Wednesday, November 12, 2008

ನೀರು-ಮಣ್ಣು , ಕುಲಗೆಡುತ್ತಿರುವ ಧರಣಿ ಮೇಲಿನ ಹೊನ್ನು

‘ಕ್ಷಮಯಾ ಧರಿತ್ರಿ’ ಭೂಮಿಯನ್ನು ಮನದುಂಬಿ ಹೀಗೆ ಸ್ಮೃತಿ ಪುರಾಣಗಳಲ್ಲಿ ಮಾತೃತ್ವದ ಸ್ಥಾನಕ್ಕೇರಿಸಿದ್ದೇವೆ ನಾವು ಭಾರತೀಯರು. ಆದರೆ, ಭೂ ಮಾತೆಯ ಅಂಥ ಕ್ಷಮಾ ಗುಣವೇ ಇಂದು ಆಕೆಯನ್ನು ದೌರ್ಜನ್ಯ ಸಂಕೋಲೆಯಲ್ಲಿ ಬಿಗಿದಿಟ್ಟಿದೆ.
ನಿಜ, ನಮ್ಮ ಪಾಲಿಗೆ ಭೂಮಿಯಂತಲೇ ಅಲ್ಲ; ನಮ್ಮ ಸುತ್ತಮುತ್ತಲಿನ ಪರಿಸರವೆಲ್ಲವೂ ದೈವಸ್ವರೂಪಿಯೇ. ನೆಲ, ಜಲ, ಗಾಳಿ, ಆಕಾಶ ಹೀಗೆ ಒಂದೊಂದಕ್ಕೆ ಒಂದೊಂದು ಪರಿಕಲ್ಪನೆಯನ್ನು ಆರೋಪಿಸಿ, ಸಂರಕ್ಷಿಸಿಕೊಂಡು ಬಂದವರು ನಾವು. ಹೀಗಾಗಿ ಪ್ರಕೃತಿಯ ವ್ಯಾಪಾರವೆಲ್ಲವೂ ನಮಗೆ ದೈವಲೀಲೆಯಾಗಿಯೇ ಕಂಡಿದೆ.
ಆದರೆ, ನೀರು ಭೂಮಿಯಂಥ ನೈಸರ್ಗಿಕ ಸಂಪನ್ಮೂಲ ಬಳಕೆಯೆಂಬುದು ಹಿಂದಿನಂತೆ ಕೇವಲ ಸಾಮಾಜಿಕ ಅಥವಾ ಸಾಮುದಾಯಿಕ ವಿಷಯವಾಗಿ ಉಳಿದಿಲ್ಲ. ಬದಲಾಗಿ ಅದಿಂದು ರಾಜಕೀಯ, ಆರ್ಥಿಕ ಇನ್ನೂ ಹೆಚ್ಚಾಗಿ ರಾಜತಾಂತ್ರಿಕ ವಿಷಯವಾಗಿ ಹೊರಹೊಮ್ಮಿದೆ. ಇದೇಕೆ ಹೀಗೆಂದು ಪ್ರಶ್ನಿಸಿಕೊಂಡರೆ ಮತ್ತದೇ ಬದಲಾದ ಭಾರತದ ಚಿತ್ರಣ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
೧೯೪೭ರಲ್ಲಿ ಭಾರತದ ಜನಸಂಖ್ಯೆ ಸರಿಸುಮಾರು ೩೫ ಕೋಟಿಯಷ್ಟಿತ್ತು. ಇಂದು ಅದರ ಮೂರೂವರೆ ಪಟ್ಟು ಹೆಚ್ಚಳವಾಗಿದೆ. ಆದರೆ ನಿಸರ್ಗ ಸಂಪನ್ಮೂಲಗಳ ಬಳಕೆ ಪ್ರಮಾಣ ಐವತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಆಗಿನಕ್ಕಿಂತ ಹತ್ತು ಪಟ್ಟು ಹೆಚ್ಚಿದೆ. ಸಂಪನ್ಮೂಲ ಮಾತ್ರ ಹಿಮ್ಮುಖವಾಗಿ ಸಾಗಿದೆ. ಇನ್ನು ಕಾಡಿನ ವಿಚಾರಕ್ಕೆ ಬಂದರೆ ಅತ್ಯಂತ ರೋಚಕ ವಿಷಯ ಬಯಲಿಗೆ ಬರುತ್ತದೆ. ಮನುಕುಲವೆಂಬುದರ ಪರಿಣಾಮ ಅದು ಅತಿವೃಷ್ಟಿಯೇ ಇರಲಿ, ಅನಾವೃಷ್ಟಿಯೇ ಇರಲಿ ಯಾವುದನ್ನೂ ನಾವು ದೂರುತ್ತಿರಲಿಲ್ಲ. ಅದನ್ನೊಂದು ಸಂಕಷ್ಟವನ್ನಾಗಿ ಮರುಗುತ್ತಿರಲಿಲ್ಲ. ಇದರ ಜತೆಗೆ ಪ್ರಾಕೃತಿಕ ವ್ಯವಸ್ಥೆಯ ಸಂರಕ್ಷಣೆಯೆಂಬುದನ್ನು ನಾವು ದಿನಚರಿಯ ಭಾಗವಾಗಿ ಪರಿಗಣಿಸುವ ಪರಿಪಾಠ ಬೆಳೆಸುತ್ತಿದ್ದೆವು.
ಭಾವನಾತ್ಮಕ ವಿಚಾರಗಳೇನೆ ಇರಲಿ, ನೀರು-ಮಣ್ಣಿನ ವಿಚಾರದಲ್ಲಿ ಭಾರತದ ಇಂದಿನ ವಾಸ್ತವ ಮಾತ್ರ ಅತ್ಯಂತ ಕರಾಳ ಚಿತ್ರಣವನ್ನು ಕಟ್ಟಿಕೊಡುತ್ತದೆ. ಬದಲಾಗಿರುವ ನಗರಗಳು, ಹೆಚ್ಚಿರುವ ಕೈಗಾರಿಕೆ, ಕೃಷಿ ಪ್ರದೇಶಗಳು, ಪರಿಣಾಮವಾಗಿ ಉದ್ಭವಿಸಿರುವ ಮೂಲಭೂತ ಸೌಲಭ್ಯಗಳ ಕೊರತೆ...ಪಟ್ಟಿ ಬೆಳೆಯುತ್ತದೆ. ಇದರ ಪರಿಣಾಮ ? ಭೂಮಿ ಹುಟ್ಟಿದಾಗಿನಿಂದ ೧೯೧೭ರವರೆಗೆ ಯಾವ ಪ್ರಮಾಣದ ಕಾಡು ನಾಶವಾಗಿತ್ತೋ ಅದರ ಎರಡು ಪಟ್ಟು ಕಾಡು ನಂತರದ ಕೇವಲ ೫೦ ವರ್ಷಗಳಲ್ಲಿ ನಾಶವಾಗಿದೆ. ಹಾಗಾದರೆ ಈ ಪ್ರಮಾಣದಲ್ಲಿ ಸಂಪನ್ಮೂಲದ ನಾಶಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ದೊರಕುವ ಉತ್ತರ ಇನ್ನೂ ಆಶ್ಚರ್ಯ ಹುಟ್ಟುತ್ತದೆ.
ಈ ಭೂಮಿಯ ಮೇಲೆ ನಡೆದ ಎರಡು ಮಹಾ ಯುದ್ಧಗಳು ಜಗತ್ತಿನ ಚಿತ್ರಣವನ್ನೇ ಬದಲಿಸಿದವು. ಈ ಸಂದರ್ಭದಲ್ಲಿ ಕಬ್ಬಿಣ, ಕೈಗಾರಿಕೆ ನಿರೀಕ್ಷೆ ಮೀರಿ ಬೆಳೆಯಿತು. ಆಯುಧಗಳಿಗಾಗಿ ಕಬ್ಬಿಣ ಮತ್ತು ಮರದ ಬಳಕೆಯೂ ಹೆಚ್ಚಿತು. ಇದು ಕಾಡುನಾಶಕ್ಕೆ ಮೂಲವಾಯಿತು. ಇಲ್ಲಿಂದಲೇ ಹೆಚ್ಚಿತು ನೈಸರ್ಗಿಕ ಸಂಪನ್ಮೂಲಗಳ ಕೊರತೆಯೂ ಮನುಷ್ಯನನ್ನು ಕಾಡಲಾರಂಭಿಸಿತು. ಮಾತ್ರವಲ್ಲ, ಸಮುದಾಯದ ಸಂಪನ್ಮೂಲವಾಗಿದ್ದ ನೀರಿನಂಥ ವಿಷಯ ರಾಜಕೀಯ, ಆರ್ಥಿಕ ಮಹತ್ವವನ್ನು ಪಡೆದುಕೊಂಡಿತು.
ಇಂಥದೊಂದು ಸಂದರ್ಭಕ್ಕಾಗಿಯೇ ಕಾಯುತ್ತಿದ್ದ ವಸಾಹತುಶಾಹಿಗಳು ನಮ್ಮ ನೀರಾವರಿ ಹಾಗೂ ಕೃಷಿ ಪದ್ಧತಿಯನ್ನೇ ಬದಲಿಸಿಬಿಟ್ಟರು. ಇಂದು ‘ಸಾರ್ವಜನಿಕ ನಲ್ಲಿ’ ಅಥವಾ ಸಾರ್ವಜನಿಕ ನೀರು ಪೂರೈಕೆಯೆಂಬ ಕಲ್ಪನೆಯೇ ಖಾಸಗಿಯವರ ದೃಷ್ಟಿಯಲ್ಲಿ ‘ನೀರಿನ ಪೋಲು’ ಎನಿಸಿಕೊಂಡಿರುವುದು ವಿಪರ್ಯಾಸ.
ನಮ್ಮ ಇಂಥ ಭಾವನೆ ಕೂಡ ಅಮೆರಿಕದಂಥ ದೇಶಗಳ ಹುನ್ನಾರದ ಭಾಗವೇ. ಏಕೆಂದರೆ ಅಮೆರಿಕ ಮಾತನಾಡುತ್ತಿರುವುದು ‘ಆಹಾರ ಭದ್ರತೆ’ಯ ಬಗೆಗೇ ವಿನಃ ಬೇರೆ ದೇಶಗಳ ‘ಆಹಾರ ಸಾರ್ವಭೌಮತೆ’ ಅದಕ್ಕೆ ಬೇಕಿಲ್ಲ. ಕೃಷಿಯೆಂತಲೇ ಅಲ್ಲ, ಯಾವುದೇ ಒಂದು ದೇಶ ನಿರ್ದಿಷ್ಟ ವಿಷಯದಲ್ಲಿ ಸಾರ್ವಭೌಮತ್ವ ಸಾಸುವುದು ಅಮೆರಿಕಕ್ಕೆ ಬೇಕಿಲ್ಲ. ಹೀಗಾಗಿ ವಿಶ್ವಬ್ಯಾಂಕ್, ವಿಶ್ವವ್ಯಾಪಾರ ಸಂಸ್ಥೆಗಳಂಥ ಏಜೆಂಟರ ಮೂಲಕ ಸಾಲ ಹಂಚುವ ಅದು ಸಾಲ ಪಡೆದ ದೇಶಗಳನ್ನು ಜಾಗತೀಕರಣದ ‘ತದ್ರೂಪಿ ತಯಾರಿಕಾ ಉಪಕರಣ’ವಾಗಿ ಮಾರ್ಪಡಿಸುತ್ತದೆ. ಇಂಥ ತದ್ರೂಪಿ ವೇದಿಕೆಯೇ ನೀರಿನ ಖಾಸಗೀಕರಣ. ಬಹುರಾಷ್ಟ್ರೀಯ ಕಂಪನಿಗಳು ನೇರವಾಗಿ ನಮ್ಮ ಅಂತರ್ಜಲಕ್ಕೆ ಬೋರ್‌ವೆಲ್‌ಗಳ ಹೆಸರಲ್ಲಿ ಕನ್ನ ಕೊರೆದು ದೋಚುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಇತ್ತೀಚಿನ ದಿನಗಳಲ್ಲಿ ‘ಅಂತರ್ಜಲ ಬತ್ತಿ ಹೋಗುತ್ತಿದೆ’ ಎಂಬ ಕೂಗು ಮಾಮೂಲು ಎಂಬಂತಾಗಿದೆ. ಏಕಕಾಲಕ್ಕೆ ಜಗತ್ತಿನೆಲ್ಲೆಡೆ ಎದ್ದ ನೀರಿಗಾಗಿನ ಹಾಹಾ ಕಾರಕ್ಕೆ ಉತ್ತರವಾಗಿ ಕಂಡದ್ದು ಭೂಗರ್ಭದೊಳಗೆ ಅಡಗಿ ಕುಳಿತಿದ್ದ ಈ ಗುಪ್ತನಿ. ಅದನ್ನು ಹುಡುಕಿದ್ದೂ ಆಯಿತು. ಅದರ ಗುಂಟ ಕನ್ನ ಕೊರೆದದ್ದೂ ಆಯಿತು. ಕೆಲವೆಡೆ ಬರಿದಾಗಿಸಿದ್ದೂ ಆಯಿತು. ನಂತರದ ಹೊಸ ಕೂಗು ‘ಅಂತರ್ಜಲ ಬತ್ತಿ ಹೋಗುತ್ತಿದೆ....
ನಿಜವಾಗಿ ಈ ನೀರು ಎಂಥದ್ದು, ಎಲ್ಲಿಂದ ಬಂತು. ಯಾಕೆ ಅಲ್ಲಿ ಅಡಗಿತ್ತು ? ಎಂಬೆಲ್ಲ ಅಂಶಗಳ ಅರಿವಿದ್ದರೆ ಖಂಡಿತಾ ನಾವಿಂದು ಈ ಪ್ರಮಾಣದಲ್ಲಿ ಅದನ್ನು ಬರಿದಾಗಿಸುತ್ತಿರಲಿಲ್ಲವೇನೊ ! ಈ ಜಗತ್ತಿನ ಎಲ್ಲ ನೀರಿನ ಮೂಲಾಧಾರವೂ ಮಳೆಯೇ ಎಂಬುದು ಬಹುಮುಖ್ಯ ಸಂಗತಿ. ನೆಲದೊಳಗೆ ಬಹುಕಾಲದಿಂದ ಅಡಗಿ ಕುಳಿತ ಅಂತರ್ಜಲಕ್ಕೂ ಕೂಡ ಇದೇ ಮಳೆಯೇ ಮೂಲ.
ಸಾಮಾನ್ಯವಾಗಿ, ಬಾವಿಹೊಂಡ ತೋಡಿದಾಗ ‘ಜಲ ಸಿಕ್ಕಿತು’, ‘ಒರತೆ ಕಂಡಿತು’ ಎನ್ನುವುದನ್ನು ಕೇಳಿದ್ದೇವೆ. ಹೀಗೆ ಸಿಕ್ಕುವುದೇ ವಿಶ್ರಾಂತಿಗೆ ಕುಳಿತಿದ್ದ ಜಲ. ಎಷ್ಟೋ ಜನರ ಕಲ್ಪನೆಯಲ್ಲಿ ಇದೇ ಅಂತರ್ಜಲ ಎಂಬುದಿದೆ. ನಿಜವಾಗಿ ಇದು ಅಂತರ್ಜಲವಲ್ಲ. ಭೂಗರ್ಭ ಶಾಸ್ತ್ರಜ್ಞ ಸುಭಾಷ್‌ಚಂದ್ರ ಅವರು ವಿವರಿಸುವಂತೆ ಇದು ಪೂರಕ ಜಲ ಸಂಪನ್ಮೂಲ. ಅಂದರೆ ಡೈನಾಮಿಕ್ ರಿಸೋರ್ಸ್.
ಭೂಮಿಯ ಮೇಲ್ಪದರದ ೨೦೦ ಅಡಿಯ ಆಸು ಪಾಸಿನಲ್ಲಿ ನಮಗೆ ಸಿಗುವ ಜಲವೆಲ್ಲವೂ ಇಂಥ ಪೂರಕ ಸಂಪನ್ಮೂಲವೇ. ಇದು ಒಂದೇ ತೆರನಾಗಿ ಇರುವುದಿಲ್ಲ. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ, ನೀರಿಳಿ ಯುವ ಮಟ್ಟವನ್ನು ಅವಲಂಬಿಸಿ ಬದಲಾಗುತ್ತಿರುತ್ತದೆ.
ನಿಜವಾದ ಅಂತರ್ಜಲವೆಂದರೆ ಅದು "ಸ್ಥಿರ’ ಅಥವಾ ‘ಶಾಶ್ವತ’ ಸಂಪನ್ಮೂಲ ಅಥವಾ ಸ್ಟ್ಯಾಟಿಕ್ ರಿಸೋರ್ಸ್. ಡೈನಾಮಿಕ್ ವಲಯವನ್ನು ದಾಟಿ ಕಷ್ಟಪಟ್ಟು, ಸಂದಿ ಗೊಂದಿಗಳನ್ನು ತದಡಿ, ತಡೆಕಾಡಿ ಕೆಳಗಿಳಿಯುವ ನೀರು ಭೂಮಿಯ ಮೇಲ್ಮೈನಿಂದ ಸಾವಿರಾರು ಅಡಿಗಳನ್ನು ದಾಟಿ ತನ್ನ ಇರುವನ್ನು ಕಂಡುಕೊಂಡಿರುತ್ತದೆ. ಪೂರಕ ಜಲವೆಂದರೆ ಕೃತಕವಾಗಿ ಮಾನವ ನಿರ್ಮಿತ ಹೊಂಡ, ತಗ್ಗುಗಳಲ್ಲಿ ಸಂಗ್ರಹಗೊಂಡದ್ದೂ ಆಗಬಹುದು. ಆದರೆ, ಸ್ಥಿರ ಜಲ ಸಂಪನ್ಮೂಲ ಪ್ರಕೃತಿಯ ಪರಮೋಚ್ಚ ಶಕ್ತಿಯ ಬಳಕೆಯ ಫಲವಾಗಿ ಕೆಲವು ಸಾವಿರ ವರ್ಷಗಳ ನಿರಂತರ ಪಯಣದ ಬಳಿಕ, ಯಾವುದೇ ಕೃತಕ, ಬಾಹ್ಯ ಬಲಪ್ರಯೋಗವಿಲ್ಲದೇ ಸಂಗ್ರಹಿತಗೊಳ್ಳುವಂಥದ್ದು.
ಇಂಥ ಸ್ಥಿರ ಸಂಪನ್ಮೂಲವಾದ ಅಂತರ್ಜಲ ಮಟ್ಟ ಕುಸಿದರೆ ಪುನಃ ಮೊದಲಿನ ಸ್ಥಿತಿಗೆ ಬರಲು ಸುದೀರ್ಘ ಸಮಯ ಅಂದರೆ ತಲೆಮಾರುಗಳೇ ಬೇಕಾಗಬಹುದು. ಆದರೂ ಅದೇ ನಿರ್ದಿಷ್ಟ ಪ್ರದೇಶ ದಲ್ಲಿ ಸಂಗ್ರಹಗೊಳ್ಳಬೇಕೆಂಬುದೇನೂ ಇಲ್ಲ. ಏಕೆಂದರೆ ಸ್ಥಿತ್ಯಂತರ ಭೂಮಿಯ ಸಹಜ ಗುಣ. ಇಂಥ ಭೂಸ್ಥಿತ್ಯಂತರದ ಸಂದರ್ಭದಲ್ಲಿ ಮೊದಲು ನೀರಿದ್ದ ಜಾಗವನ್ನು ಗಟ್ಟಿ ಪ್ರದೇಶ ಆಕ್ರಮಿಸಿಕೊಂಡು ಬಿಡಬಹುದು.
ಇದೆಲ್ಲಕ್ಕಿಂತ ಮುಖ್ಯವಾಗಿ ಭೂಮಿಯ ಮೇಲೆ ವಾರ್ಷಿಕ ನೂರು ಮಿಲಿಮೀಟರ್ ಮಳೆ ಸುರಿದರೆ ಅಂತರ್ಜಲ ಸೇರುವ ನೀರಿನ ಪ್ರಮಾಣ ೩ರಿಂದ ೫ ಮಿಲಿಮೀಟರ್ ಮಾತ್ರ. ನದಿ, ಸರೋವರಗಳ ಭಾಗದಲ್ಲಿ ೧೨ ರಿಂದ ೨೦ ಮಿಲಿಮೀಟರ್‌ನವರೆಗೆ ಇರುತ್ತದೆ. ಅಂದರೆ ಅತ್ಯಂತ ಕನಿಷ್ಠ ಭಾಗ ನೀರು ಮಾತ್ರ ಒಳಗೆ ಸಂಗ್ರಹಗೊಂಡಿರುತ್ತದೆ. ಅದರಲ್ಲೂ ಬಹುಪಾಲು ಭೂಮಿಯ ಮೇಲ್ಪದರದಲ್ಲಿ ಅಂದರೆ ಶಿಥಿಲ ವಲಯದಲ್ಲಿಗೆ ನಿಲ್ಲುತ್ತದೆ. ಮತ್ತೊಂದಿಷ್ಟು ಸಚ್ಛಿದ್ರ ಶಿಲಾ ವಲಯವೆಂದು ಕರೆಯುವ ಎರಡನೇ ಭಾಗಕ್ಕೆ ಹೋಗುತ್ತದೆ. ಇಲ್ಲಿ ತೀರಾ ಅಪರೂಪಕ್ಕೆ ಕಾಣಸಿಗುವ ಶಿಲಾ ಸೀಳುಗಳ ಮೂಲಕ ಹಲವು ಸಂವತ್ಸರಗಳ ಬಳಿಕ ತೀರಾ ಕನಿಷ್ಠ ಪ್ರಮಾಣದ ನೀರು ಆಳಕ್ಕಿಳಿಯುತ್ತದೆ. ಹೀಗಾಗಿಯೇ ಇದನ್ನು ‘ಆಪತ್ಕಾಲದ ನೀರು’ ಎಂದು ಕರೆಯಲಾಗುತ್ತದೆ. ಇದರ ಕೆಳಗೆ ಜಲವಿಲ್ಲದ, ಗಟ್ಟಿ ಕಲ್ಲಿನ ಒಣ ವಲಯವಿರುತ್ತದೆ. ಈಗ ನಾವು ಬೋರ್ ವೆಲ್‌ಗಳ ಮೂಲಕ ಬರಿದಾಗಿಸುತ್ತಿರುವುದು ಇಂಥ ನೀರನ್ನು.
ಈಗ ಯೋಚಿಸಿ. ಇದು ಒಂದೊಮ್ಮೆ ಬರಿದಾದರೆ ನಮಗೆ ಮತ್ತೆಲ್ಲಿಂದ ನೀರು ಸಿಕ್ಕೀತು? ಮೊದಲೆಲ್ಲ ನೀರಿ ಗಾಗಿ ನಾವು "ಆಕಾಶ’ದೆಡೆ ಮುಖಮಾಡಿ ನಿಲ್ಲುತ್ತಿದ್ದೆವು. ಯಾವಾಗ ಮಳೆ ಪ್ರಮಾಣ ಕಡಿಮೆಯಾಯಿತೋ ಆಗ ಭೂಮಿಯೊಳಕ್ಕೆ ಕೊರೆಯಲಾರಂಭಿಸಿದೆವು. ಈಗ ಆಕಾಶ, ಭೂಮಿ ಎರಡರಲ್ಲೂ ನೀರಿಲ್ಲ. ಮುಂದಿನ ಗತಿಯೇನು? ಯೋಚಿಸಲೇಬೇಕಾದ ಸಂದರ್ಭ ಬಂದಿದೆ. ಆದರೂ ನಾವು ಯೋಚಿಸುತ್ತಿಲ್ಲ. ಮೌಢ್ಯ ವೆಂದರೆ ಇದೇ ಅಲ್ಲವೇ?
೧೯೬೬ರಲ್ಲೇ ಅಂತರ್ಜಲದ ಸಮೀಕ್ಷೆ ಆರಂಭವಾಯಿತು. ನಂತರ ಅಂತರ್ಜಲದ ಬಳಕೆ ಕುರಿತು ಕಾನೂನು ರೂಪಿಸುವ ಯೋಜನೆ ಮಾಡಿದೆವು. ಈಗ ೨೫೦ ಅಡಿಗಿಂತ ಕೆಳಗಿನ ನೀರು ಬಳಕೆಗೆ ನಿರ್ಬಂಧವಿದೆ. ಆದರೆ ಖಾಸಗಿಯಾಗಿ ಬೋರ್‌ವೆಲ್ ಕೊರೆಯುವವರಿಗೆ ಇದಾವುದೂ ಇಲ್ಲ. ೧೯೮೮ರಲ್ಲೇ ಈ ಸಂಬಂಧ ನಿಷೇಧ ಹೇರುವ ಕಾನೂನಿನ ಕರಡು ಸದನದ ಮುಂದೆ ಬಂದಿದ್ದರೂ ಈವರೆಗೆ ಅದು ಅಂಗೀಕಾರವಾಗಿಲ್ಲ. ಹೀಗಾಗಿ ನಾವು ಬೋರ್ ಕೊರೆಯುವುದನ್ನೂ ನಿಲ್ಲಿಸಿಲ್ಲ. ೮೦ರ ದಶಕವೊಂದರಲ್ಲೇ ದೇಶದಲ್ಲಿ ಸುಮಾರು ೩೦ ಲಕ್ಷಕ್ಕೂ ಹೆಚ್ಚು ಬೋರ್‌ವೆಲ್ ಕೊರೆಯಲಾಯಿತು.
ಹೌದು, ಬೇಸಿಗೆ ಬರುತ್ತಿದೆ. ನೆಲ-ಬಯಲು, ಗುಡ್ಡ- ಗುಡಾರಗಳೆನ್ನದೇ ಬಿಸಿಲ ಝಳಕ್ಕೆ ಸಿಕ್ಕು ಗಾರುಗಾರಾಗಿರುತ್ತದೆ. ಇಂಥ ಸನ್ನಿವೇಶದಲ್ಲಿ ಮೇಲ್ಮಣ್ಣಿನ ಸಂರಕ್ಷಣೆಯ ಬಗ್ಗೆ ಯೋಚಿಸಲೇಬೇಕಿದೆ.
ಮೇಲ್ಮಣ್ಣಿನ ಮಹತ್ವದ ಬಗ್ಗೆ ಹೇಳುವುದಾದರೆ, ನಿಸರ್ಗದ ವ್ಯಾಪಾರವನ್ನಾಧರಿಸಿ ಒಂದಿಂಚು ಉತ್ತಮ ಮೇಲ್ಮಣ್ಣು ರಚನೆಯಾಗಬೇಕೆಂದರೆ ಏನಿಲ್ಲವೆಂದರೂ ಒಂದು ಸಾವಿರ ವರ್ಷವಾದರೂ ಬೇಕು. ಮೇಲ್ಮಣ್ಣು ರಚನೆಯಲ್ಲಿ ಸೂಕ್ಷ್ಮಾಣು ಜೀವಿಯ ಪಾತ್ರ ಬಹುಮುಖ್ಯ. ತೀರಾ ಕೆಳಗಿರುವ ಕರಿಶಿಲೆ ಪದರ ವಿಭಜಿಸಿ ಕೆಳ ಮಣ್ಣಿನ ಮೇಲ್ಭಾಗ ರಚನೆಯಾಗುತ್ತದೆ. ಇದಕ್ಕೆ ಸೂಕ್ಷಾ ಣುಗಳು ಸಾವಯವ ತ್ಯಾಜ್ಯಗಳನ್ನು ವಿಭಜಿಸಿ ಸೇರಿಸಿದಾಗ ಮೇಲ್ಮಣ್ಣು ರಚನೆಯಾಗುತ್ತದೆ. ಒಮ್ಮೆ ಇವು ನಾಶವಾದರೆ ಪರಿಪೂರ್ಣ ಪುನರುತ್ಥಾನ ಸಾಧ್ಯ ವಾಗದು. ಇದರಿಂದ ಮೇಲ್ಮಣ್ಣಿನ ರಚನೆ ಕಾರ್‍ಯವೂ ಸ್ಥಗಿತ ಗೊಳ್ಳುತ್ತದೆ. ಸಮರ್ಥ ಮೇಲ್ಮಣ್ಣು ಇಲ್ಲದೆಡೆ ಸಸ್ಯವೂ ಬೆಳೆಯುವುದಿಲ್ಲ. ಹೀಗಾಗಿ ನೀರು ಭೂಮಿಯೊಳಕ್ಕೆ ಇಂಗುವ ಪ್ರಮಾಣವೂ ಕುಸಿಯುತ್ತ ಕ್ರಮೇಣ ಆ ಪ್ರದೇಶ ಬರಡಾಗುತ್ತದೆ.
ಸಾಮಾನ್ಯವಾಗಿ ಗೆದ್ದಲಿನಂಥ ಜೀವಿಗಳು ಬೆಳಕಿನಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದ್ದರಿಂದ ಬೆಳಕು ಬರದಂತೆ ತಡೆಯಲು ಕೆಳಭಾಗದಿಂದ ಮಣ್ಣಿನ ಕಣಗಳನ್ನು ಕೊರೆದು ತಂದು ಮೇಲೆ ಗೂಡಿನಾಕಾರ ರಚಿಸಿಕೊಂಡಿರುತ್ತವೆ. ಹೀಗೆ ನೆಲ ಕೊರೆಯುವಾಗ ಅದು ಬೇರೆ ಬೇರೆ ದಿಕ್ಕಿನಲ್ಲಿ ಸಾಗಿ ಮಣ್ಣಿನ ಪದರು ತನ್ನಿಂದ ತಾನೇ ಹೂದಲಾಗುತ್ತದೆ. ಇದರಿಂದ ಮಳೆಗಾಲದಲ್ಲಿ ನೀರಿಂಗುವ ಪ್ರಕ್ರಿಯೆ ಇನ್ನೂ ಸುಲಭ. ಅದರಲ್ಲೂ ಗೆದ್ದಲುಗಳು ತನಿ ಮುಟ್ಟುವವರೆಗೂ ನೆಲವನ್ನು ಕೊರೆದಿರುತ್ತವೆ. ಹೀಗಾಗಿ ಇವು ಅಂತರ್ಜಲಕ್ಕೆ ನಿರ್ಮಿಸಿದ ಹೆದ್ದಾರಿ. ಈ ಹಿನ್ನೆಲೆಯಲ್ಲಿ ಇವೆಲ್ಲದರ ರಕ್ಷಣೆಗ ನಾವು ಟೊಂಕ ಕಟ್ಟಲೇಬೇಕು.
ಇನ್ನೂ ಕೃಷಿಯ ವಿಚಾರಕ್ಕೆ ಬಂದರೆ ಮೇಲ್ನೋಟಕ್ಕೆ ಅತ್ಯಂತ ಸುಂದರವಾಗಿ, ಹಚ್ಚ ಹಸುರಿನಿಂದ ಕಂಗೊಳಿಸುವ ಹೊಲ-ಗದ್ದೆಗಳು ಆಂತ ರ್ಯದಲ್ಲಿ ವಿನಾಶದ ಗುಣಗಳನ್ನು ಅಡಗಿಸಿಟ್ಟುಕೊಂಡಿವೆ ಎಂಬುದನ್ನು ಒಮ್ಮೆಲೆ ನಂಬಲಾಗದಿದ್ದರೂ ನಿಜ.
ಬೆಳೆಗಳಲ್ಲಿನ ಸಮತೋಲನದ ವಿಷಯದಲ್ಲಿ ನಾವು ಅತ್ಯಂತ ನಿರ್ಲಕ್ಷ್ಯವಹಿಸಿರುವುದೇ ಇದಕ್ಕೆ ಅತ್ಯಂತ ಪ್ರಮುಖ ಕಾರಣ. ಒಣಭೂಮಿಗೆ ಮಾತ್ರ ಹೊಂದಿಕೊಳ್ಳುವಂಥ ಶುಂಠಿಯಂಥ ಬೆಳೆಗಳು ಮಲೆನಾಡಿಗೂ ಕಾಲಿಟ್ಟಿವೆ. ಇದರ ಒಂದು ಮುಖ ಭೂಮಿಯನ್ನು ಬಂಜರಾಗಿಸುವುದಾ ದರೆ, ಇನ್ನೊಂದೆಡೆ ಶುದ್ಧ ನೀರಾವರಿ ಬೆಳೆಗಳು ಬಯಲು ಪ್ರದೇಶಕ್ಕೆ ವಲಸೆ ಹೋಗಿ ಅಲ್ಲಿ ಅವಾಂತರ ಸೃಷ್ಟಿಸುತ್ತಿವೆ. ಆಯಾ ಭೂ ಲಕ್ಷಣಗಳಿಗನುಗುಣವಾಗಿ ಬೆಳೆಗಳೂ ನಿರ್ಧರಿತವಾಗಿರುತ್ತವೆ. ಅಂಥ ವಿವೇಚನೆಯನ್ನು ಮೀರಿ ಬೆಳೆ ಆಯ್ಕೆ ಮಾಡಿಕೊಂಡಾಗ ಸಹಜವಾಗಿಯೇ ಪ್ರಕೃತಿಯ ಸಮತೋಲನ ತಪ್ಪುತ್ತದೆ.
ಅನುಮಾನವೇ ಇಲ್ಲ ಪ್ರಾಕೃತಿಕ ಸಮತೋಲನ ರಕ್ಷಣೆ ಯಲ್ಲಿ ಸಸ್ಯ ಪ್ರಭೇದಗಳ ಪಾತ್ರ ಅತ್ಯಂತ ಹಿರಿದು. ದ್ಯುತಿ ಸಂಶ್ಲೇಷಣ ಕ್ರಿಯೆಯ ಮೂಲಕ ಆಹಾರ ತಯಾರಿಸಿ ಕೊಳ್ಳುವ ಸಂದರ್ಭದಲ್ಲಿ ವಾತಾವರಣದಲ್ಲಿನ ಇಂಗಾಲಾಮ್ಲವನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ ಎಂಬುದನ್ನು ಪ್ರಾಥಮಿಕ ಶಾಲೆಗಳಲ್ಲೇ ಕಲಿತಿದ್ದೇವೆ. ಇದೇ ಸಮತೋಲನ. ಆದರಿಂದು ಇದನ್ನೂ ಮೀರಿ ಬಹುರೂಪಿ ಬೆಳೆಗಳ ಯೋಜನೆಗಳ ಸಂದರ್ಭ ದಲ್ಲಿ, ಹೈಬ್ರೀಡ್ ತಳಿಗಳ ಹೆಸರಲ್ಲಿ ವ್ಯವಸಾಯಕ್ಕಿಳಿದಿದ್ದು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಸುರಿಯದೇ ಕೃಷಿ ಮುಗಿಯುವುದೇ ಇಲ್ಲವೆಂಬ ಪರಿಸ್ಥಿತಿಗೆ ಬಂದು ತಲುಪಿದ್ದೇವೆ.
ಹಸುರು ಕ್ರಾಂತಿಯ ಓಟದಲ್ಲಿ ದಿನದಿಂದ ದಿನಕ್ಕೆ ಕೃಷಿ ಭೂಮಿ ವಿಸ್ತಾರಗೊಳ್ಳುತ್ತಿದೆ. ಮಾತ್ರವಲ್ಲ, ಇಳುವರಿಗಾಗಿ ಹೊಸ ಹೊಸ ತಳಿಗಳನ್ನು ಪರಿಚಯಿಸು ತ್ತಿದ್ದೇವೆ. ಮನಸ್ವೇಚ್ಛೆ ರಾಸಾಯನಿಕಗಳನ್ನು ಬಳಸುತ್ತಿದ್ದೇವೆ. ಸಾಂಪ್ರದಾಯಿಕ ತಳಿಗಳು ಕಣ್ಮರೆಯಾಗಿವೆ. ಅತಿ ಹೆಚ್ಚು ನೀರು ಬೇಡುವ (ನಿಜವಾಗಿ ಭತ್ತಕ್ಕೆ ಅಷ್ಟೊಂದು ನೀರು ಬೇಕಾಗಿಯೇ ಇಲ್ಲ. ಆ ಪ್ರಶ್ನೆ ಬೇರೆ) ಭತ್ತವನ್ನು ಒಣ ಭೂಮಿಯಲ್ಲೂ ಬೆಳೆಯಲು ಹವಣಿಸಿದ್ದೇವೆ. ಹೀಗಾಗಿ ನೀರು ಉಳಿಸಲು, ತೇವಾಂಶ ರಕ್ಷಣೆಗೆ ಮತ್ತೆ ಮತ್ತೆ ಯಂತ್ರಗಳಿಂದ ಭೂಮಿಯನ್ನು ಆಳದವರೆಗೆ ಉಳುಮೆ ಮಾಡುತ್ತಿರುವುದರಿಂದ ಭೂ ರಂಧ್ರಗಳು ಮುಚ್ಚಿ ಹೋಗಿ ಮಣ್ಣಿನಲ್ಲಿ ‘ಪಿಎಚ್’ ಅಂಶ ಕಡಿಮೆಯಾಗತೊಡಗಿದೆ. ಇದರಿಂದ ಭತ್ತದ ಗದ್ದೆಗಳಲ್ಲಿ ನಿಂತ ನೀರು ಆಮ್ಲಯುಕ್ತ ವಾಗಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತಿವೆ. ಇವು ನಿರಂತರವಾಗಿ ನೈಟ್ರಸ್ ಆಕ್ಸೈಡ್ ಕಾರುತ್ತಿರುತ್ತವೆ. ಈ ಹಂತದಲ್ಲಿ ಇಂಗಾಲ ಮತ್ತು ಸಾರಜನಕದ ಸಮತೋಲನ ತಪ್ಪಿ ವಾತಾವರಣಕ್ಕೆ ಆತಂಕ ಎದುರಾಗುತ್ತದೆ. ಇದರೊಂದಿಗೆ ಇಳುವರಿ ಹೆಚ್ಚಳಕ್ಕೆ ಬಳಸುವ ರಾಸಾಯನಿಕಗಳು ಅಮೋನಿಯಾವೆಂಬ ಕಾರ್ಕೋಟಕವನ್ನು ಹೊರಸೂಸುತ್ತವೆ. ಇದು ಇಡೀ ವಾತಾವರಣವನ್ನೇ ಬೆಂಕಿಯುಂಡೆಯಾಗಿಸುತ್ತಿದೆ.
ಅಲ್ಲಿಗೆ ‘ಹಸುರು ಮನೆ ಅನಿಲ’ವೆಂಬುದಷ್ಟನ್ನೂ ನಾವು ನಮ್ಮ ಬಗಲಲ್ಲೇ ಇಟ್ಟುಕೊಂಡು ಬರುತ್ತಿದ್ದೇವೆ ಎಂದಂತಾಯಿತು. ಅಷ್ಟಕ್ಕೂ ಏನಿದು ‘ಹಸುರು ಮನೆ’ ಪರಿಣಾಮ? ಭೂಮಿಯ ಮೇಲಿನ ಎಲ್ಲ ಬೆಳವಣಿಗೆಗಳಿಗೆ ಸೂರ್ಯ ಕಿರಣಗಳೇ ಕಾರಣವೆಂಬುದು ಗೊತ್ತು. ಆದರೆ ಸೂರ್ಯನಿಂದ ಹೊರಹೊಮ್ಮುವ ‘ಅತಿ ನೇರಳೆ ಕಿರಣ’ಗಳು ನೇರವಾಗಿ ಭೂಮಿಯನ್ನು ತಲುಪಿದರೆ ಇಲ್ಲಿನ ಜೀವಿಗಳಲ್ಲಿನ ಡಿಎನ್‌ಎ (ಜೀವಕೋಶಗಳ ಹಂದರ)ಯನ್ನು ಸಂಪೂರ್ಣ ಹೀರಿಬಿಡುತ್ತವೆ. ಇಂಥ ವಿಷಯುಕ್ತ ಕಿರಣಗಳಿಂದ ನಮ್ಮನ್ನು ರಕ್ಷಿಸಲೋಸುಗವೇ ಓಜೋನ್ ಎಂಬ ಅನಿಲ ಪರದೆಯನ್ನು ನಿಸರ್ಗ, ವಾತಾವರಣದಂಚಿನ ‘ಸ್ಟ್ರಾಟೋಸ್ಪಿಯರ್’ ಎಂದು ಗುರುತಿಸುವ ಜಾಗದಲ್ಲಿ ಕಟ್ಟಿಟ್ಟಿದೆ. ಇದು ಸೂರ್ಯನಿಂದ ಹೊರಸೂಸುವ ಅಪಾಯಕಾರಿ ಕಿರಣಗಳನ್ನು ಅರ್ಧದಲ್ಲೇ ತಡೆದು ಹಿಂದಕ್ಕೆ ಕಳುಹಿಸುತ್ತದೆ. ದುರಂತ ವೆಂದರೆ ಭೂಮಿಯಲ್ಲಿ ಉತ್ಪತ್ತಿಯಾಗುವ ಇಂಗಾಲದ ಡೈ ಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್ ಹಾಗೂ ಅಮೋನಿಯಾಗಳು ನೇರವಾಗಿ ‘ಸ್ಟ್ರಾಟೋಸ್ಪಿಯರ್’ ನ ಸನಿಹಕ್ಕೆ ಹೋಗಿನಿಂತು, ಓಜೋನ್ ಪದರದೊಂದಿಗೆ ಜಗಳಕ್ಕೆ ನಿಂತು ಅಪಾಯಕಾರಿ ಕಿರಣಗಳನ್ನು ಭೂಮಿಯತ್ತ ಸ್ವಾಗತಿಸಿಕೊಳ್ಳುತ್ತವೆ. ಇದೇ ‘ಗ್ರೀನ್ ಹೌಸ್’ ಪರಿಣಾಮ. ಒಂದು ಸಲ ಭೂಮಿಯ ವಾತಾವರಣದೊಳಕ್ಕೆ ಇಂಥ ಕಿರಣಗಳು ಪ್ರವೇಶಿಸಿದರೆ ಸಾಕು ಇಲ್ಲಿ ದಾಂಧಲೆ ಆರಂಭಿಸು ತ್ತವೆ. ವಾತಾವರಣದಲ್ಲಿನ ಉಷ್ಣಾಂಶ ಏರು ಪೇರಾಗುತ್ತದೆ. ಸಮುದ್ರ ಉಕ್ಕೇರುತ್ತದೆ. ಇಷ್ಟಾದರೆ ಮುಂದೆ ಏನು ಬೇಕಾದರೂ ಆಗಬಹುದು.
ಈಗ ಯೋಚಿಸಿ, ಅತಿ ನೀರು ಬಳಕೆಯ ಕೃಷಿ, ರಾಸಾಯನಿಕಗಳ ಮಿತಿ ಮೀರಿದ ಬಳಕೆ, ಅಂತರ್ಜಲದ ಅಪಹರಣ, ಕಾಡು ನಾಶ ಒಂದೇ ಎರಡೇ... ಭೂತಾಯಿಯ ಮೇಲೆ ನಾವು ನಡೆಸುತ್ತಿರುವ ದೌರ್ಜನ್ಯಕ್ಕೆ ಕೊನೆಯಿದೆಯೇ ? ಇಷ್ಟಾದರೂ ಆಕೆ ಕ್ಷಮಯಾ ಧರಿತ್ರಿ !

No comments: