Friday, August 14, 2009

ನಾನಾ ಬಗೆಯ ಜ್ವರ: ಆದರೂ ಶುದ್ಧ ನೀರಿನ ಬಗೆಗೆ ಅನಾದರ

ಒಂದು ರೀತಿಯಲ್ಲಿ ದೇಶಕ್ಕೆ ದೇಶವೇ ಕಂಗಾಲಾಗಿ ಕುಳಿತಿದೆ. ಮಾಮೂಲಿಗಿಂತ ಮೈ ಒಂಚೂರು ಬೆಚ್ಚಗಾದರೂ ಬೆಚ್ಚಿ ಬೀಳುತ್ತಿದ್ದಾರೆ. ಮಕ್ಕಳ ತಲೆ ತುಸು ಬಿಸಿಯಾದರೂ ಸಾಕು ಅಪ್ಪ ಅಮ್ಮಂದಿರಿಗೆ ತಲೆಬಿಸಿಯೋ ತಲೆ ಬಿಸಿ. ಹಿಂದೆ ಮುಂದೆ ಯಾರಾದರೂ ಒಬ್ಬರು ಹಂದಿ ಎಂದರೆ ಸಾಕು ಇಡೀ ಬಡಾವಣೆಯೇ ಜ್ವರಕ್ಕೆ ಬಿದ್ದು ಹೊರಳಾಡುವಂತೆ ಆಡುತ್ತದೆ. ಏನಿದು ? ನಿಜವಾಗಿ ಮಹಾಮಾರಿಯೊಂದು ನಮ್ಮನ್ನು ಆವರಿಸಿದೆಯೇ ? ಅಥವಾ ಸನ್ನಿಗೊಳಗಾಗಿ ಹೀಗಾಡುತ್ತಿದ್ದೇವೆಯೇ ? ಡೆಂಗೆ, ಚಿಕೂನ್ ಗುನ್ಯಾ, ಮಲೇರಿಯಾ, ಕಾಲರಾ, ಹಕ್ಕಿ ಜ್ವರ, ಇದೀಗ ಹಂದಿ ಜ್ವರ ಹೀಗೆ ದಿನಕ್ಕೊಂದು ಕಾಯಿಲೆಗಳು ನಮ್ಮನ್ನು ಬಾಸುತ್ತಲೇ ಇವೆ. ಈ ಹಿಂದೆ ಇವೆಲ್ಲ ಎಲ್ಲಿದ್ದವು. ಇದ್ದಕ್ಕಿದ್ದಂತೆ ಇವು ಬರುತ್ತಿರುವುದಾದರೂ ಏಕೆ ? ಒಮ್ಮೆಯೂ ನಾವು ಯೋಚಿಸುತ್ತಿಲ್ಲ.

ಇಷ್ಟೆಲ್ಲ ಭಾನಗಡಿ ಆದದ್ದು ಮೆಕ್ಸಿಕೋದ ಲಾ ಗ್ಲೋರಿಯಾ ಎಂಬ ಹಂದಿಗೂಡಿನಿಂದ. ಕಳೆದ ಏಪ್ರಿಲ್‌ನಲ್ಲಿ ಅಲ್ಲಿಂದ ಆರಂಭವಾದ ಹಂದಿಜ್ವರದ ಭೀತಿ ದಿನದಿಂದ ದಿನಕ್ಕೆ ಏರುತ್ತಲೇ ಇದೆಯೇ ವಿನಃ ತಣಿಯುತ್ತಿಲ್ಲ. ಔಷಧ ಕಂಪನಿಗಳು ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ವಾರ್ಷಿಕ ಆದಾಯದ ಮಟ್ಟವನ್ನು ಏರಿಸಿಕೊಳ್ಳುತ್ತಿವೆ. ಟಾಮಿ ಫ್ಲೂ , ರೆಲೆನ್ಸಾ ಮತ್ತಿತರ ಔಷಧಗಳಿಗೆ ಬೇಡಿಕೆ ಪ್ರಮಾಣ ಹೇಗೆ ಏರಿದೆ ಎಂದರೆ ಅದು ಕೂಡ ಕಾಳಸಂತೆಯ ಸರಕಾಗಿ ಬದಲಾಗಿದೆ. ಜೀವ ರಕ್ಷಕ ಔಷಧ ಮಾರಾಟವೂ ದಂಧೆಯಾಗಿ ಪರಿವರ್ತಿತವಾಗಿದೆ. ಆ ಹೆಸರಿನಲ್ಲಿ ಯಾವುದೇ ನೀರನ್ನು ಚುಚ್ಚಿದರೂ, ಮಾಮೂಲಿ ಜ್ವರದ ಮಾತ್ರೆ ಕೊಟ್ಟರೂ ಕ್ಷಣವೂ ಯೋಚಿಸದೇ ಸಾವಿರಾರು ರೂಪಾಯಿ ತೆತ್ತು ನುಂಗಿ ನೀರು ಕುಡಿಯುವ ಹಂತವನ್ನು ತಲುಪಿದ್ದೇವೆ.

ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಓಡಾಡಿದರೆ ತೃಪ್ತಿ ಇಲ್ಲ. ತ್ರೀ ಮೈಕ್ರಾನ್ ಗಾತ್ರದ ಸೂಕ್ಷ್ಮ ಜೀವಾಣುಗಳೂ ಒಳ ಪ್ರವೇಶಿಸದಂತೆ ತಡೆಯುವ ಮೆಡಿಕೇಟೆಡ್ ಮುಖವಾಡವನ್ನೇ ಹಾಕಿಕೊಂಡು ಶಾಲೆಗೆ ಹೋಗಬೇಕೆಂದು ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿರುವ ಮಕ್ಕಳೂ ಹಠ ಮಾಡುತ್ತವೆ. ಹಾಗೆಂದು ಟೀಚರ್ ತಾಕೀತು ಮಾಡಿ ಅವನ್ನು ಕಳಿಸಿರುತ್ತಾರೆ. ಅನಿವಾರ್ಯವಾಗಿ ನೂರಾರು ರೂ. ತೆತ್ತು ಮುಖವಾಡ ಕಟ್ಟಿ ಕಳಿಸುತ್ತೇವೆ. ಅದು ಕಿರಿಕಿರಿ ಎನಿಸುತ್ತಿದ್ದರೂ ಮಕ್ಕಳು ಸಹಿಸಿಕೊಂಡು ಶಾಲೆಗೆ ಹೋಗುತ್ತವೆ. ಮನೆಯಲ್ಲೇ ಲಾವಂಚದ ಬೇರು, ಜೀರಿಗೆ, ತುಳಸಿ ಹಾಕಿ ಕುದಿಸಿದ, ಪಚ್ಚ ಕರ್ಪೂರ ಬೆರೆಸಿದ ಸುವಾಸನಾಯುಕ್ತ ನೀರಿನ ಮೇಲೆ ನಮಗೆ ನಂಬಿಕೆ ಬರುವುದೇ ಇಲ್ಲ. ನೂರಾರು ರೂಪಾಯಿ ಕೊಟ್ಟರೂ ಪರವಾಗಿಲ್ಲ, ರಿಸ್ಕ್ ಏಕೆಂದುಕೊಂಡು ಮಿನರಲ್ ವಾಟರ್ ಕ್ಯಾನ್‌ಗಳನ್ನೇ ತರಿಸಿ ಮನೆಯಲ್ಲಿ ಪೇರಿಸಿಟ್ಟುಕೊಳ್ಳುತ್ತೇವೆ.

ಸತ್ಯ, ಇವೆಲ್ಲಕ್ಕೂ ಒಂದಲ್ಲ ಒಂದು ರೀತಿಯಲ್ಲಿ ನಾವು ಸೇವಿಸುತ್ತಿರುವ ನೀರು-ಗಾಳಿಯೇ ಕಾರಣ. ಅವುಗಳ ಬಗೆಗಿನ ಶುದ್ಧತೆಯ ಕಾಳಜಿ ದೈನಂದಿನ ಬದುಕಿನ ಭಾಗವಾಗಿರಬೇಕು. ಆದರೆ, ಇಂಥ ಸಾಂಕ್ರಾಮಿಕಗಳ ಭೀತಿ ಬಂದಾಗ ಮಾತ್ರ ಗರಬಡಿದವರಂತೆ ಆಡುತ್ತ, ಶುದ್ಧ ಗಾಳಿ ನೀರಿನ ಮಾತನಾಡುವ ನಾವು ಉಳಿದ ಸಂದರ್ಭದಲ್ಲಿ ಅಸೀಮ ನಿರ್ಲಕ್ಷ್ಯದೊಂದಿಗೆ ಇದ್ದು ಬಿಡುವುದೇಕೋ ?ಒಂದು ಮಾತು ನೆನಪಿಡಲೇಬೇಕು, ಅಶುದ್ಧ ನೀರು ಇಡೀ ಮಾನವ ಬದುಕನ್ನೇ ಅಸ್ಥಿರಗೊಳಿಸುತ್ತಿದೆ. ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನೇ ನೀರು ಬುಡಮೇಲು ಮಾಡುತ್ತಿದೆ ಎಂದರೆ ಅಚ್ಚರಿ ಎನಿಸ ಬಹುದು. ಆದರೆ ಇದು ಸತ್ಯ.

ಶುದ್ಧ, ಕಲ್ಮಷರಹಿತ, ಆರೋಗ್ಯಪೂರ್ಣ ನೀರು ಮಾತ್ರ ಅಭಿವೃದ್ಧಿಯ ಸೂಚ್ಯಂಕವನ್ನು ಏರುಮುಖಗೊಳಿಸಬಹುದು. ಸಾಂಕ್ರಾಮಿಕಗಳಿಂದ ಮುಕ್ತ, ಬ್ಯಾಕ್ಟೀರಿಯಾ ರಹಿತ, ರಾಸಾಯನಿಕಗಳಿಂದ ದೂರವಿರುವ ನೀರು ನಿಜವಾದ ಅಭಿವೃದ್ಧಿಯ ಸಂಕೇತ. ಮುಂದುವರಿದ ರಾಷ್ಟ್ರಗಳ ಸಾಲಿನತ್ತ ದಾಪುಗಾಲಿಡುತ್ತಿರುವ ಭಾರತ ಈ ದೃಷ್ಟಿಯಿಂದ ಎಷ್ಟರ ಮಟ್ಟಿಗೆ ಅಭಿವೃದ್ಧಿಯನ್ನು ಸಾಸಿದೆ? ಬಹುಶಃ ಇದು ಪ್ರಶ್ನೆಯಾಗಿಯೇ ಉಳಿದುಕೊಳ್ಳುತ್ತದೆ.

ಮೇಲ್ನೋಟಕ್ಕೆ ನಾವು ಪಟ್ಟಿ ಮಾಡ ಹೊರಟರೆ ನೀರಿನಿಂದಲೇ ಹರಡುವ ಏನಿಲ್ಲವೆಂದರೂ ಒಂದು ಹತ್ತಿಪ್ಪತ್ತು ಕಾಯಿಲೆಗಳನ್ನು ಹೆಸರಿಸಬಹುದು. ನೀರಿನ ವೈರಾಣುಗಳಿಂದ ಹರಡಬಹುದಾದ ವೈರಲ್ ಫೀವರ್, ಹೆಪಟೈಟಿಸ್, ಪೊಲಿಯೋ ಇತ್ಯಾದಿಗಳು ಸಾಮಾನ್ಯವೆಂಬಂತಾಗಿದೆ. ಇನ್ನು ಬ್ಯಾಕ್ಟೀರಿಯಾಗಳಿಂದ ಬರುವ ಟೈಫಾಯ್ಡ್, ಪ್ಯಾರಾ ಟೈಫಾಯ್ಡ್, ಕಾಲರಾ, ಸೂಕ್ಷ್ಮಾಣುಗಳಿಂದ ಬರುವ ಭೇದಿ (ಬ್ಯಾಸೆಲರಿ ಡೀಸೆಂಟ್ರಿ) ಡಯೇರಿಯಾ ಇತ್ಯಾದಿಗಳಲ್ಲದೆ ಅಮೀಬಿಯಾಸಿಸ್‌ನಂಥ ಮಾರಕ ರೋಗಗಳ ನಿರ್ಮೂಲನೆ ನಮ್ಮಿಂದ ಸಾಧ್ಯವೇ ಆಗಿಲ್ಲ. ಜಂತುಗಳ ಹಾವಳಿಯಂತೂ ಅಶುದ್ಧ ನೀರಿನ ಬಹುದೊಡ್ಡ ಬಳುವಳಿ. ಇದಲ್ಲದೇ ಸ್ಕಿಸ್ಟೋಸೋಮಿಯಾಸಿಸ್, ಗುನ್ಯಾ, ಮೀನಿನ ಬಾಲದ ಜಂತುವಿನ ಬಾಧೆ ಅಸಹನೀಯ ವೇದನೆಗೆ ಮಾನವನನ್ನು ತುತ್ತಾಗಿಸುತ್ತಿವೆ. ಚರ್ಮ ಸಂಬಂ ರೋಗಗಳು, ಹಲ್ಲಿನ ತೊಂದರೆಗಳು, ಮೂಳೆಗಳಿಗಾಗುತ್ತಿರುವ ಧಕ್ಕೆ.... ಇಂಥವುಗಳನ್ನು ಬಹುತೇಕರು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಹೀಗಾಗಿ ಇದು ಗಣನೆಗೆ ಸಿಗುತ್ತಿಲ್ಲ. ಆದರೆ ಇವುಗಳು ಉಲ್ಬಣಾವಸ್ಥೆಯಲ್ಲಿ ಮಾತ್ರ ತೀರಾ ಅಸಹನೀಯ. ಇನ್ನು ಫ್ಲೋರೋಸಿಸ್‌ನಂಥ ಕಾಯಿಲೆಗಳು ಸಾಮೂಹಿಕ ಪರಿಣಾಮ ಬೀರುತ್ತಿರುವುದರಿಂದ ಹಲವಾರು ವರ್ಷ ಗಳ ಬಳಿಕ ಇತ್ತೀಚೆಗೆ ಸುದ್ದಿ ಮಾಡಲಾರಂಭಿಸಿದೆ.

ಎಷ್ಟೋ ಬಾರಿ ಅಶುದ್ಧ, ಅಸಮತೋಲಿತ ನೀರಿನ ಸೇವನೆ, ಜಠರ, ಮೂತ್ರಕೋಶಗಳಂಥ ಪ್ರಮುಖ ಅಂಗಗಳಿಗೆ ಹಾನಿ ತಂದು ಜೀವವನ್ನೇ ಬಲಿ ತೆಗೆದುಕೊಂಡಿರುವ ಉದಾಹರಣೆಗಳೂ ಇವೆ. ಇವೆಲ್ಲದರ ನಡುವೆಯೂ ನಾವು ನಲ್ಲಿಯಲ್ಲಿ ಬರುವ ನೀರನ್ನು ಕಣ್ಣು ಮುಚ್ಚಿಕೊಂಡು ಕುಡಿದಿದ್ದೇವೆ; ಕುಡಿಯುತ್ತಿದ್ದೇವೆ. ಕನಿಷ್ಠ ಆ ನೀರಿನ ಮೂಲ ಯಾವುದು ಎಂಬುದರ ಬಗ್ಗೆಯೂ ಯೋಚಿಸಿಲ್ಲ. ಇಂಥ ಸಂದರ್ಭದಲ್ಲಿ ಸಂಸ್ಕರಣೆ ಎಂಬ ಪ್ರಶ್ನೆಯೇ ಇಲ್ಲ.

ಇಷ್ಟಕ್ಕೂ ಸಂಸ್ಕರಣೆ ಎಂದರೇನು ? ಸಾಮಾನ್ಯವಾಗಿ ಬೃಹತ್ ಪ್ರಮಾಣದಲ್ಲಿ ನೀರು ಪೂರೈಕೆಯ ಸಂದರ್ಭದಲ್ಲಿ ಮರಳಿನ ಮೂಲಕ ಸೋಸುವುದೇ ಹೆಚ್ಚು. ನೈಸರ್ಗಿಕ ವಾಗಿ ಮಣ್ಣು, ಮರಳುಗಳಲ್ಲಿ ಜಿನುಗಿದಾಗ, ಸೂರ್ಯ ರಶ್ಮಿಯ ನೇರ ಸಂಪರ್ಕದಲ್ಲಿ ನೀರು ಶುದ್ಧಗೊಳ್ಳುತ್ತದೆ. ಇದಲ್ಲದೇ ನೀರನ್ನು ಆಲಂ (ಬಣ್ಣ ರಹಿತವಾದ, ಸಾಮಾ ನ್ಯವಾಗಿ ಔಷಧಗಳಲ್ಲಿ ಬಳಸುವ ಒಂದು ಸಂಯುಕ್ತ ವಸ್ತು) ಜತೆ ಬೆರೆಸಿಯೂ ಸಂಸ್ಕರಿಸುವ ಪದ್ಧತಿ ಇದೆ. ಇದಾದ ಬಳಿಕ ಮರಳಿನ ಹಾಸಿನ ಮೂಲಕ ನೀರನ್ನು ಹಾಯಿಸಿ, ನಂತರ ಕ್ಲೋರಿನ್‌ಯುಕ್ತ ಅನಿಲ, ದ್ರಾವಣ ಗಳನ್ನು ಬೆರೆಸಿ ಕೊಳಾಯಿಗಳ ಮೂಲಕ ಪೂರೈಸಲಾಗುತ್ತದೆ.

ಇಷ್ಟಾದ ಮಾತ್ರಕ್ಕೆ ನೀರು ಶುದ್ಧವೆನ್ನಲಾಗದು. ಮೇಲ್ನೋಟಕ್ಕೆ ನೀರು ತಿಳಿಯಾಗಿ ಕಂಡರೂ ಅದರಲ್ಲಿ ಜೈವಿಕ, ರಾಸಾಯನಿಕ ಅಂಶ ಇರಬಹುದು. ಸಂಸ್ಕರಣಾ ಕೇಂದ್ರದಿಂದ ಪೂರೈಸಲಾದ ಬಳಿಕವೂ ನೀರು ಅಶುದ್ಧ ಗೊಳ್ಳುವ ಸಾಧ್ಯತೆಗಳಿವೆ. ವಿಶಾಲ ಪೈಪ್ ಜಾಲದಲ್ಲಿ, ಸಂಗ್ರಹಣಾ ಟ್ಯಾಂಕ್‌ಗಳಲ್ಲಿ, ಡ್ರೈನೇಜ್‌ಗಳ ಸೋರಿಕೆ ಯಿಂದ ನೀರು ಕಲುಷಿತಗೊಳ್ಳುವುದೇ ನಗರ ಪ್ರದೇಶ ಗಳಲ್ಲಿ ಹರಡುವ ಸಾಂಕ್ರಾಮಿಕ ರೋಗಗಳಿಗೆ ಮೂಲ ಕಾರಣ.

ನೀರಿನ ಕಲುಷಿತತೆ, ಅವುಗಳಲ್ಲಿ ಅಪಾಯಕಾರಿ ಕೀಟ ನಾಶಕ ಅಂಶಗಳಿರುವ ಕುರಿತಾದ ಕೂಗು ಎದ್ದಿರುವುದು ಇಂದು ನಿನ್ನೆಯದಲ್ಲ. ದಶಕಗಳಿಂದಲೂ ಈ ಸಂಬಂಧ ಒಂದಲ್ಲಾ ಒಂದು ವೇದಿಕೆಯಲ್ಲಿ ಚರ್ಚೆ ನಡೆಯುತ್ತಲೇ ಇದೆ. ೨೦೦೩ರಲ್ಲಿ ದಿಲ್ಲಿಯ ವಿeನ ಮತ್ತು ಪರಿಸರ ಕೇಂದ್ರ(ಸಿಎಸ್‌ಇ) ಹಲವು ಕಂಪನಿಗಳ ಬಾಟಲಿ ನೀರಿನ ನಮೂನೆಗಳನ್ನು ಪರೀಕ್ಷೆಗೊಳಪಡಿಸಿ ಬಹುತೇಕವು ಗಳಲ್ಲಿ ಅತ್ಯಂತ ವಿಷಯುಕ್ತ ರಾಸಾಯನಿಕ ಅದರಲ್ಲೂ ಕೀಟನಾಶಕಗಳ ಪ್ರಮಾಣ ನಿಗದಿತ ಮಟ್ಟಕ್ಕಿಂತಲೂ ಹೆಚ್ಚಿದೆ ಎಂದು ಸಾರಿತು. ದೇಶದ ತುಂಬೆಲ್ಲ ಆಗ ದೊಡ್ಡ ಹುಯಿಲೆದ್ದಿತ್ತು. ಶುದ್ಧ ಕುಡಿಯುವ ನೀರಿನ ಹಕ್ಕಿನ ಕುರಿತಾಗಿ ಬಹುದೊಡ್ಡ ಚರ್ಚೆ ನಡೆಯಿತು.

ಸಿಎಸ್‌ಇ ಯುರೋಪಿಯನ್ ಮಾನದಂಡದಲ್ಲಿ ನೀರಿನ ಪರೀಕ್ಷೆ ನಡೆಸಿತ್ತು ಎಂಬುದು ಗಮನಾರ್ಹ ಅಂಶ. ಭಾರತ ನಿಗದಿಪಡಿಸಿರುವ ಕುಡಿಯುವ ನೀರಿನ ಗುಣಮಟ್ಟದ ಮಾನದಂಡ ಅಸಮರ್ಪಕ ಹಾಗೂ ಗೊಂದಲಮಯ ಎಂಬುದು ಇದಕ್ಕೆ ಕಾರಣ. ನೀರಿನ ಕುರಿತಾದ ನಮ್ಮ ಅವಸ್ಥೆ ಎಷ್ಟರ ಮಟ್ಟಿಗಿದೆ ಎಂದರೆ ಕೊನೆ ಪಕ್ಷ ಅದಕ್ಕೊಂದು ಸ್ಪಷ್ಟ ಮಾನದಂಡವನ್ನೂ ನಾವು ನಿಗದಿಪಡಿಸಿಕೊಂಡಿಲ್ಲ. ಬಾಟಲಿ ನೀರಿನಲ್ಲಿ ಕೀಟನಾಶಕ ಅಂಶಗಳು ಕಂಡು ಬಂದದ್ದರಲ್ಲಿ ವಿಶೇಷವೇನಿಲ್ಲ. ಬಹುಶಃ ಇಂದು ಮತ್ತೆ ಪರೀಕ್ಷೆ ನಡೆಸಿದರೆ ಅಂದಿನಕ್ಕಿಂತಲೂ ಹೆಚ್ಚು ವಿಷಕಾರಿ ಅಂಶ ಪತ್ತೆಯಾಗಬಹುದು.

ವರ್ಷಕ್ಕೆ ೪೫ ಸಾವಿರ ಟನ್ ಕೀಟನಾಶಕವನ್ನು ಬಳಸುತ್ತಿರುವ ಭಾರತದಲ್ಲಿ ಬಹುಶಃ ಇದಕ್ಕಿಂತ ಇನ್ನೂ ಉತ್ತಮ ಗುಣಮಟ್ಟದ ನೀರು ಸಿಗಲು ಸಾಧ್ಯವೇ ಇಲ್ಲವೆನಿಸುತ್ತದೆ. ಎಷ್ಟೇ ಸಂಸ್ಕರಿಸಿದರೂ ಅಂತರ್ಜಲವೇ ವಿಷ ಯುಕ್ತವಾಗಿರುವಾಗ ಶುದ್ಧ ನೀರು ಮರೀಚಿಕೆಯಾಗುವುದು ಸಹಜ. ಆದರೆ ಆತಂಕವೆಂದರೆ ಪ್ರತಿದಿನ ಮಿಲಿಯನ್ ಗಟ್ಟಲೆ ಗ್ಯಾಲನ್ ನೀರನ್ನು ನಮ್ಮ ಹಳ್ಳಿಯ ಮಂದಿ ಭೂಮಿಯಿಂದ ಎತ್ತಿ ಸಂಸ್ಕರಿಸದೇ ನೇರವಾಗಿ ಕುಡಿಯುತ್ತಿದ್ದಾರೆ. ಅವರು ಬಳಸುವ ನೀರಿನಲ್ಲಿ ಇನ್ನೆಷ್ಟು ಪ್ರಮಾಣದ ಕಲ್ಮಶವಿದ್ದೀತು.

‘ಲಾಸ್ಟ್’ಡ್ರಾಪ್: ನೀರಿನ ಕುರಿತಾದ ‘ಗುಣ ನೀತಿ’ಯೊಂದು ಇಲ್ಲ. ಅದನ್ನು ಇನ್ನಾದರೂ ರೂಪಿಸಬೇಡವೇ ? ಅದಿಲ್ಲದಿದ್ದರೆ ಈಗಾಗಲೇ ೯ ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ ವಾರ್ಷಿಕ ವಹಿವಾಟು ನಡೆಸುತ್ತಿರುವ ಬಾಟಲಿ ನೀರಿನ ಕಂಪನಿಗಳು ‘ಶುದ್ಧ, ಸುರಕ್ಷಿತ’ ನೀರಿನ ಹೆಸರಿನಲ್ಲಿ ಇನ್ನಷ್ಟು ಕೊಳ್ಳೆ ಹೊಡೆಯುವುದಿಲ್ಲವೇ?

No comments: