Thursday, September 18, 2008

ಮಲಿನ ಜಲ, ಇವರ ಬೆಳವಣಿಗೆಯ ಮೂಲ


ಅದೊಂದು ಕ್ರೀಡಾಕೂಟ. ಸ್ಥಳೀಯ ಮಟ್ಟದಿಂದ ಗೆದ್ದು, ರಾಜ್ಯ ಪ್ರಶಸ್ತಿಗಾಗಿ ನಾನಾ ಪ್ರೌಢಶಾಲೆಗಳ ವಿದ್ಯಾರ್ಥಿಗಳ ತಂಡಗಳು ಕಾದಾಟಕ್ಕೆ ಅಣಿಯಾಗಿದ್ದವು. ಗ್ರಾಮೀಣ ಪ್ರದೇಶದ ಶಾಲೆಗಳಿಂದ ಬಂದಿದ್ದ ಹಲವು ವಿದ್ಯಾರ್ಥಿಗಳು ಅಲ್ಲಿದ್ದರು. ಇನ್ನೇನು ರನ್ನಿಂಗ್ ರೇಸ್‌ಗೆ ಚಾಲನೆ ನೀಡಬೇಕೆನ್ನುವಷ್ಟರಲ್ಲಿ ... ಗುಸುಗುಸು ಆರಂಭವಾಯಿತು. ಜಿಲ್ಲೆಯೊಂದರಿಂದ ಬಂದಿದ್ದ ಶಿಕ್ಷಕರೊಬ್ಬರು ಆಯೋಜಕರ ಬಳಿ ಬಂದು ದೂರನ್ನೂ ನೀಡಿಬಿಟ್ಟರು.
ಅವರ ಆಕ್ಷೇಪ ಇಷ್ಟೇ. ‘ಕೆಲ ನಗರ ಪ್ರದೇಶದ ಶಾಲೆಗಳನ್ನು ಪ್ರತಿನಿಸುತ್ತಿದ್ದ ತಂಡದಲ್ಲಿ ದೊಡ್ಡ ಮಕ್ಕಳಿದ್ದಾರೆ. ಇದರಲ್ಲೇನೋ ಮೋಸವಿದೆ. ಅವರ ವಯಸ್ಸಿನ ಬಗ್ಗೆ ದೃಢೀಕರಣ ದೊರೆತ ಹೊರತೂ ನಮ್ಮ ಮಕ್ಕಳು ಸ್ಪರ್ಧೆಗಿಳಿಯುವುದಿಲ್ಲ....’
ಅಲ್ಲೊಂದು ಪುಟ್ಟ ಪ್ರಹಸನವೇ ನಡೆದು ಹೋಯಿತು. ಕೊನೆಗೆ ನಗರ ಶಾಲೆಗಳದ್ದೊಂದು, ಗ್ರಾಮೀಣ ಶಾಲೆಗಳದ್ದೊಂದು-ಹೀಗೆ ಎರಡು ಗುಂಪುಗಳೇ ಆಗಿ ವಾಕ್ ಸಮರಕ್ಕಿಳಿದರು. ಕೊನೆಗೂ ಶಾಲಾ ದಾಖಲೆಗಳನ್ನೆಲ್ಲ ಪರಿಶೀಲಿಸಿದ ಬಳಿಕ ಎಲ್ಲರೂ ಪ್ರೌಢಶಾಲಾ ಹಂತದ ಮಕ್ಕಳೇ ಎಂಬುದನ್ನು ದೃಢಪಡಿಸಿಕೊಂಡು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಆದರೂ ಗ್ರಾಮೀಣ ತಂಡದಲ್ಲಿ ಸಂಶಯ ಇದ್ದೇ ಇತ್ತು. ನಗರ ಶಾಲೆಯ ಮಕ್ಕಳೆಲ್ಲ ನೋಡಲು ದೊಡ್ಡವರಂತೆ ಕಾಣುತ್ತಿದ್ದಾರೆ. ದೈಹಿಕ ಬೆಳವಣಿಗೆಗಳೂ ಅವರಲ್ಲಿ ಹೆಚ್ಚಿವೆ. ನಮ್ಮ ಮಕ್ಕಳು ಇನ್ನೂ ಪೀಕಲು. ಒಂದೇ ವಯಸ್ಸಿನ ಎರಡು ಪ್ರದೇಶಗಳ ಮಕ್ಕಳಲ್ಲಿ ಇಷ್ಟೊಂದು ವ್ಯತ್ಯಾಸವಿರಲು ಹೇಗೆ ಸಾಧ್ಯ...?
ನಿಜವಾಗಿ ಅದರಲ್ಲಿ ಮಕ್ಕಳ ತಪ್ಪೇನೂ ಇರಲಿಲ್ಲ. ನಗರದ ಹೆಣ್ಣು ಮಕ್ಕಳು ಹಾಗೆ ಮಿತಿ ಮೀರಿ ಬೆಳೆಯಲು ಕಾರಣವಾದದ್ದು ಅವರು ಕುಡಿಯುತ್ತಿರುವ ನೀರು !
ನೀರಿಗೂ, ದೇಹಗಾತ್ರಕ್ಕೂ ಎತ್ತಣಿಂದೆತ್ತಣ ಸಂಬಂಧ ? ನಗು ತರಿಸುವ ವಿಚಾರದಂತೆ ಕಂಡರೂ ಇದು ಸತ್ಯ. ನಗರ ಪ್ರದೇಶದಲ್ಲಿ ನಾವು ಬಳಸುತ್ತಿರುವ ಮಲಿನ ನೀರು ಮುಂದಿನ ತಲೆಮಾರಿನ ಅಡ್ಡಾದಿಡ್ಡಿ ಬೆಳವಣಿಗೆಗೆ ಕಾರಣವಾಗುತ್ತಿದೆ. ಬೇಕಿದ್ದರೆ ನೋಡಿ. ಪಟ್ಟಣ ಪ್ರದೇಶದಲ್ಲಿನ ಅದರಲ್ಲೂ ಬೆಂಗಳೂರಿನಂಥ ಬೃಹತ್ ನಗರದ ಹೆಣ್ಣುಮಕ್ಕಳು ವಯಸ್ಸಿಗೆ ಮೀರಿ ದೈಹಿಕ ಬೆಳವಣಿಗೆಗಳನ್ನು ತೋರುತ್ತಿದ್ದಾರೆ. ನಗರ ಪ್ರದೇಶದಲ್ಲಿ ಸಿಗುತ್ತಿರುವ ಪೌಷ್ಟಿಕ ಆಹಾರ, ಸೊಫಿಸ್ಟಿಕೇಟೆಡ್ ಜೀವನಕ್ರಮಗಳು ಇದಕ್ಕೆ ಕಾರಣವಾಗುತ್ತಿದೆ ಎಂಬುದರ ಜತೆಗೆ ಅವರು ಕುಡಿಯುತ್ತಿರುವ ನೀರು ಅವರನ್ನು ಹಿಗ್ಗಾಮುಗ್ಗ ಹಿಗ್ಗಿಸುತ್ತಿದೆ ಎಂಬುದು ಇತ್ತೀಚೆಗೆ ಆತಂಕಕ್ಕೆ ಕಾರಣವಾಗುತ್ತಿದೆ.
ತಜ್ಞರು ಹೇಳುವ ಪ್ರಕಾರ ನಗರ ಪ್ರದೇಶಗಳಲ್ಲಿ ಕೆರೆಗಳು, ಚರಂಡಿ, ಕೊಳಚೆ ನೀರು ಹರಿಯುವ ದೊಡ್ಡ ದೊಡ್ಡ ಮೋರಿಗಳ ಪಕ್ಕ ಬೆಳೆಯುವ ಜೊಂಡುಗಳಲ್ಲಿ ಹೆಣ್ಮಕ್ಕಳಲ್ಲಿ ದೈಹಿಕ ಬೆಳವಣಿಗೆಯನ್ನು ಪ್ರಚೋದಿಸುವ ಹಾರ್ಮೋನುಗಳಿಗೆ ಪೂರಕ ಅಂಶಗಳಿವೆ. ಇಂಥ ಹುಲ್ಲುಗಳನ್ನು ತಿನ್ನುವ ಹಸುವಿನ ಹಾಲು, ಇಂಥ ಕಲುಷಿತ ನೀರು ಹಾಯಿಸಿ ಬೆಳೆ ಯುವ ಸೊಪ್ಪು, ತರಕಾರಿಗಳನ್ನು ಸೇವಿಸುವುದರಿಂದ ಹೆಣ್ಣಮಕ್ಕಳು ವಯಸ್ಸಿಗಿಂತ ಹೆಚ್ಚು ಬೆಳೆಯು ತ್ತಿದ್ದಾರೆ ಎನ್ನುತ್ತದೆ ಸಂಶೋಧನೆ.
ನಗರ ತ್ಯಾಜ್ಯಗಳಲ್ಲಿ ಸೇರಿರುವ ಕ್ರೋಮಿಯಂಗಳು, ಬ್ಯಾಟರಿಯಲ್ಲಿನ ರಾಸಾಯನಿಕಗಳು, ಕಂಪ್ಯೂಟರ್ ಬಿಡಿ ಭಾಗಗಳಿಂದ ಹೊರಹೊ ಮ್ಮುವ ರಾಸಾಯನಿಕ ಪ್ರಕ್ರಿಯೆಗಳು ಈ ರೀತಿಯ ‘ಸೊಂಪಾದ ’ ಬೆಳೆಗೆ ಕಾರಣವಾಗುತ್ತಿದೆ.
ಜೈವಿಕ ರೀತಿಯ ಕೃಷಿ ನಮ್ಮ ಪರಂಪರೆ ಎಂಬು ದನ್ನು ಮರೆತಿರುವ ನಾವು ‘ದಿಢೀರ್’ ಲಾಭಗಳಿಕೆಯ ಗುರಿ ತಲುಪಲು ಇಂಥ ವಾಮ ಮಾರ್ಗ ಹಿಡಿಯುತ್ತಿದ್ದೇವೆ. ಬೆಳೆಗಳಿಗೆ ರಾಸಾಯನಿಕ ಪೂರೈಸುವುದರ ಜತೆಗೆ ನಗರ ಪ್ರದೇಶದ ಒಳಚರಂಡಿ ನೀರು ಬಳಸಿ ಆರು ತಿಂಗಳ ಬೆಳೆಯನ್ನು ನಲವತ್ತೇ ದಿನದಲ್ಲಿ ಪಡೆಯಲು ಹವಣಿಸುತ್ತಿರುವ ಪರಿಣಾಮ ವಿದು. ಸ್ವಚ್ಛ, ಸುಸ್ಥಿರ ಕೃಷಿಯ ಬದಲಿಗೆ ‘ಆರ್ಥಿಕತೆ’ ಯ ಸಂಶೋಧನೆಗಳು ಪುರುಷರನ್ನು ಒಂದೆಡೆ ನಿರ್ವೀರ್‍ಯರನ್ನಾಗಿಸುತ್ತಿದ್ದರೆ, ಮಹಿಳೆಯರಿಗೆ ಅನಗತ್ಯ ಕೊಬ್ಬನ್ನು ತಂದೊಡ್ಡುತ್ತಿದೆ.
ಮಲ-ಮೂತ್ರಗಳು ಅತ್ಯುತ್ತಮ ಜೈವಿಕ ಸಾರವೆಂಬುದು ಎಷ್ಟು ಸತ್ಯವೋ ಜಲಮಾಲಿನ್ಯದಲ್ಲಿ ಇವು ತೀರಾ ಗಣನೀಯ ಪಾತ್ರ ವಹಿಸುತ್ತಿವೆ ಎಂಬುದೂ ಸತ್ಯ. ವಿಶ್ವಸಂಸ್ಥೆಯ ತೀರಾ ಇತ್ತೀಚೆಗಿನ ಅಧ್ಯಯನವೊಂದರ ಪ್ರಕಾರ ಅಸಮಪರ್ಕಕ ಶೌಚಾಲಯಗಳಿಂದ ಆಗುತ್ತಿರುವ ಜಲಮಾಲಿನ್ಯದ ಪರಿಣಾಮ, ಅಭಿವೃದ್ಧಿ ಹೊಂದುತ್ತಿರುವ ದೇಶ ಗಳಲ್ಲಿ ಪ್ರತಿ ವರ್ಷ ಸರಾಸರಿ ಐದು ದಶಲಕ್ಷ ಮಂದಿ ಅಕಾಲ ಮರಣಕ್ಕೆ ತುತ್ತಾಗುತ್ತಿದ್ದಾರೆ.
೨೦೦೨ರ ವಿಶ್ವ ಜನಸಂಖ್ಯೆಯ ಶೇ.೪೬ರಷ್ಟು (ಸುಮಾರು ೨.೮೫ ಶತಕೋಟಿ) ಮಂದಿಗೆ ಮೂಲ ಭೂತ ಸೌಕರ್‍ಯಗಳಲ್ಲೊಂದಾದ ನಿರ್ಮಲ ಶೌಚಾಲಯದ ಪರಿಚಯ ಇಲ್ಲ. ದಕ್ಷಿಣ ಏಷ್ಯಾದ ೫೦ ಕೋಟಿ ಮಂದಿಯೂ ಇದರಲ್ಲಿ ಸೇರಿದ್ದಾರೆ ಎನ್ನು ತ್ತದೆ ‘ಲಿಟ್ಲ್ ಗ್ರೀನ್ ಡೇಟಾ ಬುಕ್’ನ ಸಮೀಕ್ಷೆ.
ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಶತಮಾನದ ಅಭಿವೃದ್ಧಿಯ (ವಿಶ್ವಸಂಸ್ಥೆ ನಿಗದಿಪಡಿಸಿದ ಪ್ರಮಾಣದನ್ವಯ) ಗುರಿಯನ್ನು ಖಂಡಿತಾ ಅಭಿವೃದ್ಧಿ ಪರ ದೇಶಗಳಿಂದ ಮುಟ್ಟಲಾಗದು ಎಂದು ಸಮೀಕ್ಷೆಯಲ್ಲಿ ಸುಸ್ಪಷ್ಟವಾಗಿ ತಿಳಿಸಲಾಗಿದೆ. ವಿಶ್ವದ ಅಭಿವದ್ಧಿ ಪರ ದೇಶಗಳ ಪೈಕಿ (ಭಾರತ ಸೇರಿದಂತೆ) ೫೦ಕ್ಕೂ ಹೆಚ್ಚು ದೇಶಗಳು ಇಂಥ ಸಮಸ್ಯೆಯ ಜತೆ ಹೆಣಗುತ್ತಿವೆ. ಇಂಥ ಪ್ರವೃತ್ತಿಯಿಂದ ಹೊರಬರುವುದು ಅವುಗಳ ಪಾಲಿಗೆ ತೀರಾ ಅಗತ್ಯ. ಈ ನಿಟ್ಟಿನಲ್ಲಿ ನೀರು ಪೂರೈಕೆ ಹಾಗೂ ಒಳಚರಂಡಿ ಸೌಕರ್‍ಯ ಕಲ್ಪಿಸಲು ಈವರೆಗಿದ್ದ ಯೋಜನಾ ವೆಚ್ಚ ವನ್ನು ೧೫ ಶತಕೋಟಿ ಅಮೆರಿಕನ್ ಡಾಲರ್‌ನಿಂದ ೩೦ ಶತಕೋಟಿ ಅಮೆರಿಕನ್ ಡಾಲರ್‌ಗೆ (ಸುಮಾರು ೭೫ ಸಾವಿರದಿಂದ ೧,೫೦,೦೦೦ ಕೋಟಿ ರೂ.) ಹೆಚ್ಚಿಸುವಂತೆ ಈ ದೇಶಗಳಿಗೆ ವಿಶ್ವಸಂಸ್ಥೆ ಸೂಚಿಸಿದೆ. ಶೌಚಾಲಯಗಳ ಗುಣಮಟ್ಟ, ಸಾಮರ್ಥ್ಯ ಹಾಗೂ ಸುಸ್ಥಿರತೆಯ ಕೊರತೆಯೇ ಜಲಮಾಲಿನ್ಯಕ್ಕೆ ಅತ್ಯಂತ ಪ್ರಮುಖ ಕಾರಣವೆಂದು ಅಧ್ಯಯನ ಬೊಟ್ಟು ಮಾಡಿದೆ. ಇದಕ್ಕಾಗಿ ಸಂವಿಧಾನಾತ್ಮಕ ನೀತಿ ನಿರೂ ಪಣೆಗಳಿಗೆ ತಿದ್ದುಪಡಿ ತರಲೇಬೇಕೆಂದು ವಿಶ್ವಸಂಸ್ಥೆ ಸೂಚಿಸಿರುವುದು ಸಮಾಧಾನದ ಸಂಗತಿ.
೨೦೦೩ರಲ್ಲಿ ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ನಡೆಸಿದ ಸಮೀಕ್ಷೆಯೂ ಇದನ್ನು ಹೊರ ಗೆಡವಿದೆ. ಭಾರತ ವಾರ್ಷಿಕ ೪೬ ಸಾವಿರ ಟನ್ ಕೀಟನಾಶಕ ಬಳಸುತ್ತಿರುವಾಗ ಇಲ್ಲಿನ ಕೊಳವೇ ಬಾವಿ, ನದಿಗಳಿಂದ ದೊರೆಯುವ ನೀರು ಕೀಟ ನಾಶಕ ಮುಕ್ತ ವಾಗಿರಬೇಕೆಂದರೆ ಹೇಗೆ ಸಾಧ್ಯ ?
ಆಶ್ಚರ್ಯದ ಸಂಗತಿಯೆಂದರೆ ಇಷ್ಟಾದರೂ ಜಲಮಾಲಿನ್ಯಕ್ಕಾಗಿ ಈವರೆಗೆ ಯಾರಿಗೂ ಶಿಕ್ಷೆಯಾಗಿಲ್ಲ. ಹಾಗೆಂದು ಈ ಸಂಬಂಧ ಕಾನೂನೇ ಇಲ್ಲವೆಂದಲ್ಲ. ೧೯೭೪ರಲ್ಲೇ ರಾಜ್ಯದಲ್ಲಿ ಜಲಮಾಲಿನ್ಯ ಹಾಗೂ ನಿಯಂತ್ರಣ ಕಾಯಿದೆ ಜಾರಿಗೊಳಿಸಲಾಗಿದೆ. ಇದರನ್ವಯ ೬ ವರ್ಷಗಳ ಸೆರೆ ಹಾಗೂ ಸಶ್ರಮ ಶಿಕ್ಷೆ ವಿಸಬಹುದು.
ಕಾರ್ಖಾನೆಗಳಿಂದಷ್ಟೇ ಜಲಮಾಲಿನ್ಯವಾಗುತ್ತಿದೆ ಎನ್ನಲಾಗದು. ಏಕೆಂದರೆ ಕಾರ್ಖಾನೆ ತ್ಯಾಜ್ಯಗಳಲ್ಲಿ ಶೇ.೨೦ ಭಾಗ ರಾಸಾಯನಿಕಗಳು ಮಾತ್ರ ನೀರು ಸೇರುತ್ತದೆ. ಉಳಿದ ಶೇ.೮೦ರಷ್ಟು ಕಲ್ಮಶಗಳು ನಗರವಾಸಿಗಳು ಹಾಗೂ ಅವರ ರಾಸುಗಳು ಉತ್ಪತ್ತಿ ಮಾಡುವ ಮಲಮೂತ್ರಗಳಿಂದ ಬಂದಂಥ ವುಗಳು. ಇಂದಿಗೂ ಬೆಂಗಳೂರಿನ ಶೇ.೩೦ ಭಾಗ ಬಡಾವಣೆಗಳಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಸೋಪ್ ಪಿಟ್‌ಗಳ ನಿರ್ಮಾಣ ಅನಿವಾರ್‍ಯ. ಇಂಥ ಲಕ್ಷಾಂತರ ಸೋಪ್‌ಪಿಟ್‌ಗಳಿಂದ ಬಸಿಯುವ ಮಾಲಿನ್ಯ ನೆಲದಾಳಕ್ಕೆ ಇಳಿದು ಭೂಜಲವನ್ನು ಕುಲಷಿತಗೊಳಿಸುತ್ತಿದೆ. ಅಸಂಸ್ಕರಿತ ನೀರು ಕೆರೆಗಳಲ್ಲಿ ನಿಂತು ಇಂಗುತ್ತಿದೆ. ಡೈಲ್ಯೊಷನ್ ವಿಧಾನ ಸ್ವಲ್ಪಮಟ್ಟಿಗೆ ನೀರಿನಲ್ಲಿನ ನೈಟ್ರೇಟ್ ಅಂಶವನ್ನು ಬೇರ್ಪಡಿಸುತ್ತವೆಯಾದರೂ, ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ.
ಈ ನಿಟ್ಟಿನಲ್ಲಿ ನಾವು ಜರ್ಮನಿಯನ್ನು ಶ್ಲಾಘಿಸಲೇಬೇಕು. ಅಲ್ಲಿ ಮೂರೇ ಲೀಟರ್ ನೀರು ಬಳಸುವ ಪಿಂಗಾಣಿಯ ಶೌಚಪಾತ್ರೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಬರ್ಲಿನ್‌ನ ಅರಬೆಲ್ಲಾ ಹೋಟೆಲ್‌ನಲ್ಲಿ ಅತಿ ಕಡಿಮೆ ನೀರು ಬಳಕೆಯ ಶೌಚಾಲಯ ಪ್ರಯೋಗ ಜಾರಿಗೊಂಡಿದೆ. ಇಲ್ಲಿ ಮೂತ್ರ ಮಾಡುವ ಭಾಗದ ಸ್ವಚ್ಛತೆಗೆ ೨.೫ ಲೀಟರ್ ಹಾಗೂ ಮಲಕ್ಕೆ ೪ ಲೀ. ನೀರನ್ನಷ್ಟೇ ಬಳಸಲಾಗುತ್ತಿದೆ.
ಎಷ್ಟೋ ಬಾರಿ ಇಂಥ ಕಾಳಜಿಗಳು ಪುಟ್ಟ ವಿಚಾರವಾಗಿ ಕಂಡರೂ ಅದೆಷ್ಟೋ ದೀರ್ಘಕಾಲೀನ ಅಪಾಯಗಳಿಂದ ನಮ್ಮನ್ನು ಪಾರುಮಾಡುವಲ್ಲಿ ಅವು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಗಮನಿಸಿಬೇಕು.
‘ಲಾಸ್ಟ್’ ಡ್ರಾಪ್: ಗುಜರಾತಿನಲ್ಲಿರುವ ಒಂದು ರಾಸಾಯನಿಕ ಕಾರ್ಖಾನೆಗೆ ದಿನವೊಂದಕ್ಕೆ ೧೧೭ ಲಕ್ಷ ಬಿಂದಿಗೆ ನೀರು ಬೇಕು. ಇದು ಸುಮಾರು ೧೧ ಲಕ್ಷ ೭೦ ಸಾವಿರ ಗ್ರಾಮೀಣ ಕುಟುಂಬಗಳ ನೀರಿನ ಬೇಡಿಕೆ ನೀಗಿಸಬಲ್ಲುದು.

No comments: