Friday, December 18, 2009

ಅರಿವಿನ ‘ದಾಹ’ ಮೂಡದೇ ಅಭಿವೃದ್ಧಿ ಸಾರ್ಥಕವಾಗದು

ವಿಶೇಷ ಗಮನಿಸಿ, ನಮ್ಮಲ್ಲಿ ದೇಶದಲ್ಲಿರುವ ಎಲ್ಲ ಭಾರಿ ಅಣೆಕಟ್ಟುಗಳ ಹಿಂದೆ ಹಿಡಿದಿಟ್ಟ ನೀರಿನಷ್ಟೇ ಪ್ರಮಾಣದ ಅಂತರ್ಜಲ ನೀರಾವರಿಗೆ ಉಪಯೋಗವಾಗುತ್ತಿದೆ. ದೇಶದ ಜನಸಂಖ್ಯೆಯ ಮುಕ್ಕಾಲಕ್ಕೂ ಹೆಚ್ಚು ಪಾಲು ಜೀವನ ನೆಲದಡಿಯ ನೀರನ್ನೇ ಅವಲಂಬಿಸಿದೆ. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ನೀರಾವರಿ ಯೋಜನೆಗಳ ಹೆಸರನ್ನು ಹೇಳುತ್ತಲೇ ಬಂದಿದ್ದೇವೆ. ಅಂಥ ಯೋಜನೆಯ ಸಂಖ್ಯೆಯೂ ಸಾಕಷ್ಟು ಹೆಚ್ಚಿದೆ. ಇಷ್ಟಾದರೂ, ಕೃಷಿ, ಕೈಗಾರಿಕೆಗಳಿಗೂ ನೆಲದಡಿಯ ನೀರಿನ ಬಳಕೆ ನಿಂತಿಲ್ಲ. ಏನಿದರ ಅರ್ಥ ?

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಭಾರಿ ಅಣೆಕಟ್ಟುಗಳ ಬಳಿಕ ಇತ್ತೀಚೆಗೆ ಬಲಗೊಂಡಿರುವುದು ನದಿಗಳ ಜಾಲದ್ದು. ಇದಕ್ಕಾಗಿ ಸರಕಾರಗಳು ಕೋಟಿಗಟ್ಟಲೆ ಹಣ ಸುರಿಯಲು ಆಸಕ್ತಿ ತೋರಿಸುತ್ತಿವೆ. ಅವರು ಹೇಳುತ್ತಿರುವುದನ್ನು ಕೇಳಿದರೆ ನದಿಗಳನ್ನು ಬೆಸೆದ ಮೇಲೆ ನೆಲದ ಮೇಲೆ ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದುಕೊಳ್ಳಬೇಕು. ಆದರಿದು ಕಾರ್ಯ ಸಾಧುವೇ ?
ದೇಶದಲ್ಲಿ ಇಂದಿಗೂ ಶೇ. ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ ‘ನೀರು ಸರಬರಾಜು ಯೋಜನೆ’ಎಂಬ ಸರಕಾರಿ ಪ್ರಾಯೋ ಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ.
ಗಮನಾರ್ಹ ಸಂಗತಿಯೆಂದರೆ, ಹೀಗೆ ‘ನೀರು ಸರಬರಾಜು’ ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾ ಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ.


ಭಾರಿ ನೀರಾವರಿ ಯೋಜನೆಗಳೆಂದರೆ ಅದು ಮತ್ತೊಂದು ರೀತಿಯ ನೀರಿನ ದುರುಪಯೋಗವೆಂಬಂತಾಗಿದೆ. ಲಕ್ಷಾಂತರ ಎಕರೆ ಜಮೀನು ಜೌಗು ಪ್ರದೇಶವಾಗಿ ಪ್ರಯೋಜನಕ್ಕೆ ಬಾರದೆ ಹೋಗುತ್ತಿದೆ. ನೆಲದಲ್ಲಿ ಕ್ಷಾರಾಂಶ ಹೆಚ್ಚುತ್ತಿದೆ. ಉತ್ತಮ ಜಮೀನು ಜವಳು ಭೂಮಿಯಾಗಿ ಕೃಷಿ ಯೋಗ್ಯತೆಯನ್ನೇ ಕಳೆದುಕೊಳ್ಳುತ್ತಿದೆ.


ನಮಗೆ ಇದು ತಿಳಿದಿಲ್ಲವೆಂದಲ್ಲ. ಆದರೂ ಕಾಲುವೆ, ಪೈಪುಗಳಲ್ಲಿ ನೀರು ಬಂದು ಜಮೀನಿಗೆ ತಲುಪಿ ಬಿಡಬೇಕು ಎಂದು ಬಯಸುತ್ತಿದ್ದೇವೆ. ಹೇರಳ ನೀರು ದೊರಕಿಸಿ ಕೊಂಡು ಬಿಡುತ್ತೇವೆಂಬ ಭ್ರಮೆಯಲ್ಲಿ ಕೊಳವೆ ಬಾವಿ ಗಳನ್ನು ಕೊರೆಯುತ್ತಲೇ ಬರುತ್ತಿದ್ದೇವೆ. ನೀರೆತ್ತುವ ಪಂಪುಗಳನ್ನು ಜೋಡಿಸಿ, ಜಲ ಸಂಪತ್ತನ್ನು ಬರಿದು ಮಾಡಿಕೊಂಡು ಕಂಗಾಲಾಗುತ್ತಿದ್ದೇವೆ. ನಮ್ಮ ಯೋಜನೆ ಗಳು, ಅದಾವುದೇ ಆಗಿರಲಿ; ಬಾಳಿಕೆ ಬರಬೇಕು. ಸುಸ್ಥಿರ ವಾಗಬೇಕು. ನೈಜ ಸಾರ್ಥಕತೆ ಪಡೆಯುವುದಾದರೆ ಮುಂದಿನ ಪೀಳಿಗೆಗೂ ದಕ್ಕಬೇಕು.


ಆಧುನಿಕ ತಂತ್ರeನ ಇರಲಿ, ತಪ್ಪಿಲ್ಲ. ಅದು ಇರುವ ಸೌಲಭ್ಯಕ್ಕೆ ಪೂರಕವಾಗುವುದಾದರೆ ಸರಿ. ಇರುವುದನ್ನು ನಾಶ ಮಾಡುವುದೇ ಆದಲ್ಲಿ, ಸಮಸ್ಯೆಗಳಿಗೆ ಉತ್ತರವನ್ನಾ ದರೂ ದೊರಕಿಸಿಕೊಡುವಂತಿರಬೇಕು. ಅದರೊಂದಿಗೆ ಹೊಸ ಸಮಸ್ಯೆಗಳನ್ನೂ ಸೃಷ್ಟಿಸುವುದಾದರೆ ಅದು ಅಭಿವೃದ್ಧಿ ಹೇಗಾದೀತು ?


ಅದು ಹನಿ ನೀರಾವರಿ ಪದ್ಧತಿ ಇರಬಹುದು, ಚಿಮ್ಮು ನೀರಾವರಿ ಪದ್ಧತಿಯಿರಬಹುದು- ಈ ಆಧುನಿಕ ಕ್ರಮಗಳು ವ್ಯತಿರಿಕ್ತ ಪರಿಣಾಮಗಳಿಂದ ಮುಕ್ತ. ಅದು ಬಿಟ್ಟು ಏತದ ಮೂಲಕ ನದಿಯ ದಿಕ್ಕನ್ನೇ ಬದಲಿಸಿಬಿಡುತ್ತೇವೆಂಬ ಭ್ರಮೆಯಲ್ಲಿ ಯಾವ ಪುರುಷಾರ್ಥವಿದೆ ?


ನೀರು ಸ್ವಲ್ಪವೂ ಪೋಲಾಗದಂತೆ ಎಲ್ಲರಿಗೂ ಸಮಾನ ಹಂಚಿಕೆ ಮಾಡುವ ಹಲವಾರು ಉಪಕ್ರಮಗಳು ದೇಶೀಯ ವಾಗಿಯೇ ಅನುಸರಣೆಯಲ್ಲಿವೆ. ಅವುಗಳನ್ನು ಅಭಿವೃದ್ಧಿ ಪಡಿಸಲು, ಸಮಕಾಲೀನ ಸ್ಥಿತಿಗತಿಗಳಿಗನುಗುಣವಾಗಿ ಹೊಂದಿಸಿಕೊಳ್ಳಲು ಹೆಚ್ಚೇನೂ ಶ್ರಮವೂ ಬೇಕಿಲ್ಲ, ಆರ್ಥಿಕ ಹೊರೆಯೂ ಇಲ್ಲ. ಆ ಬಗ್ಗೆ ನಾವು ಈ ವರೆಗೆ ಯೋಚಿಸಿಯೇ ಇಲ್ಲ. ನಮ್ಮದೇನಿದ್ದರೂ ಕೋಟಿಗಳ ಗಾತ್ರದ ಯೋಜನೆಗಳು. ಹರಿವ ನೀರಿನ ಬಳಕೆಗೆ ಹತ್ತಾರು ಸುಲಭ ಮಾರ್ಗಗಳಿವೆ. ಅದಕ್ಕೆ ಬೃಹತ್ ಅಣೆಕಟ್ಟೆಗಳೇ ಆಗಬೇಕೆಂದಿಲ್ಲ.


ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ.


ಚಿಕ್ಕಪುಟ್ಟ ಮಣ್ಣಿನ ದಂಡೆಗಳು ಸಹ ಹರಿಯುವ ನೀರಿನ ಪ್ರಯೋಜನವನ್ನು ಪಡೆಯಲು ಅರ್ಥಿಕ ದೃಷ್ಟಿಯಿಂದ ಲಾಭಕರವಾದವು. ಪರಿಸರ ದೃಷ್ಟಿಯಿಂದ ಅದು ವಿವೇಕ ಯುತ ಮಾರ್ಗ, ಚಂಡೀಗಢ ಸಮೀಪದಲ್ಲಿ ಹೀಗೆ ರಚಿಸಿರುವ ಮೂರು ಚಿಕ್ಕ ಜಲಾಶಯಗಳು ಒಂದು ಗ್ರಾಮದ ಸಂಪತ್ತನ್ನು ಬೇಕಾದಷ್ಟು ಹೆಚ್ಚಿಸಿದೆ. ಅಲ್ಲಿ ಯಾವ ಭೂಮಿಯೂ ಕೊರೆದು ಹೋಗಿಲ್ಲ, ಅರಣ್ಯವೂ ನಾಶವಾಗಿಲ್ಲ. ಪ್ರತಿಯಾಗಿ ಮರುಭೂಮಿಯೂ ಸೃಷ್ಟಿಗೊಂಡಿಲ್ಲ. ಯಾವೊಬ್ಬನನ್ನೂ ಅವನಿದ್ದ ಸ್ಥಳದಿಂದ ಓಡಿ ಸಿಲ್ಲ. ಇದರಿಂದ ನಾವು ಕಲಿಯಲೇ ಬೇಕಾದ ಪಾಠವೆಂದರೆ ನೀವು ಜಲ ಸಂಪತ್ತನ್ನು ರಕ್ಷಿಸುತ್ತೀರಾದರೆ ಅವಶ್ಯವಾಗಿ ರಕ್ಷಿಸಿ. ಅದರ ಬದಲು ಮಹಾ ಮಹಾ ಒಡ್ಡುಗಳನ್ನು ಕಟ್ಟು ತ್ತೀರಾದರೆ ಅವು ಖಂಡಿತವಾಗಿಯೂ ಬೇಡ.


ಹಿಂದೊಂದು ಕಾಲದಲ್ಲಿ ಭಾರತದ ಅಭಿವೃದ್ಧಿಯ ಸಂಕೇತವೇ ಮಹಾ ಒಡ್ಡುಗಳು ಎಂಬ ಭಾವನೆಯಿತ್ತು. ಇಂದು ಅಂಥ ಭ್ರಮೆ ಕಳಚಿ ಹೋಗಿದೆ. ಅವುಗಳ ದುಷ್ಪರಿಣಾಮವನ್ನು ಕುರಿತು ಜನರು ಚಿಂತೆಗೀಡಾಗಿದ್ದಾರೆ. ಹಾಗಿದ್ದರೂ ಇನ್ನೂ ಇನ್ನೂ ಆ ಬಗ್ಗೆ ಧನವ್ಯಯ ಮಾಡು ವುದನ್ನು ಕಾಣುತ್ತಿದ್ದೇವೆ. ಇವತ್ತು ಭಾರತದ ಯಾವತ್ತೂ ಪ್ರಮುಖ ನದಿಗಳಿಗೆ ಒಡ್ಡನ್ನು ಈಗಾಗಲೇ ಕಟ್ಟಿದ್ದಾರೆ. ಅಥವಾ ಕಟ್ಟುತ್ತಿದ್ದಾರೆ. ಆದರೆ ಈ ಮೂಲಕ ಜಲ ಮೂಲ ವಿದ್ಯುತ್ ಉತ್ಪಾದನೆಯ ಲಾಭ ದೊರೆತದ್ದು ತೀರ ಸ್ವಲ್ಪ. ಹೀಗಾಗಿ ಒಡ್ಡುಗಳ ನಿರ್ಮಾಣವೇ ನಮಗೆ ಅಭಿವೃದ್ಧಿಯ ಪ್ರಧಾನ ಚಟುವಟಿಕೆಯಾಗಿ ಕಾಣಿಸುವಂತಿದೆ.


ಆದರೆ ಪರಿಸರ ದೃಷ್ಟಿಯಿಂದ ಈಚೀಚೆಗೆ ಉಂಟಾದ ಅನುಭವಗಳೆಂದರೆ ಈ ಒಡ್ಡುಗಳು ಎಷ್ಟೆಷ್ಟು ದೊಡ್ಡದಾ ಗುತ್ತವೋ, ಪರಿಸರ ವಿನಾಶ ಅಷ್ಟಷ್ಟು ಹೆಚ್ಚಿಗೆ ಆಗುತ್ತದೆ ಎಂದು. ಹೀಗಿರುತ್ತಾ ಪರಿಸರಕ್ಕೆ ಧಕ್ಕೆ ತಾರದಂತೆ ಬೇರೇನೂ ಕೆಲಸ ಮಾಡಲು ಬರಲಾರದೇ-ಎಂಬ ಪ್ರಶ್ನೆ ನಮ್ಮ ಮುಂದಿದೆ. ಬೆಳೆಯುತ್ತಿರುವ ದೇಶದ ಜನಸಂಖ್ಯೆಗೆ ಆಹಾರವನ್ನು ಒದಗಿಸಬೇಕು ಮತ್ತು ಉದ್ಯಮಗಳಿಗೆ ಚೈತನ್ಯವನ್ನು ಒಗಿಸಬೇಕು ಎಂಬ ಸಂಗತಿ ನಿಜವಾದರೂ ಅವುಗಳಿಂದುಂಟಾಗುವ ಹಾನಿಯನ್ನು ತಡೆಯಲು ಪ್ರಯತ್ನಿಸಬೇಡವೇನು?


ಅಭಿವೃದ್ಧಿಯ ವ್ಯಾಖ್ಯಾನದ ಸಂದರ್ಭದಲ್ಲಿ ನಾವು ಪ್ರತಿಪಾದಿಸುತ್ತಿರುವ ಆರ್ಥಿಕ ಸಬಲತೆ, ಆಹಾರ ಸ್ವಾವ ಲಂಬನೆಯ ವಿಚಾರಗಳು ನೀರಿನ ವಿಷಯಕ್ಕೂ ಅನ್ವಯ ವಾಗಬೇಕು. ಸಾಮುದಾಯಿಕ ಪ್ರಯತ್ನಗಳ ಮೂಲಕ ಪ್ರತಿಯೊಬ್ಬನ ನೀರಿನ ಅಗತ್ಯ ಪೂರೈಕೆಯಾಗಬೇಕು. ನೀರು ಸರಕಾರಿ ಯೋಜನೆಯಾಗದೇ ವ್ಯಕ್ತಿಗತ ಕಾಳಜಿಯಾಗ ಬೇಕು. ಶುದ್ಧ ಜಲದ ಹಕ್ಕು ಸಂರಕ್ಷಣೆಗೊಳ್ಳಬೇಕು. ನೀರಿನ ವಿಚಾರದಲ್ಲಿ ‘ಆಡಳಿತ’ ಕೈ ಹಾಕುವುದೇ ಆದರೆ ಸುಸ್ಥಿರ ಪದ್ಧತಿಗಳನ್ನು ಪರಿಚಯಿಸಬೇಕು. ಪಾರಂಪರಿಕ ವಿಧಾನಗಳು ಮಾತ್ರವೇ ನೀರನ್ನು ನೀರಿನ ಸ್ವರೂಪದಲ್ಲಿ ಉಳಿಸಿ ದೇಶವಾಸಿಗಳ ದಾಹ ತಣಿಸಬಹುದೇ ವಿನಃ ಉಳಿದೆಲ್ಲ ಆಧುನಿಕ ತಂತ್ರeನಗಳು ಅದನ್ನು ಇನ್ನಷ್ಟು ಕುಲಗೆಡಿಸುತ್ತದೆ.

‘ಲಾಸ್ಟ್ ’ಡ್ರಾಪ್ :
‘ತಿಳಿನೀಲ ಬಂಗಾರ’ದ ಮೌಲ್ಯ ಜನರ ಮೂಲಭೂತ ತಿಳಿವಿಗೆ ದಕ್ಕದ ಹೊರತೂ ಈ ನೆಲದ ದಾಹ ತೀರಲು ಸಾಧ್ಯವೇ ಇಲ್ಲ.

No comments: