Wednesday, October 28, 2009

ಗೋವಿಂದರಾವ್ ಅವರೇ, ಯೋಚಿಸಿ ತಪ್ಪೇನಿಲ್ಲ, ಆದರೆ ಒಳ್ಳೆಯದನ್ನೂ ಯೋಚಿಸಿ


ಕಳೆದ ಐದು ವರ್ಷಗಳಿಂದ ‘ನೀರು-ನೆರಳು’ ಅಂಕಣದಡಿ ೨೩೩ ಲೇಖನಗಳನ್ನು ಬರೆದಿದ್ದೇನೆ. ಈ ಅಂಕಣದ ಓದುಗರೆಲ್ಲರಿಗೂ ಖಂಡಿತ ಗೊತ್ತಿದೆ. ನಾನು ನೆಲ-ಜಲ, ಹಸಿರು-ಉಸಿರಿನ ಆಚೆ ಏನನ್ನೂ ಬರೆಯುವುದಿಲ್ಲ ಅಂತ. ಕಳೆದ ವಾರ ಗುಜರಾತ್ ಮುಖ್ಯಮಂತ್ರಿ ಮೋದಿಯವರ ಬಗ್ಗೆ ಅಂಕಣ ಬರೆಯಲು ಕುಳಿತಾಗಲೂ ಲೇಖನದ ಯಾವ ಭಾಗದಲ್ಲೂ ರಾಜಕೀಯ ಸುಳಿಯದಂತೆ, ತತ್ತ್ವ-ಸಿದ್ಧಾಂತಗಳೆಂಬ ಹಾಳೂಮೂಳುಗಳು ಸೋಂಕದಂತೆ ಎಚ್ಚರವಹಿಸಿದೆ. ನನ್ನ ಇಡೀ ಲೇಖನ ಕೃಷಿ ಕ್ಷೇತ್ರದಲ್ಲಿ ಮೋದಿ ಸಾಸಿರುವ ಆಮೋಘ ಅಭಿವೃದ್ಧಿಯ ಮೇಲಷ್ಟೇ ಬೆಳಕು ಚೆಲ್ಲಿತ್ತು. ಮತ್ತೆ ನೀವು ನನ್ನನ್ನು ಪ್ರಶ್ನಿಸಿದರೂ ಮೋದಿಯವರ ಬಗ್ಗೆ ‘ಚಲನಶೀಲ ಚಿಂತಕ’ ಮತ್ತದೇ ವಿಶೇಷಣ ಬಳಸುತ್ತೇನೆ ! ಹೌದು, ಅನುಮಾನವೇ ಇಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಆ ಪದವೇ ಅತ್ಯಂತ ಸೂಕ್ತ. ಇಂಥ ಪದವನ್ನು ಮೋದಿಯವರಿಗೆ ಬಿಟ್ಟರೆ ಸದ್ಯಕ್ಕೆ ದೇಶದ ಮತ್ಯಾವ ಮುಂಖ್ಯಮಂತ್ರಿಗೂ ಬಳಸಬೇಕೆನಿಸುತ್ತಿಲ್ಲ. ಗುಜರಾತ್‌ನಲ್ಲಿ ಬೇರೇನಾಗಿದೆಯೋ, ಇಲ್ಲವೋ ಗೊತ್ತಿಲ್ಲ. ನೀರಾವರಿ ಮತ್ತು ಕೃಷಿಯ ವಿಚಾರದಲ್ಲಿ ಆಗಿರುವ ಕ್ರಾಂತಿಯನ್ನು ಹೋಗಿ ನೋಡಿದ ವಿವೇಚನಾವಂತರೆಲ್ಲರೂ ಈ ವಿಶೇಷಣವನ್ನು ಒಪ್ಪುತ್ತಾರೆ.


ಹಾಗಂತ ನಾನು ಸುಖಾಸುಮ್ಮನೆ ಹೇಳುತ್ತಿಲ್ಲ !!
ಗುಜರಾತ್‌ಗೆ ಹೋಗಿ, ಅಲ್ಲಿನ ಪ್ರಗತಿಯನ್ನು ಕಣ್ಣಾರೆ ಕಂಡು, ಕೃಷಿ, ನೆಲ, ಜಲದ ಬಗ್ಗೆ ಕಳೆದ ೧೦ ವರ್ಷಗಳಲ್ಲಿ ನಾನು ಮಾಡಿರುವ ಅಧ್ಯಯನದಿಂದ ಅಲ್ಲಿನ ಅಭಿವೃದ್ಧಿಯನ್ನು ಅಳೆದು-ತೂಗಿ ನೋಡಿದ ಮೇಲೆಯೇ ಮೋದಿಯವರ ಸಾಧನೆಯ ಬಗ್ಗೆ ಒಂದಿಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದೇನೆ. ಯಾರೋ ಬರೆದ ಪೂರ್ವಗ್ರಹಪೀಡಿತ ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು, ಅದೇ ಸತ್ಯವೆಂಬಂತೆ ನಾನೆಂದೂ, ಏನನ್ನೂ ಬರೆದವನಲ್ಲ.


ಅಕ್ಟೋಬರ್ ೨೧ರಂದು ‘ವಿಜಯ ಕರ್ನಾಟಕ’ ದ ಸಂಪಾದಕೀಯ ಪುಟದಲ್ಲಿ ‘ಕರ್ನಾಟಕವನ್ನು ಗುಜರಾತ್ ಮಾಡುವುದಕ್ಕೆ ಮುಂಚೆ ಕೊಂಚ ಯೋಚಿಸೋಣ’ ಎಂಬ ಶೀರ್ಷಿಕೆಯಡಿ ಜಿ.ಕೆ. ಗೋವಿಂದರಾವ್ ಬರೆದಿರುವ ಲೇಖನದಲ್ಲಿ ಉಲ್ಲೇಖಿಸಿರುವ ಅಂಶಗಳ ‘ಮೂಲ’ಗಳಾದರೂ ಯಾವುವು? ಲೇಖನದ ಕೊನೆಯಲ್ಲಿ ಅವರ ಗುಜರಾತ್ eನದ ಗುಟ್ಟನ್ನು ಅವರೇ ಬಹಿರಂಗಪಡಿಸಿದ್ದಾರೆ-ಗ್ರಂಥಋಣ: ಗುಜರಾತಿನ ನಿವೃತ್ತ ಡಿ.ಜಿ.ಪಿ. ಆರ್.ಬಿ. ಶ್ರೀಕುಮಾರ್ ಅವರ ‘ಧರ್ಮದ ಹೆಸರಿನಲ್ಲಿ’, ಹರ್ಷ ಮಂದೆರ್ ಅವರ 'Fear & Forgiveness', ಸಿದ್ಧಾರ್ಥ್ ವರದರಾಜನ್ ಸಂಪಾದಿಸಿದ ಕೃತಿ ‘ಗುಜರಾತ್’, ಅರುಂಧತಿರಾಯ್ ಅವರ 'Listening to Grasshoppers' ಮತ್ತು ಶ್ರಮಿಕ್ ಪ್ರತಿಷ್ಠಾನದ 'Modi slapped'!!


ಈ ಶ್ರೀಕುಮಾರ್, ಸಿದ್ಧಾರ್ಥ್ ವರದರಾಜನ್, ಅರುಂಧತಿರಾಯ್ ಯಾರು ? ಗುಜರಾತ್ ಹಿಂಸಾಚಾರದ ತನಿಖೆ ನಡೆಸಿದ ನ್ಯಾಯಾಂಗೀಯ ಆಯೋಗಗಳ ಮುಖ್ಯಸ್ಥರೇ ಅಥವಾ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ ನ್ಯಾಯದಾನ ಮಾಡುವ ಜಡ್ಜ್‌ಗಳೇ ? ಡಿಜಿಪಿ ಶ್ರೀಕುಮಾರ್ ಅವರನ್ನೇ ತೆಗೆದುಕೊಳ್ಳಿ. ಗುಜರಾತ್ ಹಿಂಸಾಚಾರ ನಡೆದಿದ್ದು ೨೦೦೨ ಫೆಬ್ರವರಿ ೨೭ರ ನಂತರ. ಆಗ ಹಿರಿಯ ಪೊಲೀಸ್ ಅಕಾರಿಯಾಗಿದ್ದ ಡಿಜಿಪಿ ಆರ್.ಬಿ. ಶ್ರೀಕುಮಾರ್, ‘ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ ಮೋದಿ ನನಗೆ ಸೂಚನೆ ನೀಡಿದ್ದರು’ ಎಂದು ಆರೋಪಿಸಿದರು, ಕೊನೆಗೆ ಕೋರ್ಟ್ ಮುಂದೆಯೂ ಅಹವಾಲು ಇಟ್ಟರು. ಆದರೆ ಯಾವಾಗ ? ೨೦೦೭ರಲ್ಲಿ!! ಹಿಂಸಾಚಾರ ನಡೆದಿದ್ದು ೨೦೦೨ರಲ್ಲಿ, ಮೋದಿ ವಿರುದ್ಧ ಶ್ರೀಕುಮಾರ್ ಆರೋಪ ಮಾಡಿದ್ದು ೨೦೦೭ರಲ್ಲಿ !! ಅದುವರೆಗೂ ಏಕೆ ತೆಪ್ಪಗಿದ್ದರು ? ಒಬ್ಬ ಪೊಲೀಸ್ ಅಕಾರಿಯಾಗಿ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕಾಗಿದ್ದು ಕರ್ತವ್ಯ. ಒಂದು ವೇಳೆ, ಮೋದಿಯವರು ಅಂಥದ್ದೊಂದು ಸೂಚನೆ ನೀಡಿದ್ದರೆ ಕೂಡಲೇ ನ್ಯಾಯಾಂಗದ ಮುಂದೆ ಅದನ್ನು ಅರಿಕೆ ಮಾಡಿಕೊಳ್ಳಬಹುದಿತ್ತಲ್ಲವೆ ? ಕನಿಷ್ಠ ಮಾಧ್ಯಮಗಳ ಮುಂದೆಯಾದರೂ ಬಾಯ್ಬಿಡಬಹುದಿತ್ತಲ್ಲವೆ ? ಏಕೆ ಸುಮ್ಮನೆ ಕುಳಿತಿದ್ದರು ? ಆದರೆ ಸತ್ಯವಿಷ್ಟೇ- ಯಾವಾಗ ಡಿಜಿಪಿ ಶ್ರೀಕುಮಾರ್‌ಗೆ ಐಜಿ ಸ್ಥಾನ ದಕ್ಕುವುದಿಲ್ಲ ಎಂದು ಗೊತ್ತಾಯಿತೋ ಆ ಕೂಡಲೇ ಸೆಕ್ಯುಲರ್ ಬ್ರಿಗೇಡ್ ಸೇರಿಕೊಂಡು ಇಂಥದ್ದೊಂದು ಆರೋಪ ಮಾಡತೊಡಗಿದರು !! ಇನ್ನು ಸಿದ್ಧಾರ್ಥ್ ವರದರಾಜನ್. ಆತ ಹೇಳಿ-ಕೇಳಿ ಸಿಪಿಎಂ ಮತ್ತು ಸಿಪಿಐ ಮುಖವಾಣಿಯಂತಿರುವ, ಕೆಲವೊಮ್ಮೆ ಚೀನಾದ ಮುಖವಾಣಿಯಂತೆಯೂ ವರ್ತಿಸುವ ‘ದಿ ಹಿಂದೂ’ ಪತ್ರಿಕೆಯ ವಿಶೇಷ ವರದಿಗಾರ ಹಾಗೂ ಅಂಕಣಕಾರ. ಆತನಿಂದ ಅದ್ಯಾವ ನಿಷ್ಪಕ್ಷಪಾತವನ್ನು ನಿರೀಕ್ಷಿಸಲು ಸಾಧ್ಯ? ಸುಪ್ರಿಂ ಕೋರ್ಟ್‌ನಿಂದಲೇ ಛೀಮಾರಿ ಹಾಕಿಸಿಕೊಂಡಿದ್ದ ಅರುಂಧತಿ ರಾಯ್ ಅವರ ‘ಘನತೆ’ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾ?


ಇಂಥವರನ್ನು ಉಲ್ಲೇಖಿಸಿ, ಅವರು ಉಗುಳಿದ್ದನ್ನೇ ತೀರ್ಥವೆಂಬಂತೆ ಕೈಯಲ್ಲೆತ್ತಿಕೊಂಡು ಕನ್ನಡಿಗರ ತಲೆಮೇಲೆ ಪ್ರೋಕ್ಷಣೆ ಮಾಡಲು ಹೊರಟಿದ್ದೀರಲ್ಲಾ ಗೋವಿಂದರಾವ್ ಅವರೇ ನಿಮಗೆ ಸ್ವಂತ ಅಭಿಪ್ರಾಯವೇ ಇಲ್ಲವೆ ? ನೀವು ಹೊಸದೇನನ್ನೂ ಮಾಡಿಲ್ಲ ಬಿಡಿ ಸಾರ್. ನಿಮ್ಮ ಆದರ್ಶಪುರುಷರಾಗಿರುವ ಕಮ್ಯುನಿಸ್ಟರು ಈ ಕೆಲಸವನ್ನು ಸ್ವಾತಂತ್ರ್ಯ ಬಂದಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ರೋಮಿಲಾ ಥಾಪರ್, ಆರ್.ಎಸ್. ಶರ್ಮಾ, ಇರ್ಫಾನ್ ಹಬೀಬ್, ರವೀಂದರ್ ಕುಮಾರ್, ಸುಮಿತ್ ಸರ್ಕಾರ್ ಮುಂತಾದ ಕಮ್ಯುನಿಸ್ಟ್ ಇತಿಹಾಸಕಾರರು ಬಾಯಿಗೆ ಬಂದಿದ್ದನ್ನು ಬರೆಯುತ್ತಾರೆ. ಉಳಿದ ಕಮ್ಯುನಿಸ್ಟರು ಅದೇ ಆಧಾರವಾಗಿಟ್ಟುಕೊಂಡು ವಿಶ್ವವಿದ್ಯಾಲಯಗಳಲ್ಲಿ ಸಾರ್ವಕಾಲಿಕ ಸತ್ಯವೆಂಬಂತೆ ಬೋಸುತ್ತಾರೆ. ಅವರೆಂತಹ ಹಿಸ್ಟಾರಿಯನ್‌ಗಳೆಂದರೆ ಬಾಬರ್, ಔರಂಗಜೇಬನಂತವರಲ್ಲಿ ಧರ್ಮಸಹಿಷ್ಣುತೆ ಹುಡುಕಿ, ಬರೆದು ಕೊಂಡಾಡುತ್ತಾರೆ. ನಂತರ ಉಳಿದ ಭಟ್ಟಂಗಿಗಳು ಅದನ್ನೇ ‘ಕೋಟ್ ’ ಮಾಡಿ ಉಳಿದವರ ಕಣ್ಣಿಗೆ ಮಂಕುಬೂದಿ ಎರಚುತ್ತಾರೆ. ನೀವು ಮಾಡಿದ್ದೂ ಅದನ್ನೇ.
ಹಾಗಂತ ಹೇಳಲೇಬೇಕಾಗಿದೆ.


ನೀವೆಂದಾದರೂ ಗುಜರಾತ್‌ಗೆ ಹೋಗಿ, ನೋಡಿ ಬಂದು ಬರೆದಿದ್ದರೆ ಅಲ್ಪ-ಸ್ವಲ್ಪವಾದರೂ ಸತ್ಯವಿರಬಹುದೇನೋ ಎಂದು ನಾವೂ ಒಪ್ಪಿಕೊಳ್ಳಬಹುದಿತ್ತು. ಆದರೆ ಮಾಡಿದ್ದೇನು ? ‘ಆರ್ಮ್‌ಚೇರ್ ಎಕ್ಸ್‌ಫರ್ಟ್’ ಕೆಲಸವನು ! ಕುಳಿತಲ್ಲೇ ನಿಮ್ಮ ಆಂತರ್ಯಕ್ಕೆ ಹತ್ತಿರದವರು ಬರೆದ ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ಗೀಚಿದಿರಿ ಅಷ್ಟೇ. ಆದರೆ ನಾನೆಂದೂ ಕುಳಿತಲ್ಲೇ ಬರೆದವನಲ್ಲ.
‘ಈ ನಿಟ್ಟಿನಲ್ಲಿ, ಪ್ರಾಸಂಗಿಕವಾಗಿ, ಜಗತ್ತಿನ ಅತ್ಯಂತ ಅಭಿವೃದ್ಧಿಗೊಂಡ ರಾಷ್ಟ್ರಗಳತ್ತ ಒಂದು ಕ್ಷಣ ಗಮನಹರಿಸುವುದು ಅವಶ್ಯವೆನಿಸುತ್ತದೆ. ಮೊದಲ ಮಹಾಯುದ್ಧದಿಂದ ಜರ್ಝರಿತವಾಗಿಹೋಗಿದ್ದ ಜರ್ಮನಿ ರಾಷ್ಟ್ರವನ್ನು ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದ ವೇಗದಲ್ಲಿ ಅಭಿವೃದ್ಧಿಗೊಳಿಸಿ ಜಗತ್ತನ್ನೇ ಬೆದರಿಸುವಂಥ ಸ್ಥಿತಿಗೆ ಏರಿಸಿದ. ಅವನು ಸಾಸಿದ ಈ ಬಗೆಯ ‘ಅಭಿವೃದ್ಧಿ’ಯನ್ನು ಇಂದು ನಾವು ಮಾದರಿಯಾಗಿ ಒಪ್ಪಲು ಸಾಧ್ಯವೆ ? ಸ್ಟಾಲಿನ್ ರಷ್ಯಾ ಅಥವಾ ಮಾವೋವಿನ ಚೈನಾದ ವಿಷಯಗಳಲ್ಲಿ ಆ ರಾಷ್ಟ್ರಗಳಲ್ಲಿ ನಡೆದ ನೈಜ ಘಟನೆಗಳಿಗೆ ಬಹು ಪ್ರeಪೂರ್ವಕವಾಗಿ ಕುರುಡಾದವರು ಮಾತ್ರ ಆ ಬಗೆಯ ಅಭಿವೃದ್ಧಿಯನ್ನು ಕೊಂಡಾಡಬಲ್ಲರು. ಈ ಮುರೂ ರಾಷ್ಟ್ರಗಳಲ್ಲಿ ಲಕ್ಷಾಂತರ ಜನಗಳ ಗೋರಿಗಳ ಮೇಲೆ ರಾಷ್ಟ್ರವನ್ನು ‘ಬಲಿಷ್ಠ’ಗೊಳಿಸಲಾಯಿತು. ಹೋಗಲಿ, ಪ್ರಜಾಪ್ರಭುತ್ವ ರಾಷ್ಟ್ರವೆಂದು ಬೀಗುವ, ಈಗಲಂತೂ ಏಕಮೇವಾದ್ವಿತೀಯ- ಚಿಂತಕ ನೋಮ್ ಚೋಮ್‌ಸ್ಕಿ ಹೇಳುವಂತೆ- 'Rogue Stute' ಆಗಿರುವ ಅಮೆರಿಕದ ಕತೆಯೇನು ? ತನ್ನ ರಾಷ್ಟ್ರದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಅಮೆರಿಕ, ಮಿಕ್ಕೆಲ್ಲ ಚಿಕ್ಕ ದೊಡ್ಡ ರಾಷ್ಟ್ರಗಳ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಗಳಿಕೆಯಲ್ಲಿ ಯತ್ನಗಳನ್ನೂ, ಹೋರಾಟಗಳನ್ನೂ ದಮನ ಮಾಡುವುದು ಅಥವಾ ಪ್ರಜಾಪ್ರಭುತ್ವ ತರುತ್ತೇನೆಂಬ ಅಪ್ಪಟ ಸುಳ್ಳಿನ ಮುಖವಾಡದಲ್ಲಿ ಲಕ್ಷಾಂತರ ಜನಗಳನ್ನು ಸುಟ್ಟು ಬೂದಿ ಮಾಡುವುದು, ತನ್ಮೂಲಕ ನಿರಂತರ ಯುದ್ಧ ಸ್ಥಿತಿಯನ್ನು ನಿರ್ಮಾಣ ಮಾಡಿ ತನ್ನ ರಾಷ್ಟ್ರದ ಯುದ್ಧೋಪಕರಣ ಉತ್ಪಾದನಾ ಉದ್ಯಮವನ್ನು ಅಭಿವೃದ್ಧಿಗೊಳಿಸಿ, ತನ್ನ ಬೊಕ್ಕಸ ತುಂಬಿಸಿಕೊಳ್ಳುವುದು- ಇದೇ ಪರಿಪಾಠವನ್ನು ಅನುಸರಿಸುತ್ತಿದೆ. ಪ್ರಪ್ರಥಮ ಅಣುಬಾಂಬ್ ಸೊಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ.’


ಹಾಗಂತ ಬರೆದಿದ್ದೀರಲ್ಲಾ ಅದರ ಅರ್ಥವೇನು ಸ್ವಾಮಿ ?
ಏಕೆ ಗೋಜಲು ಗೋಜಲಾಗಿ ಬರೆಯುತ್ತೀರಿ ? ಅಸಂಬದ್ಧ ಉದಾಹರಣೆ ಕೊಡುತ್ತೀರಿ? ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದಲ್ಲಿ ಜರ್ಮನಿಯನ್ನು ಅಭಿವೃದ್ಧಿಪಡಿಸಿದ ಅಂತ ನಿಮಗೆ ಹೇಳಿಕೊಟ್ಟಿದ್ದು ಯಾರು ? ಹಿಟ್ಲರ್ ಅಕಾರಕ್ಕೆ ಬಂದಿದ್ದು ೧೯೩೩ರಲ್ಲಿ. ಅಲ್ಲಿಂದ ೧೯೩೯ರವರೆಗೂ ಆತ ಮಾಡಿದ್ದು ಯುದ್ಧಸಿದ್ಧತೆಯನ್ನೇ ಹೊರತು ಮತ್ತೀನೆನನ್ನೂ ಅಲ್ಲ. ೧೯೩೮ರಲ್ಲಿ ಆಸ್ಟ್ರೀಯಾವನ್ನು ಕಬಳಿದ ಹಿಟ್ಲರ್ ಅಲ್ಲಿನ ಆಗಾಧ ಖನಿಜ ಸಂಪನ್ಮೂಲವನ್ನು ಲೂಟಿ ಹೊಡೆದು ಯುದ್ಧಕ್ಕೆ ಸನ್ನದ್ಧನಾದನೇ ಹೊರತು ಆತ ಯಾವ ಪ್ರಗತಿ, ಅಭಿವೃದ್ಧಿಯನ್ನೂ ಮಾಡಿದವನಲ್ಲ. ತಂತ್ರeನದ ವಿಷಯದಲ್ಲಿ ಜರ್ಮನ್ನರು ೧೫ನೇ ಶತಮಾನದಲ್ಲೇ ಹೆಸರು ಮಾಡಿದ್ದರು. ಹಿಟ್ಲರ್ ಮಾಡಿದ್ದೇನೂ ಇಲ್ಲ. ಇನ್ನು ಅದ್ಯಾವ ದೃಷ್ಟಿಯಲ್ಲಿ ಹಿಟ್ಲರ್, ಸ್ಟಾಲಿನ್, ಲೆನಿನ್, ಮಾವೋಗಳನ್ನು ಮೋದಿ ವಿಷಯದಲ್ಲಿ ಎಳೆದು ತರುತ್ತೀರಿ?


ಹಿಟ್ಲರ್‌ನ ಹೋಲೋಕಾಸ್ಟ್‌ನಲ್ಲಿ ಸತ್ತವರ ಸಂಖ್ಯೆ ೧೧ ದಶಲಕ್ಷ(೧.೧ ಕೋಟಿ), ಸ್ಟಾಲಿನ್ ನೀತಿಗೆ ಬಲಿಯಾಗಿದ್ದು ೨೦ ದಶಲಕ್ಷ, ಲೆನಿನ್ ಬಲಿತೆಗೆದುಕೊಂಡಿದ್ದು ೨೦ ಲಕ್ಷ, ಮಾವೋನಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು ೪೦ರಿಂದ ೨೦ ದಶಲಕ್ಷ ಎಂದು ಅಂದಾಜು ಮಾಡಲಾಗಿದೆ ! ಅವರಿಗೆ ಹೋಲಿಸುವಂತಹ ಯಾವ ಪಾತಕವನ್ನು ಮೋದಿ ಮಾಡಿದ್ದಾರೆ ? ಒಬ್ಬ ಶಾಸಕನೂ ಆಗಿರದಿದ್ದ, ರಾಜಕೀಯದ ಯಾವುದೇ ಅನುಭವ ಇಲ್ಲದೆ ಮೋದಿ ಮುಖ್ಯಮಂತ್ರಿಯಾಗಿದ್ದು ೨೦೦೧, ಅಕ್ಟೋಬರ್ ೭ರಂದು. ಗುಜರಾತ್ ಹಿಂಸಾಚಾರ ಆರಂಭವಾಗಿದ್ದು ೨೦೦೨, ಫೆಬ್ರವರಿ ೨೭ರಂದು. ಅಕಾರಕ್ಕೆ ಬಂದು ಐದು ತಿಂಗಳೂ ಆಗಿರಲಿಲ್ಲ. ಅಂತಹ ವ್ಯಕ್ತಿ ಹಿಂಸಾಚಾರವನ್ನು ತಡೆಗಟ್ಟುವುದರಲ್ಲಿ ಸ್ವಲ್ಪ ಎಡವಿರಬಹುದೇ ಹೊರತು, ಕೊಲೆಪಾತಕಿಯಾಗಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಗುಜರಾತ್ ಹಿಂಸಾಚಾರದಲ್ಲಿ ಮಡಿದವರ ಸಂಖ್ಯೆಯೆಷ್ಟು? ಮುಸ್ಲಿಮರು ೭೯೦, ಹಿಂದೂಗಳು ೨೫೪ !! ಕೋಟಿ ಕೋಟಿ ಜನರನ್ನು ಕೊಲೆಗೈದವರಿಗೂ ಮೋದಿಗೂ ವ್ಯತ್ಯಾಸವೇ ಇಲ್ಲವೆ? ಮಹಾರಾಷ್ಟ್ರ ಮತ್ತು ಆಂಧ್ರದಲ್ಲಿ ಕಳೆದ ೧೦ ವರ್ಷಗಳಲ್ಲಿ ೫೦ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಏಕೆ ಅವರೆಲ್ಲ ನೇಣಿಗೆ ಶರಣಾದರು? ಅವರ ಸಾವಿಗೆ ಮಹಾರಾಷ್ಟ್ರ ಮತ್ತು ಆಂಧ್ರ ಸರಕಾರದ ಹೊಣೆಗೇಡಿತನ, ಸಂವೇzsದನಾರಹಿತ ನೀತಿ, ನಿರ್ಲಕ್ಷ್ಯಗಳು ಕಾರಣವಲ್ಲವೆ? ರೈತರ ಸಾವಿಗೆ ನೇರ ಹಾಗೂ ಪರೋಕ್ಷ ಹೊಣೆಗಾರರಲ್ಲವೆ ? ಅಂದರೆ ಆಂಧ್ರ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನೂ ಸಾಮೂಹಿಕ ಸಾವಿಗೆ ಕಾರಣೀಭೂ ತರನ್ನಾಗಿ ಮಾಡಬಹುದಲ್ಲವೆ?


‘ಪ್ರಪ್ರಥಮ ಅಣುಬಾಂಬ್ ಸೊಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ’ ಎಂದು ಯಾಕ್ರೀ ಹಸಿ ಹಸಿ ಸುಳ್ಳು ಹೇಳುತ್ತೀರಿ ?! ೧೯೪೫ರಲ್ಲಿ ಅಮೆರಿಕ ಸೋಟಿಸಿದ ಅಣುಬಾಂಬ್‌ಗೆ ಸಿಲುಕಿ ಹಿರೋಷಿಮಾದಲ್ಲಿ ಸತ್ತವರು ೧.೪ ಲಕ್ಷ, ನಾಗಾಸಾಕಿಯಲ್ಲಿ ಸುಟ್ಟು ಕರಕಲಾದವರು ೮೦ ಸಾವಿರ. ಒಟ್ಟಾರೆ ೨ಲಕ್ಷದ ೨೦ ಸಾವಿರ. ಏಕೆ ‘ಕೋಟ್ಯಂತರ’ ಎಂದು ಸುಳ್ಳು ಬರೆಯುತ್ತೀರಿ? ಖಂಡಿತ Words are free, But ಅವುಗಳನ್ನು ಬಳಸುವಾಗ ಎಚ್ಚರಿಕೆ ಇರಬೇಕು ಅಲ್ಲವೆ ‘ಡಾಕ್ಟರ್’ ಗೋವಿಂದರಾವ್ ?!


“ನಮಗೆ ಅವಶ್ಯವಿರುವುದು ಸರ್ವಾಂಗೀಣ ಅಭಿವೃದ್ಧಿ. ಸರ್ವಾಂಗೀಣ ಅಭಿವೃದ್ಧಿಯೇ ಪ್ರಗತಿ. ಮನುಷ್ಯನ ಮನಸ್ಸನ್ನು ಮುಟ್ಟುವಂಥ, ಅರಳಿಸುವಂಥ, ಬೆಳೆಸುವಂಥ, ಮನುಷ್ಯ ಸಂಬಂಧಗಳನ್ನು ಆಪ್ತಗೊಳಿಸುವಂಥ, ಜೀವಪ್ರೇಮವನ್ನು ಹುಟ್ಟಿಸುವಂಥ ಅಭಿವೃದ್ಧಿಯೇ ಪ್ರಗತಿ." ನೀವೇ ಬರೆದಿದ್ದೀರಿ. ನಾನು ಬೆಳಕು ಚೆಲ್ಲಿರುವುದೂ ಗುಜರಾತ್‌ನಲ್ಲಿ ಕಂಡುಬರುತ್ತಿರುವ ಅಂತಹ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆಯೇ. ನರ್ಮಾದಾ ನದಿಯ ನೀರು ಹಿಂದೂಗಳ ಜತೆಗೆ ಮುಸ್ಲಿಮರ ಮನೆ, ಹೊಲ, ಗದ್ದೆಗಳನ್ನೂ ಹದಮಾಡುತ್ತಿದೆ. ಏಕೆ ನಿಮ್ಮ ಎದೆಯಲ್ಲಿರುವ ತಾರತಮ್ಯದ ವಿಷಬೀಜವನ್ನು ಬಿತ್ತಲು ಹೊರಟಿದ್ದೀರಿ?!
ಛೇ ಛೇ!

ಈ ಬಾರಿ ಲಾಸ್ಟ್ ‘ಡ್ರಾಪ್’ ಅಲ್ಲ, ಪಂಚ್: ಬಹುಶಃ ನನ್ನ ಲೇಖನ ಸಂಪೂರ್ಣ ಓದುವ ಮೊದಲೇ, ಕೇವಲ ತಲೆಬರಹ ನೋಡಿ ಗೋವಿಂದ ರಾಯರು ಪ್ರತಿ ಕ್ರಿಯಿಸಿರಬಹುದು ಎನಿಸುತ್ತದೆ. ಇಲ್ಲದಿದ್ದರೆ ಅಭಿವೃದ್ಧಿಯ ವಿಷಯಕ್ಕೆ ಕೋಮುವಾದದಂಥ ಸಲ್ಲದ ಬಣ್ಣ ಹಚ್ಚುವ ಕಸರತ್ತು ಮಾಡುತ್ತಿರಲಿಲ್ಲ.

2 comments:

Unknown said...

Nice One

Narendra Kumar said...

ನಿಮ್ಮ ಉತ್ತರ ಅದ್ಭುತವಾಗಿದೆ.
ಇದಕ್ಕೆ ಜಿ.ಕೆ.ಗೋವಿಂದರಾವ್ ಉತ್ತರಿಸಿರಲು ಸಾಧ್ಯವೇ ಇಲ್ಲ.
ಅವರೆಲ್ಲಾ ಕಲ್ಲೆಸೆದು ಓಡಿ ಹೋಗುವವರ ಗುಂಪಿಗೆ ಸೇರಿದವರು.
ಅವರೆಂದೂ ಸತ್ಯವನ್ನು ಎದುರಿಸುವವರಲ್ಲ.

ಧನ್ಯವಾದಗಳು.