Wednesday, November 26, 2008

‘ಹನಿ’ಗವನಗಳಿಂದ ನೀರೆಚ್ಚರ ಮೂಡಿಸುವ ಹೀರಾ


‘ಅದು ಯಾವುದೇ ಪ್ರದೇಶವಿರಬಹುದು. ನೀರೊಂದು ಸಮೃದ್ಧವಾಗಿದ್ದರೆ ಶೇ.೧೦ ರಷ್ಟು ಅಭಿವೃದ್ಧಿ ತಂತಾನೇ ಆಗುತ್ತದೆ.’ ಆ ಮಾತಿನಲ್ಲಿ ಖಚಿತತೆ ಇತ್ತು, ಅನುಭವ ತುಂಬಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನೀರಿನ ಬಗೆಗಿನ ಕಳಕಳಿ ಅವರ ಮಾತಿನುದ್ದಕ್ಕೂ ತುಂಬಿ ತುಳುಕುತ್ತಿತ್ತು.
ಇಂದು ಆಳಂದ ತಾಲೂಕಿನ ಪುಟ್ಟ ಗ್ರಾಮ ರುದ್ರವಾಡಿಯನ್ನು ಕೃಷಿ ಹೊಂಡಗಳ ಮೂಲಕ ಸಂಪೂರ್ಣ ನೀರ ಸ್ವಾವಲಂಬಿಯಾಗಿ ಪರಿವರ್ತಿಸಿದ ಆದಿನಾಥ್ ಹೀರಾ ಎಂಬ ಮೋಡಿಗಾರನ ಜತೆ ಮಾತಿಗೆ ಕುಳಿತರೆ ಒಣ ತರ್ಕಗಳು ಇಣುಕುವುದಿಲ್ಲ. ಪೊಳ್ಳು ಆದರ್ಶಗಳು ತಲೆ ಹಾಕುವುದಿಲ್ಲ. ಆತ ಪಕ್ಕಾ ಪ್ರಾಕ್ಟಿಕಲ್. ಒಂದಿಡೀ ತಲೆಮಾರು ನೀರ ಬೇಗುದಿಯಲ್ಲಿ ಬೆಂದ ಬಳಿಕ ಗಳಿಸಿಕೊಂಡ ಬುದ್ಧಿವಂತಿಕೆ, ಕಂಡುಕೊಂಡ ಪರಿಹಾರದ ಪ್ರಾತಿನಿಧಕ ವಾಕ್ಯಗಳಾಗಿ ಹೀರಾ ಬಾಯಿಂದ ಅನುಭವಜನ್ಯ ಮಾತು ಹೊರಹೊಮ್ಮುತ್ತಿದ್ದವು.
ನೀರಿನ ಸಂಕಷ್ಟವೆಂಬುದು ಪಕ್ಕಾ ಸ್ವಯಂಕೃತ ಅಪರಾಧ. ಕಳೆದ ಶತಮಾನದ ೬೦ರ ದಶಕದಲ್ಲಿ ಪರಿಚಯಕ್ಕೆ ಬಂದ ರಸಗೊಬ್ಬರ ಹಾಗೂ ೮೦ ರದಶಕದಲ್ಲಿನ ಬೋರ್‌ವೆಲ್‌ಗಳ ದಾಳಿಯೇ ನೀರಿನ ಕೊರತೆಯ ಸೃಷ್ಟಿಗೆ ಮೂಲ ಕಾರಣ. ಹೇಗೆ ನೋಡಿದರೂ ಕರ್ನಾಟಕದಂಥ ಶ್ರೀಮಂತ ಮಳೆ ಸರಾಸರಿಯನ್ನು ಹೊಂದಿರುವ ರಾಜ್ಯಕ್ಕೆ ನೀರಿನ ಕೊರತೆ ಕಾಡಲು ಸಾಧ್ಯವೇ ಇಲ್ಲ. ನಮ್ಮಲ್ಲಿ ೨ ಸಾವಿರ ಮಿಲಿ ಮೀಟರ್ ನಷ್ಟು ಮಳೆ ಸರಾಸರಿಯಿದೆ. ಕೆರೆ, ಕಟ್ಟೆ, ಹೊಂಡ-ಹೂದಲುಗಳಲ್ಲಿ ಹಿಡಿದಿಟ್ಟುಕೊಂಡು ಬಳಸುವ ಅಪೂರ್ವ ಜ್ಞಾನವಿದೆ. ಅದಿಂದು ಆಧುನಿಕತೆಯ ಭ್ರಮೆಗೆ ಸಿಲುಕಿ ವಿಸ್ಮೃತಿಗೆ ಸರಿದ ಪರಿಣಾಮವೇ ರಾಜ್ಯವನ್ನು ನೀರು ಸಂಕಷ್ಟವಾಗಿ ಕಾಡುತ್ತಿದೆ...
ಸಾಮಾನ್ಯ ರೈತ ಕಂಡುಕೊಂಡಿರುವ ಈ ಸತ್ಯ ಸರಕಾರಕ್ಕೆ ಮನವರಿಕೆಯಾಗಿಲ್ಲ. ಬೆಳೆಗಳಲ್ಲಿನ ವೈವಿಧ್ಯದ ಜತೆಗೆ ಆಯಾ ಪ್ರದೇಶದ ಮಳೆ ಸರಾಸರಿ, ಭೂ ಲಕ್ಷಣಗಳಿಗನುಗುಣವಾಗಿ ಕೃಷಿ ನಿರ್ಧಾರಿತವಾಗುತ್ತಿದ್ದ ಕಾಲವದು. ಬಸಿ ನೀರು ಬಾವಿಗಳ ಮೂಲಕ ಬೆಳೆಗಳಿಗೆ ನೀರು ಪೂರೈಕೆಯಾಗುತ್ತಿತ್ತು. ನೆಲದಡಿಯ ನೀರು ಸುರಕ್ಷಿತವಾಗಿ ತನಿಯನ್ನಿಟ್ಟುಕೊಂಡು ಭೂಮಿಯನ್ನು ತಂಪಾಗಿರಿಸುತ್ತಿತ್ತು. ಮನೆಯಲ್ಲೇ ಕಸ ಕಡ್ಡಿಗಳನ್ನು ತಂದು ಸುರಿದು, ತಿಪ್ಪೆಯಲ್ಲರಳುವ ಸಮೃದ್ಧ ಗೊಬ್ಬರ ಬೆಳೆಗಳನ್ನು ವಿಷವಾಗಿಸುತ್ತಿರಲಿಲ್ಲ. ಗೊಬ್ಬರವೇ ಗಾರಾಗಿ ಭೂಮಿಯನ್ನು ಸುಡುತ್ತಿರಲಿಲ್ಲ. ಅದೆಲ್ಲಿಂದ ಬಂತೋ, ಆಹಾರ ಉತ್ಪಾದನೆಯಲ್ಲಿನ ಕ್ರಾಂತಿಯೆಂಬ ಹುಸಿ ಅಭಿವೃದ್ಧಿ ನಮ್ಮನ್ನು ಆವರಿಸಿಕೊಂಡು ಬಿಟ್ಟಿತು. ೧೯೬೪-೬೫ರಲ್ಲಿ ರಸಗೊಬ್ಬರದ ಪರಿಚಯವಾದ್ದೇ ತಡ, ರೈತರ ಬದುಕಿಗೆ ಕ್ಷಣಿಕ ರಂಗೇರತೊಡಗಿತು. ಸರಕಾರವೇ ಮುಂದೆ ನಿಂತು ರಸಗೊಬ್ಬರ ಪೂರೈಕೆಗೆ ಟೊಂಕ ಕಟ್ಟಿತು. ಅಕಾರಿಗಳು, ವಿಜ್ಞಾನಿಗಳು ಖಾಸಗಿ ಕಂಪನಿಗಳ ಪಿಆರ್‌ಒಗಳಂತೆ ಪ್ರಚಾರಕ್ಕಿಳಿದರು. ಒಂದೆರಡು ವರ್ಷ ಅಷ್ಟೇ. ಬೆಳೆಯೇನೋ ಹುಲುಸಾಗಿ ಬೆಳೆದು ನಿಂತಿತು. ಆದರೆ ಭೂಮಿ ತನ್ನ ಮೇಲ್ಮೈನ ಸತ್ವವನ್ನೇ ಕಳೆದುಕೊಂಡಿತ್ತು. ನಮ್ಮ ನೆಲದಲ್ಲಿದ್ದ ನಿರೋಧಕ ಶಕ್ತಿ ಕಾಣೆಯಾಯಿತು. ಕಂಡೂ ಕಾಣದಿದ್ದ ರೋಗಗಳು ಬೆಳೆಗಳು, ಅದರೊಂದಿಗೆ ಮಾನುಷ್ಯ ದೇಹಕ್ಕೂ ವ್ಯಾಪಿಸಿತು. ಇಂಥದಕ್ಕೇ ಕಾಯುತ್ತಿದ್ದ ಕಂಪನಿಗಳು ಕೀಟ ನಾಶಕಗಳ ದೊಡ್ಡ ದೊಡ್ಡ ಪಟ್ಟಿಯನ್ನೇ ಪೈಪೋಟಿಗೆ ಬಿದ್ದು ಬಿಡುಗಡೆ ಮಾಡಿದವು. ಮತ್ತೆ ಹುಚ್ಚು ಓಟ ಸಾಗಿದ್ದೇ ಸಾಗಿದ್ದು. ರಸಗೊಬ್ಬರ, ಕೀಟ ನಾಶಕಗಳ ಜಂಟಿ ಸವಾರಿಯ ಫಲವಾಗಿ ನಿರೀಕ್ಷಿಸಿದಂತೆ ಮಣ್ಣು ಕುಲಗೆಟ್ಟಿತು. ಈ ನೆಲ ನೀರಿಂಗುವ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡಿತ್ತು. ಅದೇ ಸಂದರ್ಭದಲ್ಲಿ ಚೂರು ಮೆಣಸಿನ ಕಾಯಿ ತಿಂದ ಬಾಯಿಯಂಥ ಸ್ಥಿತಿಗೆ ತಲುಪಿದ್ದ ನೆಲಕ್ಕೆ ಎಷ್ಟು ನೀರು ಸುರಿದರೂ ಸಾಲದ ಪರಿಸ್ಥಿತಿ ನಿರ್ಮಾಣವಾಯಿತು. ಕೃಷಿಯ ನೀರಿನ ಅಗತ್ಯ ಒಮ್ಮಿಂದೊಮ್ಮೆಲೆ ಮೂರು ಪಟ್ಟು ಹೆಚ್ಚಿತು... ದುರಂತದ ನಾಂದಿಯನ್ನು ಹೀರಾ ಬಣ್ಣಿಸುತ್ತ ಹೋಗುತ್ತಾರೆ.
ಉತ್ತರ ಕರ್ನಾಟಕದಂಥ ಒಣ ಭೂಮಿಯ ಮೇಲೆ ಬಿದ್ದ ರಾಸಾಯನಿಕಗಳು ಬಲು ಬೇಗನೆ ಇಲ್ಲಿನ ಮಣ್ಣಿನ ಸತ್ವವನ್ನು ಕಳೆದವು. ಬೀಳುತ್ತಿದ್ದ ಅಲ್ಪ ಮಳೆ ಸರಾಸರಿಯಲ್ಲೂ ಸುಸ್ಥಿರ ಕೃಷಿ ಸಾಧ್ಯವೇ ಇಲ್ಲದಂತಾಯಿತು. ಅದೇ ಸನ್ನಿವೇಶದಲ್ಲಿ ಸತತ ಬರ ಅಟಕಾಯಿಸಿಕೊಂಡದ್ದು. ೮೦ರ ದಶಕದ ಆರಂಭ ನೀರು-ಮಣ್ಣಿನ ಮಾಲಿಗೆ ಕರಾಳ ಸಮಯ. ಹನಿ ಕುಡಿಯುವ ನೀರಿಗೂ ಹಾಹಾಕಾರವೆದ್ದ ಸಂದರ್ಭದಲ್ಲಿ ಅನಿವಾರ್ಯತೆಯ ಹೆಸರಲ್ಲಿ ಪರಿಚಿತವಾದ ಬೋರ್‌ವೆಲ್‌ಗಳು ಇಲ್ಲಿನ ರೈತರಲ್ಲಿದ್ದ ಬರ ನಿರೋಧಕ ಜಾಣ್ಮೆಯನ್ನೇ ಕಸಿದುಕೊಂಡು ಬಿಟ್ಟವು. ವಿಶ್ವಸಂಸ್ಥೆಯೇನೋ ರಾಜ್ಯ ಸರಕಾರದ ಬರ ನಿರ್ವಹಣಾ ರೀತಿಯನ್ನು ಕೊಂಡಾಡಿತು. ಆದರೆ ಕುಡಿಯುವ ನೀರು ಪೂರೈಕೆಗೆಂದು ಕಾಲಿಟ್ಟ ಬೋರ್‌ವೆಲ್‌ಗಳು ಮುಂದೊಂದು ದಿನ ಇಲ್ಲಿನ ಖಜಾನೆಗೇ ಸಂಚಕಾರ ತರಬಹುದೆಂಬುದನ್ನು ಯಾರೂ ಊಹಿಸಿರಲಿಲ್ಲ. ಒಟ್ಟಾರೆ ಬೋರ್‌ವೆಲ್‌ಗಳಿಲ್ಲದೇ ಕೃಷಿಯೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಯಿತು. ನಾಲ್ಕೇ ವರ್ಷದಲ್ಲಿ ಅವೂ ಮಾತನಾಡುವುದನ್ನು ನಿಲ್ಲಸಿದವು. ರೈತನಿಗೆ ದಿಕ್ಕೇ ತೋಚದಂತಾಯಿತು. ರುದ್ರವಾಡಿಯೂ ಇದಕ್ಕೆ ಹೊರತಾಗಲಿಲ್ಲ. ಆ ಸನ್ನಿವೇಶವೇ ಮಳೆ ನೀರು ಸಂಗ್ರಹದ ತಮ್ಮ ಆಂದೋಲನಕ್ಕೆ ಪ್ರೇರಣೆಯಾಯಿತು ಎನ್ನುತ್ತಾರೆ ಹೀರಾ.
ಇಂದು ರುದ್ರವಾಡಿಯಲ್ಲೀ ಯಾವುದೇ ಬೋರ್‌ವೆಲ್‌ಗಳು ಬಳಕೆಯಲ್ಲಿಲ್ಲ. ೧ ಕೋಟಿ ಲೀಟರ್‌ಗೂ ಹೆಚ್ಚು ನೀರು ಇಡಿಯಾಗಿ ಗ್ರಾಮದ ಕೃಷಿ ಹೊಂಡಗಳಲ್ಲಿ ಇಂಗುತ್ತಿದೆ. ರೈತರು ರಸಗೊಬ್ಬರ, ಕೀಟ ನಾಶಕ, ಬೋರ್‌ವೆಲ್‌ಗಳ ಬಗ್ಗೆ ಮಾತನಾಡುವುದನ್ನೂ ನಿಲ್ಲಿಸಿದ್ದಾರೆ. ಮಳೆ ನೀರಿಂಗಿಸುವ ಹಬ್ಬ ಊರಲ್ಲಿ ಆಚರಣೆಗೊಳ್ಳುತ್ತಿದೆ.
ಇಷ್ಟಕ್ಕೆಲ್ಲ ಮುಹೂರ್ತ ಕೂಡಿ ಬಂದದ್ದು ಹೀರಾ ಅವರ ಮಗನ ಮದುವೆಯ ಮಂಟಪದಲ್ಲಿ. ತಾನು ಕಂಡುಕೊಂಡ ಸತ್ಯವನ್ನು ಹೀರಾ ತಮ್ಮ ಮಗನ ಮದುವೆಗೆ ಬಂದಿದ್ದ ನೆಂಟರಿಷ್ಟರ ಮುಂದೆ ಸಾರಿದರು. ಮದು ಮಕ್ಕಳ ತಲೆಯ ಮೇಲೆ ನಾಲ್ಕು ಅಕ್ಕಿ ಕಾಳು ಹಾಕಿ ಹೋಗಲು ಬಂದವರ ತಲೆಯಲ್ಲಿ ನೀರಿಂಗಿಸುವ ಜ್ಞಾನವನ್ನು ತುಂಬಿ ಕಳುಹಿಸಿದ ವಿಶಿಷ್ಟ ವ್ಯಕ್ತಿ ಹೀರಾ. ಅದು ೨೦೦೭ರ ಏಪ್ರಿಲ್ ೨೯ರ ರವಿವಾರ, ಮನೆಯಲ್ಲಿ ಮಗನ ಮದುವೆಯ ಆರತಕ್ಷತೆ ಸಮಾರಂಭವೆಂಬುದು ನೀರಿನ ವಿಚಾರ ಸಂಕಿರಣವಗಿ ಪರಿವರ್ತಿತವಾಯಿತು. ಹೀರಾ ತಾವೇ ಬರೆದ ‘ಹನಿ’ಗವನಗಳನ್ನೊಳಗೊಂಡ ನೀರೆಚ್ಚರದ ಪಾಟದ ಕರಪತ್ರಗಳನ್ನು ಅಲ್ಲಿ ಹಂಚಿದರು. ದೇ ಮೊದಲು. ಅಲ್ಲಿಂದ ಧಾರವಾಡ, ಗುಲ್ಬರ್ಗ ಕೃಷಿ ವಿಶ್ವ ವಿದ್ಯಾಲಯ, ಆಳಂದ ಕೃ ಷಿ ಇಲಾಖೆಯ ಮಾರ್ಗದರ್ಶನದಲ್ಲಿ ಇಡೀ ರಾಜ್ಯಾದ್ಯಂತ ಜಲ ಅಭಿಯಾನವನ್ನೇ ಆರಂಭಿಸಿದರು.
ಇಂದು ಆದಿನಾಥ್ ಹೀರಾ ಹತ್ತು ಹಲವು ಜಲಕನಸನ್ನು ಸರಕಾರದ ಮುಂದೆ ಇಟ್ಟಿದ್ದಾರೆ. ನೀರಶ್ರದ್ಧೆ ರೈತನ ಬದುಕಿನ ಭಾಗವಾಗಬೇಕೆಂದು ಪ್ರತಿಪಾದಿಸುತ್ತಾರೆ. ಸರಕಾರ ಕೃಷಿ ಪಂಡಿತ ಪ್ರಶಸ್ತಿ ಕೊಟ್ಟು ತನ್ನ ಕೆಲಸ ಮುಗಿಯಿತೆಂದು ಸುಮ್ಮನೆ ಕುಳಿತಿದೆ. ರಾಜ್ಯದ ಪ್ರತಿ ಗ್ರಾಮವೂ ಒಂದೊಂದು ರುದ್ರವಾಡಿಯಾಗಬೇಕು. ಪ್ರತಿ ಹಳ್ಳಿಯಲ್ಲೂ ಅಲ್ಲಿ ಬೀಳುವ ಮಳೆ ನೀರು ಅಲ್ಲೇ ಸಂಗ್ರಹಗೊಳ್ಳುವ ವ್ಯವಸ್ಥೆ ಬರಬೇಕು. ನೀರು ಗೊಬ್ಬರದ ವಿಚಾರದಲ್ಲಿ ಎಲ್ಲ ಹಳ್ಳಿಗಳೂ ಸ್ವಾವಲಂಬನೆ ಗಳಿಸಿದಾಗ ಮಾತ್ರ ಇಲ್ಲಿನ ಕೃಷಿ ಲಾಭದಾಯಕವಾಗಲು ಸಾಧ್ಯ. ಏಕೆಂದರೆ ೬೦ ವರ್ಷಗಳ ಸ್ವಾತಂತ್ರ್ಯೋತ್ತರ ಭಾರತವನ್ನು ಗಮನಿಸಿದಾಗ, ನಾವು ಈ ದೇಶವನ್ನು ಕೃಷಿ ಪ್ರಧಾನವೆಂದು ಬಣ್ಣಿಸಿಕೊಂಡು ಬರುತ್ತಿದ್ದೇವೆಯೇ ಹೊರತು, ನಿಜವಾಗಿ ಇಲ್ಲಿನ ಕೃಷಿಗೆ ಸಿಗಬೇಕಾದ ಪ್ರಾಧಾನ್ಯ ಸಿಕ್ಕಿಲ್ಲವೆಂಬ ಸತ್ಯ ಗೋಚರಿಸುತ್ತದೆ.
ಕೃಷಿ ಆದ್ಯತೆ ನೀಡುವುದೆಂದರೆ ಕೇವಲ ಬೃಹತ್ ನೀರಾವರಿ ಯೋಜನೆಗಳನ್ನು ರೂಪಿಸುವುದಲ್ಲ. ರಸಗೊಬ್ಬರ ಹಂಚಿಕೆಯ ಹೆಸರಲ್ಲಿ ರಾಜಕೀಯ ಮಾಡುವುದಲ್ಲ. ಎಲ್ಲಕ್ಕಿಂತ ಮೊದಲಿಗೆ ಈ ರಾಜ್ಯದ ಹಳ್ಳಿಗಳ ಪ್ರತೀ ಸರ್ವೆ ನಂಬರ್‌ನಲ್ಲಿ ಒಂದೊಂದು ಕೃಷಿ ಹೊಂಡ ನಿರ್ಮಾಣಗೊಳ್ಳಬೇಕು. ಎಲ್ಲೆಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲಾಗುತ್ತದೆಯೋ ಅಲ್ಲೆಲ್ಲ ನೀರಿಂಗಿಸುವ ಕಾರ್ಯ ಕಡ್ಡಾಯವಾಗಬೇಕು. ಬೋರ್‌ವಲ್‌ಗಳಿಗೆ ನಿರ್ಬಂಧ ಕಡ್ಡಾಯ ಪಾಲನೆಯಾಗಬೇಕು. ೨೦೦ರಿಂದ ೫೦೦ಎಕರೆ ವ್ಯಾಪ್ತಿಯಲ್ಲಿ ಒಂದು ಸುವ್ಯವಸ್ಥಿತ ಕೆರೆ ನಿರ್ಮಾಣಗೊಳ್ಳಬೇಕು. ಎರಡು ಸೀಮೆಯ ನಡುವೆ ಒಂದು ಕೆರೆ ಇರಲೇಬೇಕು. ಇಂಥ ಕೆರೆಗಳು ಸಮುದಾಯದ ಆಸ್ತಿಯಾಗಿ ನಿಲ್ಲಬೇಕು...ಇವೆಲ್ಲ ಬೇಕುಗಳನ್ನೂ ಕೃಷಿ ಬೇಡುತ್ತಿದೆ. ಅದು ಪೂರೈಕೆಯಾಗುವುದಾದರೆ ನಮ್ಮ ಕೃಷಿ ಪ್ರಧಾನವೆಂಬ ಹೆಗ್ಗಳಿಕೆಗೊಂದು ಅರ್ಥ ಬರುತ್ತದೆ.
ಇಷ್ಟಾದರೆ ಸಾಕು. ಸರಕಾರ ರೈತನಿಗಾಗಿ ಇನ್ನಾವ ಉಪಕಾರವನ್ನೂ ಮಾಡಬೇಕಿಲ್ಲ. ಉಚಿತ ಕರೆಂಟ್ ಕೊಡಬೇಕಿಲ್ಲ. ಸಬ್ಸಿಡಿಯ ಆಮಿಷ ಒಡ್ಡ ಬೇಕಿಲ್ಲ. ಗೊಬ್ಬರ- ಬಿತ್ತನೆ ಬೀಜದ ಹೆಸರಲ್ಲಿ ಹುಯಿಲೆಬ್ಬಿಸುವ ಅಗತ್ಯವಿಲ್ಲ. ಹೀರಾ ಹೇಳುವ ಮಾತು ನೂರಕ್ಕೆ ನೂರು ಸತ್ಯ. ಏಕೆಂದರೆ ಈ ಭೂಮಿಯಲ್ಲಿ ಇಂದು ಯುದ್ಧ, ಅಪಘಾತ, ನೈಸರ್ಗಿಕ ವಿಕೋಪ, ಇತ್ತೀಚೆಗೆ ಹೆಚ್ಚುತ್ತಿರುವ ಉಗ್ರರ ದಾಳಿ... ಹೀಗೆ ಎಲ್ಲ ಅವಘಡಗಳನ್ನು ಒಟ್ಟು ಮಾಡಿದರೂ ಪ್ರತಿ ದಿನ ಇವುಗಳಿಂದ ಸಾಯುವುದಕ್ಕಿಂತ ಹೆಚ್ಚು ಮಂದಿ ನೀರಿಲ್ಲದೇ ಅಥವಾ ಅಶುದ್ಧ ನೀರಿನಿಂದ ಸಾಯುತ್ತಿದ್ದಾರೆ. ಈಗ ಯೋಚಿಸಿ, ನೀರಿನ ಬಗ್ಗೆ ನಾವು ಎಷ್ಟೊಂದು ಕೇವಲವಾಗಿ ವರ್ತಿಸುತ್ತಿದ್ದೇವೆ ಅಲ್ಲವೇ ?
ಆದಿನಾಥ್ ಹೀರಾ ಬಳಿ ಇಂಥ ಹರಟೆಗೆ ಸಾಕಷ್ಟು ಅವಕಶವಿದೆ. ಅದಕ್ಕಾಗಿ ದೂರವಾಣಿ: ೯೯೭೨೯೯೭೨೬0.


ಲಾಸ್ಟ್’ಡ್ರಾಪ್: ಕೃಷಿ ಪ್ರಧಾನವಾದ ಈ ದೇಶದಲ್ಲಿ ಕೃಷಿಗಾಗಿಯೇ ಏಕಿಲ್ಲ ಪ್ರತ್ಯೇಕ ಬಜೆಟ್? ಅಂಥದೊಂದರ ಅಗತ್ಯ ಇಲ್ಲವೇ ? ಖಂಡಿತಾ ಇದೆ. ನಮ್ಮನ್ನಾಳುತ್ತಿರುವ ಪ್ರಜಾ ಪ್ರಭುಗಳೇ ತುಸು ಯೋಚಿಸಿ.

No comments: