Wednesday, October 28, 2009

ಅಭಿವೃದ್ಧಿಗೆ ಯಾವ ಇಸಂ ಸ್ವಾಮೀ, ರಾಯರೇ ?


ಲನಶೀಲ ಚಿಂತಕ, ಮತ್ತದೇ ವಿಶೇಷಣ ಬಳಸುತ್ತಿದ್ದೇನೆ. ಹೌದು, ಅನುಮಾನವೇ ಇಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಆ ಪದವೇ ಅತ್ಯಂತ ಸೂಕ್ತ. ಇಂಥ ಪದವನ್ನು ಮೋದಿಯವರಿಗೆ ಬಿಟ್ಟರೆ ಸದ್ಯಕ್ಕೆ ದೇಶದ ಮತ್ಯಾವ ಮುಖ್ಯಮಂತ್ರಿಗೂ ಬಳಸಬೇಕೆನಿಸುತ್ತಿಲ್ಲ. ಗುಜರಾತ್‌ನಲ್ಲಿ ಬೇರೇನಾಗಿದೆಯೋ, ಇಲ್ಲವೋ ಗೊತ್ತಿಲ್ಲ. ನೀರಾವರಿ ಮತ್ತು ಕೃಷಿಯ ವಿಚಾರದಲ್ಲಿ ಆಗಿರುವ ಕ್ರಾಂತಿಯನ್ನು ಹೋಗಿ ನೋಡಿದ ವಿವೇಚನಾವಂತರೆಲ್ಲರೂ ಈ ವಿಶೇಷಣವನ್ನು ಒಪ್ಪುತ್ತಾರೆ. ಉಳಿದವರ ಬಗೆಗೆ ನನ್ನಲ್ಲಿ ಅತ್ಯಂತ ಅಸಹಾಯಕ ಮರುಕವಷ್ಟೇ ಹುಟ್ಟುತ್ತದೆ. ಮೋದಿಯವರ ಕೃಷಿ ಕ್ರಾಂತಿಯ ಬಗೆಗೆ ಬರೆಯುವ ಮುನ್ನ ಸ್ವತಃ ಗುಜರಾತ್‌ಗೆ ಹೋಗಿ ನೋಡಿ ಬಂದು ಬರೆದದ್ದೇ ವಿನಃ ಬೇರೆಯವರ ಯಾವುದೋ ಮೂರ್‍ನಾಲ್ಕು ಲೇಖನಗಳನ್ನು ಉಲ್ಲೇಖಿಸಿ ನಾಲ್ಕು ಗೋಡೆಯ ಮಧ್ಯೆ ಕುಳಿತು ಬರೆದದ್ದು ಅಲ್ಲ ಎಂಬುದನ್ನು ಮನಗಾಣಲೇ ಬೇಕು.
ಅಲ್ಲ, ನನ್ನ ಪ್ರಶ್ನೆ ಇಷ್ಟೆ, ಮೋದಿಯವರ ಹೆಸರು ಹೇಳಿದಾಕ್ಷಣ ಇವರೇಕೆ ಹೀಗೆ ಮೈಮೇಲೆ ದೆವ್ವ ಬಂದವರಂತೆ ಆಡುತ್ತಾರೆ ಅರ್ಥವೇ ಆಗುತ್ತಿಲ್ಲ ? ಅಷ್ಟಕ್ಕೂ ಕಳೆದ ವಾರ ಈ ಅಂಕಣದ ( ಕರ್ನಾಟಕವನ್ನು ಮತ್ತೊಂದು ಗುಜರಾತ್ ಮಾಡಿ, ಪ್ಲೀಸ್...) ಆರಂಭದಲ್ಲೇ ಸ್ಪಷ್ಟಪಡಿಸಿದ್ದೇನೆ. ‘ಮೋದಿ ಎಂದ ತಕ್ಷಣವೇ ಕೇವಲ ಹಿಂದೂ-ಮುಸ್ಲಿಂ ಪ್ರಕರಣವನ್ನೇ ನಮ್ಮ ಮಾದ್ಯಮಗಳು ಬಿಂಬಿಸುತ್ತವೆ. ಈ ದೇಶದ ಜೀವಾಳವೆನಿಸಿರುವ ಕೃಷಿಯಲ್ಲಾದ ಕ್ರಾಂತಿ ಸುದ್ದಿಯಾಗುವುದಿಲ್ಲ ಏಕೆ?’ ಎಂಬುದು ಅಂದಿನ ಬರಹದ ಮೂಲಭೂತ ಪ್ರಶ್ನೆಯಾಗಿತ್ತು. ಕೃಷಿ ಮತ್ತು ನೀರಾವರಿಯಲ್ಲಿ ಮೋದಿಯವರು ಕೈಗೊಂಡಿರುವ ನೈಜ ಕ್ರಾಂತಿಯ ಬಗೆಗೇ ಇಡೀ ಲೇಖನದುದ್ದಕ್ಕೂ ವಿವರಣೆ ಒದಗಿಸಲಾಗಿತ್ತು. ಕಾಮಾಲೆ ಕಣ್ಣಿನ ಸನ್ಮಾನ್ಯ ಜಿ.ಕೆ.ಗೋವಿಂದರಾವ್ ಅವರಂಥ ಅತ್ಯಂತ ಜಾತ್ಯತೀತ ಹಾಗೂ ಬುದ್ಧಿಜೀವಿ ( ಈ ಎರಡೂ ಪದಗಳಿಗೆ ನನಗಿನ್ನೂ ಅರ್ಥ ದೊರಕಿಲ್ಲ) ವ್ಯಕ್ತಿಗಳಿಗೆ ಇದೇಕೆ ಅರ್ಥವೇ ಆಗಿಲ್ಲ ? ಬಹುಶಃ ನನ್ನ ಲೇಖನ ಸಂಪೂರ್ಣ ಓದುವ ಮೊದಲೇ, ಕೇವಲ ತಲೆಬರಹ ನೋಡಿ ಅವರು ( ಅ.೨೧ರ ಸಂಚಿಕೆಯಲ್ಲಿ ಪ್ರಕಟವಾದ-‘ಕರ್ನಾಟಕವನ್ನು ಗುಜರಾತ್ ಮಾಡುವ ಮುಂಚೆ ಕೊಂಚ ಯೋಚಿಸೋಣ’ )ಪ್ರತಿಕ್ರಿಯಿಸಿರಬಹುದು ಎನಿಸುತ್ತದೆ. ಇಲ್ಲದಿದ್ದರೆ ಅಭಿವೃದ್ಧಿಯ ವಿಷಯಕ್ಕೆ ಕೋಮುವಾದದಂಥ ಸಲ್ಲದ ಬಣ್ಣ ಹಚ್ಚುವ ಕಸರತ್ತು ಮಾಡುತ್ತಿರಲಿಲ್ಲ.
ಸ್ವಾಮಿ ಗೋವಿಂದರಾಯರೇ, ನಿಮ್ಮ ಹಿರಿತನ, ಪ್ರತಿಭೆಯ ಬಗೆಗೆ ಖಂಡಿತಾ ಗೌರವವಿದೆ. ಆದರೆ ಬೌದ್ಧಿಕತೆ, ಜಾತ್ಯತೀತತೆ ಎಂಬುದು ನಿಮ್ಮಂಥವರಿಗೆ ಮಾತ್ರ ಮಾರಾಟವಾಗಿದೆ ಎಂಬ ನಿಮ್ಮಗಳ ಧೋರಣೆಯ ಬಗ್ಗೆ ಮಾತ್ರ ನನ್ನ ಆಕ್ಷೇಪವಿದೆ. ಕಳೆದ ಐದು ವರ್ಷಗಳಿಂದ ಈ ಅಂಕಣದಲ್ಲಿ ನೀರಿನ ಬಗೆಗೆ ಬರೆಯುತ್ತ ಬರಲಾಗಿದೆ. ಈಗಲೂ ಈ ಅಂಕಣ ನೀರಿಗೇ ಮೀಸಲು. ಅನಿವಾರ್ಯವಾಗಿ ಈ ವಾರ ನಿಮ್ಮಂಥವರ ಲೇಖನಕ್ಕೆ ಪ್ರತಿಕ್ರಿಯಿಸಬೇಕಾಗಿ ಬಂದಿದೆ. ಇಲ್ಲದಿದ್ದರೆ ಖಂಡಿತಾ, ಇದು ಅಭಿವೃದ್ಧಿಪರ ವಿಷಯಗಳಿಗೆ, ನೀರಿನ ಯಶೋಗಾಥೆಗಳಿಗೆ ಸೀಮಿತವೇ ಹೊರತು, ಯಾರನ್ನೋ ಟೀಕಿಸಲು, ಅಗ್ಗದ ಭಾಷಾ ಪ್ರೌಢಿಮೆ ಮೆರೆಯಲು ಅಲ್ಲ. ಈ ಕುರಿತು ಓದುಗರ ಕ್ಷಮೆಯನ್ನೂ ಯಾಚಿಸಿ, ಮೋದಿಯವರು ನೀರಾವರಿಯಲ್ಲಿ ಕೈಗೊಂಡ ಇನ್ನಷ್ಟು ಮಹೋನ್ನತ ಕಾರ್ಯಗಳನ್ನು ವಿವರಿಸುತ್ತೇನೆ. ಸಾಧ್ಯವಾದರೆ ದಯವಿಟ್ಟು ನಿಮ್ಮ ಜಾತ್ಯತೀತತೆಯ ಮುಖವಾಡ ಕಳಚಿಟ್ಟು ಓದಿ ಅರ್ಥ ಮಾಡಿಕೊಳ್ಳಿ.
ದೇಶದಲ್ಲಿ ಇಂದಿಗೂ ಶೇ. ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ ‘ನೀರು ಸರಬರಾಜು ಯೋಜನೆ’ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ. ಗಮನಾರ್ಹ ಸಂಗತಿಯೆಂದರೆ, ಹೀಗೆ ‘ನೀರು ಸರಬರಾಜು’ ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ. ಅದನ್ನೇ ಮೋದಿಯವರು ಗುಜರಾತ್‌ನ ಎಲ್ಲ ಹಳ್ಳಿಗಳಿಗೆ ದಕ್ಕಿಸಿಕೊಟ್ಟಿದ್ದಾರೆ.
ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ. ಮೋದಿ ಅದನ್ನೇ ಗುಜರಾತ್‌ನಲ್ಲೂ ಮಾಡುತ್ತಿರುವುದು, ಬೇಕಿದ್ದರೆ ಹೋಗಿ ನೋಡಿ ಬನ್ನಿ.

1 comment:

prasca said...

ಅವರು ಉಗಿದಿದ್ದನ್ನೆ ತೀರ್ಥದಂತೆ ಕೈಯಲ್ಲಿ ತಗೊಂಡು ಕನ್ನಡಿಗರ ತಲೆಯ ಮೇಲೆ ಪ್ರೋಕ್ಷಿಸಲು ಹೊರಟಿದ್ದೀರಲ್ಲ ಎಂಬ ಸಾಲುಗಳು ವಿ.ಕ ದಲ್ಲಿ ಪ್ರಕಟವಾಗಿವೆ ಇಲ್ಲಿ ಕಾಣಿಸ್ತಾ ಇಲ್ಲ. ಸಖತ್ ಪಂಚಿಗ್ ಸಾಲುಗಳು ಅವು. ಸರಿಯಾಗಿ ಗ್ರಹಚಾರ ಬಿಡ್ಸೀದೀರ ಆ ಸೋಗಲಾಡಿ ಸ’ಮಜಾ’ವಾದಿಗಳಿಗೆ.