Saturday, December 27, 2008

ನೀರ ನೆಮ್ಮದಿಗೆ ಬೇಕು ರಾಷ್ಟ್ರೀಯ ನೀತಿ

ಜೀವನದ ಸಾಧ್ಯತೆಗಳ ವಿಸ್ತರಣೆಗೆ ತೀರಾ ಅಡ್ಡಿಯಾಗಿ ನಿಂತಿರುವ ಪ್ರಮುಖ ಸಂಗತಿಯೆಂದರೆ ನೀರು. ವಿಶ್ವ ಜನ ಸಮುದಾಯ ಎದುರಿಸುತ್ತಿರುವ ಬಡತನ, ಅನಕ್ಷರತೆ, ಸಾಂಕ್ರಾಮಿಕ ರೋಗಗಳು, ಭಯೋತ್ಪಾದನೆ, ಯುದ್ಧ ಭೀತಿಯಂಥ ಹತ್ತು ಹಲವು ಸಮಸ್ಯೆ ಆತಂಕಗಳನ್ನು ಮೀರಿ ನಿಂತಿರುವುದು ಇಂದು ನೀರಿನ ಕೊರತೆ. ಮೂಲಭೂತ ಮಾನವ ಸ್ವಾತಂತ್ರ್ಯಕ್ಕೇ ನೀರಿನ ಸಮಸ್ಯೆ ಧಕ್ಕೆ ತರುತ್ತಿದೆ ಎಂಬ ಸಂಗತಿ ನಮಗೆ ಅರ್ಥವಾಗುತ್ತಿದೆಯೇ ?
ನೀರಿನ ಸಮಸ್ಯೆಗೆ ಮಾನವೀಯ ಮುಖವೊಂದಿದೆ ಎಂಬುದನ್ನು ನಾವು ಮರೆತು ಬಿಡುತ್ತಿ ದ್ದೇವೆ. ನೀರನ್ನು ಪಕ್ಕದ ಬಡಾವಣೆಗೆ ಹೋಗಿಯಾ ದರೂ ತರಬಹುದಲ್ಲ. ಹಾಗಾದರೂ ಸಿಗುತ್ತದಲ್ಲ ಎಂದು ಹೇಳುವುದು ಸುಲಭ. ಆದರೆ ಹಾಗೆ ನೀರು ತರಲಿಕ್ಕಾಗಿಯೇ ಅದೆಷ್ಟೊ ಕೊಳಚೆ ಪ್ರದೇಶದ ಮಕ್ಕ ಳನ್ನು ಶಾಲೆಯಿಂದ ದೂರವಿಡಲಾಗುತ್ತಿದೆ. ಅದೆಷ್ಟೊ ಮಕ್ಕಳು ತಮ್ಮ ಮನೆಯವರಿಂದಲೇ "ಬಾಲ ಕಾರ್ಮಿಕರ’ ಪಟ್ಟ ಕಟ್ಟಿಸಿಕೊಂಡು ಶೋಷಣೆಗೊಳಗಾಗುತ್ತಿವೆ. ಇದನ್ನು ಪ್ರಶ್ನಿಸಿ ಹಿಂಸೆಯನ್ನನುಭವಿಸುತ್ತಿವೆ. ಇದು ನಿಜ ವಾಗಿ ಆ ಮಕ್ಕಳ ಮೂಲಭೂತ ಹಕ್ಕಿನ ಉಲ್ಲಂಘನೆ ಯಲ್ಲವೇ ? ಅದರ ಹೊಣೆ ಹೊರಲು ಸಮಾಜ, ಸರಕಾರಗಳು ಸಿದ್ಧವಿವೆಯೆ?
ನಂಬಲೇಬೇಕು. ಇಂದು ಜಗತ್ತಿನ ಎಷ್ಟೋ ಕೊಳೆಗೇರಿ, ಹಳ್ಳಿ, ನಗರದ ಅದೆಷ್ಟೋ ಬಡಾವಣೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸರಾಸರಿ ಪ್ರತಿವ್ಯಕ್ತಿಗೆ, ಪ್ರತಿದಿನವೂ ಒಂದು ಬಕೆಟ್ ನೀರು ಸಿಗುವುದೂ ಕಷ್ಟ ಎಂಬಂಥ ಪರಿಸ್ಥಿತಿ ಇದೆ. ಈ ದೇಶದ ಬಡವರಿಗೆ ಹಸಿವನ್ನು ‘ಜಯಿಸಿ’ ಹೇಗೆ ಅಭ್ಯಾಸವಾಗಿ ಹೋಗಿದೆಯೋ ಹಾಗೆಯೇ ನೀರಿನ ಸಮಸ್ಯೆಯ ಜತೆಗೂ ಗುದ್ದಾಡಿ ರೂಢಿಯಾಗಿ ಬಿಟ್ಟಿದೆ. ಹೀಗಾಗಿ, ಅವರಾರೂ ದನಿಯೆತ್ತುತ್ತಿಲ್ಲ.
ಸಣ್ಣ ಲೆಕ್ಕಾಚಾರ. ಬೆಂಗಳೂರಿನ ಒಂದು ಕೊಳೆಗೇರಿಯಲ್ಲಿ ಐವತ್ತು ಮನೆಗಳಿವೆ ಎಂದುಕೊಳ್ಳೋಣ. ಪ್ರತಿ ಮನೆಯಲ್ಲಿ ಸರಾಸರಿ ಐದು ಮಂದಿಯೆಂದರೆ ಒಟ್ಟು ಇನ್ನೂರೈವತ್ತು ಮಂದಿ ಆ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ. ಅಷ್ಟು ಜನಕ್ಕೆ ಕನಿಷ್ಠ ತಲಾ ೨೦ ಲೀಟರ್ ಎಂದರೆ ಪ್ರತಿ ದಿನ ೫ ಸಾವಿರ ಲೀಟರ್ ನೀರು ಆ ಬಡಾವಣೆಗೆ ಪೂರೈಕೆಯಾಗಬೇಕು. ಆದರೆ ಬೆಂಗಳೂರಿನ ಎಷ್ಟೊ ಕೊಳೆಗೇರಿಗೆ ನೀರಿನ ಸಂಪರ್ಕವೇ ಇಲ್ಲ. ಬೋರ್‌ವೆಲ್‌ಗಳು, ಬಾವಿಗಳಂತೂ ದೂರದ ಮಾತಾಯಿತು. ಇನ್ನು ಐದು ಸಾವಿರ ಲೀಟರ್ ನೀರು ಅವರಿಗೆ ಹೇಗೆ ದಕ್ಕೀತು?
‘ನೀರು’ ಮಾನವ ಅಭಿವೃದ್ಧಿಯ ಪಂಚಾಂಗ ಕಲ್ಲು ಇದ್ದಂತೆ. ನೀರಿನ ಕೊರತೆ ಎಂಬುದು ಕೇವಲ ಭೌತಿಕ ಸ್ವರೂಪದಲ್ಲಷ್ಟೇ ಉಳಿದಿಲ್ಲ. ಬದಲಾಗಿ ಅದು ಅಸಮಾನತೆ, ಬಡತನದಂಥ ಹತ್ತಾರು ಸಂಕಷ್ಟಗಳಿಗೆ ಪರೋಕ್ಷವಾಗಿ ನಮ್ಮನ್ನು ದೂಡುತ್ತಿದೆ. ವಿಶ್ವದ ಪ್ರತಿ ಆರು ಮಂದಿಯಲ್ಲಿ ಒಬ್ಬ, ಶುದ್ಧ ಹಾಗೂ ಅಗತ್ಯ ಪ್ರಮಾಣದ ನೀರಿನಿಂದ ವಂಚಿತನಾಗುತ್ತಿದ್ದಾನೆ.
ವಿಶ್ವದಲ್ಲಿ ಪ್ರತಿ ವರ್ಷ ೨ ದಶಲಕ್ಷ ಮಕ್ಕಳು ನೀರಿನಿಂದ ಬರುವ ಅತಿಸಾರದಂಥ ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದಾರೆ. ಭಾರತವೊಂದರಲ್ಲೇ ವರ್ಷಕ್ಕೆ ೪.೫೦ ಲಕ್ಷ ಮಕ್ಕಳನ್ನು ಅತಿಸಾರ ಬಲಿ ತೆಗೆದುಕೊಳ್ಳುತ್ತಿದೆ. ವ್ಯಾಪಕ ನಗರೀಕರಣ, ಕೈಗಾರಿಕಾ ಬೆಳವಣಿಗೆ ನೀರಿಗಾಗಿನ ಪೈಪೋಟಿಯನ್ನು ಹೆಚ್ಚಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ೨೦೫೦ರ ವೇಳೆಗೆ ದಕ್ಷಿಣ ಏಷ್ಯಾದಲ್ಲಿನ ಕೃಷಿಯೇ ತರ ವಲಯದ ನೀರಿನ ಬೇಡಿಕೆ ಇಂದಿಗಿಂತ ಎಂಟು ಪಟ್ಟು ಹೆಚ್ಚಲಿದೆ.
ವಿಚಿತ್ರವೆಂದರೆ ನಗರ ಪ್ರದೇಶದ ಬಡವರ್ಗದವರು ಕಡಿಮೆ ನೀರನ್ನು ಪಡೆಯುತ್ತಿದ್ದರೂ ಅದಕ್ಕಾಗಿ ಹೆಚ್ಚಿನ ಹಣ ತೆರುತ್ತಿದ್ದಾರೆ. ಅತಿ ಹೆಚ್ಚು ಬಳಕೆ ಮಾಡುತ್ತಿರುವ ಶ್ರೀಮಂತ ವರ್ಗದ ಮಂದಿ ಅತಿ ಕಡಿಮೆ ಬೆಲೆಯಲ್ಲಿ ನೀರು ಪಡೆಯುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳ ಪೈಕಿ ಶೇ. ೨೦ರಷ್ಟಿರುವ ಶ್ರೀಮಂತರು ನೀರಿನ ಶುಲ್ಕದಲ್ಲಿ ಹೆಚ್ಚಿನ ಸಬ್ಸಿಡಿ (ಶೇ. ೩೦ರಷ್ಟು )ಯ ಫಲಾನುಭವಿಗಳು. ಆದರೆ ಶೇ. ೫೦ರಷ್ಟಿರುವ ಬಡವರ್ಗದ ಮಂದಿಗೆ ನೀರಿನ ಶುಲ್ಕದಲ್ಲಿ ಶೇ. ೧೦ರಷ್ಟು ಮಾತ್ರ ಸಹಾಯಧನ ದೊರೆಯುತ್ತಿದೆ.
ಅಸಮರ್ಪಕ ವ್ಯವಸ್ಥೆ, ತಾಂತ್ರಿಕತೆಯಲ್ಲಿನ ಹಿನ್ನಡೆ, ನೀತಿ-ನಿರೂಪಣೆಯಲ್ಲಿನ ದೋಷ, ರಾಜಕೀಯ ಇಚ್ಛಾಶಕ್ತಿಯ ಕೊರತೆಗಳ ಫಲಿತಾಂಶ ಇದು. ನೀರಿನ ಬಳಕೆಗೆ ಸಂಬಂಸಿದಂತೆ ಈವರೆಗೂ ನಮ್ಮಲ್ಲಿ ಮಾದರಿ ಎನ್ನಬಹುದಾದ ಯಾವುದೇ ನೀತಿ ನಿಯಮಗಳು ರೂಪಿ ತವಾಗಿಲ್ಲದಿರುವುದು ಸಮಸ್ಯೆಗೆ ಇನ್ನಷ್ಟು ಕಾರಣವಾಗಿದೆ. ಅಂತರ್ಜಲ ಬಳಕೆಗೆ ಕಾನೂನು ನಿಯಂತ್ರಣದ ಕೊರತೆ, ಅನಗತ್ಯ ವಿದ್ಯುತ್ ಸಬ್ಸಿಡಿಯಂಥ ಕಾರಣಗಳಿಂದ ದೇಶದಲ್ಲಿಂದು ಶೇ. ೫೬ರಷ್ಟು ಮಂದಿ ನೀರಿನ ವಿಚಾರದಲ್ಲಿ ‘ಸುಸ್ತಿದಾರ’ರಾಗಿದ್ದಾರೆ. ಅಂತರ್ಜಲ ಠೇವಣಿಯನ್ನು ಹದ್ದು ಮೀರಿ ಬರಿದಾಗಿಸಿದ್ದಲ್ಲದೇ ಖಾತೆಯಲ್ಲಿ ‘ಓವರ್ ಡ್ರಾಫ್ಟ್’ ಸೌಲಭ್ಯವನ್ನೂ ಬಳಸಿ ‘ಜಲ ಬ್ಯಾಂಕ್’ ಅನ್ನೇ ದಿವಾಳಿಗೆ ತಲುಪಿಸಿದ್ದಾರೆ.
ದೇಶದಲ್ಲಿನ ‘ಸಬ್ಸಿಡಿ’ ನೀತಿಯೇ ನಮ್ಮ ನೀರು ಪೂರೈಕೆಯ ಅಸಮಾನತೆಗೆ ಬಹುತೇಕ ಕಾರಣ. ಭಾರತದ ರೈತರಲ್ಲಿ ಶೇ.೧೩ರಷ್ಟು ಮಂದಿ ನೀರಾವರಿ ಸೌಲಭ್ಯವನ್ನು ಅನುಭವಿಸುತ್ತಿದ್ದಾರೆ. ಈ ಪೈಕಿ ಮೂರನೇ ಒಂದು ಭಾಗದಷ್ಟು ರೈತರಿಗೆ ಗರಿಷ್ಠ ಶೇ. ೭೩ರಷ್ಟು ಸಹಾಯಧನ ದೊರೆಯುತ್ತಿದೆ. ಇವರು ವಿದ್ಯುತ್ ಸಬ್ಸಿಡಿಯಲ್ಲೂ ಪಾಲುದಾರರು. ಹೀಗಾಗಿ, ನೀರಿನ ಬಳಕೆ ವಿಚಾರದಲ್ಲಿ ಅವರಲ್ಲಿ ನಿಯಂತ್ರಣವೇ ಇಲ್ಲದಾಗಿದೆ. ಶ್ರೀಮಂತ ರೈತರು ಹೆಚ್ಚಿನ ಹಣ ತೊಡಗಿಸಿ ಆಳದವರೆಗೆ ಬೋರ್‌ವೆಲ್‌ಗಳನ್ನು ಕೊರೆದೂ ನೀರು ಪಡೆಯ ಬಲ್ಲರು. ಇದು ಸಣ್ಣ, ಅತಿಸಣ್ಣ ರೈತರ ನೀರಿನ ಹಕ್ಕನ್ನು ಕಸಿದುಕೊಳ್ಳುತ್ತಿದೆ.
ಹೀಗಾಗಿ, ಕಟ್ಟ ಕಡೆಯ ರೈತರು ನೀರಿನ ಕೊರತೆಯೊಂದಿಗೆ ಅನಿಶ್ಚಿತತೆಯನ್ನು ಅನುಭವಿಸುವಂತಾಗಿದೆ. ಕಾಲುವೆಗಳ ಮೂಲಕ ನೀರು ಪೂರೈಕೆ ವಿಷಯದಲ್ಲೂ ಇದೇ ಅಸಮಾನತೆ ಬಾಸುತ್ತದೆ. ಕಾಲುವೆಯ ಕೊನೆಯ ರೈತ ಕೆಲವೊಮ್ಮೆ ಹಣ ಖರ್ಚು ಮಾಡಿದರೂ (ಶುಲ್ಕ, ತೆರಿಗೆ ಪಾವತಿ) ನೀರು ಸಿಗದೇ ಪರದಾಡುತ್ತಾನೆ. ದುರಂತವೆಂದರೆ ಇಂಥ ‘ಕೊನೆಯ’ ರೈತ ಬಡತನ, ಉತ್ಪಾದನಾ ಕೊರತೆಯಂಥ ಸಮಸ್ಯೆಗಳಿಂದಲೂ ಬಳಲುತ್ತಿರುತ್ತಾನೆ.
ಹಾಗಾದರೆ ಇವಕ್ಕೆಲ್ಲ ಪರಿಹಾರವಿಲ್ಲವೇ ? ಖಂಡಿತಾ ಇದೆ. ನೀರಿನ ಸಮಸ್ಯೆ ಕೊನೆಯಿಲ್ಲದ್ದೇನೂ ಅಲ್ಲ. ಗುಜರಾತಿನಲ್ಲಿ ಇಂದು ೧೦ ಸಾವಿರ ಚೆಕ್‌ಡ್ಯಾಮ್‌ಗಳು ಸಮೃದ್ಧಿಯನ್ನು ಕಟ್ಟಿ ಕೊಡುತ್ತಿವೆ. ಅಲ್ಲಿ ನೀರಿಗಾಗಿ ಸರಿಸುಮಾರು ೫೦ ರೂ.ಗಳಷ್ಟು ಹೂಡಿಕೆ ಮಾಡುವ ರೈತ ಮೂರು ವರ್ಷಗಳಲ್ಲಿ ಒಂದೂವರೆ ಪಟ್ಟು ಹೆಚ್ಚು ಅಂದರೆ ೧೫೦ ರೂ.ಗಳಿಗೂ ಹೆಚ್ಚು ಲಾಭ ಪಡೆಯುತ್ತಿದ್ದಾನೆ. ಗುಜರಾತ್ ನೀರಾವರಿ ವ್ಯವಸ್ಥೆಯಲ್ಲಿನ ಸುಧಾರಣೆ ದೇಶದ ಕೃಷಿ ಉತ್ಪಾದಕತೆಯನ್ನು ಐದು ಪಟ್ಟು ಹೆಚ್ಚಿಸುತ್ತಿದೆ. ಆಂಧ್ರದಲ್ಲಿನ ಕಡಿಮೆ ವೆಚ್ಚದ ಹನಿನೀರಾವರಿ ಯೋಜನೆಗಳು ಉತ್ಪಾದನೆಯನ್ನು ದ್ವಿಗುಣಗೊಳಿಸಿವೆ. ಮಧ್ಯಪ್ರದೇಶ, ಮಹಾರಾಷ್ಟ್ರ ಗಳಲ್ಲೂ ಮಿತ ನೀರು ಬಳಕೆಯ ಕೃಷಿ ಪದ್ಧತಿಗಳು ಅಲ್ಲಿನ ರೈತರನ್ನು ಯಶಸ್ಸಿನೆಡೆಗೆ ಕೊಂಡೊಯ್ದಿವೆ.
ಈ ಎಲ್ಲ ಹಿನ್ನೆಲೆಯನ್ನು ಗಮನಿಸಿದಾಗ ‘ನೀರಿನ ರಾಷ್ಟ್ರೀಯ ನೀತಿ’ಯೊಂದರ ಅಗತ್ಯ ತೀರಾ ತುರ್ತಾ ಗಿದೆ. ಇದರೊಂದಿಗೆ ನೀರಿನ ಶುಲ್ಕ, ಸಬ್ಸಿಡಿ ಇತ್ಯಾದಿಗಳ ಬಗ್ಗೆ ನಮ್ಮ ಸರಕಾರಗಳು ಮರುವಿಮರ್ಶೆ ನಡೆಸುವು ದೊಳಿತು. ನೀರನ್ನು ಯಥೇಚ್ಛ ಬಳಸುತ್ತಿರುವ ಶ್ರೀಮಂತ ವರ್ಗದ ಮೇಲೆ ದುಬಾರಿ ದರ ವಿಸುವ ಮೂಲಕ ನಿಯಂತ್ರಿಸಬೇಕು. ಅದರಿಂದ ಸಂಗ್ರಹವಾಗುವ ಮೊತ್ತ ವನ್ನು ಬಡ ವರ್ಗದ ಜನಕ್ಕೆ ಪೂರಕ ಸಬ್ಸಿಡಿಯಾಗಿ ನೀಡಬೇಕು. ಆಗ ಮಾತ್ರ ಅಸಮಾನತೆ ಹೋಗಲಾಡಿ ಸಲು ಸಾಧ್ಯ.
ನೀರಿನ ವಿಚಾರದಲ್ಲಿ ಪಾರದರ್ಶಕತೆ ಹಾಗೂ ಲೆಕ್ಕಾ ಚಾರದ ಕೊರತೆ, ಸೂಕ್ತ ನಿರ್ವಹಣಾ ನಾಯಕತ್ವದ ಕೊರತೆ, ಮೂಲ ಸೌಕರ್ಯದ ಕೊರತೆ, ಬದ್ಧತೆಯ ಕೊರತೆ, ಯೋಜನೆ ಹಾಗೂ ವ್ಯವಸ್ಥಾಪನೆಯ ಕೊರತೆ ಯಿಂದಾಗಿ ನಮ್ಮಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಇಷ್ಟೆಲ್ಲ ಕೊರತೆಗಳಿದ್ದೂ ಅತಿಮುಖ್ಯ ಅಗತ್ಯವಾದ ‘ನೀರಿಗೆ’ ನಮ್ಮ ಸರಕಾರಗಳು ಬಜೆಟ್‌ನಲ್ಲಿ ಅತಿ ಕಡಿಮೆ ಹಣ ಮೀಸಲಿಡುತ್ತಿವೆ.
ನಮ್ಮಲ್ಲಿ ನೀರಿಗೆ ಸಂಬಂಸಿದ ವಿಚಾರಗಳು ಹಲವು ಇಲಾಖೆಗಳ ಅಡಿಯಲ್ಲಿ ಹಂಚಿಹೋಗಿವೆ. ಆ ಇಲಾಖೆಗಳ ನಡುವೆ ಸಮನ್ವಯ ಸಾಧನೆ ಆಗುತ್ತಿಲ್ಲ. ಗಣಿ ಮತ್ತು ಭೂಗರ್ಭ ಇಲಾಖೆ, ಅರಣ್ಯ ಮತ್ತು ಪರಿಸರ ಇಲಾಖೆ, ನೀರಾವರಿ ಇಲಾಖೆ, ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ, ವಿದ್ಯುತ್ ಮಂಡಳಿ, ಕೃಷಿ ಇಲಾಖೆ ಹೀಗೆ ಸರಕಾರದ ಎಲ್ಲ ಸಾಂಸ್ಥಿಕ ಸ್ವರೂಪಗಳೂ ಒಗ್ಗೂಡಿ ಕೆಲಸ ಮಾಡುವುದು ‘ಸಮಗ್ರ ರಾಷ್ಟ್ರೀಯ ನೀತಿ’ಯಿಂದ ಮಾತ್ರ ಸಾಧ್ಯ.

‘ಲಾಸ್ಟ್’ಡ್ರಾಪ್: ಅದೆಷ್ಟೋ ಘೋರ ಕದನ ಸದ್ದಿಲ್ಲದೇ ನೀರಿಗಾಗಿ ನಡೆಯುತ್ತಲೇ ಇದೆ. ಶಾಂತಿಧೂತರಾಗಿ ಬರಲು ಎಷ್ಟು ಮಂದಿ ಸಿದ್ಧರಿದ್ದಾರೆ ?

Friday, December 19, 2008

ನೀರ ಸಾಗರ ನಿರ್ಮಸಿರುವ ಸಗರ ನಾಯಕರು

ಬೆಟ್ಟದ ನಟ್ಟ ನಡುವೆ ನೀಲಾಕಾಶವನ್ನೇ ನುಂಗಿಕೊಂಡಂತಿರುವ ವಿಶಾಲ ಜಲರಾಶಿಯ ವಜಾಯ ಮೊದಲ ನೋಟದಲ್ಲೇ ನಿಮ್ಮನ್ನು ಸಮ್ಮೋಹನಗೊಳಿಸದಿದ್ದರೆ ದೇವರಾಣೆ. ಕಣ್ಣರಳಿಸಿ ಕೆಕ್ಕರಿಸುವ ಸುಡು ಸೂರ್ಯನಿಗೂ ಸವಾಲೊಡ್ಡಿ ತಂಗಾಳಿಯನ್ನು ತೇಲಿಸಿಕೊಂಡು ಬಂದು ಮೈದಡವುತ್ತಿದ್ದರೆ...ಆಹ್, ಇರವೇ ಮರೆತುಹೋಗಿರುತ್ತದೆ. ಮೊದಲೇ ಮಧುರಾನುಭವ. ಅದಕ್ಕೊಂದು ಪುಟವಿಟ್ಟಂತೆ ಮೆರುಗು ತಂದದ್ದು ಆ ಕೊಳದ ಮೇಲರಳಿ ನಿಂತು ನಗು ಚೆಲ್ಲುವ ತಾವರೆಗಳ ಸಮೂಹ. ಕೊಳದಲ್ಲೇ ರಾಸಕ್ಕಿಳಿದ ಹಕ್ಕಿಗಳ ಹಿಂಡು. ಮೈಮರೆತು ಮಲಗಿರುವ ಪ್ರಕೃತಿಯ ಮಡಿಲಲ್ಲಿ ಮಗುವಾಗಿ ಹುದುಗಿ ಹೋದ ಭಾವನೆ.
ಹೆಸರೇ ತಾವರೆಗೆರೆ. ಮುಗಿಲಗಲಕ್ಕೆ ಪೈಪೋಟಿಗಿಳಿದ, ಬಾನೆತ್ತರಕ್ಕೆ ಏರಿ ನಿಂತ ಬೆಟ್ಟದ ನೆತ್ತಿಯಲ್ಲಿ ನಿಂತು ನಗುವ ಕಾವ್ಯಕನ್ನಿಕೆಯವಳು. ಅದೇ ವಿಶೇಷ. ಬೆಟ್ಟ ಸಾಲುಗಳ ಮೇಲೆ ಸುರಿದು, ಅವುಗಳ ಮೈಯ್ಯಗುಂಟ ಜಾರಿ ಬರುವ ಮಳೆ ಹನಿಗಳ ಹಾಯಗೊಡದೇ ತಟದಲ್ಲಿ ತಡೆದು ನಿಲ್ಲಿಸಿಕೊಂಡು ತನಿಯಾಗಿ ಎರೆಯುವ ಕೆರೆಗಳೇನೂ ನಮಗೆ ಹೊಸದಲ್ಲ. ತಲೆಗೆ ಸುರಿದದ್ದು ಕಾಲಿಗಿಳಿಯಲೇಬೇಕೆಂಬುದು ನಿಯಮ. ಆದರೆ ಅಂಥವೆಲ್ಲಕ್ಕೆ ಅಪವಾದ ಈ ತಾವರೆಗೆರೆ. ಶಿವನ ಜಟೆಯ ಜಡಕಲ್ಲಿ ಸಿಲುಕಿ, ಅಲ್ಲೇ ಬಂದಿಯಾಗಿ ಬಗ್ಗಿ ನೋಡುವ ಗಂಗೆಯಂತೆ, ಸುರಪುರದ ಮಗ್ಗುಲಿಗೇ ಇರುವ ಆ ಮೇರುವಿನ ಮೇಲೆ ತಣ್ಣನೆಯ ಸ್ವರ್ಗ ನಿರ್ಮಿಸಿದ ಜಲ ಹರವದು.
ಆ ಬೆಟ್ಟವಾದರೂ ಎಂಥದ್ದು ? ಏರಿದಷ್ಟೂ ಏದುಸಿರ ತರುವ ಅದರ ಬೃಹದಾಕಾರದೆದುರು ಮನುಷ್ಯ ಇನ್ನಿಲ್ಲದಂತೆ ಕುಬ್ಜನಾಗಿ ಹೋಗಿರುತ್ತಾನೆ. ಅದರ ನೆತ್ತಿಯ ಮೇಲೆ ಮೈದಾಳಿ ಮೈಲುಗಳವರೆಗೆ ಕಾಣಿಸಿಕೊಳ್ಳುವ ಐತಿಹಾಸಿಕ ಕೋಟೆ, ಒಮ್ಮೆ ಒಳಹೊಕ್ಕು ನೋಡಿಯೇ ಬರಬೇಕೆಂಬ ಅದಮ್ಯ ಬಯಕೆಯನ್ನು ಉದ್ದೀಪಿಸುತ್ತದೆ. ಹಾಗೊಮ್ಮೆ ನಿರ್ಧಾರಕ್ಕೆ ಬಂದು ಬೆವರೊರೆಸಿಕೊಳ್ಳುತ್ತ ಬುಡದಿಂದ ಕಾಲು ಹಾದಿಯಲ್ಲಿ ಹತ್ತಲಾರಂಭಿಸಿದರೆ ಉದ್ದಕ್ಕೂ ಜುಳು ಜುಳು ನಿನಾದ. ಕಂಡೂ ಕಾಣದಂತಿರುವ ನೀರ ಸೆಲೆ, ಕಲ್ಲುಗಳ ನಡುವೆ ನುಸುಳುತ್ತ, ಪುಟ್ಟ ಕುವರಿಯಂತೆ ಅಲ್ಲಲ್ಲಿ ನೆಗೆಯುತ್ತ, ಹಬ್ಬಿ ನಿಂತಿರುವ ಹಸಿರು ಕರವೀರದ ಪೊದೆಗಳಲ್ಲಿ ಕಣ್ಣಾಮುಚ್ಚಾಲೆಯಾಡುತ್ತ ಸಾಹಸಿಗರ ಆಯಾಸ ಮರೆಸುತ್ತದೆ. ತೀರಾ ಬಾಯಾರಿ ಬಸವಳಿದು ಬಂದಾಗ ಬೊಗಸೆಯೊಡ್ಡಿ ಹಿಡಿದು ಬಾಯಿಗಿಟ್ಟುಕೊಳ್ಳಬೇಕು. ಜೇನ ಹನಿಯನ್ನೂ ನಾಚಿಸುವ ಸವಿ ಎಂದರೆ, ಅದು ಖಂಡಿತಾ ಉತ್ಪ್ರೇಕ್ಷೆಯಲ್ಲ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಡೀ ಬೆಟ್ಟವನ್ನಾವರಿಸಿಕೊಂಡು ನಿಂತಿರುವ ಅಪರೂಪದ ಸಸ್ಯ ವೈವಿಧ್ಯ, ಕುರುಚಲು ಪೊದೆಗಳಲ್ಲಿ ಅಡಗಿ ಕುಳಿತಿರುವ ಔಷಯ ಅಂಶಗಳನ್ನು ಬಳಸಿಕೊಂಡು ಬರುವ ನೀರಿಗೆ ಅಂಥ ಅಮೃತದ ಗುಣ ಬಂದಿದ್ದರೆ ಅದು ಸಹಜ.
ಹಾಗೆ ಸಾವರಿಸಿಕೊಂಡು ಮತ್ತಷ್ಟು ದೂರ ಸಾಗಿದರೆ ಹಸಿವು ಕಾಡೀತು. ಚಿಂತೆ ಬೇಡವೇ ಬೇಡ. ಸೀತಾಫಲದ ಸಮೃದ್ಧ ಸೇವನೆಗೆ ನಯಾಪೈಸೆಯನ್ನೂ ಖರ್ಚು ಮಾಡಬೇಕಿಲ್ಲ. ನಿಸರ್ಗಮಾತೆಯ ನೈಜ ಆತಿಥ್ಯವದು. ಕಳಿತ ಹಣ್ಣುಗಳನ್ನು ಆಯ್ದು ಕೊಯ್ದುಕೊಳ್ಳುವುದೊಂದೇ ನಿಮಗಿರುವ ಕೆಲಸ. ತೊಳೆತೊಳೆಗಳ ಬಿಡಿಸಿ ಬಾಯ್ಗಿಟ್ಟುಕೊಳ್ಳುತ್ತ ಹತ್ತುವ ಹೊತ್ತಿಗೆ ತಂಗಾಳಿ ಅದೆಲ್ಲಿಂದಲೋ ಮೈದಡವಲಾರಂಭಿಸುತ್ತದೆ. ಅದರ ಬೆನ್ನು ಹತ್ತಿ ಮುಂದೆ ಇಣುಕಿದರೆ ಅದೇ, ಅದೇ ತಾವರೆಗೆರೆ.
ಸುತ್ತ ಒಮ್ಮೆ ಕಣ್ಣಾಡಿಸಿದರೆ ಎಷ್ಟು ಎತ್ತರಕ್ಕೆ ಏರಿ ಬಂದಿರಬಹುದೆಂಬ ಅಂದಾಜು ಸಿಗಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಬದುಕಿನ ಜಂಜಡಗಳೆಲ್ಲವನ್ನೂ ಮೀರಿ ಅಧ್ಯಾತ್ಮದಂಚಿಗೆ ಬಂದು ನಿಂತ ಅನುಭೂತಿ. ಜೀವದ ಅಣು ಅಣುಗಳಲ್ಲೂ ಅದೆಂಥದೋ ಅವ್ಯಕ್ತ ಸಂತಸ ಚಿಮ್ಮಲಾರಂಭಿಸುತ್ತದೆ. ಅದೇ ಕ್ಷಣದಲ್ಲಿ, ಅಷ್ಟು ಎತ್ತರದಲ್ಲಿ ಆ ಪರಿಯ ನೀರ ನಿರಕಿಸಿದ ಪಾರಂಪರಿಕ ಜ್ಞಾನದ ಬಗೆಗೊಂದು ಬೆರಗು ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಮನದಲ್ಲಿ ಸುಳಿದು ಹೋಗುತ್ತದೆ. ಅಬ್ಬಾ, ಅದೆಂಥ ಅದಮ್ಯ ವಿಶ್ವಾಸ, ಅದೆಷ್ಟು ಖಚಿತ ತಂತ್ರಜ್ಞಾನ, ಆ ಅಚ್ಚುಕಟ್ಟುತನ, ಆ ನೈಪುಣ್ಯ, ಅಂಥ ಸುಸ್ಥಿರತೆ, ಮುಂದಿನ ಹತ್ತು ತಲೆಮಾರುಗಳವರೆಗೂ ಅಳಿಯದೇ ಉಳಿಯಬೇಕೆಂಬ ದೂರಾಲೋಚನೆ... ಒಂದಕ್ಕಿಂತ ಒಂದು ಅಚ್ಚರಿಗಳ ಸಾಲು ಸಾಲು ಆಕ್ರಮಣಕ್ಕೆ ತೊಡಗುತ್ತದೆ. ಸೂಕ್ಷ್ಮ ಅವಲೋಕನಕ್ಕಿಳಿದರೆ ಆ ನೆಲಮೂಲದ ಜ್ಞಾನದ ಬಗ್ಗೆ ಹೆಮ್ಮೆ ಎನಿಸುತ್ತದೆ.
ಇಷ್ಟೆಲ್ಲ ಆಹ್ಲಾದ, ಆಸ್ವಾದ, ಅಚ್ಚರಿಗಳ ಮೂಲವಾಗಿ ನಿಂತವರು ಗುಲ್ಬರ್ಗ ಸಮೀಪದ ಸುರಪುರದ ಗೋಸಲು ವಂಶದ ಅರಸರು. ೧೬೩೬ರಿಂದ ೧೮೫೮ರ ವರೆಗೆ ಈ ಭಾಗದಲ್ಲಿ ಪುಟ್ಟ ಸಾಮ್ರಾಜ್ಯವನ್ನು ಕಟ್ಟಿ ಸಮರ್ಥವಾಗಿ ಆಳಿ ಹೋದ ಸಗರ ದೊರೆಗಳು ಕ್ಷಾತ್ರ ತೇಜಸ್ಸಿನಿಂದಲೂ ಸುಪ್ರಸಿದ್ಧ. ಅದಕ್ಕಿಂತಲೂ ಆ ಕಾಲದಲ್ಲೇ ಅವರು ಅಂಥ ಬಿರುಬಿಸಿಲ ನೆಲದಲ್ಲೂ ಅನುಷ್ಠಾನಗೊಳಿಸಿದ್ದ ಜಲ ಸಂರಕ್ಷಣಾ ಪದ್ಧತಿಗಳು ವಂಶದ ಹೆಸರನ್ನೇ ಹಸಿರಾಗಿಟ್ಟಿದೆ. ನೀರಿನ ಬಗೆಗೆ ಅವರಿಗಿದ್ದ ಅಪೂರ್ವ ಜ್ಞಾನಕ್ಕೆ ಜೋಡಿ ತಾವರೆಕೆರೆ, ಅದರ ಸನಿಹಕ್ಕೆ ಇರುವ ಸುರಪುರದ ಕೋಟೆಯೊಳಗಣ ಮೌನೇಶ್ವರ ಕೊಳ, ಮಂದಾಕಿನೀ ತೀರ್ಥ, ಆನೆ ಹೊಂಡಗಳೇ ಸಾಕ್ಷಿ.
ಗಡ್ಡಿ ಪಿಡ್ಡನಾಯಕನೆಂಬುವವನಿಂದ ಸ್ಥಾಪನೆಗೊಂಡ ಸಗರ ಸಾಮ್ರಾಜ್ಯದೆಲ್ಲೆಡೆ ಅತ್ಯುತ್ತಮ ನೀರಾವರಿ ವ್ಯವಸ್ಥೆಯಿದ್ದ ಕುರುಹುಗಳು ಕಂಡು ಬರುತ್ತವೆ. ಇಂದಿನ ಗುಲ್ಬರ್ಗ ಜಿಲ್ಲೆಗೆ ಸೇರಿದ ಸುರಪುರ, ಶಹಾಪುರ ಮತ್ತು ಜೇವರ್ಗಿ ಈ ಮೂರೂ ತಾಲೂಕುಗಳ ಗಡಿಯಾದ ಕೃಷ್ಣಾ, ಭೀಮಾ ನದಿಗಳ ಹರಿವಿನ ವ್ಯಾಪ್ತಿಯೊಳಗಿನ ಪ್ರದೇಶವನ್ನು ಸಗರ ನಾಡೆಂದು ಗುರುತಿಸಿದರೆ, ತಾವರೆಗೆರೆ ಹಾಗೂ ಪಕ್ಕದ ಕೋಟೆ ಅದರ ಉಚ್ಛ್ರಾಯ ಸ್ಥಿತಿಯ ದ್ಯೋತಕ. ಮೂಲತಃ ಬೇಡ ವಂಶದವರಾದ ಸಗರ ಅರಸರಲ್ಲಿ ಮುಮ್ಮಡಿ ಪಾಮನಾಯಕ ಹಾಗೂ ನಾಲ್ವಡಿ ವೆಂಕಟಪ್ಪ ನಾಯಕರು ಸುಪ್ರಸಿದ್ಧರು. ೧೬೩೬ರ ಸುಮಾರಿಗೆ ಸಾಮ್ರಾಜ್ಯ ಸ್ಥಾಪನೆಯ ಸಂದರ್ಭದಲ್ಲೇ ಕೋಟೆಯನ್ನು ಕಟ್ಟಿಸಿದ ದಾಖಲೆಗಳು ಸಿಗುತ್ತವಾದರೂ ಕೆರೆಯ ನಿರ್ಮಾಣದ ಬಗೆಗೆ ಖಚಿತತೆ ಇಲ್ಲ. ಆದರೂ ಕಿಲ್ಲೆಯೊಂದಿಗೇ ಕೆರೆಯ ನಿರ್ಮಾಣವೂ ಆಗಿರುವ ಸಾಧ್ಯತೆ ಇದೆ.
‘ವಾಗಿನಗಿರಿ’ಯೆಂಬ ಐತಿಹಾಸಿಕ ಹೆಸರಿನೊಂದಿಗೆ ಗುರುತಿಸುವ ಕೋಟೆಯೊಳಗೆ ವ್ಯವಸ್ಥಿತ ನಗರವಿದ್ದ ಕುರುಹುಗಳು ಇಂದಿಗೂ ಕಂಡುಬರುತ್ತದೆ. ವಿಶಾಲ ಅರಮನೆ ಗತವೈಭವದ ಪ್ರತೀಕ. ೫೦೦ ಕುದುರೆ, ೪ ಸಾವಿರ ಕಾಲಾಳುಗಳನ್ನೊಳಗೊಂಡ ಶಸ್ತ್ರ ಸಜ್ಜಿತ ಸೈನ್ಯ ಕೋಟೆಯ ಕಾವಲಿಗಿತ್ತೆನ್ನುತ್ತದೆ ಇತಿಹಾಸ. ರಾಜನ ಜತೆ ೩೭ ಪ್ರಮುಖರು, ೬ ಸಾವಿರ ಬೇಡರು, ೩ ಸಾವಿರ ಗೊಲ್ಲರು ಈ ಕೋಟೆಯೊಳಗಣ ನಗರದಲ್ಲಿದ್ದರೆನ್ನಲಾಗಿದೆ. ಇಷ್ಟೂ ಜನವಸತಿ, ಅವರ ಕುಟುಂಬದ ದೈನಂದಿನ ಬಳಕೆಗೆ ಬೆಟ್ಟದ ಮೇಲಿನ ಆ ಪುಟ್ಟ ಪ್ರದೇಶದಲ್ಲಿ ವರ್ಷವಿಡೀ ನೀರಿನ ಪೂರೈಕೆ ಸಣ್ಣ ಮಾತೇನೂ ಆಗಿರಲಿಲ್ಲ. ಆದರೆ ಆ ಕೆರೆಯ ಅಗಾಧತೆ, ಅದರ ನಿರ್ಮಾಣದಲ್ಲಿನ ಜಾಣ್ಮೆಯನ್ನು ಕಂಡಾಗ ಎಷ್ಟೇ ಜನರಿದ್ದರೂ, ಯಾವ ಕಾಲಕ್ಕೂ ನೀರು ಸಮಸ್ಯೆಯೇ ಅಲ್ಲವೆನ್ನುವುದು ದೃಢಗೊಳ್ಳುತ್ತದೆ. ಸುತ್ತಲಿನ ಬೆಟ್ಟ ಸಾಲುಗಳ ಮೇಲೆ ಬಿದ್ದ ಮಳೆ ನೀರೆಲ್ಲವೂ ಅನಾಯಾಸವಾಗಿ ಕೆರೆಯಂಗಳಕ್ಕೇ ಬಂದು ಸೇರುವಂತೆ ಎಚ್ಚರಿಕೆಯಿಂದ ಸೂಕ್ತ ಜಾಗದ ಆಯ್ಕೆ ಮಾಡಲಾಗಿದೆ. ಒಂದೊಮ್ಮೆ ವರ್ಷಗಳವರೆಗೆ ಮಳೆ ಬಾರದಿದ್ದಲ್ಲಿ ದೊಡ್ಡ ಕೆರೆಯ ಮೇಲ್ಭಾಗ ಒಣಗಿದರೂ ಅಂತರ್ಜಲಕ್ಕೆ ಧಕ್ಕೆಯಾಗದಂತೆ ಕೆರೆಯನ್ನು ಇಳಿಜಾರಾಗಿ ನಿರ್ಮಿಸಲಾಗಿದೆ. ಒಡಲಾಳದಲ್ಲಿ ಇಂಗಿದ ನೀರು ಗುಡ್ಡದ ಒಂದು ಪಕ್ಕಕ್ಕೆ ಜಾರಿ ಹಾದಿಯ ಉದ್ದಕ್ಕೂ ಪುಟ್ಟ ಸೆಲೆಯಾಗಿ ಜಿನುಗುತ್ತಿರುತ್ತದೆ. ಕೊನೆಯಲ್ಲಿ ಬೆಟ್ಟದ ತಪ್ಪಲಿನಲ್ಲಿ ಬಂದು ಶೇಖರಣೆಗೊಳ್ಳುತ್ತದೆ. ದೊಡ್ಡ ಕೆರೆಯ ಪಕ್ಕದಲ್ಲೇ ಇನ್ನೊಂದು, ತಾವರೆಗೆರೆಯ ಪುಟ್ಟ ಪ್ರತಿರೂಪವಿದೆ. ಆಪತ್ಕಾಲದ ನೀರಾಗಿ ಇದು ಬಳಕೆಯಾಗುತ್ತಿರುವ ಸಾಧ್ಯತೆ ಇದೆ.
ಇದಕ್ಕಿಂತಲೂ ಗಮನ ಸೆಳೆಯುವ ಅಂಶವೆಂದರೆ ಕೋಟೆಯೊಳಗೆ ಸಂಪೂರ್ಣ ಶಿಲಾಮಯವಾದ ಪ್ರದೇಶದಲ್ಲಿ ತಣ್ಣಗೆ ಕುಳಿತ ಮಂದಾಕಿನಿ ತೀರ್ಥ. ಬಂಡೆಯನ್ನೇ ಕೊರೆದು ಪುಟ್ಟ ಕೊಳದ ಆಕೃತಿಯನ್ನು ನಿರ್ಮಿಸಲಾಗಿದೆ. ಕೋಟೆಯ ಒಳಭಾಗದಲ್ಲಿ ಬಿದ್ದ ಮಳೆ ನೀರೆಲ್ಲವೂ ಬಂಡೆಗಳ ಸೂಕ್ಷ್ಮ ರಂಧ್ರಗಳಲ್ಲಿ ಇಂಗಿ ಈ ಕೊಳದ ಒಡಲಲ್ಲಿ ಶೇಖರಗೊಳ್ಳುವಂತೆ ಮಾಡಲಾಗಿದೆ. ಹೆಚ್ಚುವರಿ ನೀರು ಸಹ ಹೊರಗೆಲ್ಲೂ ಜಾರಿ ಹೋಗದಂತೆ ಜಾಗ್ರತೆ ವಹಿಸಲಾಗಿದೆ. ಪಕ್ಕದಲ್ಲೇ ಹನುಮಂತ ದೇವರಗುಡಿಯಿದ್ದು ನೀರಿನ ಪಾವಿತ್ರ್ಯವನ್ನು ಹೆಚ್ಚಿಸಿದೆ. ಇಂದಿಗೂ ಕೊಳದ ತುಂಬ ನೀರು ಲಾಸ್ಯವಾಡುತ್ತದೆ. ಇಷ್ಟೇ ಅಲ್ಲ. ಕೋಟೆಯ ಸುತ್ತಲೂ ಕಲ್ಲಿನ ಗೋಡೆಯ ಮೇಲೆ, ಬಂಡೆಗಳ ಗುಂಟ ಇಳಿದು ಬರುವ ನೀರು ವ್ಯರ್ಥವಾಗದಂತೆ ತಡೆದು ಅಲ್ಲಿ ಕೊರೆದು ಪುಟ್ಟ ಪುಟ್ಟ ಕಾಲುವೆಗಳನ್ನು ರಚಿಸಿ ಒಂದೆಡೆ ನಿಲ್ಲುವಂತೆ ಮಾಡಲಾಗಿದೆ. ಒಂದೇ, ಎರಡೇ... ಮಳೆ ನೀರುಕೊಯ್ಲಿನ ಸಮರ್ಥ ಮಾದರಿಯಾಗಿ ಇಡೀ ಕೋಟೆಯಾವರಣ ನಿಲ್ಲುತ್ತದೆ.
ಕೋಟೆಯೆಲ್ಲ ಸುತ್ತಾಡಿ ಬಂದರೆ ಒಂದು ಪಾರ್ಶ್ವದಲ್ಲಿ ಕಣ್ಸೆಳೆಯುವಂತೆ ಮಾಡುವುದು ಆನೆ ಹೊಂಡ. ಸೈನ್ಯದಲ್ಲಿದ್ದ ಸದೃಢ ಗಜ ದಳಕ್ಕೆ ನೀರು ಪೂರೈಸುವ ದೃಷ್ಟಿಯಿಂದಲೇ ಸುಮಾರು ಇಪ್ಪತ್ತು ಅಡಿ ಉದ್ದ ಹತ್ತು ಅಡಿ ಅಗಲದ ಕೊಳ ಮಾಡಲಾಗಿದೆ. ಮೂವತ್ತಕ್ಕೂ ಹೆಚ್ಚು ಅಡಿ ಆಳವಿರುವ ಈ ಕೊಳದಲ್ಲಿ ಇಂದಿಗೂ ಮುಕ್ಕಾಲುಭಾಗ ನೀರು ನಿಂತಿದೆ.
ಇಷ್ಟೆಲ್ಲಕ್ಕೂ ಜಲಮೂಲ ಮಳೆ ಎಂದರೆ ಅಚ್ಚರಿಪಡಬೇಕಿಲ್ಲ. ಆ ಪ್ರದೇಶದ ಮಳೆ ಸರಾಸರಿ, ಭೂ ಲಕ್ಷಣ ಇತ್ಯಾದಿ ಎಲ್ಲ ಅಂಶಗಳನ್ನು ಪರಿಗಣಿಸಿ ಕರಾರುವಾಕ್ ಲೆಕ್ಕಾಚಾರದಲ್ಲಿ ಈ ಎಲ್ಲವನ್ನೂ ನಿರ್ಮಿಸಿರುವುದು ಕಂಡಾಗ ಅಂದಿನ ಅರಸರಲ್ಲಿ ಇರಬಹುದಾದ ಜ್ಞಾನ ಸಂಪತ್ತಿನ ಬಗೆಗೆ ಹೆಮ್ಮೆ ಮೂಡದೇ ಇರದು. ಮೂರು ಶತಮಾನಗಳ ಬಳಿಕವೂ, ಇಂದಿನ ಬೃಹತ್ ನೀರಾವರಿ ಯೋಜನೆಗಳ ಅಬ್ಬರದ ನಡುವೆಯೂ ಸಾಟಿಯಿಲ್ಲದೇ ನಿಂತಿರುವ ಪಾರಂಪರಿಕ ಈ ನೀರ ಜ್ಞಾನವನ್ನು ಸಂರಕ್ಷಿಸಿಕೊಂಡು ಹೋಗುವುದರ ಜತೆಗೆ ಹೆಚ್ಚಿನ ಅಧ್ಯಯನಕ್ಕೆ ಮುಂದಾದಲ್ಲಿ ಗುಲ್ಬರ್ಗದಂಥ ಜಿಲ್ಲೆಗಳ ಹಲವು ಸಮಸ್ಯೆಗಳಿಗೆ ಪರಿಹಾರದ ಹೊಳಹು ಕಾಣುವುದರಲ್ಲಿ ಸಂಶಯವಿಲ್ಲ. ಹ್ಯಾಟ್ಸ್ ಆಫ್ ಸಗರ ನಾಯಕರೇ !
ಲಾಸ್ಟ್’ಡ್ರಾಪ್: ನೀರೆಂದರೆ ಅದು ಪ್ರೀತಿಯ ಸೆಲೆ. ಪ್ರವಹಿಸುವುದು ಅದರ ಹುಟ್ಟುಗುಣ. ಹಂಚಿದಷ್ಟೂ ಹೆಚ್ಚೀತು ಸವಿ. ಗೌರವಿಸಿದರೆ ಗರ್ವ. ನಿರ್ಲಕ್ಷಿಸಿದರೆ ನಿರ್ನಾಮ.

Friday, December 12, 2008

ಅಂತರ್ಜಲ ಆಗಿದೆ ಹಾಲಾಹಲ


ನೀರೆಂಬುದು ಬರಿ ನೀರಲ್ಲ. ಅದೊಂದು ಜಾಗೃತ ಪ್ರಜ್ಞೆಯ ಪ್ರತೀಕ. ಅದು ಜೀವಂತಿಕೆಯ ಲಕ್ಷಣ. ಸಾಮುದಾಯಿಕ ಸಂಕೇತ. ಚಲನ ಶೀಲತೆಗೆ ಸಾಕ್ಷಿ. ಕರ್ತಾರನ ಕಸುಬಿನಲ್ಲಿ ಅರಳಿದ ಅತ್ಯಂತ ಕ್ರಿಯಾಶೀಲ ಭಾಗವೊಂದಿದ್ದರೆ ಅದು ನೀರು.
ಮನುಷ್ಯ ಮನುಷ್ಯರನ್ನು ಬಂಸಿಟ್ಟ ಅತ್ಯಂತ ದಟ್ಟವಾದ ಭಾವನೆಯನ್ನು ಹಸಿಹಸಿಯಾಗಿ ಬಣ್ಣಿಸುತ್ತೇವೆ. ಇಲ್ಲಿ ಹಸಿಹಸಿಯಾಗಿದೆ ಎಂಬುದೇ ಜಲದ ಪ್ರತಿಮೆ. ಸುಂದರ ಕಾವ್ಯ ಕನ್ನಿಕೆಯ ರೂಪದಲ್ಲಿ ಮೊದಲ ನೋಟದಲ್ಲೇ ಎಂಥವರನ್ನೂ ಸೆಳೆಯಬಲ್ಲ ಜಲರಾಶಿಗೆ ಮನಸೋಲದ ಮನಸ್ಸುಗಳಿಲ್ಲ. ಮನುಷ್ಯನೊಂದಿಗಿನ ಜಲದ ಸಂಬಂಧದ ಸೆಳೆತ ಅಂಥದ್ದು. ಈ ಪರಿಯ ಚುಂಬಕ ಶಕ್ತಿಯೊಂದು ಈ ಧರೆಯ ಮೇಲೆಯೇ ಇಲ್ಲದಿದ್ದರೆ ? ಎಂಥ ಮೂರ್ಖ ಪ್ರಶ್ನೆ. ಖಂಡಿತ ಹಾಗೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ಏಕೆಂದರೆ ನೀರಿಲ್ಲದ ಜಗತ್ತಿನಲ್ಲಿ ಮನುಷ್ಯನ ಪ್ರಸ್ತಾಪವೇ ಇರುತ್ತಿರಲಿಲ್ಲ. ಮಾತ್ರವಲ್ಲ ಜೀವ ಕೋಟಿಯ ಪ್ರಮೇಯವೂ ಇಲ್ಲ.
ಇಂಥ ನೀರಿನ ವಿಚಾರದಲ್ಲಿ ತಿದ್ದಿಕೊಳ್ಳಲಾಗದ ತಪ್ಪು ಮಾಡಿ ಆಗಿದೆ. ನೀರಿನ ವಿಚಾರದಲ್ಲಿ ಎಸಗಿದ ಸಾಮೂಹಿಕ ಅಪರಾಧಕ್ಕೆ ಈಗೇನಿದ್ದರೂ ಬೆಲೆತೆರುವುದೊಂದೇ ಮಾರ್ಗ ಉಳಿದಿದೆ ನಮ್ಮ ತಲೆ ಮಾರಿಗೆ. ಆದರೆ, ಹಿಂದೆ ಮಾಡಿದ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿದರೆ ಮುಂದಿನ ಜನಾಂಗವನ್ನಾದರೂ ಆರೋಗ್ಯಪೂರ್ಣವಾಗಿಟ್ಟು ಹೋಗಬಹುದು.
ವಿಶ್ವಾದ್ಯಂತ ಪ್ಲೋರೋಸಿಸ್‌ನ ರಕ್ಕಸ ಸಾಮ್ರಾಜ್ಯ ಸ್ಥಾಪನೆಯಾಗಿದೆ. ಸ್ವಾತಂತ್ರ್ಯೋತ್ತರ ಭಾರತಕ್ಕೆ ರೋಗಗಳೇನೂ ಹೊಸದಲ್ಲ. ಸಾಂಕ್ರಾಮಿಕಗಳು, ಸಾಮೂಹಿಕ ರೋಗ ಲಕ್ಷಣಗಳ ಸಾಲಿಗೆ ಹೊಸ ಸೇರ್ಪಡೆ ಪ್ಲೋರೋಸಿಸ್. ಆದರಿದು ಸ್ವಯಂಕೃತ. ಅಂತರ್ಜಲದ ಮಿತಿ ಮೀರಿದ ಬಳಕೆ, ನೀರು ನಿರ್ವಹಣೆಯಲ್ಲಿನ ಇನ್ನಿಲ್ಲದ ಬೇಜವಾಬ್ದಾರಿ, ಜಲ ಮಾಲಿನ್ಯದ ಪರಮಾವ ತಲುಪಿದ ಪರಿಣಾಮ ಇಂದು ೧೫ ರಾಜ್ಯಗಳಲ್ಲಿನ ೧೫೦ಕ್ಕೂ ಹೆಚ್ಚು ಜಿಲ್ಲೆಯ ಕೋಟ್ಯಂತರ ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ. ಎರಡು ಅಲುಗಿನ ಪ್ಲೋರೀನ್ ಮನುಷ್ಯ ಜೀವನದ ಬೆಳವಣಿಗೆ ಎಷ್ಟು ಅಗತ್ಯವೋ ಅಷ್ಟೇ ಮಾರಕ.
ಅಂತರ್ಜಲವೇ ಅಕ ಪ್ಲೋರೈಡ್‌ನ ತವರು. ಅಭಿವೃದ್ಧಿಯ ಹುಚ್ಚುವೇಗಕ್ಕೆ ಸಿಲುಕಿ, ಬೋರ್‌ವೆಲ್‌ಗಳ ಹುಸಿ ಪ್ರಗತಿಯನ್ನು ಆರೋಪಿಸಿಕೊಳ್ಳುವ ಭರದಲ್ಲಿ ನಾವೆಲ್ಲಿ ಎಡವಿದ್ದೇವೆ ಎಂಬುದು ತಿಳಿಯದೇ ಹೋದದ್ದು ದುರಂತ. ಬರಗಾಲ ಪೀಡಿಸಿದ್ದನ್ನೇ ನೆಪಮಾಡಿಕೊಂಡು ಆರಂಭಿಸಿದ ಬೋರ್‌ವೆಲ್‌ಗಳ ಕ್ರಾಂತಿ ಈ ಮಟ್ಟಿಗಿನ ದುರಂತಕ್ಕೆ ಮುನ್ನುಡಿಯಾಗುತ್ತದೆ ಎಂಬುದನ್ನು ಯಾರೊಬ್ಬರೂ ಗ್ರಹಿಸಿರಲೇ ಇಲ್ಲ.
ಪ್ಲೋರೀನ್ ಯುಕ್ತ ನೀರು ತಂದಿತ್ತಿರುವ ಸಂಕಟ ಒಂದೆರಡು ಬಗೆಯದ್ದಲ್ಲ. ಭಾರತದಲ್ಲಂತೂ ಯಾವ ರಾಜ್ದಲ್ಲಿ ಇದಿಲ್ಲ ಎಂಬುದನ್ನೇ ಹೇಳಲಾಗುವುದಿಲ್ಲ. ಏಕೆಂದರೆ ಎಲ್ಲರೂ ಅಂತರ್ಜಲದ ಮೇಲೆ ಪಾರುಪತ್ಯ ಸಾಸಲು ಪೈಪೋಟಿಗೆ ಬಿದ್ದವರೇ. ಪರಿಣಾಮ ಕುಡಿಯುವ ನೀರೇ ವಿಷವಾಗಿ ಬಾಳುವೆಯನ್ನೇ ಸಂಕಷ್ಟಕ್ಕೆ ದೂಡಿದೆ. ಬಡಕಲು ದೇಹ, ಪೀಚಲು ಕೈಕಾಲು, ಬಾಗಿದ ಮೂಳೆಗಳು, ಕಸುವು ಕಳೆದುಕೊಂಡ ರಟ್ಟೆ, ಬಣ್ಣಗೆಟ್ಟ ಹಲ್ಲು, ಎದ್ದು ನಿಲ್ಲಲೂ ತ್ರಾಣವಿಲ್ಲದ ದೇಹವೆಂದರೆ ಮೂಳೆಯ ಹಂದರ. ಒಟ್ಟಾರೆ ಬದುಕಿದ್ದಾಗಲೇ ನರಕದರ್ಶನ.
ಬದುಕಲು ಬಿಡದ, ಸಾವೂ ಸುಳಿಯಗೊಡದ ಪ್ಲೋರೋಸಿಸ್, ಮನುಷ್ಯ ದೇಹ ಹೊಕ್ಕರೆ ಮತ್ತೆಂದೂ ಜಾಗಬಿಟ್ಟು ಕದಲದು. ನಮ್ಮ ಮೇಲೆ ನಾವೇ ಕದನ ಸಾರುವ ದೈನೇಸಿ ಸ್ಥಿತಿಗೆ ತಲುಪಿಸಿಬಿಡುವ ಈ ಭಯಂಕರ ಕಾಯಲೆ ಪೀಡಿತರ ಕೂಗು ಅಂತರ್ಜಲದಂತೆ ಬತ್ತಿ ಹೋಗುತ್ತಿದೆ. ಇದೇ ಕಾರಣಕ್ಕಾಗಿಯೋ ಎನೋ, ಆಡಳಿತಾರೂಢರಿಂದ ಹಿಡಿದು ಜಾಗತಿಕ ಮಟ್ಟದವರೆಗೆ ಪರಿಹಾರ ದ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳೇ ಸಾಗುತ್ತಿಲ್ಲ. ಮನುಕುಲದ ಮೇಲೆ ಸವಾರಿ ಹೊರಟಿರುವ ಕ್ಯಾನ್ಸರ್, ಏಡ್ಸ್‌ಗಿಂತಲೂ ವ್ಯಾಪಕವಾಗಿರುವ ಪ್ಲೋರೋಸಿಸ್ ವಿರುದ್ಧ ಕನಿಷ್ಠ ಆಂದೋಲನವೂ ರೂಪುಗೊಂಡಿಲ್ಲ.
ಸಾರ್ವಜನಿಕ ಆರೋಗ್ಯದ ಬಗೆಗಿನ ಇಂಥ ನಿಷ್ಕಾಳಜಿಯೇ ನೀರಿನ ವಿಚಾರದಲ್ಲೂ ಮುಂದುವರಿದಿದೆ. ಜಗದೆಲ್ಲೆಡೆ ಹಾಹಾಕಾರವೆದ್ದಿರುವಾಗಲೂ ಶುದ್ಧ ನೀರು ಮರೀಚಿಕೆಯಾಗಿಯೇ ಸಾಗುತ್ತಿದೆ. ಈ ಹಂತದಲ್ಲಿ ಒಮ್ಮ ನಮ್ಮನ್ನು ನಾವೇ ಚಿವುಟಿಕೊಂಡು ಎಚ್ಚರಿಸಿಕೊಳ್ಳಬೇಕಾಗಿದೆ. ಏಕೆಂದರೆ ಈ ಧರೆಯ ಮೇಲಿನ ಬಹುತೇಕ ಕಾಯಿಲೆಗಳು ಅಶುದ್ಧ ನೀರಿನದೇ ಬಳಿವಳಿ. ಇದಕ್ಕಿಂಥ ಮುಖ್ಯ ಸಂಗತಿಯೆಂದರೆ ನೀರು ಕಾಲಿಯಾದರೆ ಮಳೆಯಿಂದ ತುಂಬಿಸಿಕೊಳ್ಳಬಹುದು. ಆದರೆ ಇರುವ ಅಂತರ್ಜಲ ಮಲಿನವಾದರೆ ಇನ್ನೆಂದೂ ಅದು ಶುದ್ಧಗೊಳ್ಳದು. ಇಂಥ ಎಚ್ಚರ ಮಾತ್ರ ಮನುಕುಲವನ್ನು ರಕ್ಷಿಸಬಲ್ಲುದು.
ಕಲುಷಿತ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಲವಣಾಂಶವಿರುವ ನೀರನ್ನು ಸೇವಿಸಿ ಜಗತ್ತಿನ ಸರಿಸುಮಾರು ೧೨೫ ಕೋಟಿ ಮಂದಿ ಫ್ಲೋರೋಸಿ ಸ್‌ನಂಥ ಜಲಸಂಬಂ ರೋಗಗಳಿಂದ ಬಳಲುತ್ತಿ ದ್ದಾರೆ. ಭಾರತವೂ ಇಂಥ ರೋಗಗಳಿಂದ ಮುಕ್ತ ವಾಗಿಲ್ಲ. ರಾಜ್ಯದ ಅಂತರ್ಜಲವೂ ಈಗಾಗಲೇ ಫ್ಲೋರೈಡ್ ನೈಟ್ರೇಟ್‌ಗಳಂಥ ಖನಿಜಗಳಿಂದ ಬಳಕೆಗೆ ಅಯೋಗ್ಯವಾಗಿರುವುದು ಹೊಸ ಸಂಗತಿಯೇನಲ್ಲ.
ವೈಜ್ಞಾನಿಕವಾಗಿ ನೀರಿನಲ್ಲಿ ೧.೫೦ ಮಿಲಿ ಗ್ರಾಂಗಿಂತ ಹೆಚ್ಚಿನ ಫ್ಲೋರೈಡ್ ಅಂಶ ಇರಕೂಡದು. ಇದು ಮನುಷ್ಯನ ಮೂಳೆಗಳ ಮೇಲೆ ತೀವ್ರತರ ಪರಿಣಾಮವನ್ನುಂಟು ಮಾಡುವ ಫ್ಲೋರೋನೆಸ್‌ಗೆ ಕಾರಣವಾಗುತ್ತದೆ. ಇದಕ್ಕಿಂತ ಅಪಾಯಕಾರಿ ನೈಟ್ರೀಟ್. ಈ ವಿಷಕಾರಿ ಲವಣ ಬೆರೆತ ನೀರನ್ನು ನಿರಂತರ ಸೇವಿಸುವುದರಿಂದ ಮೆತೆಗ್ಲೋಬೋ ಮಿನಿಯ (ಮಕ್ಕಳ ನೀಲಿರೋಗ) ಎಂಬ ರೋಗ ಬರುವ ಸಾಧ್ಯತೆ ಇದೆ. ಇದು ಕ್ಯಾನ್ಸರ್‌ಕಾರಕವೂ ಹೌದು.
ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂಗಳು ಕಾರ್ಬೊ ನೇಟ್ ಹಾಗೂ ಬೈಕಾರ್ಬೋನೇಟ್ ಗಳಾಗಿ ರೂಪಾಂತರಗೊಂಡಾಗ ಅದು ನೀರಿಗೆ ಗಡಸುತನ ವನ್ನು ಬಳುವಳಿಯಾಗಿ ನೀಡುತ್ತದೆ. ಸ್ನಾನ ಮಾಡಿದ ಮೇಲೂ ಮೈಯೆಲ್ಲಾ ಅಂಟು ಅಂಟೆಂದು ಅನ್ನಿಸಿದರೆ ಅಂಥ ನೀರಿನಲ್ಲಿ ಈ ರೂಪಾಂತರವಾಗಿದೆ ಎಂದೇ ಅರ್ಥ. ಇದಕ್ಕೆ ಕ್ಲೋರೈಡ್ ಮತ್ತು ಸಲೇಟ್‌ಗಳು ಸೇರಿದರೆ, ಶಾಶ್ವತ ಗಡಸುತನ ಕಾಣಿಸಿಕೊಳ್ಳುತ್ತದೆ. ೨೦೦ ಮಿ.ಗ್ರಾಂಗಿಂತ ಹೆಚ್ಚಿನ ಕಬ್ಬಿಣದ ಅಂಶ ಇರುವ ನೀರು ಸೇವನೆ ಮೂತ್ರಕೋಶಕ್ಕೆ ಹಾನಿಕಾರಕ. ಜತೆಎಗ ಜಠರದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಇಂದು ನೀರಿನ ಸಮಸ್ಯೆಯೆಂದರೆ ಕೇವಲ ಅಭಾವವಷ್ಟೇ ಅಲ್ಲ. ಅದು ಜಲಮಾಲಿನ್ಯವನ್ನು ಒಳಗೊಂಡಿದೆ ಎಂಬುದು ಗಮನಾರ್ಹ ಸಂಗತಿ. ನೀರಿನ ಕೊರತೆಯನ್ನು ತುಂಬಿ ಬಿಡಬಹುದು. ಕುಸಿದ ಅಂತರ್ಜಲದ ಮಟ್ಟವನ್ನು ಮರು ಪೂರಣದ ಮೂಲಕ ಏರಿಸಲೂಬಹುದು. ಆದರೆ, ಒಮ್ಮೆ ಕಲುಷಿತಗೊಂಡ ನೀರನ್ನು ಶುದ್ಧಗೊಳಿ ಸುವುದು ಕಷ್ಟ ಸಾಧ್ಯ. ಸ್ವಸ್ಥ ವ್ಯವಸ್ಥಾಪನೆಯೊಂದೇ ಇದಕ್ಕಿರುವ ಏಕೈಕ ಪರಿಹಾರ.
ಜಲಮಾಲಿನ್ಯವೆಂದರೆ ಒಂದು ರೀತಿಯಲ್ಲಿ ಏಡ್ಸ್‌ರೋಗವಿದ್ದಂತೆ. ಅದು ಬಂದ ನಂತರ ಗುಣ ಪಡಿಸಲು ಹೆಣಗುವುದಕ್ಕಿಂತ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೇ ಮುಖ್ಯ.

‘ಲಾಸ್ಟ್’ಡ್ರಾಪ್: ಜಲಮಾಲಿನ್ಯವೆಂಬುದು ಮನೆಗೆ ಬಿದ್ದ ಬೆಂಕಿ. ಅಲ್ಲಿ ಇನ್ನು ಬದುಕುವ ಅವಕಾಶವೇ ಇಲ್ಲ.

Wednesday, December 10, 2008

ವಿಜಾಪುರದ ಕೆರೆ ತುಂಬುತ್ತಿದೆ, ಹೋರಾಟದ ನೆಲ ಹಸಿಯಾಗುತ್ತಿದೆ

ನೆಟ್ಟ ಗಿಡ ಕೊನೆಗೂ ಹೂ ಬಿಟ್ಟಿದೆ. ಇನ್ನೇನು ಹೀಚಾಗಿ, ಕಾಯಾಗಿ, ಫಲ ದೊರೆಯಬಹುದು. ಅದನ್ನು ಸವಿಯಲು ವಿಜಾಪುರದ ಜನತೆ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ಜಿಲ್ಲೆಯ ಮಂದಿಗೆ ಸ್ವರ್ಗ ಮೂರೇ ಗೇಣು ಎಂಬಂತಾಗಿದೆ. ಯಾರಿಗೆ ತಾನೆ ಸಂತಸ ಆಗದಿದ್ದೀತು ? ಸತತ ನಾಲ್ಕು ವರ್ಷಗಳ ಕಾಲ ಯಾವುದಕ್ಕಾಗಿ ಹಗಲಿರುಳೂ ಹೋರಾಡಿದ್ದರೋ, ಯಾವ ಕನಸಿನ ಮೂಟೆ ಹೊತ್ತು ಉರಿ ಬಿಸಿಲಲ್ಲೂ ಶ್ರಮಿಸಿದ್ದರೋ ಅದು ಕೈಗೂಡುವ ಸಮಯ ಬಂದಿದೆ.
ಹೌದು, ರಾಷ್ಟ್ರದಲ್ಲೇ ಮಾದರಿಯಾಗಬಲ್ಲ ‘ಸಮಗ್ರ ಕೆರೆ ತುಂಬುವ ಯೋಜನೆ’ಯ ಕಾಮಗಾರಿಗೆ ನಾಡಿದ್ದು ಭಾನುವಾರವೇ(ಡಿ.೭ರಂದು) ಚಾಲನೆ ಸಿಗಲಿದೆ. ಇದರೊಂದಿಗೆ ಮೊದಲ ಹಂತದಲ್ಲಿ ವಿಜಾಪುರ ಹಾಗೂ ಬಾಗಲಕೋಟ ಜಿಲ್ಲೆಯ ೨೩ ಕೆರೆಗಳು ಹಾಗೂ ೫ ಬಾಂದಾರಗಳು ತುಂಬಲಿವೆ.
ಈ ಕ್ಷಣಕ್ಕಾಗಿ ಅಲ್ಲಿನ ರೈತರು ಅಕ್ಷರಶಃ ತಪಸ್ಸು ನಡೆಸಿದ್ದರು. ಮೂರು ತಿಂಗಳು ಎಡೆಬಿಡದೇ ಹೋರಾಟ ನಡೆಸಿದ್ದರು. ಜಿಲ್ಲೆಯ ಜನರ ಅದೃಷ್ಟ, ಅಪರೂಪಕ್ಕೆಂಬಂತೆ ನಮ್ಮ ರಾಜಕಾರಣಿಗಳು ಸಹ ಪಕ್ಷಭೇದ ಮರೆತು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಕಾರಿಗಳೂ ಸಹಕರಿಸಲು ಸಿದ್ಧರಾಗಿದ್ದರು. ಆದರೂ ಅಂದುಕೊಂಡದ್ದು ಆಗಲು ಇಷ್ಟು ವರ್ಷ ಬೇಕಾಯಿತು. ಇದೇ ಇರಬಹುದೇ ವ್ಯವಸ್ಥೆ ಅಂದರೆ ?
ಹೋಗಲಿ ಬಿಡಿ, ಅಂತೂ ವಿಜಾಪುರದ ಕೆರೆ ತುಂಬಲು ಮುಹೂರ್ತ ಕೂಡಿ ಬಂತಲ್ಲ ಎಂಬುದೇ ಸಮಾಧಾನ. ಈ ಸಮಾಧಾನದ ಹಿಂದೆ ಪತ್ರಿಕೆಯದ್ದೊಂದು ಪಾಲೂ ಇದೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಲೇಬೇಕು. ಕೆರೆತುಂಬುವ ಹೋರಾಟಕ್ಕೆ ಪೂರಕವಾಗಿ ‘ವಿಕ’ ಪುಟ್ಟದೊಂದು ಅಕ್ಷರ ಅಭಿಯಾನವನ್ನೇ ನಡೆಸಿತ್ತು. ತಿಂಗಳುಗಳ ಕಾಲ ಹೋರಾಟದ ಪ್ರತಿ ಹೆಜ್ಜೆ ಹೆಜ್ಜೆಗಳನ್ನೂ ದಾಖಲಿಸಿತ್ತು. ಯೋಜನೆಯ ಮೇಲೊಂದು ‘ಅವಲೋಕನ’ವನ್ನೇ ಮಾಡಿ ವಿವರ ಕಟ್ಟಿಕೊಡಲಾಗಿತ್ತು. ಹೀಗೆ ಜನರ ದನಿಯಾಗಿ ದುಡಿದದ್ದೂ ಸಾರ್ಥಕವೆನಿಸುತ್ತಿದೆ. ಈ ಹಂತದಲ್ಲಿ ಮತ್ತೊಮ್ಮೆ ಜಿಲ್ಲೆಯ ಸ್ಥಿತಿ, ಯೋಜನೆಯ ರೂಪುರೇಷೆ, ಅದರ ಅಗತ್ಯ ಇತ್ಯಾದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ.
ಸತತ ಬರಗಾಲಕ್ಕೆ ತುತ್ತಾಗುವ ಬಾಗಲಕೋಟ, ವಿಜಾಪುರ ಅವಳಿ ಜಿಲ್ಲೆಯಲ್ಲಿ ಕೃಷ್ಣಾ, ಭೀಮೆ, ಡೋಣಿ, ಮಲಪ್ರಭಾ ಹಾಗೂ ಘಟಪ್ರಭಾ - ಹೀಗೆ ಪಂಚ ನದಿಗಳು ಹರಿಯುತ್ತವೆ. ಹಾಗಾದರೆ ಇಲ್ಲಿಗೆ ನೀರಿನ ಬರವೆಂಬುದೇ ಇರಲಿಕ್ಕಿಲ್ಲ ಎಂದುಕೊಂಡರೆ ತಪ್ಪಾದೀತು. ಏಕೆಂದರೆ ಬೇಸಿಗೆ ಬಂತೆಂದರೆ ಇಲ್ಲಿ ಕುಡಿಯುವ ಹನಿ ನೀರಿಗೂ ಹಾಹಾಕಾರ ಸೃಷ್ಟಿಯಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಅವಳಿ ಜಿಲ್ಲೆಯ ಜನ ಭೂಮಿ ತ್ಯಾಗ ಮಾಡಿದರೂ ನೀರಿನ ಸಮಸ್ಯೆ ತಪ್ಪಿಲ್ಲ. ಇನ್ನೂ ವಿಚಿತ್ರವೆಂದರೆ ಪಕ್ಕದ ಮಹಾರಾಷ್ಟ್ರದಲ್ಲಿ ಗುಡುಗಲಾರಂಭಿಸಿದರೆ ವಿಜಾಪುರದ ಮಂದಿಯ ಎದೆ ನಡುಗಲಾರಂಭಿಸುತ್ತದೆ. ಅಲ್ಲಿ ಮಳೆ ಸುರಿದರಂತೂ ಮುಗಿದೇ ಹೋಯಿತು. ಪ್ರವಾಹದಿಂದ ಉಕ್ಕೇರುವ ಡೋಣಿ, ಭೀಮೆಯರು ಖುಲ್ಲಂಖುಲ್ಲಾ ಇಡೀ ಜಿಲ್ಲೆಯ ಬದುಕನ್ನೇ ಮುಳುಗಿಸಿ ಬಿಡುತ್ತಾರೆ. ಅಲ್ಲಿನ ಪ್ರವಾಹದ ನೀರು ಜಿಲ್ಲೆಯೊಳಗೆ ನುಗ್ಗಿ ನಾಚಾರ ಎಬ್ಬಿಸಿ ಬಿಡುತ್ತದೆ. ಇನ್ನು ನಮ್ಮದೇ ಕೃಷ್ಣಾ ನದಿಯಿಂದ ಪ್ರತಿ ವರ್ಷ ೬೦೦ ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗುತ್ತದೆ. ಇಷ್ಟಾದರೂ ವಿಜಾಪುರದಲ್ಲಿ ಗಂಟಲು ನೆನೆಸಲೂ ನೀರಿರುವುದಿಲ್ಲ.
ಇಂಥ ವಿಚಿತ್ರ ಸನ್ನಿವೇಶದಲ್ಲಿ ಹುಟ್ಟಿಕೊಂಡಿದ್ದೇ ಕೆರೆ ತುಂಬಿಸುವ ಯೋಜನೆ. ವ್ಯರ್ಥವಾಗಿ ಸಮುದ್ರ ಸೇರುವ, ಹೊತ್ತಲ್ಲದ ಹೊತ್ತಲ್ಲಿ ಬಂದು ಜನಜೀವನವನ್ನೇ ತೊಳೆದುಕೊಂಡು ಹೋಗಿ ಬಿಡುವ ಪ್ರವಾಹದ ನೀರನ್ನೇ ಬಳಸಿಕೊಳ್ಳಬಾರದೇಕೆ ಎಂಬ ಯೋಚನೆ ಹುಟ್ಟಿಕೊಂಡದ್ದು ಆಗಿನ ತಿಕೋಟಾ (ಈಗ ಬಬಲೇಶ್ವರ) ಶಾಸಕ ಎಂ.ಬಿ. ಪಾಟೀಲರಿಗೆ. ತಜ್ಞರಾಗಿ ಅಧ್ಯಯನ ಕೈಗೊಂಡು ಅದಕ್ಕೊಂದು ಸ್ಪಷ್ಟ ನೀಲ ನಕ್ಷೆ ರೂಪಿಸಿಕೊಟ್ಟವರು ಬಿಎಲ್‌ಡಿಇ ಸಂಸ್ಥೆಯ ಪ್ರೊ. ಹುಗ್ಗಿ.
ಎರಡೂ ನದಿಗಳ ಪ್ರವಾಹದ ನೀರಿನಲ್ಲಿ ೨.೫ ಟಿಎಂಸಿಯಷ್ಟನ್ನು ಎತ್ತಿ ವಿಜಾಪುರ ಬಾಗಲಕೋಟ ಅವಳಿ ಜಿಲ್ಲೆಗಳ ಎಲ್ಲ ಕೆರೆಗಳಲ್ಲಿ ತುಂಬಿಸುವ, ಆ ಮೂಲಕ ಇಡೀ ವರ್ಷ ಸಮೃದ್ಧ ನೀರನ್ನು ಕಾಣುವ, ರಾಷ್ಟ್ರದಲ್ಲೇ ಮಾದರಿ ಯೋಜನೆಯೊಂದು ರೂಪುಗೊಂಡಿತು. ಯೋಜನೆ ಕಾರ್ಯಸಾಧ್ಯವೆಂಬುದನ್ನು ಅರಿತ ಜಿಲ್ಲೆಗಳ ರೈತರು ಇದರ ಅನುಷ್ಠಾನಕ್ಕೆ ದನಿ ಎತ್ತಿದರು. ವಿಜಾಪುರದ ೯೭, ಬಾಗಲಕೋಟದ ೬೭ ಕೆರೆಗಳನ್ನು ತುಂಬಿಸುವುದು ಉದ್ದೇಶ. ಮೊದಲ ಹಂತದಲ್ಲಿ ವಿಜಾಪುರ ಜಿಲ್ಲೆಯ ತಿಕೋಟಾ ಪ್ಯಾಕೇಜ್‌ನ ೧೬ ಕೆರೆಗಳು, ೫ ಬಾಂದಾರಗಳು ಹಾಗೂ ಬಾಗಲಕೋಟ ಜಿಲ್ಲೆಯ ೮ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಕಳೆದ ಸೆ.೯ರಂದೇ ತಿಕೋಟಾದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಚಾಲನೆ ಸಿಗಬೇಕಿತ್ತು. ಇದಕ್ಕೆಂದು ಅದ್ಧೂರಿ ಸಿದ್ಧತೆಯೂ ನಡೆದಿತ್ತು. ಆದರೆ, ರಾಜಕೀಯ ಬೆಳವಣಿಗೆ, ಬರದ ಜಿಲ್ಲೆಯ ರೈತರಿಗೆ ಬರೆ ಹಾಕಿತ್ತು.
ಏತನ್ಮಧ್ಯೆ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡು, ಬೆಂಗಳೂರಿನ ಎಸ್‌ಪಿಎಂಎಲ್ ಕಂಪನಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ದರ ನಿಗದಿಯಾಗುವಾಗ ಟೆಂಡರ್ ಆದ ಹಣದ ಮೇಲೆ ಶೇ.೨೬ರಷ್ಟನ್ನು ಹೆಚ್ಚುವರಿಯಾಗಿ (ಎಸ್.ಆರ್.ರೇಟ್‌ಗಿಂತ) ನೀಡಬೇಕೆಂದು ಕಂಪನಿ ಪಟ್ಟು ಹಿಡಿದಿತ್ತು. ಇದಕ್ಕೊಪ್ಪದ ತಾಂತ್ರಿಕ ಸಲಹೆಗಾರರು ಎಸ್.ಆರ್. (ಷೆಡ್ಯೂಲ್ ರೇಟ್) ದರಕ್ಕಿಂತ ಶೆ.೧೦ರಷ್ಟು ಹಣ ನೀಡುವುದಾಗಿ ಘೋಷಿಸಿದರು. ಪರಿಣಾಮ ಎಸ್‌ಎಂಪಿಎಲ್‌ನವರು ಹಿಂದೆ ಸರಿದರು. ಇದರಿಂದಾಗಿ ಕಂಗಾಲಾದ ರೈತರು ಆಕ್ರೋಶಗೊಂಡಿದ್ದರು. ಆದರೀಗ ೩ನೇ ಬಾರಿ ಟೆಂಡರ್ ನಡೆದು, ಹೈದರಾಬಾದ್‌ನ ಜೆವಿಪಿಆರ್‌ಎಸ್ ಕಂಪನಿಯವರಿಗೆ ೩ ವರ್ಷಗಳ ಕಾಲಮಿತಿಯೊಂದಿಗೆ ಕಾಮಗಾರಿ ವಹಿಸಲಾಗುತ್ತಿದೆ. ೧೦೯ ಕೋಟಿ ರೂ. ಯೋಜನೆ ವೆಚ್ಚ ಆಗಲಿದೆ.
ಬಹುಶಃ ನಿಗದಿತ ಅವಯಲ್ಲಿ ಪೂರ್ಣಗೊಂಡರೆ ಅತಿ ಕಡಿಮೆ ವೆಚ್ಚದಲ್ಲಿ ಗರಿಷ್ಠ ನೀರಾವರಿಯಾಗುವ ರಾಷ್ಟ್ರದ ಪ್ರಥಮ ಯೋಜನೆ ಇದೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಷ್ಟಕ್ಕೂ ನೀರು ತುಂಬಿಸುವುದು ಹೇಗೆ ? ಪ್ರಶ್ನೆ ಸಹಜ. ಎರಡೂ ಜಿಲ್ಲೆಯ ಕೆರೆಗಳಿಗೆ ಹಿರೇಪಡಸಲಗಿ ಬಳಿ ಕೃಷ್ಣಾ ನದಿಯಿಂದ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಒಟ್ಟು ೧.೦೯ ಟಿಎಂಸಿ ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತದೆ. ಮೊದಲ ಹಂತದಲ್ಲಿ ಕೃಷ್ಣಾ ನದಿಯಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದುಹೋಗುವ ೨.೩೪ ಕ್ಯೂಸೆಕ್ ನೀರನ್ನು ಜೂನ್-ಡಿಸೆಂಬರ್ ಅವಯಲ್ಲಿ ಒಟ್ಟು ೨ ಬಾರಿ ಹಿರೇಪಡಸಲಗಿಯಿಂದ (ರೈಸಿಂಗ್ ಮೇನ್) ಕಲಬೀಳಗಿಯವರೆಗೆ (ಒಟ್ಟು ೧೭.೫ ಕಿ.ಮೀ. ದೂರ) ತರಲಾಗುತ್ತದೆ. ಕಲಬೀಳಗಿಯಲ್ಲಿ ವಿತರಣಾ ಛೇಂಬರ್ ನಿರ್ಮಿಸಿ ೨ ಪೈಪ್‌ಲೈನ್‌ಗಳ (ನಾಗರಾಳ ಮತ್ತು ಕುಮಟೆ) ಮೂಲಕ ನೀರು ಸರಬರಾಜು ಮಾಡಲಾಗುತ್ತದೆ.
ವಿಜಾಪುರ ಜಿಲ್ಲೆಗೆ ನಾಗರಾಳದಿಂದ ನೀರು ತಂದು ರಾಂಪುರದಲ್ಲಿ ಗುರುತ್ವಾಕರ್ಷಣೆಯ ಮೂಲಕವೇ ಸಂಪ್ ಮಾಡಲಾಗುತ್ತದೆ. ಅಲ್ಲಿಂದ ಬಾಬಾನಗರಕ್ಕೆ ೫.೫ ಕಿ.ಮೀ.ವರೆಗೆ ನೀರು ತಂದು, ಅಲ್ಲೆರಡು ವಿತರಣಾ ಛೇಂಬರ್ ನಿರ್ಮಿಸಿ ಕನಮಡಿ, ಲೋಗಾಂವ ಟಕ್ಕಳಕಿ ಮತ್ತಿತರ ಕೆರೆಗಳಿಗೆ ತುಂಬಿಸಲಾಗುತ್ತದೆ.
ಇದಲ್ಲದೇ ಬಾಗಲಕೋಟ ಜಿಲ್ಲೆಯ ಕೆರೆಗಳಿಗೆ, ಹಿರೇಪಡಸಲಗಿಯಿಂದ ನಟ್ಕಲ್ ಕೆರೆಗೆ ನೇರವಾಗಿ ನೀರು ತುಂಬಿಕೊಂಡು ಕೊಂಡೊಯ್ಯಲಾಗುತ್ತದೆ. ಕುಮಟೆ ಪೈಪ್‌ಲೈನ್‌ನಿಂದ ಜಿಲ್ಲೆಯ ಉಳಿದ ೬ ಕೆರೆಗಳನ್ನು ತುಂಬಿಸಬಹುದೆಂಬುದು ಈಗಿನ ಚಿಂತನೆ.
ಮೊದಲ ಹಂತದಲ್ಲಿ ನೀರು ಲಿಫ್ಟ್ ಮಾಡಲು ೪ ವರ್ಟಿಕಲ್ ಟರ್ಬೈನ್ ಪಂಪ್‌ಗಳು (೧,೮೦೦ ಎಚ್‌ಪಿ) ೨೪ ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ. ೨ನೇ ಹಂತದ ನೀರು ಲಿಫ್ಟ್ ಮಾಡಲು ೩ ಸೆಂಟ್ರಿಫ್ಯೂಗಲ್ ಪಂಪ್‌ಗಳನ್ನು (೪೦೦ ಎಚ್‌ಪಿ) ಬಳಸಲಾಗುತ್ತದೆ.
ಇಷ್ಟಾಗಿದ್ದೇ ಆದಲ್ಲಿ ಕೆರೆಗಳು ತುಂಬಿ ಅಂತರ್ಜಲ ಮಟ್ಟ ತಂತಾನೇ ವೃದ್ಧಿಸುತ್ತದೆ. ೩,೪೨೩ ಹೆಕ್ಟೇರ್ ಪ್ರದೇಶಕ್ಕೆ ನೇರ ನೀರಾವರಿ ಆಗಲಿದೆ. ಪಾತಾಳಕ್ಕಿಳಿದ ಬೋರ್‌ವೆಲ್‌ಗಳು ಮರು ಪೂರಣ ಹೊಂದಲಿವೆ. ಜನ, ಜಾನುವಾರುಗಳಿಗೆ ಕುಡಿಯಲು ಶುದ್ಧ ಹಾಗೂ ರಾಸಾಯನಿಕ ಮುಕ್ತ ನೀರು ಸಿಗಲಿದೆ. ಅವಳಿ ಜಿಲ್ಲೆಯ ತೋಟಗಾರಿಕೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ೫೦ ಸಾವಿರ ಜನರಿಗೆ ದಿನಕ್ಕೆ ೮೦ ಲೀಟರ್‌ನಂತೆ ವರ್ಷವಿಡೀ ಕಣ್ಮುಚ್ಚಿಕೊಂಡು ಕುಡಿಯುವ ನೀರು ಕೊಡಬಹುದು.
ಪ್ರತಿ ವರ್ಷ ಸರಕಾರ ಕುಡಿಯುವ ನೀರಿಗಾಗಿಯೇ ಕೋಟ್ಯಂತರ ರೂ. ಖರ್ಚು ಮಾಡುತ್ತಿರುವುದು ನಮ್ಮ ಕಣ್ಣಮುಂದೆಯೇ ಇದೆ. ನಮ್ಮ ಎಲ್ಲ ನೀರಾವರಿ ಯೋಜನೆಗಳೂ ವಿಫಲಗೊಂಡಿರುವುದಕ್ಕೆ ಕಾರಣವೇ ಪಕ್ಕಾ ನೀರಿನ ಮೂಲಗಳಿಲ್ಲದಿರುವುದು. ನೆದರ್‌ಲೆಂಡ್, ಡೆನಿಡಾ, ಜಿ.ಪಂ. ನೆರವಿನ ಕೋಟ್ಯಂತರ ರೂ.ವೆಚ್ಚದ ಯೋಜನೆಗಳು ನೆಲಕಚ್ಚಿದ್ದೂ ಹೀಗಾಗಿಯೇ. ಆದರೆ, ಕೆರೆ ತುಂಬುವ ಯೋಜನೆ ಅತ್ಯಂತ ವೈಜ್ಞಾನಿಕ. ಇದಕ್ಕೆ ಆಧಾರ ಈ ಯೋಜನೆಗೆ ಜಲಮೂಲ ನಿಗದಿಯಾಗಿದೆ. ಅವಳಿ ಜಿಲ್ಲೆಯ ಬಹುತೇಕ ಕುಡಿಯುವ ನೀರಿನ ಯೋಜನೆಯ ಮೂಲಗಳು ಕೆರೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಸ್ವಾಭಾವಿಕವಾಗಿಯೇ ಕುಡಿಯುವ ನೀರಿನ ಯೋಜನೆಗಳಿಗೆ ಯೋಗ್ಯ ಮೂಲ ಸಿಕ್ಕಂತಾಗುತ್ತದೆ.
ಆರ್ಥಿಕವಾಗಿಯೂ ಇದು ಕಾರ್ಯ ಸಾಧು, ಲಾಭದಾಯಕ. ಒಮ್ಮೆ ಕೆರೆ ತುಂಬಿದರೆ ಈ ವರೆಗೆ ಅವಳಿ ಜಿಲ್ಲೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ, ಉದ್ಯೋಗ ಸೃಜನೆಗಾಗಿ ಮಾಡುತ್ತಿದ್ದ ೫೦ ರಿಂದ ೧೦೦ ಕೋಟಿ ರೂ. ವೆಚ್ಚವನ್ನು ಅರ್ಧಕ್ಕರ್ಧ ಕಡಿತಗೊಳಿಸಬಹುದು. ಕೇವಲ ಮೀನುಗಾರಿಕೆಯಿಂದಲೇ ಪ್ರತಿ ಕೆರೆಯಿಂದ ವಾರ್ಷಿಕ ೧ ಲಕ್ಷ ರೂ.ನಿವ್ವಳ ಆದಾಯ ಲಭಿಸಬಹುದೆಂದೂ ಲೆಕ್ಕ ಹಾಕಲಾಗಿದೆ. ಒಟ್ಟಾರೆ ಯೋಜನೆಗೆ ಖರ್ಚು ಮಾಡಿದ ಮೊತ್ತಕ್ಕಿಂತಲೂ ವಾರ್ಷಿಕ ಎರಡೂವರೆ ಪಟ್ಟು (ಬಿ.ಸಿ. ರೇಶ್ಯೊ ೨.೫) ಹೆಚ್ಚು ಆದಾಯ ಬರುತ್ತದೆ.
ಇನ್ನಾದರೂ ಆ ಭಾಗದ ಮಂದಿ ರಾಸಾಯನಿಕ ಮುಕ್ತ ನೀರು ಕುಡಿದು ಫ್ಲೋರೋಸಿಸ್‌ನಂಥ ರೋಗಗಳನ್ನು ದೂರವಿಟ್ಟಾರು ಎಂಬ ನಿರೀಕ್ಷೆಗೆ ರೆಕ್ಕೆ ಬಂದಿದೆ. ಕೊನೆಗೂ ರೈತರ ಸಂಕಷ್ಟದ ದಿನಗಳು ದೂರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯ ಮಣ್ಣು ಹಾಗೂ ಹವಾಗುಣ ಎಲ್ಲ ಬೆಳೆಗಳಿಗೂ ಅತ್ಯುತ್ತಮವಾಗಿದ್ದು. ಇಲ್ಲಿನ ರೈತರಿಗೆ ಬೊಗಸೆ ನೀರು ಕೊಟ್ಟರೆ, ವಿಜಾಪುರ ‘ಕರ್ನಾಟಕದ ಕ್ಯಾಲಿಫೋರ್ನಿಯಾ’ ಆಗುವುದರಲ್ಲಿ ಸಂಶಯವಿಲ್ಲ. ಅಷ್ಟಾಗಲಿ. ನೀರಿನ ವಿಚಾರದಲ್ಲಾದರೂ ನಮ್ಮ ನಾಯಕರು ರಾಜಕೀಯ ಲಾಭ ಹುಡುಕುವ ಶುಷ್ಕ ಮನದಿಂದ ಹೊರಬರಲಿ ಎನ್ನೋಣವೇ ?

‘ಲಾಸ್ಟ್’ಡ್ರಾಪ್: ಜಲ ಕಣ್ಬಿಟ್ಟರೆ ನೆಲ ನಕ್ಕೀತು, ಜಲದ ಕಣ್ಣು ಕಟ್ಟಿದರೆ ಜನ ನೆಲ ನೆಕ್ಕಬೇಕಾದೀತು.

Friday, December 5, 2008

National Urban Sanitation Policy

The Government of India, Ministry of Urban Development recently released the National Urban Sanitation Policy.
We attach the document below, as well as key excerpts. We request you to add your comments below regarding the provisions of the Sanitation Policy.
Click here to view the National Urban Sanitation Policy
The document is quite comprehensive and detailed. It lays out a vision for urban sanitation in India. It instructs states to come up with their own detailed state-level urban sanitation strategies and City Sanitation Plans. It moots the idea of totally sanitised and open-defecation cities as a target and the setting up of a multi-stakeholder City Sanitation Task Force to achieve this. Environmental considerations, public health implications and reaching the unserved and urban poor are given significant emphasis in the policy. Funding options are laid out including direct central and state support including through existing schemes, public-private partnerships, and external funding agencies. It directs that atleast 20% of the funds should be earmarked towards servicing the urban poor. The Center also plans to institute awards to the best performing cities, reminiscent of the Nirmal Gram Puraskar awards for villages.
Important Excerpts from the Policy
Sanitation Statistics
12.04 million (7.87 %) Urban households do not have access to latrines and defecate in the open. 5.48 million (8.13%) Urban households use community latrines and 13.4 million households (19.49%) use shared latrines. 12.47 million (18.5%) households do not have access to a drainage network. 26.83 million (39.8%) households are connected to open drains. The status in respect of the urban poor is even worse. The percentage of notified and non-notified slums without latrines is 17 percent and 51 percent respectively. More than 37% of the total human excreta generated in urban India, is unsafely disposed. This imposes significant public health and environmental costs to urban areas that contribute more than 60% of the country’s GDP. Impacts of poor sanitation are especially significant for the urban poor (22% of total urban population), women, children and the elderly. The loss due to diseases caused by poor sanitation for children under 14 years alone in urban areas amounts to Rs. 500 Crore at 2001 prices (Planning Commission-United Nations International Children Emergency Fund (UNICEF), 2006). Inadequate discharge of untreated domestic/municipal wastewater has resulted in contamination of 75 percent of all surface water across India.The Millennium Development Goals (MDGs) enjoin upon the signatory nations to extend access to improved sanitation to at least half the urban population by 2015, and 100% access by 2025. This implies extending coverage to households without improved sanitation, and providing proper sanitation facilities in public places to make cities open-defecation free.

The vision for Urban Sanitation in India is
All Indian cities and towns become totally sanitized, healthy and liveable and ensure and sustain good public health and environmental outcomes for all their citizens with a special focus on hygienic and affordable sanitation facilities for the urban poor and women.

Environmental and Health Considerations
100 % of human excreta and liquid wastes from all sanitation facilities including toilets must be disposed of safely. In order to achieve this goal, the following activities shall be undertaken:a. Promoting proper functioning of network-based sewerage systems and ensuring connections of households to them wherever possible;b. Promoting recycle and reuse of treated waste water for non potable applications wherever possible will be encouraged.c. Promoting proper disposal and treatment of sludge from on-site installations (septic tanks, pit latrines, etc.);d. Ensuring that all the human wastes are collected safely confined and disposed of after treatment so as not to cause any hazard to public health or the environment.

Integrated Low Cost Sanitation Scheme
Ministry of Housing and Poverty Alleviation (HUPA) is administering a Centrally Sponsored Scheme for Integrated Low Cost Sanitation (ILCS). Under this scheme, central subsidy to the extent of 75%, state subsidy to the extent of 15% and beneficiary contribution to the extent of 10% is provided for. The main objective of the scheme is to convert around 6 lakh dry latrines into low cost pour flush latrines by 31st March 2010. 75% of the central allocation will be used for conversion and the remaining 25% will be used for construction of new toilets for EWS households who have no toilets in urban areas

State Sanitation Strategies and City Sanitation Plans
a. States will be encouraged to prepare State Level Sanitation Strategies within a period of 2 years. Chapter on Draft Framework for Developing State Sanitation Strategies gives an outline of the strategy (Annexure I);
b. Identified cities will be urged to prepare model City Sanitation Plans within a period of 2 years. Chapter on Draft Framework for a City Sanitation Plan gives an outline of the plan (Annexure II);
c. Providing assistance for the preparation of Detailed Project Report (DPR) as per city sanitation plan as soon as requests for funding are received;

Urban Poor
Every urban dweller should be provided with minimum levels of sanitation, irrespective of the legal status of the land in which he/she is dwelling, possession of identity proof or status of migration. However, the provision of basic services would not entitle the dweller to any legal right to the land on which he/she is residing. At least 20% of the funds under the sanitation sector should be earmarked for the urban poor. The issues of cross subsidiary the urban poor and their involvement in the collection of O&M charges should be considered.

City Sanitation Task Force
a) Constitute a multi-stakeholder City Sanitation Task Force comprising representatives from
• Agencies directly responsible for sanitation including on-site sanitation, sewerage, water supply, solid waste, drainage, etc including the different divisions and departments of the ULB, PHED, etc;
• Agencies indirectly involved in or impacted by sanitation conditions including representatives from the civil society, colonies, slum areas, apartment buildings, etc,
• Eminent persons and practitioners in civic affairs, health, urban poverty,
• Representatives from shops and establishments,
• Representatives of other large institutions in the city (e.g. Cantonment Boards, Govt. of India or State Govt. Enterprise campuses, etc.),
• NGOs working on water and sanitation, urban development and slums, health and environment,
• Representatives of unions of safai karamcharis, sewerage sanitary workers, recycling agents / kabaris, etc
• Representatives from private firms/contractors formally or informally working in the sanitation sector (e.g. garbage collectors, septic tank de-sludging firms etc.)
• Representatives from educational and cultural institutions
• Any other significant or interested stakeholders
The City Sanitation Task Force will be responsible for Launching the City 100% Sanitation Campaign

Baseline Survey
In parallel with the preparatory steps, the ULB / Implementing Agency will collate the information on sanitation that exists with the ULB itself and other agencies in the city. This will include demographic, institutional, technical, social and financial information. In addition, it will commission a private agency or an NGO or both to carry out primary data collection on the missing items – the surveys will use a mix of structured and participatory techniques. All the data collected must be amenable to linking to an existing or proposed Geographic Information Systems (GIS) for the city.

Awards Scheme
In order to rapidly promote sanitation in urban areas of the country (as provided for in the National Urban Sanitation Policy and goals 2008), and to recognize excellent performance in this area, the Government of India intends to institute an annual award scheme for cities. The award is based on the premise that improved public health and environmental standards are the two outcomes that cities must seek to ensure for urban citizens. In doing so, governments in states and urban areas will need to plan and implement holistic city-wide sanitation plans, thereby put in place processes that help reach outputs pertaining to safe collection, disposal and disposal (including conveyance, treatment, and/or re-use without adverse impacts on the environment in and around the cities). It may be noted that the awards will not recognize mere inputs, hardware or expenditure incurred in urban sanitation but assess how these lead to achievements of intermediate milestones toward the final result of 100 % safe disposal of wastes from the city on a sustainable basis. Cities will need to raise the awareness of city stakeholders (households, establishments, industries, municipal functionaries, media, etc.) since improved sanitation can ensure improved public health and environmental outcomes only if considerable changes in behaviour and practice take place across the spectrum of society

Thursday, December 4, 2008

ಹಸಿರೆಲ್ಲವೂ ಹಸನಲ್ಲ, ಅತಿ ನೀರಿನ ಕೃಷಿ ತರವಲ್ಲ

ಸ್ತೆಯಲ್ಲಿ ಹಾಗೆ ಸಾಗುತ್ತಿದ್ದರೆ ಅಬ್ಬಾ, ಅದೆಂಥ ಪುಳಕ ! ಇಕ್ಕೆಲಗಳಲ್ಲೂ ಸಾಲು ಸಾಲು ಹೊಲ, ಹಸಿರು ಹಚ್ಚಡ ಹೊದ್ದುಕೊಂಡು ಹಿತವಾದ ತಂಗಾಳಿಯನ್ನು ವಿಶಿಷ್ಟ ಸೊಗಡಿನೊಂದಿಗೆ ಹೋತ್ತು ತರುತ್ತಿದ್ದರೆ ಇರುವೇ ಮರೆತು ಹೋಗುತ್ತದೆ. ಆಹ್, ಅದೊಂದು ಅವರ್ಣನೀಯ ಸುಗಂಧ. ಈ ಬೆಂಗಳೂರಿನ ರೇಜಿಗೆ ಹುಟ್ಟಿಸುವ ವಾತಾವರಣ, ಹೊಗೆ, ಕಲುಷಿತ ನೀರು, ನೆಮ್ಮದಿಯಾಗಿ ಒಂದು ತುತ್ತು ತಿನ್ನಲೂ ಸಾಧ್ಯವಾಗದ ಕೆಲಸದ ಒತ್ತಡ... ಎಲ್ಲದರಿಂದ ದೂರ, ನಾಡಿನ ಭತ್ತದ ಕಣಜವೆಂದೇ ಕರೆಯುವ ಗಂಗಾವತಿಯ ಉದ್ದಗಲಕ್ಕೂ ಒಂದಿಡೀ ದಿನ ಸುತ್ತು ಹೊಡೆದಾಗ ಖಂಡಿತಾ ಅತ್ಯಮೋಘ ಅನುಭವ ಲೋಕದಲ್ಲಿ ಕಳೆದು ಹೋದದ್ದು ಸುಳ್ಳಲ್ಲ.
ಹಳ್ಳಿಗಳಲ್ಲಿ ಇನ್ನೂ ಉಳಿದುಕೊಂಡಿರುವ ಮುಗ್ಧ ಜನಜೀವನ, ಆಹ್ಲಾದಕರ ವಾತಾವರಣ, ಸಂಪ್ರದಾಯಗಳ ಸೊಗಡುಗಳನ್ನು ಮನಸೋಇಚ್ಛೆ ಅನುಭವಿಸುವ ಅವಕಾಶ ರುವ ಸಮಾಜ. ಒಳಗೊಳಗೇ ಪುಳಕಿತ ಗೊಳ್ಳುತ್ತ ಓಡಾಡಿದ್ದೆ.
ಆದರೆ ಅಂಥ ಹಸಿರು ರಾಶಿ ತಾನು ನಿಂತ ನೆಲವ್ನೇ ನುಂಗಿ ನೀರು ಕುಡಿಯುತ್ತಿದೆ ಎಂಬ ಆಘಾತಕಾರಿ ಸಂಗತಿ ಅರಿವಾದಾಗ ಎಲ್ಲ ಭಾವನೆಗಳೂ ಕಮರಿ ಹೋದವು. ಹೌದು, ಮಲೆನಾಡ್ಲೂ ಕಾಣದಷ್ಟು ಸಮೃದ್ಧ ಹೊಲದ ಸಾಲು ಇಲ್ಲಿ ಸಾಧ್ಯವಾದದ್ದು ಹೇಗೆ ಎಂಬ ಸಂದೇಹವೇ ಎಲ್ಲ ಆತಂಕ್ಕೆ ಮೂಲವಾಯಿತು. ನೀರಾವರಿ ಯೋಜನೆಗಳ ಸಾಫಲ್ಯ ಹೀಗೂ ಹಾದಿ ತಪ್ಪಿಸಬಹುದು ಎಂಬುದಕ್ಕೆ ರಾಯಚೂರು, ಕೊಪ್ಪಳ, ಗುಲ್ಬರ್ಗ ಪ್ರದೇಶದಲ್ಲಿಯ ಕೃಷಿಯೇ ನಿದರ್ಶನ . ಹಾಗೆ ನೋಡಿದರೆ ಅದು ತೀರಾ ಒಣ ಭೂಮಿ. ಯಾವಾಗ ಬೃಹತ್ ಯೋಜನೆಗಳು ಎದ್ದು ನಿಂತವೋ, ಕಾಲುವೆಗಳಲ್ಲಿ ನೀರು ತುಂಬಿ ಬರಲು ಆರಂಭವಾಯಿತೋ ಆಗಲೇ ಈ ಭಾಗದಲ್ಲಿ ಕೃಷಿಯ ಅಪಸವ್ಯಗಳೆಲ್ಲವೂ ನಾಂದಿ ಕಟ್ಟಿಕೊಂಡವು. ಹಲವು ವರ್ಷಗಳಿಂದ ಬರಡು ಬಿದ್ದಿದ್ದ, ಅತಿ ಕಡಿಮೆ ನೀರಿನಲ್ಲಿ ಮಾತ್ರ ಬೆಳೆಯಬಹುದಾದ ಬೆಳೆಗಳಿಗೆ ಮಾತ್ರ ನೆಲೆಯೊದಗಿಸಿದ್ದ ಆ ಭೂಮಿಯಲ್ಲಿ ಇದ್ದಕ್ಕಿದ್ದಂತೆ ನೀರುಕ್ಕತೊಡಗಿತು. ಮಾಡದೆ ಬಿಟ್ಟಿದ್ದ ಮಕ್ಕಿ ಗದ್ದೆಗಳಲೆಲ್ಲ ಭತ್ತದ ಸಸಿ ಕಂಡವು. ಅದೇ ಲಾಗಾಯ್ತಿನ ಸಂಪ್ರದಾಯ, ಭತ್ತ ಬಿಟ್ಟರೆ ಬೇರೇನೂ ಬೆಳೆಯುವುದೇ ಇಲ್ಲ ಎಂಬಂತಾಗಿ ಬಿಟ್ಟಿತು ರೈತರ ಮನೋಭಾವ.
ಆ ಭಾಗದಲ್ಲಿದ್ದಷ್ಟು ದಿನವೂ ಇಂಥ ಗದ್ದೆಗಳಗುಂಟ ಓಡಾಡುವುದು, ಅಲ್ಲಿನ ರೈತಾಪಿಗಳೊಂದಿಗೆ ಹರಟೆಗಿಟ್ಟುಕೊಳ್ಳುವುದನ್ನು ತಪ್ಪಿಸಿಕೊಳ್ಳಲೇ ಇಲ್ಲ. ಪಕ್ಕದ ಕಾಲುವೆಗಳಲ್ಲೇ ಜುಳುಜುಳು ನೀರ ನಿನಾದ ಸಾಥ್ ನೀಡಿತ್ತು. ಅಲ್ಲಲ್ಲಿ ‘ಹೊಡೆ ’ಹೊರಟಿದ್ದು, ಬಹುತೇಕ ಫಸಲು ಬೆಳೆದು ನಿಂತಿದ್ದವು. ತಿಂಗಳಾರು ದಿನದಲ್ಲಿ ಕೊಯ್ಲಿಗೆ ಬರುವಂಥವೂ ಇದ್ದವು. ಆದರೆ ಇಂಥ ಹಸಿರ ರಾಶಿಯೇ ಸುತ್ತಲಿನ ಭೂಮಿಗೆ ನಂಜಾಗಿ ಕಾಡುತ್ತಿದೆ ಎಂಬ ಅರಿವು ಆ ಮುಗ್ಧ ಜನರಿಗಿಲ್ಲ.
ನಿಜ, ಅಂದು ಆ ಬಿರು ಬಿಸಿಲಿನಲ್ಲೂ, ಮೈದಡವುತ್ತಿದ್ದ ಶುದ್ಧ ಗಾಳಿ ಇಂದು ಹಾಗೆ ಉಳಿದಿಲ್ಲ. ನೀರು ಅಂದಿನಷ್ಟು ನಿರ್ಮಲವಾಗಿಲ್ಲ. ಒಂದರ್ಥದಲ್ಲಿ ನಗರದಲ್ಲಿ ಹೊರಸೂಸುವ ಕಪ್ಪು ಹೊಗೆ, ವಾಸನೆ ಬಡಿಯುವ ನೀರಿಗಿಂತಲೂ ಹೆಚ್ಚಿನ ಮಾಲಿನ್ಯ ಇಂದು ಆ ಹಸಿರ ರಾಶಿಯ ಫಲವಾಗಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ‘ಹದವರಿಯದ ಕೃಷಿ, ಮಿತಿ ಮೀರಿದ ಫಸಲಿನ ಆಸೆ’ ಎಂದರೆ ಬಹುಶಃ ಎಲ್ಲರೂ ನಂಬಲಾರರು.
ಒಂದೆಡೆ ಹಳ್ಳಿಗಳ ಆ ನಿರ್ಮಲ ಬದುಕಿನ ಮೇಲೆ ನೈಟ್ರಸ್ ಆಕ್ಸೈಡ್, ಮೀಥೇನ್, ಇಂಗಾಲದ ಡೈಆಕ್ಸೈಡ್, ಅಮೋನಿಯಾಗಳಂಥ ವಿಷಾನಿಲಗಳು ಕರಾಳ ಹಸ್ತ ಚಾಚಿವೆ. ಇವು ನಗರ ಬದುಕಿನಲ್ಲಿ ಕಾಣುವ ಮಾಲಿನ್ಯಕ್ಕಿಂತ ತೀರಾ ಅಪಾಯಕಾರಿ. ಇನ್ನೊಂದೆಡೆ ನೀರಿನ ಅಬ್ಬರ ತಾಳಲಾರದೇ, ತನ್ನ ಭೌಗೋಳಿಕ ಗುಣಕ್ಕೆ ಮೀರಿದ ಕೃಷಿ ಪದ್ಧತಿಯಿಂದ ಅಲ್ಲಿನ ನೆಲ ಸಂಪೂರ್ಣ ಜವಳೆದ್ದು ಹೋಗಿದೆ. ಒಂದು ಬೆಳೆ ಮುಗಿದರೆ ಮತ್ತೆ ಮೂರು ವರ್ಷ ಬೆಳೆತೆಗೆಯಲು ಸಾಧ್ಯವೇ ಇಲ್ಲ, ಭತ್ತ ಬಿಟ್ಟು ಬೇರೇನನ್ನೂ ಬೆಳೆಯಾಗುವುದೇ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ.
ಏನಿದಕ್ಕೆ ಕಾರಣ ? ಉತ್ತರ-‘ಹಸಿರುಕ್ರಾಂತಿ’ಯ ಹೆಸರಲ್ಲಿ ನಾವಿಂದು ಅಳವಡಿಸಿ ಕೊಂಡಿರುವ ಉತ್ಪಾದನಾಧಾರಿತ ಕೃಷಿ. ಪರ್ಯಾಯ ಬೆಳೆಗಳಿದ್ದ ತಾಣದಲ್ಲಿ ಏಕ ಬೆಳೆ ಪದ್ಧತಿ ಕಾಲಿಟ್ಟಿದೆ. ಹೀಗಾಗಿ ಭೂಮಿ ನಿಸ್ಸಾರವಾಗುತ್ತಿದೆ. ಸಾಲದ್ದಕ್ಕೆ ಬರೋಬ್ಬರಿ ನಾಲ್ಕು ತಿಂಗಳು ನೀರು ಕಟ್ಟಿ ನಿಲ್ಲಿಸಿಯೇ ಭತ್ತ ಬೆಳೆಯಬೇಕೆಂಬ ಹುಚ್ಚು ನಂಬಿಕೆ ನೀರಿಳಿಯದ ಗಂಟಲಿಗೆ ಕಡುಬು ತುರುಕುದಂತೆ ಆಗುತ್ತಿದೆ. ಭೂಮಿಗಿರುವ ನೀರಿನ ಧಾರಣಾ ಸಾಮರ್ಥ್ಯಕ್ಕಿಂತಲೂ ಹೆಚ್ಚು ನೀರನ್ನು ನಿಲ್ಲಿಸುತ್ತಿರುವುದರಿಂದ ಇಡೀ ಪ್ರದೇಶದ ಮಣ್ಣಿನಲ್ಲಿ ಕ್ಯಾಲ್ಷಿಯಂ ಅಂಶ ಕಾಣೆಯಾಗಿ ಜವಳು ಉಕ್ಕುತ್ತಿದೆ.
ಇನೊಂದು ಗಮನಾರ್ಹ ಸಂಗತಿಯೆಂದರೆ, ನೀರು ನಿಲ್ಲಿಸಿ ಬೆಳೆಯಲಾದ ಭತ್ತದ ಗದ್ದೆಗಳಲ್ಲಿ ತೆನೆ ಬಲಿಯಲಾರಂಭಿಸುತಿದ್ದಂತೆ ನೀರನ್ನು ಬತ್ತಲು ಬಿಡಲಾಗುತ್ತದೆ. ಪೂರ್ಣ ಬೆಳೆ ಕಟಾವಿಗೆ ಬರುವ ಹೊತ್ತಿಗೆ ಗದ್ದೆಗಳೂ ಬತ್ತಿರುತ್ತವೆ. ಹೀಗೆ ಬತ್ತಿದ ಗದ್ದೆಗಳಲ್ಲಿ ಹುಟ್ಟುವುದೇ ಈ ನೈಟ್ರಸ್ ಆಕ್ಸೈಡ್ ಎಂಬ ಭಯಂಕರ ಕಾರ್ಕೋಟಕ. ಸಾಮಾನ್ಯವಾಗಿ ಭತ್ತ, ನಾಟಿ ಮಾಡುವ ಮೇಲಿಂದ ಮೇಲೆ ಹೊಲವನ್ನು ಉತ್ತಿ, ನೀರು ಆವಿಯಾಗದ ವ್ಯವಸ್ಥೆ ಸೃಷ್ಟಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಣ್ಣಿನಲ್ಲಿರುವ ನೈಸರ್ಗಿಕ ರಂಧ್ರಗಳು ಮುಚ್ಚಿಹೋಗುತ್ತವೆ. ಕೃಷಿ ಸಂದರ್ಭದಲ್ಲಿ ನೀರು ನಿಲ್ಲಿಸಿದಾಗ ಅದರಲ್ಲಿ ‘ಪಿಎಚ್’ ಅಂಶ ಕುಸಿದು ಆಮ್ಲಯುಕ್ತವಾಗುತ್ತದೆ. ಹೊಲದ ಪಕ್ಕದಲ್ಲಿ ನಮಗೆ ರಾಚುವ ವಿಚಿತ್ರ ಸುವಾಸನೆ ಇದರದ್ದೇ ಫಲ. ಈ ವಾತಾವರಣದಲ್ಲಿ ‘ಆಮ್ಲಜನಕ ರಹಿತ’ ಬ್ಯಾಕ್ಟೀರಿಯಾಗಳು ಯಥೇಚ್ಛ ಉತ್ಪಾದನೆ ಯಾಗುವುದರೊಂದಿಗೆ ಇಂಗಾಲ ಮತ್ತು ಸಾರಜನಕಗಳು ಮತ್ತಷ್ಟು ಕುಸಿದು ನೈಟ್ರಸ್ ಆಕ್ಸೈಡ್ ಪ್ರಾಬಲ್ಯ ಸಾಸುತ್ತದೆ.
ಜುಲೈನಿಂದ ಡಿಸೆಂಬರ್ ಅವಯಲ್ಲಿ ಈ ವಿಷದ ಪ್ರಮಾಣ ಇತ್ತೀಚೆಗೆ ತೀರಾ ಹೆಚ್ಚುತ್ತಿದೆ. ಇದರೊಂದಿಗೆ ಸಾಂಪ್ರದಾಯಿಕ ತಳಿಗಳನ್ನು ಬಿಟ್ಟು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನೇ ಅವಲಂಬಿಸುವ ಹೊಸ ತಳಿಗಳ ಮೊರೆಹೋಗಿದ್ದೇವೆ. ಇದು ವಾಯುವನ್ನಷ್ಟೇ ಅಲ್ಲದೆ ಭೂಮಿ, ಜಲವನ್ನೂ ಮಲಿನ ಗೊಳಿಸುತ್ತಿದೆ. ಒಟ್ಟಾರೆ ಡೈನಾಮಿಕ್ಸ್ (ನಿಸರ್ಗ ಬಲಕ್ರಿಯೆ) ಏರುಪೇರಿಗೆ ನಮ್ಮ ಕೃಷಿಯ ಕೊಡುಗೆ ತೀರಾ ಗಣನೀಯ.
ಮೊದಲಿನಿಂದಲೂ ಭಾರತದಲ್ಲಿ ಅದರಲ್ಲೂ ದಕ್ಷಿಣ ರಾಜ್ಯ ಗಳಲ್ಲಿ ಭತ್ತದ ಕೃಷಿ ಹೆಚ್ಚು. ಸರಾಸರಿ ವರ್ಷಕ್ಕೆ ೪೩೦೦ ಕೋಟಿ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚು ಮಂದಿ ಭತ್ತದ ಕೃಷಿಯನ್ನು ಅವಲಂಬಿಸಿದ್ದಾರೆ. ಇಷ್ಟೊಂದು ಪ್ರಮಾಣದ ಗದ್ದೆಗಳು ಹೊರ ಸೂಸಬಹುದಾದ ನೈಟ್ರಸ್ ಆಕ್ಸೈಡ್‌ನ ಮಟ್ಟ ಎಷ್ಟಿರಬಹುದು. ಅವು ಇನ್ನೆಷ್ಟು ಮಂದಿಯ ಉಸಿರು ಕಟ್ಟಿಸಬಹುದು, ಆ ಪ್ರದೇಶ ಗಳಲ್ಲಿ ಬಳಸುವ ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಎಷ್ಟು ಮಂದಿಯ ಪ್ರಾಣಕ್ಕೆ ಕುತ್ತು ತರಬಹುದೆಂಬುದನ್ನು ಊಹಿಸಬಹುದು.
ಇದಕ್ಕಿರುವ ಪರಿಹಾರವೆಂದರೆ ಆಯಾ ಪ್ರದೇಶದ ಹವಾಗುಣಕ್ಕನುಗುಣ ಬೆಳೆ ನಮ್ಮ ಕೃಷಿಯಲ್ಲಿ ಮುಂದುವರಿಯಬೇಕು. ಭತ್ತ ಬೆಳೆದರೂ ನೀರಾವರಿಯಾಗಿದೆಯೆಂಬ ಒಂದೆ ಕಾರಣಕ್ಕೆ ನೀರು ನಿಲ್ಲಿಸಿಯೇ ಭತ್ತ ಬೆಳೆಯಬೇಕೆಂಬ ನಮ್ಮ ವಿಚಿತ್ರ (ಮೂಢ) ನಂಬಿಕೆಯನ್ನು ಬದಲಿಸಿಕೊಳ್ಳಲೇಬೇಕು. ಕೃಷಿ ಅಭಿವೃದ್ಧಿಗೆ ನಾವು ನೀಡುತ್ತಿರುವ ಅನಗತ್ಯ, ಅವೈಜ್ಞಾನಿಕ ವ್ಯಾಖ್ಯಾನವನ್ನು ನಿಲ್ಲಿಸಬೇಕು. ಈ ಸಂಬಂಧ ರೈತರಲ್ಲಿ ಜಾಗೃತಿಯಾಗಬೇಕು. ಜೈವಿಕ, ಕೃಷಿ ವ್ಯವಸ್ಥೆಯೊಂದಿಗೆ ಕಡಿಮೆ ನೀರಿನಲ್ಲಿ ಆರ್ಥಿಕ ದೃಷ್ಟಿಕೋನದ ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಬೇಕು.
ಎಲ್ಲೆಡೆ ನೀರು ಸಮಸ್ಯೆಯಾಗಿ ಕಾಡುತ್ತಿರುವಾಗಲೇ, ಹೊಸ ಪರಿಹಾರೋಪಾಯಗಳ ಹುಡುಕಾಟ ಆರಂಭವಾಗಿದೆ. ಈ ಹುಡುಕಾಟದಲ್ಲಿ ನಮಗೆ ಕಂಡದ್ದೆಲ್ಲವೂ ಪಾರಂಪರಿಕ ಪದ್ಧತಿಗಳಿಂದ ಹೊರತಾದ, ದೇಸಿ ತಂತ್ರಜ್ಞಾನವನ್ನು ಸಾರಾಸಗಟು ನಿರಾಕರಿಸುವ, ಆಧುನಿಕ ಭೂಯಿಷ್ಟ ಅವಸ್ಥಾಂತರಗಳೇ. ಕಾಲ ಬದಲಾದಂತೆಲ್ಲ, ಅಗತ್ಯಗಳ ವ್ಯಾಪ್ತಿ ವಿಸ್ತಾರವಾದಂತೆಲ್ಲ ಒಂದಷ್ಟು ಬದಲಾವಣೆ ಅಗತ್ಯವೂ ಹೌದು ಅನಿವಾರ್ಯವೂ ಹೌದು. ಒಪ್ಪಿಕೊಳ್ಳೋಣ. ಹಾಗೆಂದು ಹಿಂದಿನ ಯಾವುದರಲ್ಲೂ ಇದಕ್ಕೆ ‘ಉತ್ತರ’ ದೊರಕುವುದೇ ಇಲ್ಲವೆಂಬ ಹಠಕ್ಕೆ ತಗುಲಿಕೊಂಡು ವರ್ತಿಸುವುದು ನೀರಿನ ಮಟ್ಟಿಗೆ ತೀರಾ ಅರ್ಥಹೀನ. ಹಾಗೇ ವರ್ತಿಸಿದ ಫಲವೇ ಈ ಜಿಲ್ಲೆಗಳಲ್ಲಿ ಕಾಣುತ್ತಿರುವ ನೀರಾವರಿಯ ದುರ್ಬಳಕೆ. ದನ್ನು ತಕ್ಷಣ ತಡೆಯದಿದ್ದರೆ ಇಡೀ ಪ್ರದೇಶದ ಮಣ್ಣು ನಿಷ್ಪ್ರಯೋಜಕವಾಗುವ ಜತೆಗೆ, ನೀರೂ ಕುಲಗೆಟ್ಟು ಹೋಗುತ್ತದೆ. ಮಾತ್ರವಲ್ಲ ಹಳ್ಳಿಗರು ಉಸಿರಾಟಕ್ಕೆ ಪರದಾಡಬೇಕಾದ ಸ್ಥಿತಿ ಕಟ್ಟಿಟ್ಟದ್ದೇ !

‘ಲಾಸ್ಟ್ ’ಡ್ರಾಪ್ : ಅತಿ ಹೆಚ್ಚು ನೀರಿನ ಬಳಕೆ ಪ್ರದೇಶ ಅತಿ ಹೆಚ್ಚು ನೀರು ಪೋಲಾಗುವ ತಾಣವೆಂಬ ಸತ್ಯ ನಮಗೆ ಅರಿವಾಗಬೇಕಿದೆ.

Wednesday, November 26, 2008

‘ಹನಿ’ಗವನಗಳಿಂದ ನೀರೆಚ್ಚರ ಮೂಡಿಸುವ ಹೀರಾ


‘ಅದು ಯಾವುದೇ ಪ್ರದೇಶವಿರಬಹುದು. ನೀರೊಂದು ಸಮೃದ್ಧವಾಗಿದ್ದರೆ ಶೇ.೧೦ ರಷ್ಟು ಅಭಿವೃದ್ಧಿ ತಂತಾನೇ ಆಗುತ್ತದೆ.’ ಆ ಮಾತಿನಲ್ಲಿ ಖಚಿತತೆ ಇತ್ತು, ಅನುಭವ ತುಂಬಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನೀರಿನ ಬಗೆಗಿನ ಕಳಕಳಿ ಅವರ ಮಾತಿನುದ್ದಕ್ಕೂ ತುಂಬಿ ತುಳುಕುತ್ತಿತ್ತು.
ಇಂದು ಆಳಂದ ತಾಲೂಕಿನ ಪುಟ್ಟ ಗ್ರಾಮ ರುದ್ರವಾಡಿಯನ್ನು ಕೃಷಿ ಹೊಂಡಗಳ ಮೂಲಕ ಸಂಪೂರ್ಣ ನೀರ ಸ್ವಾವಲಂಬಿಯಾಗಿ ಪರಿವರ್ತಿಸಿದ ಆದಿನಾಥ್ ಹೀರಾ ಎಂಬ ಮೋಡಿಗಾರನ ಜತೆ ಮಾತಿಗೆ ಕುಳಿತರೆ ಒಣ ತರ್ಕಗಳು ಇಣುಕುವುದಿಲ್ಲ. ಪೊಳ್ಳು ಆದರ್ಶಗಳು ತಲೆ ಹಾಕುವುದಿಲ್ಲ. ಆತ ಪಕ್ಕಾ ಪ್ರಾಕ್ಟಿಕಲ್. ಒಂದಿಡೀ ತಲೆಮಾರು ನೀರ ಬೇಗುದಿಯಲ್ಲಿ ಬೆಂದ ಬಳಿಕ ಗಳಿಸಿಕೊಂಡ ಬುದ್ಧಿವಂತಿಕೆ, ಕಂಡುಕೊಂಡ ಪರಿಹಾರದ ಪ್ರಾತಿನಿಧಕ ವಾಕ್ಯಗಳಾಗಿ ಹೀರಾ ಬಾಯಿಂದ ಅನುಭವಜನ್ಯ ಮಾತು ಹೊರಹೊಮ್ಮುತ್ತಿದ್ದವು.
ನೀರಿನ ಸಂಕಷ್ಟವೆಂಬುದು ಪಕ್ಕಾ ಸ್ವಯಂಕೃತ ಅಪರಾಧ. ಕಳೆದ ಶತಮಾನದ ೬೦ರ ದಶಕದಲ್ಲಿ ಪರಿಚಯಕ್ಕೆ ಬಂದ ರಸಗೊಬ್ಬರ ಹಾಗೂ ೮೦ ರದಶಕದಲ್ಲಿನ ಬೋರ್‌ವೆಲ್‌ಗಳ ದಾಳಿಯೇ ನೀರಿನ ಕೊರತೆಯ ಸೃಷ್ಟಿಗೆ ಮೂಲ ಕಾರಣ. ಹೇಗೆ ನೋಡಿದರೂ ಕರ್ನಾಟಕದಂಥ ಶ್ರೀಮಂತ ಮಳೆ ಸರಾಸರಿಯನ್ನು ಹೊಂದಿರುವ ರಾಜ್ಯಕ್ಕೆ ನೀರಿನ ಕೊರತೆ ಕಾಡಲು ಸಾಧ್ಯವೇ ಇಲ್ಲ. ನಮ್ಮಲ್ಲಿ ೨ ಸಾವಿರ ಮಿಲಿ ಮೀಟರ್ ನಷ್ಟು ಮಳೆ ಸರಾಸರಿಯಿದೆ. ಕೆರೆ, ಕಟ್ಟೆ, ಹೊಂಡ-ಹೂದಲುಗಳಲ್ಲಿ ಹಿಡಿದಿಟ್ಟುಕೊಂಡು ಬಳಸುವ ಅಪೂರ್ವ ಜ್ಞಾನವಿದೆ. ಅದಿಂದು ಆಧುನಿಕತೆಯ ಭ್ರಮೆಗೆ ಸಿಲುಕಿ ವಿಸ್ಮೃತಿಗೆ ಸರಿದ ಪರಿಣಾಮವೇ ರಾಜ್ಯವನ್ನು ನೀರು ಸಂಕಷ್ಟವಾಗಿ ಕಾಡುತ್ತಿದೆ...
ಸಾಮಾನ್ಯ ರೈತ ಕಂಡುಕೊಂಡಿರುವ ಈ ಸತ್ಯ ಸರಕಾರಕ್ಕೆ ಮನವರಿಕೆಯಾಗಿಲ್ಲ. ಬೆಳೆಗಳಲ್ಲಿನ ವೈವಿಧ್ಯದ ಜತೆಗೆ ಆಯಾ ಪ್ರದೇಶದ ಮಳೆ ಸರಾಸರಿ, ಭೂ ಲಕ್ಷಣಗಳಿಗನುಗುಣವಾಗಿ ಕೃಷಿ ನಿರ್ಧಾರಿತವಾಗುತ್ತಿದ್ದ ಕಾಲವದು. ಬಸಿ ನೀರು ಬಾವಿಗಳ ಮೂಲಕ ಬೆಳೆಗಳಿಗೆ ನೀರು ಪೂರೈಕೆಯಾಗುತ್ತಿತ್ತು. ನೆಲದಡಿಯ ನೀರು ಸುರಕ್ಷಿತವಾಗಿ ತನಿಯನ್ನಿಟ್ಟುಕೊಂಡು ಭೂಮಿಯನ್ನು ತಂಪಾಗಿರಿಸುತ್ತಿತ್ತು. ಮನೆಯಲ್ಲೇ ಕಸ ಕಡ್ಡಿಗಳನ್ನು ತಂದು ಸುರಿದು, ತಿಪ್ಪೆಯಲ್ಲರಳುವ ಸಮೃದ್ಧ ಗೊಬ್ಬರ ಬೆಳೆಗಳನ್ನು ವಿಷವಾಗಿಸುತ್ತಿರಲಿಲ್ಲ. ಗೊಬ್ಬರವೇ ಗಾರಾಗಿ ಭೂಮಿಯನ್ನು ಸುಡುತ್ತಿರಲಿಲ್ಲ. ಅದೆಲ್ಲಿಂದ ಬಂತೋ, ಆಹಾರ ಉತ್ಪಾದನೆಯಲ್ಲಿನ ಕ್ರಾಂತಿಯೆಂಬ ಹುಸಿ ಅಭಿವೃದ್ಧಿ ನಮ್ಮನ್ನು ಆವರಿಸಿಕೊಂಡು ಬಿಟ್ಟಿತು. ೧೯೬೪-೬೫ರಲ್ಲಿ ರಸಗೊಬ್ಬರದ ಪರಿಚಯವಾದ್ದೇ ತಡ, ರೈತರ ಬದುಕಿಗೆ ಕ್ಷಣಿಕ ರಂಗೇರತೊಡಗಿತು. ಸರಕಾರವೇ ಮುಂದೆ ನಿಂತು ರಸಗೊಬ್ಬರ ಪೂರೈಕೆಗೆ ಟೊಂಕ ಕಟ್ಟಿತು. ಅಕಾರಿಗಳು, ವಿಜ್ಞಾನಿಗಳು ಖಾಸಗಿ ಕಂಪನಿಗಳ ಪಿಆರ್‌ಒಗಳಂತೆ ಪ್ರಚಾರಕ್ಕಿಳಿದರು. ಒಂದೆರಡು ವರ್ಷ ಅಷ್ಟೇ. ಬೆಳೆಯೇನೋ ಹುಲುಸಾಗಿ ಬೆಳೆದು ನಿಂತಿತು. ಆದರೆ ಭೂಮಿ ತನ್ನ ಮೇಲ್ಮೈನ ಸತ್ವವನ್ನೇ ಕಳೆದುಕೊಂಡಿತ್ತು. ನಮ್ಮ ನೆಲದಲ್ಲಿದ್ದ ನಿರೋಧಕ ಶಕ್ತಿ ಕಾಣೆಯಾಯಿತು. ಕಂಡೂ ಕಾಣದಿದ್ದ ರೋಗಗಳು ಬೆಳೆಗಳು, ಅದರೊಂದಿಗೆ ಮಾನುಷ್ಯ ದೇಹಕ್ಕೂ ವ್ಯಾಪಿಸಿತು. ಇಂಥದಕ್ಕೇ ಕಾಯುತ್ತಿದ್ದ ಕಂಪನಿಗಳು ಕೀಟ ನಾಶಕಗಳ ದೊಡ್ಡ ದೊಡ್ಡ ಪಟ್ಟಿಯನ್ನೇ ಪೈಪೋಟಿಗೆ ಬಿದ್ದು ಬಿಡುಗಡೆ ಮಾಡಿದವು. ಮತ್ತೆ ಹುಚ್ಚು ಓಟ ಸಾಗಿದ್ದೇ ಸಾಗಿದ್ದು. ರಸಗೊಬ್ಬರ, ಕೀಟ ನಾಶಕಗಳ ಜಂಟಿ ಸವಾರಿಯ ಫಲವಾಗಿ ನಿರೀಕ್ಷಿಸಿದಂತೆ ಮಣ್ಣು ಕುಲಗೆಟ್ಟಿತು. ಈ ನೆಲ ನೀರಿಂಗುವ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡಿತ್ತು. ಅದೇ ಸಂದರ್ಭದಲ್ಲಿ ಚೂರು ಮೆಣಸಿನ ಕಾಯಿ ತಿಂದ ಬಾಯಿಯಂಥ ಸ್ಥಿತಿಗೆ ತಲುಪಿದ್ದ ನೆಲಕ್ಕೆ ಎಷ್ಟು ನೀರು ಸುರಿದರೂ ಸಾಲದ ಪರಿಸ್ಥಿತಿ ನಿರ್ಮಾಣವಾಯಿತು. ಕೃಷಿಯ ನೀರಿನ ಅಗತ್ಯ ಒಮ್ಮಿಂದೊಮ್ಮೆಲೆ ಮೂರು ಪಟ್ಟು ಹೆಚ್ಚಿತು... ದುರಂತದ ನಾಂದಿಯನ್ನು ಹೀರಾ ಬಣ್ಣಿಸುತ್ತ ಹೋಗುತ್ತಾರೆ.
ಉತ್ತರ ಕರ್ನಾಟಕದಂಥ ಒಣ ಭೂಮಿಯ ಮೇಲೆ ಬಿದ್ದ ರಾಸಾಯನಿಕಗಳು ಬಲು ಬೇಗನೆ ಇಲ್ಲಿನ ಮಣ್ಣಿನ ಸತ್ವವನ್ನು ಕಳೆದವು. ಬೀಳುತ್ತಿದ್ದ ಅಲ್ಪ ಮಳೆ ಸರಾಸರಿಯಲ್ಲೂ ಸುಸ್ಥಿರ ಕೃಷಿ ಸಾಧ್ಯವೇ ಇಲ್ಲದಂತಾಯಿತು. ಅದೇ ಸನ್ನಿವೇಶದಲ್ಲಿ ಸತತ ಬರ ಅಟಕಾಯಿಸಿಕೊಂಡದ್ದು. ೮೦ರ ದಶಕದ ಆರಂಭ ನೀರು-ಮಣ್ಣಿನ ಮಾಲಿಗೆ ಕರಾಳ ಸಮಯ. ಹನಿ ಕುಡಿಯುವ ನೀರಿಗೂ ಹಾಹಾಕಾರವೆದ್ದ ಸಂದರ್ಭದಲ್ಲಿ ಅನಿವಾರ್ಯತೆಯ ಹೆಸರಲ್ಲಿ ಪರಿಚಿತವಾದ ಬೋರ್‌ವೆಲ್‌ಗಳು ಇಲ್ಲಿನ ರೈತರಲ್ಲಿದ್ದ ಬರ ನಿರೋಧಕ ಜಾಣ್ಮೆಯನ್ನೇ ಕಸಿದುಕೊಂಡು ಬಿಟ್ಟವು. ವಿಶ್ವಸಂಸ್ಥೆಯೇನೋ ರಾಜ್ಯ ಸರಕಾರದ ಬರ ನಿರ್ವಹಣಾ ರೀತಿಯನ್ನು ಕೊಂಡಾಡಿತು. ಆದರೆ ಕುಡಿಯುವ ನೀರು ಪೂರೈಕೆಗೆಂದು ಕಾಲಿಟ್ಟ ಬೋರ್‌ವೆಲ್‌ಗಳು ಮುಂದೊಂದು ದಿನ ಇಲ್ಲಿನ ಖಜಾನೆಗೇ ಸಂಚಕಾರ ತರಬಹುದೆಂಬುದನ್ನು ಯಾರೂ ಊಹಿಸಿರಲಿಲ್ಲ. ಒಟ್ಟಾರೆ ಬೋರ್‌ವೆಲ್‌ಗಳಿಲ್ಲದೇ ಕೃಷಿಯೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಯಿತು. ನಾಲ್ಕೇ ವರ್ಷದಲ್ಲಿ ಅವೂ ಮಾತನಾಡುವುದನ್ನು ನಿಲ್ಲಸಿದವು. ರೈತನಿಗೆ ದಿಕ್ಕೇ ತೋಚದಂತಾಯಿತು. ರುದ್ರವಾಡಿಯೂ ಇದಕ್ಕೆ ಹೊರತಾಗಲಿಲ್ಲ. ಆ ಸನ್ನಿವೇಶವೇ ಮಳೆ ನೀರು ಸಂಗ್ರಹದ ತಮ್ಮ ಆಂದೋಲನಕ್ಕೆ ಪ್ರೇರಣೆಯಾಯಿತು ಎನ್ನುತ್ತಾರೆ ಹೀರಾ.
ಇಂದು ರುದ್ರವಾಡಿಯಲ್ಲೀ ಯಾವುದೇ ಬೋರ್‌ವೆಲ್‌ಗಳು ಬಳಕೆಯಲ್ಲಿಲ್ಲ. ೧ ಕೋಟಿ ಲೀಟರ್‌ಗೂ ಹೆಚ್ಚು ನೀರು ಇಡಿಯಾಗಿ ಗ್ರಾಮದ ಕೃಷಿ ಹೊಂಡಗಳಲ್ಲಿ ಇಂಗುತ್ತಿದೆ. ರೈತರು ರಸಗೊಬ್ಬರ, ಕೀಟ ನಾಶಕ, ಬೋರ್‌ವೆಲ್‌ಗಳ ಬಗ್ಗೆ ಮಾತನಾಡುವುದನ್ನೂ ನಿಲ್ಲಿಸಿದ್ದಾರೆ. ಮಳೆ ನೀರಿಂಗಿಸುವ ಹಬ್ಬ ಊರಲ್ಲಿ ಆಚರಣೆಗೊಳ್ಳುತ್ತಿದೆ.
ಇಷ್ಟಕ್ಕೆಲ್ಲ ಮುಹೂರ್ತ ಕೂಡಿ ಬಂದದ್ದು ಹೀರಾ ಅವರ ಮಗನ ಮದುವೆಯ ಮಂಟಪದಲ್ಲಿ. ತಾನು ಕಂಡುಕೊಂಡ ಸತ್ಯವನ್ನು ಹೀರಾ ತಮ್ಮ ಮಗನ ಮದುವೆಗೆ ಬಂದಿದ್ದ ನೆಂಟರಿಷ್ಟರ ಮುಂದೆ ಸಾರಿದರು. ಮದು ಮಕ್ಕಳ ತಲೆಯ ಮೇಲೆ ನಾಲ್ಕು ಅಕ್ಕಿ ಕಾಳು ಹಾಕಿ ಹೋಗಲು ಬಂದವರ ತಲೆಯಲ್ಲಿ ನೀರಿಂಗಿಸುವ ಜ್ಞಾನವನ್ನು ತುಂಬಿ ಕಳುಹಿಸಿದ ವಿಶಿಷ್ಟ ವ್ಯಕ್ತಿ ಹೀರಾ. ಅದು ೨೦೦೭ರ ಏಪ್ರಿಲ್ ೨೯ರ ರವಿವಾರ, ಮನೆಯಲ್ಲಿ ಮಗನ ಮದುವೆಯ ಆರತಕ್ಷತೆ ಸಮಾರಂಭವೆಂಬುದು ನೀರಿನ ವಿಚಾರ ಸಂಕಿರಣವಗಿ ಪರಿವರ್ತಿತವಾಯಿತು. ಹೀರಾ ತಾವೇ ಬರೆದ ‘ಹನಿ’ಗವನಗಳನ್ನೊಳಗೊಂಡ ನೀರೆಚ್ಚರದ ಪಾಟದ ಕರಪತ್ರಗಳನ್ನು ಅಲ್ಲಿ ಹಂಚಿದರು. ದೇ ಮೊದಲು. ಅಲ್ಲಿಂದ ಧಾರವಾಡ, ಗುಲ್ಬರ್ಗ ಕೃಷಿ ವಿಶ್ವ ವಿದ್ಯಾಲಯ, ಆಳಂದ ಕೃ ಷಿ ಇಲಾಖೆಯ ಮಾರ್ಗದರ್ಶನದಲ್ಲಿ ಇಡೀ ರಾಜ್ಯಾದ್ಯಂತ ಜಲ ಅಭಿಯಾನವನ್ನೇ ಆರಂಭಿಸಿದರು.
ಇಂದು ಆದಿನಾಥ್ ಹೀರಾ ಹತ್ತು ಹಲವು ಜಲಕನಸನ್ನು ಸರಕಾರದ ಮುಂದೆ ಇಟ್ಟಿದ್ದಾರೆ. ನೀರಶ್ರದ್ಧೆ ರೈತನ ಬದುಕಿನ ಭಾಗವಾಗಬೇಕೆಂದು ಪ್ರತಿಪಾದಿಸುತ್ತಾರೆ. ಸರಕಾರ ಕೃಷಿ ಪಂಡಿತ ಪ್ರಶಸ್ತಿ ಕೊಟ್ಟು ತನ್ನ ಕೆಲಸ ಮುಗಿಯಿತೆಂದು ಸುಮ್ಮನೆ ಕುಳಿತಿದೆ. ರಾಜ್ಯದ ಪ್ರತಿ ಗ್ರಾಮವೂ ಒಂದೊಂದು ರುದ್ರವಾಡಿಯಾಗಬೇಕು. ಪ್ರತಿ ಹಳ್ಳಿಯಲ್ಲೂ ಅಲ್ಲಿ ಬೀಳುವ ಮಳೆ ನೀರು ಅಲ್ಲೇ ಸಂಗ್ರಹಗೊಳ್ಳುವ ವ್ಯವಸ್ಥೆ ಬರಬೇಕು. ನೀರು ಗೊಬ್ಬರದ ವಿಚಾರದಲ್ಲಿ ಎಲ್ಲ ಹಳ್ಳಿಗಳೂ ಸ್ವಾವಲಂಬನೆ ಗಳಿಸಿದಾಗ ಮಾತ್ರ ಇಲ್ಲಿನ ಕೃಷಿ ಲಾಭದಾಯಕವಾಗಲು ಸಾಧ್ಯ. ಏಕೆಂದರೆ ೬೦ ವರ್ಷಗಳ ಸ್ವಾತಂತ್ರ್ಯೋತ್ತರ ಭಾರತವನ್ನು ಗಮನಿಸಿದಾಗ, ನಾವು ಈ ದೇಶವನ್ನು ಕೃಷಿ ಪ್ರಧಾನವೆಂದು ಬಣ್ಣಿಸಿಕೊಂಡು ಬರುತ್ತಿದ್ದೇವೆಯೇ ಹೊರತು, ನಿಜವಾಗಿ ಇಲ್ಲಿನ ಕೃಷಿಗೆ ಸಿಗಬೇಕಾದ ಪ್ರಾಧಾನ್ಯ ಸಿಕ್ಕಿಲ್ಲವೆಂಬ ಸತ್ಯ ಗೋಚರಿಸುತ್ತದೆ.
ಕೃಷಿ ಆದ್ಯತೆ ನೀಡುವುದೆಂದರೆ ಕೇವಲ ಬೃಹತ್ ನೀರಾವರಿ ಯೋಜನೆಗಳನ್ನು ರೂಪಿಸುವುದಲ್ಲ. ರಸಗೊಬ್ಬರ ಹಂಚಿಕೆಯ ಹೆಸರಲ್ಲಿ ರಾಜಕೀಯ ಮಾಡುವುದಲ್ಲ. ಎಲ್ಲಕ್ಕಿಂತ ಮೊದಲಿಗೆ ಈ ರಾಜ್ಯದ ಹಳ್ಳಿಗಳ ಪ್ರತೀ ಸರ್ವೆ ನಂಬರ್‌ನಲ್ಲಿ ಒಂದೊಂದು ಕೃಷಿ ಹೊಂಡ ನಿರ್ಮಾಣಗೊಳ್ಳಬೇಕು. ಎಲ್ಲೆಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲಾಗುತ್ತದೆಯೋ ಅಲ್ಲೆಲ್ಲ ನೀರಿಂಗಿಸುವ ಕಾರ್ಯ ಕಡ್ಡಾಯವಾಗಬೇಕು. ಬೋರ್‌ವಲ್‌ಗಳಿಗೆ ನಿರ್ಬಂಧ ಕಡ್ಡಾಯ ಪಾಲನೆಯಾಗಬೇಕು. ೨೦೦ರಿಂದ ೫೦೦ಎಕರೆ ವ್ಯಾಪ್ತಿಯಲ್ಲಿ ಒಂದು ಸುವ್ಯವಸ್ಥಿತ ಕೆರೆ ನಿರ್ಮಾಣಗೊಳ್ಳಬೇಕು. ಎರಡು ಸೀಮೆಯ ನಡುವೆ ಒಂದು ಕೆರೆ ಇರಲೇಬೇಕು. ಇಂಥ ಕೆರೆಗಳು ಸಮುದಾಯದ ಆಸ್ತಿಯಾಗಿ ನಿಲ್ಲಬೇಕು...ಇವೆಲ್ಲ ಬೇಕುಗಳನ್ನೂ ಕೃಷಿ ಬೇಡುತ್ತಿದೆ. ಅದು ಪೂರೈಕೆಯಾಗುವುದಾದರೆ ನಮ್ಮ ಕೃಷಿ ಪ್ರಧಾನವೆಂಬ ಹೆಗ್ಗಳಿಕೆಗೊಂದು ಅರ್ಥ ಬರುತ್ತದೆ.
ಇಷ್ಟಾದರೆ ಸಾಕು. ಸರಕಾರ ರೈತನಿಗಾಗಿ ಇನ್ನಾವ ಉಪಕಾರವನ್ನೂ ಮಾಡಬೇಕಿಲ್ಲ. ಉಚಿತ ಕರೆಂಟ್ ಕೊಡಬೇಕಿಲ್ಲ. ಸಬ್ಸಿಡಿಯ ಆಮಿಷ ಒಡ್ಡ ಬೇಕಿಲ್ಲ. ಗೊಬ್ಬರ- ಬಿತ್ತನೆ ಬೀಜದ ಹೆಸರಲ್ಲಿ ಹುಯಿಲೆಬ್ಬಿಸುವ ಅಗತ್ಯವಿಲ್ಲ. ಹೀರಾ ಹೇಳುವ ಮಾತು ನೂರಕ್ಕೆ ನೂರು ಸತ್ಯ. ಏಕೆಂದರೆ ಈ ಭೂಮಿಯಲ್ಲಿ ಇಂದು ಯುದ್ಧ, ಅಪಘಾತ, ನೈಸರ್ಗಿಕ ವಿಕೋಪ, ಇತ್ತೀಚೆಗೆ ಹೆಚ್ಚುತ್ತಿರುವ ಉಗ್ರರ ದಾಳಿ... ಹೀಗೆ ಎಲ್ಲ ಅವಘಡಗಳನ್ನು ಒಟ್ಟು ಮಾಡಿದರೂ ಪ್ರತಿ ದಿನ ಇವುಗಳಿಂದ ಸಾಯುವುದಕ್ಕಿಂತ ಹೆಚ್ಚು ಮಂದಿ ನೀರಿಲ್ಲದೇ ಅಥವಾ ಅಶುದ್ಧ ನೀರಿನಿಂದ ಸಾಯುತ್ತಿದ್ದಾರೆ. ಈಗ ಯೋಚಿಸಿ, ನೀರಿನ ಬಗ್ಗೆ ನಾವು ಎಷ್ಟೊಂದು ಕೇವಲವಾಗಿ ವರ್ತಿಸುತ್ತಿದ್ದೇವೆ ಅಲ್ಲವೇ ?
ಆದಿನಾಥ್ ಹೀರಾ ಬಳಿ ಇಂಥ ಹರಟೆಗೆ ಸಾಕಷ್ಟು ಅವಕಶವಿದೆ. ಅದಕ್ಕಾಗಿ ದೂರವಾಣಿ: ೯೯೭೨೯೯೭೨೬0.


ಲಾಸ್ಟ್’ಡ್ರಾಪ್: ಕೃಷಿ ಪ್ರಧಾನವಾದ ಈ ದೇಶದಲ್ಲಿ ಕೃಷಿಗಾಗಿಯೇ ಏಕಿಲ್ಲ ಪ್ರತ್ಯೇಕ ಬಜೆಟ್? ಅಂಥದೊಂದರ ಅಗತ್ಯ ಇಲ್ಲವೇ ? ಖಂಡಿತಾ ಇದೆ. ನಮ್ಮನ್ನಾಳುತ್ತಿರುವ ಪ್ರಜಾ ಪ್ರಭುಗಳೇ ತುಸು ಯೋಚಿಸಿ.

Friday, November 14, 2008

ಹೀರು ಗುಂಡಿಗಳಿಂದ ಹೀರೊ ಆದ ಹೀರಾ

‘ಮಳೆ ನೀರು ನಿಲ್ಲಿಸಿದರೆ ನಿತ್ಯೋತ್ಸವ, ಅದನು ಹರಿಯ ಬಿಟ್ಟರೆ ಮೃತ್ಯೋತ್ಸವ, ಬರಿ ಬರಡೋತ್ಸವ...’
ಹನಿವಚನ ಆ ರೈತನ ಬಾಯಿಂದ ಹೊರಬಿದ್ದಾಗ ಅಚ್ಚರಿಗಿಂತ ಆದದ್ದು ಸಂತಸ, ಪುಟಿದದ್ದು ಉತ್ಸಾಹ, ಕೆರಳಿದ್ದು ಆಸಕ್ತಿ. ಎದುರು ಕುಳಿತಿದ್ದ ಆ ಆಜಾನುಬಾಹು ಒಂದರ ಮೇಲೊಂದರಂತೆ ಹೇಳುತ್ತ ಹೋದರು. ಒಂದಕ್ಕಿಂತ ಒಂದು ಅರ್ಥಪೂರ್ಣ. ಇಂಥ ಹತ್ತಾರು ಚುಟುಕು, ಹನಿವಚನಗಳನ್ನು ಆಲಿಸುತ್ತ ಅನಿರ್ವಚನೀಯ ಆನಂದದ ಅನುಭವದಲ್ಲಿದ್ದಾಗಲೇ ಕುತೂಹಲದ ಎಳೆ, ಪ್ರಶ್ನೆಯ ರೂಪದಲ್ಲಿ ಹೊರಬಿತ್ತು.
‘ಯಾವ ಕವಿಯದ್ದಿವು ?’-ಅಪಹಾಸ್ಯ ಮಾಡುತ್ತಿದ್ದಂತೆನಿಸಿರಬೇಕು. ‘ಏ ಬಿಡ್ರಿ ಸರ, ಇವು ಕವಿಗೋಳದ್ದಲ್ಲರ್ರಿ, ನಂದಾ. ಹಿಂಗ ಗೆಪ್ನ ಬಂದಾಗಲ್ಲ ಬರಕೋತ ಕೂತಿರತೇನಿ. ಯಾಕ, ಚಲೋ ಅನ್ನಿಸ್ಲಿಲ್ಲೇನು ?’ ಮರು ಪ್ರಶ್ನೆ. ಅವು ಬರೀ ಸಾಲುಗಳಾಗಿರಲಿಲ್ಲ. ಅನುಭಾವದ ಅಭಿವ್ಯಕ್ತಿಯೇ ಹನಿವಚನಗಳ ರೂಪ ಪಡೆದಿದ್ದವು.
ಆಳಂದ ಸಮೀಪದ ರುದ್ರವಾಡಿಯ ಆದಿನಾಥ್ ಹೀರಾ ಅವರು ನಾಡಿನ ಎಲ್ಲ ಮೇಧಾವಿ ರೈತರ ಪ್ರತಿನಿಯಾಗಿ ಕಂಡರು ಆ ದಿನ. ಹೀರಾ ಅವರ ಪುಟ್ಟ ಊರಲ್ಲಿ ನಿಜಕ್ಕೂ ನಿತ್ಯೋತ್ಸವ. ಅಲ್ಲಿ ಬೀಳುವ ಪ್ರತಿ ಹನಿ ಮಳೆ ನೀರನ್ನೂ ಅವರು ಹಿಡಿದಿಟ್ಟುಕೊಳ್ಳುತ್ತಾರೆ. ಒಂದೇ ಒಂದು ಮಳೆ ಬಿದ್ದರೆ ಸಾಕು, ಅಲ್ಲಿನ ಮೂರು ಕೃಷಿ ಹೊಂಡಗಳು ಬರೋಬ್ಬರಿ ೧ ಕೋಟಿ ೫ ಸಾವಿರ ಲೀಟರ್ ನೀರನ್ನು ತಮ್ಮೊಡಲಲ್ಲಿ ತುಂಬಿಸಿಕೊಳ್ಳುತ್ತವೆ. ಆ ದಿನದಿಂದಲೇ ಅದು ಇಂಗಲು ಆರಂಭ. ವಾರೊಪ್ಪತ್ತಿನಲ್ಲಿ ಎಲ್ಲವೂ ನಿಧಾನಕ್ಕೆ ನೆಲದ ಕೆಳಕ್ಕೆ ಜಾರಿ ಅಂತರ್ಜಲವೆಂಬ ಸೇಫ್ ಲಾಕರ್‌ನಲ್ಲಿ ಭದ್ರವಾಗಿ ಬಿಡುತ್ತದೆ. ಹೆಚ್ಚುವರಿ ನೀರು ಮಾತ್ರ ಹೊಂಡದ ಮೇಲೆಯೇ ಅಲ್ಲಾಡಿ, ಅಲ್ಲಾಡಿ ತಿಳಿಗೊಂಡು ನಿಂತುಕೊಳ್ಳುತ್ತದೆ. ಮತ್ತೊಂದು ಮಳೆ ಬರುವವರೆಗೆ ಅದು ಬಳಕೆಗೆ ಸಂಪೂರ್ಣ ಉಚಿತ.
ರುದ್ರವಾಡಿಯೆಂದರೆ ಇಂದು ಕೃಷಿ ಹೊಂಡಗಳ ಗ್ರಾಮ. ಮಳೆ ನೀರು ಸಂಗ್ರಹಕ್ಕೆ ಮಾದರಿ ಅಲ್ಲಿನ ಕೃಷಿ, ನೀರಾವರಿ. ಅಷ್ಟೊಂದು ಸಮರ್ಥ ಉದಾಹರಣೆಯಾಗಿ ಗ್ರಾಮ ಬೆಳೆದು ನಿಂತದ್ದು ಹೀರಾರ ಕ್ರಿಯಾಶೀಲತೆ, ಇಚ್ಛಾಶಕ್ತಿ ಹಾಗೂ ನೀರ ಪ್ರೀತಿಯಿಂದಾಗಿ. ಇಂಥ ಗುಣಗಳೇ ಅವರಿಗೆ ೨೦೦೩ರಲ್ಲಿ ಕೃಷಿ ಪಂಡಿತ ಪ್ರಶಸ್ತಿಯನ್ನೂ ತಂದು ಕೊಟ್ಟಿವೆ. ಹಾಗೆಂದು ಅಂಥದ್ದೊಂದು ಪಾಂಡಿತ್ಯ ಆ ಪ್ರಗತಿಪರ ರೈತನಿಗೆ ಜನ್ಮದೊಂದಿಗೇ ಬಂದ ಬಳುವಳಿಯಲ್ಲ. ಯಾವುದೇ ವಿಶ್ವವಿದ್ಯಾಲಯದ ನಾಲ್ಕು ಗೋಡೆಗಳ ಮಧ್ಯೆ ಸಿಕ್ಕದ್ದೂ ಅಲ್ಲ. ಹೊಲವೆಂಬ ಪ್ರಯೋಗಶಾಲೆಯ ಮೂಸೆಯಲ್ಲಿ ನಿರಂತರ ಪರಿಶ್ರಮದಿಂದ ದಕ್ಕಿಸಿಕೊಂಡದ್ದು. ನೀರಿನ ಸಂಕಷ್ಟದಲ್ಲಿ ಬೆಂದ ಬಳಿಕ ನಶಿಸಿದ ಅಜ್ಞಾನದ ಕೊನೆಯಲ್ಲಿ ಗೋಚರಿಸಿದ್ದು. ಬರಡು ಭೂಮಿಯ ಬಿರುಕುಗಳನ್ನು ಬಿಡದೇ ತಡಕಾಡಿ ಉತ್ತರದ ರೂಪದಲ್ಲಿ ಕಂಡುಕೊಂಡದ್ದು.
ಪಾರಂಪರಿಕ ಕೃಷಿ ಬದುಕಿನ ಜಿವಂತಿಕೆಯ ಧನಾತ್ಮಕ ಅಂಶಗಳನ್ನು ಹೀರಾ, ಇಂದು ತಾವು ಮಾತ್ರ ಹೀರಿಕೊಂಡು ಕುಳಿತಿಲ್ಲ. ಸುತ್ತ ಮುತ್ತಲಿನ ಹತ್ತಾರು ರೈತರನ್ನೂ ಈ ನಿಟ್ಟಿನಲ್ಲಿ ಪ್ರೇರೇಪಿಸುತ್ತಿದ್ದಾರೆ. ನೀರಿಲ್ಲದೇ ನಲುಗಿದ ಯಾವುದೇ ಭೂಮಿಯ ನಟ್ಟ ನಡುವೆ ಹೋಗಿ ನಿಂತ ಸ್ಥಳೀಯರಿಗೆ ಬುದ್ಧಿ ಹೇಳುತ್ತಿದ್ದಾರೆ. ಸಭೆ- ಸಮಾರಂಭಗಳಿಗೆ ಹೋಗಿ ಕತೆ-ಕವನಗಳ ಮೂಲಕ ನೀರೆಚ್ಚರ ಮೂಡಿಸುತ್ತಿದ್ದಾರೆ. ವಿಶ್ವ ವಿದ್ಯಾಲಯಗಳಿಗೆ ಹೋಗಿ ಉಪನ್ಯಾಸ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ.
ಒಬ್ಬ ಸಾಮಾನ್ಯ ರೈತನಿಗೆ ಇಷ್ಟೆಲ್ಲ ಸಾಸಲಾದದ್ದು ಹೇಗೆ ಎಂದು ಪ್ರಶ್ನಿಸಿದರೆ, ಹೀರಾ ಅಷ್ಟೇ ಮುಗ್ಧವಾಗಿ ‘ಹಂಗೇನಿಲ್ಲ ಸರ, ಚಿಕ್ಕವ್ರ ಇದ್ದಾಗ ಸಾಲಿಗೂ ಹೋಗಲಾರದ ನೀರಿಗಾಗಿ ಎಷ್ಟ್ ಕಷ್ಟ ಬಿದ್ದೇವಿ ಅಂದ್ರ, ಅದಾ ಎಲ್ಲ ಕಲಿಶಿಕೊಟ್ಟು ಬಿಡ್ತು. ಹೊಲ-ಮನಿ ಉಳಿಶಿಕೊಂಬೋ ಜರೂರಿತ್ತಲ್ಲ, ಅದಕ್ಕಾಗಿ ಏನಾದರೊಂದು ಮಾಡಾಬೇಕಿತ್ತು. ಏನೇನಾರ ಮಾಡೋ ಬದ್ಲು, ಅದರಾಗ ಸೋಲು ಉಣ್ಣೊ ಬದ್ಲು, ಮಳಿ ನೀರು ಹಿಡಕೊಳ್ಳೋಕ ಹೊಂಟ್ವಿ. ತಂತಾನ ಹೊಲ-ಮನಿ ಅಷ್ಟೇ ಅಲ್ಲ ಇಡೀ ಊರೇ ನಲಿದಾಡಕ್ಕೆ ಹತ್ಯಿತು.’ ಎಂದುತ್ತರಿಸುತ್ತಾರೆ.
‘ಕತಿ ಹೇಳಕೊಂತ ಹೊಂಟ್ರ ಭಾಳ ಇದಾವು ಬಿಡ್ರೀ ಸಾಹೇಬ್ರ...’ ಎನ್ನುತ್ತಲೇ ಹೀರಾ ತಮ್ಮ ಯಶೋಗಾಥೆಯನ್ನು ಬಿಚ್ಚಿಟ್ಟರು. ಅದು ೧೯೭೨ರ ಸುಮಾರು. ಆಗಿನ್ನೂ ಅವರು ವಿದ್ಯಾರ್ಥಿ ದೆಸೆಯಲ್ಲಿದ್ದರು. ಗುಲ್ಬರ್ಗದ ಶರಣ ಬಸಪ್ಪ ದೇವಾಲಯ ಶಾಲೆಯಲ್ಲಿ ಓದುತ್ತಿದ್ದರು. ಆ ವರ್ಷ ಮಳೆಯೇ ಆಗಲಿಲ್ಲ. ಭೋಸ್ಗಾ ಕೆರೆ ಬತ್ತಿತು. ಗುಲ್ಬರ್ಗ ಕೆರೆಯೂ ಒಣಗಿತು. ಸುತ್ತಲೆಲ್ಲೂ ನೀರಿಲ್ಲದೇ ೧೫ ದಿನ ಶಾಲೆಗೇ ರಜೆ ಘೋಷಿಸಲಾಯಿತು. ಇದೇ ನೀರಿನ ಕೆಲಸಕ್ಕೆ ಪ್ರೇರಣೆ ಒದಗಿಸಿತು.
ಊರಿಗೆ (ರುದ್ರವಾಡಿ) ಹೋದರೆ ಅಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕುಡಿಯಲೂ ನೀರಿಲ್ಲದ ಪರಿಸ್ಥಿತಿ. ರಾತ್ರಿ ಎರಡು ಗಂಟೆಗೆ ಊರ ಮುಂದಿನ ೪೦ ಅಡಿ ಆಳದ ಬಾವಿಯ ಮೆಟ್ಟಿಲಿಳಿದು ಕೆಳಗೆ ಹೋಗಿ ಅಲ್ಪ ಸ್ವಲ್ಪ ಸಂಗ್ರಹಗೊಂಡಿದ್ದ ನೀರನ್ನೇ ಲೋಟದಲ್ಲಿ ಕೆರೆದೂ, ಕೆರೆದು ಕೊಡಕ್ಕೆ ತುಂಬಿಸಿಕೊಂಡು ಬರಬೇಕಿತ್ತು. ಮಳೆ ನೀರು ಸಂಗ್ರಹದ ಯೋಚನೆ ಬಂದದ್ದೇ ಆಗ. ಮುಂದಿನ ಮಳೆಯ ಹೊತ್ತಿಗೆ ಹೊಲದ ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳಕ್ಕೆ ಒಡ್ಡು ಹಾಕಿ, ಹರಿದು ಹೋಗುತ್ತಿದ್ದ ಮಳೆ ನೀರನ್ನು ನಿಲ್ಲಿಸಿಕೊಳ್ಳಲಾಯಿತು.
ನೀರಿನ ಇಂಥ ಪರದಾಟ ಗುಲ್ಬರ್ಗದ ಶಾಲೆಗೆ ಶರಣು ಹೊಡೆಸಿತು. ಊರಿನ ಪಕ್ಕದ ಹೊದ್ಲೂರು ಶಾಲೆಗೆ ಸೇರಿದ್ದಾಯಿತು. ಪ್ರತಿದಿನ ಶಾಲೆ ಬಿಟ್ಟು ಹೊಲದ ಮೇಲೆಯೇ ಹಾದು ಬರಬೇಕಿತ್ತು. ಆಗೆಲ್ಲ ಕಣ್ಣಿಗೆ ಕತ್ತಲು ಕವಿಯುವವರೆಗೂ ಕಲ್ಲು ಮಣ್ಣು ತಂದು ಹಳ್ಳದ ಒಡ್ಡು ಎತ್ತರಿಸುವ ಕಾರ್ಯ ಮಾಡಲಾಗುತ್ತಿತ್ತು. ಇಲ್ಲಿ ನಿಂತದ್ದು ಬಸಿ ನೀರಾಗಿ ಬಾವಿಗೆ ಬಂದಿಳಿದಾಗ ಸಂತಸವೋ ಸಂತಸ.
೮೦ರ ದಶಕಕ್ಕೆ ಬರುವಷ್ಟರಲ್ಲಿ ಓದು ನಿಲ್ಲಿಸಿ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಾಗಿತ್ತು. ೮೭ರವರೆಗೂ ಎಲ್ಲವೂ ಸುಸೂತ್ರವಾಗಿ ಸಾಗಿತ್ತು. ೧೯ ಎಕರೆಯ ಜಮೀನಿನಲ್ಲಿ ಮೊದಲೇ ಇದ್ದ ಬಾವಿಯನ್ನು ಇನ್ನಷ್ಟು ಆಳ ಮಾಡಿ ಹೇಗೊ ಬೆಳೆಗಳಿಗೆ ನೀರು ಒದಗಿಸಲಾಗುತ್ತಿತ್ತು. ಆ ವರ್ಷ ಮತ್ತೆ ಅಟಕಾಯಿಸಿಕೊಂಡ ಬರ ‘ಬೋರ್‌ವೆಲ್ ಜಮಾನ’ಕ್ಕೆ ರೈತರನ್ನು ಕೊಂಡೊಯ್ದಿತ್ತು. ಹೀರಾರ ಪಕ್ಕದ ಜಮೀನಿನವ ೩೦೦ ಅಡಿಯ ಬೋರ್ ಕೊರೆಸಿದ್ದೇ ತಡ ಇದ್ದೊಂದು ಬಾವಿಯೂ ಬತ್ತಿತು. ಅನಿವಾರ್ಯವಾಗಿ ಹೀರಾ ಸಹ ಬೋರ್‌ವೆಲ್‌ನ ಮೊರೆ ಹೋದರು. ಅಂತರ್ಜಲ ಹೆಚ್ಚಳ ಉಪಾಯ ಕಂಡದ್ದೇ ಆಗ. ನಾಲೆ ಮಾಡಿ ಮಳೆ ನೀರನ್ನು ಬೋರ್‌ಗೆ ಹರಿಸಲಾಯಿತು. ಆದರೆ ಇದೂ ಹೆಚ್ಚು ದಿನ ಬಾಳಲಿಲ್ಲ. ಮುಂದಿನ ಬೇಸಿಗೆ ಹೊತ್ತಿಗೆ ಪಕ್ಕದ ಬೋರ್‌ವೆಲ್‌ನ ಆಳ ಹೆಚ್ಚಿಸಿದಾಗ ಹೀರಾರ ಬೋರ್‌ವೆಲ್‌ನೊಳಕ್ಕೆ ಇಳಿಯುತ್ತಿದ್ದ ನೀರು ಒಳಗೊಳಗೇ ಪಕ್ಕದ ಜಮೀನಿಗೆ ಹರಿಯತೊಡಗಿತು. ಇವರದ್ದು ಒಣಗಿ ನಿಂತಿತು.
ಅಕ್ಕ ಪಕ್ಕದಲ್ಲಿ ಅಸ್ತಿತ್ವದಲ್ಲಿದ್ದ ಎರಡು ಬೋರ್‌ವೆಲ್‌ಗಳ ನಡುವೆ ಮತ್ತೊಂದು ಬೋರ್ ಕೊರೆಸಿ ಕೆಳಗಿನ ಪದರದಲ್ಲಿದ್ದ ಬಂಡೆಯನ್ನು ಸೋಟಕಗಳಿಂದ ಸಿಡಿಸಲಾಯಿತು.ನೀರೇನೋ ಸಿಕ್ಕಿತು. ಆದರೆ ಇಂಥ ಸಾಹಸಗಳು ಶಾಶ್ವತವಲ್ಲ ಎಂಬುದನ್ನು ಮನಗಾಣಲು ಹೆಚ್ಚು ದಿನ ಹಿಡಿಯಲಿಲ್ಲ. ಏಕೆಂದರೆ ಸುತ್ತ ಮುತ್ತಲೆಲ್ಲ ಬೋರ್‌ಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ನೀರ ಖಜಾನೆಯನ್ನು ಬರಿದು ಮಾಡುವವರ ಸಂಖ್ಯೆ ಹೆಚ್ಚಿತೇ ವಿನಃ ಅದನ್ನು ತುಂಬುವವರಿರಲಿಲ್ಲ. ಅದೇ ವೇಳೆ ಮಳೆಗಾಲದಲ್ಲಿ ಊರ ಮುಂದಿನ ಹಳ್ಳದಲ್ಲಿ ದಂಡಿಯಾಗಿ ಹರಿದು ವ್ಯರ್ಥವಾಗುತ್ತಿತ್ತು.
ಅದು ೨೦೦೨ರ ಸುಮಾರು. ಶಾಲಾ ದಿನಗಳಲ್ಲಿ ಕಂಡಿದ್ದ ನೀರಿಂಗಿಸುವ ಕನಸು ಮತ್ತೆ ನೆನಪಾಯಿತು. ಒಡ್ಡು, ಇಂಗು ಗುಂಡಿಗಳಿಂದ ಮಾತ್ರ ಸಮಸ್ಯೆಗೆ ಕೊನೆ ಹಾಡಲು ಸಾಧ್ಯ ಎಂದು ನಿಶ್ಚಯಿಸಿದ್ದವರಿಗೆ ನೆರವಾದವರು ಜಲಾನಯನ ಅಭಿವೃದ್ಧಿ ಅಕಾರಿ ಮಲ್ಲಾರೆಡ್ಡಿ. ಅದಾಗಲೇ ತಂದೆಯ ಕಾಲದಿಂದ ಅಸ್ತಿತ್ವದಲ್ಲಿದ್ದ ಚೆಕ್ ಡ್ಯಾಮ್ ಸುಭದ್ರವಾಗಿದ್ದುದು ಕಣ್ಣ ಮುಂದಿತ್ತು. ಇಂಥವೇ ಕೃಷಿ ಹೊಂಡಗಳನ್ನು ಮತ್ತಷ್ಟು ಮಾಡಬಾರದೇಕೆ ಎನಿಸಿತು. ೧೫ ಅಡಿ ಅಗಲ, ೮ ಅಡಿ ಆಳ, ೩೦ ಅಡಿಯಷ್ಟು ಉದ್ದದ ಪುಟ್ಟ ಕೆರೆ ಜಮೀನಿನಲ್ಲಿ ನಿರ್ಮಾಣವಾಯಿತು. ಅದರ ಫಲ ಅಕಾರಿಗಳ ಕಣ್ಣನ್ನೂ ತೆರೆಸಿತು. ಗ್ರಾಮಕ್ಕೆ ೩೦ ಕೃಷಿ ಹೊಂಡಗಳು, ೩ ಕೆರೆ, ೨ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಸರಕಾರದಿಂದ ಮಂಜೂರಾತಿ ದೊರೆಯಿತು. ಇಡೀ ಊರವರನ್ನು ಹೀರುಗುಂಡಿಗಳ ನಿರ್ಮಾಣಕ್ಕೆ ಹೀರಾ ಪ್ರೇರೇಪಿಸಿದರು. ಇದೊಂದು ಆಂದೋಲನವಾಯಿತು.
ನೋಡ ನೋಡುತ್ತಿದ್ದಂತೆ ಇಡೀ ಗ್ರಾಮ ಕೃಷಿ ಹೊಂಡಗಳಿಂದಾವೃತವಾಯಿತು. ಮಳೆ ನೀರು ಏನೇ ಹಠ ಮಾಡಿದರೂ ರುದ್ರವಾಡಿಯವರ ಕಾವಲನ್ನು ತಪ್ಪಿಸಿಕೊಂಡು ಹೊರ ಹೋಗದಂತಾಯಿತು. ಕುಳಿತಲ್ಲಿ, ನಿಂತಲ್ಲಿ, ನಡೆದಲ್ಲಿ, ನೆರೆದಲ್ಲಿ ನೀರಿಂಗಿಸುವುದು ಹೇಗೆಂಬುದರ ಬಗ್ಗೆ ಹೀರಾ ಚರ್ಚಿಸಲಾರಂಭಿಸಿದರು. ಓಡಿ ಹೋಗುವ ಮಳೆ ನೀರನ್ನು ಕಟ್ಟಿ ಹಾಕಿ ಇಂಗಿಸಿಕೊಳ್ಳುವುದು ರೈತರ ಸ್ವಭಾವದಂತಾಯಿತು. ರುದ್ರವಾಡಿಯಲ್ಲಿಂದು ಮಳೆ ಸುರಿದರೆ ಸಾಕು. ಅದೊಂದು ಹಬ್ಬ, ಕೋಟಿ ಕೋಟಿ ಲೀಟರ್ ನೀರು ಅಂತರ್ಜಲ ಖಜಾನೆಗೆ ನೇರವಾಗಿ ಹೋಗಿ ಡೆಪಾಸಿಟ್ ಆಗುತ್ತದೆ. ಅದರ ಬಡ್ಡಿಯಲ್ಲೇ ಬೇಸಿಗೆಯನ್ನು ಕಳೆಯುತ್ತಿದ್ದಾರೆ ಜನ. ಯಶಸ್ಸಿನ ಕದ ತೆರೆಯುತ್ತ ಹೋದಂತೆಲ್ಲ ಹೀರಾ ಹೀರೊ ಆದರು. ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂತು. ಖ್ಯಾತಿಯನ್ನು ಪ್ರಯೋಗ, ಪ್ರಯತ್ನಗಳ ಛಾತಿಯಾಗಿ ಪರಿವರ್ತಿಸಿಕೊಂಡರವರು. ರುದ್ರವಾಡಿಯಲ್ಲಿಂದು ಬರದ ರುದ್ರತಾಂಡವ ಇತಿಹಾಸದ ಕತೆಯಾಗಿಯಷ್ಟೇ ಉಳಿದಿದೆ. ಅಂಥ ನೆನಪು ಸಹ ಮಾಸಿ ಹೋಗಲು ಹೆಚ್ಚು ದಿನವಿಲ್ಲ ಎನ್ನುತ್ತಾರೆ ಅವರು ವಿಶ್ವಾಸದಿಂದ.


‘ಲಾಸ್ಟ್’ಡ್ರಾಪ್: ರೋಗಿಯ ನರಕ್ಕೇ ನೇರವಾಗಿ ಔಷಧವನ್ನು ಸಲೈನ್ ಮಾಡಿದರೆ ಬೇಗ ಪರಿಣಾಮ ಸಾಧ್ಯ. ಅಂತೆಯೇ ಆಳ ಗುಂಡಿಗಳ ಮೂಲಕ ಅಂತರ್ಜಲಕ್ಕೆ ನೀರನ್ನು ನೇರವಾಗಿ ಕಳುಹಿಸಬೇಕು. ಆಗ ಮಾತ್ರ ಬರದ ರೋಗ ಬೇಗ ಗುಣವಾದೀತು-ಹೀರಾ ಬಳಿ ಇಂಥ ಅದೆಷ್ಟೋ ನೀರ ನುಡಿ ರತ್ನಗಳಿವೆ.

Wednesday, November 12, 2008

ನೀರು-ಮಣ್ಣು , ಕುಲಗೆಡುತ್ತಿರುವ ಧರಣಿ ಮೇಲಿನ ಹೊನ್ನು

‘ಕ್ಷಮಯಾ ಧರಿತ್ರಿ’ ಭೂಮಿಯನ್ನು ಮನದುಂಬಿ ಹೀಗೆ ಸ್ಮೃತಿ ಪುರಾಣಗಳಲ್ಲಿ ಮಾತೃತ್ವದ ಸ್ಥಾನಕ್ಕೇರಿಸಿದ್ದೇವೆ ನಾವು ಭಾರತೀಯರು. ಆದರೆ, ಭೂ ಮಾತೆಯ ಅಂಥ ಕ್ಷಮಾ ಗುಣವೇ ಇಂದು ಆಕೆಯನ್ನು ದೌರ್ಜನ್ಯ ಸಂಕೋಲೆಯಲ್ಲಿ ಬಿಗಿದಿಟ್ಟಿದೆ.
ನಿಜ, ನಮ್ಮ ಪಾಲಿಗೆ ಭೂಮಿಯಂತಲೇ ಅಲ್ಲ; ನಮ್ಮ ಸುತ್ತಮುತ್ತಲಿನ ಪರಿಸರವೆಲ್ಲವೂ ದೈವಸ್ವರೂಪಿಯೇ. ನೆಲ, ಜಲ, ಗಾಳಿ, ಆಕಾಶ ಹೀಗೆ ಒಂದೊಂದಕ್ಕೆ ಒಂದೊಂದು ಪರಿಕಲ್ಪನೆಯನ್ನು ಆರೋಪಿಸಿ, ಸಂರಕ್ಷಿಸಿಕೊಂಡು ಬಂದವರು ನಾವು. ಹೀಗಾಗಿ ಪ್ರಕೃತಿಯ ವ್ಯಾಪಾರವೆಲ್ಲವೂ ನಮಗೆ ದೈವಲೀಲೆಯಾಗಿಯೇ ಕಂಡಿದೆ.
ಆದರೆ, ನೀರು ಭೂಮಿಯಂಥ ನೈಸರ್ಗಿಕ ಸಂಪನ್ಮೂಲ ಬಳಕೆಯೆಂಬುದು ಹಿಂದಿನಂತೆ ಕೇವಲ ಸಾಮಾಜಿಕ ಅಥವಾ ಸಾಮುದಾಯಿಕ ವಿಷಯವಾಗಿ ಉಳಿದಿಲ್ಲ. ಬದಲಾಗಿ ಅದಿಂದು ರಾಜಕೀಯ, ಆರ್ಥಿಕ ಇನ್ನೂ ಹೆಚ್ಚಾಗಿ ರಾಜತಾಂತ್ರಿಕ ವಿಷಯವಾಗಿ ಹೊರಹೊಮ್ಮಿದೆ. ಇದೇಕೆ ಹೀಗೆಂದು ಪ್ರಶ್ನಿಸಿಕೊಂಡರೆ ಮತ್ತದೇ ಬದಲಾದ ಭಾರತದ ಚಿತ್ರಣ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
೧೯೪೭ರಲ್ಲಿ ಭಾರತದ ಜನಸಂಖ್ಯೆ ಸರಿಸುಮಾರು ೩೫ ಕೋಟಿಯಷ್ಟಿತ್ತು. ಇಂದು ಅದರ ಮೂರೂವರೆ ಪಟ್ಟು ಹೆಚ್ಚಳವಾಗಿದೆ. ಆದರೆ ನಿಸರ್ಗ ಸಂಪನ್ಮೂಲಗಳ ಬಳಕೆ ಪ್ರಮಾಣ ಐವತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಆಗಿನಕ್ಕಿಂತ ಹತ್ತು ಪಟ್ಟು ಹೆಚ್ಚಿದೆ. ಸಂಪನ್ಮೂಲ ಮಾತ್ರ ಹಿಮ್ಮುಖವಾಗಿ ಸಾಗಿದೆ. ಇನ್ನು ಕಾಡಿನ ವಿಚಾರಕ್ಕೆ ಬಂದರೆ ಅತ್ಯಂತ ರೋಚಕ ವಿಷಯ ಬಯಲಿಗೆ ಬರುತ್ತದೆ. ಮನುಕುಲವೆಂಬುದರ ಪರಿಣಾಮ ಅದು ಅತಿವೃಷ್ಟಿಯೇ ಇರಲಿ, ಅನಾವೃಷ್ಟಿಯೇ ಇರಲಿ ಯಾವುದನ್ನೂ ನಾವು ದೂರುತ್ತಿರಲಿಲ್ಲ. ಅದನ್ನೊಂದು ಸಂಕಷ್ಟವನ್ನಾಗಿ ಮರುಗುತ್ತಿರಲಿಲ್ಲ. ಇದರ ಜತೆಗೆ ಪ್ರಾಕೃತಿಕ ವ್ಯವಸ್ಥೆಯ ಸಂರಕ್ಷಣೆಯೆಂಬುದನ್ನು ನಾವು ದಿನಚರಿಯ ಭಾಗವಾಗಿ ಪರಿಗಣಿಸುವ ಪರಿಪಾಠ ಬೆಳೆಸುತ್ತಿದ್ದೆವು.
ಭಾವನಾತ್ಮಕ ವಿಚಾರಗಳೇನೆ ಇರಲಿ, ನೀರು-ಮಣ್ಣಿನ ವಿಚಾರದಲ್ಲಿ ಭಾರತದ ಇಂದಿನ ವಾಸ್ತವ ಮಾತ್ರ ಅತ್ಯಂತ ಕರಾಳ ಚಿತ್ರಣವನ್ನು ಕಟ್ಟಿಕೊಡುತ್ತದೆ. ಬದಲಾಗಿರುವ ನಗರಗಳು, ಹೆಚ್ಚಿರುವ ಕೈಗಾರಿಕೆ, ಕೃಷಿ ಪ್ರದೇಶಗಳು, ಪರಿಣಾಮವಾಗಿ ಉದ್ಭವಿಸಿರುವ ಮೂಲಭೂತ ಸೌಲಭ್ಯಗಳ ಕೊರತೆ...ಪಟ್ಟಿ ಬೆಳೆಯುತ್ತದೆ. ಇದರ ಪರಿಣಾಮ ? ಭೂಮಿ ಹುಟ್ಟಿದಾಗಿನಿಂದ ೧೯೧೭ರವರೆಗೆ ಯಾವ ಪ್ರಮಾಣದ ಕಾಡು ನಾಶವಾಗಿತ್ತೋ ಅದರ ಎರಡು ಪಟ್ಟು ಕಾಡು ನಂತರದ ಕೇವಲ ೫೦ ವರ್ಷಗಳಲ್ಲಿ ನಾಶವಾಗಿದೆ. ಹಾಗಾದರೆ ಈ ಪ್ರಮಾಣದಲ್ಲಿ ಸಂಪನ್ಮೂಲದ ನಾಶಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ದೊರಕುವ ಉತ್ತರ ಇನ್ನೂ ಆಶ್ಚರ್ಯ ಹುಟ್ಟುತ್ತದೆ.
ಈ ಭೂಮಿಯ ಮೇಲೆ ನಡೆದ ಎರಡು ಮಹಾ ಯುದ್ಧಗಳು ಜಗತ್ತಿನ ಚಿತ್ರಣವನ್ನೇ ಬದಲಿಸಿದವು. ಈ ಸಂದರ್ಭದಲ್ಲಿ ಕಬ್ಬಿಣ, ಕೈಗಾರಿಕೆ ನಿರೀಕ್ಷೆ ಮೀರಿ ಬೆಳೆಯಿತು. ಆಯುಧಗಳಿಗಾಗಿ ಕಬ್ಬಿಣ ಮತ್ತು ಮರದ ಬಳಕೆಯೂ ಹೆಚ್ಚಿತು. ಇದು ಕಾಡುನಾಶಕ್ಕೆ ಮೂಲವಾಯಿತು. ಇಲ್ಲಿಂದಲೇ ಹೆಚ್ಚಿತು ನೈಸರ್ಗಿಕ ಸಂಪನ್ಮೂಲಗಳ ಕೊರತೆಯೂ ಮನುಷ್ಯನನ್ನು ಕಾಡಲಾರಂಭಿಸಿತು. ಮಾತ್ರವಲ್ಲ, ಸಮುದಾಯದ ಸಂಪನ್ಮೂಲವಾಗಿದ್ದ ನೀರಿನಂಥ ವಿಷಯ ರಾಜಕೀಯ, ಆರ್ಥಿಕ ಮಹತ್ವವನ್ನು ಪಡೆದುಕೊಂಡಿತು.
ಇಂಥದೊಂದು ಸಂದರ್ಭಕ್ಕಾಗಿಯೇ ಕಾಯುತ್ತಿದ್ದ ವಸಾಹತುಶಾಹಿಗಳು ನಮ್ಮ ನೀರಾವರಿ ಹಾಗೂ ಕೃಷಿ ಪದ್ಧತಿಯನ್ನೇ ಬದಲಿಸಿಬಿಟ್ಟರು. ಇಂದು ‘ಸಾರ್ವಜನಿಕ ನಲ್ಲಿ’ ಅಥವಾ ಸಾರ್ವಜನಿಕ ನೀರು ಪೂರೈಕೆಯೆಂಬ ಕಲ್ಪನೆಯೇ ಖಾಸಗಿಯವರ ದೃಷ್ಟಿಯಲ್ಲಿ ‘ನೀರಿನ ಪೋಲು’ ಎನಿಸಿಕೊಂಡಿರುವುದು ವಿಪರ್ಯಾಸ.
ನಮ್ಮ ಇಂಥ ಭಾವನೆ ಕೂಡ ಅಮೆರಿಕದಂಥ ದೇಶಗಳ ಹುನ್ನಾರದ ಭಾಗವೇ. ಏಕೆಂದರೆ ಅಮೆರಿಕ ಮಾತನಾಡುತ್ತಿರುವುದು ‘ಆಹಾರ ಭದ್ರತೆ’ಯ ಬಗೆಗೇ ವಿನಃ ಬೇರೆ ದೇಶಗಳ ‘ಆಹಾರ ಸಾರ್ವಭೌಮತೆ’ ಅದಕ್ಕೆ ಬೇಕಿಲ್ಲ. ಕೃಷಿಯೆಂತಲೇ ಅಲ್ಲ, ಯಾವುದೇ ಒಂದು ದೇಶ ನಿರ್ದಿಷ್ಟ ವಿಷಯದಲ್ಲಿ ಸಾರ್ವಭೌಮತ್ವ ಸಾಸುವುದು ಅಮೆರಿಕಕ್ಕೆ ಬೇಕಿಲ್ಲ. ಹೀಗಾಗಿ ವಿಶ್ವಬ್ಯಾಂಕ್, ವಿಶ್ವವ್ಯಾಪಾರ ಸಂಸ್ಥೆಗಳಂಥ ಏಜೆಂಟರ ಮೂಲಕ ಸಾಲ ಹಂಚುವ ಅದು ಸಾಲ ಪಡೆದ ದೇಶಗಳನ್ನು ಜಾಗತೀಕರಣದ ‘ತದ್ರೂಪಿ ತಯಾರಿಕಾ ಉಪಕರಣ’ವಾಗಿ ಮಾರ್ಪಡಿಸುತ್ತದೆ. ಇಂಥ ತದ್ರೂಪಿ ವೇದಿಕೆಯೇ ನೀರಿನ ಖಾಸಗೀಕರಣ. ಬಹುರಾಷ್ಟ್ರೀಯ ಕಂಪನಿಗಳು ನೇರವಾಗಿ ನಮ್ಮ ಅಂತರ್ಜಲಕ್ಕೆ ಬೋರ್‌ವೆಲ್‌ಗಳ ಹೆಸರಲ್ಲಿ ಕನ್ನ ಕೊರೆದು ದೋಚುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಇತ್ತೀಚಿನ ದಿನಗಳಲ್ಲಿ ‘ಅಂತರ್ಜಲ ಬತ್ತಿ ಹೋಗುತ್ತಿದೆ’ ಎಂಬ ಕೂಗು ಮಾಮೂಲು ಎಂಬಂತಾಗಿದೆ. ಏಕಕಾಲಕ್ಕೆ ಜಗತ್ತಿನೆಲ್ಲೆಡೆ ಎದ್ದ ನೀರಿಗಾಗಿನ ಹಾಹಾ ಕಾರಕ್ಕೆ ಉತ್ತರವಾಗಿ ಕಂಡದ್ದು ಭೂಗರ್ಭದೊಳಗೆ ಅಡಗಿ ಕುಳಿತಿದ್ದ ಈ ಗುಪ್ತನಿ. ಅದನ್ನು ಹುಡುಕಿದ್ದೂ ಆಯಿತು. ಅದರ ಗುಂಟ ಕನ್ನ ಕೊರೆದದ್ದೂ ಆಯಿತು. ಕೆಲವೆಡೆ ಬರಿದಾಗಿಸಿದ್ದೂ ಆಯಿತು. ನಂತರದ ಹೊಸ ಕೂಗು ‘ಅಂತರ್ಜಲ ಬತ್ತಿ ಹೋಗುತ್ತಿದೆ....
ನಿಜವಾಗಿ ಈ ನೀರು ಎಂಥದ್ದು, ಎಲ್ಲಿಂದ ಬಂತು. ಯಾಕೆ ಅಲ್ಲಿ ಅಡಗಿತ್ತು ? ಎಂಬೆಲ್ಲ ಅಂಶಗಳ ಅರಿವಿದ್ದರೆ ಖಂಡಿತಾ ನಾವಿಂದು ಈ ಪ್ರಮಾಣದಲ್ಲಿ ಅದನ್ನು ಬರಿದಾಗಿಸುತ್ತಿರಲಿಲ್ಲವೇನೊ ! ಈ ಜಗತ್ತಿನ ಎಲ್ಲ ನೀರಿನ ಮೂಲಾಧಾರವೂ ಮಳೆಯೇ ಎಂಬುದು ಬಹುಮುಖ್ಯ ಸಂಗತಿ. ನೆಲದೊಳಗೆ ಬಹುಕಾಲದಿಂದ ಅಡಗಿ ಕುಳಿತ ಅಂತರ್ಜಲಕ್ಕೂ ಕೂಡ ಇದೇ ಮಳೆಯೇ ಮೂಲ.
ಸಾಮಾನ್ಯವಾಗಿ, ಬಾವಿಹೊಂಡ ತೋಡಿದಾಗ ‘ಜಲ ಸಿಕ್ಕಿತು’, ‘ಒರತೆ ಕಂಡಿತು’ ಎನ್ನುವುದನ್ನು ಕೇಳಿದ್ದೇವೆ. ಹೀಗೆ ಸಿಕ್ಕುವುದೇ ವಿಶ್ರಾಂತಿಗೆ ಕುಳಿತಿದ್ದ ಜಲ. ಎಷ್ಟೋ ಜನರ ಕಲ್ಪನೆಯಲ್ಲಿ ಇದೇ ಅಂತರ್ಜಲ ಎಂಬುದಿದೆ. ನಿಜವಾಗಿ ಇದು ಅಂತರ್ಜಲವಲ್ಲ. ಭೂಗರ್ಭ ಶಾಸ್ತ್ರಜ್ಞ ಸುಭಾಷ್‌ಚಂದ್ರ ಅವರು ವಿವರಿಸುವಂತೆ ಇದು ಪೂರಕ ಜಲ ಸಂಪನ್ಮೂಲ. ಅಂದರೆ ಡೈನಾಮಿಕ್ ರಿಸೋರ್ಸ್.
ಭೂಮಿಯ ಮೇಲ್ಪದರದ ೨೦೦ ಅಡಿಯ ಆಸು ಪಾಸಿನಲ್ಲಿ ನಮಗೆ ಸಿಗುವ ಜಲವೆಲ್ಲವೂ ಇಂಥ ಪೂರಕ ಸಂಪನ್ಮೂಲವೇ. ಇದು ಒಂದೇ ತೆರನಾಗಿ ಇರುವುದಿಲ್ಲ. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ, ನೀರಿಳಿ ಯುವ ಮಟ್ಟವನ್ನು ಅವಲಂಬಿಸಿ ಬದಲಾಗುತ್ತಿರುತ್ತದೆ.
ನಿಜವಾದ ಅಂತರ್ಜಲವೆಂದರೆ ಅದು "ಸ್ಥಿರ’ ಅಥವಾ ‘ಶಾಶ್ವತ’ ಸಂಪನ್ಮೂಲ ಅಥವಾ ಸ್ಟ್ಯಾಟಿಕ್ ರಿಸೋರ್ಸ್. ಡೈನಾಮಿಕ್ ವಲಯವನ್ನು ದಾಟಿ ಕಷ್ಟಪಟ್ಟು, ಸಂದಿ ಗೊಂದಿಗಳನ್ನು ತದಡಿ, ತಡೆಕಾಡಿ ಕೆಳಗಿಳಿಯುವ ನೀರು ಭೂಮಿಯ ಮೇಲ್ಮೈನಿಂದ ಸಾವಿರಾರು ಅಡಿಗಳನ್ನು ದಾಟಿ ತನ್ನ ಇರುವನ್ನು ಕಂಡುಕೊಂಡಿರುತ್ತದೆ. ಪೂರಕ ಜಲವೆಂದರೆ ಕೃತಕವಾಗಿ ಮಾನವ ನಿರ್ಮಿತ ಹೊಂಡ, ತಗ್ಗುಗಳಲ್ಲಿ ಸಂಗ್ರಹಗೊಂಡದ್ದೂ ಆಗಬಹುದು. ಆದರೆ, ಸ್ಥಿರ ಜಲ ಸಂಪನ್ಮೂಲ ಪ್ರಕೃತಿಯ ಪರಮೋಚ್ಚ ಶಕ್ತಿಯ ಬಳಕೆಯ ಫಲವಾಗಿ ಕೆಲವು ಸಾವಿರ ವರ್ಷಗಳ ನಿರಂತರ ಪಯಣದ ಬಳಿಕ, ಯಾವುದೇ ಕೃತಕ, ಬಾಹ್ಯ ಬಲಪ್ರಯೋಗವಿಲ್ಲದೇ ಸಂಗ್ರಹಿತಗೊಳ್ಳುವಂಥದ್ದು.
ಇಂಥ ಸ್ಥಿರ ಸಂಪನ್ಮೂಲವಾದ ಅಂತರ್ಜಲ ಮಟ್ಟ ಕುಸಿದರೆ ಪುನಃ ಮೊದಲಿನ ಸ್ಥಿತಿಗೆ ಬರಲು ಸುದೀರ್ಘ ಸಮಯ ಅಂದರೆ ತಲೆಮಾರುಗಳೇ ಬೇಕಾಗಬಹುದು. ಆದರೂ ಅದೇ ನಿರ್ದಿಷ್ಟ ಪ್ರದೇಶ ದಲ್ಲಿ ಸಂಗ್ರಹಗೊಳ್ಳಬೇಕೆಂಬುದೇನೂ ಇಲ್ಲ. ಏಕೆಂದರೆ ಸ್ಥಿತ್ಯಂತರ ಭೂಮಿಯ ಸಹಜ ಗುಣ. ಇಂಥ ಭೂಸ್ಥಿತ್ಯಂತರದ ಸಂದರ್ಭದಲ್ಲಿ ಮೊದಲು ನೀರಿದ್ದ ಜಾಗವನ್ನು ಗಟ್ಟಿ ಪ್ರದೇಶ ಆಕ್ರಮಿಸಿಕೊಂಡು ಬಿಡಬಹುದು.
ಇದೆಲ್ಲಕ್ಕಿಂತ ಮುಖ್ಯವಾಗಿ ಭೂಮಿಯ ಮೇಲೆ ವಾರ್ಷಿಕ ನೂರು ಮಿಲಿಮೀಟರ್ ಮಳೆ ಸುರಿದರೆ ಅಂತರ್ಜಲ ಸೇರುವ ನೀರಿನ ಪ್ರಮಾಣ ೩ರಿಂದ ೫ ಮಿಲಿಮೀಟರ್ ಮಾತ್ರ. ನದಿ, ಸರೋವರಗಳ ಭಾಗದಲ್ಲಿ ೧೨ ರಿಂದ ೨೦ ಮಿಲಿಮೀಟರ್‌ನವರೆಗೆ ಇರುತ್ತದೆ. ಅಂದರೆ ಅತ್ಯಂತ ಕನಿಷ್ಠ ಭಾಗ ನೀರು ಮಾತ್ರ ಒಳಗೆ ಸಂಗ್ರಹಗೊಂಡಿರುತ್ತದೆ. ಅದರಲ್ಲೂ ಬಹುಪಾಲು ಭೂಮಿಯ ಮೇಲ್ಪದರದಲ್ಲಿ ಅಂದರೆ ಶಿಥಿಲ ವಲಯದಲ್ಲಿಗೆ ನಿಲ್ಲುತ್ತದೆ. ಮತ್ತೊಂದಿಷ್ಟು ಸಚ್ಛಿದ್ರ ಶಿಲಾ ವಲಯವೆಂದು ಕರೆಯುವ ಎರಡನೇ ಭಾಗಕ್ಕೆ ಹೋಗುತ್ತದೆ. ಇಲ್ಲಿ ತೀರಾ ಅಪರೂಪಕ್ಕೆ ಕಾಣಸಿಗುವ ಶಿಲಾ ಸೀಳುಗಳ ಮೂಲಕ ಹಲವು ಸಂವತ್ಸರಗಳ ಬಳಿಕ ತೀರಾ ಕನಿಷ್ಠ ಪ್ರಮಾಣದ ನೀರು ಆಳಕ್ಕಿಳಿಯುತ್ತದೆ. ಹೀಗಾಗಿಯೇ ಇದನ್ನು ‘ಆಪತ್ಕಾಲದ ನೀರು’ ಎಂದು ಕರೆಯಲಾಗುತ್ತದೆ. ಇದರ ಕೆಳಗೆ ಜಲವಿಲ್ಲದ, ಗಟ್ಟಿ ಕಲ್ಲಿನ ಒಣ ವಲಯವಿರುತ್ತದೆ. ಈಗ ನಾವು ಬೋರ್ ವೆಲ್‌ಗಳ ಮೂಲಕ ಬರಿದಾಗಿಸುತ್ತಿರುವುದು ಇಂಥ ನೀರನ್ನು.
ಈಗ ಯೋಚಿಸಿ. ಇದು ಒಂದೊಮ್ಮೆ ಬರಿದಾದರೆ ನಮಗೆ ಮತ್ತೆಲ್ಲಿಂದ ನೀರು ಸಿಕ್ಕೀತು? ಮೊದಲೆಲ್ಲ ನೀರಿ ಗಾಗಿ ನಾವು "ಆಕಾಶ’ದೆಡೆ ಮುಖಮಾಡಿ ನಿಲ್ಲುತ್ತಿದ್ದೆವು. ಯಾವಾಗ ಮಳೆ ಪ್ರಮಾಣ ಕಡಿಮೆಯಾಯಿತೋ ಆಗ ಭೂಮಿಯೊಳಕ್ಕೆ ಕೊರೆಯಲಾರಂಭಿಸಿದೆವು. ಈಗ ಆಕಾಶ, ಭೂಮಿ ಎರಡರಲ್ಲೂ ನೀರಿಲ್ಲ. ಮುಂದಿನ ಗತಿಯೇನು? ಯೋಚಿಸಲೇಬೇಕಾದ ಸಂದರ್ಭ ಬಂದಿದೆ. ಆದರೂ ನಾವು ಯೋಚಿಸುತ್ತಿಲ್ಲ. ಮೌಢ್ಯ ವೆಂದರೆ ಇದೇ ಅಲ್ಲವೇ?
೧೯೬೬ರಲ್ಲೇ ಅಂತರ್ಜಲದ ಸಮೀಕ್ಷೆ ಆರಂಭವಾಯಿತು. ನಂತರ ಅಂತರ್ಜಲದ ಬಳಕೆ ಕುರಿತು ಕಾನೂನು ರೂಪಿಸುವ ಯೋಜನೆ ಮಾಡಿದೆವು. ಈಗ ೨೫೦ ಅಡಿಗಿಂತ ಕೆಳಗಿನ ನೀರು ಬಳಕೆಗೆ ನಿರ್ಬಂಧವಿದೆ. ಆದರೆ ಖಾಸಗಿಯಾಗಿ ಬೋರ್‌ವೆಲ್ ಕೊರೆಯುವವರಿಗೆ ಇದಾವುದೂ ಇಲ್ಲ. ೧೯೮೮ರಲ್ಲೇ ಈ ಸಂಬಂಧ ನಿಷೇಧ ಹೇರುವ ಕಾನೂನಿನ ಕರಡು ಸದನದ ಮುಂದೆ ಬಂದಿದ್ದರೂ ಈವರೆಗೆ ಅದು ಅಂಗೀಕಾರವಾಗಿಲ್ಲ. ಹೀಗಾಗಿ ನಾವು ಬೋರ್ ಕೊರೆಯುವುದನ್ನೂ ನಿಲ್ಲಿಸಿಲ್ಲ. ೮೦ರ ದಶಕವೊಂದರಲ್ಲೇ ದೇಶದಲ್ಲಿ ಸುಮಾರು ೩೦ ಲಕ್ಷಕ್ಕೂ ಹೆಚ್ಚು ಬೋರ್‌ವೆಲ್ ಕೊರೆಯಲಾಯಿತು.
ಹೌದು, ಬೇಸಿಗೆ ಬರುತ್ತಿದೆ. ನೆಲ-ಬಯಲು, ಗುಡ್ಡ- ಗುಡಾರಗಳೆನ್ನದೇ ಬಿಸಿಲ ಝಳಕ್ಕೆ ಸಿಕ್ಕು ಗಾರುಗಾರಾಗಿರುತ್ತದೆ. ಇಂಥ ಸನ್ನಿವೇಶದಲ್ಲಿ ಮೇಲ್ಮಣ್ಣಿನ ಸಂರಕ್ಷಣೆಯ ಬಗ್ಗೆ ಯೋಚಿಸಲೇಬೇಕಿದೆ.
ಮೇಲ್ಮಣ್ಣಿನ ಮಹತ್ವದ ಬಗ್ಗೆ ಹೇಳುವುದಾದರೆ, ನಿಸರ್ಗದ ವ್ಯಾಪಾರವನ್ನಾಧರಿಸಿ ಒಂದಿಂಚು ಉತ್ತಮ ಮೇಲ್ಮಣ್ಣು ರಚನೆಯಾಗಬೇಕೆಂದರೆ ಏನಿಲ್ಲವೆಂದರೂ ಒಂದು ಸಾವಿರ ವರ್ಷವಾದರೂ ಬೇಕು. ಮೇಲ್ಮಣ್ಣು ರಚನೆಯಲ್ಲಿ ಸೂಕ್ಷ್ಮಾಣು ಜೀವಿಯ ಪಾತ್ರ ಬಹುಮುಖ್ಯ. ತೀರಾ ಕೆಳಗಿರುವ ಕರಿಶಿಲೆ ಪದರ ವಿಭಜಿಸಿ ಕೆಳ ಮಣ್ಣಿನ ಮೇಲ್ಭಾಗ ರಚನೆಯಾಗುತ್ತದೆ. ಇದಕ್ಕೆ ಸೂಕ್ಷಾ ಣುಗಳು ಸಾವಯವ ತ್ಯಾಜ್ಯಗಳನ್ನು ವಿಭಜಿಸಿ ಸೇರಿಸಿದಾಗ ಮೇಲ್ಮಣ್ಣು ರಚನೆಯಾಗುತ್ತದೆ. ಒಮ್ಮೆ ಇವು ನಾಶವಾದರೆ ಪರಿಪೂರ್ಣ ಪುನರುತ್ಥಾನ ಸಾಧ್ಯ ವಾಗದು. ಇದರಿಂದ ಮೇಲ್ಮಣ್ಣಿನ ರಚನೆ ಕಾರ್‍ಯವೂ ಸ್ಥಗಿತ ಗೊಳ್ಳುತ್ತದೆ. ಸಮರ್ಥ ಮೇಲ್ಮಣ್ಣು ಇಲ್ಲದೆಡೆ ಸಸ್ಯವೂ ಬೆಳೆಯುವುದಿಲ್ಲ. ಹೀಗಾಗಿ ನೀರು ಭೂಮಿಯೊಳಕ್ಕೆ ಇಂಗುವ ಪ್ರಮಾಣವೂ ಕುಸಿಯುತ್ತ ಕ್ರಮೇಣ ಆ ಪ್ರದೇಶ ಬರಡಾಗುತ್ತದೆ.
ಸಾಮಾನ್ಯವಾಗಿ ಗೆದ್ದಲಿನಂಥ ಜೀವಿಗಳು ಬೆಳಕಿನಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದ್ದರಿಂದ ಬೆಳಕು ಬರದಂತೆ ತಡೆಯಲು ಕೆಳಭಾಗದಿಂದ ಮಣ್ಣಿನ ಕಣಗಳನ್ನು ಕೊರೆದು ತಂದು ಮೇಲೆ ಗೂಡಿನಾಕಾರ ರಚಿಸಿಕೊಂಡಿರುತ್ತವೆ. ಹೀಗೆ ನೆಲ ಕೊರೆಯುವಾಗ ಅದು ಬೇರೆ ಬೇರೆ ದಿಕ್ಕಿನಲ್ಲಿ ಸಾಗಿ ಮಣ್ಣಿನ ಪದರು ತನ್ನಿಂದ ತಾನೇ ಹೂದಲಾಗುತ್ತದೆ. ಇದರಿಂದ ಮಳೆಗಾಲದಲ್ಲಿ ನೀರಿಂಗುವ ಪ್ರಕ್ರಿಯೆ ಇನ್ನೂ ಸುಲಭ. ಅದರಲ್ಲೂ ಗೆದ್ದಲುಗಳು ತನಿ ಮುಟ್ಟುವವರೆಗೂ ನೆಲವನ್ನು ಕೊರೆದಿರುತ್ತವೆ. ಹೀಗಾಗಿ ಇವು ಅಂತರ್ಜಲಕ್ಕೆ ನಿರ್ಮಿಸಿದ ಹೆದ್ದಾರಿ. ಈ ಹಿನ್ನೆಲೆಯಲ್ಲಿ ಇವೆಲ್ಲದರ ರಕ್ಷಣೆಗ ನಾವು ಟೊಂಕ ಕಟ್ಟಲೇಬೇಕು.
ಇನ್ನೂ ಕೃಷಿಯ ವಿಚಾರಕ್ಕೆ ಬಂದರೆ ಮೇಲ್ನೋಟಕ್ಕೆ ಅತ್ಯಂತ ಸುಂದರವಾಗಿ, ಹಚ್ಚ ಹಸುರಿನಿಂದ ಕಂಗೊಳಿಸುವ ಹೊಲ-ಗದ್ದೆಗಳು ಆಂತ ರ್ಯದಲ್ಲಿ ವಿನಾಶದ ಗುಣಗಳನ್ನು ಅಡಗಿಸಿಟ್ಟುಕೊಂಡಿವೆ ಎಂಬುದನ್ನು ಒಮ್ಮೆಲೆ ನಂಬಲಾಗದಿದ್ದರೂ ನಿಜ.
ಬೆಳೆಗಳಲ್ಲಿನ ಸಮತೋಲನದ ವಿಷಯದಲ್ಲಿ ನಾವು ಅತ್ಯಂತ ನಿರ್ಲಕ್ಷ್ಯವಹಿಸಿರುವುದೇ ಇದಕ್ಕೆ ಅತ್ಯಂತ ಪ್ರಮುಖ ಕಾರಣ. ಒಣಭೂಮಿಗೆ ಮಾತ್ರ ಹೊಂದಿಕೊಳ್ಳುವಂಥ ಶುಂಠಿಯಂಥ ಬೆಳೆಗಳು ಮಲೆನಾಡಿಗೂ ಕಾಲಿಟ್ಟಿವೆ. ಇದರ ಒಂದು ಮುಖ ಭೂಮಿಯನ್ನು ಬಂಜರಾಗಿಸುವುದಾ ದರೆ, ಇನ್ನೊಂದೆಡೆ ಶುದ್ಧ ನೀರಾವರಿ ಬೆಳೆಗಳು ಬಯಲು ಪ್ರದೇಶಕ್ಕೆ ವಲಸೆ ಹೋಗಿ ಅಲ್ಲಿ ಅವಾಂತರ ಸೃಷ್ಟಿಸುತ್ತಿವೆ. ಆಯಾ ಭೂ ಲಕ್ಷಣಗಳಿಗನುಗುಣವಾಗಿ ಬೆಳೆಗಳೂ ನಿರ್ಧರಿತವಾಗಿರುತ್ತವೆ. ಅಂಥ ವಿವೇಚನೆಯನ್ನು ಮೀರಿ ಬೆಳೆ ಆಯ್ಕೆ ಮಾಡಿಕೊಂಡಾಗ ಸಹಜವಾಗಿಯೇ ಪ್ರಕೃತಿಯ ಸಮತೋಲನ ತಪ್ಪುತ್ತದೆ.
ಅನುಮಾನವೇ ಇಲ್ಲ ಪ್ರಾಕೃತಿಕ ಸಮತೋಲನ ರಕ್ಷಣೆ ಯಲ್ಲಿ ಸಸ್ಯ ಪ್ರಭೇದಗಳ ಪಾತ್ರ ಅತ್ಯಂತ ಹಿರಿದು. ದ್ಯುತಿ ಸಂಶ್ಲೇಷಣ ಕ್ರಿಯೆಯ ಮೂಲಕ ಆಹಾರ ತಯಾರಿಸಿ ಕೊಳ್ಳುವ ಸಂದರ್ಭದಲ್ಲಿ ವಾತಾವರಣದಲ್ಲಿನ ಇಂಗಾಲಾಮ್ಲವನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ ಎಂಬುದನ್ನು ಪ್ರಾಥಮಿಕ ಶಾಲೆಗಳಲ್ಲೇ ಕಲಿತಿದ್ದೇವೆ. ಇದೇ ಸಮತೋಲನ. ಆದರಿಂದು ಇದನ್ನೂ ಮೀರಿ ಬಹುರೂಪಿ ಬೆಳೆಗಳ ಯೋಜನೆಗಳ ಸಂದರ್ಭ ದಲ್ಲಿ, ಹೈಬ್ರೀಡ್ ತಳಿಗಳ ಹೆಸರಲ್ಲಿ ವ್ಯವಸಾಯಕ್ಕಿಳಿದಿದ್ದು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಸುರಿಯದೇ ಕೃಷಿ ಮುಗಿಯುವುದೇ ಇಲ್ಲವೆಂಬ ಪರಿಸ್ಥಿತಿಗೆ ಬಂದು ತಲುಪಿದ್ದೇವೆ.
ಹಸುರು ಕ್ರಾಂತಿಯ ಓಟದಲ್ಲಿ ದಿನದಿಂದ ದಿನಕ್ಕೆ ಕೃಷಿ ಭೂಮಿ ವಿಸ್ತಾರಗೊಳ್ಳುತ್ತಿದೆ. ಮಾತ್ರವಲ್ಲ, ಇಳುವರಿಗಾಗಿ ಹೊಸ ಹೊಸ ತಳಿಗಳನ್ನು ಪರಿಚಯಿಸು ತ್ತಿದ್ದೇವೆ. ಮನಸ್ವೇಚ್ಛೆ ರಾಸಾಯನಿಕಗಳನ್ನು ಬಳಸುತ್ತಿದ್ದೇವೆ. ಸಾಂಪ್ರದಾಯಿಕ ತಳಿಗಳು ಕಣ್ಮರೆಯಾಗಿವೆ. ಅತಿ ಹೆಚ್ಚು ನೀರು ಬೇಡುವ (ನಿಜವಾಗಿ ಭತ್ತಕ್ಕೆ ಅಷ್ಟೊಂದು ನೀರು ಬೇಕಾಗಿಯೇ ಇಲ್ಲ. ಆ ಪ್ರಶ್ನೆ ಬೇರೆ) ಭತ್ತವನ್ನು ಒಣ ಭೂಮಿಯಲ್ಲೂ ಬೆಳೆಯಲು ಹವಣಿಸಿದ್ದೇವೆ. ಹೀಗಾಗಿ ನೀರು ಉಳಿಸಲು, ತೇವಾಂಶ ರಕ್ಷಣೆಗೆ ಮತ್ತೆ ಮತ್ತೆ ಯಂತ್ರಗಳಿಂದ ಭೂಮಿಯನ್ನು ಆಳದವರೆಗೆ ಉಳುಮೆ ಮಾಡುತ್ತಿರುವುದರಿಂದ ಭೂ ರಂಧ್ರಗಳು ಮುಚ್ಚಿ ಹೋಗಿ ಮಣ್ಣಿನಲ್ಲಿ ‘ಪಿಎಚ್’ ಅಂಶ ಕಡಿಮೆಯಾಗತೊಡಗಿದೆ. ಇದರಿಂದ ಭತ್ತದ ಗದ್ದೆಗಳಲ್ಲಿ ನಿಂತ ನೀರು ಆಮ್ಲಯುಕ್ತ ವಾಗಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತಿವೆ. ಇವು ನಿರಂತರವಾಗಿ ನೈಟ್ರಸ್ ಆಕ್ಸೈಡ್ ಕಾರುತ್ತಿರುತ್ತವೆ. ಈ ಹಂತದಲ್ಲಿ ಇಂಗಾಲ ಮತ್ತು ಸಾರಜನಕದ ಸಮತೋಲನ ತಪ್ಪಿ ವಾತಾವರಣಕ್ಕೆ ಆತಂಕ ಎದುರಾಗುತ್ತದೆ. ಇದರೊಂದಿಗೆ ಇಳುವರಿ ಹೆಚ್ಚಳಕ್ಕೆ ಬಳಸುವ ರಾಸಾಯನಿಕಗಳು ಅಮೋನಿಯಾವೆಂಬ ಕಾರ್ಕೋಟಕವನ್ನು ಹೊರಸೂಸುತ್ತವೆ. ಇದು ಇಡೀ ವಾತಾವರಣವನ್ನೇ ಬೆಂಕಿಯುಂಡೆಯಾಗಿಸುತ್ತಿದೆ.
ಅಲ್ಲಿಗೆ ‘ಹಸುರು ಮನೆ ಅನಿಲ’ವೆಂಬುದಷ್ಟನ್ನೂ ನಾವು ನಮ್ಮ ಬಗಲಲ್ಲೇ ಇಟ್ಟುಕೊಂಡು ಬರುತ್ತಿದ್ದೇವೆ ಎಂದಂತಾಯಿತು. ಅಷ್ಟಕ್ಕೂ ಏನಿದು ‘ಹಸುರು ಮನೆ’ ಪರಿಣಾಮ? ಭೂಮಿಯ ಮೇಲಿನ ಎಲ್ಲ ಬೆಳವಣಿಗೆಗಳಿಗೆ ಸೂರ್ಯ ಕಿರಣಗಳೇ ಕಾರಣವೆಂಬುದು ಗೊತ್ತು. ಆದರೆ ಸೂರ್ಯನಿಂದ ಹೊರಹೊಮ್ಮುವ ‘ಅತಿ ನೇರಳೆ ಕಿರಣ’ಗಳು ನೇರವಾಗಿ ಭೂಮಿಯನ್ನು ತಲುಪಿದರೆ ಇಲ್ಲಿನ ಜೀವಿಗಳಲ್ಲಿನ ಡಿಎನ್‌ಎ (ಜೀವಕೋಶಗಳ ಹಂದರ)ಯನ್ನು ಸಂಪೂರ್ಣ ಹೀರಿಬಿಡುತ್ತವೆ. ಇಂಥ ವಿಷಯುಕ್ತ ಕಿರಣಗಳಿಂದ ನಮ್ಮನ್ನು ರಕ್ಷಿಸಲೋಸುಗವೇ ಓಜೋನ್ ಎಂಬ ಅನಿಲ ಪರದೆಯನ್ನು ನಿಸರ್ಗ, ವಾತಾವರಣದಂಚಿನ ‘ಸ್ಟ್ರಾಟೋಸ್ಪಿಯರ್’ ಎಂದು ಗುರುತಿಸುವ ಜಾಗದಲ್ಲಿ ಕಟ್ಟಿಟ್ಟಿದೆ. ಇದು ಸೂರ್ಯನಿಂದ ಹೊರಸೂಸುವ ಅಪಾಯಕಾರಿ ಕಿರಣಗಳನ್ನು ಅರ್ಧದಲ್ಲೇ ತಡೆದು ಹಿಂದಕ್ಕೆ ಕಳುಹಿಸುತ್ತದೆ. ದುರಂತ ವೆಂದರೆ ಭೂಮಿಯಲ್ಲಿ ಉತ್ಪತ್ತಿಯಾಗುವ ಇಂಗಾಲದ ಡೈ ಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್ ಹಾಗೂ ಅಮೋನಿಯಾಗಳು ನೇರವಾಗಿ ‘ಸ್ಟ್ರಾಟೋಸ್ಪಿಯರ್’ ನ ಸನಿಹಕ್ಕೆ ಹೋಗಿನಿಂತು, ಓಜೋನ್ ಪದರದೊಂದಿಗೆ ಜಗಳಕ್ಕೆ ನಿಂತು ಅಪಾಯಕಾರಿ ಕಿರಣಗಳನ್ನು ಭೂಮಿಯತ್ತ ಸ್ವಾಗತಿಸಿಕೊಳ್ಳುತ್ತವೆ. ಇದೇ ‘ಗ್ರೀನ್ ಹೌಸ್’ ಪರಿಣಾಮ. ಒಂದು ಸಲ ಭೂಮಿಯ ವಾತಾವರಣದೊಳಕ್ಕೆ ಇಂಥ ಕಿರಣಗಳು ಪ್ರವೇಶಿಸಿದರೆ ಸಾಕು ಇಲ್ಲಿ ದಾಂಧಲೆ ಆರಂಭಿಸು ತ್ತವೆ. ವಾತಾವರಣದಲ್ಲಿನ ಉಷ್ಣಾಂಶ ಏರು ಪೇರಾಗುತ್ತದೆ. ಸಮುದ್ರ ಉಕ್ಕೇರುತ್ತದೆ. ಇಷ್ಟಾದರೆ ಮುಂದೆ ಏನು ಬೇಕಾದರೂ ಆಗಬಹುದು.
ಈಗ ಯೋಚಿಸಿ, ಅತಿ ನೀರು ಬಳಕೆಯ ಕೃಷಿ, ರಾಸಾಯನಿಕಗಳ ಮಿತಿ ಮೀರಿದ ಬಳಕೆ, ಅಂತರ್ಜಲದ ಅಪಹರಣ, ಕಾಡು ನಾಶ ಒಂದೇ ಎರಡೇ... ಭೂತಾಯಿಯ ಮೇಲೆ ನಾವು ನಡೆಸುತ್ತಿರುವ ದೌರ್ಜನ್ಯಕ್ಕೆ ಕೊನೆಯಿದೆಯೇ ? ಇಷ್ಟಾದರೂ ಆಕೆ ಕ್ಷಮಯಾ ಧರಿತ್ರಿ !

Thursday, November 6, 2008

ಬೊಮ್ಮಾಯಿಯವರೇ, ಒಮ್ಮೆ ತುಂಗಭದ್ರಾ ನಾಲೆ ನೋಡಿ ಪ್ಲೀಸ್ !


ಹಬ್ಬಾಸ್, ಕೊನೆಗೂ ನಮ್ಮ ಜಲಸಂಪನ್ಮೂಲ ಸಚಿವರೊಬ್ಬರು ತಮ್ಮ ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಅಪರೂಪಕ್ಕೆಂಬಂತೆ, ಅಪರೂಪ ಏನು ಬಂತು; ಇದೇ ಮೊದಲ ಬಾರಿಗೆ ರಾಜ್ಯದ ಸಚಿವರೊಬ್ಬರು ಕೃಷ್ಣಾ ನದಿ ನೀರಿನ ಹಂಚಿಕೆ ಸಂಬಂಧ ಪ್ರಾಕಾರದ ವಿಚಾರಣೆಯಲ್ಲಿ ಇಡೀದಿನ ಪಾಲ್ಗೊಂಡು ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ.
ನೀರಾವರಿ ಖಾತೆಯೆಂದರೆ ನಮ್ಮ ರಾಜಕಾರಣಿಯಲ್ಲಿ ‘ಸಮೃದ್ಧ ಒಳ ಹರಿವು’ ನಿಶ್ಚಿತ ಎಂಬ ಮನೋಭಾವವೇ ಹೆಚ್ಚಿರುವುದು ಹೊಸ ಸಂಗತಿಯೇನಲ್ಲ. ಆ ನಡುವೆಯೂ ಹಿಂದೆ ಎಚ್.ಕೆ.ಪಾಟೀಲ್, ಈಶ್ವರಪ್ಪ ಈ ಖಾತೆಯಲ್ಲಿ ಒಂದಷ್ಟು ಭರವಸೆ ಮೂಡಿಸಿದ್ದರು. ಆದರೆ ಅವರು ಹೇಳಿದ್ದರಲ್ಲಿ ಇಂಗಿದ್ದಕ್ಕಿಂತ ಹರಿದದ್ದೇ ಹೆಚ್ಚು. ಬಿಡಿ, ಮಿತಿಗಳಿರಬಹುದು. ಇದೀಗ ನೀರಿನ ಸಂಕಷ್ಟ ಎಂಬುದೇನೆಂಬುದನ್ನು ಖುದ್ದು ಅನುಭವಿಸಿ ಅರಿತ ಪ್ರದೇಶದ ಹಿನ್ನೆಲೆಯವರಾದ್ದರಿಂದಲೋ ಏನೋ, ಅಂತೂ ಬಸವರಾಜ ಬೊಮ್ಮಾಯಿ ಅವರಾದರೂ ಏನಾದರೂ ಮಾಡಿಯಾರು ಎಂಬ ನಿರೀಕ್ಷೆ ನಾಡಿಗರಲ್ಲಿ ಮೂಡಲಾರಂಭಿಸಿದೆ.
ದಿಲ್ಲಿಯಲ್ಲಿ ದಿನವಿಡೀ ಕೋರ್ಟ್ ಕಟಕಟೆಯಲ್ಲಿ ನಿಂತಿದ್ದ ಮಾತ್ರಕ್ಕೆ ಯೋಜನೆಗಳೆಲ್ಲ ತಂತಾನೇ ಅನುಷ್ಠಾನಗೊಂಡುಬಿಡುವುದಿಲ್ಲ ಬೊಮ್ಮಾಯಿಯವರೇ ! ಈ ಅರಿವು ತಮಗೂ ಇದ್ದಿರಬಹುದು. ಈ ಐದೂವರೆ ದಶಕದಲ್ಲಿ ರಾಜ್ಯದ ನೀರಾವರಿ ಎಂಬುದು ಬಹುತೇಕ ಒಡೆದ ಕಾಲುವೆ. ಒಂದು ಕಡೆ ಕಟ್ಟಿದರೆ, ಇನ್ನೊಂದು ಕಡೆ ಬಾಯ್ಬಿಟ್ಟುಕೊಳ್ಳುತ್ತದೆ. ತೀರಾ ಮೊನ್ನೆ ಮೊನ್ನೆ ಬಳ್ಳಾರಿ, ಕೊಪ್ಪಳ ಭಾಗಗಳಲ್ಲಿ ಸಂಚರಿಸಿದಾಗ ಹಾದಿಯುದ್ದಕ್ಕೂ ಅಲ್ಲಲ್ಲಿ ತುಂಗಭದ್ರಾ ಕಾಲುವೆಗಳ ದುಃಸ್ಥಿತಿಯ ದರ್ಶನವಾಯಿತು. ಹೂಳು ತುಂಬಿ, ಬಹುತೇಕ ದಂಡೆಗಳೆಲ್ಲ ಕುಸಿದು, ಪಾಚಿಗಟ್ಟಿ, ಗಿಡ-ಗಂಟಿಗಳು ಬೆಳೆದು ನಿಂತಿರುವ ನಿರ್ವಹಣೆಯಿಲ್ಲದ ಕಾಲುವೆಯ ಸ್ಥಿತಿ ಕಂಡಾಗ ನಮ್ಮ ನೀರಾವರಿ ಯೋಜನೆಗಳೂ ಹೀಗೆಯೇ ಇವೆಯಲ್ಲ ಎಂದೆನಿಸಿದ್ದು ಸುಳ್ಳಲ್ಲ.
ಸನ್ಮಾನ್ಯ ಸಚಿವರೇ, ಹೀಗೆ ಒಮ್ಮೆ ಕಣ್ಣಾಡಿಸಿ ನೋಡಿ. ನಮ್ಮಲ್ಲಿ ಎಷ್ಟೊಂದು ನೀರಾವರಿಯ ಅವಕಾಶಗಳಿವೆ. ನೀವು, ನಿಮ್ಮಂಥವರು ರೂಪಿಸಿ, ಕೆಲವನ್ನು ಅರ್ಧಂಬರ್ಧ ಮಾಡಿ ಬಿಟ್ಟು ಹೋಗಿರುವ ಎಷ್ಟೋ ಯೋಜನೆಗಳು ನಾಡಿನುದ್ದಕ್ಕೂ ನಿಂತಿವೆ. ಇವೆಲ್ಲವೂ ಸಾಕಾರಗೊಂಡದ್ದೇ ಆದಲ್ಲಿ (ಅಂಥ ಇಚ್ಛಾಶಕ್ತಿ ಸರಕಾರಕ್ಕೆ ಪುಣ್ಯವಶಾತ್ ಬಂದರೆ, ಅಕಾರಿಗಳೂ ಅಪ್ಪಿತಪ್ಪಿ ಕೆಲಸ ಮಾಡಿಬಿಟ್ಟರೆ) ಈ ನೆಲಕ್ಕೆ ಬರವೆಂದರೆ ಏನೆಂಬುದೇ ಗೊತ್ತಾಗಲಿಕ್ಕಿಲ್ಲ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶವೆಂದರೆ ಬರೀ ಒಡೆದ ಕಾಲುವೆಯ ಚಿತ್ರಣವೇ ಕಾಣುತ್ತದೆ. ಬಹುಶಃ ಇವುಗಳ ರಿಪೇರಿಗೆ ಮಾಡಿದ ಖರ್ಚಿನಲ್ಲಿ ಹತ್ತಾರು ಅಣೆಕಟ್ಟುಗಳನ್ನು ಕಟ್ಟಿ ಬಿಡಬಹುದಿತ್ತೇನೋ. ಕೆ.ಸಿ.ರೆಡ್ಡಿ, ಟಾರ್ ಸ್ಟೀಲ್ ಫೌಂಡೇಷನ್ ತಜ್ಞರು, ಕ್ಯಾಪ್ಟನ್ ರಾಜಾರಾವ್ ಸಮಿತಿ-ಹೀಗೆ ಕಳೆದ ಎರಡೂವರೆ ದಶಕಗಳಲ್ಲಿ ಐದು ತಜ್ಞರ ಸಮಿತಿಗಳು ರಚನೆಗೊಂಡು, ಅವೆಲ್ಲ ಶಿಫಾರಸು ಸಲ್ಲಿಸಿವೆ. ಆದರೆ ಎಡ-ಬಲದಂಡೆ ನಾಲೆಗಳು ಹಾಗೆಯೇ ಸೋರುತ್ತಿವೆ. ವರದಿ ಸರಕಾರದೆದುರು ಧೂಳು ತಿನ್ನುತ್ತಿದೆ.
ಕೊನೆಯ ಬಾರಿಗೆ ತಜ್ಞ ಚಿನಿವಾಲ ನೇತೃತ್ವದ ಸಮಿತಿ ವರದಿ ಸಲ್ಲಿಸಿತ್ತು. ಅಷ್ಟರಲ್ಲಿ ಧರ್ಮಸಿಂಗ್ ಸರಕಾರ ಉರುಳಿಬಿತ್ತು. ಒಟ್ಟಾರೆ ೮೪೦ ಕೋಟಿ ರೂ. ವಿನಿಯೋಗಿಸಿ ೪ ವರ್ಷಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸಮಗ್ರ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಬೇಕೆಂದು ತಜ್ಞರು ಶಿಫಾರಸು ಮಾಡಿ ಎರಡೂವರೆ ವರ್ಷಗಳಾದವು. ದುರಂತವೆಂದರೆ ನಂತರ ಜಲಸಂಪನ್ಮೂಲ ಸಚಿವರಾದ ಈಶ್ವರಪ್ಪನವರು ಈ ವರದಿಯತ್ತ ಕಣ್ಣೆತ್ತಿಯೂ ನೋಡಲಿಲ್ಲ. ಎಡ, ಬಲ ಹಾಗೂ ಬಲ ಭಾಗದ ಕೆಳದಂಡೆ ಮುಖ್ಯ ಕಾಲುವೆಗಳ ಒಳ ಮೈ ಸಂಪೂರ್ಣ ಜೀರ್ಣಗೊಂಡು ಹೋಗಿದೆ. ಇವುಗಳ ನವೀಕರಣ ಆಗಬೇಕು. ಉದ್ದಕ್ಕೂ ಬೆಳೆದ ಜೊಂಡು, ಹೂಳುಗಳ ವಿಲೇವಾರಿ ಆಗಬೇಕು. ಉಪ ಕಾಲುವೆಗಳು ಹಾಗೂ ತೂಬುಗಳು ಸರಿಯಾಗಬೇಕು. ಹೊಲಗಾಲುವೆಗಳಿಂದಲೇ ವರ್ಷಕ್ಕೆ ಏನಿಲ್ಲವೆಂದರೂ ೨೫ ಟಿಎಂಸಿ ನೀರು ಪೋಲಾಗುತ್ತಿದೆ. ಇದನ್ನು ಸರಿಪಡಿಸಬೇಕು. ಕಾಲುವೆಯ ಅಚ್ಚುಕಟ್ಟಿನವರ ನಡುವೆ ಸಾಮರಸ್ಯ ಮೂಡಿಸಬೇಕು...ಒಂದೇ ಎರಡೇ...ಕೆಲಸದ ಹೊರೆಯೇ ಈ ಒಂದು ಯೋಜನೆಯ ಅಚ್ಚುಕಟ್ಟಿಲ್ಲಿದೆ.
ಸಚಿವರೇ, ದಯಮಾಡಿ ನೀವೇ ಒಮ್ಮೆ ಅಲ್ಲಿಗೆ ಹೋಗಿ ನೋಡಿ ಬನ್ನಿ. ಆಗ ಮಾತ್ರ ಅರ್ಥವಾದೀತು ಅಲ್ಲಿನ ಕಾಲುವೆಗಳ ದುಃಸ್ಥಿತಿ. ಕಾಲುವೆಯ ಪರಿಸ್ಥಿತಿ ಹೀಗಾದರೆ ಇನ್ನು ತುಂಗಭದ್ರಾ ಜಲಾಶಯದ ಸ್ಥಿತಿ ಹೇಗಿರಬೇಡ ? ಖಂಡಿತಾ ಅದೂ ನಿರ್ವಹಣೆಯನ್ನು ಬೇಡುತ್ತಿದೆ. ಜಲಾಶಯದಲ್ಲಿ ೩೧ ಟಿಎಂಸಿ ಅಡಿಯಷ್ಟು ಬರಿ ಹೂಳೇ ತುಂಬಿದೆ. ಅದನ್ನು ತೆಗೆದು ಸೂಕ್ತವಾಗಿ ವಿಲೇವಾರಿ ಮಾಡಿದರೆ ಅರ್ಧ ಸಮಸ್ಯೆ ಪರಿಹಾರವಾದೀತು. ಇದಕ್ಕೆ ಪೂರಕವಾಗಿ ತುಂಗಭದ್ರಾ ಎಡ-ಬಲದಂಡೆ ವ್ಯಾಪ್ತಿಯಲ್ಲಿ ಸಮತೋಲನ ಜಲಾಶಯಗಳನ್ನು ನಿರ್ಮಿಸುವುದು ಸೂಕ್ತ.
ಇದಿಷ್ಟಾದರೆ, ಇನ್ನು ಮುಂಡರಗಿ ಹಾಗೂ ಗದಗ, ಬಳ್ಳಾರಿ ಜಿಲ್ಲೆ ಹೂವಿನಹಡಗಲಿ, ಕೊಪ್ಪಳ ತಾಲೂಕುಗಳ ೧.೧೮ ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಮುಕ್ಕಾಲು ಭಾಗದಿಂದ ಮೇಲೆ ಏರುತ್ತಲೇ ಇಲ್ಲ. ೬೩ ಕೋಟಿ ರೂ. ವೆಚ್ಚದಲ್ಲಿ ೧೯೯೨ರಲ್ಲಿ ಪ್ರಾರಂಭವಾದ ಯೋಜನೆಯ ವೆಚ್ಚ ಇಂದು ಮೂರುಪಟ್ಟಿಗೂ ಹೆಚ್ಚು ಮೀರಿದೆ. ಇನ್ನಾದರೂ ಸಿಂಗಟಾಲೂರು ವಿಸ್ತೃತ ಏತ ನೀರಾವರಿ ಯೋಜನೆ ತ್ವರಿತ ಅನುಷ್ಠಾನಗೊಳ್ಳಬೇಕು.
ಈ ಭಾಗದಲ್ಲಿ ‘ಬೇಕು’ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೃಷ್ಣಾ ಬಿ ಸ್ಕೀಮ್‌ನಡಿ ಹಂಚಿಕೆಯಾಗುವ ನೀರಿನಲ್ಲಿ ಕುಷ್ಟಗಿ, ಯಲಬುರ್ಗಾ ತಾಲೂಕುಗಳಿಗೆ ಪಾಲು ನೀಡಲು ಮನ ಮಾಡಬೇಕು. ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಕೂಡ್ಲಿಗಿ ತಾಲೂಕು ಗಡಿ ಹಳ್ಳಿಗಳ ಸೇರಿಸಬೇಕು. ನಾರಾಯಣಪೂರ ಬಲದಂಡೆ ಮುಖ್ಯ ಕಾಲುವೆಯ ಪರಿಶೀಲನೆಗೆ ಮುಂದಾಗಬೇಕು. ಕಾಲುವೆಯನ್ನು ೯೫ ರಿಂದ ೧೫೭ನೇ ಕಿ.ಮೀ.ಗೆ ವಿಸ್ತರಿಸಬೇಕು. ತುಂಗಭದ್ರಾ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಮಧ್ಯೆ ಸಂಪರ್ಕ ಕಾಲುವೆ ನಿರ್ಮಿಸಬೇಕು. ನಂದವಾಡಗಿ ಹಾಗೂ ರಾಯಚೂರು ಬೃಹತ್ ಏತ ನೀರಾವರಿ ಯೋಜನೆಗಳನ್ನು ಆರಂಭಿಸಬೇಕು. ರಾಜೋಳಿಬಂಡಾ ತಿರುವು ಯೋಜನೆಯ ಅಣೆಕಟ್ಟೆ ಎತ್ತರ ಹೆಚ್ಚಿಸಬೇಕು....ಉಫ್, ಎನೆಲ್ಲ ಆಗಬೇಕಿದೆ ನೋಡಿ.
ಅಲ್ಲಿಂದ ಸ್ಪಲ್ಪ ಬಾಗಲಕೋಟ- ವಿಜಾಪುರದತ್ತ ಹೊರಳಿದರೆ ಹೇಳಿಕೊಳ್ಳಲಿಕ್ಕೆ ವಿಶ್ವವಿಖ್ಯಾತ ಆಲಮಟ್ಟಿ ಜಲಾಶಯ ನಿಂತಿದೆ. ಅದರ ಭವ್ಯತೆ, ಅಗಾಧತೆಯ ಎದುರು ಎಂಥವರೂ ಮೂಕವಿಸ್ಮಿತರಾಗಬೇಕು. ಆದರೇನು, ಅವಳಿ ಜಿಲ್ಲೆಗಳಿಗೆ ಇದರ ಮೂಲಕ ಸಮಗ್ರ ನೀರಾವರಿಯಾಗಬೇಕೆಂಬ ದಶಕದ ಕನಸು ಕೂಡಿ ಬರಲೇ ಇಲ್ಲ.
ಹೌದು, ಜಿಲ್ಲೆಯ ಅಂದಾಜು ೮.೨೦ ಲಕ್ಷ ಹೆಕ್ಟೇರ್ ಕೃಷಿಭೂಮಿಯ ಪೈಕಿ ೬ ಲಕ್ಷ ಹೆಕ್ಟೇರ್‌ಗೆ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದ ನೀರುಣಿಸಬಹುದಾದ ಯಾವುದೇ ಯೋಜನೆ ಪೂರ್ಣಗೊಂಡಿಲ್ಲ. ಮುಳವಾಡ, ಚಿಮ್ಮಲಗಿ, ಗುತ್ತಿಬಸವಣ್ಣ ಏತ ನೀರಾವರಿ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆ ಯೋಜನೆಗಳು ಎಷ್ಟು ದಿನಗಳಿಂದ ನನೆಗುದಿಗೆ ಬಿದ್ದಿವೆ ಗೊತ್ತೆ ? ಅಷ್ಟಾಗಿಯೂ ಕೃಷ್ಣಾ ‘ಬಿ’ ಸ್ಕೀಂ ನೀರು ನಮಗೆ ಬಿಸಿಲ್ಗುದುರೆ ಆಗುತ್ತಲೇ ಇದೆ. ಬಾಗಲಕೋಟ ಜಿಲ್ಲೆಯ ಮರೋಳ ಏತ ನೀರಾವರಿ ಯೋಜನೆ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಕೊನೆ ಪಕ್ಷ ಕೆರೆತುಂಬುವ ಯೋಜನೆಯನ್ನಾದರೂ ಅನುಷ್ಠಾನಗೊಳಿಸಿ ಎಂದು ಅವಳಿ ಜಿಲ್ಲೆಗಳವರು ಕೇಳುತ್ತ ಬಂದು ಐದಾರು ವರ್ಷಗಳೇ ಕಳೆದವು. ಮೇಲಿಂದ ಮೇಲೆ ಯೋಜನೆಯ ಟೆಂಡರ್ ರದ್ದಾಗುತ್ತಲೇ ಇದೆಯೇ ವಿನಃ ಕೆರೆ ತುಂಬಲು ಮುಹೂರ್ತ ಬಂದಿಲ್ಲ.
ಬೊಮ್ಮಾಯಿಯವರೇ, ಇದೆಲ್ಲ ಬಿಟ್ಟು ನಿಮ್ಮ ಅಕ್ಕ ಪಕ್ಕದ ಜಿಲ್ಲೆಗಳತ್ತ ಬಂದರೆ ಮಲಪ್ರಭಾ, ಘಟಪ್ರಭಾ, ಹಿಪ್ಪರಗಿ, ದೂಧಗಂಗಾ, ಹರಿನಾಲಾ, ಕಳಸಾ-ಬಂಡೂರಿ ನಾಲಾ ತಿರುವು ಮತ್ತು ಮಾರ್ಕಂಡೇಯ ಹೀಗೆ ಯೋಜನೆಗಳ ಸರಣಿಯೇ ನಿಮಗಾಗಿ ಕಾಯುತ್ತಿದೆ. ಹಿರಣ್ಯಕೇಶಿ, ಬಳ್ಳಾರಿ ನಾಲಾ, ಶ್ರೀ ರಾಮೇಶ್ವರ ಮತ್ತು ಜವಳುಹಳ್ಳ ಹೀಗೆ ಯಾವುದೂ ಪೂರ್ಣಗೊಂಡಿಲ್ಲ.
ಮಹಾದಾಯಿ ನದಿ ಕೊಳ್ಳದಲ್ಲಿ ಬರೋಬ್ಬರಿ ೨೦೦ ಟಿಎಂಸಿ ನೀರಿದೆ. ಇದಕ್ಕಿರುವ ಗೋವಾದ ತಗಾದೆ ತಣ್ಣಗಾಗಿಸುವ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನ ಮಾಡುತ್ತಿದ್ದೀರಿ. ಅದು ಚುರುಕುಗೊಳ್ಳಬೇಕು. ೪.೪. ಕಿಮೀ ಉದ್ದದ ಕಳಸಾ ನಾಲೆಯಿಂದ ೩ ಟಿಎಂಸಿ ನೀರು ಸಿಗಲಿದೆ. ೪.೯ ಕಿಮೀ ಉದ್ದದ ಬಂಡೂರಿ ನಾಲಾ ಜೋಡಣೆಯಿಂದ ೩.೫೬ ಟಿಎಂಸಿ ನೀರು ದೊರೆಯುತ್ತದೆ. ಯೋಜನೆ ಅನುಷ್ಠಾನಗೊಂಡರೆ ಬೆಳಗಾವಿ, ಸವದತ್ತಿ, ಬೈಲಹೊಂಗಲ, ರಾಮದುರ್ಗ, ಹುಬ್ಬಳ್ಳಿ-ಧಾರವಾಡ, ನವಲಗುಂದ, ನರಗುಂದ, ಬದಾಮಿ ಒಳಗೊಂಡು ನಾಲ್ಕು ಜಿಲ್ಲೆಗಳ ೧೨ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂಬುದನ್ನು ಮತ್ತೆ ನೆನಪಿಸಬೇಕಿಲ್ಲ.
ಅಲ್ಲಿಂದ ಇನ್ನೂ ಕೆಳಗಿಳಿದರೆ ನೀರಾವರಿ ವಿಷಯದಲ್ಲಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆ ವಂಚನೆಯಾಗಿದೆ ಎಂಬುದನ್ನು ಒಪ್ಪಲೇ ಬೇಕು. ದಶಕ ಕಳೆದರೂ ತುಂಗಾ ಮೇಲ್ದಂಡೆ ಯೋಜನೆ ದಡ ಹತ್ತುತ್ತಲೇ ಇಲ್ಲ. ಯೋಜನೆಯಿಂದ ಜಿಲ್ಲೆಯ ೯೦ ಸಾವಿರ ಎಕರೆಗೂ ಹೆಚ್ಚು ಭೂಮಿ ನೀರಾವರಿಗೆ ಒಳಪಡಲಿದೆ. ಹೀಗೆಯೇ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರ ಯೋಜನೆ, ಹಾನಗಲ್ಲದ ಬಸಾಪುರ ಏತ ನೀರಾವರಿ ಯೋಜನೆ, ಶಿಗ್ಗಾವಿಯ ನಾಗನೂರು ಕೆರೆ ನೀರಾವರಿ ಯೋಜನೆ, ಸವಣೂರಿನ ಮೋತಿ ತಲಾಬ ಯೋಜನೆಗಳು ನನೆಗುದಿಗೆ ಬಿದ್ದಿವೆ.
ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ಬಚಾವತ್ ಎ ಸ್ಕೀಂನಲ್ಲಿ ನೀರು ಹರಿಸಿ ಶಾಶ್ವತ ನೀರಾವರಿ ಕಲ್ಪಿಸಬೇಕೆಂಬ ಬೇಡಿಕೆಯಾಗಲೀ, ಈ ಸಂಬಂಧ ನಡೆಯುತ್ತಿರುವ ಧರಣಿ, ಪ್ರತಿಭಟನೆಗಳಾಗಲೀ ಹೊಸ ಸರಕಾರದ ಗಮನಕ್ಕೆ ಬಂದಂತಿಲ್ಲ. ಹಿರಿಯೂರು ತಾಲೂಕಿನ ಧರ್ಮಪುರ ಕೆರೆಗೆ ಫೀಡರ್ ಕಾಲುವೆ ನಿರ್ಮಿಸಿ ‘ಸುವರ್ಣಮುಖಿ’ಯಿಂದ ನೀರು ಹರಿಸಿದರೆ ಸಾಕು, ಬರಡು ಭೂಮಿಯಲ್ಲಿ ಬಂಗಾರ ಬೆಳೆದೀತು.
ಉಡುವಳ್ಳಿ ಕೆರೆಯ ಪೂರಕನಾಲೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ೨೨ ಕೆರೆ ಏತ ನೀರಾವರಿ, ಚನ್ನಗಿರಿ ತಾಲೂಕಿನ ಉಬ್ರಾಣಿ ಏತ ನೀರಾವರಿ ಹಾಗೂ ಹರಪನಹಳ್ಳಿ ತಾಲೂಕಿನ ಗರ್ಭಗುಡಿ ಬ್ಯಾರೇಜ್ ಯೋಜನೆ ಪೂರ್ಣಗೊಂಡರೆ ದಾವಣಗೆರೆ ಜಿಲ್ಲೆ ಸುಭಿಕ್ಷವಾಗುತ್ತದೆ. ದಾವಣಗೆರೆ, ಹರಪನಹಳ್ಳಿ ಹಾಗೂ ಜಗಳೂರು ತಾಲೂಕಿನ ೨೨ ಕೆರೆಗಳಿಗೆ ಭದ್ರಾ ನದಿಯಿಂದ ನೀರುಣಿಸುವ ಕಾಮಗಾರಿ ಆಡಳಿತಾತ್ಮಕ ಮಂಜೂರಿಯಿಂದ ಮುಂದೆ ಹೋಗಿಲ್ಲ. ೯೧೫ ಕೋಟಿ ರೂ. ವೆಚ್ಚದಲ್ಲಿ ಆರಂಭಿಸಿದ ಭದ್ರಾ ಜಲಾಶಯ ನಾಲೆ ಆಧುನೀಕರಣದ ಶೇ.೭೨ ಕಾಮಗಾರಿ ಬಾಕಿ ಇದೆ. ಮಧ್ಯ ಕರ್ನಾಟಕದಿಂದ ಮೇಲೆಯೇ ಇಷ್ಟೆಲ್ಲ ಇದೆ. ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಭಾಗಗಳದ್ದು ಇನ್ನೊಂದು ಬೃಹತ್ ಅಧ್ಯಾಯ.
ಸನ್ಮಾನ್ಯ ಸಚಿವರೇ, ಸಿಕ್ಕ ಐದು ವರ್ಷಗಳ ಅಕಾರಾವಯಲ್ಲಿ ಈ ಮೇಲಿನ ಪಟ್ಟಿಯಲ್ಲಿ ಹೊಸದೇನನ್ನೂ ಮಾಡುವುದು ಬೇಡ. ಕೊನೇ ಪಕ್ಷ , ಇದ್ದುದನ್ನು ಸರಿ ಮಾಡಲು ಮುಂದಾದರೆ. ನಿಮ್ಮನ್ನು ನಾಡಿನ ಜನ ಕೊನೆತನಕ ತಣ್ಣಗೆ ನೆನೆದಾರು.


‘ಲಾಸ್ಟ್’ಡ್ರಾಪ್: ಸಚಿವರೇ, ಇದಾವುದು ಆಗದಿದ್ದರೂ ತುಂಗಭದ್ರಾ ನಾಲೆಯ ದುಸ್ಥಿತಿಯನ್ನೊಮ್ಮೆ ನೋಡಿ ಬನ್ನಿ ಪ್ಲೀಸ್, ಅಷ್ಟಾದರೂ ಮಾಡುತ್ತೀರಲ್ವಾ?

Sunday, November 2, 2008

ಬಾವಿಗಳ ಬಗೆಗೇಕೆ ಈ ಭೇದ ಭಾವ ?

ಗುಲ್ಬರ್ಗ ನಗರವನ್ನು ಇಂದು ನೀವು ಪ್ರವೇಶಿಸಿದರೆ ಅಲ್ಲೊಂದು ಯುದ್ಧದ ಮರುದಿನದ ಚಿತ್ರಣ ತೆರೆದುಕೊಳ್ಳುತ್ತದೆ. ದಂಡು ದಾಳಿಗೊಳಗಾಗಿ ಸಂಪೂರ್ಣ ಅಸ್ತವ್ಯಸ್ತಗೊಂಡ ನಗರವೊಂದು ಹೇಗಿರಬಹುದೋ ನೂರಕ್ಕೆ ನೂರು ಅದೇ ದೃಶ್ಯ. ಮುಖ್ಯರಸ್ತೆಯಲ್ಲಿ ಸಾಗಿದರೆ ಅರ್ಧಂಬರ್ಧ ಕುಸಿದ ಕಟ್ಟಡಗಳು, ಎಲ್ಲೆಂದರಲ್ಲಿ ಮಣ್ಣು-ಇಟ್ಟಿಗೆಗಳ, ಕಸ-ಕಡ್ಡಿಯ ರಾಶಿ....ರಸ್ತೆ ವಿಸ್ತರಣೆಯ ಹೆಸರದಕ್ಕೆ. ನಗರೀಕರಣದ ಇನ್ನೊಂದು ಮುಖವಿದು. ಅಂಗಡಿ-ಮುಂಗಟ್ಟು, ಮನೆ-ಮಠ, ಗುಡಿ-ಗುಂಡಾರ ಹೀಗೆ ಎಲ್ಲವೂ ರಸ್ತೆಗಾಗಿ ಹಿಂದಕ್ಕೆ ಸರಿದು ನಿಂತಿವೆ.
ಬಿಡಿ, ಆಧುನಿಕ ಅನಿವಾರ್ಯಗಳಿಗೆ ಯಾರೂ ಹೊರತಲ್ಲ. ವಿಷಯ ಅದಲ್ಲ. ಇಷ್ಟೆಲ್ಲ ಭರಾಟೆಯ ನಡುವೆ ಸುಂದರ, ಪುರಾತನ ಬಾವಿಯೊಂದರ ಕೀರಲು ಸ್ವರ ಯಾರಿಗೂ ಕೇಳಿಸುತ್ತಲೇ ಇಲ್ಲ ಎಂಬುದು ಬೇಸರದ ಸಂಗತಿ. ಹಾಗೆ ನೋಡಿದರೆ ಗುಲ್ಬರ್ಗದಲ್ಲಿ ಬಾವಿಗಳು ಚೀರಲು ಆರಂಭಿಸಿ ಸಾಕಷ್ಟು ವರ್ಷಗಳೇ ಆಗಿ ಹೋದವು. ಹಾಗೆನ್ನುವುದಕ್ಕಿಂತ ಇಡೀ ನಗರಕ್ಕೆ ನೀರಾಶ್ರಯವಾಗಿ ನಿಂತಿದ್ದ ನೂರಾರು ಬಾವಿಗಳಲ್ಲಿ ಇಂದು ಉಳಿದಿರುವವು ಎಂಟತ್ತು ಅಷ್ಟೇ. ಹಾಗೆ ಅಳಿದುಳಿದವಲ್ಲಿ ಲಾಲ್‌ಗೇರಿ ಬಡಾವಣೆಯಲ್ಲಿರುವ ಈ ಬಾವಿಗೊಂದು ವಿಶೇಷ ಮಹತ್ವವಿದೆ. ಅಲ್ಲಿನವರು ಅದನ್ನು ಗುರುತಿಸಿದ್ದಾರೋ, ಇಲ್ಲವೋ ಗೊತ್ತಿಲ್ಲ. ಅದು ಸಾಮಾನ್ಯ ಬಾವಿಯಂತೂ ಅಲ್ಲ.
ಒಂದಿಡೀ ನಗರವನ್ನೇ ಎತ್ತಿ ಪಕ್ಕಕ್ಕೆ ಸರಿಸಿ ಅತ್ಯಾಧುನಿಕ ರಸ್ತೆ ಮಾಡ ಹೊರಟಿರುವಾಗ ಒಂದು ಪುಟ್ಟ ಬಾವಿಯನ್ನು ನೋಡುತ್ತ ಕುಳಿತುಕೊಳ್ಳಲಾದೀತೇ ? ಎಂಬ ಧೊರಣೆ ಬಹುತೇಕ ಎಲ್ಲರಲ್ಲೂ ಇದ್ದಂತಿದೆ. ಈ ಬಗ್ಗೆ ಗೆಳೆಯ ರವೀಂದ್ರ ದೇಸಾಯಿಗೆ ಏನೋ ಹಳಹಳಿ. ಇನ್ನೇನು ವಾರೊಪ್ಪತ್ತಿನಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡು ಬಿಡಬಹುದಾದ ಆ ಬಾವಿಯ ಅಂತಿಮ ದರ್ಶನವನ್ನಾದರೂ ಪಡೆದುಕೊಂಡು ಬರೋಣವೆಂದುಕೊಂಡು ದೇಸಾಯಿಯವರ ಬೆನ್ನುಹಿಡಿದು ಹೊರಟದ್ದೇ ತಪ್ಪಾಯಿತೇನೋ? ಕೊನೇ ಪಕ್ಷ ಅದನ್ನು ಸ್ಮಾರಕವನ್ನಾಗಿಯಾದರೂ ಉಳಿಸಿಕೊಳ್ಳಲಾಗುತ್ತಿಲ್ಲವಲ್ಲ ಎಂಬ ಅಪರಾಧ ಪ್ರಜ್ಞೆ ಕಾಡಲಾರಂಭಿಸಿದೆ.
ನಾಡಿನ ಯಾವುದೇ ಮೂಲೆಗೆ ಹೋಗಿ ನೋಡಿ. ಬಾವಿಗಳಿಲ್ಲದ ಊರು ಸಿಗುವುದೇ ಇಲ್ಲ. ಪಾರಂಪರಿಕ ನೀರು ನಿರ್ವಹಣಾ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಬಾವಿಗಳಿಗೆ ಅದರದೇ ಆದ ಮಹತ್ವವಿದೆ. ಶತಶತಮಾನಗಳಿಂದ ಜನಜೀವನವನ್ನು ಪೊರೆಯುತ್ತಿರುವ ಬಾವಿಗಳ ಬಗ್ಗೆ ಅದೇಕೋ ಒಂದು ದಿವ್ಯ ನಿರ್ಲಕ್ಷ್ಯ ಭಾವ ನಮ್ಮಲ್ಲಿ ಮನೆ ಮಾಡುತ್ತಿದೆ.
ಬಾವಿಗಳ ಇತಿಹಾಸ ಹುಡುಕುತ್ತ ಹೊರಟರೆ ಕನಿಷ್ಠ ಸಾವಿರ ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ನಾಗರಿಕತೆಯ ಅನಿವಾರ್ಯಗಳಲ್ಲಿ ಒಂದಾಗಿದ್ದ ಬಾವಿಗಳನ್ನು ಅವಲಂಬಿಸಿಯೇ ಕೃಷಿ ಸೇರಿದಂತೆ ಎಲ್ಲ ದೈನಂದಿನ ಚಟುವಟಿಕೆಗಳು ನಡೆಯುತ್ತಿದ್ದವು ಎಂದರೆ ಇಂದಿನ ಬೃಹತ್ ನೀರಾವರಿ ಯೋಜನೆಗಳ ದಿನಗಳಲ್ಲಿ ಅಚ್ಚರಿ ಎನಿಸಬಹುದು. ಒಂದು ಊರೆಂದರೆ ಅಲ್ಲೊಂದು ಕೆರೆ, ಅದರ ಸುತ್ತಮುತ್ತ ಕನಿಷ್ಠ ನೂರು ಬಾವಿಗಳು ನಿರ್ಮಾಣಗೊಂಡಿರುತ್ತಿದ್ದವು. ಹೆಚ್ಚೆಂದರೆ ೨೫ ರಿಂದ ೩೦ ಅಡಿಗಳ ಆಳದಲ್ಲಿ ಬಾವಿಗಳಿಂದ ನೀರೆತ್ತಿ ಉಪಯೋಗಿಸಲಾಗುತ್ತಿತ್ತು. ತೀರಾ ಇತ್ತೀಚಿನ ದಿನಗಳವರೆಗೂ ಇದೇ ಪರಿಸ್ಥಿತಿ ಇತ್ತು. ಬಹುಶಃ ೮೦ರ ದಶಕದಲ್ಲಿ ರಾಜ್ಯವನ್ನು ಬಿಟ್ಟೂ ಬಿಡದೇ ಕಾಡಿದ ಬರದ ಬಳಿಕ ಬಾವಿಗಳಿಗೂ ಗ್ರಹಚಾರ ಆರಂಭವಾಯಿತೇನೊ ?
೧೯೮೦ರ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಸುಮಾರು ೪ ಲಕ್ಷ ಬಾವಿಗಳಿದ್ದವು. ಈ ಪೈಕಿ ಮೂರೂವರೆ ಲಕ್ಷದಷ್ಟು ನೀರಾವರಿಗೋಸ್ಕರವೇ ತೋಡಿದ್ದು. ಉಳಿದ ಐವತ್ತು ಸಾವಿರ ಬಾವಿಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಒಂದು ಕಾಲದಲ್ಲಿ ಗುಲ್ಬರ್ಗ ಸುತ್ತಮುತ್ತಲಿನ ಬಾವಿಗಳು ಅತ್ಯಂತ ಪ್ರಖ್ಯಾತವಾಗಿದ್ದವು. ಜಿಲ್ಲೆಯ ಶಹಾಪುರ, ಸುರಪುರಗಳು ರಾಜಾಡಳಿತರ ಕಾಲಕ್ಕೆ ಒಳಪಟ್ಟ ಸಂದರ್ಭದಲ್ಲಿ ಅತ್ಯಂತ ವೈಜ್ಞಾನಿಕವಾಗಿ ಬಾವಿಗಳ ನಿರ್ಮಾಣ ನಡೆದಿದ್ದವು ಎನ್ನುತ್ತದೆ ಇತಿಹಾಸ. ಅಲ್ಲಿನ ಸುಣ್ಣದ ಕಲ್ಲುಗಳು ನೀರನ್ನು ಹೀರಿಕೊಳ್ಳುವ ವಿಶೇಷ ಗುಣಗಳನ್ನು ಹೊಂದಿವೆ. ಇಂಥ ಕಲ್ಲುಗಳನ್ನು ಅಗೆದು ತೆಗೆಯುತ್ತ ಹೋದರೆ ಅವುಗಳ ಕೆಳಗೆ ಸಮೃದ್ಧ ನೀರ ಸೆಲೆ ನಲಿದಾಡುತ್ತದೆ. ಇದನ್ನೇ ಕಂಡುಕೊಂಡಿದ್ದ ಆಗಿನ ಆಳರಸರು, ನೂರಾರು ಬಾವಿಗಳನ್ನು ನಿರ್ಮಿಸಿ ನೀರು ನಿರ್ವಹಣೆಯಲ್ಲಿ ಜಾಣ್ಮೆ ಮೆರೆದಿದ್ದುದು ಕಂಡು ಬರುತ್ತದೆ. ಪಕ್ಕದ ಲಿಂಗಸುಗೂರು ಪ್ರದೇಶವಂತೂ ಬಾವಿಗಳಿಗೆ ಹೆಸರುವಾಸಿ. ಅಲ್ಲಿ ಆಗಿ ಹೋದ ಮನ್ನೇಸಾಬನೆಂಬ ಸಾಮಂತ ಸಾವಿರಕ್ಕೂ ಹೆಚ್ಚು ಬಾವಿಗಳನ್ನು ಏಕ ಕಾಲಕ್ಕೆ ತೋಡಿಸಿದ್ದನಂತೆ. ಇವು ಪಾರಂಪರಿಕ ಬದುಕಿನಲ್ಲಿ ಬಾವಿಗಳಿಗಿದ್ದ ಮಹತ್ವಕ್ಕೆ ಸಾಕ್ಷಿ.
ಜಿಲ್ಲೆಯ ಯಾವುದೇ ಭಾಗಕ್ಕೆ ಹೋದರೂ ಅತ್ಯಂತ ಸುವ್ಯವಸ್ಥಿತವಾಗಿ ಕಲ್ಲುಗಳಿಂದ ಕಟ್ಟಿರುವ ಸುಂದರ ಬಾವಿಗಳ ನಿರ್ಮಾಣ ಗಮನ ಸೆಳೆಯುತ್ತದೆ. ಗುಲ್ಬರ್ಗದ ಲಾಲ್‌ಗೇರಿಯಲ್ಲಿರುವ ಈ ಪುಟ್ಟ ಬಾವಿಯೂ ಇವೆಲ್ಲದರ ಪ್ರತೀಕದಂತಿದೆ. ಸುಮಾರು ಮೂವತ್ತು ಅಡಿ ಉದ್ದ, ಹತ್ತು ಅಡಿ ಅಗಲದ ಈ ಸುಂದರ ಬಾವಿಗೆ ಸುತ್ತಲೂ ಸದೃಢ ಕಲ್ಲು ನಿರ್ಮಾಣವನ್ನು ಮಾಡಲಾಗಿದೆ. ನಾಲ್ಕೈದು ಅಡಿಗೆಲ್ಲ ನೀರು ಎಟಕುವಂತಿದ್ದರೂ ಕೆಳಭಾಗದವರೆಗೂ ಕಲ್ಲಿನ ಅಟ್ಟಣಿಗೆಗಳನ್ನು ಕಟ್ಟಲಾಗಿದೆ. ಬಾವಿಯ ಗೋಡೆಯ ಮೇಲಿರುವ ಹೊಯ್ಸಳರ ರಾಜ ಮುದ್ರೆಯ ಪ್ರತಿಕೃತಿ ಅದರ ಇತಿಹಾಸವನ್ನು ಸಾರುತ್ತಿದೆ. ಬಾವಿಯನ್ನು ಎಷ್ಟು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದರೆ ಸುತ್ತ ಮುತ್ತಲಿನ ಯಾವುದೇ ಪ್ರದೇಶದಲ್ಲಿ ಮಳೆಯಾದರೂ ಅಲ್ಲಲ್ಲಿಯೇ ಇಂಗುವ ನೀರು, ಸೆಲೆಯ ರೂಪದಲ್ಲಿ ಇಲ್ಲಿಗೇ ನೇರವಾಗಿ ಸಂಪರ್ಕಿಸುತ್ತದೆ. ಮಾತ್ರವಲ್ಲ ಆಗಿನ ಕಾಲದಲ್ಲಿಯೇ ಬಾವಿಯೊಳಗಿಂದ ಪೈಪ್ ಜಾಲವನ್ನು ನಿರ್ಮಿಸಿ ನಗರದೊಳಕ್ಕೆ ಕೊಂಡೊಯ್ಯಲಾಗಿದೆ. ಸಮೀಪದ ಷಣ್ಮುಖ ದೇವರ ಗುಡಿಯಲ್ಲಿ ಇದಕ್ಕೆ ಪುರಾವೆ ಸಿಗುತ್ತದೆ.
ಹೇಗೆ ನೋಡಿದರೂ, ಅಂದಿನ ತಂತ್ರಜ್ಞರ ಜಾಣ್ಮೆಗೆ ತಲೆದೂಗಲೇಬೇಕು; ಹಾಗಿದೆ ಬಾವಿ. ಒಂದು ರೀತಿಯಲ್ಲಿ ಈಜುಕೊಳದಂತೆ ಕಂಡರೂ ಆಗಿನ ಅರ್ಧ ನಗರಕ್ಕೆ ನೀರು ಪೂರೈಸಬಲ್ಲ ಸಾಮರ್ಥ್ಯ ಈ ಬಾವಿಗಿತ್ತು. ಸುತ್ತಲಿನವರು ಹೇಳುವ ಪ್ರಕಾರ ಈವರೆಗೆ ಅದರಲ್ಲಿ ನೀರು ಬತ್ತಿದ್ದೇ ಗೊತ್ತಿಲ್ಲ. ೭೬ರ ಸುಮಾರಿಗೆ ಇಡೀ ನಗರದಲ್ಲಿ ನೀರಿನ ಹಾಹಾಕಾರವೆದ್ದಾಗಲೂ ಈ ಬಾವಿಯಲ್ಲಿ ಅರ್ಧ ಅಡಿಗಳಷ್ಟು ಮಾತ್ರ ನೀರಿನ ಪ್ರಮಾಣ ಕುಸಿದಿತ್ತು. ಇಂಥ ಬಾವಿ ಇದೀಗ ರಸ್ತೆ ವಿಸ್ತರಣೆಯ ನೆಪದಲ್ಲಿ ಧ್ವಂಸಗೊಳ್ಳುತ್ತಿದೆ. ಸ್ವಲ್ಪ ಮನಸ್ಸು ಮಾಡಿದರೂ ಈ ಅಪರೂಪದ ಖನಿಯನ್ನು ಉಳಿಸಿಕೊಳ್ಳುವುದು ಕಷ್ಟವೇನಲ್ಲ. ತುಸುವೇ ರಸ್ತೆಯನ್ನು ತಿರುಗಿಸಿಕೊಂಡು ಹೋದರೂ ಇದು ಇನ್ನೂ ಅದೆಷ್ಟೋ ತಲೆಮಾರಿಗೆ ನೀರುಣಿಸಬಲ್ಲುದು. ಆದರೆ ಅದರ ಪಕ್ಷಪಾತಿಯಾಗಿ ಲಾಬಿ ಮಾಡುವವರಿಲ್ಲ.
ಇದಂತಲೇ ಅಲ್ಲ. ಬಾವಿಗಳ ಬಗ್ಗೆ ಇಂಥ ಅನಾದರ ಗುಲ್ಬರ್ಗದಲ್ಲಿ ಹೊಸತಲ್ಲ. ಒಂದು ಕಾಲದಲ್ಲಿ ಇಡೀ ಗುಲ್ಬರ್ಗಕ್ಕೆ ನೀರು ಪೂರೈಸುತ್ತಿದ್ದ ಅಲ್ಲಿನ ಶಾಂತಿನಗರದ ಬಾವಿಯ ಇಂದಿನ ಸ್ಥಿತಿ ನೋಡಿದರೆ ನಮ್ಮ ಅಜ್ಞಾನಕ್ಕೆ ನಗಬೇಕೋ, ಅಳಬೇಕೋ ಅರ್ಥವಾಗದು. ಸುಮಾರು ೩ ಎಕರೆಯಷ್ಟು ವಿಸ್ತೀರ್ಣದಲ್ಲಿ ಮೈಚಾಚಿದ್ದ ಅದ್ಭುತ ಸಂರಚನೆಯ ಈ ಬಾವಿ ಇಂದು ಕಸ ಚೆಲ್ಲುವ ಮೈದಾನವಾಗುಳಿದಿದೆ. ನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಇನ್ನೊಂದು ಬೃಹತ್ ಬಾವಿಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೇವಲ ಹತ್ತು ಅಡಿಗೆಲ್ಲ ನೀರು ಸಿಗುವಂತಿರುವ ಸಮೃದ್ಧ ಅಂತರ್ಜಲದಿಂದ ತುಂಬಿರುವ ಈ ಬಾವಿಯನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ.
ಇದು ಬೃಹತ್ ಬಾವಿಗಳ ಕಥೆಯಾದರೆ, ಇನ್ನು ಸೇಂಟ್ ಮೇರೀಸ್ ಶಾಲೆಯ ಸಮೀಪದ ಕಾರ್ಪೊರೇಷನ್ ಬಾವಿ, ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿ ಅವಸಾನದ ಅಂಚಿನಲ್ಲಿರುವ ಶರಣನಗರ ಸಮೀಪದ ಜನತಾ ಲೇಔಟ್‌ನ ಬಾವಿ ಹೀಗೆ...ಹೆಸರಿಗೆ ಉಳಿದಿರುವ ಕೆಲವೇ ಬಾವಿಗಳೂ ಭೂಗತವಾಗುತ್ತಿವೆ. ನೂರಾರು ಕೋಟಿ ರೂ.ಗಳನ್ನು ಸುರಿದು ಬೆಣ್ಣೆತೊರಾದಿಂದ, ಭೀಮಾ ನದಿಯಿಂದ ಪೈಪ್ ಜೋಡಿಸಿಕೊಂಡು ಬಂದು ಗುಲ್ಬರ್ಗ ನಗರಕ್ಕೆ ನೀರು ಪೂರೈಸಲಾಗುತ್ತಿದೆ. ಹೆಚ್ಚೆಂದರೆ ಇವೆಲ್ಲ ಆಗಿ ಒಂದೆರಡು ದಶಕಗಳಾಗಿರಬಹುದು. ಅದಕ್ಕೂ ಮುನ್ನ ಗುಲ್ಬರ್ಗದ ಮಂದಿ ನೀರನ್ನೇ ಕುಡಿದಿರಲಿಲ್ಲವೇ ? ಅಂದು ತಂಪೆರೆದು ಜೀವನ ಪೊರೆದ ಅಮೂಲ್ಯ ಬಾವಿಗಳನ್ನು ಅಲ್ಲಿನವರು ಮರೆತರೇಕೆ ? ರಸ್ತೆ ವಿಸ್ತರಣೆಗೆ ಬಂದಿರುವ ಜೆಸಿಬಿ, ಬುಲ್ಡೋಜರ್‌ಗಳ ಶಬ್ದದಲ್ಲಿ ಇಂಥ ಪ್ರಶ್ನೆಗಳು ಲೀನವಾಗಿ ಹೋಗುತ್ತಿವೆ ಅಲ್ಲಿ.


‘ಲಾಸ್ಟ್’ಡ್ರಾಪ್: ರಾಜ್ಯದಲ್ಲಿ ಅತ್ಯಕ ಬಾವಿಗಳಿರುವ ಜಿಲ್ಲೆ ಕೋಲಾರ. ಅಲ್ಲಿ ೬೦ ಸಾವಿರಕ್ಕೂ ಹೆಚ್ಚು ಬಾವಿಗಳಿವೆ.

Thursday, October 30, 2008

ನೀರು ಲಭ್ಯತೆಯ ಸಮತೋಲನ ಕಾಪಾಡಿದ ಜಲಾಶಯ

ನೀರಾವರಿ ಯೋಜನೆಗಳ ವೈಫಲ್ಯ ನಮಗೆ ಹೊಸ ವಿಚಾರವಾಗುಳಿದಿಲ್ಲ. ನೂರಾರು ಕೋಟಿ ರೂಪಾಯಿಗಳು ಈವರೆಗೆ ವ್ಯರ್ಥವಾಗಿ ಹರಿದು ಹೋಗಿವೆ. ಎಷ್ಟೋ ಸಂದರ್ಭಗಳಲ್ಲಿ ಯೋಜನೆಗಳ ಕನಿಷ್ಠ ಪ್ರಯೋಜನವೂ ದೊರೆತಿಲ್ಲ. ಹಾಗೆಂದು ಸುಮ್ಮನುಳಿದಿಲ್ಲ, ಹೊಸ ಹೊಸ ಹೆಸರಿನಲ್ಲಿ ಬೃಹತ್ ಯೋಜನೆಗಳ ಘೋಷಣೆ ಮುಂದುವರಿದೇ ಇದೆ.
ವೈಫಲ್ಯಕ್ಕೆ ಕಾರಣಗಳು ಹಲವು. ಅದೆಲ್ಲಕ್ಕಿಂತ ಮಿಗಿಲಾದದ್ದು ನಮ್ಮ ಸನ್ನಿವೇಶದಲ್ಲಿ ನಾವು ರೂಪಿಸುವ ಯೋಜನೆಗಳು ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ಯೋಚಿಸುತ್ತಿಲ್ಲ. ನೀರಿನ ನಿರ್ವಹಣೆಯೆಂಬುದು ಯಾವತ್ತೂ ಪುಟ್ಟ ಪ್ರಯತ್ನಗಳನ್ನಷ್ಟೇ ಅಪೇಕ್ಷಿಸುತ್ತದೆ. ಅದಕ್ಕಿಂಥ ಹೊರತಾದದ್ದೆಲ್ಲವೂ ಹೊರೆಯಾಗುವುದರಲ್ಲಿ ಅನುಮಾನವಿಲ್ಲ.
ನಾಲ್ಕು ದಿನಗಳಿಂದ ನಾಡಿನ ಶಿಖರ ಭಾಗದ ಜಿಲ್ಲೆಗಳ ನೀರಿನ ಬವಣೆಯ ಪ್ರತ್ಯಕ್ಷ ದರ್ಶನವಾಗುತ್ತಿದೆ. ಬೀದರ್, ಗುಲ್ಬರ್ಗ, ರಾಯಚೂರಿನಂಥ ಜಿಲ್ಲೆಗಳನ್ನು ಹಿಂದುಳಿದ ಭಾಗಗಳೆಂದು ನಾವು ಮೇಲಿಂದ ಮೇಲೆ ಹೇಳಿಕೊಳ್ಳುತ್ತಲೇ ಬರುತ್ತಿದ್ದೇವೆ. ಆದರೆ, ನೀರು ನಿರ್ವಹಣೆಯಂಥ ಜ್ಞಾನದಲ್ಲಿ ಈ ಭಾಗದ ಜನ ಸಾಸಿದ ಪ್ರಗತಿ ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತದೆ. ಅದೆಷ್ಟು ವಿಭಿನ್ನ ಪ್ರಯತ್ನಗಳು ? ಇಂಥವು ಇಲ್ಲಿನ ಅನಿವಾರ್ಯತೆ ಎಂಬುದು ಬೇರೆ ಪ್ರಶ್ನೆ. ಆದರೂ ಮಾದರಿಯಾಗಬಲ್ಲ, ಅನುಸರಣೀಯವೆನಿಸುವ ಮಾದರಿಗಳು ಅಜ್ಞಾತವಾಗಿಯೇ ಉಳಿದು ಬಿಡುತ್ತವೆ.
ರಾಯಚೂರು ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟಿನಲ್ಲಿ ನಿರ್ಮಿಸಿರುವ ಸಮತೋಲನ ಜಲಾಶಯ ನೀರಿನ ಇಂಥ ಸಮರ್ಥ ಬಳಕೆಗೆ ಅತ್ಯುತ್ತಮ ನಿದರ್ಶನ. ಸಾಧ್ಯತೆಗಳ ದೃಷ್ಟಿಯಿಂದ ಹಲವು ಮಜಲುಗಳಲ್ಲಿ ತೆರೆದುಕೊಳ್ಳುವ ಈ ಕಿರು ಜಲಾಶಯ ಭಾರೀ ಮೊತ್ತವನ್ನೇನೂ ಬೇಡಿಲ್ಲ, ನೂರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಿಲ್ಲ, ಸಾವಿರಾರು ಎಕರೆ ಪ್ರದೇಶವನ್ನು ಮಳುಗಡೆ ಮಾಡಿಲ್ಲ. ಹಾಗೆ ನೋಡಿದರೆ, ಪಯಣ ಹೊರಟ ನೀರನ್ನು ಒಂದಷ್ಟು ತಡೆದು ನಿಲ್ಲಿಸಿ ವಿಶ್ರಾಂತಿಗೆ ಅನುವು ಮಾಡಿಕೊಟ್ಟದ್ದಷ್ಟೇ. ಸುತ್ತಲಿನ ಅಂತರ್ಜಲ ಮಟ್ಟ ತಂತಾನೇ ಮೇಲಕ್ಕೇರಿದೆ. ರಾಯಚೂರಿನಂಥ ನಗರದ ಜನ ಕುಡಿಯುವ ನೀರಿನ ಸಮಸ್ಯೆ ಎಂಬುದನ್ನೇ ಮರೆಯುವಂತಾಗಿದೆ. ಮಾತ್ರವಲ್ಲ ರೈತರ ಜಮೀನುಗಳು ನಗುತ್ತಿವೆ.
ಅದು ೧೯೯೧-೯೨ರ ಅವ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲ. ಸ್ಥಳೀಯ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿ ಎನ್.ಎಸ್. ಬೋಸರಾಜು ಕಾರ್ಯ ನಿರ್ವಹಿಸುತ್ತಿದ್ದರು. ಹೇಗೆ ಮಾಡಿದರೂ ಕಾಲುವೆಯ ಕೊನೆಯ ಭಾಗದ ರೈತರಿಗೆ ಸೂಕ್ತ ನೀರೊದಗಿಸುವ ಸವಾಲನ್ನು ನಿಭಾಯಿಸುವುದು ಸಾಧ್ಯವಾಗುತ್ತಿರಲಿಲ್ಲ. ಪ್ರತಿ ಸಭೆಯಲ್ಲೂ ಇದೇ ಪ್ರಮುಖ ಚರ್ಚೆ. ಒಟ್ಟಾರೆ ಎಲ್ಲರಿಂದಲೂ ಸೈ ಅನಿಸಿಕೊಳ್ಳುವುದು ತ್ರಾಸಿನ ಸಂಗತಿಯಾಗಿತ್ತು.
ಇಂಥ ಸಂದರ್ಭದಲ್ಲಿ ಬೋಸರಾಜರ ಗಮನ ಸೆಳೆದದ್ದು ಆಂಧ್ರದ ವಿಶಿಷ್ಟಪೂರ್ಣ ‘ಸಮತೋಲನ ಜಲಾಶಯ’. ಗಡಿ ಭಾಗದ ರೈತರು ಅನಾಯಾಸವಾಗಿ ನೀರು ಪಡೆಯುತ್ತಿದ್ದ ಪರಿ ಅಚ್ಚರಿ ಹುಟ್ಟಿಸಿತ್ತು. ಮಾತ್ರವಲ್ಲ ಇಂಥ ಪ್ರಯೋಗವನ್ನು ನಮ್ಮ ರಾಜ್ಯದಲ್ಲೂ ಏಕೆ ಮಾಡಬಾರದೆನ್ನಿಸಿತು. ತಡ ಮಾಡದೇ ೧೦ ಕೋಟಿ ರೂ. ಗಳ ಯೋಜನೆಯೊಂದನ್ನು ತಯಾರಿಸಿ ಸರಕಾರದ ಮುಂದಿಟ್ಟರು. ಸರಕಾರ ಇದನ್ನು ಮುಕ್ತವಾಗಿ ಸ್ವೀಕರಿಸಿಯೂ ಬಿಟ್ಟಿತು. ಎರಡೇ ವರ್ಷದಲ್ಲಿ ಪುಟ್ಟದೊಂದು ಜಲಾಶಯ ಗಣೇಕಲ್ ಎಂಬಲ್ಲಿ ತಲೆ ಎತ್ತಿ ನಿಂತಿತ್ತು. ಅದೇ ಕೊನೆ, ಕಾಲುವೆಯ ಅಂತಿಮ ಭಾಗದ ರೈತರಿಗೆ ಮುಂದೆ ಯಾವತ್ತೂ ನೀರು ಸಮಸ್ಯೆಯಾಗಲೇ ಇಲ್ಲ. ಇಂದು ಭತ್ತ, ಕಬ್ಬು ಸೇರಿದಂತೆ ಪ್ರಮುಖ ನೀರಾವರಿ ಬೆಳೆಗಳನ್ನು ಎಗ್ಗಿಲ್ಲದೇ ಅಲ್ಲಿನ ರೈತರು ಬೆಳೆಯುತ್ತಿದ್ದಾರೆ.
ಅತ್ಯಂತ ಸರಳ ತಂತ್ರವೊಂದು ಇಷ್ಟೆಲ್ಲವನ್ನೂ ಸಾಧ್ಯವಾಗಿಸಿದ್ದು ಅಚ್ಚರಿ ಹುಟ್ಟಿಸುತ್ತಿದೆ. ಇಂದು ಗಣೆಕಲ್‌ನ ಸುತ್ತಮುತ್ತ ಹಸಿರು ಛಾಯೆ ಆವರಿಸಿದೆ. ಅಲ್ಲಿ ಮಾಡಿದ್ದಿಷ್ಟೇ. ತುಂಗಭದ್ರಾ ಎಡದಂಡೆ ಕಾಲುವೆಯ ಮೂಲಕ ರೈತರ ಜಮೀನಿಗೆ ನೀರು ಹರಿಸಲಾಗುತ್ತಿತ್ತು. ಎಲ್ಲೆಡೆಯಂತೆಯೇ ಕಾಲುವೆಯ ಆರಂಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ೨೨೦ಕಿ.ಮೀ. ಉದ್ದದ ಕಾಲುವೆಯ ಕೊನೆಯ ಭಾಗಕ್ಕೆ ನೀರು ತಲುಪುವಷ್ಟರಲ್ಲಿ ಅದು ಸೋತು ಸೊರಗಿ ಹೋಗಿಬಿಡುತ್ತಿತ್ತು. ಸುದೀರ್ಘ ಪಯಣದಿಂದ ತ್ರಾಣವೇ ಇಲ್ಲದಂತಾಗುತ್ತಿತ್ತು ನೀರಿಗೆ. ಅದಕ್ಕೊಂದಿಷ್ಟು ಶಕ್ತಿ ತುಂಬಲು ವಿರಾಮ ಅಗತ್ಯವೆಂಬುದನ್ನು ಮನಗಂಡ ಕಾಡಾ, ವಿಶ್ರಾಂತಿ ತಾಣವೊಂದರ ನಿರ್ಮಾಣಕ್ಕೆ ಯೋಜಿಸಿತು. ಕಾಲುವೆಯ ೩ನೇ ಡ್ರಾಪ್‌ನಲ್ಲಿ ನೀರು ಒಳಹೊಕ್ಕು ಒಂದಷ್ಟು ನಿಂತು ಮುಂದೆ ಹರಿಯುವಂತೆ ಮಾಡಲು ಉದ್ದೇಶಿಸಲಾಯಿತು. ಅದಕ್ಕಾಗಿ ಪುಟ್ಟದೊಂದು ಜಲಾಶಯ ನಿರ್ಮಿಸಿ, ಕಾಲುವೆಯ ಮಧ್ಯೆ ೧.೪ ನೇ ಮೈಲಿಯ ಬಳಿ ನೀರು ಒಳ ಬರುವಂತೆ ಮಾಡಲಾಯಿತು. ಸುಮಾರು ೩೮೦೦ ಕ್ಯೂಸೆಕ್ ನೀರನ್ನು ಜಲಾಶಯಕ್ಕೆ ಹರಿಸಿದ ಬಳಿಕ ಮತ್ತೆ ಪುನಃ ಕಾಲುವೆಯ ೧.೮ನೇ ಮೈಲಿನ ಬಳಿ ಹೊರ ಹೋಗುವಂತೆ ವ್ಯವಸ್ಥೆಗೊಳಿಸಲಾಯಿತು.
ಇದರಿಂದ ನೀರು ಹರಿವಿನ ವೇಗವನ್ನು ಕಾಯ್ದುಕೊಳ್ಳುವುದು ಸಾಧ್ಯವಾಯಿತು. ಒಂದಷ್ಟು ಹೊತ್ತು ನಿಂತು ಮತ್ತೆ ಮುಂದಕ್ಕೆ ಕಾಲುವೆಯಲ್ಲಿ ಹರಿಯುವ ನೀರು ತನ್ನ ಎಂದಿನ ವೇಗವನ್ನು ತಂತಾನೇ ವೃದ್ಧಿಸಿಕೊಳ್ಳುತ್ತಿತ್ತು.
೩೩ ಅಡಿ ಆಳದ ಈ ಜಲಾಶಯ ನಿರ್ಮಾಣದಿಂದ ೧೬ ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಿದ್ದು ನಿಜ. ಆದರೆ, ಸುಮಾರು ೫೦ ಸಾವಿರ ಎಕರೆಯಷ್ಟು ಕೃಷಿ ಭೂಮಿ ನೀರಾವರಿಗೆ ಒಳಪಟ್ಟಿದೆ ಎಂಬುದು ಗಮನಾರ್ಹ. ಮಾತ್ರವಲ್ಲ ಇಡೀ ರಾಯಚೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಸುಲಲಿತವಾಯಿತು. ಎಕರೆಗೆ ೧೦ ಸಾವಿರ ರೂ.ಗಳಂತೆ ಆಗಿನ ಕಾಲದಲ್ಲಿ ನೀಡಿದ ಪರಿಹಾರವೂ ಸೇರಿದಂತೆ ೨೨ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಬೋಸರಾಜು.
ಒಂದು ಪುಟ್ಟ ಜಲಾಶಯ ಈ ಭಾಗದಲ್ಲಿ ಕಾಯ್ದುಕೊಂಡಿರುವ ನೀರಿನ ಸಮತೋಲನವನ್ನು ಗಮನಿಸಿದರೆ ಅದಕ್ಕೆ ಬೆಲೆ ಕಟ್ಟಲಾಗುವುದೇ ಇಲ್ಲ. ಸಂಪೂರ್ಣ ಗುರುತ್ವಾಕರ್ಷಣ ಶಕ್ತಿಯಿಂದಲೇ ಜಲಾಶಯಕ್ಕೆ ನೀರು ತುಂಬಲಾಗುತ್ತದೆ. ಅದೇ ತತ್ತ್ವದಡಿಯಲ್ಲಿ ನೀರನ್ನು ಕಾಲುವೆಯ ಕೊನೆಯ ಭಾಗದವರೆಗೂ ಹರಿಸಲಾಗುತ್ತದೆ. ಯಾವುದೇ ಇಂಧನ ಬಳಕೆಯ ಪ್ರಶ್ನೆಯೇ ಇಲ್ಲ. ನಮ್ಮ ಬಹುತೇಕ ಏತನೀರಾವರಿ ಯೋಜನೆಗಳು ಇಂಧನದ ಕೊರತೆಯಿಂದಲೇ ವಿಫಲವಾಗಿವೆ, ವಿಫಲವಾಗುತ್ತಿವೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಅವೈಜ್ಞಾನಿಕ, ದೂರದೃಷ್ಟಿ ಇಲ್ಲದ ಯೋಜನೆUಳು ಹೀಗಾಗುವುದು ಸಾಮಾನ್ಯ.
ನೀರಾವರಿ ಯೋಜನೆಗಳ ವಿಚಾರದಲ್ಲಂತೂ ದೂರದೃಷ್ಟಿ ಅತ್ಯಂತ ಅಗತ್ಯದ ಸಂಗತಿ. ಬದಲಾಗುವ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲ ಕಾಲಕ್ಕೂ ಉಪಯುಕ್ತವಾಗಬಲ್ಲ, ಆರ್ಥಿವಾಗಿಯೂ ಸಮರ್ಥನೀಯವೆನಿಸಬಲ್ಲ ಯೋಜನೆಗಳು ಮಾತ್ರ ಯಶಸ್ಸುಗಳಿಸಲು ಸಾಧ್ಯ.
ಇಂಥ ಕಾರಣಗಳಿಂದಾಗಿ ಗಣೇಕಲ್ ಜಲಾಶಯ ಸಾರ್ವಕಾಲಿಕ ಎನಿಸುತ್ತದೆ. ಅದರಲ್ಲೂ ಉತ್ತರ ಕರ್ನಾಟಕದಂಥ ಪ್ರದೇಶದಲ್ಲಿ ಈ ಪರಿಯ ನೀರಿನ ಪ್ರಯೋಗಶೀಲತೆಗೆ ಸರಕಾರಗಳು ಹೆಚ್ಚಿನ ಒತ್ತು ನೀಡುವುದು ಅಗತ್ಯವಿದೆ. ಇದೇ ಮಾದರಿಯನ್ನು ನಾಡಿನ ಇತರ ನದಿ, ಕಾಲುವೆಗಳ ಅಚ್ಚು ಕಟ್ಟು ಪ್ರದೇಶದಲ್ಲೂ ಅನುಸರಿಸುವುದು ಉತ್ತಮ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂಥ ಸಮತೋಲನ ಜಲಾಶಯಗಳ ನಿರ್ಮಾಣಕ್ಕೆ ಉತ್ತಮ ಅವಕಾಶಗಳಿವೆ. ಮಾತ್ರವಲ್ಲ. ಗಣೇಕಲ್‌ನಿಂದಲೇ ಇನ್ನೂ ೫೦ ಎಕರೆಗೆ ಹೆಚ್ಚುವರಿಯಾಗಿ ನೀರಾವರಿ ಒದಗಿಸುವ ಸಾಧ್ಯತೆಗಳಿವೆ. ನಾರಾಯಣಪುರ ಬಲದಂಡೆ ಕಾಲುವೆಯನ್ನು ಇಲ್ಲಿಗೆ ತಂದು ಸಂಪರ್ಕಿಸಿದರೆ ಎರಡು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆಂಬುದೇ ಇರುವುದಿಲ್ಲ. ಇದಕ್ಕೆ ಭಾರೀ ಪ್ರಯಾಸಪಡಬೇಕಾದ ಅಗತ್ಯವೂ ಇಲ್ಲ. ಈಗಾಗಲೇ ೯೫ ಮೈಲಿಯವರೆಗೆ ಬಂದಿರುವ ನಾರಾಯಣಪುರ ಬಲದಂಡೆ ಕಾಲುವೆಯನ್ನು ಇನ್ನು ಕೇವಲ ೧೩ ಮೈಲುಗಳವರೆಗೆ ತಂದು ಜೋಡಿಸಿದರಾಯಿತು.
ಕೃಷ್ಣಾ ನದಿ ನೀರು ಹಂಚಿಕೆಯನ್ವಯ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲಾಗದೇ ಕುಳಿತಿರುವಾಗ ಇಂಥ ಪುಟ್ಟ ಪುಟ್ಟ ಪ್ರಯತ್ನಗಳತ್ತ ಸರಕಾರಗಳು ಗಮನ ಹರಿಸಿದರೊಳಿತು. ನದಿ ನೀರು ಹಂಚಿಕೆಯಲ್ಲಿ ಅನಗತ್ಯ ವಿವಾದಗಳನ್ನು ಎದುರಿಸುವ ಬದಲು, ಶ್ರೀಮಂತ ಅಂತರ್ಜಲ ಸೃಷ್ಟಿಸುವ ಇಂಥ ಸುಲಭ ಮಾರ್ಗಗಳನ್ನು ನಾವು ಕಂಡುಕೊಳ್ಳಬಾರದೇಕೆ ?
‘ಲಾಸ್ಟ್’ಡ್ರಾಪ್: ಹೀಗೊಂದು ಲೆಕ್ಕಾಚಾರ. ವರ್ಷಕ್ಕೆ ೮,೭೬೦ ಗಂಟೆಗಳು. ಇದರಲ್ಲಿ ೪ ತಿಂಗಳು ಮಳೆಗಾಲ. ಅದರಲ್ಲೂ ನಮ್ಮ ಸನ್ನಿವೇಶದಲ್ಲಿ ಒಟ್ಟೂ ಮಳೆ ಸುರಿಯುವುದು ಸರಾಸರಿ ೧೦೦ ಗಂಟೆ ಮಾತ್ರ. ಇದನ್ನು ಹಿಡಿದಿಟ್ಟುಕೊಂಡರೆ ಮಾತ್ರ ಉಳಿದ ೮,೬೬೦ ಗಂಟೆಯ ಬಳಕೆಗೆ ನೀರು ಸಿಕ್ಕೀತು.

Friday, October 17, 2008

ನಾಡ ಕೃಷಿ: ನಳನಳಿಸುವ ದ್ರಾಕ್ಷಿ




ನೀರು ನಿರ್ವಹಣೆಯೆಂಬುದು ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸುವ ಜಾಣ್ಮೆಯಲ್ಲ. ಕೆಲವೇ ಕೆಲ ಮಂದಿ ಮಾತ್ರ ಅದನ್ನು ಕರಗತ ಮಾಡಿಕೊಳ್ಳಬಲ್ಲರು. ವಿಜಾಪುರ ಸಮೀಪದ ಜಾಲಗೇರಿಯ ದ್ರಾಕ್ಷಿ ತೋಟದ ಮಾಲೀಕ ಎಸ್.ಎಚ್. ನಾಡಗೌಡರು ಅಂಥ ಬನಿಜಾ (ಬರ ನಿರೋಧಕ ಜಾಣ್ಮೆ)ವನ್ನು ಸಿದ್ಧಿಸಿಕೊಂಡ ಅಪರೂಪದ ರೈತ.
ಮಳೆಯೆಂಬುದೇ ಅಪರೂಪದ ಅತಿಥಿ ಎಂಬಂಥ ಸನ್ನಿವೇಶದಲ್ಲಿ ಪೂರ್ತಿ ನಲವತ್ತು ಎಕರೆಯ ಅವರ ಒಣಭೂಮಿಯಲ್ಲಿ ಇಂದು ದ್ರಾಕ್ಷಿ ಬಳ್ಳಿ ನಲಿದಾಡುತ್ತಿದ್ದರೆ ಅದು ನಾಡಗೌಡರ ಇಚ್ಛಾಶಕ್ತಿ ಮತ್ತು ಕ್ರಿಯಾಶೀಲತೆಯ ಫಲ. ಆ ತೋಟದಿಂದ ದೇಶ ವಿದೇಶಗಳಿಗೆ ಇಂದು ದ್ರಾಕ್ಷಿ ರಫ್ತಾಗುತ್ತಿದೆ. ಪಕ್ಕದ ಇತರ ಹಲವು ತೋಟಗಳಿಗೆ ಹೋಲಿಸಿದರೆ ನಾಡಗೌಡರ ಕೃಷಿ ಹಲವು ರೀತಿಯಲ್ಲಿ ಭಿನ್ನವಾಗಿ ನಿಲ್ಲುತ್ತದೆ. ಅದು ನೀರು, ಗೊಬ್ಬರ, ಕೇಷಿ ಪದ್ಧತಿ ಯಾವುದೇ ಇರಬಹುದು. ಎಲ್ಲವೂ ವೈಶಿಷ್ಟ್ಯಪೂರ್ಣ. ನೀವು ನಂಬಲಿಕ್ಕಿಲ್ಲ. ನಾಡಗೌಡರ ತೋಟದಲ್ಲಿನ ದ್ರಾಕ್ಷಿ ಬಳ್ಳಿ ಈವರೆಗೆ ರಾಸಾಯನಿಕ ಗೊಬ್ಬರವನ್ನೇ ಕಂಡಿಲ್ಲ. ಆದರೂ ಇಳುವರಿಯ ವಿಚಾರದಲ್ಲಾಗಲೀ, ಹಣ್ಣಿನ ಗುಣಮಟ್ಟದ ವಿಚಾರದಲ್ಲಾಗಲಿ ಬೇರಾವುದಕ್ಕೂ ಸಾಟಿಯಿಲ್ಲ.
ಇದೆಲ್ಲ ಹೇಗೆ ಸಾಧ್ಯವಾಯಿತೆಂದು ಗೌಡರನ್ನು ಪ್ರಶ್ನಿಸಿದರೆ, ಎಲ್ಲವೂ ‘ಜೀವಾಮೃತದ ಮಹಿಮೆ’ ಎನ್ನುತ್ತಾರೆ. ಕುತೂಹಲದಿಂದ ಮತ್ತೆ ಮುಂದುವರಿದರೆ ನೀವು ತೋಟದಲ್ಲಿ ಅಲ್ಲಲ್ಲಿ ನಿರ್ಮಿಸಿರುವ ಪುಟ್ಟಪುಟ್ಟ ಕುಟೀರದ ಎದುರು ನುಮ್ಮನ್ನು ಕರೆದೊಯ್ದು ನಿಲ್ಲಿಸುತ್ತಾರೆ.
ಹೌದು, ನಾಡಗೌಡರ ಇಡೀ ತೋಟವನ್ನು ಪೊರೆಯುತ್ತಿರುವುದು ಅವರೇ ಕಂಡುಕೊಂಡಿರುವ ಅಪರೂಪದ ಮೈಕ್ರೋನ್ಯೂಟ್ರನ್ಸ್ ಟಾನಿಕ್ ‘ಜೀವಾಮೃತ’. ಹಾಗೆಂದು ಇದು ಯಾವುದೋ ಬಹುರಾಷ್ಟ್ರೀಯ ಕಂಪನಿಯಲ್ಲಿ ತಯಾರಾದದ್ದಲ್ಲ. ಗೌಡರು ತಮ್ಮದೇ ತೋಟದಲ್ಲಿ ಲಭ್ಯ ವಸ್ತುಗಳಿಂದ ರೂಪಿಸಿಕೊಂಡದ್ದು. ಇಡೀ ತೋಟಕ್ಕೆ ಇದೇ ಗೊಬ್ಬರ, ಇದೇ ಕೀಟನಾಶಕ ಮಾತ್ರವಲ್ಲ, ಇದೇ ಜೀವದ್ರವ್ಯ ಸಹ.
‘ಹಿತ್ತಲ ಗಿಡ ಮದ್ದಲ್ಲ’ ಎಂಬುದು ಗೌಡರ ಪಾಲಿಗೆ ಸುಳ್ಳಾದ ಗಾದೆ. ಇವರ ತೋಟದ ಹಿತ್ತಲ್ಲಿರುವ ಎಲ್ಲವೂ ಮದ್ದೇ. ಇಲ್ಲ ತ್ಯಾಜ್ಯವೆಂಬುದೇ ಇಲ್ಲ. ಕೊನೆಗೆ ತೋಟದ ಮೇಲ್ಭಾಗದಲ್ಲಿರುವ ಕೊಟ್ಟಿಗೆಯ ಸಗಣಿ, ಗೋಮೂತ್ರವೂ ಅತ್ಯಂತ ಉಪಯುಕ್ತ. ಇದೇ ಜೀವಾಮೃತದ ಮೂಲಧಾತು ಸಹ. ಗೌಡರ ಪ್ರಕಾರ ‘ರಸಗೊಬ್ಬರ ಮುಕ್ತ ಕೃಷಿ ನೀರಿನ ಬಳಕೆಯನ್ನು ಕನಿಷ್ಠ ಶೇ. ೪೦ರಷ್ಟು ಕಡಿಮೆ ಮಾಡಿದೆ. ತೋಟದಲ್ಲಿ ತಯಾರಾಗುವ ಜೀವಾಮೃತದ ಹೆಗ್ಗಳಿಕೆಯೇ ಇದು’ ಎನ್ನುತ್ತಾರೆ.
ಹಾಗಾದರೆ ಏನಿದು ಜೀವಾಮೃತ ? ಇದೊಂದು ರೀತಿಯ ವಿಶಿಷ್ಟ ಸಾವಯವ ದ್ರಾವಣ. ೧೦ ಲೀಟರ್ ನೀರು, ೧೦ ಕೆ.ಜಿ. ಗೋಮಯ, ೨ ಕೆ.ಜಿ.ಯಷ್ಟು ಹುರುಳಿ ಇತ್ಯಾದಿ ಯಾವುದೇ ದ್ವಿದಳ ಧಾನ್ಯದ ಹಿಟ್ಟು, ೧ ಕೆ.ಜಿ. ಮಣ್ಣು (ಹೆಪ್ಪು), ೨ ಕೆ.ಜಿ. ಕರಿಬೆಲ್ಲ....ಇವಿಷ್ಟಿದ್ದರೆ ಎಲ್ಲಿ ಬೇಕಾದರೂ ಜೀವಾಮೃತವನ್ನು ಸಿದ್ಧಗೊಳಿಸಿಕೊಳ್ಳಬಹದು. ತಯಾರಿಕೆಯ ವಿಧಾನವೂ ಅತ್ಯಂತ ಸುಲಭ. ಸುಮಾರು ೧೮೦ ಲೀಟರ್ ನೀರಿಗೆ ಇವಿಷ್ಟನ್ನೂ ಹಾಕಿ ಚೆನ್ನಾಗಿ ಗೋಟಾಯಿಸಿ ಇಟ್ಟರಾಯಿತು. ಒಂದು ವಾರ ಮತ್ತೆ ಅತ್ತ ತಲೆ ಹಾಕುವ ಅಗತ್ಯವಿರುವುದಿಲ್ಲ. ಏಳು ದಿನಗಳ ನಂತರ ಅತ್ಯುತ್ತಮ ಪೌಷ್ಟಿಕಾಂಶಯುಕ್ತ ಸಾವಯವ ಗೊಬ್ಬರ ದ್ರಾವಣ ಬಳಕೆಗೆ ಲಭ್ಯವಿರುತ್ತದೆ. ನಾಡಗೌಡರ ತೋಟದಲ್ಲಿ ಪ್ರತಿ ಹದಿನೈದು ಅಡಿಗೊಂದರಂತೆ, ದ್ರಾಕ್ಷಿ ಬಳ್ಳಿಯ ಸಾಲಿನ ಕೊನೆಯಲ್ಲಿ ಜೀವಾಮೃತ ಕುಟೀರ ಸ್ಥಾಪಿಸಲಾಗಿದೆ. ಸರದಿಯಂತೆ ಒಂದಾದರೊಂದು ಕುಟೀರದಲ್ಲಿ ನಿರಂತರ ಜೀವಾಮೃತ ತಯಾರಾಗುತ್ತಲೇ ಇರುತ್ತದೆ. ೧೫ ದಿನಕ್ಕೊಮ್ಮೆ ಒಂದು ಗಿಡಕ್ಕೆ ಒಂದು ಲೀಟರ್‌ನಂತೆ ಜೀವಾಮೃತದ ಪೂರೈಕೆಯಾಗುತ್ತದೆ.
ರಾಸಾಯನಿಕ ಗೊಬ್ಬರ ಬಳಸುವ ಬೆಳೆಗಳು ಸಹಜವಾಗಿ ನೀರನ್ನು ಹೆಚ್ಚು ಬೇಡುತ್ತವೆ. ಅದರಲ್ಲೂ ಬಯಲು ಸೀಮೆಯ ನೆಲದಲ್ಲಿ, ಇಲ್ಲಿನ ರಣ ಬಿಸಿಲಿನ ದಿನಗಳಲ್ಲಿ ಎಷ್ಟು ನೀರು ಪೂರೈಸಿದರೂ ಅದು ಕಡಿಮೆಯೇ. ಆದರೆ, ಸಾವಯವ ಗೊಬ್ಬರ ಹಾಗಲ್ಲ. ಅದರಲ್ಲಿ ಅಡ್ಡ ಪರಿಣಾಮಗಳೇ ಇರುವುದಿಲ್ಲ. ಜತೆಗೆ ಜೀವಾಮೃತದಲ್ಲಿ ಹೆಚ್ಚಿನಪಾಲು ನೀರೇ ಇರುವುದರಿಂದ ಗಿಡಗಳಿಗೆ ತಂಪು ಸಹಜವಾಗಿಯೇ ಸಿಕ್ಕಂತಾಗುತ್ತದೆ ಎಂಬದು ಗೌಡರ ವ್ಯಾಖ್ಯಾನ.
ಯಾವುದೇ ಕಾರಣಕ್ಕೂ ರಾಸಾಯನಿಕ ಅಂಶಗಳುಳ್ಳ, ಗೊಬ್ಬರವನ್ನಾಗಲೀ, ಕೀಟ ನಾಶಕವನ್ನಾಗಲೀ ತಮ್ಮ ತೋಟದೊಳಕ್ಕೆ ಪ್ರವೇಶಿಸಲೇ ಬಿಡಬಾರದೆಂಬ ಪ್ರತಿಜ್ಞೆ ಗೌಡರದ್ದು. ಇದು ಗೊಬ್ಬರದ ಕತೆಯಾದರೆ, ಇನ್ನು ಕೀಟ ನಾಶಕವಾಗಿ ಸಹ ಇಂಥದೇ ಮತ್ತೊಂದು ದ್ರಾವಣವನ್ನವರು ಕಂಡುಕೊಂಡಿದ್ದಾರೆ. ಸುತ್ತಮುತ್ತಲು ಸಿಗುವ ಕಹಿಬೇವಿನ ಎಲೆಯನ್ನು ಕಡಿದು ತಂದು ಗೋ ಮೂತ್ರದಲ್ಲಿ ೩೦ ದಿನಗಳ ಕಾಲ ನೆನೆಸಿಡುತ್ತಾರೆ. ನಂತರ ಅದನ್ನು ಚೆನ್ನಾಗಿ ಹಿಸುಕಿ, ಅದರಲ್ಲಿನ ಕಸ, ಕಡ್ಡಿ ಇತ್ಯಾದಿಗಳನ್ನೆಲ್ಲ ಪ್ರತ್ಯೇಕಿಸಿ ದ್ರಾಕ್ಷಿ ಬಳ್ಳಿಗಳಿಗೆ ಸಿಂಪಡಿಸುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಇಡೀ ತೋಟಕ್ಕೆ ಇದನ್ನೇ ಪ್ರಯೋಗಿಸುತ್ತಿದ್ದು, ಯಾವುದೇ ಹೇಳಿಕೊಳ್ಳುವಂಥ ರೋಗ ತಮ್ಮ ಬೆಳೆಯನ್ನು ಬಾಸಿಲ್ಲ ಎಂಬುದು ಅವರ ಅನುಭವದ ಮಾತು.
ಇಷ್ಟಕ್ಕೇ ಗೌಡರ ಪ್ರಯೋಗಳು ಮುಗಿಯುವುದಿಲ್ಲ. ಒಣ ಭೂಮಿಯಲ್ಲಿ ತಂಪು ನಿಲ್ಲುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗೆಂದು ಗೌಡರು ಸುಮ್ಮನೆ ಕುಳಿತುಕೊಂಡಿಲ್ಲ. ಯಾವಾಗಲೊಮ್ಮೆ ಭೂರೀ ಭೋಜನ ನೀಡುವ ಬದಲು, ನಿಯಮಿತವಾಗಿ ಸ್ವಲ್ಪ ಸ್ವಲ್ಪವೇ ತಿನ್ನುವುದು ಆರೋಗ್ಯ ಶಾಸ್ತ್ರದಲ್ಲಿ ಹೇಳಿದ ಪದ್ಧತಿ. ಅದನ್ನೇ ದ್ರಾಕ್ಷಿ ಬಳ್ಳಿಗಳಿಗೆ ಪೂರೈಸುವ ನೀರಿನ ವಿಚಾರಕ್ಕೂ ಅವರು ಅನ್ವಯಿಸಿದ್ದಾರೆ. ತಮ್ಮ ತೋಟದ ಮೇಲ್ಭಾಗದಲ್ಲಿ, ಸುಮಾರು ನಾಲ್ಕು ಲಕ್ಷ ಲೀಟರ್ ನೀರು ಹಿಡಿಯುವ ಬೃಹತ್ ಟ್ಯಾಂಕ್ ಒಂದನ್ನು ನಿರ್ಮಿಸಿದ್ದಾರೆ. ೩೮ ಅಡಿ ಅಗಲ, ೫೮ ಅಡಿ ಉದ್ದ, ೮ ಅಡಿ ಆಳದ ಈ ಬೃಹತ್ ಟ್ಯಾಂಕ್ ಎತ್ತರದಲ್ಲಿ ನಿರ್ಮಾಣಗೊಂಡಿರುವುದರಿಂದ ಸೈಫನ್ ಪದ್ಧತಿಯಲ್ಲಿ ತನ್ನಿಂದ ತಾನೇ ಯಾವುದೇ ಇಂಧನ ಖರ್ಚಿಲ್ಲದೇ ಇಡೀ ತೋಟಕ್ಕೆ ನೀರು ಪೂರೈಸುತ್ತದೆ. ಏನಿಲ್ಲವೆಂದರೂ ೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಟ್ಯಾಂಕಿಗೆ ಅಳವಡಿಸಿರುವ ಪೈಪ್‌ಗಳ ಮೂಲಕ ನಿರಂತರ ನೀರು ತೋಟದತ್ತ ಹರಿಯುತ್ತಲೇ ಇರುತ್ತದೆ. ಸಾಲುಗಳಿಗೆ ನಿಯಮಿತವಾಗಿ ನೀರು ತುಂತುರು ನೀರಾವರಿಯ ರೂಪದಲ್ಲಿ ಹಾಯುವುದರಿಂದ ಮೇಲ್ಮೈ ಸದಾ ತಂಪಿನಿಂದ ಕೂಡಿರುತ್ತದೆ. ಕೆಳಗೆ ತಾವೇ ನಿರ್ಮಿಸಿರುವ ಬೃಹತ್ ಕೃಷಿ ಹೊಂಡವೇ ( ಕಳೆದ ವಾರ ಈಬಗ್ಗೆ ಮಾಹಿತಿ ನೀಡಲಾಗಿತ್ತು) ಇದಕ್ಕೆ ನೀರಿನ ಆಧಾರ. ವಿದ್ಯುತ್ ಇದ್ದಾಗಲೆಲ್ಲ ಕೃಷಿ ಹೊಂಡದಿಂದ ನೀರು ಪಂಪ್ ಆಗುತ್ತಲೇ ಇರುತ್ತದೆ. ಹೀಗಾಗಿ ಒಂದೊಮ್ಮೆ ದಿನಗಟ್ಟಲೇ ವಿದ್ಯುತ್ ( ಕರ್ನಾಟಕದಲ್ಲಿ ಹೀಗಾಗುವುದು ಸಾಮಾನ್ಯ ಸಂಗತಿಯಾದ್ದರಿಂದ) ಇಲ್ಲದಿದ್ದರೂ ಗಿಡಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ.
ಇವಿಷ್ಟೇ ಅಲ್ಲ. ನಾಡಗೌಡರ ತೋಟಕ್ಕೆ ನೀರು ಗೊಬ್ಬರ ಮಾತ್ರವಲ್ಲ. ಯಾವುದೂ ಹೊರಗಿನಿಂದ ಪೂರೈಕೆಯಾಗುವುದಿಲ್ಲ. ಮಾತ್ರವಲ್ಲ, ತೋಟದ ಯಾವೊಂದು ವಸ್ತುವೂ ತ್ಯಾಜ್ಯವಾಗಿ ಹೊರಹೋಗುವುದಿಲ್ಲ. ಆವರಣದಲ್ಲಿ ಬಿದ್ದ ಮಳೆಯೆಲ್ಲವೂ ಕೃಷಿ ಹೊಂಡಕ್ಕೆ ಬಂದು ವಿರಮಿಸುತ್ತದೆ. ಕೃಷಿ ಹೊಂಡದಲ್ಲಿ ಸಂಗ್ರಹವಾಗುವ ಹೂಳು ಜೀವಾಮೃತಕ್ಕೆ ಹೆಪ್ಪು ಆಗಿ ಬಳಕೆಯಾಗುತ್ತದೆ. ಇನ್ನು ಗೌಡರು ನಿರ್ಮಿಸಿರುವ ಅತ್ಯಾಧುನಿಕ ಮಾದರಿ ಹಟ್ಟಿಯಲ್ಲಿ ಏನಿಲ್ಲವೆಂದರೂ ನಲವತ್ತಕ್ಕೂ ಹೆಚ್ಚಿನ ಹಸುಗಳು ಹಾಲಿನ ಹೊಳೆ ಹರಿಸುತ್ತಿವೆ. ತೋಟದಲ್ಲಿ ಬೆಳೆಯುವ ಕಳೆಯೇ ಅವಕ್ಕೆ ಸಮೃದ್ಧ ಮೇವು. ಅದರ ಸಗಣಿ, ಮೂತ್ರಗಳು ಜೀವಾಮೃತವಾಗಿ ತೋಟಕ್ಕೆ ಪೂರೈಕೆಯಾಗುತ್ತದೆ. ಹೆಚ್ಚಿನದ್ದು ಗೋಬರ್ ಪ್ಲಾಂಟ್ ಸೇರಿ ಅನಿಲ ಉತ್ಪಾದನೆಗೆ ಒದಗುತ್ತಿದೆ. ಉಳಿದಂತೆ ಇಲ್ಲಿನ ಕಸ ಕಡ್ಡಿಗಳೆಲ್ಲವೂ ಗೌಡರು ನಿರ್ಮಿಸಿರುವ ಎರೆಹುಳು ಗೊಬ್ಬರ ಘಟಕಕ್ಕೆ ಕಚ್ಚಾ ವಸ್ತು. ಇನ್ನೇನು ಬೇಕು ಸ್ವಾವಲಂಬಿ ಕೃಷಿ ಎನ್ನಿಸಿಕೊಳ್ಳಲು. ಹೌದು ಗೌಡರದ್ದು ನೂರಕ್ಕೆ ನೂರು ಸ್ವಾವಲಂಬಿ ಕೃಷಿ.

‘ಲಾಸ್ಟ್’ಡ್ರಾಪ್: ಇಚ್ಛಾಶಕ್ತಿ, ಪ್ರಯೋಗಶೀಲತೆಗಳಿದ್ದರೆ ಖಂಡಿತಾ ಎಂಥ ಸ್ಥಳದಲ್ಲೂ ಕೃಷಿಯಿಂದ ನಷ್ಟ ಎಂಬುದಿಲ್ಲ. ವ್ಯವಸಾಯವೆಂಬುದನ್ನು ಆರಾಧನೆ ಎಂದುಕೊಳ್ಳಬೇಕು. ಆಗ ಭೂದೇವಿ ಒಲಿದು ವರ ಕೊಟ್ಟೇ ಕೊಡುತ್ತಾಳೆ ಎಂಬುದಕ್ಕೆ ನಾಡಗೌಡರು ಪ್ರತ್ಯಕ್ಷ ಸಾಕ್ಷಿ.

Monday, October 13, 2008

composting toilets



(One of the thought provoking articles)
1.An Eco-san separating pan
2.Tin drum for faeces and barrel for urine collection
A
sk any water supply board engineer and he will tell you that the bigger headache is sewage management and not water supply. Statistics will also show that almost all of India has access to water supply –of varying quantity and quality no doubt- but far too few have access to good sanitation.The Millennium Development Goal adopted by the UN in September 2000 and of which India is a signatory seeks to halve the number of people without access to sanitation by 2015. That means India will have to build at least half of 115 million toilets to cover half of 78% of our rural population and 24% of its urban population un-served sanitation units by the year. A huge task indeed.Typical sanitation solutions have included the septic tank or simply a pit latrine. Both tend to pollute ground water and are environmentally unsatisfactory. Even in water resource rich area like Goa or Kerala inadequate sanitation has ended up contaminating ground water to such an extent that many wells are unusable. Sanitation and water supply are inextricably linked. If it is not ‘fouling the nest’ it is the unavailability of water which has made many toilets unusable in rural area. If you do not have water to drink will you use it for a toilet?On the other hand area wide underground sewerage systems with treatment facilities are difficult to provide and are costly ventures. They tend to be energy consuming and generally do not work satisfactorily. For scattered houses in outlying areas of cities, in villages, in places with a high water table and in hard rock area technically appropriate solutions are either not available or are costly to implement.In such a scenario one emerging solution is a dry composting toilet. A composting toilet collects human waste and converts it to a fertilizer resource for plant growth without polluting water bodies or groundwater.The urine separating WC’s are available not only in the Indian type but also in the European type. These toilets are being used in individual houses as well as flats.Eco-san alternatives are coming up in many places in the world including Sweden, Germany, Denmark, the USA, China and Sri Lanka to name a few. India too has its Eco-san heroes in Dr Bindeshwar Pathak of the Sulabh movement and Paul Calvert in Trivandrum, Kerala.
For more information:
S.Vishwanath and Chitra Vishwanath




Phone: 080-23641690.

Friday, October 10, 2008

ಅಂಗಳಕ್ಕೆ ಅಂಗಿ ತೊಡಿಸಿ ಕೆರೆ ಕಟ್ಟಿ ನಿಲ್ಲಿಸಿದರು

ಒಂದಿಡೀ ಗುಡ್ಡದ ನೀರು ಈಗ ನಾಡಗೌಡರು ಹೇಳಿದಂತೆ ಕೇಳುತ್ತಿದೆ. ನಡೆಯೆಂಬಲ್ಲಿ ನಡೆಯುತ್ತದೆ. ನಿಲ್ಲೆಂಬಲ್ಲಿ ನಿಲ್ಲುತ್ತದೆ. ಹೆಚ್ಚೆಂದರೆ ಅಲ್ಲೇ ಇಂಗಿ ಕೆಳಗಿಳಿದು ಕುಳಿತುಕೊಳ್ಳುತ್ತದೆ. ಅಂಥದ್ದೊಂದು ಸನ್ನಿವೇಶ ನಿರ್ಮಾಣವಾದದ್ದು ಒಂದೆರಡು ದಿನಗಳಲ್ಲಿ ಅಲ್ಲ. ಆ ತಾಣಕ್ಕೊಮ್ಮೆ ನೀವು ಹೋಗಿ ನೋಡಿದರೆ ಅಬ್ಬಾ...ಎಂಬ ಉದ್ಘಾರ ಬರದಿದ್ದರೆ ಹೇಳಿ.
ಬರನಾಡ ನೀರಿನ ಬವಣೆ ಹೇಳತೀರದ್ದು, ಹಾಗೆಂದು ಸುಮ್ಮನೆ ಕುಳಿತರಾದೀತೇ ? ಕುಳಿತುಕೊಳ್ಳುವ ಜಾಯಮಾನದವರೂ ಅಲ್ಲ ಅಲ್ಲಿನ ಮಂದಿ. ವಿಜಾಪುರದ ಹುಬನೂರು-ಟಕ್ಕಳಕಿ ರಸ್ತೆಯಲ್ಲಿರುವ ದ್ರಾಕ್ಷೀ ತೋಟದ ಮಾಲೀಕ ಎಸ್.ಎಚ್. ನಾಡಗೌಡರದ್ದೂ ಇದೇ ಸ್ವಭಾವ. ಇದು ತೋಟವೆಂದರೆ ತೋಟವಲ್ಲ. ಖುಲ್ಲಂಖುಲ್ಲ ನಲವತ್ತು ಎಕರೆ ಗುಡ್ಡವನ್ನು ಹಾಗೊಂದು ಸ್ವರೂಪಕ್ಕೆ ಅವರು ತರಲು ಪಟ್ಟ ಶ್ರಮ ಅವರೊಬ್ಬರಿಗೇ ಗೊತ್ತು. ಇಂದು ಸುತ್ತಮುತ್ತಲೆಲ್ಲೂ ಕಾಣಲು ಸಾಧ್ಯವೇ ಇಲ್ಲದ, ಪುಟ್ಟದೊಂದು ಜಲಾಶಯವೇ ಅಲ್ಲಿ ತುಂಬಿ ತುಳುಕುತ್ತಿದೆ. ಈ ಮಳೆಗಾಲದಲ್ಲಿ ಗುಡ್ಡದಿಂದ ಜಾರಿ ಬಂದು ನಿಂತುಕೊಂಡ ನೀರು ನಿಗಿನಿಗಿ ನಲಿದಾಡುತ್ತಿದೆ.
ಆ ಜಮೀನಿಗೆ ನಾಡಗೌಡರು ಮೊಟ್ಟ ಮೊದಲಿಗೆ ಕಾಲಿಟ್ಟಾಗ ಬಂಜಾತಿಬಂಜರು ನೆಲವದು. ದೇವರಾಣೆ ಅಲ್ಲಿ ಒಂದು ಹುಲ್ಲುಕಡ್ಡಿಯನ್ನೂ ಪ್ರಯತ್ನ ಪೂರ್ವಕ ಬೆಳೆದುಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ. ಏನಾದರಾಗಲಿ ಅಲ್ಲೊಂದಿಷ್ಟು ದ್ರಾಕ್ಷಿ ಹಚ್ಚಲೇಬೇಕೆಂಬ ಹಠಕ್ಕೆ ಬಿದ್ದ ಅವರ ನೆರವಿಗೆ ಬಂದದ್ದು ರಾಷ್ಟ್ರೀಯ ತೋಟಗಾರಿಕೆ ಮಿಷನ್. ಈ ಯೋಜನೆಯಡಿ ಹತ್ತು ಲಕ್ಷ ರೂ.ಗಳು ಮಂಜೂರಾಗುತ್ತಿದ್ದಂತೆ ಬೃಹತ್ ಸಮುದಾಯ ಕೃಷಿ ಹೊಂಡದ ಕನಸು ಚಿಗುರೊಡೆಯಿತು. ವಿಜಾಪುರದ ಕೃಷಿ ಸಹಾಯಕ ಎನ್. ಕುಂಬಾರ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ೭೦ ಮೀಟರ್ ಅಗಲ, ೧೩೦ ಮೀಟರ್ ಉದ್ದ ಹಾಗೂ ಸರಿ ಸುಮಾರು ೬ ಮೀಟರ್ ಆಳದ ಸಮುದಾಯ ಕೆರೆ ಅದೇ ಉತ್ಸಾಹದಲ್ಲಿ ಮೈದಳೆಯಿತು. ಮಳೆಯೂ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿತ್ತು. ಈ ಬಾರಿ ಒಂದಷ್ಟು ನೀರು ತುಂಬಿಕೊಳ್ಳುವುದು ನಿಶ್ಚಿತವಾಗಿತ್ತು. ಆದರೆ ಅಂಥ ನೀರು ಎಷ್ಟು ದಿನ ಅಲ್ಲಿ ನಿಂತುಕೊಂಡೀತು, ಎಲ್ಲಿಯವರೆಗೆ ಬಳಕೆಗೆ ಸಿಕ್ಕೀತು ಎಂಬುದು ಪ್ರಶ್ನೆಯಾಗಿತ್ತು.
ಕೆರೆಯೆಂಬೋ ಕೆರೆ ಏಕಾಏಕೀ ಉದ್ಭವವಾಗುವಂಥದ್ದಲ್ಲ. ಗುಂಡಿ ತೋಡಿ ಬಿಟ್ಟಾಕ್ಷಣ ಅಲ್ಲಿ ಸದಾಕಾಲ ನೀರು ನಿಂತು ನಲಿದಾಡುತ್ತದೆ ಎನ್ನಲಿಕ್ಕಾಗುವುದಿಲ್ಲ. ಹೇಳೀಕೇಳಿ ಅದು ವಿಜಾಪುರದಂಥ ಬೆಂಗಾಡು. ಸಾಮಾನ್ಯವಾಗಿ ಒಂದು ಕೆರೆಯಲ್ಲಿ ಪೂರ್ತಿ ನೀರು ನಿಂತುಕೊಳ್ಳಲು ಕನಿಷ್ಠವೆಂದರೂ ಐದರಿಂದ ಹತ್ತು ವರ್ಷಗಳೇ ಬೇಕಾಗುತ್ತದೆ. ಮಾತ್ರವಲ್ಲ ಅದು ಮಣ್ಣಿನ ಗುಣವನ್ನು ಅವಲಂಬಿಸಿರುತ್ತದೆ. ಆ ಜಾಗದಲ್ಲಿ ಯಾವ ಪ್ರಮಾಣದಲ್ಲಿ ಮಳೆಯಾಗುತ್ತದೆ. ಎಷ್ಟು ನೀರನ್ನು ಮಣ್ಣು ಹೀರಿಕೊಳ್ಳುತ್ತದೆ. ಎಷ್ಟು ವೇಗವಾಗಿ ನೀರು ಇಂಗುತ್ತದೆ. ತೇವಾಂಶವನ್ನು ಎಷ್ಟು ಕಾಲ ಹಿಡಿದಿಟ್ಟುಕೊಳ್ಳುತ್ತದೆ ಇತ್ಯಾದಿ ಅಂಶಗಳನ್ನು ಒಂದು ಹೊಸ ಕೆರೆ ನಿರ್ಮಾಣದ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಒಂದು ಜಾಗದಲ್ಲಿ ಕೆರೆ ಸಹಜವಾಗಿ ನಿರ್ಮಾಣಗೊಂಡಿದೆ ಎಂದರೆ ಸುತ್ತಮುತ್ತಲ ಅಂತರ್ಜಲ ಮಟ್ಟ ಸಾಕಷ್ಟು ಎತ್ತರದಲ್ಲಿದೆ ಎಂಬುದು ಗಮನಾರ್ಹ ಸಂಗತಿ. ಹಾಗಾಗಲು ಅಲ್ಲಿನ ಮಣ್ಣು ಗರಿಷ್ಠ ನೀರನ್ನು ಕುಡಿದು
saturation ಮಟ್ಟವನ್ನು ತಲುಪಿರಬೇಕು. ಹಾಗೆ ನೀರು ಇಂಗುತ್ತ, ಇಂಗುತ್ತ... ಹೋದಂತೆಲ್ಲ, ಮತ್ತೆ ಇಂಗಲು ಉಳಿದಿಲ್ಲ ಎಂಬ ಹಂತದಲ್ಲಿ ಕೆರೆಯ ಅಂಗಳದಲ್ಲಿನ ಮಣ್ಣು ಅಂಟು ಗುಣವನ್ನು ಪಡೆದುಕೊಳ್ಳುತ್ತದೆ. ಮೇಲೊಂದಿಷ್ಟು ಪಾಚಿಯಂಥ ಜಲ ಸಸ್ಯಗಳ ಅಭಿವೃದ್ಧಿಯಾಗುತ್ತದೆ. ಅವು ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಸುತ್ತಲೂ ಆ ಕೆರೆಯದ್ದೇ ಆದ ಒಂದು ಜೀವಪ್ರಪಂಚ ನಿರ್ಮಾಣವಾಗುತ್ತದೆ. ಅಲ್ಲೊಂದಿಷ್ಟು ಗಿಡ ಮರಗಳು ಬೆಳೆಯುತ್ತವೆ. ಅದರತ್ತ ಒಂದಷ್ಟು ಪ್ರಾಣಿ ಪಕ್ಷಿಗಳು ಆಕರ್ಷಿತವಾಗುತ್ತವೆ. ಸುತ್ತ ಬೀಳುವ ಮಳೆ ನೀರು ಈ ಕೆರೆಯನ್ನೇ ತನ್ನ ಪಯಣದ ಗುರಿಯಾಗಿಸಿಕೊಂಡು ಹರಿದು ಬಂದು ಸೇರಲಾರಂಭಿಸುತ್ತದೆ. ಕೊನೆಗೂ ಅಲ್ಲೊಂದು ದಿನ ಜೀವಂತಿಕೆಯ ಎಲ್ಲ ಲಕ್ಷಣಗಳೂ ಪರಿಪೂರ್ಣ ಗೋಚರಗೊಂಡು ‘ಸಾಮ್ರಾಜ್ಯ’ ಸ್ಥಾಪನೆಯಾಗುತ್ತದೆ.
ಇಷ್ಟೊಂದು ಸುದೀರ್ಘ ಪ್ರಕ್ರಿಯೆಗೆ ನಾಂದಿ ಹಾಡುವುದು ಸುಲಭದ ಮಾತಲ್ಲ; ಅದೂ ವಿಜಾಪುರದ ಸೊಕ್ಕಿನ ನೆಲಗುಣದಲ್ಲಿ. ಕೆಕ್ಕರಿಸುವ ಬೇಸಿಗೆಯನ್ನು ಕಂಡಾಗ ಆ ನೆಲ ಚುಂಗು ಬಂದಂತೆ ಆಡಲಾರಂಭಿಸುತ್ತದೆ. ಅದೆಷ್ಟೇ ದಟ್ಟ ತೇವಾಂಶವಿದ್ದರೂ ಪೈಪೋಟಿಗೆ ಬಿದ್ದು ಆಪೋಶನ ತೆಗೆದುಕೊಂಡು ಬಿಡುತ್ತದೆ ಅಲ್ಲಿನ ಮಣ್ಣು, ಹಾಗೂ ಉಳಿದದ್ದು ಅಂಥ ಬಿಸಿಲಿಗೆ ಆವಿಯಾಗದೇ ಇರಲು ಸಾಧ್ಯವೇ ಇಲ್ಲ. ಈ ಎಲ್ಲದರ ನಡುವೆ ನಾಡಗೌಡರು ತಾವು ನಿರ್ಮಿಸಿದ ಕೃಷಿ ಹೊಂಡದಲ್ಲಿ ನೀರು ನಿಲ್ಲಿಸಿಕೊಳ್ಳಬೇಕು. ಅದರಿಂದಲೇ ಮೇಲಿನ ಗುಡ್ಡದಲ್ಲಿ ನಾಟಿ ಮಾಡಿದ ದ್ರಾಕ್ಷಿ ದಂಟುಗಳನ್ನು ಚಿಗುರಿಸಿಕೊಳ್ಳಬೇಕು. ಅಷ್ಟಕ್ಕೇ ಮುಗಿಯುವುದಿಲ್ಲ, ಅದರಿಂದಲೇ ದ್ರಾಕ್ಷಿ ಗೊಂಚಲುಗಳು ಹುಳಿ ಕಳೆದುಕೊಂಡು ಕಳಿಯಬೇಕು.
ಹೇಗೆ ಮಾಡಿದರೂ ಒಂದೆರಡು ವರ್ಷಗಳಲ್ಲಿ ನೀರು ನಿಲ್ಲಿಸಿಕೊಳ್ಳಲು ಸಾಧ್ಯವಿಲ್ಲ. ನೀರಿಲ್ಲದೇ ದ್ರಾಕ್ಷಿ ಬೆಳೆ ಉಳಿಸಿಕೊಳ್ಳಲಾಗುವುದಿಲ್ಲ. ಏನು ಮಾಡುವುದೆಂಬ ಚಿಂತನೆಯಲ್ಲಿದ್ದಾಗಲೇ ಕೆರೆಯ ಮೇಲ್ಪದರಕ್ಕೆ ಪ್ಲಾಸ್ಟಿಕ್ ಹೊದೆಸಿಬಿಟ್ಟರೆ ಹೇಗೆ ? ಎಂಬ ಯೋಚನೆ ಬಂತು. ಉದ್ದ ಅಗಲಗಳನ್ನು ಅಳೆದು ಅರ್ಧ ಹೊಂಡಕ್ಕೆ ಮುಚ್ಚಲು ಅಗತ್ಯ ಪ್ಲಾಸ್ಟಿಕ್‌ನ ಅಳತೆ ತೆಗೆದೇ ಬಿಟ್ಟರು ನಾಡಗೌಡರು. ಬರೋಬ್ಬರಿ ೩೦೦ ಮೈಕ್ರಾನ್‌ನಷ್ಟು ವಿಸ್ತಾರದ ಪ್ಲಾಸ್ಟಿಕ್ ಹಾಳೆಗೆ ಆರ್ಡರ್ ಮಾಡಿಯೂ ಬಿಟ್ಟರೂ. ಪಕ್ಕದ ಮಹಾರಾಷ್ಟ್ರದಿಂದ ಅದು ಲಾರಿಯಲ್ಲಿ ಬಂದು ಇಳಿದೂ ಬಿಟ್ಟಿತು.
ಅದನ್ನು ಇಡಿಯಾಗಿ ಏಕಕಾಲಕ್ಕೆ ಕೆರೆಗೆ ಹೊದೆಸುವುದು ಹೇಗೆ ಎಂಬುದು ಮುಂದಿನ ಸಮಸ್ಯೆ. ಬಟಾ ಬಯಲಲ್ಲಿ ಬೀಸುವ ಗಾಳಿ ಒಂದು ಕಡೆ, ಯಮ ಭಾರ ಇನ್ನೊಂದೆಡೆ. ಎಲ್ಲವನ್ನೂ ಅಳೆದೂಸುರಿದು ಸರಿ ಸುಮಾರು ನೂರಾಹತ್ತು ಮಂದಿಯನ್ನು ಒಟ್ಟಿಗೆ ಸೇರಿಸಿ ಎಲ್ಲರೂ ಸೇರಿ ಅದನ್ನು ಹೊದೆಸುವ ನಿರ್ಧಾರವಾಯಿತು. ಕೆರೆಯಂಗಳದ ಮಧ್ಯದಲ್ಲಿ ಬೃಹತ್ ಪ್ಲಾಸ್ಟಿಕ್ ಸುರುಳಿಯನ್ನು ತಂದು ಚೆಲ್ಲಲಾಯಿತು. ಎರಡು ಸಾಲಿನಲ್ಲಿ ಜನರನ್ನು ನಿಲ್ಲಿಸಿ ಎರಡೂ ಕಡೆಯಿಂದ ಒಟ್ಟಿಗೇ ವಿಭಿನ್ನ ದಿಕ್ಕಿನಲ್ಲಿ ಪ್ಲಾಸ್ಟಿಕ್ ಹಾಳೆಯನ್ನು ಎಳೆದುಕೊಂಡು ಹೊರಡಲಾಯಿತು. ಕೊನೆಗೂ ಮೂರು ಗಂಟೆಯ ಪರಿಶ್ರಮದ ಬಳಿಕ ಕೆರೆಯಂಗಳಕ್ಕೆ ಅಂಗಿ ತೊಡಿಸಲಾಗಿತ್ತು.
ಮೊದಲ ಮಳೆಯನ್ನೇ ನಾಡಗೌಡರು ಹಿಡಿದಿಟ್ಟುಕೊಂಡು ಬಳಸಲಾರಂಭಿದ್ದಾರೆ. ಅದೇ ಸಂದರ್ಭದಲ್ಲಿ ಪ್ಲಾಸ್ಟಿಕ್‌ನ ಕೆಳಭಾಗಕ್ಕೆ ನುಸುಳುವ ನೀರು ಇಂಗುತ್ತಿದೆ. ಹೀಗೆ ನಾಲ್ಕಾರು ವರ್ಷಗಳವರೆಗೆ ಈ ಪ್ಲಾಸ್ಟಿಕ್ ಬಾಳಿಕೆ ಬರುವ ನಿರೀಕ್ಷೆಯಿದೆ. ಅಷ್ಟರಲ್ಲಿ ಅಲ್ಲೊಂದು ಜೀವಸಾಮ್ರಾಜ್ಯ ಸ್ಥಾಪನೆಯಾಗಿ ಶಾಶ್ವತ ಕೆರೆ ತಲೆ ಎತ್ತುವಂತಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ನಾಡಗೌಡರು. ಅವರ ವಿಶ್ವಾಸ ದಿಟವಾಗುವ ಎಲ್ಲ ಲಕ್ಷಣಗಳೂ ಎರಡು ವರ್ಷಗಳಲ್ಲೇ ಕಾಣುತ್ತಿದೆ. ಹಾಗಾಗಲಿ ಎನ್ನೋಣವೇ.