Wednesday, January 7, 2009

ಶತಮಾನ ಕಳೆದರೂ ಬಾಡದ ಬಾವಡಿಗಳು

ಸೂಕ್ಷ್ಮ ಕುಸುರಿ, ಅಲ್ಲಿ ಮೆರೆದ ಜಾಣ್ಮೆ, ಆ ಕಟ್ಟಡದ ನಿರ್ಮಾಣದಲ್ಲಿನ ಅಚ್ಚುಕಟ್ಟುತನ, ಅಲ್ಲಿನ ತಂತ್ರಜ್ಞಾನ, ನೀರು ತುಂಬಿ ತುಳುಕುವ ಅದರ ಸೌಂದರ್ಯ, ಭವ್ಯ ನಿಲುವು, ಎಂಥವರನ್ನು ಹಿಡಿದು ನಿಲ್ಲಿಸುವ ವಿನ್ಯಾಸ...ಒಂದೇ ಎರಡೇ ? ವಿಜಾಪುರದ ಬಾವಡಿಗಳೆಂದರೆ, ಅವಕ್ಕೆ ಅವೇ ಸಾಟಿ.
ರಾಜ್ಯವನ್ನಾಳಿದ ಪ್ರಮುಖ ರಾಜಮನೆತನಗಳಲ್ಲೊಂದಾದ ಆದಿಲ್‌ಷಾಹಿ ಅರಸರ ಕಾಲದಲ್ಲಿ ಅತ್ಯಪೂರ್ವ ಕೊಡುಗೆಗಳಿವು. ಆಗಿನ ಕಾಲಕ್ಕೆ ಪ್ರಮುಖ ನೀರಿನ ಮೂಲವಾಗಿದ್ದವುಗಳು. ವಿಶೇಷವೆಂದರೆ ನಿರ್ಮಾಣಗೊಂಡ ದಿನ ತುಂಬಿ ನಿಂತ ಬಾವಡಿಗಳು ಮೂರು ನಾಲ್ಕು ಶತಮಾನಗಳ ನಂತರ ಇಂದಿಗೂ ಅದೇ ಪೂರ್ಣತೆಯನ್ನು ಕಾಯ್ದುಕೊಂಡಿದೆ.
ನೀರು ಪೂರೈಕೆ ಯಾವುದೇ ನಾಗರಿಕತೆಯ ಪ್ರಥಮ ಆದ್ಯತೆಯೆಂಬುದರಲ್ಲಿ ಎರಡನೇ ಮಾತಿಲ್ಲ. ಆದಿಲ್‌ಶಾಹಿಗಳು ವಿಜಾಪುರದಂಥ ನಗರ ಕಟ್ಟಿದಾಗಲೂ ಈ ಬಗ್ಗೆ ಸಹಜವಾಗಿಯೇ ಯೋಚಿಸಿ ಬಾವಡಿಗಳನ್ನು ಪರಿಚಯಿಸಿದರು. ಆದರೆ ಅದು ಕೇವಲ ನೀರು ಪೂರೈಕೆ ವ್ಯವಸ್ಥೆಯೊಂದೇ ಆಗಿರಲಿಲ್ಲ. ಬದಲಾಗಿ ತಮ್ಮ ಕ್ರಿಯಾಶೀಲತೆಯ ದ್ಯೋತಕವಾಗಿ ಇಂಥದ್ದೊಂದು ವ್ಯವಸ್ಥೆ ನಿಲ್ಲುವಂತೆ ಮಾಡಿದ್ದು ಮಾತ್ರವಲ್ಲ, ನಾಡಿನ ಸಾಂಸ್ಕೃತಿಕ ಕೇಂದ್ರವನ್ನಾಗಿ ಜಲ ಸನ್ನಿಯನ್ನು ಬದಲಿಸಿದರು. ಜಲ ಸಂಗ್ರಹಣೆಯ ಬಗೆಗೆ ಅವರಿಗಿದ್ದ ಬದ್ಧತೆ ಹಾಗೂ ಜ್ಞಾನ ಬೆರಗು ಮೂಡಿಸುವಂಥದ್ದು. ಇದರ ಪರಿಣಾಮವೇ ನೀರು ಪೂರೈಕೆಯ ತಾಣವೆಂಬುದು ಕೇವಲ ಜಡ ನಿರ್ಮಾಣವಾಗಿಯಷ್ಟೇ ಉಳಿಯದೇ ಸಕಲ ಜೀವಂತಿಕೆಯೂ ಅಲ್ಲಿ ಪ್ರತಿಫಲಿಸುವಂತೆ ನೋಡಿಕೊಂಡರು. ಹೀಗಾಗಿಯೇ ಬಾವಡಿಗಳು ಇಂದಿಗೂ ದೃಶ್ಯ ಸೌಂದರ್ಯದ ಖನಿಗಳಾಗಿ ಗಮನ ಸೆಳೆಯುತ್ತವೆ.
ನಗರದ ಹೃದಯ ಭಾಗಗಳಲ್ಲಿ ನಿರ್ಮಾಣಗೊಂಡು ಆಯಾಯಾ ಪ್ರದೇಶಗಳಿಗೆ ಅಲ್ಲಲ್ಲೇ ನೀರು ಪೂರೈಸಲು ಅನುಕೂಲವಾಗುವಂತೆ ಬಾವಡಿಗಳನ್ನು ಯೋಜಿಸಲಾಗಿದೆ. ಇಂಥ ಬಾವಡಿಗಳಿಗೆ ನೀರು ಬಂದು ಸೇರುವ ಪರಿಯೇ ರೋಚಕ. ಊರ ಹೊರಗಿನ ತ್ತರದ ಪ್ರದೇಶ, ಬಯಲು, ಗುಡ್ಡ-ಮೇಡುಗಳಲ್ಲಿ ಬಿದ್ದ ಮಳೆ ನೀರು ವ್ಯರ್ಥವಾಗದೇ ಸುರಂಗಗಳ ಮೂಲಕ ಲ್ಲಿಗೆ ಬಂದು ಸೇರುತ್ತದೆ. ಇಲ್ಲಿಂದ ಮತ್ತೆ ಭೂಗತ ಕಾಲುವೆಗಳಲ್ಲಿ ಒತ್ತಡ ಬಳಸಿ ಜನಜೀವನಕ್ಕೆ ಪೂರೈಸಲಾಗುತ್ತಿತ್ತು.
ವಿಜಾಪುರ ನಗರದಲ್ಲಿ ಇಂದಿಗೂ ಸಣ್ಣ ಪುಟ್ಟವುಗಳು ಸೇರಿ ೩೦ಕ್ಕೂ ಹೆಚ್ಚು ಬಾವಡಿಗಳು ಅಸ್ತಿತ್ವದಲ್ಲಿವೆ. ಈ ಪೈಕಿ ತಾಜ್ ಬಾವಡಿ ಹಾಗೂ ಚಾಂದ್ ಬಾವಡಿ, ಇಬ್ರಾಹಿಂ ಬಾವಡಿಗಳು ಪ್ರಮುಖ. ಆಕಾರ ಹಾಗೂ ಸೌಂದರ್ಯದ ದೃಷ್ಟಿಯಿಂದಲೂ ಇವಕ್ಕೆ ವಿಶಿಷ್ಟ ಸ್ಥಾನ. ದರಲ್ಲೂ ತಾಜ್ ಬಾವಡಿಯೆಂದರೆ ಅದು ಸುಂದರ ಕಾವ್ಯ. ವಾಸ್ತು ಭಿನ್ನತೆಯಿಂದ ಬೇರೆ ಬೇರೆ ಹೆಸರಿನಿಂದ ಇಲ್ಲಿನ ಬಾವಡಿಗಳನ್ನು ಗುರುತಿಸಲಾಗುತ್ತದೆ. ಇಬ್ರಾಹಿಂಪುರ ಬಾವಡಿ, ನಗರ್ ಬಾವಡಿ, ಮಾಸ್ ಬಾವಡಿ, ಆಲಿಖಾನ್ ಬಾವಡಿ, ಚಾಂದ್ ಬಾವಡಿ, ಅಗಜರ್ ಬಾವಡಿ, ದೌಲತ್ ಕೋಠಿ ಬಾವಡಿ, ಬಸ್ರಿ ಬಾವಡಿ, ಸಂದಲ್ ಬಾವಡಿ, ಮುಖಾರಿ ಮಸ್ಜಿದ್ ಬಾವಡಿ, ಸೋನಾರ್ ಬಾವಡಿ... ಹೀಗೆ ಮಂದಿಯ ಬದುಕಿನ ಅವಿಭಾಜ್ಯ ಅಂಗವಾಗಿ ಒಂದೊಂದೂ ಗುರುತಿಸಿಕೊಂಡಿವೆ. ಬಹುಶಃ ಬಾವಡಿಗಳಿಲ್ಲದ ವಿಜಾಪುರವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ನಮ್ಮ ಬಾವಿಗಿಂಥ ತ್ಯಂತ ಭಿನ್ನ ರಚನೆಯನ್ನು ಬಾವಡಿಗಳು ಹೊಂದಿರುತ್ತವೆ. ಬಾವಿಯಂತೆ ಇವು ವೃತ್ತಾಕಾರದಲ್ಲಿರುವುದಿಲ್ಲ. ಬಾರೀ ಆಳವೂ ಇರವುದಿಲ್ಲ. ಕೆರೆ, ಬಾವಿ, ಕಟ್ಟೆ, ಕೊಳ, ಸರೋವರ ಹೀಗೆ ಎಲ್ಲಕ್ಕಿಂಥ ಭಿನ್ನವಾದ ಬಾವಡಿಗಳಿಗೆ ಇಂಥ ವೈಶಿಷ್ಟ್ಯ ದಗಿಸಿಕೊಟ್ಟದ್ದು ಅದರ ವಾಸ್ತು ರಚನೆ. ಬಹುತೇಕ ಚೌಕಾಕಾರದಲ್ಲಿರುವ ಬಾವಡಿಯನ್ನು ನೋಡಿದರೆ ಹೊರಗಿನಿಂದ ಮಂದಿರದಂತೆ ಭಾಸವಾಗುತ್ತದೆ. ಸುತ್ತಲೂ ಗೋಡೆಗಳಿರುತ್ತವೆ. ಇದಕ್ಕೆ ಹೊಂದಿಕೊಂಡಂತೆ ಮುಂಭಾಗದಲ್ಲಿ ಕುಸುರಿಯನ್ನೊಳಗೊಂಡ ಪ್ರವೇಶ ಕಮಾನಿರುತ್ತದೆ. ಅದರ ಎರಡೂ ಮಗ್ಗುಲಿಗೆ ಪುಟ್ಟ ಕಾವಲು ಕೊಠಡಿಯಂಥ ಜಾಗವಿರುತ್ತದೆ. ಅದನ್ನು ದಾಟಿ ಒಳ ಪ್ರವೇಶಿಸಿದರೆ ಸುತ್ತಲೂ ಆವರಣ. ಅದರ ನಂತರ ನೀರಿಗಿಳಿಯಲು ಅನುಕೂಲವಾಗುವಂತೆ ನಾಲ್ಕೂ ಭಾಗದಲ್ಲಿ ಮೆಟ್ಟಿಲುಗಳಿರುತ್ತವೆ. ಒಂದು ರೀತಿಯಲ್ಲಿ ಬಾವಡಿಗಳ ಕೇಂದ್ರಭಾಗ ಕಲ್ಯಾಣಿಯನ್ನು ನೆನಪಿಸುತ್ತದೆ. ಪ್ರವೇಶದ್ವಾರದ ಎದುರು ಇರುವ ಗೋಡೆಯಲ್ಲಿ ಸುಂದರ ಕಮಾನುಗಳು, ಕುಸುರಿ ಕೆತ್ತನೆಯ ಕೆಲಸ ಕಂಡುಬರುತ್ತವೆ. ಎಲ್ಲವೂ ಹೀಗೆಯೇ ಇದ್ದು ಬಿಡುತ್ತದೆ ಎನ್ನಲು ಬಾರದಿದ್ದರೂ ಒಟ್ಟಾರೆಯಾಗಿ ಬಹುತೇಕ ಬಾವಡಿಗಳ ರಚನೆ ಹೀಗೆಯೇ. ಆದರೂ ಪ್ರತಿಯೊಂದರಲ್ಲೂ ಒಂದಲ್ಲಾ ಒಂದು ಕ್ರಿಯಾಶೀಲ ಪ್ರಯೋಗವನ್ನೂ ಮಾಡಿಯೇ ಮಾಡಿರಲಾಗಿರುತ್ತದೆ.
ಇಂಥ ಬಾವಡಿಗಳ ನಿರ್ಮಾಣಕ್ಕೂ ಒಂದು ನಿಮಿತ್ತ ಇತಿಹಾಸವಿರುವುದು ವಿಶೇಷ. ಚಾಂದ್ ಬಾವಡಿಯನ್ನು ಕ್ರಿ.ಶ. ೧೫೪೯ರಲ್ಲಿ ಆಲಿ ಆದಿಲ್ ಷಾ ತನ್ನ ರಾಣಿ ಚಾಂದ್‌ಬೀಬಿಯ ಗೌರವಾರ್ಥ ಕಟ್ಟಿಸಿದನೆನ್ನುತ್ತದೆ ಇತಿಹಾಸ. ವಿಜಾಪುರ ನಗರದ ‘ಶಹಪುರ ಅಗಸಿ’ಯ ಸಮೀಪವೇ ನಿರ್ಮಾಣಗೊಂಡಿರುವ ಇದು ೧೪೪ ಅಡಿ ಅಗಲ ೧೫೬ ಅಡಿ ಉದ್ದವಿದೆ. ಬಹುತೇಕ ಚಚ್ಚೌಕ. ಸುತ್ತಲೂ ಕಲ್ಲಿನ ಮೆಟ್ಟಿಲುಗಳನ್ನು ಕಟ್ಟಿದ್ದು, ಮೇಲೆ ವಿಸ್ತಾರವಿದ್ದು ಕಳೆಗೆ ಹೋಗುತ್ತ ಕಿರಿದಾಗಿದೆ. ಆರಂಭದಲ್ಲಿ ದೊಡ್ಡ ಕಮಾನಿದೆ. ಅಲ್ಲದೇ ಇತರ ಮೂರು ಕಡೆ ಚಿಕ್ಕ ಚಿಕ್ಕ ಕಮಾನುಗಳಿವೆ. ನೀರಿನ ಸುತ್ತಲೂ ನಾಲ್ಕು ಅಡಿ ಅಗಲದ ಹಜಾರವಿದೆ.
ಚಾಂದ್ ಬಾವಡಿಯ ನಂತರದ ಶತಮಾನದಲ್ಲಿ ನಿರ್ಮಾಣಗೊಂಡದ್ದು ತಾಜ್ ಬಾವಡಿ. ಎರಡನೆಯ ಇಬ್ರಾಹಿಂ ಆದಿಲ್‌ಷಾ ಪತ್ನಿ ತಾಜ್ ಸುಲ್ತಾನಳ ಹೆಸರಿನಲ್ಲಿ ಕ್ರಿ.ಶ. ೧೬೯೦ರಲ್ಲಿ ಇದು ತಲೆ ಎತ್ತಿತು. ಬಾವಡಿಗಳ ಸಾಮ್ರಾಟನಂತಿರುವ ಇದರ ಗಾತ್ರ, ಸೌಂದರ್ಯ ಮತ್ತು ಭವ್ಯತೆಗೆ ಇನ್ನೊಂದು ಸಮ ಇಲ್ಲ. ನಗರದ ಮುಖ್ಯ ಭಾಗದಲ್ಲಿರುವ ಇದಕ್ಕೆ ೩೫ ಅಡಿ ಎತ್ತರದ ಭವ್ಯ ಕಮಾನು ಸ್ವಾಗತ ಕೋರುತ್ತದೆ. ಎರಡೂ ಕಡೆ ಗೋಪುರಗಳಿವೆ. ಬಾವಡಿಯ ಒಳಭಾಗದ ಹಿಂದಿನ ಗೋಡೆಗೆ ಹೊಂದಿಕೊಂಡಂತೆ ವಿಶಾಲ ಹಜಾರವಿದೆ. ಉಳಿದ ಮೂರು ಬದಿ ಓಡಾಡಲು ಅನುಕೂಲವಾಗುವಂಥ ವಿಸ್ತಾರದ ಪ್ರದೇಶ ಹಾಗೂ ಪುಟ್ಟ ಪುಟ್ಟ ಕೊಠಡಿಯಂಥ ನಿರ್ಮಾಣವಿದೆ. ಇಲ್ಲಿ ಗ್ಯಾಲರಿಗಳನ್ನೂ ನಿರ್ಮಿಸಲಾಗಿದೆ. ಇಲ್ಲಿ ನಿಂತು ಇಡೀ ಬಾವಡಿಯನ್ನು ವೀಕ್ಷಿಸಬಹುದು. ಎರಡೂ ಮಗ್ಗುಲಿಗೆ ಮೆಟ್ಟಿಲುಗಳಿವೆ೧೨೦ ಅಡಿ ಉದ್ದ, ೧೦೦ ಅಡಿ ಅಗಲ ಹಾಗೂ ೫೩ ಅಡಿ ಆಳದ ಇದರ ಕೆತ್ತನೆ ಕೆಲಸವನ್ನು ಎಷ್ಟು ಹೊಗಳಿದರೂ ಸಾಲದು.
ಇಬ್ರಾಹಿಂ ಬಾವಡಿಯೂ ಭವ್ಯತೆಯ ದೃಷ್ಟಿಯಿಂದ ಕಡಿಮೆ ಏನೂ ಇಲ್ಲ. ಎಲ್ಲ ಬಾವಡಿಗಳೂ ಸುಂದರವಾಗಿಯೇ ಇದೆಯಾದರೂ ಕಾಲಮಾನದ ಬಗೆಗೆ ನಿಖರ ಮಾಹಿತಿ ಸಿಗುವುದಿಲ್ಲ. ಹಾಗೆ ನೋಡಿದರೆ ಈಗಿನದಕ್ಕಿಂತ ಹೆಚ್ಚಿನ ಜನಸಂಖ್ಯೆ ಆದಿಲ್‌ಶಾಹಿ ಆಡಳಿತ ಕಾಲದಲ್ಲಿದ್ದುದು ಕಂಡು ಬರುತ್ತದೆ. ಇಷ್ಟೆಲ್ಲಕ್ಕೂ ನೀರು ಪೂರೈಕೆಗೆ ಬಾವಡಿಗಳೇ ಆಧಾರವಾಗಿದ್ದವೂ ಎಂಬುದಂತೂ ಸ್ಪಷ್ಟ. ಇಂದಿಗೂ ಕೆಲ ಬಾವಡಿಗಳಿಂದ ನಗರಕ್ಕೆ ನೀರು ಸರಬರಾಜಾಗುತ್ತದೆ. ದುರಂತವೆಂದರೆ ಬಹುತೇಕ ಬಾವಡಿಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ತಮ್ಮ ಸಹಜ ಸೌಂದರ್ಯ ಕಳೆದುಕೊಳ್ಳುತ್ತಿವೆ. ಆಧುನಿಕಾಸುರರು ಬಾವಡಿಗಳ ಮೌಲ್ಯವನ್ನೇ ಮರೆತಿದ್ದಾರೆ ಎಂಬುದಂತೂ ಸತ್ಯ.

‘ಲಾಸ್ಟ್’ ಡ್ರಾಪ್ : ನೀರೆಂದರೆ ಭಾವನೆಗಳ ಪ್ರವಾಹ. ಅದು ಬತ್ತಿದರೆ ಬದುಕಿಗೆ ಅರ್ಥವಿರದು.

1 comment:

Unknown said...

ಉತ್ತಮವಾಗಿದೆ