Tuesday, November 17, 2009

ಜಲ ಸಂರಕ್ಷಣೆ: ಗುಜರಾತಿನ ಎಲ್ಲರೂ ಸರದಾರರೇ

ಒಂದು ತಿಳಿದುಕೊಳ್ಳಿ, ಗುಜರಾತ್ ಮೂಲದ ಯಾವುದೇ ನಾಯಕರಿರಬಹುದು. ನೀರಿನ ವಿಷಯದಲ್ಲಿ ಅವರ ಕಳಕಳಿ ಉಳಿದೆಲ್ಲ ರಾಜ್ಯದವರಿಗಿಂತ ಯಾವತ್ತೂ ಒಂದು ಹಿಡಿ ಹೆಚ್ಚೇ ಇರುತ್ತದೆ. ಸ್ಥಳೀಯ ಭೌಗೋಳಿಕ ಸನ್ನಿವೇಶ, ತಲೆತಲಾಂತರದಿಂದ ಗುಜ್ಜುಗಳನ್ನು ಬಿಡದೇ ಕಾಡುತ್ತಿರುವ ಬರಗಾಲ, ನರ್ಮದೆಯಂಥ ನದಿಯನ್ನು ಸಂರಕ್ಷಿಸಿಕೊಳ್ಳುವ ಸವಾಲು ಇವೆಲ್ಲವೂ ಇದಕ್ಕೆ ಕಾರಣವಿರಬಹುದು.


ಗುಜರಾತ್- ರಾಷ್ಟ್ರಪಿತ ಗಾಂಜಿಯವರ ಜನ್ಮಭೂಮಿ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ನೀರಿನ ಬಗೆಗಿನ ಕಾಳಜಿಗೆ ಗಾಂಜಿಯವರೂ ಹೊರತಲ್ಲ ಎಂಬುದನ್ನು ಬೇರೆ ಹೇಳಬೇಕಿಲ್ಲ. ಗ್ರಾಮ ಸ್ವರಾಜ್ಯದ ಕಲ್ಪನೆಯ ಭಾಗವಾಗಿ ದೇಶದ ಲಕ್ಷಾಂತರ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಸಮರ್ಥ ಪೂರೈಕೆಯನ್ನು ಪ್ರತಿಪಾದಿಸಿದ್ದರು ಅವರು.


ಅದು ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಮಹಾವೇಶನದ ಸಂದರ್ಭ. ಗಾಂಜಿ ಸೇರಿದಂತೆ ದೇಶದ ಮುಂಚೂಣಿ ನಾಯಕರೆಲ್ಲರೂ ಸೇರಿದ್ದರು. ಬೆಳಗಿನ ಕಲಾಪದ ಬಳಿಕ ಎಲ್ಲರೂ ಊಟಕ್ಕೆ ತೆರಳಿದ್ದರು. ಊಟದ ಸಂದರ್ಭದಲ್ಲಿ ಆರಂಭವಾದ ಯಾವುದೋ ಚರ್ಚೆ ಉದ್ದಕ್ಕೂ ಸಾಗಿತ್ತು. ಊಟ ಮುಗಿಸಿ ಎದ್ದ ಗಾಂಜಿ ಮಾತನಾಡುತ್ತಲೇ ಕೈ ತೊಳೆಯಲು ಹೋದರು. ಪಕ್ಕದಲ್ಲೇ ಇದ್ದ ನೆಹರೂ ಚೊಂಬಿನಲ್ಲಿ ಅವರಿಗೆ ನೀರು ಹನಿಸುತ್ತಿದ್ದರು. ಮಾತಿನ ಭರದಲ್ಲಿ ಇಡೀ ತಂಬಿಗೆಯ ನೀರು ಮುಗಿದು ಹೋದದ್ದು ಬಾಪೂಜಿ ಗಮನಕ್ಕೆ ಬರಲೇ ಇಲ್ಲ. ಕೈ ತೊಳೆದು ಮುಗಿದಿರಲಿಲ್ಲ. ನೆಹರೂ ಮತ್ತೊಂದು ಬಾರಿ ಚೊಂಬಿನಲ್ಲಿ ನೀರು ತಂದು ಹನಿಸಲು ಆರಂಭಿಸಿದರು. ತಟ್ಟನೆ ಎಚ್ಚೆತ್ತ ಗಾಂಜಿ ‘ಅಯ್ಯಯ್ಯೋ ಒಂದು ಚೊಂಬು ನೀರು ಖಾಲಿ ಮಾಡಿಬಿಟ್ಟೆನಲ್ಲಾ’ ಎಂದು ಉದ್ಗರಿಸಿದರು.


ತಕ್ಷಣ ನೆಹರೂ ‘ಅದಕ್ಕೇನಂತೆ ಅಹಮದಾಬಾದ್‌ನಲ್ಲಿ ನೀರಿಗೇನೂ ಕೊರತೆ ಇಲ್ಲ. ಯಮುನೆ ತುಂಬಿ ಹರಿಯುತ್ತಿದ್ದಾಳೆ. ಇನ್ನೂ ಒಂದು ಚೊಂಬು ನೀರು ಬಳಸಿ’ಎಂದರು. ಇದಕ್ಕೆ ಗಾಂಜಿ ಪ್ರತಿಕ್ರಿಯೆ ನೋಡಿ-‘ಯಮುನೆ, ನರ್ಮದೆಯರು ಇದ್ದಾರೆಂಬುದೇನೋ ನಿಜ. ಆದರೆ ಅವರು ಇರುವುದು ನನ್ನೊಬ್ಬನ ಅಗತ್ಯ ಪೂರೈಸಲಲ್ಲವಲ್ಲ ?’


ಗಾಂಜಿಯವರ ಈ ಮಾತಿನ ಹಿಂದೆ ಹತ್ತಾರು ಸಂದೇಶಗಳಿವೆ. ಇದು ಅವರೊಬ್ಬರ ಪ್ರತಿಪಾದನೆಯಲ್ಲ. ಗುಜರಾತ್‌ನ ಬಹುತೇಕರು ಇಂಥ ಮನೋಭಾವದೊಂದಿಗೇ ನೀರಿನ ಬಳಕೆಗೆ ಮುಂದಾಗುತ್ತಿರುವುದರಿಂದ ಅಲ್ಲಿ ನೀರಾವರಿಯಲ್ಲಿ ಕಳೆದೊಂದು ದಶಕದಲ್ಲಿ ಊಹೆಗೂ ಮೀರಿದ ಪ್ರಗತಿ ಸಾಧ್ಯವಾಗಿದೆ. ಗುಜರಾತನಲ್ಲಿ ಯಶಸ್ವಿಯಾದ ಮಹತ್ವದ ನೀರಾವರಿ ಯೋಜನೆಯೊಂದರ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಈ ಮಾತು ಸತ್ಯವೆನಿಸುತ್ತದೆ.


ಹಲವಾರು ವಿವಾದಗಳಿಂದ ಭಾರೀ ಸುದ್ದಿ ಮಾಡಿದ ಸರದಾರ್ ಸರೋವರ ಯೋಜನೆ ಗೊತ್ತೇ ಇದೆ. ಇದೂ ಸಹ ಅದೇ ಅಣೆಕಟ್ಟೆಯಿಂದ ನೀರು ಪೂರೈಸುವ ಯೋಜನೆಯೇ. ಆದರೆ ಇಲ್ಲಿ ಯಾವುದೇ ವಿವಾದ ಇಲ್ಲ. ನರ್ಮದಾ- ಮಾಹಿ ನದಿಗಳಿಂದ ಕುಡಿಯುವ ನೀರು ತೆಗೆದುಕೊಂಡು ಹೋಗಲಾಗಿದೆ.


ಇದರಲ್ಲೇನು ವಿಶೇಷ ? ಖಂಡಿತಾ ವಿಶೇಷವಿದೆ. ಅಸ್ತಿತ್ವದಲ್ಲಿರುವ ಯೋಜನೆಯಿಂದಲೇ ಹೆಚ್ಚುವರಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಇದರ ಹೆಗ್ಗಳಿಕೆ. ಮೂಲ ಸರದಾರ ಸರೋವರ ಯೋಜನೆ ಇರುವುದು ಭರೂಚ್ ಜಿಲ್ಲೆಯ ನವಗಾಂವ್ ಎಂಬಲ್ಲಿ. ಈ ಅಣೆಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಸುಮಾರು ೩೫೭೧ ಎಂಎಲ್‌ಡಿಯಷ್ಟು ನೀರು ನಿಗದಿಯಾಗಿದೆ. ಇಲ್ಲಿಂದ ಸುಮಾರು ೩೫ ಕಿ. ಮೀ. ದೂರದ ನರ್ಮದಾ ಮುಖ್ಯ ಕಾಲುವೆಗೆ ನೀರನ್ನು ಪಂಪ್ ಮಾಡಲಾಗುತ್ತದೆ. ಆ ಕಾಲುವೆ ತಿಂಬ ಹಳ್ಳಿಯ ಬಳಿ ಮಾಹಿಯ ಕಾಲುವೆಗೆ ಸಂಪರ್ಕಿಸುತ್ತದೆ. ಅಲ್ಲಿಂದ ಮತ್ತೆ ಪ್ರಯಾಣ ಮುಂದುವರಿಸುವ ನೀರು ಕನೇವಲ್ ಹಾಗೂ ಪರೇಜ್ ಎಂಬ ಎರಡು ಬೃಹತ್ ಕೆರೆಗಳ ಒಡಲು ಸೇರುತ್ತದೆ. ಅಲ್ಲಿಗೇ ನೀರಿನ ಯಾನ ನಿಲ್ಲುವುದಿಲ್ಲ. ಮತ್ತೆ ಅಲ್ಲಿಂದ ನೀರನ್ನು ಭಾವನಗರ, ಅಮ್ರೇಲಿ ಹಾಗೂ ರಾಜಕೋಟ್ ಜಿಲ್ಲೆಗಳಿಗೆ, ೪೫೦ ಕಿ.ಮೀ ಉದ್ದದ ಸೌರಾಷ್ಟ್ರ ಪೈಪ್‌ಲೈನ್ ಯೋಜನೆಯ ಮೂಲಕ ಏತದಿಂದ ಕೊಂಡೊಯ್ಯಲಾಗುತ್ತದೆ. ಅಹಮದಾಬಾದ್‌ಗೂ ಇದೇ ನೀರನ್ನು ಕುಡಿಯಲು ಒದಗಿಸಲಾಗುತ್ತಿದೆ.


ಇವಿಷ್ಟು ಯೋಜನೆ. ನಿಜವಾಗಿ ಇಲ್ಲಿ ಸರ್ದಾರ್ ಸರೋವರದಿಂದ ನೀರು ಸರಿಸುಮಾರು ೨೮೦ ಕಿ. ಮೀ. ನಷ್ಟು ದೂರದ ಪ್ರಯಾಣ ಬೆಳೆಸುತ್ತದೆ. ಉದ್ದಕ್ಕೂ ಇರುವ ಸಣ್ಣಪುಟ್ಟ ಕೆರೆಗಳನ್ನು ತುಂಬಿಯೇ ನೀರು ಮುಂದಕ್ಕೆ ಹೋಗುವಂತೆ ಯೋಜಿಸಲಾಗಿದೆ. ಜತೆಗೆ ಕನೇವಲ್ ಹಾಗೂ ಪರೇಜ್ ಕೆರೆಗಳೂ ತುಂಬುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಅನಾಯಾಸವಾಗಿ ಏರಿಕೆ ಕಂಡು ಬಂದಿದೆ.


ವೈಜ್ಞಾನಿಕ, ದೂರದೃಷ್ಟಿಯಿಂದ ರೂಪಿಸಲಾಗಿರುವ ಯೋಜನೆಗಳು ಹೇಗೆ ಉಪಯುಕ್ತವಾಗುತ್ತವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಎನ್ನುತ್ತಾರೆ ಪ್ರೊ. ಹುಗ್ಗಿ. ಅಂದಾಜು ೧೨೦೦ ಕ್ಯೂಸೆಕ್ ನೀರಿನ ಪಂಪಿಂಗ್ ಸಂದರ್ಭದಲ್ಲೇ ಮಧ್ಯದಲ್ಲಿ ತುಸು ತಿರುವು ತೆಗೆದುಕೊಂಡು ಮೂರು ಪುಟ್ಟ ಪುಟ್ಟ ಒಡ್ಡುಗಳನ್ನು ನಿರ್ಮಿಸಲಾಗಿದೆ. ಇಂಥ ಇನ್ನೂ ಕೆಲವು ಪುಟ್ಟ ಪುಟ್ಟ ನಿರ್ಮಾಣ, ಪ್ರಯತ್ನಗಳಿಂದ ನದಿಯಲ್ಲಿನ ಪ್ರವಾಹದ ನೀರನ್ನೇ ಯಶಸ್ವಿಯಾಗಿ ಬಳಸಿಕೊಳ್ಳಲಾಗಿದೆ.


ದೇಶದಲ್ಲಿ ಇಂದಿಗೂ ಶೇ. ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ ‘ನೀರು ಸರಬರಾಜು ಯೋಜನೆ’ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ. ಗಮನಾರ್ಹ ಸಂಗತಿಯೆಂದರೆ, ಹೀಗೆ ‘ನೀರು ಸರಬರಾಜು’ ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ. ಅದನ್ನೇ ಮೋದಿಯವರು ಗುಜರಾತ್‌ನ ಎಲ್ಲ ಹಳ್ಳಿಗಳಿಗೆ ದಕ್ಕಿಸಿಕೊಟ್ಟಿದ್ದಾರೆ.


ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ. ಮೋದಿ ಅದನ್ನೇ ಗುಜರಾತ್‌ನಲ್ಲೂ ಮಾಡುತ್ತಿರುವುದು, ಬೇಕಿದ್ದರೆ ಹೋಗಿ ನೋಡಿ ಬನ್ನಿ.

‘ಲಾಸ್ಟ್’ಡ್ರಾಪ್: ಸಾಕಷ್ಟು ವಿವಾದ, ಅಡ್ಡಿ ಆತಂಕಗಳ ನಡುವೆಯೂ ನೀರಾವರಿಯ ವಿಚಾರದಲ್ಲಿ ನಮಗಿಂತ ಹತ್ತಾರು ಹೆಜ್ಜೆ ಮುಂದೆ ಹೋಗಿರುವ ಗುಜರಾತ್, ಇಂಥ ಇಚ್ಛಾ ಶಕ್ತಿಯಿಂದ ಮಾತ್ರ ಭೀಕರ ಬರಕ್ಕೂ ಎದೆಯೊಡ್ಡಿ ನಿಂತಿದೆ. ಬಂಡವಾಳ ಕ್ರಾಂತಿಯನ್ನೂ ಸಾಸಿದೆ.


No comments: