Wednesday, October 28, 2009

ಕರ್ನಾಟಕವನ್ನು ಗುಜರಾತ್ ಮಾಡುವುದಕ್ಕೆ ಮುಂಚೆ ಕೊಂಚ ಯೋಚಿಸೋಣ

ಗ ಎಲ್ಲ ರಾಜಕಾರಣಿಗಳ ಬಾಯಲ್ಲೂ ಅಭಿವೃದ್ಧಿಮಂತ್ರ ಪಠಣವಾಗುತ್ತಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಎಂಬೆಲ್ಲ ಮೌಲ್ಯಗಳನ್ನು ಮೂಲೆಗೆ ತಳ್ಳಲಾಗಿದೆ.
ಸದ್ಯಕ್ಕೆ ಕರ್ನಾಟಕದ ಬಿಜೆಪಿ ಸರಕಾರಕ್ಕೆ “ಅಭಿವೃದ್ಧಿ" ಎಂಬುದಕ್ಕೆ ನೈಜ ವ್ಯಾಖ್ಯಾನ ಕಟ್ಟಿಕೊಟ್ಟ ನರೇಂದ್ರ ಮೋದಿ ಎಂಬ ಚಲನಶೀಲ, ಚಿಂತಕ ಮುಖ್ಯಮಂತ್ರಿ (೧೬-೧೦-೦೯ರ ರಾಧಾಕೃಷ್ಣ ಭಡ್ತಿ ಅವರ ‘ಕರ್ನಾಟಕವನ್ನು ಇನ್ನೊಂದು ಗುಜರಾತು ಮಾಡಿ, ಪ್ಲೀಸ್’ ಲೇಖನ) ಅಭಿವೃದ್ಧಿಪಥದಲ್ಲಿ ದಾಪುಗಾಲಿಟ್ಟು ನಡೆಯುತ್ತಿರುವ ಆರಾಧ್ಯದೈವ ಎಂದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಸಚಿವರು ಮೋದಿ ಅವರಿಂದ ‘ಶ್ರದ್ಧೆಯಿಂದ ಪಾಠ ಕೇಳಿ ಬಂದರು.’
ಒಂದು ರಾಜ್ಯವಾಗಲಿ, ಒಂದು ನಾಡಾಗಲಿ ಸರ್ವವಿಧದಲ್ಲಿಯೂ ಅಭಿವೃದ್ಧಿಗೊಳ್ಳಬೇಕು ಎಂಬುದರ ಬಗ್ಗೆ ಯಾರದೂ ತಕರಾರಿಲ್ಲ. ಆದರೆ ‘ಅಭಿವೃದ್ಧಿ’ ಶಬ್ದ ಬಳಸಿದಾಗ ಅದಕ್ಕೆ ನಾವು ಹಚ್ಚುವ ಅರ್ಥವೆಷ್ಟು? ಆ ಶಬ್ದಕ್ಕೆ ಇರುವ ವ್ಯಾಪ್ತಿಯೆಷ್ಟು? ಮತ್ತು ಅಭಿವೃದ್ಧಿಯೇ ಪ್ರಗತಿ ಕೂಡ ಹೌದೆ! ಈ ಎರಡು ಶಬ್ದಗಳ ಪರಸ್ಪರ ಸಂಬಂಧವೇನು? ಇವುಗಳನ್ನು ನಾವು ಎಚ್ಚರಿಕೆಯಿಂದ ತಿಳಿಯಬೇಕು ಮತ್ತು ಯಾವುದೇ ರೀತಿಯ ಒಳ್ಳೆಯ ಪಾಠವನ್ನಾಗಲಿ ನಾವು ಕಲಿಯುತ್ತಲೇ ಇರಬೇಕಾದ ಅವಶ್ಯಕತೆಯನ್ನು ಯಾರೂ ನಿರಾಕರಿಸಲಾರರು. ಆದರೆ ಯಾರಿಂದ ಪಾಠ ಕಲಿಯುತ್ತಿದ್ದೇವೆ ಮತ್ತು ಅವರದೇ ನಂಬಿಕೆಗಳನ್ನು ಕಾರ್ಯರೂಪಕ್ಕೆ ಅಳವಡಿಸುವಾಗ ಅವರು ತೋರುತ್ತಿರುವ ರೀತಿ ಯಾವುದು ಎಂಬುದು ಬಹುಮುಖ್ಯವಾಗುತ್ತದೆ. ವಿಶೇಷ ವಾಗಿ ಆ ವ್ಯಕ್ತಿ ರಾಜಕಾರಣದಲ್ಲಿದ್ದು, ರಾಜ್ಯದ ಆಡಳಿತದ ಮುಂಚೂಣಿ ಯಲ್ಲಿದ್ದಾಗ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ.
ಈ ನಿಟ್ಟಿನಲ್ಲಿ, ಪ್ರಾಸಂಗಿಕವಾಗಿ, ಜಗತ್ತಿನ ಅತ್ಯಂತ ಅಭಿವೃದ್ಧಿ ಗೊಂಡ ರಾಷ್ಟ್ರಗಳತ್ತ ಒಂದು ಕ್ಷಣ ಗಮನಹರಿಸುವುದು ಅವಶ್ಯವೆನಿಸುತ್ತದೆ. ಮೊದಲ ಮಹಾಯುದ್ಧದಿಂದ ಜರ್ಝರಿತ ವಾಗಿಹೋಗಿದ್ದ ಜರ್ಮನಿ ರಾಷ್ಟ್ರವನ್ನು ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದ ವೇಗದಲ್ಲಿ ಅಭಿವೃದ್ಧಿಗೊಳಿಸಿ ಜಗತ್ತನ್ನೇ ಬೆದರಿಸುವಂಥ ಸ್ಥಿತಿಗೆ ಏರಿಸಿದ. ಅವನು ಸಾಸಿದ ಈ ಬಗೆಯ ‘ಅಭಿವೃದ್ಧಿ’ಯನ್ನು ಇಂದು ನಾವು ಮಾದರಿಯಾಗಿ ಒಪ್ಪಲು ಸಾಧ್ಯವೆ? ಸ್ಟಾಲಿನ್‌ನ ರಷ್ಯಾ ಅಥವಾ ಮಾವೋವಿನ ಚೀನಾದ ವಿಷಯಗಳಲ್ಲಿ ಆ ರಾಷ್ಟ್ರಗಳಲ್ಲಿ ನಡೆದ ನೈಜ ಘಟನೆಗಳಿಗೆ ಬಹು ಪ್ರeಪೂರ್ವಕವಾಗಿ ಕುರುಡಾದವರು ಮಾತ್ರ ಆ ಬಗೆಯ ಅಭಿವೃದ್ಧಿಯನ್ನು ಕೊಂಡಾಡಬಲ್ಲರು. ಈ ಮೂರೂ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರ ಗೋರಿಗಳ ಮೇಲೆ ರಾಷ್ಟ್ರವನ್ನು ‘ಬಲಿಷ್ಠ’ಗೊಳಿಸಲಾಯಿತು. ಹೋಗಲಿ, ಪ್ರಜಾಪ್ರಭುತ್ವ ರಾಷ್ಟ್ರವೆಂದು ಬೀಗುವ, ಈಗಲಂತೂ ಏಕಮೇವಾದ್ವಿತೀಯ- ಚಿಂತಕ ನೋಮ್ ಚೋಮ್‌ಸ್ಕಿ ಹೇಳುವಂತೆ- ’Rogue State' ಆಗಿರುವ ಅಮೆರಿಕದ ಕತೆಯೇನು? ತನ್ನ ರಾಷ್ಟ್ರದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಅಮೆರಿಕ, ಮಿಕ್ಕೆಲ್ಲ ಚಿಕ್ಕ ದೊಡ್ಡ ರಾಷ್ಟ್ರಗಳ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಗಳಿಕೆಯಲ್ಲಿ ಯತ್ನಗಳನ್ನೂ, ಹೋರಾಟಗಳನ್ನೂ ದಮನ ಮಾಡುವುದು ಅಥವಾ ಪ್ರಜಾಪ್ರಭುತ್ವ ತರುತ್ತೇನೆಂಬ ಅಪ್ಪಟ ಸುಳ್ಳಿನ ಮುಖವಾಡದಲ್ಲಿ ಲಕ್ಷಾಂತರ ಜನರನ್ನು ಸುಟ್ಟು ಬೂದಿ ಮಾಡುವುದು, ತನ್ಮೂಲಕ ನಿರಂತರ ಯುದ್ಧ ಸ್ಥಿತಿಯನ್ನು ನಿರ್ಮಾಣ ಮಾಡಿ ತನ್ನ ರಾಷ್ಟ್ರದ ಯುದ್ಧೋಪಕರಣ ಉತ್ಪಾದನಾ ಉದ್ಯಮವನ್ನು ಅಭಿವೃದ್ಧಿಗೊಳಿಸಿ, ತನ್ನ ಬೊಕ್ಕಸ ತುಂಬಿಸಿಕೊಳ್ಳುವುದು-ಇದೇ ಪರಿಪಾಠವನ್ನು ಅನುಸರಿಸುತ್ತಿದೆ. ಪ್ರಪ್ರಥಮ ಅಣುಬಾಂಬ್ ಸೋಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ.
ಅಭಿವೃದ್ಧಿ ಎಂಬುದು ಮಾನವೀಯ ಮೌಲ್ಯಗಳನ್ನು ಹೊಂದಿರದಿ ದ್ದರೆ ಅದು ಕೇವಲ ಇಂದ್ರಿಯಗಳಿಗೆ ಮಾತ್ರ ತಾಗುವಂತಾಗಿ, ಐಂದ್ರಿಕಭೋಗವೇ ಅಭಿವೃದ್ಧಿಯ ಲಕ್ಷಣ ಎಂಬ ಆತ್ಮಹಾನಿಕರ ಭ್ರಮೆಯನ್ನು ಹುಟ್ಟಿಸಿಬಿಡುತ್ತದೆ. ಈಗ ಜಗತ್ತಿನಾದ್ಯಂತ ಆಗುತ್ತಿರು ವುದೇ ಇದು. ಪ್ರಜಾತಂತ್ರದ, ಸಮಾನತೆಯ, ಸರ್ವಜನ ಹಿತದೃಷ್ಟಿಯ ವಿರೋ ನಿಲುವು ಇದು.
ನಮಗೆ ಅವಶ್ಯವಿರುವುದು ಸರ್ವಾಂಗೀಣ ಅಭಿವೃದ್ಧಿ. ಸರ್ವಾಂಗೀಣ ಅಭಿವೃದ್ಧಿಯೇ ಪ್ರಗತಿ. ಮನುಷ್ಯನ ಮನಸ್ಸನ್ನು ಮುಟ್ಟುವಂಥ, ಅರಳಿಸುವಂಥ, ಬೆಳೆಸುವಂಥ, ಮನುಷ್ಯ ಸಂಬಂಧ ಗಳನ್ನು ಆಪ್ತಗೊಳಿಸುವಂಥ, ಜೀವಪ್ರೇಮವನ್ನು ಹುಟ್ಟಿಸುವಂಥ ಅಭಿವೃದ್ಧಿಯೇ ಪ್ರಗತಿ.
* * *
ಈ ‘ಚಲನಶೀಲ ಚಿಂತಕ’ ಮೋದಿಯವರ ಅಭಿವೃದ್ಧಿ ರೀತಿಯನ್ನು ನೋಡೋಣ. ಗುಜರಾತೆಂದರೆ ಈಗ ಕನಿಷ್ಠ ಎರಡು ಗುಜರಾತ್‌ಗಳಿವೆ. ಒಂದು, ನಗರ ಕೇಂದ್ರಗಳಲ್ಲಿರುವ ಬಹುಸಂಖ್ಯಾತರ, ಹಣವಂತರ, ಉಚ್ಚವರ್ಗಗಳ ಗುಜರಾತ್. ಇನ್ನೊಂದು, ಗ್ರಾಮಾಂತರ ಪ್ರದೇಶಗಳ, ಬಹುಪ್ರಮುಖವಾಗಿ ಅಲ್ಪಸಂಖ್ಯಾತರ, ನಿರ್ಗತಿಕರ, ಆದಿವಾಸಿಗಳ ಗುಜರಾತ್.
ಗುಜರಾತಿನ ಕೆಲವು ಗ್ರಾಮಗಳ ಪ್ರವೇಶದಲ್ಲಿ ‘ಹಿಂದೂ ರಾಷ್ಟ್ರ ವಾದ ಗುಜರಾತಿನ ಹಿಂದೂ ಗ್ರಾಮಕ್ಕೆ ಸ್ವಾಗತ’ ಎಂಬ ಬೃಹತ್ ಬ್ಯಾನರ್‌ಗಳನ್ನು ಹಾಕಲಾಗಿದೆ.
ಒಂದು ಕಾಲದಲ್ಲಿ ಮೊಹರಂ ಹಬ್ಬದ ವೇಳೆ ಮೆರವಣಿಗೆಯಲ್ಲಿ ಕೊಂಡೊಯ್ಯುವ ತಾಬೂತ್ ಕೆಳಗೆ ಹಿಂದೂ ಮಹಿಳೆಯರು ತಮ್ಮ ಮಕ್ಕಳು ಹಾದುಹೋದರೆ ಅವರು ದೀರ್ಘಾಯುಷಿಗಳಾಗುತ್ತಾರೆ ಎಂಬ ನಂಬಿಕೆಯಲ್ಲಿ ಹಾಗೆ ಹಾದುಹೋಗಲು ಅವಕಾಶ ಪಡೆಯುತ್ತಿದ್ದರು. ಈಗ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವಾಗ ತಮ್ಮ ಮಕ್ಕಳನ್ನು ಮುಸ್ಲಿಂ ಮಕ್ಕಳ ಪಕ್ಕದಲ್ಲಿ ಕೂಡಿಸಬಾರದು ಎಂಬ ಕಟ್ಟಪ್ಪಣೆ ಮಾಡುತ್ತಾರೆ.
ಮುಸ್ಲಿಂ ಯುವಕರಿಗೆ ಉದ್ಯೋಗ ನೀಡುವುದಿಲ್ಲ; ಅವರ ವ್ಯಾಪಾರ ಮಳಿಗೆಗಳಿಗೆ ಹೋಗುವುದಿಲ್ಲ; ಅವರ ಆಟೊಗಳಲ್ಲಿ ಕೂಡುವುದಿಲ್ಲ.
ಮುಸ್ಲಿಂ ಅಪ್ಪ ಅಮ್ಮಂದಿರು ಮಕ್ಕಳು ಅಕಸ್ಮಾತ್- ಮನೆಯಲ್ಲಿ ಎಷ್ಟೇ ಎಚ್ಚರಿಸಿದ್ದರೂ- ರಸ್ತೆಯಲ್ಲಿ ತಮ್ಮನ್ನು ‘ಅಮ್ಮಿ’ ‘ಅಬ್ಬ’ ಎಂದು ಕರೆದು ಎಲ್ಲಿ ತಮ್ಮ ಗುರುತು ಬಹಿರಂಗವಾಗಿಬಿಡುತ್ತದೋ ಎಂಬ ಆತಂಕದಲ್ಲಿ ಪ್ರತಿಕ್ಷಣ ಕಳೆಯುತ್ತಾರೆ.
೨೦೦೨ರಲ್ಲಿ ಆರಂಭವಾದ ಹತ್ಯಾಕಾಂಡದ ಮಿನಿಸ್ವರೂಪಗಳು ಈಗಲೂ ನಡೆಯುತ್ತಿವೆ. ೧,೭೦,೦೦೦ ನಿರಾಶ್ರಿತರ ಶಿಬಿರ ಗಳನ್ನು ಕಿತ್ತುಹಾಕಿರುವುದರಿಂದ, ಕೊಳಚೆ ಪ್ರದೇಶಗಳಲ್ಲಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಡೀ ಜನಾಂಗವನ್ನು ಎರಡನೆದರ್ಜೆ ನಾಗರಿಕರಾಗಿ ಕಾಣಬೇಕೆಂಬ ಅಘೋಷಿತ ಆದೇಶವಿದೆ.
ಈ ಎಲ್ಲದರಲ್ಲಿ ಗುಜರಾತಿನ ಪ್ರತಿ ಬಹುಸಂಖ್ಯಾತ ನಾಗರಿಕನೂ ಭಾಗವಹಿಸುತ್ತಿದ್ದಾನೆಂದಲ್ಲ. ಸಂಘಪರಿವಾರದ ಸ್ವಯಂಘೋಷಿತ ಧರ್ಮರಕ್ಷಕ ಪಡೆಯ ಗೂಢಚಾರರು ಪ್ರತಿಯೊಂದನ್ನೂ ಗಮನಿಸುತ್ತಿದ್ದಾರೆ. ಬಾಯಿಬಿಟ್ಟರೆ ಎಷ್ಟು ಅಪಾಯ ಎಂದು ಎಲ್ಲರಿಗೂ ತಿಳಿದಿದೆ. ತಮ್ಮ ಮನಸ್ಸಿಗೆ ಒಪ್ಪಿಗೆಯಾಗಿದ್ದನ್ನು ಸಂದರ್ಭದ ಒತ್ತಡಗಳಿಗೆ ಸಿಲುಕಿ ಹೇಗೆ ತಾವು ಮಾಡಲೇಬೇಕಾಗಿ ಬಂದಿದೆ ಎಂದು ಜನ ಗುಟ್ಟಾಗಿ, ಅನಾಮಿಕರಾಗಿ ಉಳಿದು ಹೇಳಿಕೊಳ್ಳುತ್ತಾರೆ.
ಇನ್ನು ‘ಚಲನಶೀಲ ಚಿಂತಕ’ ಮೋದಿಯವರೇ ಹೇಗೆ ನಡೆದು ಕೊಳ್ಳುತ್ತಿದ್ದಾರೆ! ಚುನಾವಣೆಗಳಲ್ಲಿ ‘ನಾವೈದು, ನಮಗಿಪ್ಪತ್ತೈದು’ ಎಂಬ ಘೋಷಣೆ ಜನಪ್ರಿಯಗೊಳಿಸಿದ್ದಾರೆ. ‘ನಿರಾಶ್ರಿತರ ಶಿಬಿರ ಗಳನ್ನು ತೆರೆದು ಅವುಗಳು ಶಿಶು ಉತ್ಪಾದನಾ ಕೇಂದ್ರಗಳನ್ನಾಗಿ ಮಾಡಬೇಕೆ?’ ಎಂದು ಸವಾಲು ಎಸೆಯುತ್ತಾರೆ. ಪೊಲೀಸರು ಮುಸ್ಲಿಮರ ಮನೆಬಾಗಿಲುಗಳನ್ನು ಮಧ್ಯರಾತ್ರಿ ಬಡಿದು ಯುವಕರನ್ನು ಎಳೆದೊಯ್ಯುವುದು, ಮಿಕ್ಕವರ ಮೇಲೆ ಹಲ್ಲೆ ನಡೆಸುವುದು ನಡೆದೇ ಇದೆ. ೨೦೦೨ರ ಹತ್ಯಾಕಾಂಡವಾದಾಗ ಪೊಲೀಸರ ಸಭೆ ಕರೆದು ‘ಮೂರು ದಿವಸ ನಿಷ್ಕ್ರಿಯರಾಗಿರಬೇಕೆಂದು’ ಆದೇಶ ನೀಡಿದುದು ಈಗ ಜಗತ್ತಿಗೇ ಗೊತ್ತಿರುವ ಸತ್ಯ.
ಇದು ಗುಜರಾತಿನ ಮತ್ತೊಂದು ಮತ್ತು ನಿಜ ಸ್ವರೂಪ. ಇದನ್ನು ನಿರ್ಲಕ್ಷಿಸಿ ಟಾಟಾಗಳು, ಅಂಬಾನಿಗಳು ಮೆಚ್ಚುವ ಗುಜರಾತ್. ಥಳಕಿನ ಗುಜರಾತ್, ತೋರಿಕೆಯ ಗುಜರಾತ್. ಇಂದ್ರಲೋಕವನ್ನೇ ಸೃಷ್ಟಿಸಿದರೂ ಅದು ಮನುಷ್ಯರು, ಸಾಮಾನ್ಯರು ನೆಮ್ಮದಿಯಿಂದ ಬದುಕಬೇಕಾದ ಲೋಕವಾಗಬೇಕೇ ಹೊರತು ಗರಿಗರಿ ಉಡುಪಿನ ಕಾರ್ಪೊರೇಟ್ ಜಗತ್ತಿನ ಬಕಾಸುರರಿಗಷ್ಟೇ ಅಲ್ಲ.
ಅಂಥ ಪ್ರಗತಿಯಾಗುವುದು ರಾತ್ರೋರಾತ್ರಿಯಾಗಲಿ, ಶೂನ್ಯದಲ್ಲಿಯಾಗಲಿ ಸಾಧ್ಯವಿಲ್ಲ. ಮನುಷ್ಯ ಸಂದರ್ಭದಲ್ಲಿ ನಿಧಾನಗತಿಯಲ್ಲಿ ಮಾತ್ರ ಸಾಧ್ಯ. ಸದ್ಯದ ನೆರೆಹಾವಳಿಯ ಸಂದರ್ಭದಲ್ಲಿ ಅಹೋರಾತ್ರಿ ಕಳಕಳಿಯಿಂದ ಮೆಚ್ಚುಗೆಯ ರೀತಿಯಲ್ಲಿ ಶ್ರಮಿಸುತ್ತಿರುವ ಯಡಿಯೂರಪ್ಪನವರಿಗೆ ಇದು ಸ್ವಂತ ಅನುಭವಕ್ಕೆ ಬಂದಿರಬೇಕು.
ತಂತ್ರeನ ಯುಗ ಕಲಿಸಿದ ವೇಗದ ಭ್ರಮೆಯನ್ನು ಮನುಷ್ಯನ ಮನಸ್ಸಿನ ಲೋಕಕ್ಕೆ ದಾಳಿಯಿಡಿಸಲು ಸಾಧ್ಯವಿಲ್ಲ ಎಂದೇ ಗಾಂಜಿಯವರು ‘One Step enough for me' ಎಂದು ಹೇಳುತ್ತಿದ್ದುದು. ಆದರೆ ಆ ’step’ ಒಂದೊಂದೇ ಆದರೂ ನಿಲ್ಲದಂತೆ ಇಡುತ್ತಲೇ ಇರಬೇಕು; ಮುಂದುವರಿಯುತ್ತಲೇ ಇರಬೇಕು, ಗಡಿಯಾರದ ಮುಳ್ಳಿನ ತರಹ; ಪ್ರಗತಿಯೂ ಸಾಧ್ಯವಾಗುವ ಅಭಿವೃದ್ಧಿಮಾರ್ಗ ಇದು.
ಆದರೆ ಗುಜರಾತಿನ ಸದ್ಯದ ಅಭಿವೃದ್ಧಿಗತಿ ನೋಡಿದರೆ ನನಗೆ ಒಮ್ಮಿಂದೊಮ್ಮೆಗೇ, ಈ ವೈeನಿಕ ಶರವೇಗದ ಯುಗದಲ್ಲೂ ಗರ್ಭಿಣಿ ದಿಢೀರ್ ಹೆರುವುದಿಲ್ಲವಲ್ಲ ಎಂಬ ಪರಿತಾಪದಲ್ಲಿ ಬಲವಂತದ ಹೆರಿಗೆ ಮಾಡಿಸುವ ರೀತಿಗೆ ಭಿನ್ನವಲ್ಲ. ಹೆಣ್ಣಿಗೆ ಆ ಒಂಬತ್ತು ತಿಂಗಳುಗಳೆಂದರೆ (ಐಟಿ,ಬಿಟಿ ಹೆಣ್ಣುಮಕ್ಕಳಿಗೂ ಸೇರಿದ ಹಾಗೆ) ಕನಸು, ಸಂಭ್ರಮ, ಆತಂಕ, ನಿರೀಕ್ಷೆ ಹಾಗೂ ಪ್ರಕೃತಿಯ ಅದ್ಭುತ ನಿಗೂಢ ಸೃಷ್ಟಿಕ್ರಿಯೆಯಲ್ಲಿ ಸ್ವಯಂ ಭಾಗವಹಿಸುತ್ತಿರುವ ಪುಳಕ- ಎಲ್ಲ ಸೇರಿರುತ್ತದೆ. ಅದು ಹೆಣ್ಣಿನ ವ್ಯಕ್ತಿತ್ವದ ಪ್ರಗತಿ, ಸರ್ವಾಂಗೀಣ ವಿಕಾಸ. ಇದೇ ಮನುಷ್ಯಲೋಕವನ್ನೂ ಒಳಗೊಳ್ಳುವುದು.
ಬದಲಾಗಿ ಭಡ್ತಿಯವರು ಹೇಳುವ ಹಾಗೆ ಮೋದಿಯವರ ಅಭಿವೃದ್ಧಿಪಾಠವನ್ನೇ ಕರಗತ ಮಾಡಿಕೊಂಡು ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡಿದರೆ, ಬಹುಶಃ ಅವರು ಹೇಳುವ ಹಾಗೆ ‘ಯಡಿಯೂರಪ್ಪನವರು ಕನಿಷ್ಠ ಇನ್ನೂ ಮೂರು ಅವಗೂ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಆ ದೇವರಿಂದಲೂ ಸಾಧ್ಯವಿಲ್ಲ’ ಎನ್ನುವುದಾದರೆ, ದೇವರೂ ಕೈಬಿಡುವುದು ಖಂಡಿತವಾದರೆ ಮನುಷ್ಯರು ತಮ್ಮ ಆತ್ಮಸ್ಥೈರ್ಯ, ಮನುಷ್ಯಪ್ರೀತಿ, ಭವಿಷ್ಯಪ್ರe ಇವುಗಳನ್ನು ನೆಚ್ಚಿ ಮುಂದುವರಿಯಬೇಕು ಅಷ್ಟೆ.
(ಗ್ರಂಥಋಣ: ಗುಜರಾತಿನ ನಿವೃತ್ತ ಡಿ.ಜಿ.ಪಿ. ಆರ್.ಬಿ. ಶ್ರೀಕುಮಾರ್ ಅವರ ‘ಧರ್ಮದ ಹೆಸರಿನಲ್ಲಿ’, ಹರ್ಷ ಮಂದೆರ್ ಅವರ ’'Fear & Forgiveness', ಸಿದ್ಧಾರ್ಥ್ ವರದರಾಜನ್ ಸಂಪಾದಿಸಿದ ಕೃತಿ ‘ಗುಜರಾತ್’, ಅರುಂಧತಿರಾಯ್ ಅವರ 'Listening to Grasshoppers' ಮತ್ತು ಶ್ರಮಿಕ್ ಪ್ರತಿಷ್ಠಾನದ ’Modi slapped’)
-ಜಿ.ಕೆ.ಗೋವಿಂದ ರಾವ್

No comments: