Saturday, April 25, 2009

ಶೀತ ಬಂದರೆ ಮೂಗು ಕೊಯ್ತಾರಾ ?

ನೀರಿನ ಬಗ್ಗೆ ನಮಗೆ ಮೊದಲಿಂದಲೂ ಅದೇನೋ ಪೂರ್ವಗ್ರಹ. ಇದಕ್ಕೆ ಕಾರಣವೇ ಇಲ್ಲ. ಆದರೂ ಯಾವುದೇ ಕಾಯಿಲೆ ನಮ್ಮನ್ನು ಬಾಸಲಿ, ನಮಗೇ ಗೊತ್ತಿಲ್ಲದಂತೆ ನಾವು ನೀರಿನಿಂದ ದೂರ ಉಳಿದುಬಿಡುತ್ತೇವೆ. ಇದೇಕೆ ಹೀಗೆ ? ಉತ್ತರ ಇಲ್ಲ. ವೈದ್ಯರು ಮೇಲಿಂದ ಮೇಲೆ ಹೆಚ್ಚು ನೀರು ಕುಡಿಯಿರಿ ಎಂಬ ಸಲಹೆ ನೀಡುತ್ತಲೇ ಇರುತ್ತಾರೆ. ಇಷ್ಟಾದರೂ ನಮಗೆ ನೀರು ಕುಡಿಯಲು ಏನೋ ಹಿಂಜರಿಕೆ.
ಬೇಕಿದ್ದರೆ ನೋಡಿ, ಮಕ್ಕಳನ್ನು ಸಹ ನಾವು ನೀರಿನಿಂದ ದೂರ ಇಟ್ಟು ಬಿಡುತ್ತೇವೆ. ಮಕ್ಕಳಿಗೆ ನೀರೆಂದರೆ ಸಹಜವಾಗಿ ಖುಷಿ. ಅವು ಏನನ್ನು ಕುಡಿಯದಿದ್ದರೂ, ಏನನ್ನು ತಿನ್ನದಿದ್ದರೂ ನೀರನ್ನು ಬಿಡುವುದಿಲ್ಲ. ಆದರೆ, ನಮ್ಮ ಧೋರಣೆಯೇ ವಿಚಿತ್ರ. ಮಗು ಸ್ವಲ್ಪ ಹೆಚ್ಚು ನೀರು ಕುಡಿದರೂ ಸಾಕು, ಎಲ್ಲಿ ಶೀತವಾಗಿಬಿಡುತ್ತದೋ ಎಂತಲೋ, ಬರೀ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತದೆ, ಊಟ ಮಾಡುವುದೇ ಇಲ್ಲ ಎಂತಲೋ ಅನಗತ್ಯ ಆತಂಕ ವ್ಯಕ್ತಪಡಿಸುತ್ತೇವೆ. ದೊಡ್ಡವರಿಗೂ ಬರೀ ನೀರು ಕುಡಿಯುವುದೆಂದರೆ ಏನೋ ಅಸಡ್ಡೆ.
ಶುದ್ಧ ನೀರಿನ ಯಥೇಚ್ಛ ಸೇವನೆಯಿಂದ ಯಾವುದೇ ರೋಗ ನಮ್ಮನ್ನು ಬಾಸುವುದಿಲ್ಲ. ಬದಲಾಗಿ ಅದೆಷ್ಟೋ ಸಮಸ್ಯೆಗಳಿಗೆ ನೀರು ಪರಿಹಾರವಾಗಬಲ್ಲುದು. ಅದೇ ಸಂದರ್ಭದಲ್ಲಿ ಕಲುಷಿತ ನೀರಿನ ಸೇವನೆಯೇ ನಮ್ಮ ಬಹುತೇಕ ಕಾಯಿಲೆಗಳಿಗೆ ಕಾರಣವೆಂಬ ಮಾತೂ ಸತ್ಯ. ಶುದ್ಧ ಹಾಗೂ ಕಲುಷಿತ ನೀರಿನ ನಡುವಿನ ವ್ಯತ್ಯಾಸ ಗೊತ್ತಿಲ್ಲದೇ ಎಲ್ಲ ನೀರನ್ನೂ ಒಂದೇ ಮಾನದಂಡದಿಂದ ಅಳೆದು ಕಾಯಿಲೆ ಬಂದಾಕ್ಷಣ ನಾವು ನೀರಿನಿಂದ ದೂರ ಉಳಿದು ಬಿಡುತ್ತೇವೆ.
ಶೀತ ಬಂತೆಂದು ಮೂಗುಕೊಯ್ದುಕೊಳ್ಳಬೇಕಿಲ್ಲ. ಶ್ವಾಸೋಚ್ಛ್ವಾಸ ಸುಲಲಿತವಾಗಲು, ವಾಯು ಮಾಲಿನ್ಯ ಮೀರಿ ಶುದ್ಧ ಆಮ್ಲಜನಕವನ್ನು ಹೃದಯಕ್ಕೆ ಪೂರೈಸಲು ಪೂರಕವಾಗಿ ಆಗಾಗ ಶೀತ ಆಗಬೇಕು. ಅಂತೆಯೇ ಅಳುಮುಂಜಿ ಎಂದು ಯಾರನ್ನೂ ಹಂಗಿಸಬೇಡಿ. ಕಣ್ಣಿರು ಸುರಿದಷ್ಟೂ ದೃಷ್ಟಿ ಸ್ವಚ್ಛವಾಗುತ್ತದೆ. ಬಾಯಲ್ಲಿ ಜೊಲ್ಲು ಸುರಿದರೂ ನಾಚಿಕೆ ಪಟ್ಟುಕೊಳ್ಳಬೇಕಾಗಿಲ್ಲ. ಅದು ಪಚನ ಕ್ರಿಯೆಯಲ್ಲಿ ನೆರವಾಗುತ್ತದೆ.
ಇನ್ನು ಭೇದಿಯಾಯಿತೆಂದು ತಲೆಗೆ ಹಚ್ಚಿಕೊಂಡು ಕುಳಿತುಕೊಳ್ಳಬೇಡಿ. ಅನ್ನ ನಾಳದಲ್ಲಿ ಆಹಾರದ ಚಲನೆಗೆ ನೀರಿನ ಸಾಂಗತ್ಯ ಬೇಕು. ಹಾಗೆ ಒಳ ಹೋದ್ದು ಪಚನವಾಗಲೂ ನೀರು ಬೇಕು. ಅದು ಆಗದೇ ಇದ್ದಾಗ ಅಜೀರ್ಣವಾಗುತ್ತದೆ, ಭೇದಿ ಕಿತ್ತುಕೊಳ್ಳುತ್ತದೆ.
ಮನುಷ್ಯ ಎಂದ ಮೇಲೆ ಬೆವರಲೇ ಬೇಕು. ಯಾಕೆ ಅಂತೀರಾ ? ನಮ್ಮ ದೇಹದ ಉಷ್ಣಾಂಶ ಸಾಮಾನ್ಯವಾಗಿ ೯೮.೬ ಡಿಗ್ರಿ ಫಾರನ್‌ಹೀಟ್ ಇರಬೇಕು. ಬಿಸಿಲಲ್ಲಿ ಕೆಲಸ ಮಾಡಿದಾಗ ದೇಹ ಇನ್ನಷ್ಟು ಬಿಸಿಯಾಗುತ್ತದೆ. ಆಗ ದೇಹವನ್ನು ತಂಪಾಗಿಸುವುದಕ್ಕೆ ಬೆವರು ಹೊರಬರುತ್ತದೆ ಹಾಗೂ ಅನಂತರ ಗಾಳಿಯಲ್ಲಿ ಆವಿಯಾಗುತ್ತದೆ. ಬೆವರು ಆವಿಯಾದಾಗ ಚರ್ಮ ತಂಪಾಗುತ್ತದೆ, ರಕ್ತ ತಂಪಾಗುತ್ತದೆ, ಇಡೀ ದೇಹವೇ ತಂಪು ತಂಪು ಕೂಲ್‌ಕೂಲ್!
ಕುಡಿದ ನೀರಿನ ಮುಕ್ಕಾಲು ಭಾಗ ಪ್ರತಿದಿನ ದೇಹದಿಂದ ಹೊರಹೋಗುತ್ತದೆ. ಮೂತ್ರ, ಬೆವರು, ಜೀರ್ಣಪ್ರಕ್ರಿಯೆ, ನೆಗಡಿ, ಉಸಿರು, ಆವಿ ಹೀಗೆ ನಾನಾ ವಿಧಗಳಲ್ಲಿ ನೀರು ಹೊರಹೋಗುತ್ತದೆ. ಹೀಗೆ ಹೊರಹೋಗುವ ನೀರನ್ನು ಮತ್ತೆ ತುಂಬಿಕೊಳ್ಳುವುದು ಹೇಗೆ? ಸಿಂಪಲ್, ಕುಡಿಯೋದು, ತಿನ್ನೋದು. ಹೌದು ನಾವು ತಿನ್ನುವ ಹಣ್ಣು ಹಂಪಲು ತರಕಾರಿ ಆಹಾರದ ಪ್ರತಿಯೊಂದು ವಸ್ತುವಿನಲ್ಲೂ ನೀರಿದೆ. ಅದರ ಜತೆಗೆ ದಿನಕ್ಕೆ ಎರಡು ಲೀಟರ್ ನೀರು ಕುಡಿಯಲೇಬೇಕು. ವ್ಯಾಯಾಮದ ಅಭ್ಯಾಸವಿರುವವರು, ಬಿಸಿಲಲ್ಲಿ ದುಡಿಯುವವರು, ಹೆಚ್ಚು ಓಡಾಡುತ್ತಿರುವವರು ಇನ್ನೂ ಹೆಚ್ಚು ನೀರು ಕುಡಿಯಲೇಬೇಕು
ಕುಡಿಯುವ ನೀರು ಹೇಗಿರಬೇಕು?
ಶುದ್ಧ ನೀರಿಗೆ ಬಣ್ಣ, ವಾಸನೆ, ರುಚಿ ಇಲ್ಲ. ಆದ್ದರಿಂದ ನಾವು ಕುಡಿಯುವ ನೀರಿಗೆ ಹಿತಕರವಲ್ಲದ ಬಣ್ಣ, ವಾಸನೆ, ರುಚಿ ಇರಬಾರದು. ಕುಡಿಯುವ ನೀರು ರೋಗಾಣುವಿನಿಂದ, ಹಾನಿಕಾರಕ ರಾಸಾಯನಿಕ, ವಿಕಿರಣಗಳಿಂದ ಮುಕ್ತವಾಗಿರಬೇಕು.
ಹಾಗಿಲ್ಲದಿದ್ದರೆ ಅದು ದೇಹಕ್ಕೆ ಅಪಾಯಕಾರಿ. ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಒಂದು ಕೋಟಿ ಮಕ್ಕಳು ಭೇದಿಯಿಂದ ಬಳಲುತ್ತಾರೆ. ಆ ಪೈಕಿ ಹತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು ಮೃತಪಡುತ್ತಾರೆ. ವರ್ಷಕ್ಕೆ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ಸಾವಿರ ಮಂದಿ ಕಾಲರಾ ಪೀಡಿತರಾಗುತ್ತಾರೆ. ವಿಷಮಶೀತ ಜ್ವರ, ಕಾಮಾಲೆ, ಆಮಶಂಕೆ, ಜಂತುಹುಳು, ಪೋಲಿಯೊ ಮುಂತಾದ ಅನೇಕ ರೋಗ ಬರುವುದು ಕಲುಷಿತ ನೀರಿನಿಂದಲೇ.
ನಿಂತ ನೀರಿನಿಂದ ಮಲೇರಿಯಾ, ಇಲಿಜ್ವರ, ಫೈಲೇರಿಯಾ(ಆನೇಕಾಲು ರೋಗ), ಡೆಂಗೆಜ್ವರ, ಮಿದುಳುಜ್ವರ ಮುಂತಾದ ಜ್ವರಗಳ ಸಾಲೇ ಕಾಡುತ್ತದೆ. ಕಲುಷಿತ ನೀರಿನಿಂದ ಚರ್ಮರೋಗ, ಶ್ವಾಸಕೋಶ ಸಂಬಂ ಕಾಯಿಲೆ, ಪಂಚೇಂದ್ರಿಯ ಬೇನೆ ಬರುತ್ತದೆ. ರಕ್ತದೊತ್ತಡ, ಹೃದ್ರೋಗಕ್ಕೂ ನೀರೇ ಮೂಲ.
ಮೇಲ್ನೋಟಕ್ಕೆ ನಾವು ಪಟ್ಟಿ ಮಾಡ ಹೊರಟರೆ ಏನಿಲ್ಲವೆಂದರೂ ಒಂದು ಹತ್ತಿಪ್ಪತ್ತು ಕಾಯಿಲೆಗಳನ್ನು ಹೆಸರಿಸಬಹುದು. ನೀರಿನ ವೈರಾಣುಗಳಿಂದ ಹರಡ ಬಹುದಾದ ವೈರಲ್ ಫೀವರ್, ಹೆಪಟೈಟಿಸ್, ಪೊಲಿಯೊ ಇತ್ಯಾದಿಗಳು ಸಾಮಾನ್ಯವೆಂಬಂತಾಗಿದೆ. ಇನ್ನು ಬ್ಯಾಕ್ಟೀರಿಯಾಗಳಿಂದ ಬರುವ ಟೈಫಾಯ್ಡ್, ಪ್ಯಾರಾ ಟೈಫಾಯ್ಡ್, ಕಾಲರಾ, ಸೂಕ್ಷ್ಮಾಣುಗಳಿಂದ ಬರುವ ಭೇದಿ (ಬ್ಯಾಸೆಲರಿ ಡೀಸೆಂಟ್ರಿ) ಡಯೇರಿಯಾ ಇತ್ಯಾದಿಗಳಲ್ಲದೆ ಅಮೀಬಿಯಾಸಿಸ್‌ನಂಥ ಮಾರಕ ರೋಗಗಳ ನಿರ್ಮೂಲನೆ ನಮ್ಮಿಂದ ಸಾಧ್ಯವೇ ಆಗಿಲ್ಲ. ಜಂತುಗಳ ಹಾವಳಿಯಂತೂ ಅಶುದ್ಧ ನೀರಿನ ಬಹುದೊಡ್ಡ ಬಳು ವಳಿ. ಇದಲ್ಲದೇ ಸ್ಕಿಸ್ಟೋಸೋಮಿಯಾಸಿಸ್, ಗುನ್ಯಾ, ಮೀನಿನ ಬಾಲದ ಜಂತುವಿನ ಬಾಧೆ ಅಸಹನೀಯ ವೇದನೆಗೆ ಮಾನವನನ್ನು ತುತ್ತಾಗಿಸುತ್ತಿವೆ.
ಚರ್ಮ ಸಂಬಂ ರೋಗಗಳು, ಹಲ್ಲಿನ ತೊಂದರೆ ಗಳು, ಮೂಳೆಗಳಿಗಾಗುತ್ತಿರುವ ಧಕ್ಕೆ.... ಇಂಥವುಗಳನ್ನು ಬಹುತೇಕರು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಹೀಗಾಗಿ ಇದು ಗಣನೆಗೆ ಸಿಗುತ್ತಿಲ್ಲ. ಎಷ್ಟೋ ಬಾರಿ ಅಶುದ್ಧ, ಅಸಮತೋಲಿತ ನೀರಿನ ಸೇವನೆ, ಜಠರ, ಮೂತ್ರಕೋಶಗಳಂಥ ಪ್ರಮುಖ ಅಂಗಗಳಿಗೆ ಹಾನಿ ತಂದು ಜೀವವನ್ನೇ ಬಲಿ ತೆಗೆದು ಕೊಂಡಿರುವ ಉದಾಹರಣೆಗಳೂ ಇವೆ.

ಏನಿರುತ್ತದೆ ನೀರಿನಲ್ಲಿ ?
ಏ೨೦ ಎಂದು ವೈಜ್ಞಾನಿಕ ಪರಿಭಾಷೆಯಲ್ಲಿ ಗುರುತಿಸಲಾಗುವ ನೀರಿನಲ್ಲಿ ಗಡಸು ನೀರು ಹಾಗೂ ಮೆದು ನೀರು ಎಂಬ ಎರಡು ಬಗೆ. ಆದರೆ ಇಂದು ನೀರಿನಲ್ಲಿ ಹೈಡ್ರೋಜನ್, ಆಕ್ಸಿಜನ್‌ಗಳೆರಡೇ ಉಳಿದಿಲ್ಲ. ಹಲವೆಡೆಗಳಲ್ಲಿ ದೊರಕುತ್ತಿರುವ ನೀರಿನಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಹಾಗೂ ನೈಟ್ರೇಟ್, ಮೆಗ್ನೀಷಿಯಂನ ಕಾರ್ಬೊನೇಟ್, ಸಲೇಟ್, ನೈಟ್ರೇಟ್ ಅಲ್ಲದೇ ಕಬ್ಬಿಣ, ಮ್ಯಾಂಗನೀಸ್, ಅಲ್ಯುಮಿನಿಯಂ ಹೀಗೆ ಬೆರೆತಿರದ ಲವಣ ಗಳೇ ಇಲ್ಲವೆಂಬಂತಾಗಿದೆ.
ಇತ್ತೀಚೆಗೆ ರಾಜ್ಯದ ಹಲವೆಡೆ ಫ್ಲೋರೈಡ್ ಸಮಸ್ಯೆಯಾಗಿ ಕಾಡುತ್ತಿದೆ. ಅಂತರ್ಜಲ ಮಟ್ಟ ಕುಸಿದಂತೆಲ್ಲ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚುತ್ತಿದೆ. ಇದರಿಂದಾಗಿ ಎಲುಬಿಗೆ ಸಂಬಂಸಿದ ವ್ಯಾ ವ್ಯಾಪಕವಾಗುತ್ತಿದೆ. ಒಂದು ಲೀಟರ್ ಕುಡಿಯುವ ನೀರಿನಲ್ಲಿ ಒಂದು ಗ್ರಾಂ ಫ್ಲೋರೀನ್ ಇರಬೇಕು. ಆದರೆ ಈ ಜಿಲ್ಲೆಗಳ ನೀರಿನಲ್ಲಿ ೩ ಗ್ರಾಂಗಳಿಗಿಂತಲೂ ಹೆಚ್ಚು ಪ್ರಮಾಣ ಕಾಣಿಸಿಕೊಂಡಿದ್ದು ಫ್ಲೋರೋಸಿಸ್‌ನಂಥ ಅಂಗವೈಕಲ್ಯದಿಂದ ಹಲವರು ಬಳಲುತ್ತಿದ್ದಾರೆ. ಇದೇ ರೀತಿ ನೀರಿನಲ್ಲಿ ಆರ್‍ಸೆನಿಕ್, ಸೆಲೀನಿಯಂ ಇತ್ಯಾದಿಗಳ ಅಂಶಗಳ ಹೆಚ್ಚಳದಿಂದಲೂ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ.
ಮಧ್ಯಮ ಗಡಸು ನೀರು ಕುಡಿಯಲು ಉತ್ತಮ. ಇಂಥ ನೀರಿನ ಸೇವನೆಯಿಂದ ಹೃದಯಾಘಾತ, ರಕ್ತದೊತ್ತಡ ಸಂಭವಿಸಲಾರದು. ಗಡಸು ನೀರನ್ನೇ ಕುಡಿಯುವುದು ಅನಿವಾರ್‍ಯವಾದಾಗ ಮನೆಯಲ್ಲಿ ನೀರನ್ನು ಕಾಯಿಸಿ. ಸುಣ್ಣ ಬೆರಸುವುದರ ಮೂಲಕ ಮೆದು ನೀರು ಮಾಡಿಕೊಳ್ಳಬಹುದು. ಸುದೀರ್ಘ ಅವಯವರೆಗೆ ಶೇಖರಿಸಿಡುವ ನೀರು ಹಾಗೂ ಬಾವಿಗಳಿಗೆ ಆಗಾಗ್ಗೆ ಅಲ್ಪಪ್ರಮಾಣದಲ್ಲಿ ಕ್ಲೋರೀನ್ ಹಾಕಿ ಶುದ್ಧೀಕರಿಸುವುದು ಉತ್ತಮ.

ಲಾಸ್ಟ್‘ಡ್ರಾಪ್’: ಬಚ್ಚಲು ಮನೆಯ ನಲ್ಲಿ ಸೋರುತ್ತಿದ್ದರೆ ಅದು ನೀರಿನ ಪೋಲಷ್ಟೇ ಅಲ್ಲ. ನೆನಪಿಡಿ, ನಿಮ್ಮ ಸೊಂಟಕ್ಕೂ ಸಂಚಕಾರ. ಏಕೆಂದರೆ ನಿರಂತರ ನೀರಿನ ಸೋರಿಕೆ ಇದ್ದ ಕಡೆ ಪಾಚಿ ಕಟ್ಟಿರುತ್ತದೆ.

No comments: