Thursday, November 6, 2008

ಬೊಮ್ಮಾಯಿಯವರೇ, ಒಮ್ಮೆ ತುಂಗಭದ್ರಾ ನಾಲೆ ನೋಡಿ ಪ್ಲೀಸ್ !


ಹಬ್ಬಾಸ್, ಕೊನೆಗೂ ನಮ್ಮ ಜಲಸಂಪನ್ಮೂಲ ಸಚಿವರೊಬ್ಬರು ತಮ್ಮ ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಅಪರೂಪಕ್ಕೆಂಬಂತೆ, ಅಪರೂಪ ಏನು ಬಂತು; ಇದೇ ಮೊದಲ ಬಾರಿಗೆ ರಾಜ್ಯದ ಸಚಿವರೊಬ್ಬರು ಕೃಷ್ಣಾ ನದಿ ನೀರಿನ ಹಂಚಿಕೆ ಸಂಬಂಧ ಪ್ರಾಕಾರದ ವಿಚಾರಣೆಯಲ್ಲಿ ಇಡೀದಿನ ಪಾಲ್ಗೊಂಡು ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ.
ನೀರಾವರಿ ಖಾತೆಯೆಂದರೆ ನಮ್ಮ ರಾಜಕಾರಣಿಯಲ್ಲಿ ‘ಸಮೃದ್ಧ ಒಳ ಹರಿವು’ ನಿಶ್ಚಿತ ಎಂಬ ಮನೋಭಾವವೇ ಹೆಚ್ಚಿರುವುದು ಹೊಸ ಸಂಗತಿಯೇನಲ್ಲ. ಆ ನಡುವೆಯೂ ಹಿಂದೆ ಎಚ್.ಕೆ.ಪಾಟೀಲ್, ಈಶ್ವರಪ್ಪ ಈ ಖಾತೆಯಲ್ಲಿ ಒಂದಷ್ಟು ಭರವಸೆ ಮೂಡಿಸಿದ್ದರು. ಆದರೆ ಅವರು ಹೇಳಿದ್ದರಲ್ಲಿ ಇಂಗಿದ್ದಕ್ಕಿಂತ ಹರಿದದ್ದೇ ಹೆಚ್ಚು. ಬಿಡಿ, ಮಿತಿಗಳಿರಬಹುದು. ಇದೀಗ ನೀರಿನ ಸಂಕಷ್ಟ ಎಂಬುದೇನೆಂಬುದನ್ನು ಖುದ್ದು ಅನುಭವಿಸಿ ಅರಿತ ಪ್ರದೇಶದ ಹಿನ್ನೆಲೆಯವರಾದ್ದರಿಂದಲೋ ಏನೋ, ಅಂತೂ ಬಸವರಾಜ ಬೊಮ್ಮಾಯಿ ಅವರಾದರೂ ಏನಾದರೂ ಮಾಡಿಯಾರು ಎಂಬ ನಿರೀಕ್ಷೆ ನಾಡಿಗರಲ್ಲಿ ಮೂಡಲಾರಂಭಿಸಿದೆ.
ದಿಲ್ಲಿಯಲ್ಲಿ ದಿನವಿಡೀ ಕೋರ್ಟ್ ಕಟಕಟೆಯಲ್ಲಿ ನಿಂತಿದ್ದ ಮಾತ್ರಕ್ಕೆ ಯೋಜನೆಗಳೆಲ್ಲ ತಂತಾನೇ ಅನುಷ್ಠಾನಗೊಂಡುಬಿಡುವುದಿಲ್ಲ ಬೊಮ್ಮಾಯಿಯವರೇ ! ಈ ಅರಿವು ತಮಗೂ ಇದ್ದಿರಬಹುದು. ಈ ಐದೂವರೆ ದಶಕದಲ್ಲಿ ರಾಜ್ಯದ ನೀರಾವರಿ ಎಂಬುದು ಬಹುತೇಕ ಒಡೆದ ಕಾಲುವೆ. ಒಂದು ಕಡೆ ಕಟ್ಟಿದರೆ, ಇನ್ನೊಂದು ಕಡೆ ಬಾಯ್ಬಿಟ್ಟುಕೊಳ್ಳುತ್ತದೆ. ತೀರಾ ಮೊನ್ನೆ ಮೊನ್ನೆ ಬಳ್ಳಾರಿ, ಕೊಪ್ಪಳ ಭಾಗಗಳಲ್ಲಿ ಸಂಚರಿಸಿದಾಗ ಹಾದಿಯುದ್ದಕ್ಕೂ ಅಲ್ಲಲ್ಲಿ ತುಂಗಭದ್ರಾ ಕಾಲುವೆಗಳ ದುಃಸ್ಥಿತಿಯ ದರ್ಶನವಾಯಿತು. ಹೂಳು ತುಂಬಿ, ಬಹುತೇಕ ದಂಡೆಗಳೆಲ್ಲ ಕುಸಿದು, ಪಾಚಿಗಟ್ಟಿ, ಗಿಡ-ಗಂಟಿಗಳು ಬೆಳೆದು ನಿಂತಿರುವ ನಿರ್ವಹಣೆಯಿಲ್ಲದ ಕಾಲುವೆಯ ಸ್ಥಿತಿ ಕಂಡಾಗ ನಮ್ಮ ನೀರಾವರಿ ಯೋಜನೆಗಳೂ ಹೀಗೆಯೇ ಇವೆಯಲ್ಲ ಎಂದೆನಿಸಿದ್ದು ಸುಳ್ಳಲ್ಲ.
ಸನ್ಮಾನ್ಯ ಸಚಿವರೇ, ಹೀಗೆ ಒಮ್ಮೆ ಕಣ್ಣಾಡಿಸಿ ನೋಡಿ. ನಮ್ಮಲ್ಲಿ ಎಷ್ಟೊಂದು ನೀರಾವರಿಯ ಅವಕಾಶಗಳಿವೆ. ನೀವು, ನಿಮ್ಮಂಥವರು ರೂಪಿಸಿ, ಕೆಲವನ್ನು ಅರ್ಧಂಬರ್ಧ ಮಾಡಿ ಬಿಟ್ಟು ಹೋಗಿರುವ ಎಷ್ಟೋ ಯೋಜನೆಗಳು ನಾಡಿನುದ್ದಕ್ಕೂ ನಿಂತಿವೆ. ಇವೆಲ್ಲವೂ ಸಾಕಾರಗೊಂಡದ್ದೇ ಆದಲ್ಲಿ (ಅಂಥ ಇಚ್ಛಾಶಕ್ತಿ ಸರಕಾರಕ್ಕೆ ಪುಣ್ಯವಶಾತ್ ಬಂದರೆ, ಅಕಾರಿಗಳೂ ಅಪ್ಪಿತಪ್ಪಿ ಕೆಲಸ ಮಾಡಿಬಿಟ್ಟರೆ) ಈ ನೆಲಕ್ಕೆ ಬರವೆಂದರೆ ಏನೆಂಬುದೇ ಗೊತ್ತಾಗಲಿಕ್ಕಿಲ್ಲ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶವೆಂದರೆ ಬರೀ ಒಡೆದ ಕಾಲುವೆಯ ಚಿತ್ರಣವೇ ಕಾಣುತ್ತದೆ. ಬಹುಶಃ ಇವುಗಳ ರಿಪೇರಿಗೆ ಮಾಡಿದ ಖರ್ಚಿನಲ್ಲಿ ಹತ್ತಾರು ಅಣೆಕಟ್ಟುಗಳನ್ನು ಕಟ್ಟಿ ಬಿಡಬಹುದಿತ್ತೇನೋ. ಕೆ.ಸಿ.ರೆಡ್ಡಿ, ಟಾರ್ ಸ್ಟೀಲ್ ಫೌಂಡೇಷನ್ ತಜ್ಞರು, ಕ್ಯಾಪ್ಟನ್ ರಾಜಾರಾವ್ ಸಮಿತಿ-ಹೀಗೆ ಕಳೆದ ಎರಡೂವರೆ ದಶಕಗಳಲ್ಲಿ ಐದು ತಜ್ಞರ ಸಮಿತಿಗಳು ರಚನೆಗೊಂಡು, ಅವೆಲ್ಲ ಶಿಫಾರಸು ಸಲ್ಲಿಸಿವೆ. ಆದರೆ ಎಡ-ಬಲದಂಡೆ ನಾಲೆಗಳು ಹಾಗೆಯೇ ಸೋರುತ್ತಿವೆ. ವರದಿ ಸರಕಾರದೆದುರು ಧೂಳು ತಿನ್ನುತ್ತಿದೆ.
ಕೊನೆಯ ಬಾರಿಗೆ ತಜ್ಞ ಚಿನಿವಾಲ ನೇತೃತ್ವದ ಸಮಿತಿ ವರದಿ ಸಲ್ಲಿಸಿತ್ತು. ಅಷ್ಟರಲ್ಲಿ ಧರ್ಮಸಿಂಗ್ ಸರಕಾರ ಉರುಳಿಬಿತ್ತು. ಒಟ್ಟಾರೆ ೮೪೦ ಕೋಟಿ ರೂ. ವಿನಿಯೋಗಿಸಿ ೪ ವರ್ಷಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸಮಗ್ರ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಬೇಕೆಂದು ತಜ್ಞರು ಶಿಫಾರಸು ಮಾಡಿ ಎರಡೂವರೆ ವರ್ಷಗಳಾದವು. ದುರಂತವೆಂದರೆ ನಂತರ ಜಲಸಂಪನ್ಮೂಲ ಸಚಿವರಾದ ಈಶ್ವರಪ್ಪನವರು ಈ ವರದಿಯತ್ತ ಕಣ್ಣೆತ್ತಿಯೂ ನೋಡಲಿಲ್ಲ. ಎಡ, ಬಲ ಹಾಗೂ ಬಲ ಭಾಗದ ಕೆಳದಂಡೆ ಮುಖ್ಯ ಕಾಲುವೆಗಳ ಒಳ ಮೈ ಸಂಪೂರ್ಣ ಜೀರ್ಣಗೊಂಡು ಹೋಗಿದೆ. ಇವುಗಳ ನವೀಕರಣ ಆಗಬೇಕು. ಉದ್ದಕ್ಕೂ ಬೆಳೆದ ಜೊಂಡು, ಹೂಳುಗಳ ವಿಲೇವಾರಿ ಆಗಬೇಕು. ಉಪ ಕಾಲುವೆಗಳು ಹಾಗೂ ತೂಬುಗಳು ಸರಿಯಾಗಬೇಕು. ಹೊಲಗಾಲುವೆಗಳಿಂದಲೇ ವರ್ಷಕ್ಕೆ ಏನಿಲ್ಲವೆಂದರೂ ೨೫ ಟಿಎಂಸಿ ನೀರು ಪೋಲಾಗುತ್ತಿದೆ. ಇದನ್ನು ಸರಿಪಡಿಸಬೇಕು. ಕಾಲುವೆಯ ಅಚ್ಚುಕಟ್ಟಿನವರ ನಡುವೆ ಸಾಮರಸ್ಯ ಮೂಡಿಸಬೇಕು...ಒಂದೇ ಎರಡೇ...ಕೆಲಸದ ಹೊರೆಯೇ ಈ ಒಂದು ಯೋಜನೆಯ ಅಚ್ಚುಕಟ್ಟಿಲ್ಲಿದೆ.
ಸಚಿವರೇ, ದಯಮಾಡಿ ನೀವೇ ಒಮ್ಮೆ ಅಲ್ಲಿಗೆ ಹೋಗಿ ನೋಡಿ ಬನ್ನಿ. ಆಗ ಮಾತ್ರ ಅರ್ಥವಾದೀತು ಅಲ್ಲಿನ ಕಾಲುವೆಗಳ ದುಃಸ್ಥಿತಿ. ಕಾಲುವೆಯ ಪರಿಸ್ಥಿತಿ ಹೀಗಾದರೆ ಇನ್ನು ತುಂಗಭದ್ರಾ ಜಲಾಶಯದ ಸ್ಥಿತಿ ಹೇಗಿರಬೇಡ ? ಖಂಡಿತಾ ಅದೂ ನಿರ್ವಹಣೆಯನ್ನು ಬೇಡುತ್ತಿದೆ. ಜಲಾಶಯದಲ್ಲಿ ೩೧ ಟಿಎಂಸಿ ಅಡಿಯಷ್ಟು ಬರಿ ಹೂಳೇ ತುಂಬಿದೆ. ಅದನ್ನು ತೆಗೆದು ಸೂಕ್ತವಾಗಿ ವಿಲೇವಾರಿ ಮಾಡಿದರೆ ಅರ್ಧ ಸಮಸ್ಯೆ ಪರಿಹಾರವಾದೀತು. ಇದಕ್ಕೆ ಪೂರಕವಾಗಿ ತುಂಗಭದ್ರಾ ಎಡ-ಬಲದಂಡೆ ವ್ಯಾಪ್ತಿಯಲ್ಲಿ ಸಮತೋಲನ ಜಲಾಶಯಗಳನ್ನು ನಿರ್ಮಿಸುವುದು ಸೂಕ್ತ.
ಇದಿಷ್ಟಾದರೆ, ಇನ್ನು ಮುಂಡರಗಿ ಹಾಗೂ ಗದಗ, ಬಳ್ಳಾರಿ ಜಿಲ್ಲೆ ಹೂವಿನಹಡಗಲಿ, ಕೊಪ್ಪಳ ತಾಲೂಕುಗಳ ೧.೧೮ ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಮುಕ್ಕಾಲು ಭಾಗದಿಂದ ಮೇಲೆ ಏರುತ್ತಲೇ ಇಲ್ಲ. ೬೩ ಕೋಟಿ ರೂ. ವೆಚ್ಚದಲ್ಲಿ ೧೯೯೨ರಲ್ಲಿ ಪ್ರಾರಂಭವಾದ ಯೋಜನೆಯ ವೆಚ್ಚ ಇಂದು ಮೂರುಪಟ್ಟಿಗೂ ಹೆಚ್ಚು ಮೀರಿದೆ. ಇನ್ನಾದರೂ ಸಿಂಗಟಾಲೂರು ವಿಸ್ತೃತ ಏತ ನೀರಾವರಿ ಯೋಜನೆ ತ್ವರಿತ ಅನುಷ್ಠಾನಗೊಳ್ಳಬೇಕು.
ಈ ಭಾಗದಲ್ಲಿ ‘ಬೇಕು’ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೃಷ್ಣಾ ಬಿ ಸ್ಕೀಮ್‌ನಡಿ ಹಂಚಿಕೆಯಾಗುವ ನೀರಿನಲ್ಲಿ ಕುಷ್ಟಗಿ, ಯಲಬುರ್ಗಾ ತಾಲೂಕುಗಳಿಗೆ ಪಾಲು ನೀಡಲು ಮನ ಮಾಡಬೇಕು. ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಕೂಡ್ಲಿಗಿ ತಾಲೂಕು ಗಡಿ ಹಳ್ಳಿಗಳ ಸೇರಿಸಬೇಕು. ನಾರಾಯಣಪೂರ ಬಲದಂಡೆ ಮುಖ್ಯ ಕಾಲುವೆಯ ಪರಿಶೀಲನೆಗೆ ಮುಂದಾಗಬೇಕು. ಕಾಲುವೆಯನ್ನು ೯೫ ರಿಂದ ೧೫೭ನೇ ಕಿ.ಮೀ.ಗೆ ವಿಸ್ತರಿಸಬೇಕು. ತುಂಗಭದ್ರಾ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಮಧ್ಯೆ ಸಂಪರ್ಕ ಕಾಲುವೆ ನಿರ್ಮಿಸಬೇಕು. ನಂದವಾಡಗಿ ಹಾಗೂ ರಾಯಚೂರು ಬೃಹತ್ ಏತ ನೀರಾವರಿ ಯೋಜನೆಗಳನ್ನು ಆರಂಭಿಸಬೇಕು. ರಾಜೋಳಿಬಂಡಾ ತಿರುವು ಯೋಜನೆಯ ಅಣೆಕಟ್ಟೆ ಎತ್ತರ ಹೆಚ್ಚಿಸಬೇಕು....ಉಫ್, ಎನೆಲ್ಲ ಆಗಬೇಕಿದೆ ನೋಡಿ.
ಅಲ್ಲಿಂದ ಸ್ಪಲ್ಪ ಬಾಗಲಕೋಟ- ವಿಜಾಪುರದತ್ತ ಹೊರಳಿದರೆ ಹೇಳಿಕೊಳ್ಳಲಿಕ್ಕೆ ವಿಶ್ವವಿಖ್ಯಾತ ಆಲಮಟ್ಟಿ ಜಲಾಶಯ ನಿಂತಿದೆ. ಅದರ ಭವ್ಯತೆ, ಅಗಾಧತೆಯ ಎದುರು ಎಂಥವರೂ ಮೂಕವಿಸ್ಮಿತರಾಗಬೇಕು. ಆದರೇನು, ಅವಳಿ ಜಿಲ್ಲೆಗಳಿಗೆ ಇದರ ಮೂಲಕ ಸಮಗ್ರ ನೀರಾವರಿಯಾಗಬೇಕೆಂಬ ದಶಕದ ಕನಸು ಕೂಡಿ ಬರಲೇ ಇಲ್ಲ.
ಹೌದು, ಜಿಲ್ಲೆಯ ಅಂದಾಜು ೮.೨೦ ಲಕ್ಷ ಹೆಕ್ಟೇರ್ ಕೃಷಿಭೂಮಿಯ ಪೈಕಿ ೬ ಲಕ್ಷ ಹೆಕ್ಟೇರ್‌ಗೆ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದ ನೀರುಣಿಸಬಹುದಾದ ಯಾವುದೇ ಯೋಜನೆ ಪೂರ್ಣಗೊಂಡಿಲ್ಲ. ಮುಳವಾಡ, ಚಿಮ್ಮಲಗಿ, ಗುತ್ತಿಬಸವಣ್ಣ ಏತ ನೀರಾವರಿ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆ ಯೋಜನೆಗಳು ಎಷ್ಟು ದಿನಗಳಿಂದ ನನೆಗುದಿಗೆ ಬಿದ್ದಿವೆ ಗೊತ್ತೆ ? ಅಷ್ಟಾಗಿಯೂ ಕೃಷ್ಣಾ ‘ಬಿ’ ಸ್ಕೀಂ ನೀರು ನಮಗೆ ಬಿಸಿಲ್ಗುದುರೆ ಆಗುತ್ತಲೇ ಇದೆ. ಬಾಗಲಕೋಟ ಜಿಲ್ಲೆಯ ಮರೋಳ ಏತ ನೀರಾವರಿ ಯೋಜನೆ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಕೊನೆ ಪಕ್ಷ ಕೆರೆತುಂಬುವ ಯೋಜನೆಯನ್ನಾದರೂ ಅನುಷ್ಠಾನಗೊಳಿಸಿ ಎಂದು ಅವಳಿ ಜಿಲ್ಲೆಗಳವರು ಕೇಳುತ್ತ ಬಂದು ಐದಾರು ವರ್ಷಗಳೇ ಕಳೆದವು. ಮೇಲಿಂದ ಮೇಲೆ ಯೋಜನೆಯ ಟೆಂಡರ್ ರದ್ದಾಗುತ್ತಲೇ ಇದೆಯೇ ವಿನಃ ಕೆರೆ ತುಂಬಲು ಮುಹೂರ್ತ ಬಂದಿಲ್ಲ.
ಬೊಮ್ಮಾಯಿಯವರೇ, ಇದೆಲ್ಲ ಬಿಟ್ಟು ನಿಮ್ಮ ಅಕ್ಕ ಪಕ್ಕದ ಜಿಲ್ಲೆಗಳತ್ತ ಬಂದರೆ ಮಲಪ್ರಭಾ, ಘಟಪ್ರಭಾ, ಹಿಪ್ಪರಗಿ, ದೂಧಗಂಗಾ, ಹರಿನಾಲಾ, ಕಳಸಾ-ಬಂಡೂರಿ ನಾಲಾ ತಿರುವು ಮತ್ತು ಮಾರ್ಕಂಡೇಯ ಹೀಗೆ ಯೋಜನೆಗಳ ಸರಣಿಯೇ ನಿಮಗಾಗಿ ಕಾಯುತ್ತಿದೆ. ಹಿರಣ್ಯಕೇಶಿ, ಬಳ್ಳಾರಿ ನಾಲಾ, ಶ್ರೀ ರಾಮೇಶ್ವರ ಮತ್ತು ಜವಳುಹಳ್ಳ ಹೀಗೆ ಯಾವುದೂ ಪೂರ್ಣಗೊಂಡಿಲ್ಲ.
ಮಹಾದಾಯಿ ನದಿ ಕೊಳ್ಳದಲ್ಲಿ ಬರೋಬ್ಬರಿ ೨೦೦ ಟಿಎಂಸಿ ನೀರಿದೆ. ಇದಕ್ಕಿರುವ ಗೋವಾದ ತಗಾದೆ ತಣ್ಣಗಾಗಿಸುವ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನ ಮಾಡುತ್ತಿದ್ದೀರಿ. ಅದು ಚುರುಕುಗೊಳ್ಳಬೇಕು. ೪.೪. ಕಿಮೀ ಉದ್ದದ ಕಳಸಾ ನಾಲೆಯಿಂದ ೩ ಟಿಎಂಸಿ ನೀರು ಸಿಗಲಿದೆ. ೪.೯ ಕಿಮೀ ಉದ್ದದ ಬಂಡೂರಿ ನಾಲಾ ಜೋಡಣೆಯಿಂದ ೩.೫೬ ಟಿಎಂಸಿ ನೀರು ದೊರೆಯುತ್ತದೆ. ಯೋಜನೆ ಅನುಷ್ಠಾನಗೊಂಡರೆ ಬೆಳಗಾವಿ, ಸವದತ್ತಿ, ಬೈಲಹೊಂಗಲ, ರಾಮದುರ್ಗ, ಹುಬ್ಬಳ್ಳಿ-ಧಾರವಾಡ, ನವಲಗುಂದ, ನರಗುಂದ, ಬದಾಮಿ ಒಳಗೊಂಡು ನಾಲ್ಕು ಜಿಲ್ಲೆಗಳ ೧೨ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂಬುದನ್ನು ಮತ್ತೆ ನೆನಪಿಸಬೇಕಿಲ್ಲ.
ಅಲ್ಲಿಂದ ಇನ್ನೂ ಕೆಳಗಿಳಿದರೆ ನೀರಾವರಿ ವಿಷಯದಲ್ಲಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆ ವಂಚನೆಯಾಗಿದೆ ಎಂಬುದನ್ನು ಒಪ್ಪಲೇ ಬೇಕು. ದಶಕ ಕಳೆದರೂ ತುಂಗಾ ಮೇಲ್ದಂಡೆ ಯೋಜನೆ ದಡ ಹತ್ತುತ್ತಲೇ ಇಲ್ಲ. ಯೋಜನೆಯಿಂದ ಜಿಲ್ಲೆಯ ೯೦ ಸಾವಿರ ಎಕರೆಗೂ ಹೆಚ್ಚು ಭೂಮಿ ನೀರಾವರಿಗೆ ಒಳಪಡಲಿದೆ. ಹೀಗೆಯೇ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರ ಯೋಜನೆ, ಹಾನಗಲ್ಲದ ಬಸಾಪುರ ಏತ ನೀರಾವರಿ ಯೋಜನೆ, ಶಿಗ್ಗಾವಿಯ ನಾಗನೂರು ಕೆರೆ ನೀರಾವರಿ ಯೋಜನೆ, ಸವಣೂರಿನ ಮೋತಿ ತಲಾಬ ಯೋಜನೆಗಳು ನನೆಗುದಿಗೆ ಬಿದ್ದಿವೆ.
ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ಬಚಾವತ್ ಎ ಸ್ಕೀಂನಲ್ಲಿ ನೀರು ಹರಿಸಿ ಶಾಶ್ವತ ನೀರಾವರಿ ಕಲ್ಪಿಸಬೇಕೆಂಬ ಬೇಡಿಕೆಯಾಗಲೀ, ಈ ಸಂಬಂಧ ನಡೆಯುತ್ತಿರುವ ಧರಣಿ, ಪ್ರತಿಭಟನೆಗಳಾಗಲೀ ಹೊಸ ಸರಕಾರದ ಗಮನಕ್ಕೆ ಬಂದಂತಿಲ್ಲ. ಹಿರಿಯೂರು ತಾಲೂಕಿನ ಧರ್ಮಪುರ ಕೆರೆಗೆ ಫೀಡರ್ ಕಾಲುವೆ ನಿರ್ಮಿಸಿ ‘ಸುವರ್ಣಮುಖಿ’ಯಿಂದ ನೀರು ಹರಿಸಿದರೆ ಸಾಕು, ಬರಡು ಭೂಮಿಯಲ್ಲಿ ಬಂಗಾರ ಬೆಳೆದೀತು.
ಉಡುವಳ್ಳಿ ಕೆರೆಯ ಪೂರಕನಾಲೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ೨೨ ಕೆರೆ ಏತ ನೀರಾವರಿ, ಚನ್ನಗಿರಿ ತಾಲೂಕಿನ ಉಬ್ರಾಣಿ ಏತ ನೀರಾವರಿ ಹಾಗೂ ಹರಪನಹಳ್ಳಿ ತಾಲೂಕಿನ ಗರ್ಭಗುಡಿ ಬ್ಯಾರೇಜ್ ಯೋಜನೆ ಪೂರ್ಣಗೊಂಡರೆ ದಾವಣಗೆರೆ ಜಿಲ್ಲೆ ಸುಭಿಕ್ಷವಾಗುತ್ತದೆ. ದಾವಣಗೆರೆ, ಹರಪನಹಳ್ಳಿ ಹಾಗೂ ಜಗಳೂರು ತಾಲೂಕಿನ ೨೨ ಕೆರೆಗಳಿಗೆ ಭದ್ರಾ ನದಿಯಿಂದ ನೀರುಣಿಸುವ ಕಾಮಗಾರಿ ಆಡಳಿತಾತ್ಮಕ ಮಂಜೂರಿಯಿಂದ ಮುಂದೆ ಹೋಗಿಲ್ಲ. ೯೧೫ ಕೋಟಿ ರೂ. ವೆಚ್ಚದಲ್ಲಿ ಆರಂಭಿಸಿದ ಭದ್ರಾ ಜಲಾಶಯ ನಾಲೆ ಆಧುನೀಕರಣದ ಶೇ.೭೨ ಕಾಮಗಾರಿ ಬಾಕಿ ಇದೆ. ಮಧ್ಯ ಕರ್ನಾಟಕದಿಂದ ಮೇಲೆಯೇ ಇಷ್ಟೆಲ್ಲ ಇದೆ. ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಭಾಗಗಳದ್ದು ಇನ್ನೊಂದು ಬೃಹತ್ ಅಧ್ಯಾಯ.
ಸನ್ಮಾನ್ಯ ಸಚಿವರೇ, ಸಿಕ್ಕ ಐದು ವರ್ಷಗಳ ಅಕಾರಾವಯಲ್ಲಿ ಈ ಮೇಲಿನ ಪಟ್ಟಿಯಲ್ಲಿ ಹೊಸದೇನನ್ನೂ ಮಾಡುವುದು ಬೇಡ. ಕೊನೇ ಪಕ್ಷ , ಇದ್ದುದನ್ನು ಸರಿ ಮಾಡಲು ಮುಂದಾದರೆ. ನಿಮ್ಮನ್ನು ನಾಡಿನ ಜನ ಕೊನೆತನಕ ತಣ್ಣಗೆ ನೆನೆದಾರು.


‘ಲಾಸ್ಟ್’ಡ್ರಾಪ್: ಸಚಿವರೇ, ಇದಾವುದು ಆಗದಿದ್ದರೂ ತುಂಗಭದ್ರಾ ನಾಲೆಯ ದುಸ್ಥಿತಿಯನ್ನೊಮ್ಮೆ ನೋಡಿ ಬನ್ನಿ ಪ್ಲೀಸ್, ಅಷ್ಟಾದರೂ ಮಾಡುತ್ತೀರಲ್ವಾ?

No comments: