Wednesday, October 28, 2009

ಗೋವಿಂದರಾವ್ ಅವರೇ, ಯೋಚಿಸಿ ತಪ್ಪೇನಿಲ್ಲ, ಆದರೆ ಒಳ್ಳೆಯದನ್ನೂ ಯೋಚಿಸಿ


ಕಳೆದ ಐದು ವರ್ಷಗಳಿಂದ ‘ನೀರು-ನೆರಳು’ ಅಂಕಣದಡಿ ೨೩೩ ಲೇಖನಗಳನ್ನು ಬರೆದಿದ್ದೇನೆ. ಈ ಅಂಕಣದ ಓದುಗರೆಲ್ಲರಿಗೂ ಖಂಡಿತ ಗೊತ್ತಿದೆ. ನಾನು ನೆಲ-ಜಲ, ಹಸಿರು-ಉಸಿರಿನ ಆಚೆ ಏನನ್ನೂ ಬರೆಯುವುದಿಲ್ಲ ಅಂತ. ಕಳೆದ ವಾರ ಗುಜರಾತ್ ಮುಖ್ಯಮಂತ್ರಿ ಮೋದಿಯವರ ಬಗ್ಗೆ ಅಂಕಣ ಬರೆಯಲು ಕುಳಿತಾಗಲೂ ಲೇಖನದ ಯಾವ ಭಾಗದಲ್ಲೂ ರಾಜಕೀಯ ಸುಳಿಯದಂತೆ, ತತ್ತ್ವ-ಸಿದ್ಧಾಂತಗಳೆಂಬ ಹಾಳೂಮೂಳುಗಳು ಸೋಂಕದಂತೆ ಎಚ್ಚರವಹಿಸಿದೆ. ನನ್ನ ಇಡೀ ಲೇಖನ ಕೃಷಿ ಕ್ಷೇತ್ರದಲ್ಲಿ ಮೋದಿ ಸಾಸಿರುವ ಆಮೋಘ ಅಭಿವೃದ್ಧಿಯ ಮೇಲಷ್ಟೇ ಬೆಳಕು ಚೆಲ್ಲಿತ್ತು. ಮತ್ತೆ ನೀವು ನನ್ನನ್ನು ಪ್ರಶ್ನಿಸಿದರೂ ಮೋದಿಯವರ ಬಗ್ಗೆ ‘ಚಲನಶೀಲ ಚಿಂತಕ’ ಮತ್ತದೇ ವಿಶೇಷಣ ಬಳಸುತ್ತೇನೆ ! ಹೌದು, ಅನುಮಾನವೇ ಇಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಆ ಪದವೇ ಅತ್ಯಂತ ಸೂಕ್ತ. ಇಂಥ ಪದವನ್ನು ಮೋದಿಯವರಿಗೆ ಬಿಟ್ಟರೆ ಸದ್ಯಕ್ಕೆ ದೇಶದ ಮತ್ಯಾವ ಮುಂಖ್ಯಮಂತ್ರಿಗೂ ಬಳಸಬೇಕೆನಿಸುತ್ತಿಲ್ಲ. ಗುಜರಾತ್‌ನಲ್ಲಿ ಬೇರೇನಾಗಿದೆಯೋ, ಇಲ್ಲವೋ ಗೊತ್ತಿಲ್ಲ. ನೀರಾವರಿ ಮತ್ತು ಕೃಷಿಯ ವಿಚಾರದಲ್ಲಿ ಆಗಿರುವ ಕ್ರಾಂತಿಯನ್ನು ಹೋಗಿ ನೋಡಿದ ವಿವೇಚನಾವಂತರೆಲ್ಲರೂ ಈ ವಿಶೇಷಣವನ್ನು ಒಪ್ಪುತ್ತಾರೆ.


ಹಾಗಂತ ನಾನು ಸುಖಾಸುಮ್ಮನೆ ಹೇಳುತ್ತಿಲ್ಲ !!
ಗುಜರಾತ್‌ಗೆ ಹೋಗಿ, ಅಲ್ಲಿನ ಪ್ರಗತಿಯನ್ನು ಕಣ್ಣಾರೆ ಕಂಡು, ಕೃಷಿ, ನೆಲ, ಜಲದ ಬಗ್ಗೆ ಕಳೆದ ೧೦ ವರ್ಷಗಳಲ್ಲಿ ನಾನು ಮಾಡಿರುವ ಅಧ್ಯಯನದಿಂದ ಅಲ್ಲಿನ ಅಭಿವೃದ್ಧಿಯನ್ನು ಅಳೆದು-ತೂಗಿ ನೋಡಿದ ಮೇಲೆಯೇ ಮೋದಿಯವರ ಸಾಧನೆಯ ಬಗ್ಗೆ ಒಂದಿಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದೇನೆ. ಯಾರೋ ಬರೆದ ಪೂರ್ವಗ್ರಹಪೀಡಿತ ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು, ಅದೇ ಸತ್ಯವೆಂಬಂತೆ ನಾನೆಂದೂ, ಏನನ್ನೂ ಬರೆದವನಲ್ಲ.


ಅಕ್ಟೋಬರ್ ೨೧ರಂದು ‘ವಿಜಯ ಕರ್ನಾಟಕ’ ದ ಸಂಪಾದಕೀಯ ಪುಟದಲ್ಲಿ ‘ಕರ್ನಾಟಕವನ್ನು ಗುಜರಾತ್ ಮಾಡುವುದಕ್ಕೆ ಮುಂಚೆ ಕೊಂಚ ಯೋಚಿಸೋಣ’ ಎಂಬ ಶೀರ್ಷಿಕೆಯಡಿ ಜಿ.ಕೆ. ಗೋವಿಂದರಾವ್ ಬರೆದಿರುವ ಲೇಖನದಲ್ಲಿ ಉಲ್ಲೇಖಿಸಿರುವ ಅಂಶಗಳ ‘ಮೂಲ’ಗಳಾದರೂ ಯಾವುವು? ಲೇಖನದ ಕೊನೆಯಲ್ಲಿ ಅವರ ಗುಜರಾತ್ eನದ ಗುಟ್ಟನ್ನು ಅವರೇ ಬಹಿರಂಗಪಡಿಸಿದ್ದಾರೆ-ಗ್ರಂಥಋಣ: ಗುಜರಾತಿನ ನಿವೃತ್ತ ಡಿ.ಜಿ.ಪಿ. ಆರ್.ಬಿ. ಶ್ರೀಕುಮಾರ್ ಅವರ ‘ಧರ್ಮದ ಹೆಸರಿನಲ್ಲಿ’, ಹರ್ಷ ಮಂದೆರ್ ಅವರ 'Fear & Forgiveness', ಸಿದ್ಧಾರ್ಥ್ ವರದರಾಜನ್ ಸಂಪಾದಿಸಿದ ಕೃತಿ ‘ಗುಜರಾತ್’, ಅರುಂಧತಿರಾಯ್ ಅವರ 'Listening to Grasshoppers' ಮತ್ತು ಶ್ರಮಿಕ್ ಪ್ರತಿಷ್ಠಾನದ 'Modi slapped'!!


ಈ ಶ್ರೀಕುಮಾರ್, ಸಿದ್ಧಾರ್ಥ್ ವರದರಾಜನ್, ಅರುಂಧತಿರಾಯ್ ಯಾರು ? ಗುಜರಾತ್ ಹಿಂಸಾಚಾರದ ತನಿಖೆ ನಡೆಸಿದ ನ್ಯಾಯಾಂಗೀಯ ಆಯೋಗಗಳ ಮುಖ್ಯಸ್ಥರೇ ಅಥವಾ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ ನ್ಯಾಯದಾನ ಮಾಡುವ ಜಡ್ಜ್‌ಗಳೇ ? ಡಿಜಿಪಿ ಶ್ರೀಕುಮಾರ್ ಅವರನ್ನೇ ತೆಗೆದುಕೊಳ್ಳಿ. ಗುಜರಾತ್ ಹಿಂಸಾಚಾರ ನಡೆದಿದ್ದು ೨೦೦೨ ಫೆಬ್ರವರಿ ೨೭ರ ನಂತರ. ಆಗ ಹಿರಿಯ ಪೊಲೀಸ್ ಅಕಾರಿಯಾಗಿದ್ದ ಡಿಜಿಪಿ ಆರ್.ಬಿ. ಶ್ರೀಕುಮಾರ್, ‘ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ ಮೋದಿ ನನಗೆ ಸೂಚನೆ ನೀಡಿದ್ದರು’ ಎಂದು ಆರೋಪಿಸಿದರು, ಕೊನೆಗೆ ಕೋರ್ಟ್ ಮುಂದೆಯೂ ಅಹವಾಲು ಇಟ್ಟರು. ಆದರೆ ಯಾವಾಗ ? ೨೦೦೭ರಲ್ಲಿ!! ಹಿಂಸಾಚಾರ ನಡೆದಿದ್ದು ೨೦೦೨ರಲ್ಲಿ, ಮೋದಿ ವಿರುದ್ಧ ಶ್ರೀಕುಮಾರ್ ಆರೋಪ ಮಾಡಿದ್ದು ೨೦೦೭ರಲ್ಲಿ !! ಅದುವರೆಗೂ ಏಕೆ ತೆಪ್ಪಗಿದ್ದರು ? ಒಬ್ಬ ಪೊಲೀಸ್ ಅಕಾರಿಯಾಗಿ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕಾಗಿದ್ದು ಕರ್ತವ್ಯ. ಒಂದು ವೇಳೆ, ಮೋದಿಯವರು ಅಂಥದ್ದೊಂದು ಸೂಚನೆ ನೀಡಿದ್ದರೆ ಕೂಡಲೇ ನ್ಯಾಯಾಂಗದ ಮುಂದೆ ಅದನ್ನು ಅರಿಕೆ ಮಾಡಿಕೊಳ್ಳಬಹುದಿತ್ತಲ್ಲವೆ ? ಕನಿಷ್ಠ ಮಾಧ್ಯಮಗಳ ಮುಂದೆಯಾದರೂ ಬಾಯ್ಬಿಡಬಹುದಿತ್ತಲ್ಲವೆ ? ಏಕೆ ಸುಮ್ಮನೆ ಕುಳಿತಿದ್ದರು ? ಆದರೆ ಸತ್ಯವಿಷ್ಟೇ- ಯಾವಾಗ ಡಿಜಿಪಿ ಶ್ರೀಕುಮಾರ್‌ಗೆ ಐಜಿ ಸ್ಥಾನ ದಕ್ಕುವುದಿಲ್ಲ ಎಂದು ಗೊತ್ತಾಯಿತೋ ಆ ಕೂಡಲೇ ಸೆಕ್ಯುಲರ್ ಬ್ರಿಗೇಡ್ ಸೇರಿಕೊಂಡು ಇಂಥದ್ದೊಂದು ಆರೋಪ ಮಾಡತೊಡಗಿದರು !! ಇನ್ನು ಸಿದ್ಧಾರ್ಥ್ ವರದರಾಜನ್. ಆತ ಹೇಳಿ-ಕೇಳಿ ಸಿಪಿಎಂ ಮತ್ತು ಸಿಪಿಐ ಮುಖವಾಣಿಯಂತಿರುವ, ಕೆಲವೊಮ್ಮೆ ಚೀನಾದ ಮುಖವಾಣಿಯಂತೆಯೂ ವರ್ತಿಸುವ ‘ದಿ ಹಿಂದೂ’ ಪತ್ರಿಕೆಯ ವಿಶೇಷ ವರದಿಗಾರ ಹಾಗೂ ಅಂಕಣಕಾರ. ಆತನಿಂದ ಅದ್ಯಾವ ನಿಷ್ಪಕ್ಷಪಾತವನ್ನು ನಿರೀಕ್ಷಿಸಲು ಸಾಧ್ಯ? ಸುಪ್ರಿಂ ಕೋರ್ಟ್‌ನಿಂದಲೇ ಛೀಮಾರಿ ಹಾಕಿಸಿಕೊಂಡಿದ್ದ ಅರುಂಧತಿ ರಾಯ್ ಅವರ ‘ಘನತೆ’ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾ?


ಇಂಥವರನ್ನು ಉಲ್ಲೇಖಿಸಿ, ಅವರು ಉಗುಳಿದ್ದನ್ನೇ ತೀರ್ಥವೆಂಬಂತೆ ಕೈಯಲ್ಲೆತ್ತಿಕೊಂಡು ಕನ್ನಡಿಗರ ತಲೆಮೇಲೆ ಪ್ರೋಕ್ಷಣೆ ಮಾಡಲು ಹೊರಟಿದ್ದೀರಲ್ಲಾ ಗೋವಿಂದರಾವ್ ಅವರೇ ನಿಮಗೆ ಸ್ವಂತ ಅಭಿಪ್ರಾಯವೇ ಇಲ್ಲವೆ ? ನೀವು ಹೊಸದೇನನ್ನೂ ಮಾಡಿಲ್ಲ ಬಿಡಿ ಸಾರ್. ನಿಮ್ಮ ಆದರ್ಶಪುರುಷರಾಗಿರುವ ಕಮ್ಯುನಿಸ್ಟರು ಈ ಕೆಲಸವನ್ನು ಸ್ವಾತಂತ್ರ್ಯ ಬಂದಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ರೋಮಿಲಾ ಥಾಪರ್, ಆರ್.ಎಸ್. ಶರ್ಮಾ, ಇರ್ಫಾನ್ ಹಬೀಬ್, ರವೀಂದರ್ ಕುಮಾರ್, ಸುಮಿತ್ ಸರ್ಕಾರ್ ಮುಂತಾದ ಕಮ್ಯುನಿಸ್ಟ್ ಇತಿಹಾಸಕಾರರು ಬಾಯಿಗೆ ಬಂದಿದ್ದನ್ನು ಬರೆಯುತ್ತಾರೆ. ಉಳಿದ ಕಮ್ಯುನಿಸ್ಟರು ಅದೇ ಆಧಾರವಾಗಿಟ್ಟುಕೊಂಡು ವಿಶ್ವವಿದ್ಯಾಲಯಗಳಲ್ಲಿ ಸಾರ್ವಕಾಲಿಕ ಸತ್ಯವೆಂಬಂತೆ ಬೋಸುತ್ತಾರೆ. ಅವರೆಂತಹ ಹಿಸ್ಟಾರಿಯನ್‌ಗಳೆಂದರೆ ಬಾಬರ್, ಔರಂಗಜೇಬನಂತವರಲ್ಲಿ ಧರ್ಮಸಹಿಷ್ಣುತೆ ಹುಡುಕಿ, ಬರೆದು ಕೊಂಡಾಡುತ್ತಾರೆ. ನಂತರ ಉಳಿದ ಭಟ್ಟಂಗಿಗಳು ಅದನ್ನೇ ‘ಕೋಟ್ ’ ಮಾಡಿ ಉಳಿದವರ ಕಣ್ಣಿಗೆ ಮಂಕುಬೂದಿ ಎರಚುತ್ತಾರೆ. ನೀವು ಮಾಡಿದ್ದೂ ಅದನ್ನೇ.
ಹಾಗಂತ ಹೇಳಲೇಬೇಕಾಗಿದೆ.


ನೀವೆಂದಾದರೂ ಗುಜರಾತ್‌ಗೆ ಹೋಗಿ, ನೋಡಿ ಬಂದು ಬರೆದಿದ್ದರೆ ಅಲ್ಪ-ಸ್ವಲ್ಪವಾದರೂ ಸತ್ಯವಿರಬಹುದೇನೋ ಎಂದು ನಾವೂ ಒಪ್ಪಿಕೊಳ್ಳಬಹುದಿತ್ತು. ಆದರೆ ಮಾಡಿದ್ದೇನು ? ‘ಆರ್ಮ್‌ಚೇರ್ ಎಕ್ಸ್‌ಫರ್ಟ್’ ಕೆಲಸವನು ! ಕುಳಿತಲ್ಲೇ ನಿಮ್ಮ ಆಂತರ್ಯಕ್ಕೆ ಹತ್ತಿರದವರು ಬರೆದ ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ಗೀಚಿದಿರಿ ಅಷ್ಟೇ. ಆದರೆ ನಾನೆಂದೂ ಕುಳಿತಲ್ಲೇ ಬರೆದವನಲ್ಲ.
‘ಈ ನಿಟ್ಟಿನಲ್ಲಿ, ಪ್ರಾಸಂಗಿಕವಾಗಿ, ಜಗತ್ತಿನ ಅತ್ಯಂತ ಅಭಿವೃದ್ಧಿಗೊಂಡ ರಾಷ್ಟ್ರಗಳತ್ತ ಒಂದು ಕ್ಷಣ ಗಮನಹರಿಸುವುದು ಅವಶ್ಯವೆನಿಸುತ್ತದೆ. ಮೊದಲ ಮಹಾಯುದ್ಧದಿಂದ ಜರ್ಝರಿತವಾಗಿಹೋಗಿದ್ದ ಜರ್ಮನಿ ರಾಷ್ಟ್ರವನ್ನು ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದ ವೇಗದಲ್ಲಿ ಅಭಿವೃದ್ಧಿಗೊಳಿಸಿ ಜಗತ್ತನ್ನೇ ಬೆದರಿಸುವಂಥ ಸ್ಥಿತಿಗೆ ಏರಿಸಿದ. ಅವನು ಸಾಸಿದ ಈ ಬಗೆಯ ‘ಅಭಿವೃದ್ಧಿ’ಯನ್ನು ಇಂದು ನಾವು ಮಾದರಿಯಾಗಿ ಒಪ್ಪಲು ಸಾಧ್ಯವೆ ? ಸ್ಟಾಲಿನ್ ರಷ್ಯಾ ಅಥವಾ ಮಾವೋವಿನ ಚೈನಾದ ವಿಷಯಗಳಲ್ಲಿ ಆ ರಾಷ್ಟ್ರಗಳಲ್ಲಿ ನಡೆದ ನೈಜ ಘಟನೆಗಳಿಗೆ ಬಹು ಪ್ರeಪೂರ್ವಕವಾಗಿ ಕುರುಡಾದವರು ಮಾತ್ರ ಆ ಬಗೆಯ ಅಭಿವೃದ್ಧಿಯನ್ನು ಕೊಂಡಾಡಬಲ್ಲರು. ಈ ಮುರೂ ರಾಷ್ಟ್ರಗಳಲ್ಲಿ ಲಕ್ಷಾಂತರ ಜನಗಳ ಗೋರಿಗಳ ಮೇಲೆ ರಾಷ್ಟ್ರವನ್ನು ‘ಬಲಿಷ್ಠ’ಗೊಳಿಸಲಾಯಿತು. ಹೋಗಲಿ, ಪ್ರಜಾಪ್ರಭುತ್ವ ರಾಷ್ಟ್ರವೆಂದು ಬೀಗುವ, ಈಗಲಂತೂ ಏಕಮೇವಾದ್ವಿತೀಯ- ಚಿಂತಕ ನೋಮ್ ಚೋಮ್‌ಸ್ಕಿ ಹೇಳುವಂತೆ- 'Rogue Stute' ಆಗಿರುವ ಅಮೆರಿಕದ ಕತೆಯೇನು ? ತನ್ನ ರಾಷ್ಟ್ರದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಅಮೆರಿಕ, ಮಿಕ್ಕೆಲ್ಲ ಚಿಕ್ಕ ದೊಡ್ಡ ರಾಷ್ಟ್ರಗಳ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಗಳಿಕೆಯಲ್ಲಿ ಯತ್ನಗಳನ್ನೂ, ಹೋರಾಟಗಳನ್ನೂ ದಮನ ಮಾಡುವುದು ಅಥವಾ ಪ್ರಜಾಪ್ರಭುತ್ವ ತರುತ್ತೇನೆಂಬ ಅಪ್ಪಟ ಸುಳ್ಳಿನ ಮುಖವಾಡದಲ್ಲಿ ಲಕ್ಷಾಂತರ ಜನಗಳನ್ನು ಸುಟ್ಟು ಬೂದಿ ಮಾಡುವುದು, ತನ್ಮೂಲಕ ನಿರಂತರ ಯುದ್ಧ ಸ್ಥಿತಿಯನ್ನು ನಿರ್ಮಾಣ ಮಾಡಿ ತನ್ನ ರಾಷ್ಟ್ರದ ಯುದ್ಧೋಪಕರಣ ಉತ್ಪಾದನಾ ಉದ್ಯಮವನ್ನು ಅಭಿವೃದ್ಧಿಗೊಳಿಸಿ, ತನ್ನ ಬೊಕ್ಕಸ ತುಂಬಿಸಿಕೊಳ್ಳುವುದು- ಇದೇ ಪರಿಪಾಠವನ್ನು ಅನುಸರಿಸುತ್ತಿದೆ. ಪ್ರಪ್ರಥಮ ಅಣುಬಾಂಬ್ ಸೊಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ.’


ಹಾಗಂತ ಬರೆದಿದ್ದೀರಲ್ಲಾ ಅದರ ಅರ್ಥವೇನು ಸ್ವಾಮಿ ?
ಏಕೆ ಗೋಜಲು ಗೋಜಲಾಗಿ ಬರೆಯುತ್ತೀರಿ ? ಅಸಂಬದ್ಧ ಉದಾಹರಣೆ ಕೊಡುತ್ತೀರಿ? ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದಲ್ಲಿ ಜರ್ಮನಿಯನ್ನು ಅಭಿವೃದ್ಧಿಪಡಿಸಿದ ಅಂತ ನಿಮಗೆ ಹೇಳಿಕೊಟ್ಟಿದ್ದು ಯಾರು ? ಹಿಟ್ಲರ್ ಅಕಾರಕ್ಕೆ ಬಂದಿದ್ದು ೧೯೩೩ರಲ್ಲಿ. ಅಲ್ಲಿಂದ ೧೯೩೯ರವರೆಗೂ ಆತ ಮಾಡಿದ್ದು ಯುದ್ಧಸಿದ್ಧತೆಯನ್ನೇ ಹೊರತು ಮತ್ತೀನೆನನ್ನೂ ಅಲ್ಲ. ೧೯೩೮ರಲ್ಲಿ ಆಸ್ಟ್ರೀಯಾವನ್ನು ಕಬಳಿದ ಹಿಟ್ಲರ್ ಅಲ್ಲಿನ ಆಗಾಧ ಖನಿಜ ಸಂಪನ್ಮೂಲವನ್ನು ಲೂಟಿ ಹೊಡೆದು ಯುದ್ಧಕ್ಕೆ ಸನ್ನದ್ಧನಾದನೇ ಹೊರತು ಆತ ಯಾವ ಪ್ರಗತಿ, ಅಭಿವೃದ್ಧಿಯನ್ನೂ ಮಾಡಿದವನಲ್ಲ. ತಂತ್ರeನದ ವಿಷಯದಲ್ಲಿ ಜರ್ಮನ್ನರು ೧೫ನೇ ಶತಮಾನದಲ್ಲೇ ಹೆಸರು ಮಾಡಿದ್ದರು. ಹಿಟ್ಲರ್ ಮಾಡಿದ್ದೇನೂ ಇಲ್ಲ. ಇನ್ನು ಅದ್ಯಾವ ದೃಷ್ಟಿಯಲ್ಲಿ ಹಿಟ್ಲರ್, ಸ್ಟಾಲಿನ್, ಲೆನಿನ್, ಮಾವೋಗಳನ್ನು ಮೋದಿ ವಿಷಯದಲ್ಲಿ ಎಳೆದು ತರುತ್ತೀರಿ?


ಹಿಟ್ಲರ್‌ನ ಹೋಲೋಕಾಸ್ಟ್‌ನಲ್ಲಿ ಸತ್ತವರ ಸಂಖ್ಯೆ ೧೧ ದಶಲಕ್ಷ(೧.೧ ಕೋಟಿ), ಸ್ಟಾಲಿನ್ ನೀತಿಗೆ ಬಲಿಯಾಗಿದ್ದು ೨೦ ದಶಲಕ್ಷ, ಲೆನಿನ್ ಬಲಿತೆಗೆದುಕೊಂಡಿದ್ದು ೨೦ ಲಕ್ಷ, ಮಾವೋನಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು ೪೦ರಿಂದ ೨೦ ದಶಲಕ್ಷ ಎಂದು ಅಂದಾಜು ಮಾಡಲಾಗಿದೆ ! ಅವರಿಗೆ ಹೋಲಿಸುವಂತಹ ಯಾವ ಪಾತಕವನ್ನು ಮೋದಿ ಮಾಡಿದ್ದಾರೆ ? ಒಬ್ಬ ಶಾಸಕನೂ ಆಗಿರದಿದ್ದ, ರಾಜಕೀಯದ ಯಾವುದೇ ಅನುಭವ ಇಲ್ಲದೆ ಮೋದಿ ಮುಖ್ಯಮಂತ್ರಿಯಾಗಿದ್ದು ೨೦೦೧, ಅಕ್ಟೋಬರ್ ೭ರಂದು. ಗುಜರಾತ್ ಹಿಂಸಾಚಾರ ಆರಂಭವಾಗಿದ್ದು ೨೦೦೨, ಫೆಬ್ರವರಿ ೨೭ರಂದು. ಅಕಾರಕ್ಕೆ ಬಂದು ಐದು ತಿಂಗಳೂ ಆಗಿರಲಿಲ್ಲ. ಅಂತಹ ವ್ಯಕ್ತಿ ಹಿಂಸಾಚಾರವನ್ನು ತಡೆಗಟ್ಟುವುದರಲ್ಲಿ ಸ್ವಲ್ಪ ಎಡವಿರಬಹುದೇ ಹೊರತು, ಕೊಲೆಪಾತಕಿಯಾಗಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಗುಜರಾತ್ ಹಿಂಸಾಚಾರದಲ್ಲಿ ಮಡಿದವರ ಸಂಖ್ಯೆಯೆಷ್ಟು? ಮುಸ್ಲಿಮರು ೭೯೦, ಹಿಂದೂಗಳು ೨೫೪ !! ಕೋಟಿ ಕೋಟಿ ಜನರನ್ನು ಕೊಲೆಗೈದವರಿಗೂ ಮೋದಿಗೂ ವ್ಯತ್ಯಾಸವೇ ಇಲ್ಲವೆ? ಮಹಾರಾಷ್ಟ್ರ ಮತ್ತು ಆಂಧ್ರದಲ್ಲಿ ಕಳೆದ ೧೦ ವರ್ಷಗಳಲ್ಲಿ ೫೦ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಏಕೆ ಅವರೆಲ್ಲ ನೇಣಿಗೆ ಶರಣಾದರು? ಅವರ ಸಾವಿಗೆ ಮಹಾರಾಷ್ಟ್ರ ಮತ್ತು ಆಂಧ್ರ ಸರಕಾರದ ಹೊಣೆಗೇಡಿತನ, ಸಂವೇzsದನಾರಹಿತ ನೀತಿ, ನಿರ್ಲಕ್ಷ್ಯಗಳು ಕಾರಣವಲ್ಲವೆ? ರೈತರ ಸಾವಿಗೆ ನೇರ ಹಾಗೂ ಪರೋಕ್ಷ ಹೊಣೆಗಾರರಲ್ಲವೆ ? ಅಂದರೆ ಆಂಧ್ರ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನೂ ಸಾಮೂಹಿಕ ಸಾವಿಗೆ ಕಾರಣೀಭೂ ತರನ್ನಾಗಿ ಮಾಡಬಹುದಲ್ಲವೆ?


‘ಪ್ರಪ್ರಥಮ ಅಣುಬಾಂಬ್ ಸೊಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ’ ಎಂದು ಯಾಕ್ರೀ ಹಸಿ ಹಸಿ ಸುಳ್ಳು ಹೇಳುತ್ತೀರಿ ?! ೧೯೪೫ರಲ್ಲಿ ಅಮೆರಿಕ ಸೋಟಿಸಿದ ಅಣುಬಾಂಬ್‌ಗೆ ಸಿಲುಕಿ ಹಿರೋಷಿಮಾದಲ್ಲಿ ಸತ್ತವರು ೧.೪ ಲಕ್ಷ, ನಾಗಾಸಾಕಿಯಲ್ಲಿ ಸುಟ್ಟು ಕರಕಲಾದವರು ೮೦ ಸಾವಿರ. ಒಟ್ಟಾರೆ ೨ಲಕ್ಷದ ೨೦ ಸಾವಿರ. ಏಕೆ ‘ಕೋಟ್ಯಂತರ’ ಎಂದು ಸುಳ್ಳು ಬರೆಯುತ್ತೀರಿ? ಖಂಡಿತ Words are free, But ಅವುಗಳನ್ನು ಬಳಸುವಾಗ ಎಚ್ಚರಿಕೆ ಇರಬೇಕು ಅಲ್ಲವೆ ‘ಡಾಕ್ಟರ್’ ಗೋವಿಂದರಾವ್ ?!


“ನಮಗೆ ಅವಶ್ಯವಿರುವುದು ಸರ್ವಾಂಗೀಣ ಅಭಿವೃದ್ಧಿ. ಸರ್ವಾಂಗೀಣ ಅಭಿವೃದ್ಧಿಯೇ ಪ್ರಗತಿ. ಮನುಷ್ಯನ ಮನಸ್ಸನ್ನು ಮುಟ್ಟುವಂಥ, ಅರಳಿಸುವಂಥ, ಬೆಳೆಸುವಂಥ, ಮನುಷ್ಯ ಸಂಬಂಧಗಳನ್ನು ಆಪ್ತಗೊಳಿಸುವಂಥ, ಜೀವಪ್ರೇಮವನ್ನು ಹುಟ್ಟಿಸುವಂಥ ಅಭಿವೃದ್ಧಿಯೇ ಪ್ರಗತಿ." ನೀವೇ ಬರೆದಿದ್ದೀರಿ. ನಾನು ಬೆಳಕು ಚೆಲ್ಲಿರುವುದೂ ಗುಜರಾತ್‌ನಲ್ಲಿ ಕಂಡುಬರುತ್ತಿರುವ ಅಂತಹ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆಯೇ. ನರ್ಮಾದಾ ನದಿಯ ನೀರು ಹಿಂದೂಗಳ ಜತೆಗೆ ಮುಸ್ಲಿಮರ ಮನೆ, ಹೊಲ, ಗದ್ದೆಗಳನ್ನೂ ಹದಮಾಡುತ್ತಿದೆ. ಏಕೆ ನಿಮ್ಮ ಎದೆಯಲ್ಲಿರುವ ತಾರತಮ್ಯದ ವಿಷಬೀಜವನ್ನು ಬಿತ್ತಲು ಹೊರಟಿದ್ದೀರಿ?!
ಛೇ ಛೇ!

ಈ ಬಾರಿ ಲಾಸ್ಟ್ ‘ಡ್ರಾಪ್’ ಅಲ್ಲ, ಪಂಚ್: ಬಹುಶಃ ನನ್ನ ಲೇಖನ ಸಂಪೂರ್ಣ ಓದುವ ಮೊದಲೇ, ಕೇವಲ ತಲೆಬರಹ ನೋಡಿ ಗೋವಿಂದ ರಾಯರು ಪ್ರತಿ ಕ್ರಿಯಿಸಿರಬಹುದು ಎನಿಸುತ್ತದೆ. ಇಲ್ಲದಿದ್ದರೆ ಅಭಿವೃದ್ಧಿಯ ವಿಷಯಕ್ಕೆ ಕೋಮುವಾದದಂಥ ಸಲ್ಲದ ಬಣ್ಣ ಹಚ್ಚುವ ಕಸರತ್ತು ಮಾಡುತ್ತಿರಲಿಲ್ಲ.

ಅಭಿವೃದ್ಧಿಗೆ ಯಾವ ಇಸಂ ಸ್ವಾಮೀ, ರಾಯರೇ ?


ಲನಶೀಲ ಚಿಂತಕ, ಮತ್ತದೇ ವಿಶೇಷಣ ಬಳಸುತ್ತಿದ್ದೇನೆ. ಹೌದು, ಅನುಮಾನವೇ ಇಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಆ ಪದವೇ ಅತ್ಯಂತ ಸೂಕ್ತ. ಇಂಥ ಪದವನ್ನು ಮೋದಿಯವರಿಗೆ ಬಿಟ್ಟರೆ ಸದ್ಯಕ್ಕೆ ದೇಶದ ಮತ್ಯಾವ ಮುಖ್ಯಮಂತ್ರಿಗೂ ಬಳಸಬೇಕೆನಿಸುತ್ತಿಲ್ಲ. ಗುಜರಾತ್‌ನಲ್ಲಿ ಬೇರೇನಾಗಿದೆಯೋ, ಇಲ್ಲವೋ ಗೊತ್ತಿಲ್ಲ. ನೀರಾವರಿ ಮತ್ತು ಕೃಷಿಯ ವಿಚಾರದಲ್ಲಿ ಆಗಿರುವ ಕ್ರಾಂತಿಯನ್ನು ಹೋಗಿ ನೋಡಿದ ವಿವೇಚನಾವಂತರೆಲ್ಲರೂ ಈ ವಿಶೇಷಣವನ್ನು ಒಪ್ಪುತ್ತಾರೆ. ಉಳಿದವರ ಬಗೆಗೆ ನನ್ನಲ್ಲಿ ಅತ್ಯಂತ ಅಸಹಾಯಕ ಮರುಕವಷ್ಟೇ ಹುಟ್ಟುತ್ತದೆ. ಮೋದಿಯವರ ಕೃಷಿ ಕ್ರಾಂತಿಯ ಬಗೆಗೆ ಬರೆಯುವ ಮುನ್ನ ಸ್ವತಃ ಗುಜರಾತ್‌ಗೆ ಹೋಗಿ ನೋಡಿ ಬಂದು ಬರೆದದ್ದೇ ವಿನಃ ಬೇರೆಯವರ ಯಾವುದೋ ಮೂರ್‍ನಾಲ್ಕು ಲೇಖನಗಳನ್ನು ಉಲ್ಲೇಖಿಸಿ ನಾಲ್ಕು ಗೋಡೆಯ ಮಧ್ಯೆ ಕುಳಿತು ಬರೆದದ್ದು ಅಲ್ಲ ಎಂಬುದನ್ನು ಮನಗಾಣಲೇ ಬೇಕು.
ಅಲ್ಲ, ನನ್ನ ಪ್ರಶ್ನೆ ಇಷ್ಟೆ, ಮೋದಿಯವರ ಹೆಸರು ಹೇಳಿದಾಕ್ಷಣ ಇವರೇಕೆ ಹೀಗೆ ಮೈಮೇಲೆ ದೆವ್ವ ಬಂದವರಂತೆ ಆಡುತ್ತಾರೆ ಅರ್ಥವೇ ಆಗುತ್ತಿಲ್ಲ ? ಅಷ್ಟಕ್ಕೂ ಕಳೆದ ವಾರ ಈ ಅಂಕಣದ ( ಕರ್ನಾಟಕವನ್ನು ಮತ್ತೊಂದು ಗುಜರಾತ್ ಮಾಡಿ, ಪ್ಲೀಸ್...) ಆರಂಭದಲ್ಲೇ ಸ್ಪಷ್ಟಪಡಿಸಿದ್ದೇನೆ. ‘ಮೋದಿ ಎಂದ ತಕ್ಷಣವೇ ಕೇವಲ ಹಿಂದೂ-ಮುಸ್ಲಿಂ ಪ್ರಕರಣವನ್ನೇ ನಮ್ಮ ಮಾದ್ಯಮಗಳು ಬಿಂಬಿಸುತ್ತವೆ. ಈ ದೇಶದ ಜೀವಾಳವೆನಿಸಿರುವ ಕೃಷಿಯಲ್ಲಾದ ಕ್ರಾಂತಿ ಸುದ್ದಿಯಾಗುವುದಿಲ್ಲ ಏಕೆ?’ ಎಂಬುದು ಅಂದಿನ ಬರಹದ ಮೂಲಭೂತ ಪ್ರಶ್ನೆಯಾಗಿತ್ತು. ಕೃಷಿ ಮತ್ತು ನೀರಾವರಿಯಲ್ಲಿ ಮೋದಿಯವರು ಕೈಗೊಂಡಿರುವ ನೈಜ ಕ್ರಾಂತಿಯ ಬಗೆಗೇ ಇಡೀ ಲೇಖನದುದ್ದಕ್ಕೂ ವಿವರಣೆ ಒದಗಿಸಲಾಗಿತ್ತು. ಕಾಮಾಲೆ ಕಣ್ಣಿನ ಸನ್ಮಾನ್ಯ ಜಿ.ಕೆ.ಗೋವಿಂದರಾವ್ ಅವರಂಥ ಅತ್ಯಂತ ಜಾತ್ಯತೀತ ಹಾಗೂ ಬುದ್ಧಿಜೀವಿ ( ಈ ಎರಡೂ ಪದಗಳಿಗೆ ನನಗಿನ್ನೂ ಅರ್ಥ ದೊರಕಿಲ್ಲ) ವ್ಯಕ್ತಿಗಳಿಗೆ ಇದೇಕೆ ಅರ್ಥವೇ ಆಗಿಲ್ಲ ? ಬಹುಶಃ ನನ್ನ ಲೇಖನ ಸಂಪೂರ್ಣ ಓದುವ ಮೊದಲೇ, ಕೇವಲ ತಲೆಬರಹ ನೋಡಿ ಅವರು ( ಅ.೨೧ರ ಸಂಚಿಕೆಯಲ್ಲಿ ಪ್ರಕಟವಾದ-‘ಕರ್ನಾಟಕವನ್ನು ಗುಜರಾತ್ ಮಾಡುವ ಮುಂಚೆ ಕೊಂಚ ಯೋಚಿಸೋಣ’ )ಪ್ರತಿಕ್ರಿಯಿಸಿರಬಹುದು ಎನಿಸುತ್ತದೆ. ಇಲ್ಲದಿದ್ದರೆ ಅಭಿವೃದ್ಧಿಯ ವಿಷಯಕ್ಕೆ ಕೋಮುವಾದದಂಥ ಸಲ್ಲದ ಬಣ್ಣ ಹಚ್ಚುವ ಕಸರತ್ತು ಮಾಡುತ್ತಿರಲಿಲ್ಲ.
ಸ್ವಾಮಿ ಗೋವಿಂದರಾಯರೇ, ನಿಮ್ಮ ಹಿರಿತನ, ಪ್ರತಿಭೆಯ ಬಗೆಗೆ ಖಂಡಿತಾ ಗೌರವವಿದೆ. ಆದರೆ ಬೌದ್ಧಿಕತೆ, ಜಾತ್ಯತೀತತೆ ಎಂಬುದು ನಿಮ್ಮಂಥವರಿಗೆ ಮಾತ್ರ ಮಾರಾಟವಾಗಿದೆ ಎಂಬ ನಿಮ್ಮಗಳ ಧೋರಣೆಯ ಬಗ್ಗೆ ಮಾತ್ರ ನನ್ನ ಆಕ್ಷೇಪವಿದೆ. ಕಳೆದ ಐದು ವರ್ಷಗಳಿಂದ ಈ ಅಂಕಣದಲ್ಲಿ ನೀರಿನ ಬಗೆಗೆ ಬರೆಯುತ್ತ ಬರಲಾಗಿದೆ. ಈಗಲೂ ಈ ಅಂಕಣ ನೀರಿಗೇ ಮೀಸಲು. ಅನಿವಾರ್ಯವಾಗಿ ಈ ವಾರ ನಿಮ್ಮಂಥವರ ಲೇಖನಕ್ಕೆ ಪ್ರತಿಕ್ರಿಯಿಸಬೇಕಾಗಿ ಬಂದಿದೆ. ಇಲ್ಲದಿದ್ದರೆ ಖಂಡಿತಾ, ಇದು ಅಭಿವೃದ್ಧಿಪರ ವಿಷಯಗಳಿಗೆ, ನೀರಿನ ಯಶೋಗಾಥೆಗಳಿಗೆ ಸೀಮಿತವೇ ಹೊರತು, ಯಾರನ್ನೋ ಟೀಕಿಸಲು, ಅಗ್ಗದ ಭಾಷಾ ಪ್ರೌಢಿಮೆ ಮೆರೆಯಲು ಅಲ್ಲ. ಈ ಕುರಿತು ಓದುಗರ ಕ್ಷಮೆಯನ್ನೂ ಯಾಚಿಸಿ, ಮೋದಿಯವರು ನೀರಾವರಿಯಲ್ಲಿ ಕೈಗೊಂಡ ಇನ್ನಷ್ಟು ಮಹೋನ್ನತ ಕಾರ್ಯಗಳನ್ನು ವಿವರಿಸುತ್ತೇನೆ. ಸಾಧ್ಯವಾದರೆ ದಯವಿಟ್ಟು ನಿಮ್ಮ ಜಾತ್ಯತೀತತೆಯ ಮುಖವಾಡ ಕಳಚಿಟ್ಟು ಓದಿ ಅರ್ಥ ಮಾಡಿಕೊಳ್ಳಿ.
ದೇಶದಲ್ಲಿ ಇಂದಿಗೂ ಶೇ. ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ ‘ನೀರು ಸರಬರಾಜು ಯೋಜನೆ’ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ. ಗಮನಾರ್ಹ ಸಂಗತಿಯೆಂದರೆ, ಹೀಗೆ ‘ನೀರು ಸರಬರಾಜು’ ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ. ಅದನ್ನೇ ಮೋದಿಯವರು ಗುಜರಾತ್‌ನ ಎಲ್ಲ ಹಳ್ಳಿಗಳಿಗೆ ದಕ್ಕಿಸಿಕೊಟ್ಟಿದ್ದಾರೆ.
ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ. ಮೋದಿ ಅದನ್ನೇ ಗುಜರಾತ್‌ನಲ್ಲೂ ಮಾಡುತ್ತಿರುವುದು, ಬೇಕಿದ್ದರೆ ಹೋಗಿ ನೋಡಿ ಬನ್ನಿ.

ಕರ್ನಾಟಕವನ್ನು ಗುಜರಾತ್ ಮಾಡುವುದಕ್ಕೆ ಮುಂಚೆ ಕೊಂಚ ಯೋಚಿಸೋಣ

ಗ ಎಲ್ಲ ರಾಜಕಾರಣಿಗಳ ಬಾಯಲ್ಲೂ ಅಭಿವೃದ್ಧಿಮಂತ್ರ ಪಠಣವಾಗುತ್ತಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಎಂಬೆಲ್ಲ ಮೌಲ್ಯಗಳನ್ನು ಮೂಲೆಗೆ ತಳ್ಳಲಾಗಿದೆ.
ಸದ್ಯಕ್ಕೆ ಕರ್ನಾಟಕದ ಬಿಜೆಪಿ ಸರಕಾರಕ್ಕೆ “ಅಭಿವೃದ್ಧಿ" ಎಂಬುದಕ್ಕೆ ನೈಜ ವ್ಯಾಖ್ಯಾನ ಕಟ್ಟಿಕೊಟ್ಟ ನರೇಂದ್ರ ಮೋದಿ ಎಂಬ ಚಲನಶೀಲ, ಚಿಂತಕ ಮುಖ್ಯಮಂತ್ರಿ (೧೬-೧೦-೦೯ರ ರಾಧಾಕೃಷ್ಣ ಭಡ್ತಿ ಅವರ ‘ಕರ್ನಾಟಕವನ್ನು ಇನ್ನೊಂದು ಗುಜರಾತು ಮಾಡಿ, ಪ್ಲೀಸ್’ ಲೇಖನ) ಅಭಿವೃದ್ಧಿಪಥದಲ್ಲಿ ದಾಪುಗಾಲಿಟ್ಟು ನಡೆಯುತ್ತಿರುವ ಆರಾಧ್ಯದೈವ ಎಂದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಸಚಿವರು ಮೋದಿ ಅವರಿಂದ ‘ಶ್ರದ್ಧೆಯಿಂದ ಪಾಠ ಕೇಳಿ ಬಂದರು.’
ಒಂದು ರಾಜ್ಯವಾಗಲಿ, ಒಂದು ನಾಡಾಗಲಿ ಸರ್ವವಿಧದಲ್ಲಿಯೂ ಅಭಿವೃದ್ಧಿಗೊಳ್ಳಬೇಕು ಎಂಬುದರ ಬಗ್ಗೆ ಯಾರದೂ ತಕರಾರಿಲ್ಲ. ಆದರೆ ‘ಅಭಿವೃದ್ಧಿ’ ಶಬ್ದ ಬಳಸಿದಾಗ ಅದಕ್ಕೆ ನಾವು ಹಚ್ಚುವ ಅರ್ಥವೆಷ್ಟು? ಆ ಶಬ್ದಕ್ಕೆ ಇರುವ ವ್ಯಾಪ್ತಿಯೆಷ್ಟು? ಮತ್ತು ಅಭಿವೃದ್ಧಿಯೇ ಪ್ರಗತಿ ಕೂಡ ಹೌದೆ! ಈ ಎರಡು ಶಬ್ದಗಳ ಪರಸ್ಪರ ಸಂಬಂಧವೇನು? ಇವುಗಳನ್ನು ನಾವು ಎಚ್ಚರಿಕೆಯಿಂದ ತಿಳಿಯಬೇಕು ಮತ್ತು ಯಾವುದೇ ರೀತಿಯ ಒಳ್ಳೆಯ ಪಾಠವನ್ನಾಗಲಿ ನಾವು ಕಲಿಯುತ್ತಲೇ ಇರಬೇಕಾದ ಅವಶ್ಯಕತೆಯನ್ನು ಯಾರೂ ನಿರಾಕರಿಸಲಾರರು. ಆದರೆ ಯಾರಿಂದ ಪಾಠ ಕಲಿಯುತ್ತಿದ್ದೇವೆ ಮತ್ತು ಅವರದೇ ನಂಬಿಕೆಗಳನ್ನು ಕಾರ್ಯರೂಪಕ್ಕೆ ಅಳವಡಿಸುವಾಗ ಅವರು ತೋರುತ್ತಿರುವ ರೀತಿ ಯಾವುದು ಎಂಬುದು ಬಹುಮುಖ್ಯವಾಗುತ್ತದೆ. ವಿಶೇಷ ವಾಗಿ ಆ ವ್ಯಕ್ತಿ ರಾಜಕಾರಣದಲ್ಲಿದ್ದು, ರಾಜ್ಯದ ಆಡಳಿತದ ಮುಂಚೂಣಿ ಯಲ್ಲಿದ್ದಾಗ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ.
ಈ ನಿಟ್ಟಿನಲ್ಲಿ, ಪ್ರಾಸಂಗಿಕವಾಗಿ, ಜಗತ್ತಿನ ಅತ್ಯಂತ ಅಭಿವೃದ್ಧಿ ಗೊಂಡ ರಾಷ್ಟ್ರಗಳತ್ತ ಒಂದು ಕ್ಷಣ ಗಮನಹರಿಸುವುದು ಅವಶ್ಯವೆನಿಸುತ್ತದೆ. ಮೊದಲ ಮಹಾಯುದ್ಧದಿಂದ ಜರ್ಝರಿತ ವಾಗಿಹೋಗಿದ್ದ ಜರ್ಮನಿ ರಾಷ್ಟ್ರವನ್ನು ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದ ವೇಗದಲ್ಲಿ ಅಭಿವೃದ್ಧಿಗೊಳಿಸಿ ಜಗತ್ತನ್ನೇ ಬೆದರಿಸುವಂಥ ಸ್ಥಿತಿಗೆ ಏರಿಸಿದ. ಅವನು ಸಾಸಿದ ಈ ಬಗೆಯ ‘ಅಭಿವೃದ್ಧಿ’ಯನ್ನು ಇಂದು ನಾವು ಮಾದರಿಯಾಗಿ ಒಪ್ಪಲು ಸಾಧ್ಯವೆ? ಸ್ಟಾಲಿನ್‌ನ ರಷ್ಯಾ ಅಥವಾ ಮಾವೋವಿನ ಚೀನಾದ ವಿಷಯಗಳಲ್ಲಿ ಆ ರಾಷ್ಟ್ರಗಳಲ್ಲಿ ನಡೆದ ನೈಜ ಘಟನೆಗಳಿಗೆ ಬಹು ಪ್ರeಪೂರ್ವಕವಾಗಿ ಕುರುಡಾದವರು ಮಾತ್ರ ಆ ಬಗೆಯ ಅಭಿವೃದ್ಧಿಯನ್ನು ಕೊಂಡಾಡಬಲ್ಲರು. ಈ ಮೂರೂ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರ ಗೋರಿಗಳ ಮೇಲೆ ರಾಷ್ಟ್ರವನ್ನು ‘ಬಲಿಷ್ಠ’ಗೊಳಿಸಲಾಯಿತು. ಹೋಗಲಿ, ಪ್ರಜಾಪ್ರಭುತ್ವ ರಾಷ್ಟ್ರವೆಂದು ಬೀಗುವ, ಈಗಲಂತೂ ಏಕಮೇವಾದ್ವಿತೀಯ- ಚಿಂತಕ ನೋಮ್ ಚೋಮ್‌ಸ್ಕಿ ಹೇಳುವಂತೆ- ’Rogue State' ಆಗಿರುವ ಅಮೆರಿಕದ ಕತೆಯೇನು? ತನ್ನ ರಾಷ್ಟ್ರದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಅಮೆರಿಕ, ಮಿಕ್ಕೆಲ್ಲ ಚಿಕ್ಕ ದೊಡ್ಡ ರಾಷ್ಟ್ರಗಳ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಗಳಿಕೆಯಲ್ಲಿ ಯತ್ನಗಳನ್ನೂ, ಹೋರಾಟಗಳನ್ನೂ ದಮನ ಮಾಡುವುದು ಅಥವಾ ಪ್ರಜಾಪ್ರಭುತ್ವ ತರುತ್ತೇನೆಂಬ ಅಪ್ಪಟ ಸುಳ್ಳಿನ ಮುಖವಾಡದಲ್ಲಿ ಲಕ್ಷಾಂತರ ಜನರನ್ನು ಸುಟ್ಟು ಬೂದಿ ಮಾಡುವುದು, ತನ್ಮೂಲಕ ನಿರಂತರ ಯುದ್ಧ ಸ್ಥಿತಿಯನ್ನು ನಿರ್ಮಾಣ ಮಾಡಿ ತನ್ನ ರಾಷ್ಟ್ರದ ಯುದ್ಧೋಪಕರಣ ಉತ್ಪಾದನಾ ಉದ್ಯಮವನ್ನು ಅಭಿವೃದ್ಧಿಗೊಳಿಸಿ, ತನ್ನ ಬೊಕ್ಕಸ ತುಂಬಿಸಿಕೊಳ್ಳುವುದು-ಇದೇ ಪರಿಪಾಠವನ್ನು ಅನುಸರಿಸುತ್ತಿದೆ. ಪ್ರಪ್ರಥಮ ಅಣುಬಾಂಬ್ ಸೋಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ.
ಅಭಿವೃದ್ಧಿ ಎಂಬುದು ಮಾನವೀಯ ಮೌಲ್ಯಗಳನ್ನು ಹೊಂದಿರದಿ ದ್ದರೆ ಅದು ಕೇವಲ ಇಂದ್ರಿಯಗಳಿಗೆ ಮಾತ್ರ ತಾಗುವಂತಾಗಿ, ಐಂದ್ರಿಕಭೋಗವೇ ಅಭಿವೃದ್ಧಿಯ ಲಕ್ಷಣ ಎಂಬ ಆತ್ಮಹಾನಿಕರ ಭ್ರಮೆಯನ್ನು ಹುಟ್ಟಿಸಿಬಿಡುತ್ತದೆ. ಈಗ ಜಗತ್ತಿನಾದ್ಯಂತ ಆಗುತ್ತಿರು ವುದೇ ಇದು. ಪ್ರಜಾತಂತ್ರದ, ಸಮಾನತೆಯ, ಸರ್ವಜನ ಹಿತದೃಷ್ಟಿಯ ವಿರೋ ನಿಲುವು ಇದು.
ನಮಗೆ ಅವಶ್ಯವಿರುವುದು ಸರ್ವಾಂಗೀಣ ಅಭಿವೃದ್ಧಿ. ಸರ್ವಾಂಗೀಣ ಅಭಿವೃದ್ಧಿಯೇ ಪ್ರಗತಿ. ಮನುಷ್ಯನ ಮನಸ್ಸನ್ನು ಮುಟ್ಟುವಂಥ, ಅರಳಿಸುವಂಥ, ಬೆಳೆಸುವಂಥ, ಮನುಷ್ಯ ಸಂಬಂಧ ಗಳನ್ನು ಆಪ್ತಗೊಳಿಸುವಂಥ, ಜೀವಪ್ರೇಮವನ್ನು ಹುಟ್ಟಿಸುವಂಥ ಅಭಿವೃದ್ಧಿಯೇ ಪ್ರಗತಿ.
* * *
ಈ ‘ಚಲನಶೀಲ ಚಿಂತಕ’ ಮೋದಿಯವರ ಅಭಿವೃದ್ಧಿ ರೀತಿಯನ್ನು ನೋಡೋಣ. ಗುಜರಾತೆಂದರೆ ಈಗ ಕನಿಷ್ಠ ಎರಡು ಗುಜರಾತ್‌ಗಳಿವೆ. ಒಂದು, ನಗರ ಕೇಂದ್ರಗಳಲ್ಲಿರುವ ಬಹುಸಂಖ್ಯಾತರ, ಹಣವಂತರ, ಉಚ್ಚವರ್ಗಗಳ ಗುಜರಾತ್. ಇನ್ನೊಂದು, ಗ್ರಾಮಾಂತರ ಪ್ರದೇಶಗಳ, ಬಹುಪ್ರಮುಖವಾಗಿ ಅಲ್ಪಸಂಖ್ಯಾತರ, ನಿರ್ಗತಿಕರ, ಆದಿವಾಸಿಗಳ ಗುಜರಾತ್.
ಗುಜರಾತಿನ ಕೆಲವು ಗ್ರಾಮಗಳ ಪ್ರವೇಶದಲ್ಲಿ ‘ಹಿಂದೂ ರಾಷ್ಟ್ರ ವಾದ ಗುಜರಾತಿನ ಹಿಂದೂ ಗ್ರಾಮಕ್ಕೆ ಸ್ವಾಗತ’ ಎಂಬ ಬೃಹತ್ ಬ್ಯಾನರ್‌ಗಳನ್ನು ಹಾಕಲಾಗಿದೆ.
ಒಂದು ಕಾಲದಲ್ಲಿ ಮೊಹರಂ ಹಬ್ಬದ ವೇಳೆ ಮೆರವಣಿಗೆಯಲ್ಲಿ ಕೊಂಡೊಯ್ಯುವ ತಾಬೂತ್ ಕೆಳಗೆ ಹಿಂದೂ ಮಹಿಳೆಯರು ತಮ್ಮ ಮಕ್ಕಳು ಹಾದುಹೋದರೆ ಅವರು ದೀರ್ಘಾಯುಷಿಗಳಾಗುತ್ತಾರೆ ಎಂಬ ನಂಬಿಕೆಯಲ್ಲಿ ಹಾಗೆ ಹಾದುಹೋಗಲು ಅವಕಾಶ ಪಡೆಯುತ್ತಿದ್ದರು. ಈಗ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವಾಗ ತಮ್ಮ ಮಕ್ಕಳನ್ನು ಮುಸ್ಲಿಂ ಮಕ್ಕಳ ಪಕ್ಕದಲ್ಲಿ ಕೂಡಿಸಬಾರದು ಎಂಬ ಕಟ್ಟಪ್ಪಣೆ ಮಾಡುತ್ತಾರೆ.
ಮುಸ್ಲಿಂ ಯುವಕರಿಗೆ ಉದ್ಯೋಗ ನೀಡುವುದಿಲ್ಲ; ಅವರ ವ್ಯಾಪಾರ ಮಳಿಗೆಗಳಿಗೆ ಹೋಗುವುದಿಲ್ಲ; ಅವರ ಆಟೊಗಳಲ್ಲಿ ಕೂಡುವುದಿಲ್ಲ.
ಮುಸ್ಲಿಂ ಅಪ್ಪ ಅಮ್ಮಂದಿರು ಮಕ್ಕಳು ಅಕಸ್ಮಾತ್- ಮನೆಯಲ್ಲಿ ಎಷ್ಟೇ ಎಚ್ಚರಿಸಿದ್ದರೂ- ರಸ್ತೆಯಲ್ಲಿ ತಮ್ಮನ್ನು ‘ಅಮ್ಮಿ’ ‘ಅಬ್ಬ’ ಎಂದು ಕರೆದು ಎಲ್ಲಿ ತಮ್ಮ ಗುರುತು ಬಹಿರಂಗವಾಗಿಬಿಡುತ್ತದೋ ಎಂಬ ಆತಂಕದಲ್ಲಿ ಪ್ರತಿಕ್ಷಣ ಕಳೆಯುತ್ತಾರೆ.
೨೦೦೨ರಲ್ಲಿ ಆರಂಭವಾದ ಹತ್ಯಾಕಾಂಡದ ಮಿನಿಸ್ವರೂಪಗಳು ಈಗಲೂ ನಡೆಯುತ್ತಿವೆ. ೧,೭೦,೦೦೦ ನಿರಾಶ್ರಿತರ ಶಿಬಿರ ಗಳನ್ನು ಕಿತ್ತುಹಾಕಿರುವುದರಿಂದ, ಕೊಳಚೆ ಪ್ರದೇಶಗಳಲ್ಲಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಡೀ ಜನಾಂಗವನ್ನು ಎರಡನೆದರ್ಜೆ ನಾಗರಿಕರಾಗಿ ಕಾಣಬೇಕೆಂಬ ಅಘೋಷಿತ ಆದೇಶವಿದೆ.
ಈ ಎಲ್ಲದರಲ್ಲಿ ಗುಜರಾತಿನ ಪ್ರತಿ ಬಹುಸಂಖ್ಯಾತ ನಾಗರಿಕನೂ ಭಾಗವಹಿಸುತ್ತಿದ್ದಾನೆಂದಲ್ಲ. ಸಂಘಪರಿವಾರದ ಸ್ವಯಂಘೋಷಿತ ಧರ್ಮರಕ್ಷಕ ಪಡೆಯ ಗೂಢಚಾರರು ಪ್ರತಿಯೊಂದನ್ನೂ ಗಮನಿಸುತ್ತಿದ್ದಾರೆ. ಬಾಯಿಬಿಟ್ಟರೆ ಎಷ್ಟು ಅಪಾಯ ಎಂದು ಎಲ್ಲರಿಗೂ ತಿಳಿದಿದೆ. ತಮ್ಮ ಮನಸ್ಸಿಗೆ ಒಪ್ಪಿಗೆಯಾಗಿದ್ದನ್ನು ಸಂದರ್ಭದ ಒತ್ತಡಗಳಿಗೆ ಸಿಲುಕಿ ಹೇಗೆ ತಾವು ಮಾಡಲೇಬೇಕಾಗಿ ಬಂದಿದೆ ಎಂದು ಜನ ಗುಟ್ಟಾಗಿ, ಅನಾಮಿಕರಾಗಿ ಉಳಿದು ಹೇಳಿಕೊಳ್ಳುತ್ತಾರೆ.
ಇನ್ನು ‘ಚಲನಶೀಲ ಚಿಂತಕ’ ಮೋದಿಯವರೇ ಹೇಗೆ ನಡೆದು ಕೊಳ್ಳುತ್ತಿದ್ದಾರೆ! ಚುನಾವಣೆಗಳಲ್ಲಿ ‘ನಾವೈದು, ನಮಗಿಪ್ಪತ್ತೈದು’ ಎಂಬ ಘೋಷಣೆ ಜನಪ್ರಿಯಗೊಳಿಸಿದ್ದಾರೆ. ‘ನಿರಾಶ್ರಿತರ ಶಿಬಿರ ಗಳನ್ನು ತೆರೆದು ಅವುಗಳು ಶಿಶು ಉತ್ಪಾದನಾ ಕೇಂದ್ರಗಳನ್ನಾಗಿ ಮಾಡಬೇಕೆ?’ ಎಂದು ಸವಾಲು ಎಸೆಯುತ್ತಾರೆ. ಪೊಲೀಸರು ಮುಸ್ಲಿಮರ ಮನೆಬಾಗಿಲುಗಳನ್ನು ಮಧ್ಯರಾತ್ರಿ ಬಡಿದು ಯುವಕರನ್ನು ಎಳೆದೊಯ್ಯುವುದು, ಮಿಕ್ಕವರ ಮೇಲೆ ಹಲ್ಲೆ ನಡೆಸುವುದು ನಡೆದೇ ಇದೆ. ೨೦೦೨ರ ಹತ್ಯಾಕಾಂಡವಾದಾಗ ಪೊಲೀಸರ ಸಭೆ ಕರೆದು ‘ಮೂರು ದಿವಸ ನಿಷ್ಕ್ರಿಯರಾಗಿರಬೇಕೆಂದು’ ಆದೇಶ ನೀಡಿದುದು ಈಗ ಜಗತ್ತಿಗೇ ಗೊತ್ತಿರುವ ಸತ್ಯ.
ಇದು ಗುಜರಾತಿನ ಮತ್ತೊಂದು ಮತ್ತು ನಿಜ ಸ್ವರೂಪ. ಇದನ್ನು ನಿರ್ಲಕ್ಷಿಸಿ ಟಾಟಾಗಳು, ಅಂಬಾನಿಗಳು ಮೆಚ್ಚುವ ಗುಜರಾತ್. ಥಳಕಿನ ಗುಜರಾತ್, ತೋರಿಕೆಯ ಗುಜರಾತ್. ಇಂದ್ರಲೋಕವನ್ನೇ ಸೃಷ್ಟಿಸಿದರೂ ಅದು ಮನುಷ್ಯರು, ಸಾಮಾನ್ಯರು ನೆಮ್ಮದಿಯಿಂದ ಬದುಕಬೇಕಾದ ಲೋಕವಾಗಬೇಕೇ ಹೊರತು ಗರಿಗರಿ ಉಡುಪಿನ ಕಾರ್ಪೊರೇಟ್ ಜಗತ್ತಿನ ಬಕಾಸುರರಿಗಷ್ಟೇ ಅಲ್ಲ.
ಅಂಥ ಪ್ರಗತಿಯಾಗುವುದು ರಾತ್ರೋರಾತ್ರಿಯಾಗಲಿ, ಶೂನ್ಯದಲ್ಲಿಯಾಗಲಿ ಸಾಧ್ಯವಿಲ್ಲ. ಮನುಷ್ಯ ಸಂದರ್ಭದಲ್ಲಿ ನಿಧಾನಗತಿಯಲ್ಲಿ ಮಾತ್ರ ಸಾಧ್ಯ. ಸದ್ಯದ ನೆರೆಹಾವಳಿಯ ಸಂದರ್ಭದಲ್ಲಿ ಅಹೋರಾತ್ರಿ ಕಳಕಳಿಯಿಂದ ಮೆಚ್ಚುಗೆಯ ರೀತಿಯಲ್ಲಿ ಶ್ರಮಿಸುತ್ತಿರುವ ಯಡಿಯೂರಪ್ಪನವರಿಗೆ ಇದು ಸ್ವಂತ ಅನುಭವಕ್ಕೆ ಬಂದಿರಬೇಕು.
ತಂತ್ರeನ ಯುಗ ಕಲಿಸಿದ ವೇಗದ ಭ್ರಮೆಯನ್ನು ಮನುಷ್ಯನ ಮನಸ್ಸಿನ ಲೋಕಕ್ಕೆ ದಾಳಿಯಿಡಿಸಲು ಸಾಧ್ಯವಿಲ್ಲ ಎಂದೇ ಗಾಂಜಿಯವರು ‘One Step enough for me' ಎಂದು ಹೇಳುತ್ತಿದ್ದುದು. ಆದರೆ ಆ ’step’ ಒಂದೊಂದೇ ಆದರೂ ನಿಲ್ಲದಂತೆ ಇಡುತ್ತಲೇ ಇರಬೇಕು; ಮುಂದುವರಿಯುತ್ತಲೇ ಇರಬೇಕು, ಗಡಿಯಾರದ ಮುಳ್ಳಿನ ತರಹ; ಪ್ರಗತಿಯೂ ಸಾಧ್ಯವಾಗುವ ಅಭಿವೃದ್ಧಿಮಾರ್ಗ ಇದು.
ಆದರೆ ಗುಜರಾತಿನ ಸದ್ಯದ ಅಭಿವೃದ್ಧಿಗತಿ ನೋಡಿದರೆ ನನಗೆ ಒಮ್ಮಿಂದೊಮ್ಮೆಗೇ, ಈ ವೈeನಿಕ ಶರವೇಗದ ಯುಗದಲ್ಲೂ ಗರ್ಭಿಣಿ ದಿಢೀರ್ ಹೆರುವುದಿಲ್ಲವಲ್ಲ ಎಂಬ ಪರಿತಾಪದಲ್ಲಿ ಬಲವಂತದ ಹೆರಿಗೆ ಮಾಡಿಸುವ ರೀತಿಗೆ ಭಿನ್ನವಲ್ಲ. ಹೆಣ್ಣಿಗೆ ಆ ಒಂಬತ್ತು ತಿಂಗಳುಗಳೆಂದರೆ (ಐಟಿ,ಬಿಟಿ ಹೆಣ್ಣುಮಕ್ಕಳಿಗೂ ಸೇರಿದ ಹಾಗೆ) ಕನಸು, ಸಂಭ್ರಮ, ಆತಂಕ, ನಿರೀಕ್ಷೆ ಹಾಗೂ ಪ್ರಕೃತಿಯ ಅದ್ಭುತ ನಿಗೂಢ ಸೃಷ್ಟಿಕ್ರಿಯೆಯಲ್ಲಿ ಸ್ವಯಂ ಭಾಗವಹಿಸುತ್ತಿರುವ ಪುಳಕ- ಎಲ್ಲ ಸೇರಿರುತ್ತದೆ. ಅದು ಹೆಣ್ಣಿನ ವ್ಯಕ್ತಿತ್ವದ ಪ್ರಗತಿ, ಸರ್ವಾಂಗೀಣ ವಿಕಾಸ. ಇದೇ ಮನುಷ್ಯಲೋಕವನ್ನೂ ಒಳಗೊಳ್ಳುವುದು.
ಬದಲಾಗಿ ಭಡ್ತಿಯವರು ಹೇಳುವ ಹಾಗೆ ಮೋದಿಯವರ ಅಭಿವೃದ್ಧಿಪಾಠವನ್ನೇ ಕರಗತ ಮಾಡಿಕೊಂಡು ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡಿದರೆ, ಬಹುಶಃ ಅವರು ಹೇಳುವ ಹಾಗೆ ‘ಯಡಿಯೂರಪ್ಪನವರು ಕನಿಷ್ಠ ಇನ್ನೂ ಮೂರು ಅವಗೂ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಆ ದೇವರಿಂದಲೂ ಸಾಧ್ಯವಿಲ್ಲ’ ಎನ್ನುವುದಾದರೆ, ದೇವರೂ ಕೈಬಿಡುವುದು ಖಂಡಿತವಾದರೆ ಮನುಷ್ಯರು ತಮ್ಮ ಆತ್ಮಸ್ಥೈರ್ಯ, ಮನುಷ್ಯಪ್ರೀತಿ, ಭವಿಷ್ಯಪ್ರe ಇವುಗಳನ್ನು ನೆಚ್ಚಿ ಮುಂದುವರಿಯಬೇಕು ಅಷ್ಟೆ.
(ಗ್ರಂಥಋಣ: ಗುಜರಾತಿನ ನಿವೃತ್ತ ಡಿ.ಜಿ.ಪಿ. ಆರ್.ಬಿ. ಶ್ರೀಕುಮಾರ್ ಅವರ ‘ಧರ್ಮದ ಹೆಸರಿನಲ್ಲಿ’, ಹರ್ಷ ಮಂದೆರ್ ಅವರ ’'Fear & Forgiveness', ಸಿದ್ಧಾರ್ಥ್ ವರದರಾಜನ್ ಸಂಪಾದಿಸಿದ ಕೃತಿ ‘ಗುಜರಾತ್’, ಅರುಂಧತಿರಾಯ್ ಅವರ 'Listening to Grasshoppers' ಮತ್ತು ಶ್ರಮಿಕ್ ಪ್ರತಿಷ್ಠಾನದ ’Modi slapped’)
-ಜಿ.ಕೆ.ಗೋವಿಂದ ರಾವ್

ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡಿ, ಪ್ಲೀಸ್...

ಮೊನ್ನೆ ಮೊನ್ನೆಯಷ್ಟೇ ನಮ್ಮ ಆಡಳಿತಾರೂಢ ಬಿಜೆಪಿಯ ಎಲ್ಲ ನಾಯಕರೂ ಸುತ್ತೂರಿನಲ್ಲಿ ಹೋಗಿ ಕುಳಿತು ಚಿಂತನ ಮಂಥನ ನಡೆಸಿದ್ದು ಹಳೆಯ ಸುದ್ದಿ. ಸಂಪುಟದ ಅಷ್ಟೂ ಸದಸ್ಯರೂ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಅಲ್ಲಿ ಹೋಗಿ ಕುಳಿತು ಶ್ರದ್ಧೆಯಿಂದ ಪಾಠ ಕೇಳಿ ಬಂದರು. ಪಾಠ ಮಾಡಲು ಬಂದವರಾದರೂ ಎಂಥವರು ? ಈ ದೇಶದಲ್ಲಿ ಅಭಿವೃದ್ಧಿ ಎಂಬುದಕ್ಕೆ ನೈಜ ವ್ಯಾಖ್ಯಾನವನ್ನು ಕಟ್ಟಿಕೊಟ್ಟ ನರೇಂದ್ರ ಮೋದಿ ಎಂಬ ಚಲನಶೀಲ ಚಿಂತಕ.


ಪ್ರತಿಪಕ್ಷಗಳು ಎಂದಿನಂತೆಯೇ ಹುಯಿಲೆಬ್ಬಿಸಿದವು ಬಿಡಿ. ಅವತ್ತು ಬಿಜೆಪಿ ಸರಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮೋದಿ ಬಂದಿದ್ದಾಗಲೇ ‘ರಾಜ್ಯವನ್ನು ಬಿಜೆಪಿಯವರು ಇನ್ನೊಂದು ಗುಜರಾತ್ ಮಾಡಲು ಹೊರಟಿದ್ದಾರೆ’ ಎಂದು ಅಲವತ್ತುಕೊಂಡವರು ಇವತ್ತು ಸುಮ್ಮನಿದ್ದಾರೆಯೇ ? ಅವರು ಯಾವ ಅರ್ಥದಲ್ಲಿ ಕರ್ನಾಟಕ ಇನ್ನೊಂದು ಗುಜರಾತ್ ಆಗುತ್ತದೆ ಎನ್ನುತ್ತಿದ್ದಾರೋ ಗೊತ್ತಿಲ್ಲ. ಆದರೆ ಒಂದೊಮ್ಮೆ ನಮ್ಮ ಸರಕಾರ ರಾಜ್ಯವನ್ನು ಇನ್ನೊಂದು ಗುಜರಾತ್ ಮಾಡಿದರೆ ಯಡಿಯೂರಪ್ಪ ಅವರು ಕನಿಷ್ಠ ಇನ್ನೂ ಮೂರು ಅವ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಆ ದೇವರಿಂದಲೂ ಸಾಧ್ಯವಿಲ್ಲ.



ಇನ್ನು ಬಿಜೆಪಿಯವರೂ ಅಷ್ಟೇ, ಅಕಾರಕ್ಕೆ ಬರುತ್ತಿದ್ದಂತೆಯೇ ಮೋದಿ ಮಾದರಿ ಎನ್ನಲು ಆರಂಭಿಸಿದ್ದರು. ಈಗಲೂ ಅದೇ ಜಪ ಮುಂದುವರಿಸಿದ್ದಾರೆ. ಮೋದಿ ಮಾದರಿ ಎಂದ ಮಾತ್ರಕ್ಕೆ ಅಥವಾ ಚಿಂತನ ಸಭೆಗೆ ಅವರನ್ನು ಕರೆಸಿ ಭಾಷಣ ಕೇಳಿಸಿಕೊಂಡ ಮಾತ್ರಕ್ಕೆ ಕರ್ನಾಟಕವನ್ನು ಗುಜರಾತ್ ಮಾಡಲು ದೇವರಾಣೆ ಸಾಧ್ಯವಿಲ್ಲ ಎಂಬುದು ಸದ್ಯದ ಸಂಪುಟದ ಕಾರ್ಯ ವೈಖರಿ ನೋಡಿದರೇ ಅರ್ಥ ಆಗುತ್ತದೆ. ಅಷ್ಟಕ್ಕೂ ಮೋದಿ ಮಾದರಿ ಅಂದರೇನು ? ಇನ್ನೊಂದು ಗುಜರಾತ್ ಆಗುವುದು ಹೇಗೆ ? ಎಂಬುದನ್ನು ಕೇಳಿ ನೋಡಿ, ಬಹುಶಃ ಆಡಳಿತಾರೂಢರಿಗೂ ಗೊತ್ತಿದ್ದಂತಿಲ್ಲ. ಪ್ರತಿಪಕ್ಷದವರಿಗೂ ತಿಳಿದಿಲ್ಲ. ಗೊತ್ತಾಗಲು ಅವರೊಮ್ಮೆ ಇಂದಿನ ಗುಜರಾತ್ ಅನ್ನು ಹೋಗಿ ನೋಡಿಕೊಂಡೇ ಬರಬೇಕು.



ಬಿಟ್ಹಾಕಿ, ಒಂದೊಮ್ಮೆ ಕರ್ನಾಟಕ ಇನ್ನೊಂದು ಗುಜರಾತ್ ಆದರೆ ನಮ್ಮ ಪಾಲಿಗೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ. ಏಕೆಂದರೆ ಈವರೆಗೆ ಕೇವಲ ಕೃಷಿ ಕ್ಷೇತ್ರವೊಂದರಲ್ಲೇ ಮೋದಿ ಮಾಡಿರುವ ಮೋಡಿ ನೋಡಿ ನಿಜಕ್ಕೂ ಬೆರಗು ಹುಟ್ಟುತ್ತದೆ. ದುರಂತವೆಂದರೆ ಮೋದಿ ಎಂದ ತಕ್ಷಣವೇ ಹಿಂದು-ಮುಸ್ಲಿಂ ಪ್ರಕರಣವನ್ನಷ್ಟೇ ನಮ್ಮ ಮಾಧ್ಯಮಗಳೂ ಬಿಂಬಿಸುತ್ತವೆ. ಹೆಚ್ಚೆಂದರೆ ಅಲ್ಲಿನ ಕೈಗಾರಿಕೆಗಳ ಬೆಳವಣಿಗೆಗಳ ಬಗೆಗೆ ಹೇಳಲಾಗುತ್ತದೆ. ಪ್ರಶ್ನೆ ಏನೆಂದರೆ ಅಭಿವೃದ್ಧಿ ಎಂದರೆ ಕೇವಲ ಕೈಗಾರಿಕೆಗಳೇ ? ಐಟಿ-ಬಿಟಿ ಕಂಪನಿಗಳಷ್ಟೇ ಅಭಿವೃದ್ಧಿಗೆ ಮಾನದಂಡವೇ ? ಈ ದೇಶದ ಜೀವಾಳವೆನಿಸಿರುವ ಕೃಷಿಯಲ್ಲಿ ಮೋದಿಯವರು ನಡೆಸಿರುವ ಕ್ರಾಂತಿ ಸುದ್ದಿಯಾಗುವುದೇ ಇಲ್ಲ ಏಕೆ ?



ಬಹುಶಃ ವಾಸ್ತವ ಗೊತ್ತಾದರೆ ನಮ್ಮ ರಾಜಕಾರಣಿಗಳು, ಮಾಧ್ಯಮಗಳು ಹೀಗೆ ವರ್ತಿಸಲು ಸಾಧ್ಯವೇ ಇಲ್ಲ. ಮೋದಿಯವರ ಯಶಸ್ಸಿನ ಗುಟ್ಟು ನಿಜವಾಗಿ ಅಡಗಿರುವುದೇ ಅವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಯಲ್ಲಿ. ೨೦೦೦ನೇ ಇಸವಿಯಿಂದ ಈವರೆಗೆ ಗುಜರಾತ್‌ನಲ್ಲಾಗಿರುವ ಕೃಷಿ ಬೆಳವಣಿಗೆ ದೇಶದಲ್ಲೇ ಒಂದು ಮಹತ್ವದ ಮೈಲುಗಲ್ಲು. ಆ ರಾಜ್ಯದಲ್ಲಿ ೨೦೦೦-೦೧ ಹಾಗೂ ೨೦೦೭-೦೮ ರ ನಡುವಿನ ಅವಯ ವಾರ್ಷಿಕ ಕೃಷಿ ಬೆಳವಣಿಗೆ ಶೇ ೯.೬ರಷ್ಟು. ಗಮನಾರ್ಹ ಸಂಗತಿಯೆಂದರೆ ಇದು ಒಟ್ಟಾರೆ ಇಡೀ ದೇಶದ ಕೃಷಿ ಬೆಳವಣಿಗೆಯ ಪ್ರಮಾಣಕ್ಕಿಂತ ದುಪ್ಪಟ್ಟು ಹೆಚ್ಚು. ಮಾತ್ರವಲ್ಲ, ಈವರೆಗೆ ನಾವೇನು ನಮ್ಮ ಮಹತ್ವದ ಸಾಧನೆ ಎಂದು ಪಂಜಾಬ್‌ನ ಹಸಿರು ಕ್ರಾಂತಿಯ ಬಗೆಗೆ ಬೆನ್ನು ತಟ್ಟಿಕೊಳ್ಳುತ್ತ ಬಂದಿದ್ದೆವಲ್ಲಾ, ಅದಕ್ಕಿಂತಲೂ ಮಿಗಿಲು. ಇನ್ನೂ ಮುಖ್ಯ ಸಂಗತಿಯೆಂದರೆ, ಈವರೆಗೆ ಕೃಷಿ ಕ್ಷೇತ್ರದ ಇತಿಹಾಸದಲ್ಲೇ ಜಗತ್ತಿನ ಯಾವ ಪ್ರದೇಶದಲ್ಲೂ ಇಂಥ ಬೆಳವಣಿಗೆ ದಾಖಲಾಗಿಲ್ಲ. ಸ್ವಾಮಿ, ಇಲ್ಲಿ ಕೇಳಿ. ಇಂಥ ಬೆಳವಣಿಗೆ ಸಾಧ್ಯವಾದದ್ದು ಯಾವುದೋ ಸಮೃದ್ಧ ನೀರಾವರಿ ಇರುವ ರಾಜ್ಯದಲ್ಲಿ ಅಲ್ಲ; ಸತತ ಬರಪೀಡಿತವೆಂಬ ಕುಖ್ಯಾತಿಗೆ ಪಾತ್ರವಾದ ಗುಜರಾತ್‌ನಲ್ಲಿ ಎಂಬುದನ್ನು ಮರೆಯಬೇಡಿ. ಅದರಲ್ಲೂ ಈ ಕ್ರಾಂತಿಗೆ ಮೋದಿಯವರು ಮುನ್ನುಡಿ ಬರೆದದ್ದೇ ೨೦೦೦ನೇ ಇಸವಿಯಲ್ಲಿ ಗುಜರಾತ್ ಅನ್ನು ಬಿಟ್ಟೂ ಬಿಡದೇ ಕಾಡಿದ ಬೀಕರ ಬರಗಾಲದಲ್ಲೇ ಎಂಬುದನ್ನು ಮರೆಯಬೇಡಿ.



ಎಲ್ಲ ಅಪಪ್ರಚಾರ, ಸೋ ಕಾಲ್ಡ್ ಮಾಧ್ಯಮಭೀರುಗಳ ‘ಸವಿಗನಸು’ಗಳ ನಡುವೆಯೂ ಮೋದಿ ಸರಕಾರ ಮತ್ತೆ ಮತ್ತೆ ಆರಿಸಿ ಬರುತ್ತಿದೆ. ಏಕೆಂದರೆ ಇಂದಿಗೂ ಗುಜರಾತ್ ನಿರ್ಣಾಯಕ ಮತದಾರರಿರುವುದು ಗ್ರಾಮೀಣ ಭಾಗದಲ್ಲೇ, ಅದರಲ್ಲೂ ಮುಖ್ಯವಾಗಿ ಕೃಷಿಕರು. ಅವರಿಗೆ ಏನು ಬೇಕೆಂಬುದು ಮೋದಿಯವರಿಗೆ ಗೊತ್ತು ಎಂಬುದು ಅವರ ಟೀಕಾಕಾರರಿಗೆ ಗೊತ್ತಿಲ್ಲ.



ಗುಜರಾತ್‌ನ ಶೇ. ೭೦ರಷ್ಟು ಪ್ರದೇಶ ಬರಪೀಡಿತ. ಬಹುತೇಕ ಜಿಲ್ಲೆಗಳು, ಒಂದೋ ಅದು ಒಣ ಪ್ರದೇಶವಾಗಿರುತ್ತದೆ, ಇಲ್ಲವೇ ಅರೆ ಒಣ ಪ್ರದೇಶವಾಗಿರುತ್ತದೆ. ಸಂಪೂರ್ಣ ನೀರಾವರಿ ಪ್ರದೇಶ ಎಂಬುದು ಅಲ್ಲಿ ತೀರಾ ವಿರಳ. ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ. ಸರದಾರ್ ಸರೋವರ್ ಯೋಜನೆಯ ಬಗೆಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಮೋದಿ ವಿರೋಗಳು ಎಂದಿನಂತೆ ಅದನ್ನೂ ಬಿಡದೇ ಟೀಕಿಸಿದ್ದಾರೆ. ಆ ಯೋಜನೆ ಈವರೆಗೆ ಕೇವಲ ೦.೧ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೀರಾವರಿ ಒದಗಿಸಲು ಸಫಲವಾಗಿದೆ. ಆ ರಾಜ್ಯದ ಶೇ. ೮೨ರಷ್ಟು ಕೃಷಿ ನಿಂತಿರುವುದೇ ಬೋರ್‌ವೆಲ್‌ಗಳ ಮೇಲೆ. ೧೯೯೦ರ ಮಧ್ಯಭಾಗದಲ್ಲಿ ಅಂತರ್ಜಲ ಮಟ್ಟ ತೀರಾ ಅಪಾಯಕಾರಿ ಸನ್ನಿವೇಶವನ್ನು ತಲುಪಿತ್ತು. ಅಂಥ ಸಂದರ್ಭದಲ್ಲಿ ಅಲ್ಲಿ ಮಳೆ ಕೊಯ್ಲು ವಿಕೇಂದ್ರೀಕರಣದ ಸಾಹಸಕ್ಕೆ ಮುಂದಾಗಲಾಯಿತು. ಚೆಕ್ ಡ್ಯಾಮ್‌ಗಳು, ಗ್ರಾಮೀಣ ಕೆರೆಗಳ ಪುನರುತ್ಥಾನ ಹಾಗೂ ಬೋರಿ ಬಂಡ್( ಮರಳು ಚೀಲಗಳಿಂದ ಒಡ್ಡುಕಟ್ಟುವುದು)ಗಳ ನಿರ್ಮಾಣ ಗಣನೀಯವಾಗಿ ನಡೆಯಿತು. ೨೦೦೭ರ ಹೊತ್ತಿಗೆ ಇದು ತಾರಕಕ್ಕೇರಿತು. ಪ್ರತಿಪಕ್ಷ ಕಾಂಗ್ರೆಸ್ ಆ ಬಾರಿಯ ಚುನಾವಣೆಯಲ್ಲಿ ‘ಚೆಕ್ ದೆ ಗುಜರಾತ್’ ಘೋಷಣೆಯೊಂದಿಗೆ ಕಣಕ್ಕಿಳಿದರೆ ಮೋದಿ ‘ಚೆಕ್ ಡ್ಯಾಮ್ ಗುಜರಾತ್’ ಘೋಷಣೆ ಮೊಳಗಿಸಿದರು. ಅದೇ ಚೆಕ್ ಡ್ಯಾಮ್ ಮೋದಿಯವರನ್ನು ಮತ್ತೆ ಅಕಾರಕ್ಕೆ ತಂದಿತು.



ಒಂದು ಅಧ್ಯಯನದ ಪ್ರಕಾರ ೨೦೦೦ದಲ್ಲಿ ೧೦,೭೦೦ ಚೆಕ್‌ಡ್ಯಾಮ್‌ಗಳು ನಿರ್ಮಾಣವಾಗಿದ್ದವು. ಅದರಿಂದ ಬರ ಪೀಡಿತ ೩೨ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗಿತ್ತು. ಆದರೆ, ನಂತರದ ವರ್ಷಗಳಲ್ಲಿ ಮೋದಿ ಆಡಳಿತದಲ್ಲಿ ಅದರ ಹತ್ತುಪಟ್ಟು ಹೆಚ್ಚು ಚೆಕ್‌ಡ್ಯಾಮ್‌ಗಳು ತಲೆ ಎತ್ತಿವೆ. ಸೌರಾಷ್ಟ್ರ ಮತ್ತು ಕುಛ್ ವಲಯದ ಕೃಷಿ ಬೆಳವಣಿಗೆಗೆ ಇದು ಮಹತ್ವದ ಕೊಡುಗೆಯನ್ನು ನೀಡಿದೆ. ಹೈನು ಉದ್ಯಮ ಬೆಳವಣಿಗೆಗೂ ಇದು ಕಾರಣವಾಯಿತು. ಹನಿ ನೀರಾವರಿಗೆ ಸಾಲ, ಸಹಾಯಧನ ಸೌಲಭ್ಯ ಹೆಚ್ಚಿಸಲಾಯಿತು. ಒಟ್ಟು ವೆಚ್ಚದ ಶೇ.೫ ರಷ್ಟನ್ನು ಮಾತ್ರ ರೈತರು ಪಾವತಿಸಿದರು. ಸರಕಾರಿ ಮಾಲೀಕತ್ವದ ಕಂಪನಿಗಳು ಶೇ.೫೦ ರಷ್ಟು ಹಣವನ್ನು ಸಬ್ಸಿಡಿ ರೂಪದಲ್ಲಿ ಪಾವತಿಸಿದವು. ಉಳಿದ ಮೊತ್ತಕ್ಕೆ ಸಾಲಸೌಲಭ್ಯ ಒದಗಿಸಲಾಯಿತು. ಹೀಗೆ ಒಂದು ಲಕ್ಷ ಎಕರೆಗೂ ಹೆಚ್ಚು ಜಮೀನು ನೀರಾವರಿ ಸೌಲಭ್ಯಕ್ಕೆ ಒಳಪಟ್ಟಿತು. ಹನಿ ನೀರಾವರಿಗೆ ಅತಿ ಹೆಚ್ಚು ಬಲವನ್ನು ತಂದು ಕೊಟ್ಟದ್ದು ಸರದಾರ್ ಸರೋವರ್ ಯೋಜನೆ.



ಗ್ರಾಮೀಣ ರಸ್ತೆಗಳ ಸುಧಾರಣೆ ಸಹ ಸಣ್ಣ ಸಂಗತಿಯೇನಲ್ಲ. ದೇಶದ ಅತ್ಯುತ್ತಮ ರಸ್ತೆ ಸಂಪರ್ಕ ಹೊಂದಿರುವ ಕೆಲವೇ ರಾಜ್ಯಗಳಲ್ಲಿ ಗುಜರಾತ್ ಸಹ ಒಂದು. ಶೇ.೯೮.೭ ಹಳ್ಳಿಗಳು ಪಕ್ಕಾ ರಸ್ತೆಗಳನ್ನು ಹೊಂದಿವೆ. ಇನ್ನು ಮೋದಿಯವರ ಜ್ಯೋತಿಗ್ರಾಮ ಯೋಜನೆ ನಿಜಕ್ಕೂ ದೇಶದ ಎಲ್ಲ ರಾಜ್ಯಗಳಿಗೂ ಮಾದರಿ. ಪಂಪ್ ಸೆಟ್ ಹಾಗೂ ಮನೆ ಬಳಕೆಗೆ ಪ್ರತ್ಯೇಕ ಫೀಡರ್ ಅನ್ನು ಈ ಯೋಜನೆಯಡಿ ಒದಗಿಸಲಾಗಿದೆ. ಇದರಿಂದ ಮನೆ ಬಳಕೆಗೆ ನಿರಂತರ ವಿದ್ಯುತ್ ಪೂರೈಕೆ ಹಾಗೂ ಕೃಷಿಗೆ ದಿನದ ಎಂಟು ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಿದೆ. ಕೃಷಿ ಮಾತ್ರವಲ್ಲ ಗ್ರಾಮೀಣಾಭಿವೃದ್ಧಿಯ ಸಾಧನೆಗೂ ಇದು ಪೂರಕವಾಗಿದೆ.



ಇನ್ನು ಕೃಷಿ ಉದ್ಯಮದ ಅಭಿವೃದ್ಧಿಯದು ಬೇರೆಯದೇ ಆದ ಅಧ್ಯಾಯ. ಸಂಶೋಧನೆಯ ಅನುಕೂಲಕ್ಕೆ ಗುಜರಾತ್ ಕೃಷಿ ವಿಶ್ವ ವಿದ್ಯಾಲಯವನ್ನು ನಾಲ್ಕು ಪ್ರತ್ಯೇಕ ವಿವಿಗಳನ್ನಾಗಿ ವಿಂಗಡಿಸಲಾಗಿದೆ. ಕೃಷಿ ಸಂಶೋದನೆಗಳು ರೈತರ ಹೊಲದಲ್ಲಿಯೇ ನಡೆಯುತ್ತವೆ. ಕೃಷಿ ತಾಂತ್ರಿಕತೆ ನೇರವಾಗಿ ರೈತರನ್ನು ತಲುಪುತ್ತಿವೆ. ಅಕಾರಿಗಳು ರೈತರು ಕೂರೆಂದರೆ ಕೂರುತ್ತಾರೆ, ನಿಲ್ಲೆಂದರೆ ನಿಲ್ಲುತ್ತಾರೆ. ನೈಜ ಅರ್ಥದಲ್ಲಿ ಗ್ರಾಮಗಳ, ರೈತರ ಸ್ವಾವಲಂಬನೆ ಜಾರಿಯಾಗಿದೆ. ರೈತ ಸಬಲೀಕರಣ ಎಂಬುದಕ್ಕೆ ಅಕ್ಷರಶಃ ಅರ್ಥ ಕಟ್ಟಿಕೊಟ್ಟಿದ್ದಾರೆ ಮೋದಿ. ಬೃಹತ್ ನೀರಾವರಿ ಯೋಜನೆಗಳಿಗಿಂತ ಪುಟ್ಟ ಪುಟ್ಟ ಉಪಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಈಗ ಹೇಳಿ ಕರ್ನಾಟಕ ಮತ್ತೊಂದು ಗುಜರಾತ್ ಆಗಬೇಕಿಲ್ಲವೇ ? ಯಾರು ಏನೇ ಬಡಬಡಿಸಲಿ. ಹಾಗೊಮ್ಮೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಯಡಿಯೂರಪ್ಪನವರೇ, ಪ್ಲೀಸ್ ! ಅದು ನಿಮ್ಮಿಂದ ಸಾಧ್ಯವೇ ?



‘ಲಾಸ್ಟ್’ಡ್ರಾಪ್: ನಮ್ಮ ಹಸಿರು ಕ್ರಾಂತಿ ಆಹಾರ ಸ್ವಾವಲಂಬನೆ ಎಂಬುದು ನಿಜವಾಗಿ ಅತಿ ದೊಡ್ಡ ಭ್ರಾಂತಿ. ಅದು ಅಸಲಿಗೆ ನಮ್ಮ ಕೃಷಿ ವೈವಿಧ್ಯದ ಅಪಹರಣಕ್ಕೆ ಅಮೆರಿಕ ವಿಶ್ವಮಟ್ಟದಲ್ಲಿ ಹೂಡಿದ್ದ ಹುನ್ನಾರ. ಅದಕ್ಕೆ ನಾವು ಯಶಸ್ವಿಯಾಗಿ ಬಲಿಯಾಗಿದ್ದೇವೆ.

Friday, October 2, 2009

ಹಸಿರ ತೋಟದ ಸಿರಿಗೆ ಅವಳೆ ನೆರಿಗೆ

ನಿಮಗೆ ಅವಳೆ ಗೊತ್ತಾ ? ಅವಳೆ ಎಂದರೆ ಅವಳಲ್ಲ. ಇವಳು ಬೇರೆಯೇ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅವಳೆ ಬೇರೆ, ನೀವಂದುಕೊಂಡಿರುವ ಅವಳು ಬೇರೆ. ಈ ನೆಲದ ಪರಂಪರೆ ರೂಪಿಸಿದ ನೀರ ತಂತ್ರಜ್ಞಾನದ ಒಂದು ಭಾಗ ಅವಳೆ. ಅಡಕೆ ತೋಟದ ಸಾಲಿನ ನಡು ನಡುವೆ, ಮುಗ್ಧವಾಗಿ ಮೈ ಚೆಲ್ಲಿ ಮಲಗಿರುವ ಅವಳೆ, ವಾರಕ್ಕೊಮ್ಮೆಯೋ, ಎರಡು ಬಾರಿಯೋ ತನಿತನಿಯಾಗಿ ನಲಿಯುತ್ತಾಳೆ. ಹಸಿಹಸಿಯಾಗಿ ನಗುತ್ತಾಳೆ. ಜತೆಗಾರರಿಗೆ ಸುಖವುಣ್ಣಿಸಿದ ಸಂತೃಪ್ತಿಯಲ್ಲಿ ಮತ್ತೆ ಮೈಮರೆತು ಮಲಗುತ್ತಾಳೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳಲ್ಲಿ ಅಡಕೆ ತೋಟಕ್ಕೆ ನೀರು ಹಾಯಿಸಲು ಒಂದು ವಿಶಿಷ್ಟ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇದಕ್ಕೆ ನೀರಬಾರಿ ಅಥವಾ ನೀರು ತೋಕುವುದು(ಸೋಕುವುದು-ಎರಚುವುದು) ಎನ್ನಲಾಗುತ್ತದೆ. ಹೀಗೆ ನೀರು ತೋಕಲು ಅಡಕೆ ಮರಗಳ ಸಾಲಿನ ನಡುನಡುವೆ ನಿರ್ಮಿಸಲಾಗುವ ಪುಟ್ಟ ಕಾಲುವೆಗಳನ್ನೇ ಅವಳೆ ಎಂದು ಗುರುತಿಸಲಾಗುತ್ತದೆ. ಇಂಥ ಅವಳೆಗಳು ಅಡಕೆ ತೋಟದ ಪಾಲಿಗೆ ಜೀವವಾಹಿನಿಗಳಿದ್ದಂತೆ. ಮನುಷ್ಯನ ದೇಹದಲ್ಲಿರುವ ನರಗಳಂತೆಯೇ ಇವು ಕಾರ್ಯನಿರ್ವಹಿಸುತ್ತವೆ. ಜೀವ ದ್ರವವನ್ನು ಉತ್ಪತ್ತಿ ಮಾಡುವುದು ಇವುಗಳ ಕೆಲಸವಲ್ಲ. ಆದರೆ ಅದು ತಲುಪಬೇಕಾದ ಸ್ಥಳಕ್ಕೆ ಕೊಂಡೊಯ್ದು ಬಿಡುವುದು ಅವಳೆಯ ಹೊಣೆಗಾರಿಕೆ.


ಅವಳೆಗಳು ಭಾರೀ ಆಳವಾಗೇನೂ ಇರುವುದಿಲ್ಲ. ಅಡಕೆ ಮರಗಳ ಸಾಲಿನ ನಡುವೆ ಹೆಚ್ಚೆಂದರೆ, ಎರಡು ಅಡಿ ಅಗಲ, ಎರಡರಿಂದ ಮೂರು ಇಂಚು ಗಾತ್ರಕ್ಕೆ ತಗ್ಗು ಮಾಡಿರಲಾಗುತ್ತದೆ. ಸಾಮಾನ್ಯವಾಗಿ ಚಿಕ್ಕಚಿಕ್ಕ ಕಲ್ಲಿನ ಹರಳುಗಳನ್ನು ಇದರಲ್ಲಿ ತುಂಬಿರುತ್ತಾರೆ. ಕಲ್ಲುಗೊಜ್ಜು ಅಥವಾ ಕಡಿ ಎಂದು ಕರೆಯಲಾಗುವ ಜಂಬಿಟ್ಟಿಗೆಯ ಪುಟ್ಟಪುಟ್ಟ ಕಲ್ಲಿನ ತುಣುಕುಗಳು ಅವಳೆಗಳಲ್ಲಿ ತುಂಬಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತದೆ. ಜತೆಗೆ ನೀರನ್ನು ಮರಗಳಿಗೆ ಎರಚುವ ಸಂದರ್ಭದಲ್ಲಿ ಮಣ್ಣು ಸವಕಳಿಯಾಗುವುದನ್ನು ಇವು ತಪ್ಪಿಸುತ್ತವೆ.


ನೀರಬಾರಿಯೆಂದರೆ ಅಡಕೆ ಬೆಳೆಗಾರರಿಗೆ ಅದೊಂದು ಸಂಭ್ರಮ. ಕುಟುಂಬದ ಸದಸ್ಯರೆಲ್ಲರೂ ಉತ್ಸಾಹದಿಂದ ಈ ಕೃಷಿ ಕಾರ್ಯದಲ್ಲಿ ತಮ್ಮ ಶ್ರಮ ವ್ಯಯಿಸುತ್ತಾರೆ. ಎರಡು ಅಥವಾ ಮೂರು ಕುಟುಂಬಗಳ ತೋಟಕ್ಕೆ ಒಂದರಂತೆ ಮಧ್ಯದಲ್ಲಿ ಒಂದು ಕೆರೆ, ಹೊಂಡ ಅಥವಾ ಬಾವಿ ಇರುತ್ತದೆ. ಅದರ ದಂಡೆಯ ಮೇಲೆ ಅಡಕೆ ಮರದಿಂದ ನಿರ್ಮಿಸಿದ ಏತದ ತುದಿಯಲ್ಲಿ ಜೊಟ್ಟೆಯನ್ನು ಜೋಡಿಸಿರುತ್ತಾರೆ. ಜೊಟ್ಟೆಯೆಂದರೆ ಸಾಮಾನ್ಯವಾಗಿ ತಾಮ್ರದಿಂದ ಮಾಡಿದ ನಾಲ್ಕೈದು ಕೊಡ ನೀರು ಹಿಡಿಸಬಹುದಾದ ಅಗಲ ಬಾಯಿಯ ಒಂದು ಪಾತ್ರೆ. ಇದರ ಬಗ್ಗೆ ಹಿಂದೆಯೇ ಈ ಅಂಕಣದಲ್ಲೇ ಬರೆಯಲಾಗಿತ್ತು. ಹೊಂಡದ ನೀರನ್ನು ಜೊಟ್ಟೆಯಲ್ಲಿ ಎತ್ತಿ ಅವಳೆಯ ಬುಡಕ್ಕೆ ಸುರಿಯಲಾಗುತ್ತದೆ. ತೋಟದ ಉದ್ದಕ್ಕೂ ಚಾಚಿಕೊಂಡಿರುವ ಹಲವು ಅವಳೆಗಳು ತಲೆಯಲ್ಲಿ ಮುಖ್ಯ ಅವಳೆಯನ್ನು ಸಂಪರ್ಕಿಸುತ್ತವೆ. ಇದರ ಬುಡ ನೇರವಾಗಿ ಹೊಂಡದ ದಂಡೆಗೆ ಬಂದು ಸೇರಿರುತ್ತದೆ. ಇಲ್ಲಿಯೇ ಜೊಟ್ಟೆಯನ್ನು ಅಳವಡಿಸಲಾಗಿರುತ್ತದೆ. ಜೊಟ್ಟೆಯಲ್ಲಿ ಎತ್ತಿ ಸುರಿದ ನೀರನ್ನು ಮುಖ್ಯ ಅವಳೆಯಲ್ಲಿ ಹರಿಸಿಕೊಂಡು ಬಂದು ಒಂದೊಂದಾಗಿ ಕಿರು ಅವಳೆಗೆ ತಿರುಗಿಸಿಕೊಳ್ಳಲಾಗುತ್ತದೆ.


ವಿಶೇಷವಿರುವುದು ನೀರನ್ನು ತಿರುಗಿಸಿಕೊಳ್ಳುವಲ್ಲಿ. ಮುಖ್ಯ ಅವಳೆಯಲ್ಲಿ ಹರಿದು ಬರುವ ನೀರು ಮುಂದೆ ಹೋಗದಂತೆ ತಡೆದು, ತಮಗೆ ಬೇಕಾದ ಕಿರು ಅವಳೆಗೆ ಹರಿಸಿಕೊಂಡು ಹೋಗಲು ಕೃಷಿಕರೇ ರೂಪಿಸಿಕೊಳ್ಳುವ ‘ಕಟ್ನ’ವನ್ನು ಬಳಸಲಾಗುತ್ತದೆ. ಇದು ಸ್ಥಳೀಯವಾಗಿ ದೊರೆಯುವ ತ್ಯಾಜ್ಯ ವಸ್ತುಗಳಿಂದಲೇ ತಯಾರಾಗುತ್ತದೆ. ತೋಟದಲ್ಲಿ ಗೊನೆಬಿಟ್ಟು ಮುಗಿದ ಬಾಳೆಮರದ ರೆಂಬೆ, ಅಡಕೆ ಮರದ ಒಳಗಿನ ತಿರುಳು ಇವನ್ನು ಬಳಸಿ ಅವಳೆಯ ಅಗಲ, ಎತ್ತರಕ್ಕೆ ತಕ್ಕಂತೆ ಸುತ್ತಿ ಸಿಂಬೆ ಮಾಡಿರಲಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಎತ್ತಿಕೊಂಡು ಸಾಗಿಸಲು ಸುಲಭವಾಗುವಂತೆ ಬಾಳೆ ದಾರದಲ್ಲಿ ಹಿಡಿಕೆಯನ್ನು ರಚಿಸಿಕೊಂಡಿರುತ್ತಾರೆ. ನೀರನ್ನು ತಿರುಗಿಸಿಕೊಳ್ಳುವ ಕಿರು ಅವಳೆಯ ತುಸು ಮುಂದೆ ಇದನ್ನು ಅಡ್ಡಡ್ಡಲಾಗಿ ಇಡಲಾಗುತ್ತದೆ. ನೀರು ತಂತಾನೇ ಬೇಕೆಂಬಲ್ಲಿಗೆ ತಿರುಗಿಕೊಳ್ಳುತ್ತದೆ. ಕಟ್ನದ ಕೆಲಸ ಇಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ನೀರನ್ನು ಮರಕ್ಕೆ ತೋಕುವಾಗ ಅನುಕೂಲವಾಗುವಂತೆ ನಿಲ್ಲಿಸಿಕೊಳ್ಳಲೂ ಕಟ್ನವನ್ನು ಬಳಸಲಾಗುತ್ತದೆ. ಅವಳೆಯಲ್ಲಿ ನೀರು ಹರಿದು ಬರುತ್ತಿದ್ದಂತೆ ಇನ್ನೊಂದು ಪುಟ್ಟ ಕಟ್ನವನ್ನು ಅಡ್ಡಕ್ಕೆ ಹಾಕಿ ಅದಕ್ಕೆ ಲಂಬವಾಗಿ ನಿಲ್ಲುವ ವ್ಯಕ್ತಿ, ಒಂದು ಕಾಲಲ್ಲಿ ಕಟ್ನವನ್ನು ಮೆಟ್ಟಿ ಹಿಡಿದುಕೊಳ್ಳುತ್ತಾನೆ. ಇನ್ನೊಂದು ಕಾಲು ನೀರು ಹರಿದುಬರುವ ಕಡೆ ಪಕ್ಕಕ್ಕೆ ಇರುತ್ತದೆ. ನೀರು ಬಂದು ಶೇಖರವಾಗುತ್ತಿದ್ದಂತೆಯೇ ಬಗ್ಗಿ ಹಾಳೆಯಿಂದ ನೀರನ್ನು ಮರದ ಬುಡಕ್ಕೆ ತೋಕುತ್ತಾನೆ.


ಇಲ್ಲಿ ಹಾಳೆಯೆಂಬುದೂ ಇನ್ನೊಂದು ವಿಶಿಷ್ಟ ಸಲಕರಣೆ. ಮರವನ್ನು ಕೆತ್ತಿ ಒಂದು ಅಡಿ ಅಗಲ, ಒಂದೂವರೆ ಅಡಿ ಉದ್ದದ ಬಟ್ಟಲಾಕಾರದ ರಚನೆಯನ್ನು ಮಾಡಿಕೊಂಡಿರುತ್ತಾರೆ. ನೀರಿನಲ್ಲಿ ತಾಳಿಕೆ ಬರುವಂಥ, ಒಣಗಿದ ಹಗುರ ಜಾತಿಯ ನಿರ್ದಿಷ್ಟ ಮರಗಳನ್ನೇ ಹಾಳೆ ಮಾಡಲು ಬಳಸಲಾಗುತ್ತದೆ. ಕಬ್ಬಣದ ತಗಡಿನಿಂದ ಹಾಳೆ ತಯಾರಿಸುವುದೂ ಉಂಟು. ಇಂಥ ಹಾಳೆಗಳನ್ನು ಕೈಯಲ್ಲಿ ಹಿಡಿದು ಅವಳೆಯಲ್ಲಿ ಬರುವ ನೀರು ಮೊಗೆದು ಅಡಕೆ ಮರದ ಬುಡಕ್ಕೇ ತಲುಪುವಂತೆ ತೋಕಲಾಗುತ್ತದೆ. ಒಂದೊಂದು ಬಾರಿ ಹೀಗೆ ತೋಕಿದಾಗಲೂ ೧೦ರಿಂದ ೧೫ ಲೀಟರ್‌ನಷ್ಟು ನೀರು ಮರಕ್ಕೆ ಹೋಗಿ ತಲುಪುತ್ತದೆ. ರಪರಪನೆ ನೀರು ತೋಕುತ್ತಿದ್ದಾಗ ತೋಟದ ಮೇಲೆ ನಿಂತು ಕೇಳಿದರೆ ಎಲ್ಲೋ ಪ್ರವಾಹದ ಅಲೆಗಳು ಬಂದು ಅಪ್ಪಳಿಸುತ್ತಿದ್ದಂತೆ ಕೇಳಿಸುತ್ತದೆ.
ಬಿಸಿಲೇರಿದ ಸಂದರ್ಭದಲ್ಲಿ ನೀರ ಬಾರಿ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಸಂಪೂರ್ಣ ಮಾನವ ಶ್ರಮದಿಂದಲೇ ನಡೆಯುವ ಪ್ರಕ್ರಿಯೆ ಇದಾಗಿರುವುದರಿಂದ ಬಿಸಿಲಿನಲ್ಲಿ ಹೆಚ್ಚು ಹೊತ್ತು ದುಡಿಯಲಾಗುವುದಿಲ್ಲ. ಹೀಗಾಗಿ ಬೆಳಗಿನ ಜಾವ ನಾಲ್ಕು ಗಂಟೆಗೇ ನೀರಬಾರಿ ಆರಂಭವಾಗುತ್ತದೆ. ಬಿಸಿಲು ಕಣ್ಣು ಬಿಡುವ ವೇಳೆಗೆ ಒಂದು ಹಂತಕ್ಕೆ ಕೆಲಸ ನಿಲ್ಲಿಸಿಬಿಡಲಾಗುತ್ತದೆ. ನಂತರ ಸಂಜೆ ನಾಲ್ಕಕ್ಕೆ ಶುರುವಿಟ್ಟುಕೊಂಡು ಕತ್ತಲು ಕವಿಯುವವರೆಗೂ ನೀರು ತೋಕುವ ಕೆಲಸ ಸಾಗುತ್ತದೆ.


ಮಳೆಗಾಲ ಮುಗಿದು ಒಂದು ಒಂದೂವರೆ ತಿಂಗಳಿಗೆಲ್ಲಾ ಅವಳೆಯಲ್ಲಿ ನೀರು ಹರಿಸಲು ಆರಂಭವಾಗುತ್ತದೆ. ತೋಯ್ ಹಾಳೆಯಲ್ಲಿ ಹೀಗೆ ನೀರು ತೋಕುವ ಕೆಲಸ ವರ್ಷದ ೭ ತಿಂಗಳೂ ನಡೆದಿರುತ್ತದೆ. ಇದರಿಂದ ಬೆಟ್ಟು ನೆಲದಲ್ಲೂ ನೀರಿನಂಶವನ್ನು ಕಾಪಾಡುವುದು ಅತ್ಯಂತ ಸುಲಭ. ನೀರು ಅವಳೆಯಲ್ಲಷ್ಟೇ ಹರಿದು ನೇರವಾಗಿ ಗಿಡದ ಬುಡಕ್ಕೇ ಪೂರೈಕೆಯಾಗುವುದರಿಂದ ಮಿತವ್ಯಯದ ಸಾಧನೆಯಾಗುತ್ತದೆ. ಮಳೆಗಾಲದಲ್ಲಿ ಈ ಅವಳೆಗಳಲ್ಲೇ ನೀರು ಇಂಗುತ್ತದೆ. ಹೀಗಾಗಿ ತೋಟದ ತುಂಬ ನೆಲದಲ್ಲಿ ತನಿ ನಿಂತಿರುತ್ತದೆ. ಇದಕ್ಕಿಂತ ಮುಖ್ಯ ವಿಷಯವೆಂದರೆ ಇಂಥ ಪ್ರತಿ ಅವಳೆ ಕೊನೆಯಾಗುವ ಜಾಗದಲ್ಲಿ ತೋಟದ ಅಂಚಿನಲ್ಲಿ ವೃತ್ತಾಕಾರದಲ್ಲಿ ಇಂಗು ಗುಂಡಿಯ ಮಾದರಿಯನ್ನು ಮಾಡಿರಲಾಗುತ್ತದೆ. ಉದ್ದಕ್ಕೆ ಹರಿದು ಬರುವ, ಮರಕ್ಕೆ ತೋಕಿ ಉಳಿಯುವ ಹೆಚ್ಚುವರಿ ನೀರು ಪೋಲಾಗದೆ ಇಲ್ಲಿಯೇ ನಿಂತು ಇಂಗುತ್ತದೆ. ಮಳೆಗಾಲದಲ್ಲೂ ಹೀಗೆಯೇ ಆಗಿ ಅಂತರ್ಜಲ ಮಟ್ಟ ಏರುತ್ತದೆ.


ಇಂದು ನೀರು ತೋಕುವ ಪದ್ಧತಿಯೇ ಕಣ್ಮರೆಯಾಗಿದೆ. ಅವಳೆಗಳಿದ್ದ ಸ್ಥಳದಲ್ಲಿ ಸ್ಪಿಂಕ್ಲರ್‌ನ ಪೈಪಿನ ಜಾಲ ಬಂದಿದೆ. ಜೊಟ್ಟೆಯ ಬದಲು ಪಂಪು ಬಂದಿದೆ. ಅತ್ಯಂತ ಸಣ್ಣ ಹಿಡುವಳಿದಾರರೂ ಪಂಪ್ ಖರೀದಿಸಿ ಅದರಿಂದ ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಕುಶಲ ಕರ್ಮಿಗಳ ಕೊರತೆ, ಮಾನವ ಸಂಪನ್ಮೂಲದ ಅಲಭ್ಯತೆ, ಸೋಮಾರಿತನ, ಯಂತ್ರದ ದಾಳಿ ಇವೆಲ್ಲದರ ಪರಿಣಾಮ ಅವಳೆಗಳ ಹೆಸರೇ ಅಳಿಸಿ ಹೋಗುತ್ತಿದೆ. ಮಳೆಗಾಲದಲ್ಲಿ ಮಣ್ಣು ಬಂದು ಕುಳಿತು, ಅವುಗಳ ನಿರ್ವಹಣೆಯೂ ಇಲ್ಲದೇ ಎಲ್ಲೋ ಕೆಲವರ ತೋಟಗಳಲ್ಲಿ ಮಾತ್ರ ಅವಳೆಗಳ ಪಳೆಯುಳಿಕೆ ಉಳಿದುಕೊಂಡಿದ್ದರೂ ಅವುಗಳ ಕ್ಷಮತೆ ಕಡಿಮೆಯಾಗಿದೆ. ಇದರ ನೇರ ಪರಿಣಾಮ ನೀರು-ನೆರಳಿನ ಮೇಲಾಗುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದರೆ, ತೋಟಗಳು ಮೊದಲಿನ ಹಸುರು-ಹೊದಲು ಕಳೆದುಕೊಂಡು ಬರಸುತ್ತಿವೆ. ನಿತ್ಯ ಹರಿದ್ವರ್ಣ ತೋಟಗಳು ಇದೀಗ ಮಳೆಗಾಲದಲ್ಲೂ ತಮ್ಮ ವೈಭವವನ್ನು ಮರಳಿ ಗಳಿಸಿಕೊಳ್ಳುತ್ತಿಲ್ಲ. ‘ಅವಳೇನು ಮಹಾ...’ ಎಂಬ ನಮ್ಮಗಳ ಅಹಂಕಾರದ ಧೋರಣೆಗೆ ಅವಳೇ ತಕ್ಕ ಶಾಸ್ತಿ ಮಾಡಿದ್ದಾಳೆ.

‘ಲಾಸ್ಟ್’ಡ್ರಾಪ್: ಮಲೆನಾಡಿನ ಗ್ರಾಮಗಳು ಇಂಥ ಹತ್ತು ಹಲವು ನೀರಸ್ನೇಹಿ ಪಾರಂಪರಿಕ ಜ್ಞಾನವನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. ಒಂದಕ್ಕಿಂತ ಒಂದು ಭಿನ್ನ, ಕುತೂಹಲಕಾರಿ. ಆದರೆ ಅವುಗಳ ಬಗೆಗಿನ ಕುತೂಹಲವನ್ನು ನಾವು ಕಳೆದುಕೊಂಡಿದ್ದರಿಂದ ಅಪೂರ್ವಜ್ಞಾನದ ಕೊಂಡಿಯೊಂದು ಕಳಚಿಹೋಗುತ್ತಿದೆ.