕೆಲಸಕ್ಕೆ ನಿಲ್ಲುತ್ತಾರೆ. ಕೆಲವೊಮ್ಮೆ ಪುಟ್ಟ ಹೂಜಿಗಳನ್ನೇ ಬಗ್ಗಿಸಿ ಒಬ್ಬರಾದಮೇಲೊಬ್ಬರಿಗೆ ನೀರು ಎರೆಯುತ್ತಾರೆ.

ಹಾಗೆ ಬಂದವರಿಗೆಲ್ಲ ನೀರು ಕೊಡುತ್ತಿದ್ದರೆ, ಆ ಮನೆಯವರ ಮುಖದಲ್ಲಿ ಹಣಕುವ ಸಂತೃಪ್ತಿಯನ್ನು ನೋಡಬೇಕು. ಇನ್ಯಾವ ಪೂಜೆ ಪುನಸ್ಕಾರದಿಂದಲೂ ಅಷ್ಟು ಸಮಾಧಾನ ಸಿಗಲಿಕ್ಕಿಲ್ಲ. ಅದನ್ನೇ ಹೇಳುತ್ತಾರೆ ಪಾವೋ ಸೇವೆಯಲ್ಲಿ ತೊಡಗಿದ್ದ ಮನೆಯೊಂದರ ಹಿರಿಯಜ್ಜಿ ರುಕುಮಾಯಿ. ವ್ಯಾಪಾರಿ ಕುಟುಂಬದವರಾದ ಅವರ ಮನೆಯಿಂದ ಪುರಿಯ ಮೂರು ಕಡೆಗಳಲ್ಲಿ ಇಂಥ ನೀರಿನ ವ್ಯವಸ್ಥೆ ಮಾಡಲಾಗಿದೆಯಂತೆ. ಮಾತ್ರವಲ್ಲ, ಭುವನೇಶ್ವರ ರಸ್ತೆಯಲ್ಲಿ, ಪುರಿಯಿಂದ ಮೂರು ಕಿಲೋಮೀಟರ್ ಹೊರಗೆ ಅವರ ಹೊಲದ ಪಕ್ಕದಲ್ಲಿಯೂ ದಾರಿ ಹೋಕರಿಗಾಗಿ ಪಾವೊ ವ್ಯವಸ್ಥೆ ಮಾಡಲಾಗಿದೆಯಂತೆ. ಜಾತ್ರಾ ಸಂದರ್ಭದಲ್ಲಿ ಒಂದೊಂದರಲ್ಲೂ ಏನಿಲ್ಲವೆಂದರೂ ದಿನಕ್ಕೆ ಮೂರ್‍ನಾಲ್ಕು ಸಾವಿರ ಮಂದಿಗೆ ನೀರು ಕೊಡಲಾಗುತ್ತದೆ ಎಂದು ವಿವರಿಸುತ್ತಾರವರು.

ಇದೆಲ್ಲಕ್ಕಿಂತ ವಿಶೇಷವೆಂದರೆ, ಅಷ್ಟೊಂದು ನೀರು ಸಂಗ್ರಹದ್ದು. ಒಂದು ವಾರ ಮುಂಚಿನಿಂದಲೇ ಮನೆಗಳಲ್ಲಿ ನೀರಿನ ಸಂಗ್ರಹ ಆರಂಭವಾಗಿರುತ್ತದಂತೆ. ಇಲ್ಲದಿದ್ದರೆ ಅಷ್ಟೊಂದು ಜನರಿಗೆ ನೀರು ಪೂರೈಸಲಾಗುವುದಿಲ್ಲ. ಮನೆಯ ಬಾವಿ, ನಗರ ನೀರು ಪೂರೈಕೆಯ ಕೊಳಾಯಿಯ ಸಹಾಯದಿಂದ ನಡುಮನೆಯಲ್ಲಿ ದೊಡ್ಡ ದೊಡ್ಡ ಕಡಾಯಿಗಳಲ್ಲಿ, ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ನೀರು ತುಂಬಿಟ್ಟುಕೊಂಡಿರುತ್ತಾರೆ. ನೀರು ತುಂಬಿಡುವಾಗಲೇ ಅದನ್ನು ಬಿಳೀ ಬಟ್ಟೆಯ ಮೂಲಕ ಸೋಸಿ ಶುದ್ಧತೆಯ ಬಗ್ಗೆ ಗಮನ ಹರಿಸಲಾಗುತ್ತದೆ. ಒಮ್ಮೆ ನೀರು ತುಂಬಿಟ್ಟ ಮೇಲೆ ನಡುಮನೆಗೆ ಸ್ನಾನ ಆಗದೇ ಪ್ರವೇಶವಿಲ್ಲ. ಯಾವ್ಯಾವುದೋ ಕೈಯಲ್ಲಿ ನೀರನ್ನು ಮೊಗೆಯುವಂತಿಲ್ಲ. ಸಂಗ್ರಹಿಸಿಟ್ಟ ನೀರನ್ನು ತೆಗೆಯುವುದೂ ನಿರ್ದಿಷ್ಟ ವ್ಯಕ್ತಿ ಮಾತ್ರ. ಆ ಜವಾಬ್ದಾರಿ ಸಾಮಾನ್ಯವಾಗಿ ಮನೆಯ ಯಜಮಾನನದ್ದೇ ಆಗಿರುತ್ತದೆ. ನೀರ ಕಟ್ಟೆಯ ಬಳಿಗೆ ಬರುವಾಗಲೂ ಪಾದರಕ್ಷೆಯನ್ನು ಹಾಕಿಕೊಂಡು ಹೋಗುವಂತಿಲ್ಲ. ಅಷ್ಟೊಂದು ಪಾವಿತ್ರ್ಯ ರಕ್ಷಣೆ.

ಒಟ್ಟಾರೆ ಇಂದಿನ ಬಾಟಲೀ ನೀರಿನ ವ್ಯಾಪಾರ ಭರಾಟೆಯ ನಡುವೆ ನೀರು ಹಂಚಿ ನೆಮ್ಮದಿ ಕಾಣುವ ಅಪರೂಪದ ಸಂಸ್ಕೃತಿ ಜಗನ್ನಾಥನ ಸನ್ನಿಯಲ್ಲಿ ಇನ್ನೂ ಉಳಿದುಕೊಂಡಿದೆ. ಇವೆಲ್ಲದರ ಮಧ್ಯೆಯೂ ಆಧುನಿಕತೆ ದಾಳಿ ಇಟ್ಟಿದೆ ಎಂಬುದು ಬೇಸರದ ಸಂಗತಿ. ರಥಯಾತ್ರೆಯ ಸಂದರ್ಭದಲ್ಲಿ ಸೇವೆಗೆ ನಿಲ್ಲುವ ಕೆಲ ಸಂಘ ಸಂಸ್ಥೆಗಳು ನೀರು ತುಂಬಿದ ಪ್ಲಾಸ್ಟಿಕ್ ತೊಟ್ಟೆಗಳನ್ನು ಹಂಚುತ್ತಿದ್ದುದೂ ಇತ್ತು. ರಥಯಾತ್ರೆಯ ಸಂದರ್ಭದಲ್ಲಿ ಸೇರುವ ಜನಸಾಗರ, ಮತ್ತವರ ದಾಹದ ಲಾಭ ಪಡೆಯಲು ಕೆಲ ಖಾಸಗೀ ಕಂಪನಿಗಳೂ ಮುಂದಾಗಿದ್ದುದೂ ಸ್ಪಷ್ಟವಾಗಿತ್ತ್ತು. ತಮ್ಮ ಕಂಪನಿಯ ಹೆಸರು ಮುದ್ರಿಸಿದ ತೊಟ್ಟೆಗಳನ್ನು ಸೇವೆಯ ಹೆಸರಲ್ಲಿ ಜನರಿಗೆ ಹಂಚಿ, ಪುರಿಯ ಕಸದ ರಾಶಿಗೆ ತಮ್ಮದೂ ಕೊಡುಗೆಯನ್ನು ನೀಡಿದ್ದರು. ಮರುದಿನ ನಗರದ ಬೀದಿಬೀದಿಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಖಾಲಿ ತೊಟ್ಟೆಗಳು ಪಾವೋಗಳನ್ನು ಅಣಕಿಸಿದಂತೆ ಭಾಸವಾಗಿದ್ದರೆ ಅದು ವ್ಯವಸ್ಥೆಯ ದುರಂತ.

‘ಲಾಸ್ಟ್’ಡ್ರಾಪ್: ಪುರಿಯ ನೀರಿನ ದಾಹ ಹೇಗಿದೆ ಎಂದರೆ, ಅಲ್ಲಿನ ಜಗನ್ನಾಥ ದೇಗುಲ ಹಾಗೂ ಐತಿಹಾಸಿಕ ಗುಂಡೀಚಾ ದೇಗುಲದ ನಡುವೆ ಹರಿಯುತ್ತಿತ್ತೆನ್ನಲಾದ ನದಿ ಈಗ ನೆನಪು ಮಾತ್ರ. ಮಾತ್ರವಲ್ಲ ಕಲುಷಿತ ನೀರಿನಿಂದ ಹುಟ್ಟುವ ಎಲ್ಲ ರೋಗಗಳಿಗೂ ಪುರಿ ಆವಾಸ ಸ್ಥಾನ ಎನ್ನುತ್ತದೆ ಅಧ್ಯಯನ.

Friday, August 14, 2009

ನಾನಾ ಬಗೆಯ ಜ್ವರ: ಆದರೂ ಶುದ್ಧ ನೀರಿನ ಬಗೆಗೆ ಅನಾದರ

ಒಂದು ರೀತಿಯಲ್ಲಿ ದೇಶಕ್ಕೆ ದೇಶವೇ ಕಂಗಾಲಾಗಿ ಕುಳಿತಿದೆ. ಮಾಮೂಲಿಗಿಂತ ಮೈ ಒಂಚೂರು ಬೆಚ್ಚಗಾದರೂ ಬೆಚ್ಚಿ ಬೀಳುತ್ತಿದ್ದಾರೆ. ಮಕ್ಕಳ ತಲೆ ತುಸು ಬಿಸಿಯಾದರೂ ಸಾಕು ಅಪ್ಪ ಅಮ್ಮಂದಿರಿಗೆ ತಲೆಬಿಸಿಯೋ ತಲೆ ಬಿಸಿ. ಹಿಂದೆ ಮುಂದೆ ಯಾರಾದರೂ ಒಬ್ಬರು ಹಂದಿ ಎಂದರೆ ಸಾಕು ಇಡೀ ಬಡಾವಣೆಯೇ ಜ್ವರಕ್ಕೆ ಬಿದ್ದು ಹೊರಳಾಡುವಂತೆ ಆಡುತ್ತದೆ. ಏನಿದು ? ನಿಜವಾಗಿ ಮಹಾಮಾರಿಯೊಂದು ನಮ್ಮನ್ನು ಆವರಿಸಿದೆಯೇ ? ಅಥವಾ ಸನ್ನಿಗೊಳಗಾಗಿ ಹೀಗಾಡುತ್ತಿದ್ದೇವೆಯೇ ? ಡೆಂಗೆ, ಚಿಕೂನ್ ಗುನ್ಯಾ, ಮಲೇರಿಯಾ, ಕಾಲರಾ, ಹಕ್ಕಿ ಜ್ವರ, ಇದೀಗ ಹಂದಿ ಜ್ವರ ಹೀಗೆ ದಿನಕ್ಕೊಂದು ಕಾಯಿಲೆಗಳು ನಮ್ಮನ್ನು ಬಾಸುತ್ತಲೇ ಇವೆ. ಈ ಹಿಂದೆ ಇವೆಲ್ಲ ಎಲ್ಲಿದ್ದವು. ಇದ್ದಕ್ಕಿದ್ದಂತೆ ಇವು ಬರುತ್ತಿರುವುದಾದರೂ ಏಕೆ ? ಒಮ್ಮೆಯೂ ನಾವು ಯೋಚಿಸುತ್ತಿಲ್ಲ.

ಇಷ್ಟೆಲ್ಲ ಭಾನಗಡಿ ಆದದ್ದು ಮೆಕ್ಸಿಕೋದ ಲಾ ಗ್ಲೋರಿಯಾ ಎಂಬ ಹಂದಿಗೂಡಿನಿಂದ. ಕಳೆದ ಏಪ್ರಿಲ್‌ನಲ್ಲಿ ಅಲ್ಲಿಂದ ಆರಂಭವಾದ ಹಂದಿಜ್ವರದ ಭೀತಿ ದಿನದಿಂದ ದಿನಕ್ಕೆ ಏರುತ್ತಲೇ ಇದೆಯೇ ವಿನಃ ತಣಿಯುತ್ತಿಲ್ಲ. ಔಷಧ ಕಂಪನಿಗಳು ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ವಾರ್ಷಿಕ ಆದಾಯದ ಮಟ್ಟವನ್ನು ಏರಿಸಿಕೊಳ್ಳುತ್ತಿವೆ. ಟಾಮಿ ಫ್ಲೂ , ರೆಲೆನ್ಸಾ ಮತ್ತಿತರ ಔಷಧಗಳಿಗೆ ಬೇಡಿಕೆ ಪ್ರಮಾಣ ಹೇಗೆ ಏರಿದೆ ಎಂದರೆ ಅದು ಕೂಡ ಕಾಳಸಂತೆಯ ಸರಕಾಗಿ ಬದಲಾಗಿದೆ. ಜೀವ ರಕ್ಷಕ ಔಷಧ ಮಾರಾಟವೂ ದಂಧೆಯಾಗಿ ಪರಿವರ್ತಿತವಾಗಿದೆ. ಆ ಹೆಸರಿನಲ್ಲಿ ಯಾವುದೇ ನೀರನ್ನು ಚುಚ್ಚಿದರೂ, ಮಾಮೂಲಿ ಜ್ವರದ ಮಾತ್ರೆ ಕೊಟ್ಟರೂ ಕ್ಷಣವೂ ಯೋಚಿಸದೇ ಸಾವಿರಾರು ರೂಪಾಯಿ ತೆತ್ತು ನುಂಗಿ ನೀರು ಕುಡಿಯುವ ಹಂತವನ್ನು ತಲುಪಿದ್ದೇವೆ.

ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಓಡಾಡಿದರೆ ತೃಪ್ತಿ ಇಲ್ಲ. ತ್ರೀ ಮೈಕ್ರಾನ್ ಗಾತ್ರದ ಸೂಕ್ಷ್ಮ ಜೀವಾಣುಗಳೂ ಒಳ ಪ್ರವೇಶಿಸದಂತೆ ತಡೆಯುವ ಮೆಡಿಕೇಟೆಡ್ ಮುಖವಾಡವನ್ನೇ ಹಾಕಿಕೊಂಡು ಶಾಲೆಗೆ ಹೋಗಬೇಕೆಂದು ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿರುವ ಮಕ್ಕಳೂ ಹಠ ಮಾಡುತ್ತವೆ. ಹಾಗೆಂದು ಟೀಚರ್ ತಾಕೀತು ಮಾಡಿ ಅವನ್ನು ಕಳಿಸಿರುತ್ತಾರೆ. ಅನಿವಾರ್ಯವಾಗಿ ನೂರಾರು ರೂ. ತೆತ್ತು ಮುಖವಾಡ ಕಟ್ಟಿ ಕಳಿಸುತ್ತೇವೆ. ಅದು ಕಿರಿಕಿರಿ ಎನಿಸುತ್ತಿದ್ದರೂ ಮಕ್ಕಳು ಸಹಿಸಿಕೊಂಡು ಶಾಲೆಗೆ ಹೋಗುತ್ತವೆ. ಮನೆಯಲ್ಲೇ ಲಾವಂಚದ ಬೇರು, ಜೀರಿಗೆ, ತುಳಸಿ ಹಾಕಿ ಕುದಿಸಿದ, ಪಚ್ಚ ಕರ್ಪೂರ ಬೆರೆಸಿದ ಸುವಾಸನಾಯುಕ್ತ ನೀರಿನ ಮೇಲೆ ನಮಗೆ ನಂಬಿಕೆ ಬರುವುದೇ ಇಲ್ಲ. ನೂರಾರು ರೂಪಾಯಿ ಕೊಟ್ಟರೂ ಪರವಾಗಿಲ್ಲ, ರಿಸ್ಕ್ ಏಕೆಂದುಕೊಂಡು ಮಿನರಲ್ ವಾಟರ್ ಕ್ಯಾನ್‌ಗಳನ್ನೇ ತರಿಸಿ ಮನೆಯಲ್ಲಿ ಪೇರಿಸಿಟ್ಟುಕೊಳ್ಳುತ್ತೇವೆ.

ಸತ್ಯ, ಇವೆಲ್ಲಕ್ಕೂ ಒಂದಲ್ಲ ಒಂದು ರೀತಿಯಲ್ಲಿ ನಾವು ಸೇವಿಸುತ್ತಿರುವ ನೀರು-ಗಾಳಿಯೇ ಕಾರಣ. ಅವುಗಳ ಬಗೆಗಿನ ಶುದ್ಧತೆಯ ಕಾಳಜಿ ದೈನಂದಿನ ಬದುಕಿನ ಭಾಗವಾಗಿರಬೇಕು. ಆದರೆ, ಇಂಥ ಸಾಂಕ್ರಾಮಿಕಗಳ ಭೀತಿ ಬಂದಾಗ ಮಾತ್ರ ಗರಬಡಿದವರಂತೆ ಆಡುತ್ತ, ಶುದ್ಧ ಗಾಳಿ ನೀರಿನ ಮಾತನಾಡುವ ನಾವು ಉಳಿದ ಸಂದರ್ಭದಲ್ಲಿ ಅಸೀಮ ನಿರ್ಲಕ್ಷ್ಯದೊಂದಿಗೆ ಇದ್ದು ಬಿಡುವುದೇಕೋ ?ಒಂದು ಮಾತು ನೆನಪಿಡಲೇಬೇಕು, ಅಶುದ್ಧ ನೀರು ಇಡೀ ಮಾನವ ಬದುಕನ್ನೇ ಅಸ್ಥಿರಗೊಳಿಸುತ್ತಿದೆ. ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನೇ ನೀರು ಬುಡಮೇಲು ಮಾಡುತ್ತಿದೆ ಎಂದರೆ ಅಚ್ಚರಿ ಎನಿಸ ಬಹುದು. ಆದರೆ ಇದು ಸತ್ಯ.

ಶುದ್ಧ, ಕಲ್ಮಷರಹಿತ, ಆರೋಗ್ಯಪೂರ್ಣ ನೀರು ಮಾತ್ರ ಅಭಿವೃದ್ಧಿಯ ಸೂಚ್ಯಂಕವನ್ನು ಏರುಮುಖಗೊಳಿಸಬಹುದು. ಸಾಂಕ್ರಾಮಿಕಗಳಿಂದ ಮುಕ್ತ, ಬ್ಯಾಕ್ಟೀರಿಯಾ ರಹಿತ, ರಾಸಾಯನಿಕಗಳಿಂದ ದೂರವಿರುವ ನೀರು ನಿಜವಾದ ಅಭಿವೃದ್ಧಿಯ ಸಂಕೇತ. ಮುಂದುವರಿದ ರಾಷ್ಟ್ರಗಳ ಸಾಲಿನತ್ತ ದಾಪುಗಾಲಿಡುತ್ತಿರುವ ಭಾರತ ಈ ದೃಷ್ಟಿಯಿಂದ ಎಷ್ಟರ ಮಟ್ಟಿಗೆ ಅಭಿವೃದ್ಧಿಯನ್ನು ಸಾಸಿದೆ? ಬಹುಶಃ ಇದು ಪ್ರಶ್ನೆಯಾಗಿಯೇ ಉಳಿದುಕೊಳ್ಳುತ್ತದೆ.

ಮೇಲ್ನೋಟಕ್ಕೆ ನಾವು ಪಟ್ಟಿ ಮಾಡ ಹೊರಟರೆ ನೀರಿನಿಂದಲೇ ಹರಡುವ ಏನಿಲ್ಲವೆಂದರೂ ಒಂದು ಹತ್ತಿಪ್ಪತ್ತು ಕಾಯಿಲೆಗಳನ್ನು ಹೆಸರಿಸಬಹುದು. ನೀರಿನ ವೈರಾಣುಗಳಿಂದ ಹರಡಬಹುದಾದ ವೈರಲ್ ಫೀವರ್, ಹೆಪಟೈಟಿಸ್, ಪೊಲಿಯೋ ಇತ್ಯಾದಿಗಳು ಸಾಮಾನ್ಯವೆಂಬಂತಾಗಿದೆ. ಇನ್ನು ಬ್ಯಾಕ್ಟೀರಿಯಾಗಳಿಂದ ಬರುವ ಟೈಫಾಯ್ಡ್, ಪ್ಯಾರಾ ಟೈಫಾಯ್ಡ್, ಕಾಲರಾ, ಸೂಕ್ಷ್ಮಾಣುಗಳಿಂದ ಬರುವ ಭೇದಿ (ಬ್ಯಾಸೆಲರಿ ಡೀಸೆಂಟ್ರಿ) ಡಯೇರಿಯಾ ಇತ್ಯಾದಿಗಳಲ್ಲದೆ ಅಮೀಬಿಯಾಸಿಸ್‌ನಂಥ ಮಾರಕ ರೋಗಗಳ ನಿರ್ಮೂಲನೆ ನಮ್ಮಿಂದ ಸಾಧ್ಯವೇ ಆಗಿಲ್ಲ. ಜಂತುಗಳ ಹಾವಳಿಯಂತೂ ಅಶುದ್ಧ ನೀರಿನ ಬಹುದೊಡ್ಡ ಬಳುವಳಿ. ಇದಲ್ಲದೇ ಸ್ಕಿಸ್ಟೋಸೋಮಿಯಾಸಿಸ್, ಗುನ್ಯಾ, ಮೀನಿನ ಬಾಲದ ಜಂತುವಿನ ಬಾಧೆ ಅಸಹನೀಯ ವೇದನೆಗೆ ಮಾನವನನ್ನು ತುತ್ತಾಗಿಸುತ್ತಿವೆ. ಚರ್ಮ ಸಂಬಂ ರೋಗಗಳು, ಹಲ್ಲಿನ ತೊಂದರೆಗಳು, ಮೂಳೆಗಳಿಗಾಗುತ್ತಿರುವ ಧಕ್ಕೆ.... ಇಂಥವುಗಳನ್ನು ಬಹುತೇಕರು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಹೀಗಾಗಿ ಇದು ಗಣನೆಗೆ ಸಿಗುತ್ತಿಲ್ಲ. ಆದರೆ ಇವುಗಳು ಉಲ್ಬಣಾವಸ್ಥೆಯಲ್ಲಿ ಮಾತ್ರ ತೀರಾ ಅಸಹನೀಯ. ಇನ್ನು ಫ್ಲೋರೋಸಿಸ್‌ನಂಥ ಕಾಯಿಲೆಗಳು ಸಾಮೂಹಿಕ ಪರಿಣಾಮ ಬೀರುತ್ತಿರುವುದರಿಂದ ಹಲವಾರು ವರ್ಷ ಗಳ ಬಳಿಕ ಇತ್ತೀಚೆಗೆ ಸುದ್ದಿ ಮಾಡಲಾರಂಭಿಸಿದೆ.

ಎಷ್ಟೋ ಬಾರಿ ಅಶುದ್ಧ, ಅಸಮತೋಲಿತ ನೀರಿನ ಸೇವನೆ, ಜಠರ, ಮೂತ್ರಕೋಶಗಳಂಥ ಪ್ರಮುಖ ಅಂಗಗಳಿಗೆ ಹಾನಿ ತಂದು ಜೀವವನ್ನೇ ಬಲಿ ತೆಗೆದುಕೊಂಡಿರುವ ಉದಾಹರಣೆಗಳೂ ಇವೆ. ಇವೆಲ್ಲದರ ನಡುವೆಯೂ ನಾವು ನಲ್ಲಿಯಲ್ಲಿ ಬರುವ ನೀರನ್ನು ಕಣ್ಣು ಮುಚ್ಚಿಕೊಂಡು ಕುಡಿದಿದ್ದೇವೆ; ಕುಡಿಯುತ್ತಿದ್ದೇವೆ. ಕನಿಷ್ಠ ಆ ನೀರಿನ ಮೂಲ ಯಾವುದು ಎಂಬುದರ ಬಗ್ಗೆಯೂ ಯೋಚಿಸಿಲ್ಲ. ಇಂಥ ಸಂದರ್ಭದಲ್ಲಿ ಸಂಸ್ಕರಣೆ ಎಂಬ ಪ್ರಶ್ನೆಯೇ ಇಲ್ಲ.

ಇಷ್ಟಕ್ಕೂ ಸಂಸ್ಕರಣೆ ಎಂದರೇನು ? ಸಾಮಾನ್ಯವಾಗಿ ಬೃಹತ್ ಪ್ರಮಾಣದಲ್ಲಿ ನೀರು ಪೂರೈಕೆಯ ಸಂದರ್ಭದಲ್ಲಿ ಮರಳಿನ ಮೂಲಕ ಸೋಸುವುದೇ ಹೆಚ್ಚು. ನೈಸರ್ಗಿಕ ವಾಗಿ ಮಣ್ಣು, ಮರಳುಗಳಲ್ಲಿ ಜಿನುಗಿದಾಗ, ಸೂರ್ಯ ರಶ್ಮಿಯ ನೇರ ಸಂಪರ್ಕದಲ್ಲಿ ನೀರು ಶುದ್ಧಗೊಳ್ಳುತ್ತದೆ. ಇದಲ್ಲದೇ ನೀರನ್ನು ಆಲಂ (ಬಣ್ಣ ರಹಿತವಾದ, ಸಾಮಾ ನ್ಯವಾಗಿ ಔಷಧಗಳಲ್ಲಿ ಬಳಸುವ ಒಂದು ಸಂಯುಕ್ತ ವಸ್ತು) ಜತೆ ಬೆರೆಸಿಯೂ ಸಂಸ್ಕರಿಸುವ ಪದ್ಧತಿ ಇದೆ. ಇದಾದ ಬಳಿಕ ಮರಳಿನ ಹಾಸಿನ ಮೂಲಕ ನೀರನ್ನು ಹಾಯಿಸಿ, ನಂತರ ಕ್ಲೋರಿನ್‌ಯುಕ್ತ ಅನಿಲ, ದ್ರಾವಣ ಗಳನ್ನು ಬೆರೆಸಿ ಕೊಳಾಯಿಗಳ ಮೂಲಕ ಪೂರೈಸಲಾಗುತ್ತದೆ.

ಇಷ್ಟಾದ ಮಾತ್ರಕ್ಕೆ ನೀರು ಶುದ್ಧವೆನ್ನಲಾಗದು. ಮೇಲ್ನೋಟಕ್ಕೆ ನೀರು ತಿಳಿಯಾಗಿ ಕಂಡರೂ ಅದರಲ್ಲಿ ಜೈವಿಕ, ರಾಸಾಯನಿಕ ಅಂಶ ಇರಬಹುದು. ಸಂಸ್ಕರಣಾ ಕೇಂದ್ರದಿಂದ ಪೂರೈಸಲಾದ ಬಳಿಕವೂ ನೀರು ಅಶುದ್ಧ ಗೊಳ್ಳುವ ಸಾಧ್ಯತೆಗಳಿವೆ. ವಿಶಾಲ ಪೈಪ್ ಜಾಲದಲ್ಲಿ, ಸಂಗ್ರಹಣಾ ಟ್ಯಾಂಕ್‌ಗಳಲ್ಲಿ, ಡ್ರೈನೇಜ್‌ಗಳ ಸೋರಿಕೆ ಯಿಂದ ನೀರು ಕಲುಷಿತಗೊಳ್ಳುವುದೇ ನಗರ ಪ್ರದೇಶ ಗಳಲ್ಲಿ ಹರಡುವ ಸಾಂಕ್ರಾಮಿಕ ರೋಗಗಳಿಗೆ ಮೂಲ ಕಾರಣ.

ನೀರಿನ ಕಲುಷಿತತೆ, ಅವುಗಳಲ್ಲಿ ಅಪಾಯಕಾರಿ ಕೀಟ ನಾಶಕ ಅಂಶಗಳಿರುವ ಕುರಿತಾದ ಕೂಗು ಎದ್ದಿರುವುದು ಇಂದು ನಿನ್ನೆಯದಲ್ಲ. ದಶಕಗಳಿಂದಲೂ ಈ ಸಂಬಂಧ ಒಂದಲ್ಲಾ ಒಂದು ವೇದಿಕೆಯಲ್ಲಿ ಚರ್ಚೆ ನಡೆಯುತ್ತಲೇ ಇದೆ. ೨೦೦೩ರಲ್ಲಿ ದಿಲ್ಲಿಯ ವಿeನ ಮತ್ತು ಪರಿಸರ ಕೇಂದ್ರ(ಸಿಎಸ್‌ಇ) ಹಲವು ಕಂಪನಿಗಳ ಬಾಟಲಿ ನೀರಿನ ನಮೂನೆಗಳನ್ನು ಪರೀಕ್ಷೆಗೊಳಪಡಿಸಿ ಬಹುತೇಕವು ಗಳಲ್ಲಿ ಅತ್ಯಂತ ವಿಷಯುಕ್ತ ರಾಸಾಯನಿಕ ಅದರಲ್ಲೂ ಕೀಟನಾಶಕಗಳ ಪ್ರಮಾಣ ನಿಗದಿತ ಮಟ್ಟಕ್ಕಿಂತಲೂ ಹೆಚ್ಚಿದೆ ಎಂದು ಸಾರಿತು. ದೇಶದ ತುಂಬೆಲ್ಲ ಆಗ ದೊಡ್ಡ ಹುಯಿಲೆದ್ದಿತ್ತು. ಶುದ್ಧ ಕುಡಿಯುವ ನೀರಿನ ಹಕ್ಕಿನ ಕುರಿತಾಗಿ ಬಹುದೊಡ್ಡ ಚರ್ಚೆ ನಡೆಯಿತು.

ಸಿಎಸ್‌ಇ ಯುರೋಪಿಯನ್ ಮಾನದಂಡದಲ್ಲಿ ನೀರಿನ ಪರೀಕ್ಷೆ ನಡೆಸಿತ್ತು ಎಂಬುದು ಗಮನಾರ್ಹ ಅಂಶ. ಭಾರತ ನಿಗದಿಪಡಿಸಿರುವ ಕುಡಿಯುವ ನೀರಿನ ಗುಣಮಟ್ಟದ ಮಾನದಂಡ ಅಸಮರ್ಪಕ ಹಾಗೂ ಗೊಂದಲಮಯ ಎಂಬುದು ಇದಕ್ಕೆ ಕಾರಣ. ನೀರಿನ ಕುರಿತಾದ ನಮ್ಮ ಅವಸ್ಥೆ ಎಷ್ಟರ ಮಟ್ಟಿಗಿದೆ ಎಂದರೆ ಕೊನೆ ಪಕ್ಷ ಅದಕ್ಕೊಂದು ಸ್ಪಷ್ಟ ಮಾನದಂಡವನ್ನೂ ನಾವು ನಿಗದಿಪಡಿಸಿಕೊಂಡಿಲ್ಲ. ಬಾಟಲಿ ನೀರಿನಲ್ಲಿ ಕೀಟನಾಶಕ ಅಂಶಗಳು ಕಂಡು ಬಂದದ್ದರಲ್ಲಿ ವಿಶೇಷವೇನಿಲ್ಲ. ಬಹುಶಃ ಇಂದು ಮತ್ತೆ ಪರೀಕ್ಷೆ ನಡೆಸಿದರೆ ಅಂದಿನಕ್ಕಿಂತಲೂ ಹೆಚ್ಚು ವಿಷಕಾರಿ ಅಂಶ ಪತ್ತೆಯಾಗಬಹುದು.

ವರ್ಷಕ್ಕೆ ೪೫ ಸಾವಿರ ಟನ್ ಕೀಟನಾಶಕವನ್ನು ಬಳಸುತ್ತಿರುವ ಭಾರತದಲ್ಲಿ ಬಹುಶಃ ಇದಕ್ಕಿಂತ ಇನ್ನೂ ಉತ್ತಮ ಗುಣಮಟ್ಟದ ನೀರು ಸಿಗಲು ಸಾಧ್ಯವೇ ಇಲ್ಲವೆನಿಸುತ್ತದೆ. ಎಷ್ಟೇ ಸಂಸ್ಕರಿಸಿದರೂ ಅಂತರ್ಜಲವೇ ವಿಷ ಯುಕ್ತವಾಗಿರುವಾಗ ಶುದ್ಧ ನೀರು ಮರೀಚಿಕೆಯಾಗುವುದು ಸಹಜ. ಆದರೆ ಆತಂಕವೆಂದರೆ ಪ್ರತಿದಿನ ಮಿಲಿಯನ್ ಗಟ್ಟಲೆ ಗ್ಯಾಲನ್ ನೀರನ್ನು ನಮ್ಮ ಹಳ್ಳಿಯ ಮಂದಿ ಭೂಮಿಯಿಂದ ಎತ್ತಿ ಸಂಸ್ಕರಿಸದೇ ನೇರವಾಗಿ ಕುಡಿಯುತ್ತಿದ್ದಾರೆ. ಅವರು ಬಳಸುವ ನೀರಿನಲ್ಲಿ ಇನ್ನೆಷ್ಟು ಪ್ರಮಾಣದ ಕಲ್ಮಶವಿದ್ದೀತು.

‘ಲಾಸ್ಟ್’ಡ್ರಾಪ್: ನೀರಿನ ಕುರಿತಾದ ‘ಗುಣ ನೀತಿ’ಯೊಂದು ಇಲ್ಲ. ಅದನ್ನು ಇನ್ನಾದರೂ ರೂಪಿಸಬೇಡವೇ ? ಅದಿಲ್ಲದಿದ್ದರೆ ಈಗಾಗಲೇ ೯ ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ ವಾರ್ಷಿಕ ವಹಿವಾಟು ನಡೆಸುತ್ತಿರುವ ಬಾಟಲಿ ನೀರಿನ ಕಂಪನಿಗಳು ‘ಶುದ್ಧ, ಸುರಕ್ಷಿತ’ ನೀರಿನ ಹೆಸರಿನಲ್ಲಿ ಇನ್ನಷ್ಟು ಕೊಳ್ಳೆ ಹೊಡೆಯುವುದಿಲ್ಲವೇ?

Saturday, August 8, 2009

ತುಂತುರು...ಇಲ್ಲಿ ನೀರ ಹಾಡು, ಹುಸೇನರ ಬಂಗಾರದ ಬೀಡು

ಲ್ಲಿ ಚಿಮ್ಮುತ್ತಿರುವುದು ಬರೀ ನೀರಲ್ಲ. ಅವು ಬತ್ತದ ಉತ್ಸಾಹದ ಹನಿಗಳು. ಕ್ರಿಯಾಶೀಲ ವ್ಯಕ್ತಿಯೊಬ್ಬನ ಆಂತರ್ಯದ ತುಡಿತ. ನೀರಿನ ಕಾಳಜಿಯ ತುಂತುರು. ಗುಡ್ಡದ ತಪ್ಪಲಿನಲ್ಲಿ ಬಕ್ಕ ಬೋರಲು ಬಿದ್ದಿದ್ದ ಇಡೀ ಒಂದೂಕಾಲು ಎಕರೆಯಲ್ಲಿ ಹಾರಾಡುವ ಒಂದೊಂದು ನೀರಿನ ಹನಿಯೂ ಪ್ರಯೋಗಶೀಲತೆಯ ದಿವ್ಯ ದರ್ಶನ ಮಾಡಿಸುತ್ತ ಹೋಗುತ್ತದೆ. ನಿಲ್ಲೆಂದರಲ್ಲಿ ನಿಲ್ಲುವ, ಚಿಮ್ಮಬೇಕೆಂದರೆ ಚಿಮ್ಮುವ, ಹರಿ ಎಂದರೆ ಹರಿಯುವ, ಇಂಗಲು ಬಿಟ್ಟರೆ ತನ್ನ ಪಾಡಿಗೆ ತಾನಿಂಗಿ ಸುತ್ತೆಲ್ಲ ತಂಪಾನುತಂಪು ತರುವ ನೀರಿನ ವಿಧೇಯತೆ ಕಂಡಾಗ ಪುಟ್ಟದೊಂದು ಬೆರಗು ಮೂಡಿ ಮಾಸುತ್ತದೆ.
ಯಾರೆಂದರೆ ಯಾರ ಆರಭಾರಕ್ಕೂ ನಿಲುಕದೇ ಕಾರುಬಾರು ನಡೆಸುವ ನೀರಿಗೆ ಈ ಪರಿ ತರಬೇತಿ ಕೊಟ್ಟು ಹೇಳಿದಂತೆ ಕೇಳಿಸುತ್ತ ಕೂರಿಸಿಕೊಂಡ ಆ ವ್ಯಕ್ತಿಯನ್ನು ಕಾಣಲೇಬೇಕೆಂದು ಗಂಗಾವತಿಯಿಂದ ಹತ್ತೇ ಹತ್ತು ಕಿಲೋ ಮೀಟರ್ ದೂರದಲ್ಲಿರುವ ಮಲ್ಲಾಪುರದ ಆ ಹೊಲಕ್ಕೆ ಹೋಗಿ ನಿಂತೆವು. ಹುಸೇನ್ ಸಾಬ್ ಪಟೇಲ್ ಎಂಬ ಆ ನೀರ ಮಿತ್ರ ಅಲ್ಲಿರಲಿಲ್ಲ. ಆದರೆ, ಆತ ಹೇಳಿ ಹೋದ ಕೆಲಸವನ್ನು ಮಾತ್ರ ನೀರು ನಿಯತ್ತಿನಿಂದ ಮಾಡುತ್ತ, ಇಡೀ ಹೊಲದ ತುಂಬ ಲಾಸ್ಯವಾಡುತ್ತ, ತುಳುಕುತ್ತ, ಬಳುಕುತ್ತ ನೆಲವನ್ನು ತೋಯಿಸುತ್ತಿತ್ತು. ಆಗಷ್ಟೇ ನೆರೆತು ನಿಂತಂತಿದ್ದ ಜೋಳದ ಕಡ್ಡಿಗಳು ನೀರ ಹನಿಗಳೊಂದಿಗೆ ಕೇಳಿಗೆ ಬಿದ್ದಿದ್ದವು. ಅವುಗಳ ಸಂಭ್ರಮವನ್ನು ಬೆರಗುಗಣ್ಣಿನಿಂದ ನೋಡುತ್ತ ಪಕ್ಕದ ಪಾತಿಗಳಲ್ಲೇ ಮೊಳೆಯುತ್ತಿದ್ದ ಉಳ್ಳಾಗಡ್ಡಿ ಗಿಡಗಳಿಗೆ ತಮ್ಮ ಸರದಿಯ ಕಾತರ. ದೊಡ್ಡ ಗಿಡಗಳ ಚೆಲ್ಲಾಟ ಕಂಡು ಆಗಲೇ ಅವುಗಳ ಕುಡಿ ನಾಚಿ ಕೆಂಪಗಾದಂತಿತ್ತು. ಒಂದು... ಎರಡು... ಮೂರು..... ಐದು ನಿಮಿಷ ಕಳೆದಿರಬಹುದು. ಪೈಪುಗಳಲ್ಲಿ ಜಾರಿ ಜಾರಿ ಕೆಳ ಬಂದ ಹನಿಗಳು ಉಳ್ಳಾಗಡ್ಡಿಯ ಬುಡಕ್ಕೂ ಸೋಕ ತೊಡಗಿದವು. ಅಷ್ಟೇ ಈಗವುಗಳ ಗಮನ ಥಟ್ಟನೆ ಬದಲಾಗಿ ಹೋಯಿತು. ಮೇಲಿಂದ ಪನ್ನೀರ ಸಿಂಚನದಂತೆ ಹಾರಿ ಬರುವ ಹನಿಗಳನ್ನು ಅನಾಮತ್ತಾಗಿ ಹೀರಿಕೊಂಡು ತಣಿಯುವ ತವಕ ಆ ಕುಬ್ಜ ಕನ್ನೆಯರದ್ದು. ನೋಡ ನೋಡುತ್ತಿದ್ದಂತೆಯೇ ಧೂಳಾಡುತ್ತ ಬಿದ್ದಿದ್ದ ಸುತ್ತಲ ಹತ್ತಾರು ಮಾರಿನ ನೆಲ ತೇವ ತೇವವಾಯಿತು. ಕಾದು ಕುಳಿತಿದ್ದ ಉಳ್ಳಾಗಡ್ಡಿ ಗಿಡಗಳಿಗೀಗ ಫುಲ್ ಖುಷ್. ಅಕ್ಕಪಕ್ಕಕ್ಕೆ ತೊನೆದು ತೂಗಾಡ ತೊಡಗಿದ್ದು ಕಂಡರೆ ಅವು ತಮ್ಮತಮ್ಮಲ್ಲೇ ಆಪ್ತ ಸಮಾಲೋಚನೆಗಿಟ್ಟುಕೊಂಡು, ಅನುಭವಗಳನ್ನು ಹಂಚಿಕೊಂಡು ಮುಸಿಮುಸಿ ನಗುತ್ತಿರುವಂತೆ ಕಾಣುತ್ತಿದ್ದವು.

ಹೀಗೆ...ದಾಟುತ್ತ ದಾಟುತ್ತ ಹೋದಂತೆ... ನೆಲಗಡಲೆ, ತೊಗರಿಗಳ ಸಾಲುಗಳೂ ತೊಯ್ದು ತಂಪಾದವು. ಹೊಲದ ನೆತ್ತಿಯಿಂದ ಬುಡದ ಗುಂಟ ಹೆಬ್ಬಾವಿನಂತೆ ಮಲಗಿದ್ದ ರಬ್ಬರ್ ಪೈಪ್‌ನ ಮಧ್ಯೆ ಮಧ್ಯೆ ಅಲ್ಲಲ್ಲಿ ಸಾಲುನೇರ್ತ ಲಂಬಕ್ಕೆ ನಿಂತಿದ್ದ ಒಂಬತ್ತು ಕೋಲುಗಳ ತುದಿಯಲ್ಲಿ ಬಿಟ್ಟೂ ಬಿಡದಂತೆ ನೀರು ಸ್ಖಲಿಸುತ್ತಲೇ ಇತ್ತು. ಅದಾದರೂ ಎಂಥ ರಭಸ ? ಚಿಮ್ಮುವ ಧಾರೆಗೆ ಕೈಯ್ಯೊಡ್ಡಿದರೆ ಉರಿ ಹತ್ತುತ್ತದೆ. ಬಹುಶಃ ಒಂದೋ ಎರಡೋ ಎಚ್‌ಪಿ ಸಾಮರ್ಥ್ಯದ ಮೋಟಾರ್ ಅಳವಡಿಸಿರಬಹುದು. ಅದಿಲ್ಲದಿದ್ದರೆ ನೀರಿಗಿಷ್ಟು ರಭಸ, ಅದರಲ್ಲೂ ಒಂಬತ್ತು ತುದಿಗಳಲ್ಲೂ ಏಕಕಾಲಕ್ಕೆ ಇಷ್ಟು ದೂರಕ್ಕೆ ಚಿಮ್ಮುವ ಶಕ್ತಿ ಹೇಗೆ ಬಂದೀತು ? ಹೇಗೂ ಬರಡು ನೆಲ. ಮೇಲಕ್ಕೆ ನೀರು ಸಿಕ್ಕುವುದೂ ದೂರದ ಮಾತು. ಆಳದ ಬೋರ್‌ನಿಂದ ನೀರನ್ನೆತ್ತಿ ಚಿಮ್ಮಿಸಲು ಸಾಕಷ್ಟು ಸಬಲ ಮೋಟಾರನ್ನೇ ಅಳವಡಿಸಿರುತ್ತಾರೆ ಎಂಬ ಊಹೆ ಪೆಗ್ಗುಬೀಳಿಸಿತ್ತು. ಪೈಪು ಸಾಲನ್ನೇ ಬೆಂಬತ್ತಿ ಸಾಗಿದರೆ ಹೊಲದ ಅಂಚು ಸಿಕ್ಕಿತೇ ವಿನಾ ಪೈಪು ಕೊನೆಯಾಗಲಿಲ್ಲ. ಅದೆಲ್ಲಿಂದ ನೀರನ್ನು ತಂದು ಹೊಲಕ್ಕೆ ಹನಿ ನೀರಾವರಿಯ ವ್ಯವಸ್ಥೆ ಮಾಡಿದ್ದಿರಬಹುದು ? ಕುತೂಹಲ ನಿಲ್ಲಗೊಡಲಿಲ್ಲ. ಮುಂದಕ್ಕೆ ಸಾಗಿದರೆ ಪೈಪ್‌ನ ಮಾದರಿ ಬದಲಾಯಿತೇ ಹೊರತು, ಜಾಲದ ಕೊನೆ ಸಿಗಲಿಲ್ಲ. ಪ್ಲ್ಯಾಸ್ಟಿಕ್ ಪೈಪ್ ಇದ್ದದ್ದು ರಬ್ಬರ್ ಬಾಲವಾಗಿ ಬದಲಾಗಿತ್ತು. ಟ್ಯೂಬ್‌ನ ಉದ್ದದ ಚೂರು ಅವೆರಡೂ ಮಾದರಿಯನ್ನು ಬೆಸೆದಿತ್ತು. ಮತ್ತೆ ಸಾಗಿತು ಪಯಣ. ಈಗ ತುಸು ಏರು ಮುಖ. ಗುಡ್ಡದ ಹಾದಿ ಬಳಸಿ ಬಂಡೆಗಳ ಸಾಲುಗಳ ನಡುವೆ ಹೊರಟವರಿಗೆ ಪುಟ್ಟದೊಂದು ಮರುಕಲು ಎದುರಾಯಿತು. ನಾಲ್ಕಾರು ಬಂಡೆಗಳ ನಡುವೆ ಪೈಪ್ ತೂರಿ ಹೋದಂತಿತ್ತು. ಕುತೂಹಲ ಹೆಚ್ಚಿ ಬಂಡೆಗಳಾಚೆ ಏನಿದ್ದೀತು ಎಂದು ನೋಡಿಯೇಬಿಡಲು ನಿರ್ಧರಿಸಿ ಬಳಸಿ ಬಂದು ನಿಂತರೆ ನಿಜಕ್ಕೂ ಅಚ್ಚರಿ ಕಾದದ್ದು ಅಲ್ಲಿ. ನಾವಂದು ಕೊಂಡಂತೆ ಯಾವುದೇ ಬೋರ್‌ವೆಲ್ ಆಗಲೀ, ಆಳ ಬಾವಿಯಾಗಲೀ ನೀರು ಕಕ್ಕುತ್ತ ಅಲ್ಲಿ ನಿಂತಿರಲೇ ಇಲ್ಲ. ಅಲ್ಲಿದ್ದದ್ದು ಹೆಚ್ಚೆಂದರೆ ನಾಲ್ಕಾರು ಅಡಿ ಆಳದ ಗುಂಡಿಯೆಂದರೆ ಪೂರ್ತಿ ಗುಂಡಿಯೂ ಅಲ್ಲದ ರಚನೆ. ನೀರಿನ ಹರಿವಿಗೆ ಅಡ್ಡಲಾಗಿ ಎರಡು ಬಂಡೆಗಳ ನಡುವೆ ಬೆಸೆದು ಹಾಕಿದ್ದ ಮರಳಿನ ಚೀಲಗಳ ಒಡ್ಡು ಆ ತಾಣವನ್ನು ಪುಟ್ಟ ಗುಂಡಿಯಾಗಿ ಪರಿವರ್ತಿಸಿತ್ತು. ಮರಳಿನ ಚೀಲಗಳ ಮಧ್ಯದಿಂದ ಪೈಪು ತೂರಿ ಬಂದಿತ್ತು. ಅದರ ಕೊನೆಗೊಂದಿಷ್ಟು ಹಳೆ ಬಟ್ಟೆ, ಮತ್ತದೇ ಟ್ಯೂಬ್‌ನ ಚೂರುಗಳನ್ನು ಸೇರಿಸಿ ಕಟ್ಟಿಡಲಾಗಿತ್ತು. ಒಂದು ಬಾರಿ ನೀರು ಹೊಲದ ಗುಂಟ ಹಾರಿ ಮುಗಿಸಿದ್ದರಿಂದ ನೀರಿನ ಹರಿವನ್ನು ಕಟ್ಟಿ ನಿಲ್ಲಿಸಲು ಯುವಕನೊಬ್ಬ ಪ್ರಯತ್ನಿಸುತ್ತಿದ್ದ.

‘ಏನಿದು ? ಹೊಲಕ್ಕೆ ಸ್ಪ್ರಿಂಕ್ಲರ್ ಹಾಕಿದ್ದೀರಾ. ಮೋಟಾರ್ ಎಲ್ಲಿದೆ ?’ ಪ್ರಶ್ನೆಗೆ ಮುಗುಳ್ನಕ್ಕ ಯುವಕ, ‘ಮೋಟಾರ್, ಗೀಟಾರ್ ಏನಿಲ್ಲ ಸ್ವಾಮೀ, ಇದೇ ನೀರೇ ಹರಿದು ಹೋಗುತ್ತೆ. ಒಂದಷ್ಟು ಹೊತ್ತು ಕಟ್ಟಿ ಇಡ್ತೀವಿ. ಗುಂಡೀಲಿ ನೀರು ನಿಂತುಕೊಂಡ ಮೇಲೆ ಬೂಚು ತೆಗೀತೀವಿ. ಕೆಳಕ್ಕೆ ಹೋಗ್ತಾ, ಹೋಗ್ತಾ ಪ್ರೆಷರ್ ಜಾಸ್ತಿ ಆಗಿ ಸ್ಪ್ರಿಂಕ್ಲರ್ ಹಾರಲು ಶುರು ಆಗುತ್ತೆ...’ ಎಂದ. ಕೇವಲ ಹರಿವ ನೀರಿಗೆ ಒಡ್ಡುಕಟ್ಟಿ ಪೈಪ್ ಜೋಡಿಸಿ ತುಂತುರು ನೀರಾವರಿಯನ್ನು ಅಳವಡಿಸಿದ ಅವರ ಕ್ರಿಯಾಶೀಲತೆಗೆ ಬೇಡವೆಂದರೂ ಮೆಚ್ಚಿ ತಲೆದೂಗಲೇ ಬೇಕು. ಅಂಥ ಮೆಚ್ಚುಗೆಯೇ ಯುವಕನ ಜತೆ ಮಾತಿಗೆ ತೊಡಗಿಸಿತ್ತು. ಆತ ಅಜ್ಮೀರ್ ಸಾಬ್. ನಾವು ಬೇಟಿಯಾಗಲೇಬೇಕೆಂದು ಹೊರಟಿದ್ದ ಹುಸೇನ್ ಸಾಬ್‌ರ ಮಗ. ಆ ಹೊಲದಲ್ಲಿ ನಡೆಸುತ್ತಿದ್ದ ಕೈಚಳಕಕ್ಕೆ ಅಪ್ಪನೊಂದಿಗೆ ಅಜ್ಮೀರ್‌ನದ್ದೂ ಸಾಥ್ ಇದೆ. ಇಂದು ಯಾವುದೇ ಹೊರಗಿನ ತಂತ್ರಜ್ಞಾನದ ಬಳಕೆ ಇಲ್ಲದೇ, ಯಂತ್ರಗಳ ನೆರವಿಲ್ಲದೇ, ವಿದ್ಯುತ್-ಇಂಧನದ ಗೋಜಿಗೆ ಹೋಗದೇ ಪೂರ್ಣವೆಂದರೆ ಪೂರ್ಣ ನೈಸರ್ಗಿಕವಾಗಿ ಇಡೀ ಹೊಲಕ್ಕೆ ನೀರು ಹಾಯಿಸುತ್ತಿರುವ ಹುಸೇನ್ ಸಾಬ್‌ರ ಇಂಥ ಹುಚ್ಚು ಪ್ರಯೋಗಗಳಿಗೆಲ್ಲ ಜತೆಯಾಗಿ ನಿಂತವನು ಅಜ್ಮೀರ್.

ಇದಕ್ಕೂ ಮೊದಲು ಗುತ್ತಿಗೆಗೆ ಪಡೆದಿದ್ದ ಹೊಲಕ್ಕೆ ನೀರು ಹಾಯಿಸಿಕೊಳ್ಳುವುದೇ ಅಪ್ಪ-ಮಗನಿಗೆ ಒಂದು ಸವಾಲಾಗಿತ್ತು. ವಿತರಣಾ ಕಾಲುವೆಯಿಂದ ನೀರು ಪಡೆಯೋಣವೆಂದರೆ ಅವರ ಹೊಲವಿದ್ದುದು ಎಲ್ಲರ ಜಮೀನಿನ ನೆತ್ತಿಯ ಮೇಲಕ್ಕೆ. ಕೆಳಗಿನವರು ಬಳಸಿ ನೀರು ಮಿಗುವುದೂ ಇಲ್ಲ, ಮಿಕ್ಕರೂ ಅಲ್ಲಿಯವರೆಗೆ ಹತ್ತುವುದಿಲ್ಲ. ಮೋಟಾರು ಜೋಡಿಸಿಕೊಂಡು ತರೋಣವೆಂದರೆ ವೆಚ್ಚ ಭರಿಸುವ ಶಕ್ತಿಯಿಲ್ಲ. ಜತೆಗೆ ವಿದ್ಯುತ್‌ಅನ್ನು ನಂಬಿಕೊಳ್ಳುವಂತಿಲ್ಲ. ಹಾಗೆಂದು ಸುಮ್ಮನೆ ಕೂರುವ ಜಾಯಮಾನಕ್ಕೆ ಬಿದ್ದವರಲ್ಲ ಹುಸೇನ್‌ಸಾಬ್. ಸರಕಾರಿ ನೌಕರಿಯಿಂದ ನಿವೃತ್ತರಾದ ಬಳಿಕವೂ ಏನಾದರೊಂದು ಮಾಡುತ್ತಲೇ ಇರಬೇಕೆಂಬ ಪುಟಿಯುವ ಯುವ ಮನಸ್ಸದು. ಅದಕ್ಕಾಗಿ ಕೃಷಿಯನ್ನು ಆಯ್ಕೆ ಮಾಡಿಕೊಂಡರು. ಈ ವಯಸ್ಸಲ್ಲಿ ಎಂಥಾ ದುಡಿಮೆ ಎನ್ನುವ ಆಲಸ್ಯ ಅವರ ಬಳಿ ಸುಳಿಯಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಅವರಿಗೆ ನಿವೃತ್ತಿಯ ಬಳಿಕವೂ ಸ್ವಂತ ಜಮೀನು ಖರೀದಿಸುವಷ್ಟು ಸಾಮರ್ಥ್ಯ ಇರಲಿಲ್ಲ. ಯಾರಿಗೂ ಬೇಡವಾದ, ಗುಡ್ಡದಂಚಿನ ಬಂಜರು ಭೂಮಿಯನ್ನೇ ಆಯ್ಕೆ ಮಾಡಿಕೊಂಡರು. ವಿಶೇಷವೆಂದರೆ ಅದು ಒಂದು ಕಾಲದಲ್ಲಿ ‘ಬಂಗಾರದ ತೇರು ಬೀದಿ’ಯಾಗಿ ಇತಿಹಾಸ ಪ್ರಸಿದ್ಧವಾಗಿದ್ದ ಜಾಗ. ಅಲ್ಲಿ ಹೊಸ ಪ್ರಯೋಗಗಳ ಮೂಲಕ ಬಂಗಾರದ ಬೆಳೆ ತೆಗೆಯಲು ಹೊರಟಿದ್ದರು ಹುಸೇನ್ ಸಾಬ್. ೩.೩ ಎಕರೆ ಭೂಮಿಯ ಬೆನ್ನಿಗೇ ಬೃಹದಾಕಾರದ ಬಂಡೆಗಳ ರಾಶಿಯಿದ್ದ ಗುಡ್ಡವಿತ್ತು. ಅಲ್ಲಿ ಬೀಳುವ ಮಳೆ ನೀರು ಇಂಗಿ, ಎಲ್ಲಾದರೊಂದು ಕಡೆ ಬಸಿದು ಬರಲೇಬೇಕೆಂಬುದನ್ನು ಮೊದಲ ನೋಟದಲ್ಲೇ ಗ್ರಹಿಸಿದರು ಹುಸೇನ್‌ಜಿ. ತುಸು ಹುಡುಕಾಟ ನಡೆಸುವಷ್ಟರಲ್ಲಿ ಅವರ ಊಹೆ ಹುಸಿಯಲ್ಲವೆಂಬದು ಖಚಿತವಾಯಿತು. ಅವರು ಆಯ್ದುಕೊಂಡಿದ್ದ ಜಮೀನಿನ ನೇರಕ್ಕೇ ಬೆಟ್ಟದ ನಟ್ಟನಡುವೆ ಊಟೆಯೊಂದು ಉಕ್ಕುತ್ತಿತ್ತು. ಅಲ್ಲಿಂದ ನೇರಕ್ಕೆ ಬಂಡೆಗಳ ನಡುವೆಯೇ ನೀರು ಬಸಿದು ಬರುತ್ತಿತ್ತು. ಊಟೆಯಿದ್ದ ಪ್ರದೇಶ, ಅಲ್ಲಿದ್ದ ಇಳಿಜಾರು ಗಮನಿಸಿದ ಹುಸೇನ್ ಸಾಬ್‌ರಿಗೆ ಮೊದಲ ನೋಟದಲ್ಲೇ ಆ ನೀರಿನ ಹರಿವಿಗೆ ಇರಬಹುದಾಗಿದ್ದ ಸಾಮರ್ಥ್ಯ ಅರಿವಿಗೆ ದಕ್ಕಿತ್ತು. ಯಾವ ಯಂತ್ರಗಳ ಸಹಾಯವಿಲ್ಲದೇ ಹೊಲಕ್ಕೆ ನೀರು ಚಿಮ್ಮಿಸಬಹುದೆಂದು ಲೆಕ್ಕ ಹಾಕಿದ್ದೇ ಆಯಕಟ್ಟಿನ ತಾಣವೊಂದರಲ್ಲಿ ಮರಳು ಚೀಲಗಳನ್ನು ಹಾಕಿ ಒಡ್ಡು ನಿರ್ಮಿಸಿದರು. ಅದರ ಬಾಯಿಗೆ ಪೈಪು ಜೋಡಿಸಿಕೊಂಡು ಬಂದು ತುಂತುರು ನೀರಾವರಿಯ ಉಪಕರಣಗಳನ್ನು ಜೋಡಿಸಿದರು. ಅವರ ಸಾಹಸ ಫಲ ನೀಡಿತ್ತು. ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಾಗ ಒಂದಲ್ಲ ಎರಡಲ್ಲ... ಬರೋಬ್ಬರಿ ಒಂಬತ್ತು ಕಡೆಗಳಲ್ಲಿ ನೀರು ಸಿಂಚನಗೈಯ್ಯತೊಡಗಿತ್ತು.

ಪ್ರಾಯೋಗಿಕವಾಗಿ ಒಂದು ಎಕರೆಗೆ ಮಾಡಿದ್ದ ತುಂತುರು ನೀರಾವರಿ ವ್ಯವಸ್ಥೆ ಸಫಲವಾಗಿತ್ತು. ಒಂದೂಕಾಲು ಎಕರೆಯಲ್ಲಿ ಮೊದಲ ಯತ್ನದಲ್ಲೇ ೪೦ ಚೀಲ ಮೆಕ್ಕೆ ಜೋಳ, ೬೦ ಚೀಲಗಳಷ್ಟು ನೆಲಗಡಲೆಯನ್ನು ಬೆಳೆದು ತೋರಿಸಿದ್ದರು ಅವರು. ಮೊದಲಿಂದಲೂ ನೀರಿನ ಸಂರಕ್ಷಣೆ, ಮಿತಬಳಕೆಯ ಬಗ್ಗೆ ಅಪಾರ ಒಲವು ಹೊಂದಿದ್ದ ಹುಸೇನ್ ಸಾಬ್ ಇಂಥ ಪ್ರಯೋಗಗಳಿಂದಲೇ ಯಾವ ತಂತ್ರಜ್ಞರಿಗೂ ಕಡಿಮೆಯಿಲ್ಲದಂತೆ ಬೆಳೆದು ನಿಂತಿದ್ದಾರೆ. ಅವರ ಹೊಲವೀಗ ಅಕ್ಷರಶಃ ಬಂಗಾರದ ಫಸಲು ನೀಡುತ್ತಿದೆ. ಆ ಹೊಲಕ್ಕೆ ಹೋಗುವ ಹಾದಿಗೆ ಬಂಗಾರದ ತೇರ ಬೀದಿಯೆಂಬ ಹೆಸರು ಅನ್ವರ್ಥವಾಗಿದೆ.

ತೆಂಗಿನಕಾಯಿ ಹಿಡಿದು ಪಾರಂಪರಿಕ ಜಲಶೋಧಕರಾಗಿಯೂ ಕೆಲಸ ಮಾಡುವ ಹುಸೇನ್ ಸಾಬ್‌ರ ಮುಂದಿನ ಯೋಜನೆ ಈಗ ವಿದ್ಯುತ್ ಸ್ವಾವಲಂಬನೆಯತ್ತ ಹೊರಟಿದೆ. ಅದೇ ಹೊಲದ ಹಿಂದಿರುವ ಗುಡ್ಡಕ್ಕೆ ಇವರದ್ದೇ ದೇಸೀ ತಂತ್ರಜ್ಞಾನ ಬಳಸಿ ಪ್ರೊಪೆಲರ್‌ಗಳನ್ನು ಜೋಡಿಸಿ ಗಾಳಿ ಇಂಧನ ಉತ್ಪಾದನೆಯ ಬಗ್ಗೆ ಅವರು ಯೋಚಿಸುತ್ತಿದ್ದಾರೆ. ಖಂಡಿತಾ ಅದರಲ್ಲೂ ಯಶಸ್ವಿಯಾಗುವ ವಿಶ್ವಾಸ ಅವರದ್ದು. ಎಪ್ಪತ್ತರ ಆಸುಪಾಸಿನಲ್ಲಿರುವ ಅವರಲ್ಲಿ ಸಾಧನೆಯ ಛಲ ಇನ್ನೂ ಚಿಮ್ಮುತ್ತಲೇ ಇದೆ. ಹಾಗೆಯೇ ಹಸಿಹಸಿಯಾಗಿ ಉಳಿಯಲಿ ಎಂದು ಹಾರೈಸುವ.

‘ಲಾಸ್ಟ್’ಡ್ರಾಪ್: ಕೃಷಿಯೆಂಬುದು ನಿಂತ ನೀರಲ್ಲ. ಅದು ನಿರಂತರ ಪ್ರಯೋಗಗಳ ಹರಿವನ್ನು ಒಳಗೊಂಡರೆ ಖಂಡಿತಾ ಎಂದಿಗೂ ಗೆಲುವಿನ ಸಿಂಚನವನ್ನು ಎರೆಯುತ್ತಲೇ ಇರುತ್ತದೆ.

Sunday, August 2, 2009

ಧರಣಿಯ ಧಾರಣ ಶಕ್ತಿ ಹರಣ


ಒಂದಷ್ಟು ಬಟಾನು ಬಯಲು. ಅದರ ಹಿಂದೆ ಪೈಪೋಟಿಗೆ ಬಿದ್ದು ನಿಂತಿರುವ ಬಂಡೆಗಳ ಸಾಲು ಸಾಲು. ಅಲ್ಲಲ್ಲಿ ಒಂದಷ್ಟು ಕುರುಚಲು ಹಸಿರು. ಬಂಡೆಗಳಾದರೋ ಎಂಥವು, ರಸ್ತೆ ಬದಿಯಲ್ಲಿ ಜಲ್ಲಿ, ಬೌಲ್ಡರ್‌ಗಳನ್ನು ಸುರುವಿಟ್ಟು ಹೋದ ಹಾಗೆ. ಬಿಮ್ಮನೆ ರಾಶಿಯಾಗಿ ಬಿದ್ದಿರುತ್ತವೆ. ಒಂದೇ ವ್ಯತ್ಯಾಸವೆಂದರೆ ಇವು ಆಕಾರದಲ್ಲಿ ನೂರಾರುಪಟ್ಟು ದೊಡ್ಡವು.


ಅಂಥ ಬೃಹದಾಕಾರದ ಬಂಡೆಗಳ ನಡುವೆ, ಸುಮ್ಮನೆ ಕಿವಿಗೊಟ್ಟು ಆಲಿಸಿದರೆ, ಸಣ್ಣಗೆ ಜುಳುಜುಳು ನಿನಾದ. ಬಯಲು ದಾಟಿ, ಬಂಡೆಗಳ ನಡುವೆ ನುಸುಳುತ್ತ ಹೊರಟರೆ ಆ ಶಬ್ದ ಹತ್ತಿರವಾಗುತ್ತ ಬರುತ್ತದೆ. ಈಗ ನಿನಾದ ಸ್ಪಷ್ಟ. ಒಂದಷ್ಟು ದೂರ ಸಾಗಿದರೆ, ನೆಲ ತೇವ ತೇವ. ಅಲ್ಲಿಗೆ ನಿಲ್ಲದೇ ನುಗ್ಗುತ್ತ, ನುಸುಳುತ್ತ ಕವಲೊಡೆದ ಕಾಲು ಹಾದಿಯಲ್ಲೇ ಕನಲದೇ ಕೊನೆಯತ್ತ ಹೊರಟರೆ ನೀರಿನ ಸೆಲೆ ಬಲಗೊಳ್ಳುತ್ತ ಬರುತ್ತದೆ. ಮೊದಲು ಒದ್ದೆ ಒದ್ದೆ ಎನಿಸುವ ನೆಲದಲ್ಲಿ ಕಿರು ಧಾರೆ ಪ್ರತ್ಯಕ್ಷ್ಯಗೊಳ್ಳುತ್ತದೆ. ಅದೇ ದೊಡ್ಡದಾಗುತ್ತ ಆಗುತ್ತ... ಸದ್ದು ಶುದ್ಧವಾಗಿ ಕೇಳುವ ಹಂತದಲ್ಲಿ ನೋಡಿದರೆ ಅಲ್ಲೊಂದು ಪುಟ್ಟ ತೊರೆಯೇ ಲಾಸ್ಯವಾಡುತ್ತಿರುತ್ತದೆ. ಬಂಡೆಗಳ ಹತ್ತಿ, ಬಂಡೆಗಳಿಂದ ಧುಮುಕಿ, ಬಂಡೆಗಳ ನಡುನಡುವೆಯೇ ನುಸುಳಿಕೊಂಡು ಹರಿಯುವ ಆ ಸುಂದರ ಕಿರು ಕನ್ನಿಕೆ, ದೇಹಕ್ಕಷ್ಟೇ ಅಲ್ಲ, ಕಣ್ಮನಗಳಿಗೂ ತಂಪನ್ನೀಯುತ್ತಿರುತ್ತಾಳೆ.


ರಣ ಬಿಸಿಲಿನಲ್ಲಿ ಕಾದು ಕೆಂಪಾದ ನಿಷ್ಕರುಣಿ ಬಂಡೆಗಳ ರಾಶಿಯಲ್ಲಿ ಯಾವ ಸುಳಿವೂ ಇಲ್ಲದೇ ಈ ತಂಪು ತಂಪು ಧಾರೆ ಅದೆಲ್ಲಿಂದ ಬಂತು ಎಂಬುದು ತೋಚದೇ ದಿಗ್ಭ್ರಮೆಯಾಗುತ್ತದೆ. ಯಾರು ಬಂಡೆಗಳ ಮೇಲೆ ಈ ಪಾಟಿ ನೀರು ತಂದು ಸುರಿಯುತ್ತಿರಬಹುದು ? ಅದೂ ಈ ಬಟಾ ಬೇಸಿಗೆಯಲ್ಲಿ ಬಿಟ್ಟೂ ಬಿಡದೇ ಹರಿವನ್ನು ಕಾಪಿಟ್ಟುಕೊಳ್ಳುವಷ್ಟು ಅಗಾಧ ಸಮೃದ್ಧತೆಯಾದರೂ ಹೇಗೆ ಬಂತು ?ರಹಸ್ಯವೇನೂ ಇಲ್ಲ. ತಿಂಗಳ ಸಂಬಳದಲ್ಲಿ ಸಂಸಾರ ಸಂಭಾಳಿಸುವ ನೌಕರನಂತೆಯೇ; ಮಳೆಗಾಲದ ಮೂರ್‍ನಾಲ್ಕು ತಿಂಗಳು ಬಿದ್ದ ನೀರನ್ನು ಹಿಡಿದಿಟ್ಟುಕೊಳ್ಳುವ ಗುಡ್ಡದ ನೆತ್ತಿಯ ಮೇಲಿನ ನೆಲ ವರ್ಷವಿಡೀ ಧಾರಾಳಿಯಾಗಿ ವರ್ತಿಸುತ್ತದೆ. ಮಗ್ಗುಲಿಗೆ ಬಿದ್ದು ಓಡುವ ಮಳೆಯನ್ನು ತನ್ನೊಡಲಿಗೆ ಸೆಳೆದುಕೊಳ್ಳುವ ಬಂಡೆಗಳು ತನ್ನಡಿಗೆ ಸೆಳೆದೊಯ್ಯುತ್ತವೆ. ಅಲ್ಲಿ ಇಂಗಿದ್ದು ಮತ್ತೆಲ್ಲೋ ಮೇಲೆದ್ದು ಇಣುಕುತ್ತದೆ. ಅಲ್ಲೇ ಒರತೆ ಸೃಷ್ಟಿಯಾಗುತ್ತದೆ. ಕೆಳಗಿನ ಹೊಲಗದ್ದೆಗಳಲ್ಲಿ ನೀರಿನ ಕೊರತೆಯನ್ನು ಇಂಥ ಒರತೆಗಳೇ ನೀಗಿಸುತ್ತವೆ.


ಇಂಥ ಸಾಕಷ್ಟು ಜಲ ಸೆಲೆಗಳು ನಮ್ಮ ನಿಮ್ಮ ಊರುಗಳಲ್ಲೂ ಮಾಮೂಲಿ ಎಂಬಂಥಾಗಿತ್ತು. ಒಮ್ಮೆ ಹಳ್ಳಿಗರ ಕೇಳಿ ನೋಡಿ, ಹಿಂದೆಲ್ಲ, ಮಲ್ಲಯ್ಯನ ಗುಡ್ಡದಿಂದ ವರ್ಷಪ್ಪೊತ್ತಿಗೆ ಸಾಕಾಗುವಷ್ಟು ಕಾದ್ಗೆ ಹರಿಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದೂ ಬತ್ತಿ ಹೋಗಿದೆ. ಅದು ಹೋದದ್ದೇ ಹೋದದ್ದು, ಊರಿನ ಎಲ್ಲ ಬಾವಿಗಳೂ ಒಣಗಿ ಹೋಗಿವೆ. ಹೊಲದ ಹೂದಲು ಕಳೆದು ಎಷ್ಟೋ ದಿನಗಳಾದವು. ಹೆಚ್ಚೆಂದರೆ ಆಷಾಢದಲ್ಲಿ ಕಂಡೂ ಕಾಣಿಸದಂತೆ ಮೈದಾಳುವ ಕಾದ್ಗೆ , ಮಳೆಗಾಲ ಮುಗಿಯುವ ಹೊತ್ತಿಗೆ ಮರೆಯಾಗಿಬಿಡುತ್ತದೆ. ನೀರಿಗಾಗಿ ಕೊರೆದ ಬೋರ್‌ವೆಲ್‌ಗಳೂ ಬೋರಲು ಬಿದ್ದುಹೋಗಿವೆ...ಗಂಗವ್ವ ನಮ್ಮೂರಿಗೆ ಮುನಿಸಿಕೊಂಡುಬಿಟ್ಟಿದ್ದಾಳೆ.....


ಹೀಗೆ ಅಲವತ್ತುಕೊಳ್ಳುವುದು ಹೊಸದೇನಲ್ಲ. ಯಾವುದೋ ಒಂದೂರಿನ ಸ್ಥಿತಿಯೂ ಅಲ್ಲ. ಏನಾಗಿದ್ದಿರಬಹುದು? ಗಂಗೆ ಮುನಿಸು ತೋರಿದ್ದು ಒಂದು ಊರಿಗೆ ಮಾತ್ರವೇ ?ಗುಡ್ಡದ ಬುಡದಲ್ಲಿ ನೆಲದ ಮೇಲಿನ ಮರಳು ಬಗೆದರೆ ಸಾಕು, ಬುಳಬುಳನೆ ಉಕ್ಕುತ್ತಲಿದ್ದ ನೀರು ಹೋದದ್ದಾದರೂ ಎಲ್ಲಿಗೆ ? ಪ್ರಶ್ನೆಗಳ ಸುತ್ತ ಪ್ರಶ್ನೆಗಳಷ್ಟೇ ಗಿರಕಿ ಹೋಡೆಯುತ್ತವೆ; ಬಿಟ್ಟರೆ ಉತ್ತರಿಸುವ ಸಾಮರ್ಥ್ಯ ಯಾರಲ್ಲೂ ಇಲ್ಲವಾಗಿದೆ. ಎಷ್ಟೂ ಪ್ರದೇಶಗಳಲ್ಲಿ ಇಡೀ ಜನವಸತಿಯ ಎಲ್ಲ ನೀರಿನ ಅಗತ್ಯವನ್ನೂ ಗುಡ್ಡದಿಂದ ಇಳಿದು ಬರುವ ಇಂಥ ಸೆಲೆಗಳೇ ಪೂರೈಸುತ್ತಿದ್ದವು. ಮಲೆನಾಡಿನ ಪ್ರದೇಶಗಳಲ್ಲಿ ವರತೆ, ಅಬ್ಬೀ, ಹರಿಣಿ, ಒಗದೇ ನೀರು ಎಂದು ಗುರುತಿಸುವ ಜಲಸ್ರೋತಕ್ಕೆ ಬಯಲು ಪ್ರದೇಶಗಳಲ್ಲಿ ಒಂದೊಂದು ಕಡೆ ಒಂದೊಂದು ಹೆಸರಿದೆ. ಸೆಲೆ, ಝರಿ, ಝರಪಿ ಎಂದೂ ಇವು ಉತ್ತರ ಕರ್ನಾಟಕ ಭಾಗದಲ್ಲಿ ಚಿರಪರಿಚಿತ. ಮೈಸೂರು ಕರ್ನಾಟಕ ಭಾಗದಲ್ಲಿ ಇದರ ವಿಸ್ತೃತ ರೂಪವೇ ತಲಪರಿಕೆಗಳು. ಕರಾವಳಿ, ಮಂಗಳೂರು ಭಾಗದಲ್ಲಿ ಇದನ್ನೇ ನೀರ ಕಣಿ, ತೋಡು. ದಂಬೆ ಎಂಬ ಹೆಸರಿನಿಂದ ಗುರುತಿಸುತ್ತಾರೆ.


ಗುಡ್ಡದಿಂದ ಇಳಿದು ಬರುವ ಇಂಥ ನೀರನ್ನೇ ಮನೆಯಂಗಳದವರೆಗೂ ಹರಿಸಿಕೊಂಡು ಬಂದು ತುದಿಯಲ್ಲೊಂದು ಮರದ ತುಂಡನ್ನೋ, ಪೈಪ್ ಅನ್ನೋ ಜೋಡಿಸಿಕೊಂಡು ಬಳಸಲಾಗುತ್ತಿತ್ತು. ಶುದ್ಧ ಸಟಿಕದಂತೆ ಸುರಿಯುವ ಇಂಥ ಅಬ್ಬೀ ನೀರಿನ ಶುದ್ಧತೆ, ರುಚಿಗೆ ಸಾಟಿಯೆಂಬುದೇ ಇರುತ್ತಿರಲಿಲ್ಲ. ಯಾವ ಕಾರಣಕ್ಕೂ ಇಂಥ ಜಲಮೂಲ ಅಪವಿತ್ರಗೊಳ್ಳದಂತೆ, ಮಾಲಿನ್ಯಕ್ಕೊಳಗಾಗದಂತೆ ಹಳ್ಳಿಗರು ರಕ್ಷಿಸುತ್ತಿದ್ದರು. ಮಾತ್ರವಲ್ಲ, ಅದನ್ನು ವರ್ಷವಿಡೀ ಕಸ, ಕಡ್ಡಿಗಳಿಂದ ದೂರವಿಟ್ಟು ನಿರ್ವಹಿಸುತ್ತಿದ್ದರು.


ಇದು ಕೇವಲ ನೀರಿನ ಸೆಲೆಯಷ್ಟೇ. ಜನಜೀವನದ ಸೆಲೆಯಾಗಿಯೂ ಪೊರೆಯುತ್ತಿದ್ದವು. ಇಂಥ ಜೀವ ಸೆಲೆಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಹೋಗಿವೆ ಎಂದರೆ ನಗರೀಕರಣದ ಅಪಸವ್ಯದ ಬಗ್ಗೆ ಆರೋಪ ಮಾಡದೇ ಇರಲಾದೀತೆ ? ನಿಜವಾಗಿ ಇಂಥ ಸೆಲೆ ಬತ್ತಿ ಹೋಗಿದ್ದಕ್ಕೆ ಮೂಲ ಕಾರಣ ಮಳೆಯ ಕೊರತೆಯಲ್ಲ. ಅಂಥದ್ದೊಂದು ಮಹಾಭ್ರಮೆ ನಮ್ಮಲ್ಲಿ ಮನೆ ಮಾಡಿದೆ. ಸುರಿವ ಮಳೆಯಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ. ಹೆಚ್ಚೆಂದರೆ ಒಂದಷ್ಟು ಸ್ಥಳಾಂತರ, ಸ್ಥಿತ್ಯಂತರವಾಗಿರಬಹುದು. ಆದರೆ ಅದನ್ನು ಹಿಡಿದಿಟ್ಟುಕೊಳ್ಳುವ ಧಾರಣಾಶಕ್ತಿ ಭೂಮಿಯಲ್ಲಿ ಕುಸಿದಿದೆ. ಮಳೆಗೆ ಮೈಯೊಡ್ಡಿ ನಿಲ್ಲುತ್ತಿದ್ದ ಬಂಡೆಗಳು ಪುಡಿಯಾಗಿ ಊರ ರಸ್ತೆಗಳನ್ನು ಸೇರಿವೆ. ಗ್ರಾನೈಟ್ ಹೆಸರಿನಲ್ಲಿ ನಾನಾ ಆಕಾರ ಪಡೆದು ಕಟ್ಟಡಗಳ ನೆಲದಲ್ಲಿ ಕಂಗೊಳಿಸಲಾರಂಭಿಸಿವೆ. ಹೀಗಾಗಿ ಗುಡ್ಡಗಳು ಬಯಲಾಗಿವೆ. ಅರಣ್ಯ ನಾಶವಾಗಿ ಭೂಮಿ ಬಕ್ಕಾಗಿ ಹೊಳೆಯುತ್ತಿದೆ. ಹೀಗಾಗಿ ಬಿದ್ದ ಮಳೆ ನೀರು ನಿಲ್ಲುವ ಪ್ರಮೇಯವೇ ಇಲ್ಲ. ದಕ್ಷಿಣದ ರಾಜ್ಯಗಳಲ್ಲಿ ಕಂಡು ಬರುವ ವಿಶೇಷ ಶಿಲಾವೃತ ಬೆಟ್ಟ ಸಾಲುಗಳಿಗೆ ನೀರನ್ನು ಇಂಗಿಸಿಕೊಳ್ಳುವ ವಿಶೇಷ ಶಕ್ತಿಯಿದ್ದಿತ್ತು. ಹೀಗೆ ಶಿಲಾಪದರದಲ್ಲಿ ಇಂಗಿದ ನೀರು ಬುಡಕ್ಕೆ ಹೋಗಿ ಇನ್ನೆಲ್ಲೋ ಒರತೆಯಾಗಿ ಉಕ್ಕುತ್ತಿತ್ತು. ಮಾತ್ರವಲ್ಲ. ಗುಡ್ಡದಗುಂಟ ಇಳಿದು ಬಂದು ಕೆಳಭಾಗದ ಕೆರೆ,ಕುಂಟೆಗಳಿಗೆ ಜಲಮೂಲವಾಗಿ ನಿಲ್ಲುತ್ತಿತ್ತು. ಸುತ್ತಮುತ್ತಲಿನ ಹಳ್ಳಿಗಳ ದಾಹ ಇಂಗಿಸುತ್ತಿದ್ದುದಷ್ಟೇ ಅಲ್ಲ, ತಂಪು ತನಿಯೆರೆಯುತ್ತಿತ್ತು.


ನಿರ್ವಹಣೆಯ ಕೊರತೆ, ನಿರ್ಲಕ್ಷ್ಯ, ನೀರಿನ ಬಗೆಗಿನ ನಿರ್ಲಜ್ಜತನ ಇಂದು ಅತ್ಯಪೂರ್ವ ಜಲ ಮೂಲವೊಂದಕ್ಕೆ ಧಕ್ಕೆ ತಂದಿದೆ ಎಂಬುದಂತೂ ಸತ್ಯ. ಇದರಿಂದ ಆದ ನಷ್ಟ ಒಂದೆರಡಲ್ಲ. ಪಾರಂಪರಿಕ ವ್ಯವಸ್ಥೆಯೊಂದನ್ನೇ ನಾಶ ಮಾಡಿದ್ದು ಮಾತ್ರವಲ್ಲ. ಅದರ ಹಿಂದಿದ್ದ ಸಾಂಸ್ಕೃತಿಕ ಬದುಕನ್ನು ಬುಡಮೇಲು ಮಾಡಿದೆ. ನಿಸರ್ಗದತ್ತವಾಗಿದ್ದ ಸಂಪನ್ಮೂಲವೊಂದನ್ನು ಕಸಿದುಕೊಂಡಿದೆ. ರೈತರಲ್ಲಿ, ಗ್ರಾಮೀಣರಲ್ಲಿ ಇದ್ದ ನೀರಿನ ಭದ್ರತೆಯನ್ನೇ ಕಿತ್ತುಕೊಂಡಿದೆ. ಕೃಷಿ ಬದುಕಿನ ನೆಮ್ಮದಿಗೆ ಭಂಗ ಬಂದಿದೆ. ಭಾವನೆಗಳ ಬೆಚ್ಚನೆಯ ಸುಖಕ್ಕೆ ತ್ಯಾಮಾನ ತಂದಿದೆ. ನಿಸರ್ಗದತ್ತ ಸೌಂದರ್ಯ ಮರೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನೀರಿನ ಬಗೆಗೆ ಇದ್ದ ತಾಯೆದೆಯ ಹಾಲಿನಂಥ ಸಮೃದ್ಧಿ, ಶುದ್ಧತೆಯ ನಂಬಿಕೆಯನ್ನು ಹುಸಿಯಾಗಿಸಿದೆ. ಮಾನವನ ಇಂಗದ ದಾಹಕ್ಕೆ ಇದ್ದ ಇಂಥದ್ದೊಂದು ನೈಜ ನೀರ ಸಾಂತ್ವನದ ಬದಲಾಗಿ ಕುಡಿಯುವ ನೀರೂ ಮಾರುಕಟ್ಟೆಯ ಕೃತಕ ಸರಕಾಗಿ ಮಾರ್ಪಟ್ಟಿದ್ದನ್ನು ಸಹಿಸಲಾದೀತೆ ? ಯೋಚಿಸಿ.


‘ಲಾಸ್ಟ್’ಡ್ರಾಪ್: ನಿಸರ್ಗದ ಮಡಿಲಲ್ಲಿ ಜುಳುಜುಳು ಹರಿಯುವ ತೊರೆಯ ಬುಡದಲ್ಲೊಮ್ಮೆ ಹೋಗಿ ನಿಂತು, ಬೊಗಸೆಯಲ್ಲಿ ಆ ಅಮೃತವನ್ನು ತುಂಬಿಕೊಂಡು ಮುಖಕ್ಕೆ ಎರಚಿಕೊಂಡು ನೋಡಿ. ಮತ್ತೊಂದು ಬೊಗಸೆ ಮೊಗೆದು ಗುಟುಕರಿಸಿ. ಆಹ್...ಅಮೃತಜನ್ಯ ಸಿಹಿಯ ಅನುಭವ, ಸಕಲ ಆಯಾಸ ಕಳೆದು ಸುಖದ ಶಿಖರವನ್ನು ಮೀಟಿದ ಅನುಭಾವ ನಿಮ್ಮದಾಗದಿದ್ದರೆ ಅಂಥ ಅರಸಿಕತೆಗೊಂದು ಕ್ಕಾರವಿರಲಿ.